Homeಕರ್ನಾಟಕಅಕ್ಕಯ್‌‌ ಕಥನಕ್ಕೆ ಕಂಬನಿ ಮಿಡಿದ ಪ್ರೇಕ್ಷಕರು; ಕಲಾವಿದೆಗೆ ಚಪ್ಪಾಳೆಯ ಮಹಾಪೂರ

ಅಕ್ಕಯ್‌‌ ಕಥನಕ್ಕೆ ಕಂಬನಿ ಮಿಡಿದ ಪ್ರೇಕ್ಷಕರು; ಕಲಾವಿದೆಗೆ ಚಪ್ಪಾಳೆಯ ಮಹಾಪೂರ

- Advertisement -
- Advertisement -

ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ದಿಟ್ಟದನಿ ಅಕ್ಕಯ್‌ ಪದ್ಮಶಾಲಿಯವರ ಜೀವನ ಕಥೆ ಆಧಾರಿತ ‘ಅಕ್ಕಯ್‌’ ನಾಟಕ ನಾಗರಿಕ ಸಮಾಜಕ್ಕೆ ಹಲವು ಪ್ರಶ್ನೆಗಳನ್ನು ಎಸೆಯಿತು. ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಭಾನುವಾರ ‘ಅಕ್ಕಯ್‌’ ಏಕವ್ಯಕ್ತಿ ನಾಟಕ ಪ್ರದರ್ಶನಗೊಂಡು, ಕಿಕ್ಕಿರಿದು ತುಂಬಿದ್ದ ಇಡೀ ಸಭಾಂಗಣ ಹಲವು ಅನುಭವಗಳಿಗೆ ಸಾಕ್ಷಿಯಾಯಿತು.

ಅಕ್ಕಯ್‌ ಪದ್ಮಶಾಲಿಯವರ ಜೀವನ ಕಥನವನ್ನು ರಂಗದ ಮೇಲೆ ನೋಡಿ ಪ್ರೇಕ್ಷಕರು ಕಂಬನಿ ಮಿಡಿದರು. ಅಕ್ಕಯ್‌ ಅವರು ತಮ್ಮ ಜೀವನದುದ್ದಕ್ಕೂ ಕಂಡ ನೋವಿನ ಘಟನೆಗಳು ರಂಗದ ಮೇಲೆ ಎಳೆಎಳೆಯಾಗಿ ತೆರೆದುಕೊಂಡವು. ನಾಗರಿಕ ಸಮಾಜದೊಳಗಿನ ಕ್ರೌರ್ಯ ಮನಸ್ಸುಗಳನ್ನು ದುಃಖದ ಕಡಲಿಗೆ ದೂಡಿತು. ಅಕ್ಕಯ್‌‌ ಪಾತ್ರವಾಗಿ ಅಭಿನಯಿಸಿದ ನಯನಾ ಸೂಡ ಅವರ ಅಭಿನಯಕ್ಕೆ ಪ್ರೇಕ್ಷಕರು ಭರಪೂರ ಮೆಚ್ಚುಗೆ ಸೂಚಿಸಿದರು. ನಾಟಕ ಮುಗಿದ ಕೆಲವು ನಿಮಿಷಗಳ ಕಾಲ ಇಡೀ ಸಭಾಂಗಣ ಕರತಾಡನ ಮಾಡುತ್ತಲೇ ಇತ್ತು.

ಈ ನಾಟಕ ನಮ್ಮನ್ನು ಮತ್ತೊಂದು ಜಗತ್ತಿಗೆ ಕರೆದುಕೊಂಡು ಹೋಗಿ, ನಾವು ಮಾಡುತ್ತಿರುವ ಅಸಮಾನತೆ, ಅನ್ಯಾಯಗಳನ್ನು ಬೊಟ್ಟು ಮಾಡಿ ತೋರಿಸಿತು. ಇದು ಅಕ್ಕಯ್‌‌ ಒಬ್ಬರ ಜೀವನ ಕಥೆಯಷ್ಟೇ ಅಲ್ಲ. ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಲಕ್ಷಾಂತರ ಜಗದೀಶರ ಕಥೆ (ಜಗದೀಶ ಎಂಬುದು ಅಕ್ಕಯ್‌ ಅವರ ಮೊದಲ ಹೆಸರು).

