ಅಲೋಪತಿ ಮತ್ತು ಆಧುನಿಕ ವೈದ್ಯಕೀಯ ಪದ್ಧತಿಗೆ “ಮಾನಹಾನಿ” ಮಾಡುವ ಆರೋಪಗಳ ಕುರಿತಂತೆ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಶನಿವಾರ ಯೋಗ ಗುರು ರಾಮದೇವ್ಗೆ ಲೀಗಲ್ ನೋಟಿಸ್ ಕಳುಹಿಸಿದೆ.
ವೀಡಿಯೊವೊಂದರಲ್ಲಿ ರಾಮದೇವ್, ಅಲೋಪತಿ ಒಂದು “ಅವಿವೇಕಿ ವಿಜ್ಞಾನ” ಮತ್ತು ‘ಔಷಧಿಗಳು ನಿಷ್ಪ್ರಯೋಜಕ’ ಎಂದು ಹೇಳಿದ್ದರು. ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಅನುಮೋದಿಸಿದ ರೆಮ್ಡೆಸಿವಿರ್, ಫೆವಿಫ್ಲೂ ಮತ್ತು ಇತರ ಔಷಧಿಗಳು ಕೋವಿಡ್ -19 ರೋಗಿಗಳಿಗೆ ಚಿಕಿತ್ಸೆ ನೀಡಲು ವಿಫಲವಾಗಿವೆ ಎಂದಿದ್ದರು. ಅಲ್ಲದೆ ಆಧುನಿಕ ವೈದ್ಯಕೀಯ ವೈದ್ಯರನ್ನು “ಕೊಲೆಗಾರರು” ಎಂದು ಅವರು ಆರೋಪಿಸಿದ್ದರು.
ಐಎಂಎ ಜೊತೆಗೆ, ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಏಮ್ಸ್) ನಿವಾಸಿ ವೈದ್ಯರ ಸಂಘಗಳು, ಸಫ್ದರ್ಜಂಗ್ ಆಸ್ಪತ್ರೆಯ ಆರ್ಡಿಎ ಮತ್ತು ಇತರ ವೈದ್ಯಕೀಯ ಸಂಸ್ಥೆಗಳು ರಾಮ್ದೇವ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷ್ ವರ್ಧನ್ರವರಿಗೆ ಒತ್ತಾಯಿಸಿವೆ.
ಲೀಗಲ್ ನೋಟಿಸ್ ನೀಡುತ್ತಿದ್ದಂತೆ ಸಮಜಾಯಿಷಿ ನೀಡಿರುವ ಪತಂಜಲಿ ಸಂಸ್ಥೆ, “ರಾಮದೇವ್ ಅವರು ಅಲೋಫಥಿ ಬಗ್ಗೆ ವಾಟ್ಸಾಪ್ನಲ್ಲಿ ಫಾರ್ವಾಡ್ ಆಗಿದ್ದ ಸಂದೇಶವನ್ನು ಓದುತ್ತಿದ್ದರಷ್ಟೇ. ಅವರಿಗೆ ಅಲೋಪಥಿ ಮತ್ತು ಆಧುನಿಕ ಔಷಧಗಳ ಬಗ್ಗೆ ಕೆಟ್ಟ ಅಭಿಪ್ರಾಯವಿಲ್ಲ. ಅಲೋಪಥಿ ಬಗ್ಗೆ ಅವರಿಗೆ ಗೌರವ ಇದೆ” ಎಂದು ಹೇಳಿದೆ.
ರಾಮದೇವ್ ಅವರು ಅಲೋಪತಿ ಮತ್ತು ವಿಜ್ಞಾನದ ಕುರಿತಂತೆ “ಅಶಿಕ್ಷಿತ” ಹೇಳಿಕೆಗಳನ್ನು ನೀಡುವ ಮೂಲಕ ಜನರನ್ನು ದಾರಿ ತಪ್ಪಿಸಿರುವುದರಿಂದ ಕೇಂದ್ರ ಆರೋಗ್ಯ ಸಚಿವಾಲಯವು ಕ್ರಮ ಕೈಗೊಳ್ಳಬೇಕು ಎಂದು ಈ ಹಿಂದೆ ಐಎಂಎ ತಿಳಿಸಿತ್ತು. ಸರ್ಕಾರದ ಯಾವುದೇ ಕ್ರಮ ಜರುಗಿಸದ ಕಾರಣ ಈಗ ಲೀಗಲ್ ಸಂಸ್ಥೆಯೊಂದರ ಮೂಲಕ ಲೀಗಲ್ ನೋಟಿಸ್ ನೀಡಿದೆ.
