ಯೋಗಗುರು ಬಾಬಾ ರಾಮ್ದೇವ್ ಅಲೋಪತಿ ಔಷಧ ಸಂಬಂಧಿಸಿದಂತೆ ನೀಡಿದ್ದ ವಿವಾದಾತ್ಮಕ ಹೇಳಿಕೆಯನ್ನು ಭಾನುವಾರ ರಾತ್ರಿ ಹಿಂಪಡೆದಿದ್ದಾರೆ. ‘ಕೊರೋನಾ ಸಾಂಕ್ರಾಮಿಕ ಸಮಯದಲ್ಲಿ ಅಲೋಪಥಿಕ್ ಔಷಧಿಗಳಿಂದಾಗಿ ಲಕ್ಷಾಂತರ ಜನರು ಸತ್ತಿದ್ದಾರೆ’ ಎಂದು ಅವರು ಹೇಳಿರುವ ವಿಡಿಯೊವೊಂದು ವೈರಲ್ ಆಗಿದ್ದು, ದೇಶದಾದ್ಯತಂತ ಭಾರಿ ಆಕ್ರೋಶ ಉಂಟುಮಾಡಿತ್ತು.
ಈ ಹೇಳಿಕೆ ಸಂಬಂಧಿಸಿದಂತೆ ಭಾರತೀಯ ವೈದ್ಯಕೀಯ ಸಂಸ್ಥೆ ಕಟುವಾಗಿ ಟೀಕಿಸಿತ್ತು ಮತ್ತು ರಾಮದೇವ್ ಅವರಿಗೆ ನೋಟಿಸ್ ನೀಡಿತ್ತು. ಸಾಂಕ್ರಾಮಿಕ ಕಾಯ್ದೆ ಅಡಿ ಅವರ ಮೇಲೆ ಪ್ರಕರಣ ದಾಖಲಿಸಲು ಐಎಂಎ ಸರ್ಕಾರಕ್ಕೆ ಮನವಿ ಕೂಡಾ ಮಾಡಿತ್ತು. ಅಲ್ಲದೆ ದೆಹಲಿ ವೈದ್ಯಕೀಯ ಸಂಘವು ದೆಹಲಿಯ ದರಿಯಾಗಂಜ್ ಪೊಲೀಸ್ ಠಾಣೆಯಲ್ಲಿ ರಾಮ್ದೇವ್ ಅವರ ವಿರುದ್ದ ಪ್ರಕರಣವನ್ನೂ ದಾಖಲಿಸಿತ್ತು.
ದೇಶದಾದ್ಯಂತ ರಾಮ್ದೇವ್ ವಿರುದ್ದ ಆಕ್ರೋಶ ಹೆಚ್ಚುತ್ತಿದ್ದಂತೆ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಹೇಳಿಕೆಯನ್ನು ಹಿಂಪಡೆಯುವಂತೆ ಭಾನುವಾರ ಪತ್ರ ಬರೆದಿದ್ದರು. ಅವರು ಪತ್ರದಲ್ಲಿ, “ಅಲೋಪತಿ ಔಷಧಿಗಳ ಬಗ್ಗೆ ನಿಮ್ಮ ಹೇಳಿಕೆಯಿಂದ ದೇಶದ ಜನರು ತುಂಬಾ ನೊಂದಿದ್ದಾರೆ. ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರು ದೇಶದ ಜನರಿಗೆ ದೇವರಿದ್ದಂತೆ. ಅವರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೋರಾಡುತ್ತಿದ್ದಾರೆ.
