Homeಮುಖಪುಟಆಪರೇಷನ್‌ 'ಬ್ಲೂ ಸ್ಟಾರ್‌' ಮತ್ತು ಇಂದಿರಾ ಗಾಂಧಿ ಹತ್ಯೆಗೆ ಕಾರಣಗಳೇನು? ಹೇಗೆ ನಡೆಯಿತು.. ಪ್ರತ್ಯಕ್ಷದರ್ಶಿಯ ವರದಿ

ಆಪರೇಷನ್‌ ‘ಬ್ಲೂ ಸ್ಟಾರ್‌’ ಮತ್ತು ಇಂದಿರಾ ಗಾಂಧಿ ಹತ್ಯೆಗೆ ಕಾರಣಗಳೇನು? ಹೇಗೆ ನಡೆಯಿತು.. ಪ್ರತ್ಯಕ್ಷದರ್ಶಿಯ ವರದಿ

- Advertisement -
- Advertisement -

(ಈ ಲೇಖನವನ್ನು ಇಂದಿರಾಗಾಂಧಿ ಅವರ ಹತ್ಯೆಯಾಗಿ 35 ವರ್ಷಗಳು ಕಳೆದು ಹೋಗಿದ್ದರ ನೆನಪಿಗಾಗಿ ಅದನ್ನು ಪ್ರಕಟಿಸಲಾಗಿದೆ)

1984ರ ಜೂನ್ 5 ಹಾಗೂ 6ರಂದು ಭಾರತೀಯ ಸೇನೆಯು ದಾಳಿ ನಡೆಸಿ ಅಮೃತಸರದ ಚಿನ್ನದ ದೇವಾಲಯ (ಗೋಲ್ಡನ್ ಟೆಂಪಲ್‍)ದಲ್ಲಿ ಅಡಗಿ ಕುಳಿತಿದ್ದ ಸ್ವಯಂಘೋಷಿತ ಸಂತ ಜರ್ನೈಲ್ ಸಿಂಗ್ ಬಿಂದ್ರನ್‌ವಾಲೆ ಹಾಗೂ ಅತನ ಭಾರಿ ಶಸ್ತ್ರಗಳಿಂದ ಸಜ್ಜಿತರಾಗಿದ್ದ ಉಗ್ರಗಾಮಿ ಬೆಂಬಲಿಗರನ್ನು ಹತ್ಯೆ ಮಾಡಿದ ಸೇನಾ ಕಾರ್ಯಾಚರಣೆಯ ವಾರ್ಷಿಕೋತ್ಸವ ಸಮೀಪಿಸುತ್ತಿದ್ದಂತೆ ಕೆಲವು ಕಾಂಗ್ರೆಸ್ ಮುಖಂಡರು ಪಂಜಾಬಿನಲ್ಲಿ ನಡೆಯುತ್ತಿದ್ದ ಶಾಂತಿಯತ್ನಗಳನ್ನು ಹಳಿತಪ್ಪಿಸಲು ಹೇಗೆ ಯತ್ನಿಸಿದರು ಎಂಬುದನ್ನು ನೆನಪಿಸಬೇಕು.