“ಅಲೋಪತಿ ಔಷಧಿಗಳನ್ನು ತೆಗೆದುಕೊಂಡ ನಂತರ ಲಕ್ಷಾಂತರ ರೋಗಿಗಳು ಸಾವನ್ನಪ್ಪಿದ್ದಾರೆ” ಎಂದು ಯೋಗ ಗುರು ಕೊರೊನಾ ನಿರ್ವಹಣೆಗೆ ಸೆಣಸುತ್ತಿರುವ ವೈದ್ಯ ಸಮೂಹವನ್ನು ಅವಮಾನಿಸಿದ್ದಾರೆ ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ. ರಾಮದೇವ್ ಅವರನ್ನು ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ವಿಚಾರಣೆ ನಡೆಸಬೇಕು, ರಾಮದೇವರ ಆಧಾರರಹಿತ ಹೇಳಿಕೆಗಳು ರೋಗಿಗಳಲ್ಲಿ ಗೊಂದಲ ಮತ್ತು ಆತಂಕಗಳನ್ನು ಮೂಡಿಸುತ್ತವೆ ಎಂದು ಐಎಂಎ ತಿಳಿಸಿದೆ.
ಅಲೋಪತಿ ಔಷಧಗಳ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿಸುವ ಮೂಲಕ ರಾಮದೇವ್ ತಮ್ಮ ಅನುಮೋದಿಸದ, ಯಾವುದೇ ಅಧಿಕೃತತೆ ಇಲ್ಲದ ಔಷಧಿಗಳನ್ನು ಮಾರಾಟ ಮಾಡುವ ವ್ಯಾಪಾರಿ ಬುದ್ಧಿ ಹೊಂದಿದ್ದಾರೆ. ಈ ಅನುಮೋದಿಸದ ಔಷಧಗಳು ಜನರನ್ನು ದಾರಿ ತಪ್ಪಿಸುತ್ತವೆ. ಹೀಗಾಗಿ ಸಾಂಕ್ರಾಮಿಕ ಕಾಯ್ದೆ ಅಡ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎನ್ನಲಾಗಿದೆ.
“ರಾಮದೇವ್ ಬಾಬಾ ಅವರ ಹೇಳಿಕೆಯನ್ನು ದ್ವೇಷದ ಭಾಷಣವೆಂದು ಪರಿಗಣಿಸಬೇಕು ಮತ್ತು ಸಾಂಕ್ರಾಮಿಕ ರೋಗಗಳ ಕಾಯ್ದೆ, 1987 ರ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಅವರ ಮೇಲೆ ಪ್ರಕರಣ ದಾಖಲಿಸಬೇಕು ಎಂದು ಅಧಿಕಾರಿಗಳನ್ನು ನಾವು ವಿನಂತಿಸುತ್ತೇವೆ ಎಂದು ಐಎಂಎ ಹೇಳಿದೆ.
ಹಲವಾರು ಸಾಮಾಜಿಕ ಜಾಲತಾಣ ಬಳಕೆದಾರರು ಬಾಬಾ ರಾಮ್ದೇವ್ ಈ ಹಿಂದೆಯೂ ಇದೇ ರೀತಿ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ದಲಿತ ಯುವಕನಿಗೆ ಮೂತ್ರ ಕುಡಿಸಿದ ಗೋಣಿಬೀಡು PSI ಅರ್ಜುನ್ ವಿರುದ್ಧ FIR: ಅಮಾನತ್ತಿಗೆ ಆಗ್ರಹ
ಈ ಸಗಣಿ ಭಕ್ತನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು.