ಪ್ರಧಾನಿ ಮೋದಿಯನ್ನು ಟೀಕಿಸಿದ್ದಕ್ಕೆ ತನ್ನನ್ನು ಕೆಲಸದಿಂದ ವಜಾಗೊಳಿಸಲಾಗಿದೆ ಎಂದು ಆಜ್ತಕ್ ಪತ್ರಕರ್ತ ಶ್ಯಾಮ್ ಮೀರಾ ಸಿಂಗ್ ಸೋಮವಾರ ಆರೋಪಿಸಿದ್ದಾರೆ. ಅವರು ಜುಲೈ 17 ರಂದು ತಮ್ಮ ಟ್ವಿಟರ್ ಖಾತೆಯಲ್ಲಿ ಮೋದಿ ನಾಚಿಕೆಯಿಲ್ಲದ ಪ್ರಧಾನಿ ಎಂದು ಟ್ವೀಟ್ ಮಾಡಿದ್ದರು.
ಪ್ರಧಾನಿ ಮೋದಿಯವರ ವಿರುದ್ದ ಈ ಎರಡು ಟ್ವೀಟ್ಗಳನ್ನು ಬರೆದಿದ್ದಕ್ಕಾಗಿ ನನ್ನ ಚಾನೆಲ್ ಆಜ್ತಕ್ನಿಂದ ನನ್ನನ್ನು ವಜಾಗೊಳಿಸಲಾಗಿದೆ ಎಂದು ಶ್ಯಾಮ್ ಸಿಂಗ್ ಇಂದು ಟ್ವೀಟ್ ಮಾಡಿದ್ದಾರೆ. ಟ್ವೀಟ್ನಲ್ಲಿ ಅವರು ಕಂಪೆನಿಯ ಪತ್ರ ಮತ್ತು ತಾನು ಮೋದಿ ವಿರುದ್ದ ಬರೆದಿದ್ದ ಎರಡು ಟ್ವೀಟ್ಗಳ ಚಿತ್ರ ಸಹಿತ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ.
I am terminated from my channel Aaj Tak (India Today Group) for writing these two tweets on Prime minister Modi. pic.twitter.com/L6JRlC3RDi
— Shyam Meera Singh (@ShyamMeeraSingh) July 19, 2021
ಇದನ್ನೂ ಓದಿ: ಪೆಗಾಸಸ್ ಪ್ರಾಜೆಕ್ಟ್: ಶೀಘ್ರದಲ್ಲೇ ನ್ಯಾಯಾಧೀಶರ ಹೆಸರು ಬಹಿರಂಗ!
ಶ್ಯಾಮ್ ಸಿಂಗ್ ಅವರು ಜುಲೈ 17 ರಂದು ಅಫ್ಘಾನ್ನಲ್ಲಿ ಹತರಾಗಿದ್ದ ಖ್ಯಾತ ಪತ್ರಕರ್ತ ದ್ಯಾನಿಶ್ ಸಿದ್ದೀಕಿ ಅವರಿಗೆ ಪ್ರಧಾನಿ ಮೋದಿ ಶ್ರದ್ದಾಂಜಲಿ ಕೋರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು. ಇದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿ, ಅವರ ಸಂಸ್ಥೆಗೆ ಟ್ಯಾಗ್ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಅವರು, “ನಾನು ಟ್ವಿಟ್ಟರ್ನಲ್ಲಿ ಏನಾದರು ಬರೆದರೆ, ಕೆಲವರು ನನ್ನ ಕಂಪನಿಯನ್ನು ಟ್ಯಾಗ್ ಮಾಡುತ್ತಾರೆ. ಟ್ಯಾಗ್ ಮಾಡಿ ಇವರನ್ನು ಕೆಲಸದಿಂದ ತೆಗೆದುಹಾಕಿ ಎಂದು ಹೇಳುತ್ತಾರೆ. ಮುಂದಿನ ಟ್ವೀಟ್ ಅನ್ನು ನಾನು ಹೆಚ್ಚು ತೀವ್ರವಾಗಿ ಬರೆಯುತ್ತೇನೆ. ಆದರೆ ನಾನು ಅದನ್ನು ಬರೆಯುವುದರಿಂದ ಹಿಂದೆ ಸರಿಯುವುದಿಲ್ಲ, ಮೋದಿ ಒಬ್ಬ ನಾಚಿಕೆಯಿಲ್ಲದ ಪ್ರಧಾನಿ” ಎಂದು ಬರೆದಿದ್ದರು.
