ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಡಾ.ಬಿ.ಆರ್. ಅಂಬೇಡ್ಕರ್ ಕುರಿತ ಅಪಮಾನಕರ ಹೇಳಿಕೆಗೆ ಸಂಬಂಧಿಸಿದಂತೆ ಭಾರೀ ವಿರೋಧ ವ್ಯಕ್ತವಾಗಿದೆ. ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್ ಯಾದವ್, “ಅಮಿತ್ ಶಾ ಅವರಿಗೆ ಹುಚ್ಚು ಹಿಡಿದಿದೆ, ಅವರು ರಾಜಕೀಯವನ್ನು ತ್ಯಜಿಸಿ ರಾಜೀನಾಮೆ ನೀಡಬೇಕು” ಎಂದು ಗುರುವಾರ ಹೇಳಿದ್ದಾರೆ.
ಮಂಗಳವಾರ ರಾಜ್ಯಸಭೆಯಲ್ಲಿ ಸಂವಿಧಾನದ ಚರ್ಚೆಗೆ ಉತ್ತರಿಸಿದ ಕೇಂದ್ರ ಗೃಹ ಸಚಿವರು, “ಅಂಬೇಡ್ಕರ್ ಅವರ ಹೆಸರನ್ನು ಹೇಳುವುದು ಕೆಲವರಿಗೆ ಫ್ಯಾಶನ್ ಆಗಿದೆ, ಇಷ್ಟು ಭಾರಿ ದೇವರನ್ನು ಸ್ಮರಿಸಿದ್ದರೆ ಏಳು ಜನ್ಮಕ್ಕೆ ಆಗುವಷ್ಟು ಸ್ವರ್ಗ ಸಿಗುತ್ತಿತ್ತು” ಎಂದು ಹೇಳುವ ಮೂಲಕ ಅಮಿತ್ ಶಾ ಅಂಬೇಡ್ಕರ್ಗೆ ಅಪಮಾನಿಸಿದ್ದಾರೆ.
“ಅಮಿತ್ ಶಾ ಅವರಿಗೆ ಹುಚ್ಚು ಹಿಡಿದಿದೆ. ಅವರಿಗೆ ಬಾಬಾಸಾಹೇಬ್ ಅಂಬೇಡ್ಕರ್ ಅವರ ಮೇಲೆ ದ್ವೇಷವಿರಬೇಕು. ಅವರ ಈ ಹುಚ್ಚುತನವನ್ನು ನಾವು ಖಂಡಿಸುತ್ತೇವೆ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಶ್ರೇಷ್ಠರು. ಅಮಿತ್ ಶಾ ರಾಜಕೀಯವನ್ನು ತ್ಯಜಿಸಿ ಹೊರಹೋಗಬೇಕು” ಎಂದು ಲಾಲು ಪ್ರಸಾದ್ ಯಾದವ್ ಹೇಳಿದ್ದಾರೆ.
ಇದಕ್ಕೂ ಮೊದಲು, ಬಿಹಾರದ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು. ಶಾ ಮತ್ತು ಬಿಜೆಪಿ ಸಂವಿಧಾನ ವಿರೋಧಿ, ದ್ವೇಷವನ್ನು ಹರಡುತ್ತಿದ್ದಾರೆ ಎಂದು ಆರೋಪಿಸಿದರು.
“ಬಾಬಾಸಾಹೇಬ್ ಅಂಬೇಡ್ಕರ್ ನಮ್ಮ ಫ್ಯಾಶನ್ ಮತ್ತು ಉತ್ಸಾಹ. ಅವರು ನಮ್ಮ ಪ್ರೇರಣೆ ಮತ್ತು ಸ್ಫೂರ್ತಿ. ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಅವಮಾನಿಸಲು ನಾವು ಯಾರಿಗೂ ಬಿಡುವುದಿಲ್ಲ. ಈ ಜನರು ದ್ವೇಷವನ್ನು ಹರಡುವ ಸಂವಿಧಾನ ವಿರೋಧಿಗಳು ಮತ್ತು ಸಂಸತ್ತಿನಲ್ಲಿ ಬಳಸಿದ ಭಾಷೆ ಖಂಡನೀಯ” ಎಂದು ತೇಜಸ್ವಿ ಯಾದವ್ ತಿಳಿಸಿದರು.
ಕಾಂಗ್ರೆಸ್ ಸಂಸದ ಮಾಣಿಕ್ಕಂ ಠಾಗೋರ್ ಅವರು ಗುರುವಾರ ಲೋಕಸಭೆಯಲ್ಲಿ ಮುಂದೂಡಿಕೆ ನಿರ್ಣಯ ಮಂಡಿಸಿ, “ಅಮಿತ್ ಶಾ ಸಂಸತ್ತಿನೊಳಗೆ ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಅವಮಾನಿಸಿದ್ದಾರೆ. ಆದ್ದರಿಂದ, ಇಂದು ನಾವು ಅವರ ಕ್ಷಮೆಯಾಚನೆ ಮತ್ತು ಸಂಪುಟಕ್ಕೆ ರಾಜೀನಾಮೆ ನೀಡುವಂತೆ ಮುಂದೂಡುವ ನಿರ್ಣಯವನ್ನು ಮಂಡಿಸಿದ್ದೇವೆ” ಎಂದು ಅವರು ಹೇಳಿದರು.
ಇದನ್ನೂ ಓದಿ; ‘ಅಂಬೇಡ್ಕರ್ ಪರಂಪರೆಗೆ ಧಕ್ಕೆಯಾಗುವುದನ್ನು ಸಹಿಸುವುದಿಲ್ಲ..’; ಅಮಿತ್ ಶಾ ಹೇಳಿಕೆಗೆ ಕಮಲ್ ಹಾಸನ್ ವಿರೋಧ


