ಮೋದಿ ಸರ್ಕಾರ ಜಾರಿಗೆ ತರಲು ಹೊರಟಿರುವ ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿ ಗಡಿಗಳಲ್ಲಿ ನಡೆಯುತ್ತಿರುವ ಐತಿಹಾಸಿಕ ರೈತ ಹೋರಾಟ 6 ತಿಂಗಳುಗಳನ್ನು ಪೂರೈಸಿದೆ. ಈ ಸಂದರ್ಭದಲ್ಲಿ ರೈತರ ಹೋರಾಟಕ್ಕೆ ಅಮೆರಿಕಾದ ಕೃಷಿಕರು, ತಜ್ಞರು ಮತ್ತು ರಾಜಕಾರಣಿಗಳು ಬೆಂಬಲ ವ್ಯಕ್ತಪಡಿಸಿದ್ದು ಮೋದಿ ಸರ್ಕಾರದ ನಡೆಯನ್ನು ಅಂತ್ಯಂತ ಕಳವಳಕಾರಿ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಅಂದರೆ ಮೇ 26 ರಂದು ದೇಶವ್ಯಾಪಿ ಕರಾಳ ದಿನಾಚರಣೆಗೆ ಕರೆ ನೀಡುವ ಮೂಲಕ ರೈತರ ಪಾಲಿಗೆ ಮರಣ ಶಾಸನದಂತಿರುವ ಕರಾಳ ಕಾನೂನುಗಳನ್ನು ಹಿಂಪಡೆಯುವ ವರೆಗೂ ಹೋರಾಟ ನಿಲ್ಲಿಸುವ ಮಾತಿಲ್ಲ ಎಂದು ಹೋರಾಟ ನಿರತ ರೈತರು ಕೇಂದ್ರ ಸರ್ಕಾರಕ್ಕೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಭಾರತದ ರೈತರ ಐತಿಹಾಸಿಕ ಹೋರಾಟ ಕೇವಲ ನಮ್ಮ ನೆಲದಲ್ಲಿ ಮಾತ್ರವಲ್ಲದೆ ದೂರದ ಅಮೇರಿಕಾದಲ್ಲೂ ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟು ಹಾಕಿದೆ. ಈ ಹಿಂದೆ ರಿಹಾನ್ನಾ, ಗ್ರೆಟಾ ಥನ್ ಬರ್ಗ್ ಸೇರಿದಂತೆ ವಿದೇಶಿ ತಾರೆಯರು ನಮ್ಮ ರೈತ ಹೋರಾಟದ ಪರ ದನಿ ಎತ್ತುವ ಮೂಲಕ ಇಲ್ಲಿನ ಅನ್ನದಾತರ ಹೊರಾಟಕ್ಕೆ ಅಂತರಾಷ್ಟ್ರೀಯ ಮನ್ನಣೆ ತಂದು ಕೊಟ್ಟಿದ್ದರು.
ಇದೀಗ ಮತ್ತೊಮ್ಮೆ ಭಾರತೀಯ ರೈತರ ಹೋರಾಟದ ಬಗ್ಗೆ ದಿ ವೈರ್ ಜಾಲತಾಣದ ಮಿಥಾಲಿ ಮುಖರ್ಜಿ, ಅಮೇರಿಕಾದ ಕೃಷಿ ತಜ್ಞರು ಹಾಗೂ ರಾಜಕೀಯ ನಾಯಕರೊಂದಿಗೆ ಸಂದರ್ಶನವೊಂದನ್ನು ನಡೆಸಿದ್ದು, ಭಾರತದ ರೈತರ ಹೋರಾಟ ಮತ್ತು ಇಲ್ಲಿನ ಸರ್ಕಾರ ಜಾರಿಗೆ ತರಲು ಹೊರಟಿರುವ ವಿವಾದಾತ್ಮಕ ಕಾನೂನುಗಳ ಬಗ್ಗೆ ಅಮೇರಿಕನ್ನರ ಅಭಿಪ್ರಾಯ ಕಲೆ ಹಾಕಿದ್ದಾರೆ.
ಮಿತಾಲಿ ಜೊತೆಗಿನ ಸಂದರ್ಶನದಲ್ಲಿ ಭಾಗಿಯಾಗಿದ್ದ ಅಮೆರಿಕಾದ ಮಿಸೌರಿ ಸ್ಟೇಟ್ನ 45ನೇ ಲೆಫ್ಟಿನೆಂಟ್ ಗವರ್ನರ್ ಜೋಯ್ ಮ್ಯಾಕ್ಸ್ವೆಲ್, ನ್ಯಾಷನಲ್ ಫ್ಯಾಮಿಲಿ ಫಾರ್ಮ್ ಕೋಎಲಿಷನ್ನ ಮಾಜಿ ಅಧ್ಯಕ್ಷ ಜೋರ್ಜ್ ನೇಯ್ಲರ್ ಹಾಗೂ ನಾಸಾದ ಮಾಜಿ ವಿಜ್ಞಾನಿ ಡಾ. ಬೆಡಬ್ರತಾ ಒಕ್ಕೋರಲಾಗಿ ಭಾರತದ ರೈತರ ಹೋರಾಟಕ್ಕೆ ತಮ್ಮ ಬೆಂಬಲವನ್ನು ವ್ಯಕ್ತ ಪಡಿಸಿದ್ದಾರೆ.