ಇದನ್ನೂ ಓದಿ: ಕೊರೊನಾಗೆ ಪತಂಜಲಿ ಔಷಧಿ: ಜಾಹೀರಾತು ನಿಲ್ಲಿಸುವಂತೆ ಬಾಬಾ ರಾಮ್ದೇವ್ಗೆ ತಾಕೀತು
ನೀವು ಕೊರೊನಾ ಯೋಧರನ್ನಷ್ಟೇ ಅವಮಾನಿಸಿದ್ದಲ್ಲ, ದೇಶದ ಜನರ ಭಾವನೆಗಳನ್ನು ನೋಯಿಸಿದ್ದೀರಿ. ನಿಮ್ಮ ಸ್ಪಷ್ಟೀಕರಣ ಮಾತ್ರ ಸಾಕಾಗುವುದಿಲ್ಲ, ಈ ಬಗ್ಗೆ ನೀವು ಗಂಭೀರವಾಗಿ ಯೋಚಿಸಿ ನಿಮ್ಮ ಹೇಳಿಕೆಗಳನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳುತ್ತೀರಿ ಎಂದು ನಾನು ಭಾವಿಸುತ್ತೇನೆ” ಎಂದು ಹರ್ಷವರ್ಧನ್ ಪತ್ರದಲ್ಲಿ ಹೇಳಿದ್ದರು.
ಈ ಪತ್ರಕ್ಕೆ ಭಾನುವಾರ ರಾತ್ರಿ ಪ್ರತಿಕ್ರಿಯೆ ನೀಡಿರುವ ರಾಮ್ದೇವ್, “ಗೌರವಾನ್ವಿತ ಹರ್ಷವರ್ಧನ್ ಅವರೆ, ನಾನು ನಿಮ್ಮ ಪತ್ರವನ್ನು ಸ್ವೀಕರಿಸಿದ್ದೇನೆ. ಇದಕ್ಕೆ ಸಂಬಂಧಿಸಿದಂತೆ, ವೈದ್ಯಕೀಯ ಪದ್ಧತಿಗಳ ಹೋರಾಟದ ಈ ಸಂಪೂರ್ಣ ವಿವಾದಕ್ಕೆ ವಿಷಾದಿಸುತ್ತಾ ನನ್ನ ಹೇಳಿಕೆಯನ್ನು ಹಿಂತೆಗೆದುಕೊಳ್ಳುತ್ತೇನೆ” ಎಂದು ಪತ್ರವೊಂದನ್ನು ಕಳುಹಿಸಿದ್ದಾರೆ.
माननीय श्री @drharshvardhan जी आपका पत्र प्राप्त हुआ,
उसके संदर्भ में चिकित्सा पद्दतियों के संघर्ष के इस पूरे विवाद को खेदपूर्वक विराम देते हुए मैं अपना वक्तव्य वापिस लेता हूँ और यह पत्र आपको संप्रेषित कर रहा हूं- pic.twitter.com/jEAr59VtEe— स्वामी रामदेव (@yogrishiramdev) May 23, 2021
ಸಾಮಾಜಿಕ ಜಾಲತಾಣದಲ್ಲಿ ರಾಮ್ದೇವ್ ಅವರ ವಿವಾದಾತ್ಮಕ ವಿಡಿಯೊ ವ್ಯಾಪಕವಾಗಿ ಹಂಚಿಕೊಳ್ಳಲಾಗಿತ್ತು. ಅದರಲ್ಲಿ ಅವರು, “ಅಲೋಪತಿ ಔಷಧಿಗಳಿಂದಾಗಿ ಲಕ್ಷಾಂತರ ಜನರು ಸಾವನ್ನಪ್ಪಿದ್ದಾರೆ. ಈ ಸಂಖ್ಯೆಯು ಚಿಕಿತ್ಸೆ ಸಿಗದೆ ಅಥವಾ ಆಮ್ಲಜನಕದ ಕೊರೆತೆಯಿಂದ ಸಾವಿಗೀಡಾಗಿರುವ ಜನರಿಗಿಂತ ಹೆಚ್ಚು. ಅಲೋಪತಿಯು ಅವಿವೇಕಿ ಮತ್ತು ದಿವಾಳಿಯಾದ ವಿಜ್ಞಾನ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಅಲೋಪತಿ ವಿರುದ್ಧ ಅವಹೇಳನಕಾರಿ ಹೇಳಿಕೆ: ಬಾಬಾ ರಾಮದೇವ್ಗೆ ಲೀಗಲ್ ನೋಟಿಸ್ – ಬಂಧನಕ್ಕೆ ಒತ್ತಾಯ
ಅವರ ಸಂಸ್ಥೆಯಾದ ಪತಂಜಲಿಯು, “ಈ ವಿಡಿಯೋವನ್ನು ಎಡಿಟ್ ಮಾಡಲಾಗಿದೆ ಮತ್ತು ಹೇಳಿಕೆಯನ್ನು ಬೇರೆ ಸಂದರ್ಭದಿಂದ ಬೇರ್ಪಡಿಸಗಿದೆ. ರಾಮದೇವ್ ಅವರಿಗೆ ಆಧುನಿಕ ವಿಜ್ಞಾನದ ವೈದ್ಯರ ವಿರುದ್ಧ ಯಾವುದೇ ಕೆಟ್ಟ ಅಭಿಪ್ರಾಯವಿಲ್ಲ. ಈ ಘಟನೆಯು ಖಾಸಗಿ ಕಾರ್ಯಕಮವಾಗಿತ್ತು. ರಾಮದೇವ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸದಸ್ಯರು ಫಾರ್ವರ್ಡ್ ಮಾಡಿದ ವಾಟ್ಸಾಪ್ ಸಂದೇಶವನ್ನು ಓದುತ್ತಿದ್ದರು. ಅವರ ವಿರುದ್ಧದ ಆರೋಪ ಸುಳ್ಳು” ಎಂದು ಹೇಳಿತ್ತು.
ಆಡಳಿತಾರೂಢ ಬಿಜೆಪಿ ಸರ್ಕಾರದೊಂದಿಗೆ ನಿಕಟ ಸಂಬಂಧ ಹೊಂದಿರುವ ರಾಮದೇವ್ ಕೊರೊನಾ ಒಂದನೆ ಅಲೆಯ ಸಮಯದಲ್ಲೂ ವಿವಾದವನ್ನು ಎದುರಿಸಿದ್ದರು. ಅವರು ಆರೋಗ್ಯ ಸಚಿವ ಹರ್ಷ್ವರ್ಧನ್ ಮತ್ತು ಸಚಿವ ನಿತಿನ್ ಗಡ್ಕರಿಯ ಸಮ್ಮುಖದಲ್ಲಿ ‘ವಿಶ್ವ ಆರೋಗ್ಯ ಸಂಸ್ಥೆಯಿಂದ ಪ್ರಮಾಣೀಕೃತ ಔಷಧಿಗಳು’ ಎಂದು ಪತಂಜಲಿಯ ಔಷಧಿಗಳನ್ನು ಬಿಡುಗಡೆ ಮಾಡಿದ್ದರು.
ಅಲ್ಲದೆ, ಸ್ವತಃ ವೈದ್ಯರೂ ಆಗಿರುವ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅವರ ಸಮ್ಮುಖದಲ್ಲೇ ವೈದ್ಯರನ್ನು “ಕೊಲೆಗಾರರು” ಎಂದು ಕರೆದಿದ್ದರು ಎಂದು ಆರೋಪಿಸಲಾಗಿದೆ.
ಆದರೆ ವಿಶ್ವ ಆರೋಗ್ಯ ಸಂಸ್ಥೆಯು, “ಕೋವಿಡ್ ಚಿಕಿತ್ಸೆಗೆ ಯಾವುದೇ ಸಾಂಪ್ರದಾಯಿಕ ಔಷಧದ ಪರಿಣಾಮಕಾರಿತ್ವವನ್ನು ಪರಿಶೀಲಿಸಿಲ್ಲ ಅಥವಾ ಪ್ರಮಾಣೀಕರಿಸಿಲ್ಲ” ಎಂದು ಸ್ಪಷ್ಟೀಕರಣವನ್ನು ನೀಡಿತ್ತು.
ಇದನ್ನೂ ಓದಿ: ‘ಅಲೋಪತಿ ನಿಂದನೆಯಲ್ಲಿ ಸ್ಪಷ್ಟೀಕರಣವಷ್ಟೇ ಸಾಲದು’: ರಾಮದೇವ್ಗೆ ಆರೋಗ್ಯ ಸಚಿವ ಸೂಚನೆ