यहाँ ट्विटर पर कुछ लिखता हूँ तो कुछ लोग मेरी कंपनी को टैग करने लगते हैं. कहते हैं इसे हटाओ, इसे हटाते क्यों नहीं… मैं अगला ट्वीट और अधिक दम लगाकर लिखता हूँ. पर इसे लिखने से पीछे नहीं हटूँगा कि Modi is a shameless Prime Minister.
— Shyam Meera Singh (@ShyamMeeraSingh) July 17, 2021
ಇದನ್ನೂ ಓದಿ: ಹೋರಾಟಗಾರನ ಫೇಸ್ಬುಕ್ ಪೋಸ್ಟ್ಗೆ NSA ಪ್ರಕರಣ: ಸಂಜೆಯೊಳಗೆ ಬಿಡುಗಡೆಗೊಳಿಸಿ ಎಂದ ಸುಪ್ರೀಂ
ಈ ಟ್ವಿಟ್ಗೂ ಕೆಲವರು ಆಕ್ಷೇಪ ವ್ಯಕ್ತಪಡಿಸಿ ಪ್ರಧಾನಿಗೆ ಗೌರವ ನೀಡುವಂತೆ ಸಲಹೆ ನೀಡಿದ್ದರು. ಅದಕ್ಕೆ ಮತ್ತೆ ಟ್ವೀಟ್ನಲ್ಲೆ ಉತ್ತರಿಸಿದ್ದ ಅವರು, “ಪ್ರಧಾನಮಂತ್ರಿಯನ್ನು ಗೌರವಿಸಿ ಎಂದು ಯಾರು ಹೇಳುತ್ತಾರೋ, ಅವರು ಮೊದಲು ಮೋದಿಯನ್ನು ಪ್ರಧಾನಿ ಹುದ್ದೆಗೆ ಗೌರವ ನೀಡುವಂತೆ ಕೇಳಿ” ಎಂದು ಹೇಳಿದ್ದರು.
ಇದೀಗ ತನ್ನ ಈ ಎರಡು ಟ್ವೀಟ್ಗಳನ್ನು ಉಲ್ಲೇಖಿಸಿ ಕೆಲಸದಿಂದ ವಜಾಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಆದರೆ, “ತಾನು ಮತ್ತೆ ಮತ್ತೆ ಪುನರುಚ್ಚರಿಸಲು ಬಯಸುತ್ತೇನೆ. ಹೌದು! ಮೋದಿ ನಾಚಿಕೆಯಿಲ್ಲದ ಪ್ರಧಾನಿ” ಎಂದು ಅವರು ತಮ್ಮ ಮಾತನ್ನು ಪುನರುಚ್ಚರಿಸಿದ್ದಾರೆ.
“ಜನರು ತಮ್ಮ ಪದವಿ, ಸಂಶೋಧನಾ ಪ್ರಬಂಧಗಳನ್ನು ತಮ್ಮ ಆದರ್ಶ ವ್ಯಕ್ತಿಗಳಿಗೆ ಅರ್ಪಿಸುತ್ತಾರೆ. ನನ್ನ ಕಂಪನಿ ಇಂಡಿಯಾ ಟುಡೇಯ ವಜಾ ಪತ್ರವನ್ನು ಹೊರತುಪಡಿಸಿ ನನಗೆ ತೋರಿಸಲು ಏನೂ ಇಲ್ಲ. ಹಾಗಾಗಿ ಅಫ್ಘಾನಿಸ್ತಾನದಲ್ಲಿ ಹುತಾತ್ಮರಾದ ನನ್ನ ಪ್ರೀತಿಯ ಸ್ನೇಹಿತ ದ್ಯಾನಿಶ್ ಸಿದ್ದಿಕಿ ಅವರಿಗೆ ನನ್ನ ವಜಾ ಪತ್ರವನ್ನು ಅರ್ಪಿಸಲು ಬಯಸುತ್ತೇನೆ” ಎಂದು ಅವರು ಹೇಳಿದ್ದಾರೆ.
ರಾಯ್ಟರ್ಸ್ನ ಮುಖ್ಯ ಫೋಟೋಗ್ರಾಫರ್ ಆಗಿದ್ದ ದಾನಿಶ್ ಸಿದ್ದೀಕಿ ಕಂದಹಾರ್ನ ಸ್ಪಿನ್ ಬೋಲ್ಡಾಕ್ ಜಿಲ್ಲೆಯಲ್ಲಿ ನಡೆದ ಘರ್ಷಣೆಯಲ್ಲಿ ಹತರಾಗಿದ್ದರು. ವಿಶ್ವ ಪ್ರಸಿದ್ದ ಫೋಟೊ ಜರ್ನಲಿಸ್ಟ್ ಆಗಿದ್ದ ಅವರು 2018 ರಲ್ಲಿ ರೋಹಿಂಗ್ಯಾ ನಿರಾಶ್ರಿತರ ಬಿಕ್ಕಟ್ಟನ್ನು ದಾಖಲಿಸಿದ್ದ ಫೀಚರ್ ಫೋಟೊಗ್ರಾಫ್ಗಾಗಿ ಪ್ರತಿಷ್ಠಿತ ಪುಲಿಟ್ಜೆರ್ ಪ್ರಶಸ್ತಿಯನ್ನು ಪಡೆದಿದ್ದರು.