ಸಿಗ್ನಲ್‌‌ಗಳಲ್ಲಿ, ರಸ್ತೆ ಬದಿಯಲ್ಲಿ, ಸಾರ್ವಜನಿಕ ಸಾರಿಗೆಗಳಲ್ಲಿ ಅವರನ್ನು ಕಂಡು ಕಣ್ಣು ತಪ್ಪಿಸಿ ಹೋಗುವುದನ್ನು ಬಿಟ್ಟು ಅವರು ನಮ್ಮವರೇ ಎಂಬ ಸತ್ಯ ಅರ್ಥವಾದರೂ ಸಾಕು, ಅವರು ಭಿಕ್ಷೆ ಬೇಡಲು, ಲೈಂಗಿಕ ಕಾರ್ಯಕರ್ತೆಯರಾಗಲು ನಮ್ಮ ಪಾಲು ಇದೆ ಎಂಬ ಸತ್ಯ ಅರಿವಾಗುತ್ತದೆ ಎಂಬ ಸಂದೇಶವನ್ನು ‘ಅಕ್ಕಯ್‌‌’ ನಾಟಕ ಸಾರಿತು.

‘ಅಕ್ಕಯ್‌’ ನಾಟಕದ ಒಂದು ದೃಶ್ಯ (ಚಿತ್ರ: ತಾಯಿ ಲೋಕೇಶ್‌)

ಹೆಣ್ಣು ಅಲ್ಲದ, ಗಂಡೂ ಅಲ್ಲದ ಜೀವವನ್ನು ಈ ಸಾಮಾಜಿಕ ವ್ಯವಸ್ಥೆ ವಿಚಿತ್ರವಾಗಿ ನೋಡುವ, ರಣ ಹದ್ದಿನಂತೆ ಕುಕ್ಕಿ ತಿನ್ನುವ ಹಲವು ಪ್ರಸಂಗಗಳು ಭೀಭತ್ಸವಾಗಿವೆ. ಯಾವ ಸಮಾಜದಲ್ಲಿ ನಾವು ಬದುಕುತ್ತಿದ್ದೇವೆ ಎಂಬ ಪ್ರಶ್ನೆಗಳನ್ನು ಅಕ್ಕಯ್‌ ಜೀವನ ಕಥೆ ಹುಟ್ಟು ಹಾಕುತ್ತವೆ. ಮೂಲತಃ ಪ್ರಶ್ನಿಸುವ ಮನೋಭಾವದರಾದ ಅಕ್ಕಯ್‌, ಅಲ್ಪಸಂಖ್ಯಾತ ಸಮುದಾಯಗಳಲ್ಲಿನ ಮೌಢ್ಯ, ಅಸಮಾನ ವ್ಯವಸ್ಥೆಗಳನ್ನೂ ನಿಕಷಕ್ಕೊಡುತ್ತಾರೆ.

ಇಷ್ಟೆಲ್ಲ ನೋವುಗಳ ನಡುವೆ ಪೀನಿಕ್ಸ್‌ನಂತೆ ಎದ್ದು ಬರುವ ಅಕ್ಕಯ್‌, ಎಲ್ಲ ನೊಂದ ಜೀವಗಳಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದಾರೆ. “ನಮಗೆ ಕರುಣೆ ಬೇಡ, ಸಮಾನತೆ ಬೇಕು. ನಾವು ಸಮಾಜದಿಂದ ಹೊರಗಿನವರಲ್ಲ; ನಾವು ಕೂಡ ಸಮಾಜ. ಲಿಂಗತ್ವ ಅಲ್ಪಸಂಖ್ಯಾತರು ಕುಟುಂಬದಿಂದ ಹೊರಗಿನವರಲ್ಲ; ನಾವೂ ಕೂಡ ಕುಟುಂಬ. ಎಲ್ಲ ಸಂಕೋಲೆಗಳಿಂದ ನಮಗೆ ಬಿಡುಗಡೆ ಬೇಕು” ಎಂಬ ಸಂದೇಶವನ್ನು ಸಾರುವ ಅಕ್ಕಯ್‌ ಜೀವನ ಕಥನ ಈ ಬಿಡುಗಡೆಯ ಹಾದಿಗೆ ಅಂಬೇಡ್ಕರ್‌ ಮಾರ್ಗವನ್ನು ಸೂಚ್ಯವಾಗಿ ಹೇಳುತ್ತ ಮುಕ್ತಾಯವಾಗುತ್ತದೆ.