ಒಂದು ವೇಳೆ ಅವರು ಹಾಗೆ ಮಾಡದೇ ಇದ್ದರೆ, ಸಿಖ್ ಸಮೂಹದ ಭಾವನೆಗಳನ್ನು ಕೆರಳಿಸಿ ಬೇಳೆಬೇಯಿಸಿಕೊಳ್ಳುವ ಪಾಕಿಸ್ತಾನದ ಯತ್ನ ಸಫಲವಾಗುತ್ತಿರಲಿಲ್ಲ. ಭಯೋತ್ಪಾದನೆಯನ್ನು ಹತ್ತಿಕ್ಕಲು ಗೋಲ್ಡನ್ ಟೆಂಪಲ್ ಮೇಲೆ ಮಿಲಿಟರಿ ಕಾರ್ಯಾಚರಣೆ ನಡೆಸುವ ಅಗತ್ಯವೇ ಬೀಳುತ್ತಿರಲಿಲ್ಲ. 1984ರ ನಂತರ ನಡೆದಂತೆ ಹಿಂಸಾಚಾರಗಳು ಬೆಂಕಿಯಂತೆ ಹರಡುತ್ತಿರಲಿಲ್ಲ. ಬ್ಲ್ಯೂಸ್ಟಾರ್ ಕಾರ್ಯಾಚರಣೆಗೆ ಕಾರಣವಾದ ಘಟನೆಗಳು ಇಂದಿರಾ ಗಾಂಧಿಯವರಂತಹ ಚಾಣಾಕ್ಷ ನಾಯಕಿ ಕೂಡ ಅವುಗಳ ಸುತ್ತ ಸುತ್ತಿಕೊಂಡಿದ್ದ ಪರಿಸ್ಥಿತಿಗೆ ಬಲಿಯಾಗಬೇಕಾಯಿತು ಎಂಬುದನ್ನು ನೆನಪಿಸುತ್ತದೆ.

ನನ್ನ ಪುಸ್ತಕ “ಬ್ಲಡ್ ಶೆಡ್ ಇನ್ ಪಂಜಾಬ್’ (ಪಂಜಾಬ್‌ನಲ್ಲಿ ರಕ್ತಪಾತ)ನಲ್ಲಿ ವಿವರಿಸಿದಂತೆ ಅವರು ಅನಪೇಕ್ಷಣೀಯ ಶಕ್ತಿಗಳಿಂದ ಸುತ್ತುವರಿಯಲ್ಪಟ್ಟಿದ್ದರು ಮತ್ತು ಆ ಶಕ್ತಿಗಳೇ ಅವರನ್ನು ವಿನಾಶಕಾರಿ ಸ್ಥಿತಿಗೆ ತಳ್ಳಿದವು; ಅನೇಕ ರೀತಿಯ ಶಕ್ತಿಗಳು ಈ ನಿಟ್ಟಿನಲ್ಲಿ ಕೆಲಸಮಾಡಿ ತಮ್ಮ ಉದ್ದೇಶದಲ್ಲಿ ಯಶಸ್ವಿಯಾದವು; ಆದರೆ, ದೇಶಕ್ಕೆ ಭಾರೀ ಹಾನಿಯನ್ನು ಉಂಟುಮಾಡಿದವು.

ಮೊದಲ ಬುಡಮೇಲು ಕೃತ್ಯ

1984ರ ಏಪ್ರಿಲ್ ಮೊದಲ ವಾರದಲ್ಲಿ ಇಂದಿರಾಗಾಂಧಿ ಹಾಗೂ ಆಗ ರಾಷ್ಟ್ರಪತಿಯಾಗಿದ್ದ ಗ್ಯಾನಿ ಜೈಲ್ ಸಿಂಗ್ ಅವರಿಗೆ ಅತಿ ಸಮೀಪದ ವ್ಯಕ್ತಿ ಎನ್ನಲಾಗುತ್ತಿದ್ದ ಸಂತೋಷ್ ಸಿಂಗ್ ಅವರ ಆಮಂತ್ರಣದ ಮೇರೆಗೆ ಬಿಂದ್ರನ್ ವಾಲೆಯು ರಾಜಧಾನಿ ದೆಹಲಿಗೆ ಭೇಟಿ ನೀಡಿದ್ದ.