ಇದನ್ನೂ ಓದಿ: ದಿಟ್ಟ ಪತ್ರಕರ್ತ ದಾನಿಶ್ ಸಿದ್ದೀಕಿ ಹತ್ಯೆಗೆ ಪಿಎಂ ಮೋದಿ ಸಂತಾಪ ಸೂಚಿಸಲಿಲ್ಲವೇಕೆ?
ದಾನಿಶ್ ಅವರು, ಅಫ್ಘಾನಿಸ್ತಾನ ಮತ್ತು ಇರಾಕ್ ಯುದ್ಧಗಳು, ರೋಹಿಂಗ್ಯಾ ನಿರಾಶ್ರಿತರ ಬಿಕ್ಕಟ್ಟು, ಹಾಂಗ್ ಕಾಂಗ್ ಪ್ರತಿಭಟನೆಗಳು, ನೇಪಾಳ ಭೂಕಂಪಗಳು, ಉತ್ತರ ಕೊರಿಯಾದಲ್ಲಿ ನಡೆದ ಕ್ರೀಡಾಕೂಟಗಳ ವರದಿಗಳ ಸಹಿತ ಏಷ್ಯಾ, ಮಧ್ಯಪ್ರಾಚ್ಯ ಮತ್ತು ಯುರೋಪಿನ ವರದಿಗಳನ್ನು ಮಾಡಿದ್ದರು.
ಖ್ಯಾತ ಫೋಟೋ ಜರ್ನಲಿಸ್ಟ್ ಆಗಿದ್ದ ದ್ಯಾನಿಶ್ ನಿಧನಕ್ಕೆ ವಿಶ್ವಸಂಸ್ಥೆ ಮತ್ತು ಅಮೆರಿಕಾದ ಜೊ ಬಿಡೆನ್ ಆಡಳಿತ ಸಹಿತ ವಿಶ್ವದಾದ್ಯಂತ ಹಲವಾರು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದರು. ಆದರೆ ಭಾರತ ಸರ್ಕಾರ ಮತ್ತು ಪ್ರಧಾನಿ ಮೋದಿ ಸಂತಾಪ ವ್ಯಕ್ತಪಡಿಸಿರಲಿಲ್ಲ.
ಕಳೆದ ವರ್ಷ ದೇಶದಲ್ಲಿ ಕೊರೊನಾ ಪತ್ತೆಯಾದಾಗ, ಯಾವುದೆ ಪೂರ್ವ ತಯಾರಿ ಇಲ್ಲದೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಜಾರಿಗೆ ತಂದಿದ್ದ ಅವೈಜ್ಞಾನಿಕ ಲಾಕ್ಡೌನ್ನಲ್ಲಿ ವಲಸೆ ಕಾರ್ಮಿಕರು ಪಟ್ಟ ಬವಣೆಗೆಗಳು, ಕೊರೊನಾ ಎರಡನೆ ಅಲೆಯ ಸಮಯದಲ್ಲಿ ದೇಶದ ಸ್ಮಶಾನದಲ್ಲಿನ ಚಿತ್ರಣಗಳನ್ನು ಅವರು ಸಮರ್ಪಕವಾಗಿ ಸೆರೆ ಹಿಡಿದು ಜನರ ಮುಂದೆ ಇಟ್ಟಿದ್ದರು. ಅಷ್ಟೇ ಅಲ್ಲದೆ CAA-NRC-NPR ವಿರೋಧಿ ಹೋರಾಟದ ಸಮಯದಲ್ಲಿ ನಡೆದ ಘಟನೆಗಳು ಹಾಗೂ ದೆಹಲಿ ಗಲಭೆಯ ಕ್ರೂರ ಚಿತ್ರಗಳನ್ನು ಅವರು ಸೆರೆ ಹಿಡಿದಿದ್ದರು.
ಇದನ್ನೂ ಓದಿ: ಅಫ್ಘಾನ್ನಲ್ಲಿ ಹತರಾದ ಖ್ಯಾತ ಫೋಟೊ ಜರ್ನಲಿಸ್ಟ್ ದಾನಿಶ್ ಕ್ಲಿಕ್ಕಿಸಿದ ಕೆಲವು ಫೋಟೊಗಳು!