ಬೇಲೂರು ರಘುನಂದನ್ ಅವರು ‘ಅಕ್ಕಯ್‌’ ಜೀವನವನ್ನು ಮನೋಜ್ಞವಾಗಿ ರಂಗರೂಪಕ್ಕೆ ತಂದು ನಿರ್ದೇಶಿಸಿದ್ದಾರೆ. ರಾಜ್‌ಗುರು ಹೊಸಕೋಟೆ ಹೊಸ ಅವರ ಸಂಗೀತ ನಾಟಕದ ಶಕ್ತಿಯನ್ನು ಹಿಮ್ಮಡಿಗೊಳಿಸಿದೆ. ಜಯರಾಜ್‌ ಹುಸ್ಕೂರು ಅವರ ಪ್ರಸಾದನ, ಎಂ.ಜಿ.ನವೀನ್‌ ಅವರ ಬೆಳಕು ನಾಟಕದ ಆಶಯವನ್ನು ದಾಟಿಸುವಲ್ಲಿ ಯಶಸ್ವಿಯಾಯಿತು.

‘ಅಕ್ಕಯ್‌’ ನಾಟಕದ ಒಂದು ದೃಶ್ಯ (ಚಿತ್ರ: ತಾಯಿ ಲೋಕೇಶ್‌)
ನಾಟಕ ಪ್ರದರ್ಶನದ ಬಳಿಕ ಅಕ್ಕಯ್ ಪದ್ಮಶಾಲಿಯವರು ಕಲಾವಿದೆ ನಯನಾ ಸೂಡ ಅವರನ್ನು ಅಪ್ಪಿ ಕಂಬನಿ ಮಿಡಿದ ಭಾವುಕ ಕ್ಷಣ (ಚಿತ್ರ: ತಾಯಿ ಲೋಕೇಶ್‌)

***

ಟ್ರಾನ್ಸ್‌ಜೆಂಡರ್‌ ಸಮುದಾಯವನ್ನು ಅಪಹಾಸ್ಯ ಮಾಡುವ ‘ಮಜಾಭಾರತ ಷೋ’: ಹೋರಾಟಗಾರ್ತಿ ಸೌಮ್ಯಾ

ಖಾಸಗಿ ಮನರಂಜನಾ ಮಾಧ್ಯಮವೊಂದರ ‘ಮಜಾಭಾರತ’ ಕಾಮಿಡಿ ಷೋನಲ್ಲಿ ಟ್ರಾನ್ಸ್‌ಜೆಂಡರ್‌ ಸಮುದಾಯವನ್ನು ಅಪಹಾಸ್ಯ ಮಾಡಲಾಗಿದೆ ಎಂದು ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ನಾಯಕಿ ಸೌಮ್ಯಾ ಬೇಸರ ವ್ಯಕ್ತಪಡಿಸಿದರು.

ಕಾಜಾಣ ಮತ್ತು ರಂಗಪಯಣ ಸಹಯೋಗದಲ್ಲಿ ಭಾನುವಾರ ಬೆಂಗಳೂರಿನ ರವೀಂದ್ರ ಕಲಾಕೇತ್ರದಲ್ಲಿ ಆಯೋಜಿಸಲಾಗಿದ್ದ ಸಾಮಾಜಿಕ ಹೋರಾಟಗಾರ್ತಿ ಅಕ್ಕಯ್‌ ಪದ್ಮಶಾಲಿಯವರ ಜೀವನ ಆಧಾರಿತ, ಬೇಲೂರು ರಘುನಂದನ್‌ ನಿರ್ದೇಶನದ ‘ಅಕ್ಕಯ್‌’ ಏಕವ್ಯಕ್ತಿ ನಾಟಕ ಪ್ರದರ್ಶನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಅಕ್ಕಯ್‌’ ನಾಟಕ ಪ್ರದರ್ಶನದ ಬಳಿಕ ನಿರ್ದೇಶಕ ಬೇಲೂರು ರಘುನಂದನ ಮಾತನಾಡಿದರು (ಚಿತ್ರ: ತಾಯಿ ಲೋಕೇಶ್‌)

“ಮಜಾಭಾರತ ಷೋನಲ್ಲಿ ಟ್ರಾನ್ಸ್‌ಜೆಂಡರ್‌ಗಳ ವೇಷಧರಿಸಿ ಅಭಿನಯಿಸುತ್ತಾರೆ. ಒಳ್ಳೆಯ ಟಿಆರ್‌ಪಿ ಬಂದಿರುವ ಷೋ ಅದು. ಆದರೆ ಪ್ರಾಮಾಣಿಕವಾಗಿ ನೋಡಿದರೆ ನಮ್ಮ ಸಮುದಾಯದ ಕುರಿತು ಎಷ್ಟು ತಾರತಮ್ಯ ಮಾಡುತ್ತಾರೆಂಬುದು ತಿಳಿಯುತ್ತದೆ; ನಮ್ಮ ಸಮುದಾಯವನ್ನು ಎಷ್ಟು ತಾತ್ಸಾರದಿಂದ ಕಾಣುತ್ತಾರೆ ಎಂಬುದು ಕಾಣುತ್ತದೆ” ಎಂದು ವಿವರಿಸಿದರು.

“ಟ್ರಾನ್ಸ್‌ಜೆಂಡರ್‌ ಸಮುದಾಯದ ಕುರಿತು ಅಭಿಮಾನ, ಗೌರವವಿಲ್ಲ. ಈ ಸಮುದಾಯವನ್ನು ಮೂಲೆಗುಂಪು ಮಾಡಿದ್ದೇವೆ; ಇಂತಹ ಸಮುದಾಯವನ್ನು ಸಮಾಜವನ್ನು ಮುಖ್ಯವಾಹಿನಿಗೆ ತರಬೇಕೆಂಬ ಭಾವನೆ ಯಾರಿಗೂ ಇಲ್ಲ. ಎಲ್ಲರಿಗೂ ಮಜಾ ತಗೆದುಕೊಳ್ಳಬೇಕು, ತಮಾಷೆ ಮಾಡಬೇಕು, ಗೇಲಿ ಮಾಡಬೇಕೆಂಬ ಮನಸ್ಥಿತಿ ಇದೆ” ಎಂದು ಬೇಸರ ವ್ಯಕ್ತಪಡಿಸಿದರು.

“ಮಜಾ ಭಾರತ ತೀರ್ಪುಗಾರರು ಕೂಡ ತಲೆ ಬಗ್ಗಿಸಿಕೊಂಡು ನಗುತ್ತಾರೆ. ಅದೇ ರೀತಿಯಲ್ಲಿ ಇದನ್ನು ನೋಡುವ ಜನರೂ ನಗುತ್ತಾರೆ. ಎಷ್ಟು ಚೆನ್ನಾಗಿ ಅಭಿನಯಿಸುತ್ತಾನೆ ನೋಡು, ನೋಡಲಿಕ್ಕೆ ಥೇಟ್ ಹುಡುಗಿ ಥರನೇ ಇದ್ದಾನೆ ಎಂದು ಬಣ್ಣಿಸುತ್ತಾರೆ. ಅವನು ಎಲ್ಲಿಯಾದರೂ ಸಿಕ್ಕರೆ ಸೆಲ್ಫಿ ತೆಗೆದುಕೊಳ್ಳುತ್ತಾರೆ. ಒಳ್ಳೆಯ ಆಕ್ಟಿಂಗ್ ಮಾಡ್ತೀರಿ. ನಿಮ್ಮ ಅಭಿಮಾನಿ ನಾವು ಅಂತಾರೆ.  ಆದರೆ ತಮ್ಮ ಕುಟುಂಬದಲ್ಲಿನ ಒಂದು ಮಗು ಟ್ರಾನ್ಸ್‌ಜೆಂಡರ್‌ ಆಗಿದ್ದರೆ ಇವರು ಒಪ್ಪಿಕೊಳ್ಳುತ್ತಾರಾ?” ಎಂದು ಪ್ರಶ್ನಿಸಿದರು.

