ಹೈಕೋರ್ಟ್ ನೀಡಿರುವ ಮಧ್ಯಂತರ ತೀರ್ಪನ್ನು ಸರಿಯಾಗಿ ಅರ್ಥೈಸಿಕೊಳ್ಳದೇ ಶಾಲೆಗಳಿಗೆ ನುಗ್ಗಿ, ಅಪ್ರಾಪ್ತ ಮಕ್ಕಳ ವಿಡಿಯೋ ಮಾಡಿ, ಪ್ರಶ್ನೆ ಕೇಳಿ, ವಿಡಿಯೋ ಮಾಡಲು ಓಡಿಸಿಕೊಂಡು ಹೋಗುತ್ತಿರುವ ವರದಿಗಾರರು ಮತ್ತು ಮಾಧ್ಯಮಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಿಂಧನೂರಿನ ಮಕ್ಕಳ ಹಕ್ಕುಗಳ ಸಂರಕ್ಷಣಾ ವೇದಿಕೆ ಒತ್ತಾಯಿಸಿದೆ.
ಇಂದು ಸಿಂಧನೂರಿನ ತಹಶೀಲ್ದಾರ್ ಕಚೇರಿ ಎದರು ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಮಕ್ಕಳ ಹಕ್ಕುಗಳನ್ನು ಉಲ್ಲಂಘಿಸಿದ ವ್ಯಕ್ತಿ, ಅಧಿಕಾರಿಗಳು, ಸಂಘ ಸಂಸ್ಥೆಗಳು ಮತ್ತು ಮಾಧ್ಯಮಗಳ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಬೇಕೆಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗಕ್ಕೆ ಹಕ್ಕೊತ್ತಾಯ ಸಲ್ಲಿಸಲಾಗಿದೆ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಶಾಲೆ ಆವರಣ ಹಾಗೂ ಕೊಠಡಿಗಳಿಗೆ ಅಕ್ರಮ ಮತ್ತು ದುರುದ್ದೇಶಪೂರ್ವಕವಾಗಿ ನುಗ್ಗಿ ಮಕ್ಕಳಿಂದ ಬಲವಂತವಾಗಿ ಹೇಳಿಕೆಯನ್ನು ವಿಡಿಯೊ ಚಿತ್ರೀಕರಣ ಮಾಡಿದ್ದಲ್ಲದೇ, ಅವರನ್ನು ಬೆನ್ನಟ್ಟಿ ಪೀಡಿಸಿದ ಘಟನೆಗಳು ನಡೆದಿವೆ. ಇದು ಮಕ್ಕಳ ಮನೋವಿಶ್ವಾಸ ಕುಗ್ಗಿಸಿ ಅವರನ್ನು ಶಾಲೆಯಿಂದ ಹೊರಗುಳಿಯುವಂತೆ ಮಾಡುವ ದುರುದ್ದೇಶವಾಗಿದ್ದು ಮಕ್ಕಳ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು AICCTU ಸಂಚಾಲಕಾದ ನಾಗರಾಜ್ ಪೂಜಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಲೆಗಳಿಗೆ ನುಗ್ಗಿ, ಅಪ್ರಾಪ್ತ ಮಕ್ಕಳ ವಿಡಿಯೋ ಮಾಡಿ, ಪ್ರಶ್ನೆ ಕೇಳಿ, ವಿಡಿಯೋ ಮಾಡಲು ಓಡಿಸಿಕೊಂಡು ಹೋಗುತ್ತಿರುವ ವರದಿಗಾರರು ಮತ್ತು ಮಾಧ್ಯಮಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಿಂಧನೂರಿನ ಮಕ್ಕಳ ಹಕ್ಕುಗಳ ಸಂರಕ್ಷಣಾ ವೇದಿಕೆ ಒತ್ತಾಯಿಸಿದೆ.