ಆ ವೇಳೆ, ಬಿಂದ್ರನ್‌ವಾಲೆ ಬಸ್ಸಿನೊಳಗೆ ಕುಳಿತಿದ್ದರೆ, ಆತನ ಬೆಂಬಲಿಗ ಸಶಸ್ತ್ರ ಉಗ್ರರು ಬಸ್ ಮೇಲ್ಗಡೆ ಕುಳಿತು ರಾಜಧಾನಿಯಾದ್ಯಂತ ರಾಜಾರೋಷವಾಗಿ ಸಂಚರಿಸಿದ್ದರು. ಇವರ ಈ ರೀತಿಯ ನಡೆಯು ಕೇಂದ್ರ ಸರ್ಕಾರಕ್ಕೆ ತೀವ್ರ ಮುಜುಗರವನ್ನು ಉಂಟುಮಾಡಿತ್ತು ಮಾತ್ರವಲ್ಲ; ಅಂದಿನ ಕೇಂದ್ರ ಗೃಹ ಸಚಿವ ಟಿ.ಎನ್. ಚತುರ್ವೇದಿ ಹಾಗೂ ದಿಲ್ಲಿಯ ಲೆಫ್ಟಿನೆಂಟ್ ಗವರ್ನರ್ ಎಸ್. ಎಲ್. ಖುರಾನಾ ಈ ಸನ್ನಿವೇಶದಿಂದ ತೀವ್ರ ಆತಂಕಕ್ಕೆ ಒಳಗಾಗಿದ್ದರು.

ಈ ಹಿನ್ನೆಲೆಯಲ್ಲಿ, ಅವರು ಇಂಟಲಿಜೆನ್ಸ್ ಬ್ಯೂರೋ ನಿರ್ದೇಶಕ ಟಿ.ವಿ. ರಾಜೇಶ್ವರ್ ಅವರೊಂದಿಗೆ ಸಂಪರ್ಕದಲ್ಲಿದ್ದರು. ದಿಲ್ಲಿಯಲ್ಲಿಯೇ ಬಿಂದ್ರನ್‌ವಾಲೆಯನ್ನು ಬಂಧಿಸುವ ಯೋಜನೆಯನ್ನೂ ಖುರಾನ ಮಾಡಿದ್ದರು. ಚತುರ್ವೇದಿಯವರು ಇಡೀ ಪರಿಸ್ಥಿತಿ ಮತ್ತು ಮುಂದೊದಗಬಹುದಾದ ಪರಿಣಾಮಗಳನ್ನು ಇಂದಿರಾ ಗಾಂಧಿಯವರೊಂದಿಗೆ ಚರ್ಚಿಸಿದ ಬಳಿಕ, ಪರಿಸ್ಥಿತಿಯನ್ನು ಹೇಗೆ ನಿಭಾಯಿಸಲು ಸಾಧ್ಯ ಎಂಬ ಕುರಿತು ಇಂದಿರಾ ಗಾಂಧಿಯವರಿಗೆ ಮನವರಿಕೆ ಮಾಡುವಂತೆ ಖುರಾನಾ ಅವರನ್ನು ಕಳುಹಿಸಿದರು.

ಇಡೀ ಪರಿಸ್ಥಿತಿಯನ್ನು ಅವರು ಹೇಗೆ ನಿಭಾಯಿಸಬಹುದು, ಒಂದು ವೇಳೆ ಕಾರ್ಯಾಚರಣೆಯಲ್ಲಿ ಬಿಂದ್ರನ್‌ವಾಲೆ ಸತ್ತರೆ ಪರಿಣಾಮ ಏನಾಗಬಹುದು- ಇತ್ಯಾದಿಯಾಗಿ ಇಂದಿರಾಗಾಂಧಿಯವರು ಖುರಾನಾ ಅವರಲ್ಲಿ ಹಲವಾರು ಪ್ರಶ್ನೆಗಳನ್ನು ಕೇಳಿದ್ದರು. ಬಿಂದ್ರನ್‌ವಾಲೆ ಯಾವತ್ತೂ ಬಸ್ಸಿನೊಳಗೆ ಕುಳಿತಿರುವುದರಿಂದ ಆತನಿಗೆ ಯಾವುದೇ ಹಾನಿಯಾಗದು; ಒಂದು ವೇಳೆ ಏನಾದರೂ ಆದರೂ, ತಾವು ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯ ಎಂದು ಖುರಾನಾ ಮನವರಿಕೆ ಮಾಡಿದ್ದರು. ಇಂದಿರಾ ಗಾಂಧಿಯವರು ಕಾರ್ಯಾಚರಣೆಗೆ ಒಪ್ಪಿಗೆ ನೀಡಿ, ಬಿಂದ್ರನ್‌ವಾಲೆಯನ್ನು ಬಂಧಿಸಲು ದಿಲ್ಲಿ ಪೊಲೀಸರಿಗೆ ಅಧಿಕಾರವನ್ನೂ ನೀಡಿದ್ದರು.

ದುರದೃಷ್ಟವಶಾತ್, ಈ ಮಾಹಿತಿ ಸೋರಿಕೆಯಾಗಿತ್ತು. ತನ್ನನ್ನು ಬಂಧಿಸುವ ಯೋಜನೆ ನಡೆದಿರುವ ಬಗ್ಗೆ ಬಿಂದ್ರನ್‌ವಾಲೆ ತಮ್ಮವರಿಂದ ಸಂದೇಶವನ್ನೂ ಪಡೆದ. ಜೈಲ್ ಸಿಂಗ್ ಅವರಿಗೆ ತೀರಾ ಹತ್ತಿರವಾಗಿದ್ದ ವ್ಯಕ್ತಿಯಿಂದ ಈ ಮಾಹಿತಿ ಸೋರಿಕೆಯಾಗಿತ್ತು ಎಂಬುದು ಗುಪ್ತಚರ ಇಲಾಖೆಗೆ ತಿಳಿಯಿತು. ಸತ್ಯಸಂಗತಿ ಏನೇಶಇರಲಿ, ಬಿಂದ್ರನ್‌ವಾಲೆ ಸ್ವಲ್ಪವೂ ತಡ ಮಾಡದೇ ದಿಲ್ಲಿ ತೊರೆದು, ಹೊರವಲಯದ “ಮಂಜು ಕಾ ತಿಲಾ” ಗುರುದ್ವಾರದಲ್ಲಿ ತಂಗಿ,  ಮರುದಿನ ಬೆಳಗ್ಗೆಯೇ ಪಂಜಾಬ್‌ಗೆ ತೆರಳಿ, ತನ್ನ ಬಂಧನದ ಯೋಜನೆಯನ್ನು ವಿಫಲಗೊಳಿಸಿದ್ದ.

ಎರಡನೇ ಬುಡಮೇಲು ಕೃತ್ಯ

ಎರಡನೇ ಹಂತದ ಬುಡಮೇಲು ಕೃತ್ಯವು 1982ರ ನವೆಂಬರ್‍ನಲ್ಲಿ ಘಟಿಸಿತು. ಪಂಜಾಬ್ ಕುರಿತು ಸಚಿವ ಸಂಪುಟದ ಸಮಿತಿ ರಚಿಸಿದ ಇಂದಿರಾ ಗಾಂಧಿ, ಅಕಾಲಿಗಳ ಮನವೊಲಿಸಿ ಮಾತುಕತೆಗೆ ಬರುವಂತೆ ಆಹ್ವಾನಿಸಲು ಸರ್ದಾರ್ ಸ್ವರಣ್ ಸಿಂಗ್ ಅವರನ್ನು ಕೇಳಿಕೊಂಡಿದ್ದರು. ಸ್ವರಣ್ ಸಿಂಗ್ ಅವರು ಅತ್ಯುತ್ತಮ ಮಧ್ಯಸ್ಥಿಕೆದಾರ ಎಂದೇ ಖ್ಯಾತಿ ಪಡೆದಿದ್ದರು.