ಇದನ್ನೂ ಓದಿರಿ: ಅಂಬೇಡ್ಕರ್‌‌ ವಿಚಾರಧಾರೆಯೇ ಪ್ರೇರಣೆ: ಮೈಸೂರು ವಿವಿಯಲ್ಲಿ ಪಿಎಚ್‌.ಡಿ ಮಾಡುತ್ತಿರುವ ಟ್ರಾನ್ಸ್‌ಜೆಂಡರ್‌ ಮಹಿಳೆಯ ಮನದಾಳ

“ಸಿನಿಮಾಗಳಲ್ಲೂ ನೋಡಿರುತ್ತೀರಿ. ನಮ್ಮ ಸಮುದಾಯವನ್ನು ಹಾಸ್ಯಕ್ಕಲ್ಲ, ಅಪಹಾಸ್ಯಕ್ಕೆ ಹೆಚ್ಚು ಬಳಸುತ್ತಾರೆ. ಒಂದು ಮೆಸೇಜ್‌‌ ಸಮಾಜಕ್ಕೆ ಕೊಡೋಣ ಎಂಬ ಕಾಳಜಿ ಯಾರಿಗೂ ಇಲ್ಲ. ಆದರೆ ನಿರ್ದೇಶಕ ಬೇಲೂರು ರಘುನಂದನ್‌ ಅವರು ಎಲ್ಲರ ರೀತಿಯಲ್ಲಿ ನಮ್ಮನ್ನು ನೋಡಿ ಒಂದು ಸ್ಮೈಲ್‌ ಮಾಡಿ ಯಾಕೆ ಸುಮ್ಮನಾಗಲಿಲ್ಲ? ಏಕೆ ಈ ಕಥೆಯನ್ನು ಆಯ್ಕೆ ಮಾಡಿಕೊಂಡು ನಾಟಕ ಮಾಡುತ್ತಿದ್ದೀರಿ ಎಂದು ಬೇಲೂರು ರಘುನಂದನ್‌ ಅವರನ್ನು ಎಷ್ಟೋ ಜನ ಕೇಳಿರುತ್ತಾರೆ” ಎಂದು ಅಭಿಪ್ರಾಯಪಟ್ಟರು.

ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಹೋರಾಟಗಾರ್ತಿ ಕೋಲ್ಕತ್ತದ ಅನಿಂದ್ಯಾ ಹಾಜ್ರ ಮಾತನಾಡಿ, “ಸಮಾಜದಲ್ಲಿನ ವ್ಯವಸ್ಥೆ ಬದಲಾಗುವವರೆಗೂ ಲೈಂಗಿಕ ಅಲ್ಪಸಂಖ್ಯಾತರು ಹೋರಾಟ ನಡೆಸಬೇಕು. ಹೋರಾಟದ ಮೂಲಕವೇ ಪ್ರತಿರೋಧ ತೋರಬೇಕು. ಲೈಂಗಿಕ ಅಲ್ಪಸಂಖ್ಯಾತರಿಗೆ ಅನುಕಂಪ ಬೇಕಾಗಿಲ್ಲ. ಘನತೆಯಿಂದ ಬದುಕುವ  ಅವಕಾಶ ಕಲ್ಪಿಸಬೇಕು. ಸಮಾಜದ ಮುಖ್ಯವಾಹಿನಿಗೆ ತರಬೇಕು” ಎಂದು ಹೇಳಿದರು.