#HijabisOurRight pic.twitter.com/GX7dXsQ2lS
— Naanu Gauri (@naanugauri) February 17, 2022
ಒಂದು ಸಮುದಾಯಕ್ಕೆ ಸೇರಿದ ಮಕ್ಕಳು ಎನ್ನುವ ಕಾರಣಕ್ಕೆ, ಕಳೆದ ಮೂರ್ನಾಲ್ಕು ದಿನಗಳಿಂದ ಹಾಡಹಗಲಲ್ಲೇ ಶಾಲೆಗೆ ಬರುವ ಮಕ್ಕಳನ್ನು ಹೆದರಿಸುವ, ಬೆದರಿಸುವ, ಅವರಿಗೆ ಮುಜುಗರ ಉಂಟುಮಾಡುವ, ಮಾನಸಿಕ ಸ್ಥೈರ್ಯ ಕುಗ್ಗಿಸುವ, ಕಿರುಕುಳ ನೀಡುವ, ಶಾಲೆಗೆ ಹೊರಗುಳಿಯುವಂತೆ ಮಾಡುವ ದುರುದ್ದೇಶದ ಘಟನೆಗಳು ನಡೆದಾಗ್ಯೂ ಮಕ್ಕಳ ಹಕ್ಕುಗಳ ಬಗ್ಗೆ ಪುಂಖಾನು ಪುಂಖವಾಗಿ ಮಾತನಾಡಿ, ಜನರ ತೆರಿಗೆ ದುಡ್ಡಿನಲ್ಲಿ ಅಭಿಯಾನ ಮಾಡುವ ಅಧಿಕಾರಿಗಳು ಮಕ್ಕಳ ಹಕ್ಕುಗಳ ರಕ್ಷಣೆಗೆ ಮುಂದಾಗದಿರುವುದು ಸಂವಿಧಾನಬಾಹಿರ ಮತ್ತು ತಾರತಮ್ಯ ನೀತಿಗೆ ಸಾಕ್ಷಿಯಾಗಿದೆ ಎಂದು ಅವರು ಕಿಡಿಕಾರಿದ್ದಾರೆ.
ವಿವಾದ ಶುರುವಾಗುತ್ತಿದ್ದಂತೆ ಕಳೆದ ಕೆಲವು ದಿನಗಳಿಂದ ಮಕ್ಕಳ ಹಿತಾಸಕ್ತಿಯನ್ನೇ ಮರೆತು, ಮಕ್ಕಳ ಇಚ್ಛೆಗೆ ವಿರುದ್ಧವಾಗಿ ಅವರ ಫೋಟೋಗಳನ್ನು, ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿಬಿಡಲಾಗಿದೆ. ಅಲ್ಲದೇ ಏನೂ ತಿಳಿಯದ ಮುಗ್ದ ಮುಕ್ಕಳನ್ನು ದುರ್ಬಳಕೆ ಮಾಡಿಕೊಂಡು ಪ್ರಚೋದನಕಾರಿಯಾದ ಮಾತುಗಳನ್ನು ಹೇಳಿಸುವ ಮೂಲಕ ಮಕ್ಕಳ ಹಕ್ಕುಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಲಾಗಿದ್ದು ಇದು ಆಯಾ ಜಿಲ್ಲಾಡಳಿತಗಳ ಆಡಳಿತ ವೈಫಲ್ಯಕ್ಕೆ ಸಾಕ್ಷಿಯಾಗಿದೆ ಎಂದು ರಾಜ್ಯ ಮಹಿಳಾ ಒಕ್ಕೂಟದ ವಿರುಪಮ್ಮ, ಹೇಳಿದ್ದಾರೆ.