1962ರ ಚೀನಾ ಆಕ್ರಮಣದ ಬಳಿಕ, ಅಮೇರಿಕಾದ ಒತ್ತಡದ ಮೇರೆಗೆ ಪಾಕಿಸ್ತಾನದೊಂದಿಗೆ ಮಾತುಕತೆ ಆರಂಭಿಸಲಾಗಿತ್ತು. ಆಗ ಜುಲ್ಫೀಕರ್ ಅಲಿ ಭುಟ್ಟೋ ಪಾಕಿಸ್ತಾನದ ವಿದೇಶಾಂಗ ಮಂತ್ರಿಯಾಗಿ ಪಾಕಿಸ್ತಾನಿ ನಿಯೋಗದ ಮುಖ್ಯಸ್ಥರಾಗಿದ್ದರು. ಜವಾಹರಲಾಲ್ ನೆಹರೂ ಅವರು ಸ್ವರಣ್ ಸಿಂಗ್ ಅವರನ್ನು ಭಾರತ ನಿಯೋಗದ ಮುಖ್ಯಸ್ಥರನ್ನಾಗಿ ನೇಮಿಸಿ, ಮಾತುಕತೆಯನ್ನು ಸಾಧ್ಯವಾದಷ್ಟು ಉದ್ದಕ್ಕೆ ಎಳೆಯುವಂತೆ ಸೂಚಿಸಿದ್ದರು. ಅದರಂತೆ ಸ್ವರಣ್ ಸಿಂಗ್ ಏಳು ಸುತ್ತಿನ ಸುದೀರ್ಘ ಮಾತುಕತೆ ನಡೆಸಿದರು. ಭುಟ್ಟೊ ಅವರು ತಾಳ್ಮೆ ಕಳೆದುಕೊಂಡು ದಿಲ್ಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಭಾರತದ ನಿಯೋಗವನ್ನು ತರಾಟೆಗೆ ತೆಗೆದುಕೊಂಡಿದ್ದರು. ಪರಿಣಾಮವಾಗಿ ಮಾತುಕತೆಯ ಬಾಗಿಲು ಮುಚ್ಚಿತು.

ಮಾತುಕತೆಯನ್ನು ಉದ್ದಕ್ಕೆಳೆಯಲೋ, ಅಥವಾ ನಿಜಕ್ಕೂ ಸಂಧಾನ ಮಾಡಲೋ ಗೊತ್ತಿಲ್ಲ; ಸುದೀರ್ಘ ಮಾತುಕತೆ ನಡೆಸುವ ಸಾಮರ್ಥ್ಯ ಹಾಗೂ ಅತೀವ ಜಾಣ್ಮೆಯ ಸ್ವರಣ್ ಸಿಂಗ್ ಅವರನ್ನು ಇಂದಿರಾಗಾಂಧಿ ಅವರು, ವಿವಿಧ ಜೈಲುಗಳಲ್ಲಿದ್ದ ಅಕಾಲಿ ನಾಯಕರ ಜೊತೆ ಸಂಧಾನಕ್ಕಾಗಿ ನೇಮಿಸಿದ್ದರು.  ಅನುಭವಿ ಸ್ವರಣ್ ಸಿಂಗ್ ಅವರು ಅಕಾಲಿ ನಾಯಕರನ್ನು ಸಂಧಾನದ ಮೇಜಿಗೆ ಕರೆತರುವಲ್ಲಿ ಸಫಲರಾದರು.

ಅಕಾಲಿಗಳ ಮೊದಲ ಪ್ರತಿಭಟನಾ ಸಭೆ ವಿಫಲವಾಗಿದ್ದುದರಿಂದ ಅವರು 1982ರ ನವೆಂಬರ್ 4ರಂದು ಅಮೃತಸರದಲ್ಲಿ ಇನ್ನೊಂದು ಪ್ರತಿಭಟನಾ ಸಭೆ ಆಯೋಜಿಸಿದ್ದರು. ಒಂದು ಸಲ ಅಮೃತಸರದ ಗೋಲ್ಡನ್ ಟೆಂಪಲ್‌ನಲ್ಲಿ ಕೈಗೊಂಡ ನಿರ್ಣಯಗಳಿಂದ ಅಕಾಲಿಗಳು ಹಿಂದೆ ಸರಿಯುವುದಿಲ್ಲವಾದುದರಿಂದ, ಹೇಗಾದರೂ ಮಾಡಿ ಪ್ರತಿಭಟನಾ ಸಭೆಯನ್ನು ಮುಂದೂಡುವಂತೆ ಮಾಡುವ ಪರಿಸ್ಥಿತಿಯನ್ನು ಉಂಟು ಮಾಡಬೇಕು ಎಂದು ಸ್ವರಣ್ ಸಿಂಗ್ ಅವರು ಸಂಸದ್ಭವನದ ಪ್ರಣಬ್ ಮುಖರ್ಜಿ ಅವರ ಕೊಠಡಿಯಲ್ಲಿ ಸಂಪುಟ ಸಮಿತಿಯನ್ನು ವಸ್ತುಶಃ ಬೇಡಿಕೊಂಡರು. ಅವರು ಅಲ್ಲಿಂದಲೇ ಹಲವಾರು ಅಕಾಲಿ ನಾಯಕರ ಜೊತೆ ಮಾತನಾಡಿದರು. ಪರಿಹಾರವೊಂದು ಮೂಡಿಬಂತು- ಮರುದಿನ ಸರಕಾರ ಸಂಸತ್ತಿನಲ್ಲಿ ಕೆಲವು ಭರವಸೆಗಳನ್ನು ನೀಡುವಂತಹ ಹೇಳಿಕೆಯನ್ನು ನೀಡಬೇಕು. ಅದರಂತೆ, ಹೇಳಿಕೆಯೊಂದನ್ನು ಸಿದ್ಧಪಡಿಸಲಾಯಿತು.

“ದೇಶದ ಸ್ವಾತಂತ್ರ್ಯಕ್ಕಾಗಿ ಸಿಖ್ ಸಮುದಾಯ ನಡೆಸಿದ ತ್ಯಾಗವನ್ನು ಸರಕಾರ ಪ್ರಶಂಸಿಸುತ್ತದೆ. ಅವರ ರಾಜಕೀಯ ಬೇಡಿಕೆಗಳನ್ನು ಕಾಳಜಿಯಿಂದ ಪರಿಶೀಲಿಸುವ ಭರವಸೆ ನೀಡುತ್ತದೆ. ಆ ಕುರಿತು ಉಳಿದ ರಾಜ್ಯಗಳೊಂದಿಗೆಯೂ ಸಮಾಲೋಚಿಸಲು ಸ್ವಲ್ಪ ಸಮಯದ ಅಗತ್ಯವಿದೆ” ಎಂಬುದೇ ಈ ಹೇಳಿಕೆಯ ಸಾರಾಂಶ. ಈ ಹೇಳಿಕೆಯನ್ನು ಅಂಗೀಕರಿಸಲು ಅಕಾಲಿಗಳು ಒಪ್ಪಿದರು. ಹೇಳಿಕೆಯ ಕರಡು ಪ್ರತಿಯನ್ನು ಇಂದಿರಾ ಗಾಂಧಿ ಅವರಿಗೆ ಕಳುಹಿಸಿಕೊಡಲಾಯಿತು.

ಒಂದು ವೇಳೆ, ಈ ಹೇಳಿಕೆಯನ್ನು ನೀಡಿದರೆ, ಎರಡೇ ತಿಂಗಳುಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹರ್ಯಾಣವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂಬ ಆ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಭಜನ್ ಲಾಲ್ ಅವರ ವಾದವನ್ನು ಬೆಂಬಲಿಸಿದ ಅರುಣ್ ನೆಹರೂ ಮತ್ತು ಎಂ.ಎಲ್. ಫೋತೆದಾರ್ ಅವರ ಒತ್ತಡಕ್ಕೆ ಇಂದಿರಾ ಗಾಂಧಿ ಮಣಿದರು.