`ಅಕ್ಕಯ್‌’ ನಾಟಕದ ಒಂದು ದೃಶ್ಯ (ಚಿತ್ರ: ತಾಯಿ ಲೋಕೇಶ್‌)

“ಲೈಂಗಿಕ ಅಲ್ಪಸಂಖ್ಯಾತರ ಬದುಕು ಮತ್ತು ಸಾವಿಗೂ ಮಾನ್ಯತೆ ಇಲ್ಲದಂತಾಗಿದೆ. ಆದರೆ ಇದನ್ನು ಬದಲಾಯಿಸಲು ಶ್ರಮಿಸಬೇಕಿದೆ. ನಮ್ಮ ಅಸ್ತಿತ್ವ ಸ್ಥಾಪನೆಗೆ ರಾಜಕೀಯ ಕ್ಷೇತ್ರವೂ ಪ್ರಮುಖ ವೇದಿಕೆಯಾಗಿದೆ. ಲೈಂಗಿಕ ಅಲ್ಪಸಂಖ್ಯಾತರನ್ನು ಒಳಗೊಳ್ಳುವಂತೆ ಸಮಾಜದ ಮನಸ್ಥಿತಿ ಬದಲಿಸಬೇಕು” ಎಂದರು.

ನಾಟಕದ ನಿರ್ದೇಶಕ ಬೇಲೂರು ರಘುನಂದನ್ ಮಾತನಾಡಿ, “ಅಕ್ಕಯ್‌‌ ಅವರ ಜೀವನದ ಕುರಿತು ಓದಿದರೆ ನಾವು ಅತ್ತು ಬಿಡುತ್ತೇವೆ. ನಮ್ಮಲ್ಲಿ ಕಣ್ಣೀರು ಬರದಿದ್ದರೆ ನಾವು ಮನುಷ್ಯರಾಗಿರುವುದಿಲ್ಲ” ಎಂದು ಅಭಿಪ್ರಾಯಪಟ್ಟರು.

ಪತ್ರಕರ್ತ ರವೀಂದ್ರ ಭಟ್ಟ ಅವರು ಮಾತನಾಡಿ, “ಕುರುಡುನೊಬ್ಬನ ಕಷ್ಟಕ್ಕೆ ನೆರವಾಗದಿದ್ದರೆ ಸಮಾಜ ಕುರುಡಾಗಿರುತ್ತದೆಯೇ ಹೊರತು, ಹುಟ್ಟಿನಿಂದ ಕುರುಡನಾದವನು ನಿಜವಾದ ಕುರುಡನಲ್ಲ. ಹಾಗೆಯೇ ಲೈಂಗಿಕ ಅಲ್ಪಸಂಖ್ಯಾತರನ್ನು ಒಳಗೊಳ್ಳದ ಸಮಾಜ ನಾಗರಿಕವಾಗಿರುವುದಿಲ್ಲ” ಎಂದು ತಿಳಿಸಿದರು.

ಹೋರಾಟಗಾರ್ತಿ ಅಕ್ಕಯ್‌‌ ಪದ್ಮಶಾಲಿ, ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯದ ಕುಲಸಚಿವ (ಮೌಲ್ಯಮಾಪನ) ಡಾ.ಡಿ.ಡೊಮಿನಿಕ್‌, ಬೇಲೂರು ತಹಸೀಲ್ದಾರ್‌ ಉಲಿವಾಲ ಮೋಹನ್‌ಕುಮಾರ್‌‌, ಅಕ್ಕಯ್‌ ಪದ್ಮಶಾಲಿ ಅವರ ಸಹೋದರ ಪ್ರದೀಪ್‌ ವೇದಿಕೆ ಕಾರ್ಯಕ್ರಮದಲ್ಲಿ ಹಾಜರಿದ್ದರು.


ಇದನ್ನೂ ಓದಿರಿ: ’ಕರುಣೆ ಬೇಡ, ಘನತೆಯಿಂದ ಬದುಕುವ ಹಕ್ಕು ಬೇಕು’: ರಂಗದ ಮೇಲೆ ಇಂದು ’ಅಕ್ಕಯ್’ ಕಥನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...