ಈ ಎಲ್ಲಾ ಕೃತ್ಯಗಳು ಬಾಲನ್ಯಾಯ ಕಾಯ್ದೆ 2015ರ ಉಲ್ಲಂಘನೆಯಾಗಿದೆ. ಭಾರತ ಸಂವಿಧಾನ ಮತ್ತು ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಯಲ್ಲಿ ಸ್ಪಷ್ಟಪಡಿಸಿರುವಂತೆ ರಾಜ್ಯದಲ್ಲಿರುವ ಮಕ್ಕಳ ಹಕ್ಕುಗಳನ್ನು ರಕ್ಷಿಸಿ, ಬೆಂಬಲ ನೀಡುವುದಾಗಿರುತ್ತದೆ. ಕರ್ನಾಟಕ ರಾಜ್ಯದಲ್ಲಿರುವ ಎಲ್ಲಾ ಮಕ್ಕಳು ಅಂದರೆ ಜಾತಿ, ಲಿಂಗ, ಧರ್ಮ ಇತ್ಯಾದಿಗಳ ಬೇಧವಿಲ್ಲದೆ ಮಕ್ಕಳ ಹಕ್ಕುಗಳನ್ನು ರಕ್ಷಿಸಲಾಗಿದೆಯೇ ಎಂದು ಖಚಿತಪಡಿಸುವುದು ಆಯೋಗದ ಕರ್ತವ್ಯವಾಗಿದೆ. ಹಾಗಾಗಿ ಮಕ್ಕಳ ಶಿಕ್ಷಣಕ್ಕೆ ಅಡೆ-ತಡೆ ಉಂಟುಮಾಡುತ್ತಿರುವವರು ಯಾರೇ ಆಗಿರಲಿ ಅವರ ವಿರುದ್ಧ ಕಾನೂನು ಕ್ರಮಕ್ಕೆ ಆಯೋಗ ಮುಂದಾಗಬೇಕೆಂದು ಆಗ್ರಹಿಸಲಾಯಿತು.
ಕಳೆದ ಕೆಲವು ದಿನಗಳಲ್ಲಿ ಯಾವ್ಯಾವ ಜಿಲ್ಲೆಗಳಲ್ಲಿ ಮಕ್ಕಳ ಹಕ್ಕುಗಳು ಉಲ್ಲಂಘನೆಯಾಗಿವೆ ಎಂಬ ಬಗ್ಗೆ ವರದಿ ತರಿಸಿಕೊಂಡು, ಶಾಲೆಗಳಲ್ಲಿ ಜಾತಿ, ಲಿಂಗ, ಧರ್ಮ ಇತ್ಯಾದಿಗಳ ಬೇಧವಿಲ್ಲದೇ ವಿದ್ಯಾರ್ಥಿಗಳ ಘನತೆ ಎತ್ತಿ ಹಿಡಿದು ಉತ್ತಮ ಕಲಿಕಾ ವಾತಾವರಣ ನಿರ್ಮಿಸಬೇಕು ಎಂದು ಪ್ರತಿಭಟನಾಕರರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಈರಮ್ಮ, ರಂಗಮ್ಮ, ಮಾಳಮ್ಮ, ಇಂದ್ರಮ್ಮ, ಅಮರಮ್ಮ, ಗ್ಯಾನಮ್ಮ, ದೇವಮ್ಮ, ಮರಿಯಮ್ಮ, ದಲಿತ ಮುಖಂಡ ಮಹಾದೇವ ಧುಮತಿ, ಮನುಜಮತ ಬಳಗದ ಬಸವರಾಜ ಬಾದರ್ಲಿ, ಕ.ಕೊ.ಸೌ.ವೇದಿಕೆಯ ಸಮ್ಮದ್ ಚೌದ್ರಿ, ಬಸವರಾಜ ಬೆಳಗುರ್ಕಿ, ಬಸಯ್ಯ ಬಡಿಗೇರ, ಶ್ರೀನಿವಾಸ ಬುಕ್ಕನಹಟ್ಟಿ, ಮಲ್ಲಿಕಾರ್ಜುನ ಕುರುಗೋಡು, ಆರ್.ಎಚ್.ಕಲಮಂಗಿ ಸೇರಿದಂತೆ ಇನ್ನಿತರರಿದ್ದರು.
ಇದನ್ನೂ ಓದಿ: ನಾವೆಲ್ಲರೂ ಒಂದೇ ತಾಯಿಗೆ ಮಕ್ಕಳು: ವಿದ್ಯಾರ್ಥಿಗಳು ಕಲಿಯಲು ಬಿಡಿ


