ಮಲಯಾಳಂ ಮೂಲದ ಬಹುಭಾಷಾ ನಟಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದ (2017ರ ಪ್ರಕರಣ) ಆರು ಅಪರಾಧಿಗಳಿಗೆ ಇಪ್ಪತ್ತು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಶುಕ್ರವಾರ (ಡಿಸೆಂಬರ್ 12) ಕೇರಳ ನ್ಯಾಯಾಲಯ ಆದೇಶಿಸಿದೆ.
ಡಿಸೆಂಬರ್ 8ರಂದು ಪ್ರಕರಣದ ತೀರ್ಪು ಪ್ರಕಟಿಸಿದ್ದ ಎರ್ನಾಕುಲಂ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶೆ ಹನಿ ಎಂ.ವರ್ಗೀಸ್, ಪ್ರಕರಣದ 8ನೇ ಆರೋಪಿಯಾಗಿದ್ದ ಮಲಯಾಳಂ ನಟ ದಿಲೀಪ್ ಅವರನ್ನು ಖುಲಾಸೆಗೊಳಿಸಿದ್ದರು.
ಉಳಿದ ಆರೋಪಿಗಳಾದ ಸುನಿಲ್ ಎನ್.ಎಸ್ ಅಲಿಯಾಸ್ ಪಲ್ಸರ್ ಸುನಿ, ಮಾರ್ಟಿನ್ ಆಂಟೋನಿ, ಮಣಿಕಂಠನ್ ಬಿ, ವಿಜೀಶ್ ವಿಪಿ, ಸಲೀಂ ಎಚ್ ಅಲಿಯಾಸ್ ವಡಿವಲ್ ಸಲೀಂ ಹಾಗೂ ಪ್ರದೀಪ್ ಅವರನ್ನು ದೋಷಿಗಳೆಂದು ಘೋಷಿಸಿದ್ದರು.
ಶಿಕ್ಷೆಯನ್ನು ಪ್ರಶ್ನಿಸಿ ಆರು ಅಪರಾಧಿಗಳು ಮಂಡಿಸಿದ ವಾದ ಆಲಿಸಿದ ನ್ಯಾಯಾಲಯ ಸಾಮೂಹಿಕ ಅತ್ಯಾಚಾರ ಕೃತ್ಯಕ್ಕಾಗಿ ಇಪ್ಪತ್ತು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ.
ತನ್ನ ವೃದ್ಧ ತಾಯಿಯ ಪಾಲನೆಗೆ ಇರುವುದು ತಾನೊಬ್ಬನೇ, ಹಾಗಾಗಿ ಶಿಕ್ಷೆಯ ಪ್ರಮಾಣ ತಗ್ಗಿಸುವಂತೆ ಪ್ರಕರಣದ ಪ್ರಮುಖ ಆರೋಪಿ ಎಂದು ಪಲ್ಸರ್ ಸುನಿ ಕೋರಿದ್ದರು. ಮತ್ತೊಬ್ಬ ಆರೋಪಿ ಆಂಟನಿ ವಾದ ಮಂಡಿಸಿ ಅಪರಾಧದಲ್ಲಿ ತನ್ನ ಪಾತ್ರ ಇಲ್ಲವಾದರೂ ಈಗಾಗಲೇ ಹಲವು ವರ್ಷಗಳನ್ನು ಜೈಲಿನಲ್ಲಿ ಕಳೆದಿದ್ದೇನೆ. ಹೆತ್ತವರು ತನ್ನ ಮೇಲೆ ಅವಲಂಬಿತರಾಗಿದ್ದಾರೆ ಎಂದಿದ್ದರು. ಮಣಿಕಂಠನ್ ಕೂಡ ಇದೇ ರೀತಿಯ ಮನವಿ ಮಾಡಿದ್ದರು. ವಿಜೇತ್ ತನ್ನ ಊರಿನ ಸಮೀಪದ ಜೈಲಿಗೆ ಕಳಿಸುವಂತೆ ವಿನಂತಿಸಿದ್ದರು. ವಡಿವಲ್ ಸಲೀಂ ಮತ್ತು ಪ್ರದೀಪ್ ತಾವು ನಿರಪರಾಧಿಗಳು ಎಂದಿದ್ದರು.
ಅಪರಾಧಿಗಳ ವಾದವನ್ನು ಬಲವಾಗಿ ವಿರೋಧಿಸಿದ್ದ ಸರ್ಕಾರಿ ವಿಶೇಷ ಅಭಿಯೋಜಕ ಅಜಕುಮಾರ್, ಸಮಾಜ ಇಂತಹ ಅಪರಾಧಗಳನ್ನು ಸಹಿಸದು ಎಂಬ ಸಂದೇಶವನ್ನು ಶಿಕ್ಷೆ ಸಾರಬೇಕು. ಎಲ್ಲಾ 6 ಜನರಿಗೆ ಅವರ ಅಪರಾಧಗಳಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು ಎಂದು ಕೋರಿದ್ದರು.
ಪಿತೂರಿಯಲ್ಲಿ ಭಾಗವಹಿಸಿದ ಎಲ್ಲರೂ ತಮ್ಮ ಅಪರಾಧಗಳಿಗೆ ಸಮಾನವಾಗಿ ಹೊಣೆಗಾರರಾಗಿದ್ದರೂ, ಸುನಿ ಮಾತ್ರ ನಿಜವಾಗಿಯೂ ಅತ್ಯಾಚಾರ ಎಸಗಿದ್ದಾನೆ ಎಂಬ ಅಂಶವನ್ನು ಗಣನೆಗೆ ತೆಗೆದುಕೊಳ್ಳಬೇಕಾಗಬಹುದು ಎಂದು ನ್ಯಾಯಾಧೀಶೆ ಹನಿ ಅವರು ಮೌಖಿಕವಾಗಿ ಹೇಳಿದ್ದರು.


