ಪಾರ್ಲಿಮೆಂಟ್ ಅಭ್ಯರ್ಥಿಯ ಅರ್ಹತೆಯ ಬಗ್ಗೆ ಗಂಭೀರ ಪ್ರಶ್ನೆಗಳು
ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯ ಅರ್ಹತೆಯ ಬಗ್ಗೆ ಬಹಳ ಗಂಭೀರ ಪ್ರಶ್ನೆಗಳು ಎದ್ದಿವೆ. ಈ ಪ್ರಶ್ನೆಗಳು ಏಳುತ್ತಿರುವುದು ಜನಸಾಮಾನ್ಯರಲ್ಲಿ ಮಾತ್ರವಲ್ಲಾ, ಬಿಜೆಪಿಯೊಳಗೇ ದಿಗಿಲು ಉಂಟಾಗಿದೆ. ಒಂದು ವೇಳೆ ಆತನಿಗೆ ಸಂಬಂಧಿಸಿದ ಎಲ್ಲಾ ಸಂಗತಿಗಳೂ ಹೊರಗೆ ಬಿದ್ದರೆ ಅದು ಪಕ್ಷಕ್ಕೆ ಬಹಳ ಕೆಟ್ಟ ಹೆಸರು ತರುತ್ತದೆ ಎಂಬುದೇ ಅವರ ಆತಂಕಕ್ಕೆ ಕಾರಣ. ಇದು ತೇಜಸ್ವಿಗೂ ಗೊತ್ತಿರುವುದರಿಂದಲೇ, ಮೊದಲ ಸುದ್ದಿ ಹೊರಗೆ ಬಂದ 2ನೇ ದಿನಕ್ಕೇ ಕೋರ್ಟಿನಿಂದ ತಡೆ ತಂದದ್ದು. ಅಷ್ಟೇ ಅಲ್ಲ, ನಾನು ಪುರಾವೆಗಳ ಸಮೇತ ಈತನ ಚಾರಿತ್ರ್ಯ ಬಿಚ್ಚಿಡುತ್ತೇನೆ ಎಂದು ಹೇಳಿದ್ದ ಮಹಿಳೆ, ನಂತರ ಆ ಟ್ವೀಟ್ಗಳನ್ನು ಅಳಿಸಿ ಹಾಕಿದರು.
ತರುವಾಯ, ಇದನ್ನು ಯಾರೂ ಮುಂದುವರೆಸಬೇಡಿ ಎಂದು ಮನವಿ ಮಾಡಿದರು. ಆ ನಂತರ ಟ್ವಿಟ್ಟರ್ನಿಂದಲೇ ಹೊರಗೆ ಹೋದರು. ಇದು ಆ ಮಹಿಳೆಯ ಮೇಲೆ ಹೆಚ್ಚಿನ ಒತ್ತಡ ಬಿದ್ದಿದೆ ಎನ್ನುವುದನ್ನಷ್ಟೇ ಅಲ್ಲದೇ, ಸ್ವತಃ ತೇಜಸ್ವಿ ಸೂರ್ಯ ಬಹಳ ಬೆದರಿರಬೇಕು ಎಂಬುದನ್ನೇ ತೋರುತ್ತದೆ. ಈ ಹಿಂದೆ ಗೌರಿ ಲಂಕೇಶರ ಹತ್ಯೆ ಆದಾಗ, ಬಿಜೆಪಿಯಲ್ಲಿ ಬಹುತೇಕರು ಖಂಡನೆ ಹೇಳಿಕೆ ನೀಡಿ ಸುಮ್ಮನಾದರು. ಆದರೆ, ಕೆಲವರಷ್ಟೇ ಅದನ್ನು ಪರೋಕ್ಷವಾಗಿ ಸಮರ್ಥಿಸುವ ಹೀನ ಮನಸ್ಸನ್ನು ತೋರ್ಪಡಿಸಿದರು. ಅಂತಹವರಲ್ಲಿ ತೇಜಸ್ವಿ ಮುಂಚೂಣಿಯಲ್ಲಿದ್ದರು. 