“ಭಾರತದಲ್ಲಿ ಮೋದಿ ಸರ್ಕಾರದ ಕರಾಳ ಕಾನೂನುಗಳು ಜಾರಿಗೆ ಬಂದಿದ್ದೆ ಆದಲ್ಲಿ ಇಲ್ಲಿನ ಸಣ್ಣ ಭೂ ಹಿಡುವಳಿದಾರರು ಹಾಗೂ ಕೃಷಿಯನ್ನೇ ನಂಬಿಕೊಂಡಿರುವ ಗ್ರಾಮೀಣ ಸಮುದಾಯ ಸಂಪೂರ್ಣ ನಾಶವಾಗಲಿದೆ ಎಂದು ಅಮೇರಿಕಾದ ಕೃಷಿ ತಜ್ಞರು ಭವಿಷ್ಯ ನುಡಿದಿದ್ದಾರೆ.
“ಭಾರತೀಯ ರೈತರ ಹೋರಾಟ ಅಮೇರಿಕಾದಲ್ಲಿನ ಕೃಷಿಕರ ಹಲವು ದಶಕಗಳ ಹೋರಾಟದ ಮುಂದುವರಿದ ಭಾಗ ಎಂದಿರುವ ತಜ್ಞರು, ಕೆಲ ದಶಕಗಳ ಹಿಂದೆ ಅಮೆರಿಕಾದಲ್ಲೂ ಕಾರ್ಪೋರೇಟ್ ಕೃಷಿ ಆರಂಭವಾದಾಗ ಇಲ್ಲಿನ ರೈತರು ಕೂಡ ಕೃಷಿ ಬಿಕ್ಕಟ್ಟನ್ನು ಎದುರಿಸಿದ್ದರು. ಆಗ ಮಿಡ್ ವೆಸ್ಟ್ನ ಗ್ರಾಮೀಣ ಆರ್ಥಿಕತೆ ಸಂಪೂರ್ಣ ಹದಗೆಟ್ಟಿತ್ತು. ಒಂದು ವೇಳೆ ಭಾರತದಲ್ಲೂ ಕಾರ್ಪೋರೇಟ್ ಕೃಷಿಯನ್ನು ಉತ್ತೇಜಿಸುವ ಕರಾಳ ಕಾನೂನುಗಳು ಜಾರಿಯಾದರೆ ಅಲ್ಲಿನ ರೈತರು ಕೂಡ ಬೀದಿಗೆ ಬೀಳಿಲಿದ್ದಾರೆ” ಎಂದು ಅಮೇರಿಕಾದ ಕೃಷಿ ತಜ್ಞರು ಹಾಗೂ ರಾಜಕೀಯ ನಾಯಕರುಗಳು ಆತಂಕ ವ್ಯಕ್ತ ಪಡಿಸಿದ್ದಾರೆ.
ಸಂದರ್ಶನದ ಪೂರ್ಣ ವಿಡಿಯೋ ನೋಡಿ
ಇತ್ತ ಭಾರತದಲ್ಲಿ ರೈತ ಹೋರಾಟ ಮತ್ತೆ ಗರಿಗೆದರುತ್ತಿದೆ. ಸುಗ್ಗಿ ಮುಗಿಸಿರುವ ರೈತರು ದೆಹಲಿ ಗಡಿಗಳತ್ತ ಹೆಜ್ಜೆ ಹಾಕುತ್ತಿದ್ದಾರೆ. ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿಕೊಂಡೇ ಹೋರಾಟ ಮುಂದುವರೆಸಲು ಪಣ ತೊಟ್ಟಿದ್ದಾರೆ. ಸಾಂಕ್ರಾಮಿಕದ ಕಾಲದಲ್ಲಿ ಕೃಷಿ ಕಾಯ್ದೆಗಳನ್ನು ತರುವುದಾದರೆ, ಅದೇ ಸಾಂಕ್ರಾಮಿಕ ಕಾಲದಲ್ಲಿ ಅವುಗಳನ್ನು ರದ್ದುಗೊಳಿಸಲು ಏಕೆ ಸಾಧ್ಯವಿಲ್ಲ ಎಂದು ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ರೈತ ಹೋರಾಟಕ್ಕೆ 6 ತಿಂಗಳು- ಹೇಗಿದೆ ಪ್ರತಿಭಟನಾ ನಿರತ ಗಡಿಗಳಲ್ಲಿನ ಪರಿಸ್ಥಿತಿ..?
ಒಳ್ಳೆಯ ಸುದ್ದಿ ಮತ್ತು ಸಂದೇಶವನ್ನು ಗೌರಿ ಪತ್ರಿಕೆಯು ನೀಡುತ್ತಿರುವುದು