ಗೋವಿನ ಸೆಗಣಿ, ಮೂತ್ರ ಕೊರೊನಾಗೆ ಮದ್ದಲ್ಲ ಎಂದ ಹೋರಾಟಗಾರನ ವಿರುದ್ದ NSA ಅಡಿ ದಾಖಲಿಸಿದ್ದ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಬಂಧಿತ ಎರೆಂಡ್ರೊ ಲೈಚೋಂಬಮ್ರವರನ್ನು ಸಂಜೆಯೊಳಗೆ ಬಿಡುಗಡೆ ಮಾಡಬೇಕೆಂದು ಆದೇಶಿಸಿದೆ.
ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠವು, “ಅವರ ನಿರಂತರ ಬಂಧನವು ಅವರ ಜೀವನ ಮತ್ತು ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ. ಹಾಗಾಗಿ ಅವರನ್ನು ಇಂದು ಸಂಜೆ 5 ಗಂಟೆಯೊಳಗೆ ಬಿಡುಗಡೆಗೊಳಿಸಬೇಕು” ಎಂದಿದೆ.
ಮೇ ಎರಡನೇ ವಾರದಲ್ಲಿ ಮಣಿಪುರದ ಬಿಜೆಪಿ ಮುಖ್ಯಸ್ಥ ಎಸ್.ಟಿಕೇಂದ್ರ ಸಿಂಗ್ ಕೊರೊನಾದಿಂದ ನಿಧನರಾಗಿದ್ದರು. ಅವರ ನಿಧನಕ್ಕೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಪಹಾಸ್ಯ ಮಾಡಿದ್ದಾರೆ ಎಂದು ಆರೋಪಿಸಿ ಪತ್ರಕರ್ತ ಕಿಶೋರ್ಚಂದ್ರ ವಾಂಗ್ಖೇಮ್ ಮತ್ತು ಸಾಮಾಜಿಕ ಹೋರಾಟಗಾರ ಎರೆಂಡ್ರೊ ಲೈಚೋಂಬಮ್ ವಿರುದ್ಧ ಮಣಿಪುರ ಪೊಲೀಸರು ರಾಷ್ಟ್ರೀಯ ಭದ್ರತಾ ಕಾಯ್ದೆ(NSA) ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಿದ್ದರು.
ಆರಂಭದಲ್ಲಿ ಅವರ ಮೇಲೆ ಐಪಿಸಿಯ ಸೆಕ್ಷನ್ 153-ಎ (ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) / 505 (ಬಿ) (2) (ಪ್ರಚೋದನಾಕಾರಿ ಹೇಳಿಕೆ ನೀಡುವುದು) ಅಡಿಯಲ್ಲಿ ಅವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು. ಅವರು ಸ್ಥಳೀಯ ನ್ಯಾಯಾಲಯದಲ್ಲಿ ಜಾಮೀನು ಪಡೆದ ನಂತರ (NSA) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಮಣಿಪುರ ಬಿಜೆಪಿ ಅಧ್ಯಕ್ಷ ಸೈಖೋಮ್ ತಿಕೇಂದ್ರ ಸಿಂಗ್ ಕೋವಿಡ್ನಿಂದ ನಿಧನರಾದಾಗ “ಹಸುವಿನ ಸೆಗಣಿ, ಹಸುವಿನ ಗಂಜಲ ಕೆಲಸ ಮಾಡುವುದಿಲ್ಲ. ಆಧಾರವಿಲ್ಲದ ವಾದಗಳು. ನಾನು ನಾಳೆ ಮೀನು ತಿನ್ನುತ್ತೇನೆ” ಎಂದು ಫೇಸ್ಬುಕ್ನಲ್ಲಿ ವಾಂಗ್ಖೆಮ್ ಬರೆದಿದ್ದರು ಎನ್ನಲಾಗಿದೆ. ಅದೇ ರೀತಿ ಎರೆಂಡ್ರೊ ಲೈಚೋಂಬಮ್ ಕೂಡ “ಹಸುವಿನ ಸೆಗಣಿ, ಹಸುವಿನ ಗಂಜಲದಿಂದ ಕೊರೊನಾ ವಾಸಿಯಾಗುವುದಿಲ್ಲ. ವಿಜ್ಞಾನ ಮತ್ತು ಸಾಮಾನ್ಯ ಜ್ಞಾನದಿಂದ ವಾಸಿಯಾಗುತ್ತದೆ ಪ್ರೊಫೆಸರ್ಜಿ, RIP” ಎಂದು ಬರೆದಿದ್ದರು.
ಸರ್ಕಾರವನ್ನು ಟೀಕಿಸಿದ್ದಕ್ಕಾಗಿ ವಾಂಗ್ಖೇಮ್ ಮತ್ತು ಲೈಚೋಂಬಮ್ ಅವರನ್ನು ದೇಶದ್ರೋಹದ ಆರೋಪದ ಮೇಲೆ ಈ ಹಿಂದೆ ಕೂಡಾ ಎರಡು ಬಾರಿ ಬಂಧಿಸಲಾಗಿತ್ತು.
ಇದನ್ನೂ ಓದಿ; ಗೋವಿನ ಸೆಗಣಿ, ಮೂತ್ರ ಕೊರೊನಾಗೆ ಮದ್ದಲ್ಲ ಎಂದ ಪತ್ರಕರ್ತರ ವಿರುದ್ದ NSA ಅಡಿ ಪ್ರಕರಣ ದಾಖಲು!