26 ವರ್ಷ (ಆಗ) ವಯಸ್ಸಿನ ಒಬ್ಬ ವಕೀಲನಲ್ಲಿ ಇಂತಹ ದುಷ್ಟ ಮನಸ್ಸಿದೆಯಲ್ಲಾ ಎಂದು ಹಲವರು ಆತಂಕ ವ್ಯಕ್ತಪಡಿಸಿದ್ದರು. ಆದರೆ, ಆತನನ್ನು ಹತ್ತಿರದಿಂದ ಬಲ್ಲವರಿಗೆ ಇದೇನೂ ವಿಶೇಷ ಎನಿಸಿರಲಿಲ್ಲ. ಇದೀಗ ತೇಜಸ್ವಿ ತನಗೆ ಕೈ ಕೊಟ್ಟಿದ್ದು ಮಾತ್ರವಲ್ಲಾ, ‘ಇದು ಮೊದಲ ಪ್ರಕರಣವೂ ಅಲ್ಲ, ಕೊನೆಯ ಪ್ರಕರಣವೂ ಅಲ್ಲ’ ಎಂದು ಆ ಮಹಿಳೆ ಹೇಳಿದ್ದರು. ನಂತರದಲ್ಲಿ ಮಹಿಳೆಯರಿಗೆ ಹಿಂಸೆ ಕೊಡುವುದು, ಬಡಿಯುವುದು, ಅಸಭ್ಯವಾಗಿ ವರ್ತಿಸುವ ವ್ಯಕ್ತಿ ಈತ ಎಂಬ ವಿಚಾರ ಹೊರಗೆ ಬಂದಿತು. ಬಿಜೆಪಿಯ ವರ್ತುಲದಲ್ಲೇ ಓಡಾಡಿದ ಇನ್ನೊಂದು ವಿಚಾರದಲ್ಲಿ ಇಂಗ್ಲಿಷ್ ಚಾನೆಲ್ಲೊಂದರ ವರದಿಗಾರ್ತಿಯು ಅನುಭವಿಸಿದ ಕಿರುಕುಳದ ವಿಚಾರವೂ ಇತ್ತು.
ಇದರ ಕುರಿತು ಆಗಲೇ ಅದನ್ನು ನಮ್ಮಲ್ಲಿ ಸುದ್ದಿ ಮಾಡಿದ್ದರೂ, ಸ್ಕ್ರೀನ್ಷಾಟ್ಗಳನ್ನು ಹಾಕಿರಲಿಲ್ಲ. ಆದರೆ, ಇದೀಗ ನಮಗೆ ಲಭ್ಯವಾದ ಹಲವಾರು ಸ್ಕ್ರೀನ್ಷಾಟ್ಗಳಲ್ಲಿ ಒಂದು ಆಶ್ಚರ್ಯವನ್ನುಂಟು ಮಾಡುತ್ತಿದೆ. ಅಮೆರಿಕದಲ್ಲಿ ನೆಲೆಸಿರುವ ಮಹಿಳೆಯೊಬ್ಬರು ತೇಜಸ್ವಿಯ ಕಿರುಕುಳವನ್ನು ತಾಳದೇ ಪ್ರತಾಪ್ಸಿಂಹರಲ್ಲಿ ದೂರಿದ್ದಾರೆ. ಬೆಂಗಳೂರು ಬಿಟ್ಟು ಸ್ವಲ್ಪ ಹೊರಗೆ ಬಂದುಬಿಡಬೇಕು ಎನಿಸಿದೆ ಎಂತಲೂ ಹೇಳುತ್ತಾರೆ. ನಿನ್ನ ಬಗ್ಗೆ ನನಗೆ ಕಾಳಜಿ ಇದೆ. ಆದರೆ ನಾನೇನು ಮಾಡಬೇಕೆಂದು ಗೊತ್ತಾಗುತ್ತಿಲ್ಲವೆಂದು ಹೇಳುವ ಸಿಂಹ ಕೈತೊಳೆದುಕೊಳ್ಳುವ ಪ್ರಯತ್ನ ನಡೆಸುತ್ತಾರೆ. ನಂತರ ಆತನ ಜೊತೆಗೆ ತಾನು ಮಾತಾಡಿದ್ದಾಗಿಯೂ, ತೇಜಸ್ವಿಯ ಹತ್ತಿರ ಈ ವಿಚಾರವನ್ನು ತಾನೇನೂ ಪ್ರಸ್ತಾಪಿಸಿಲ್ಲ, ಆತ ಚೆನ್ನಾಗಿದ್ದಾನೆ, ನೀನೂ ಚೆನ್ನಾಗಿದ್ದುಬಿಡು ಹೇಳುವ ಒಂದು ವಾಟ್ಸಾಪ್ ಚಾಟ್ ಸ್ಕ್ರೀನ್ಷಾಟ್ನಿಂದ ಆರಂಭವಾಗುವ ಈ ಸರಣಿಯಲ್ಲಿ ಹಲವಾರು ಅಂಶಗಳು ಒಂದೊಂದಾಗಿ ತೆರೆದುಕೊಳ್ಳುತ್ತವೆ.

ತಾವೇ ಬಹಿರಂಗಗೊಳಿಸಲಿಚ್ಛಿಸದ ನೊಂದವರ ಐಡೆಂಟಿಟಿಗಳನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಬಯಲುಗೊಳಿಸುವ ಸುದ್ದಿಗಳನ್ನು ಸುದ್ದಿಯ ‘ರೋಚಕತೆ’ಯ ಕಾರಣಕ್ಕೆ ಮಾಡುತ್ತಾ ಹೋಗದೆ, ಕೆಲವು ಪ್ರಶ್ನೆಗಳನ್ನು ಮುಂದಿಡುತ್ತಿದ್ದೇವೆ. ಕೇವಲ 28 ವರ್ಷ ವಯಸ್ಸಿನ ಈ ವ್ಯಕ್ತಿಯು ಸಂಸತ್ ಸದಸ್ಯನಾಗುವಷ್ಟು ಅರ್ಹತೆ ಪಡೆದುಕೊಂಡಿದ್ದಾನೆಂದು ರಾಷ್ಟ್ರೀಯ ಪಕ್ಷವೊಂದು ಭಾವಿಸಿರುವುದಾದರೆ, ಈ ಅವಗುಣಗಳನ್ನು, ಅನರ್ಹತೆಗಳನ್ನು ಅವರು ಗಮನಕ್ಕೆ ತೆಗೆದುಕೊಂಡಿಲ್ಲವೇ? ಬಿಜೆಪಿ ಸರ್ಕಾರವು ಮುಂದಿಟ್ಟ ಮಹಿಳಾ ಮೀಸಲಾತಿಯ ಪ್ರಸ್ತಾಪಕ್ಕೆ ಅಷ್ಟೇ ತೇಜಸ್ವಿಯ ವಿರೋಧವಿರಲಿಲ್ಲ; ಮಹಿಳೆಯರ ಬಗ್ಗೆ ಬಹಳ ಕೀಳು ಮಟ್ಟದ ಮನಸ್ಥಿತಿಯನ್ನು ಈತ ಹೊಂದಿರುವುದಕ್ಕೆ ಹಲವು ಪುರಾವೆಗಳು ಹೊರಬೀಳುತ್ತಿವೆ. ಇದು ಬಿಜೆಪಿ ಪಕ್ಷದ ನೀತಿಯಾ? ಇಂತಹ ವ್ಯಕ್ತಿಯು ದೇಶಕ್ಕೇ ಅನ್ವಯಿಸುವ ಕಾನೂನುಗಳನ್ನು ರೂಪಿಸುವ ಸಂಸತ್ನಲ್ಲಿ ಇರುವುದಕ್ಕೆ ಎಷ್ಟರ ಮಟ್ಟಿಗೆ ಅರ್ಹ? ಈ ಎಲ್ಲಾ ಸುದ್ದಿಗಳು ಒಂದೊಂದಾಗಿ ಹೊರಗೆ ಬರುತ್ತಿರುವುದು ಬಿಜೆಪಿಯ ವಲಯದಿಂದಲೇ ಆಗಿದೆ. ಹಾಗಿದ್ದ ಮೇಲೆ ಬಿಜೆಪಿಯ ಇತರ ‘ಸಭ್ಯರು’ ಇದನ್ನು ಬಹಿರಂಗಗೊಳಿಸದೇ ಪಕ್ಷ ನಿಷ್ಠೆಯ ಹೆಸರಿನಲ್ಲಿ, ಅಪಾಯಕಾರಿ ವ್ಯಕ್ತಿಯು ಪಕ್ಷದ ಪ್ರತಿನಿಧಿಯಾಗಿ ಆರಿಸಿ ಹೋದರೆ ಪರವಾಗಿಲ್ಲವೆಂದು ಭಾವಿಸಿದ್ದಾರೆಯೇ? ಸ್ವತಃ ತೇಜಸ್ವಿ ಸೂರ್ಯ ತನ್ನ ಆತ್ಮವಿಮರ್ಶೆಯನ್ನು, ಪಶ್ಚಾತ್ತಾಪವನ್ನು ಮುಂದಿಡಲು ಇದು ಸುಸಮಯ ಅಲ್ಲವೇ?