ಈ ಹೇಳಿಕೆಯನ್ನು ಬದಲಾಯಿಸಿ, ಕೇಂದ್ರ ಗೃಹ ಸಚಿವ ಪಿ.ಸಿ. ಸೇಥಿ ಅವರು ಮರುದಿನ ಈ  ಬದಲಾದ ಹೇಳಿಕೆಯನ್ನು ಲೋಕಸಭೆಯಲ್ಲಿ ನೀಡಿದರು. ಈ ಹೇಳಿಕೆಯು ಅಕಾಲಿಗಳಿಗೆ ನೀಡಿದ್ದ ಹೇಳಿಕೆಗಿಂತ ಬೇರೆಯಾಗಿತ್ತು. ಇದು ನನಗೆ ಹೇಗೆ ಗೊತ್ತೆಂದರೆ, ಮೂಲ ಪ್ರತಿಯನ್ನು ನಾನು ನೋಡಿದ್ದೆ. ಗೃಹಮಂತ್ರಿಯ ಹೇಳಿಕೆಯನ್ನು ಕೇಳಲು ಸ್ವತಃ ಸ್ವರಣ್ ಸಿಂಗ್ ಅವರು ಸಂಸತ್ತಿಗೆ ಬಂದಿದ್ದರು. “ಇದು ಮೂಲ ಹೇಳಿಕೆಯೂ ಅಲ್ಲ,  ಮೂಲ ಆಶಯವೂ ಅದರಲ್ಲಿಲ್ಲ.  ನಾನು ಮಾತುಕತೆಯಿಂದ ಹಿಂದೆ ಸರಿಯುತ್ತೇನೆ” ಎಂದು ಅವರು ಆಗ ನನ್ನೊಂದಿಗೆ ಹೇಳಿದ್ದರು.

ಇದರ ಪರಿಣಾಮವಾಗಿ, ಅಕಾಲಿ ದಳ ಮುಖಂಡರು, 1982ರ ನವೆಂಬರ್ 4ರಂದು ಸಭೆ ಸೇರಿ, ತಾವು ಏಷ್ಯನ್ ಕ್ರೀಡೆಗಳನ್ನು ಬಹಿಷ್ಕರಿಸುವುದಾಗಿ ಎಚ್ಚರಿಸಿದರು. ಇದರಿಂದ, ಸರ್ಕಾರ ಹಾಗೂ ಅಕಾಲಿ ದಳ ಮಧ್ಯೆ ಬಿರುಕು ಹೆಚ್ಚಾಯಿತು. ಈ ಹಂತದಲ್ಲಿ, ಹರ್ಯಾಣದ ಮುಖ್ಯಮಂತ್ರಿ ಭಜನ್ ಲಾಲ್ ಅತ್ಯಂತ ಕೊಳಕು ಮತ್ತು ಮತಿಭ್ರಾಂತ ಪಾತ್ರ ವಹಿಸಿದರು.

ಅವರು ಹೈಕೋರ್ಟ್ ನ್ಯಾಯಾಧೀಶರು, ಸೈನ್ಯಾಧಿಕಾರಿಗಳೂ ಒಳಗೊಂಡಂತೆ  ಸಿಖ್ ಗಣ್ಯರನ್ನು ದಿಲ್ಲಿಗೆ ಬರದಂತೆ ತಡೆದರು. ಈ ಅವಮಾನದ ಮಾಹಿತಿಯು ದೇಶದಲ್ಲಿ ಮಾತ್ರವಲ್ಲ; ಅಮೆರಿಕ, ಕೆನಡಾ ಮತ್ತಿತರ ವಿದೇಶಗಳಲ್ಲಿಯ ಸಿಖ್ ಸಮೂಹದಲ್ಲೂ ಬೆಂಕಿಯಂತೆ ವ್ಯಾಪಿಸಿತು. ಇಂದಿರಾಗಾಂಧಿ ವಿರುದ್ಧ ವಿವಿಧೆಡೆ ಪ್ರತಿಭಟನೆಗಳು ನಡೆದವು.

ಅನಪೇಕ್ಷಣೀಯ ವ್ಯಕ್ತಿ, ಶಕ್ತಿಗಳಿಂದ ಸುತ್ತುವರಿಯಲ್ಪಟ್ಟ ನಾಯಕರು ಅವರಿಂದ ದೂರ ಇರಬೇಕು; ಇಲ್ಲವೇ ಅವರು ನಿಮ್ಮನ್ನು ಸಂಪೂರ್ಣವಾಗಿ ದಾರಿತಪ್ಪಿಸುತ್ತಾರೆ ಮಾತ್ರವಲ್ಲ; ದೇಶಕ್ಕೂ ಬಹು ದೊಡ್ಡ ಹಾನಿ ಉಂಟುಮಾಡುತ್ತಾರೆ ಎಂಬ ಪಾಠವನ್ನು ಈ ಘಟನೆಯಿಂದ ಕಲಿಯಬೇಕಿದೆ.

ಒಂದು ಕಡೆ ಜೈಲ್ ಸಿಂಗ್, ಮತ್ತೊಂದೆಡೆ ಇಂದಿರಾ ಗಾಂಧಿಯವರಿಗೆ ಸಲಹೆ ನೀಡುತ್ತಿದ್ದ ಅರುಣ್ ನೆಹರೂ ಹಾಗೂ ಫೋತೆದಾರ್ ಗುಂಪು ಪಂಜಾಬ್ ಬಿಕ್ಕಟ್ಟಿನಲ್ಲಿ ವಿನಾಶಕಾರಿ ಪಾತ್ರ ವಹಿಸಿದ್ದರು. ಈ ರೀತಿಯ ವಿನಾಶಕಾರಿ ವಿದ್ಯಮಾನಗಳು ನಡೆಯದೇ ಇದ್ದರೆ “ಬ್ಲ್ಯೂ ಸ್ಟಾರ್ “ನಂತಹ ಕಾರ್ಯಾಚರಣೆಯ ಅಗತ್ಯವಿರಲಿಲ್ಲ. ಮಾತ್ರವಲ್ಲ; ಇಂದಿರಾ ಗಾಂಧಿ ಅವರು ಇನ್ನಷ್ಟು ದಿನ ಬದುಕಿರುತ್ತಿದ್ದರು.

ಪಂಜಾಬ್‌ನ ಈ ವಿದ್ಯಮಾನಗಳಿಂದ ಪ್ರಸ್ತುತ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಮುಖಂಡರು ಯಾವುದೇ ಪಾಠ ಕಲಿತಿಲ್ಲ. ಕೇಸರಿ ಪರಿವಾರದ “ಹಿಂದುತ್ವ ಅಜೆಂಡಾ’ವು ದೇಶಕ್ಕೆ ಅಪಾಯ ಒಡ್ಡಲಿದೆ. ಪಂಜಾಬಿನಲ್ಲಿ ಮೂರು ದಶಕಗಳ ಹಿಂದೆ ನಡೆದ ದುರಂತಕ್ಕಿಂತಲೂ ಇದು ಅತ್ಯಂತ ಭೀಕರವಾಗಲಿದೆ ಎಂಬ ಭೀತಿ ನನಗಿದೆ.

-ಜಿ.ಎಸ್.ಚಾವ್ಲಾ, ದಿಲ್ಲಿಯಲ್ಲಿ ಪತ್ರಕರ್ತರು
(ಕೃಪೆ: ದಿ ವೈರ್)

ಅನುವಾದ: ವೆಂಕಟೇಶ್ ಮಾನು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅರವಿಂದ್ ಕೇಜ್ರಿವಾಲ್, ಕೆ. ಕವಿತಾಗೆ ನೋ ರಿಲೀಫ್‌: ನ್ಯಾಯಾಂಗ ಬಂಧನ ಮೇ 7ರವರೆಗೆ ವಿಸ್ತರಣೆ

0
ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಾಯಕಿ ಕೆ ಕವಿತಾ ಅವರ ನ್ಯಾಯಾಂಗ ಬಂಧನವನ್ನು...