ಅನ್ಯಧರ್ಮೀಯ ಯುವಕನ ಪ್ರೀತಿಗೆ ಪೋಷಕರು ವಿರೋಧಿಸಿದ್ದು, ಊರು ತೊರೆದು ವಿವಾಹವಾಗಿದ್ದ ಯುವತಿಯೊಬ್ಬಳ ಮೃತದೇಹ ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಪತ್ತೆಯಾಗಿದೆ. ವಿರೋಧದ ನಡುವೆಯೂ ವಿವಾಹವಾಗಿದ್ದ ಕಾರಣಕ್ಕಾಗಿ ಆಕೆಯನ್ನು ಪೋಷಕರೇ ಹತ್ಯೆ (ಮರ್ಯಾದೆಗೇಡು ಹತ್ಯೆ) ಮಾಡಿರಬಹುದು ಎಂದು ಶಂಕಿಸಲಾಗಿದೆ.
ಚಿತ್ತೂರು ಜಿಲ್ಲೆಯ ಯಾಸ್ಮಿನ್ ಬಾನು ಎಂಬಾಕೆ ಕಳೆದ ಕಳೆದ ನಾಲ್ಕು ವರ್ಷಗಳಿಂದ ಹಿಂದು ಯುವಕ ಸಾಯಿ ತೇಜ ಎಂಬಾತನನ್ನು ಪ್ರೀತಿಸುತ್ತಿದ್ದರು. ಆದರೆ ಇದಕ್ಕೆ ಬಾನು ಅವರ ಕುಟುಂಬದಿಂದ ವಿರೋಧವಿತ್ತು. ಹೀಗಾಗಿ, ಅವರು ಇದೇ ವರ್ಷದ ಫೆಬ್ರವರಿಯಲ್ಲಿ ಮನೆ ತೊರೆದು, ಯುವಕನೊಂದಿಗೆ ವಿವಾಹವಾಗಿದ್ದರು.
ಮದುವೆಯ ಬಳಿಕ ತಮ್ಮ ಸುರಕ್ಷತೆಗೆ ಪೋಷಕರಿಂದ ಬೆದರಿಕೆ ಇದೆಯೆಂದು ಪೊಲೀಸ್ ರಕ್ಷಣೆಯನ್ನೂ ಪಡೆದಿದ್ದರು. ಆದರೂ, ಇದೀಗ ಆಕೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ. ಪೋಷಕರೇ ಹತ್ಯೆಗೈದಿರಬಹುದು ಎಂದು ಪೊಲೀಸರು ಶಂಕಿಸಿದ್ದು, ತನಿಖೆ ನಡೆಸುತ್ತಿದ್ದಾರೆ.
ಬಾನು ಅವರ ಪತಿ ತೇಜ ಪ್ರತಿಕ್ರಿಯಿಸಿ, “ತಮ್ಮ ಮದುವೆಯಾದಾಗಿನಿಂದ ಬಾನು ಅವರ ಅಣ್ಣ ಮತ್ತು ತಂಗಿ ಪದೇಪದೆ ಕರೆ ಮಾಡುತ್ತಿದ್ದರು. ಬಾನು ಸಾವಿಗೂ ಮೂರು ದಿನಗಳ ಮುನ್ನ ತಮಗೆ ಬಾನು ಅವರ ಕುಟುಂಬಸ್ಥರು ಕರೆಮಾಡಿದ್ದರು. ಬಾನು ಅವರ ತಂದೆ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಮನೆಗೆ ಬಂದು ಭೇಟಿಯಾಗುವಂತೆ ಒತ್ತಾಯಿಸಿದ್ದರು” ಎಂದು ವಿವರಿಸಿದ್ದಾರೆ.
“ತಂದೆಯನ್ನು ಭೇಟಿ ಮಾಡಲು ಬಾನು ತನ್ನ ಪೋಷಕರ ಮನೆಗೆ ಹೋಗಿದ್ದರು. ತೆರಳಿದ ಕೆಲವೇ ಗಂಟೆಗಳಲ್ಲಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿರುವುದಾಗಿ ಕರೆ ಬಂದಿತು. ಆ ನಂತರ, ಬಾನು ಸಾವನ್ನಪ್ಪಿದ್ದಾರೆಂದು ಅವರ ಕುಟುಂಬದವರು ತಿಳಿಸಿದರು” ಎಂದು ತೇಜ ಹೇಳಿದ್ದಾರೆ.
ಬಾನು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆಕೆಯ ಪೋಷಕರು ಹೇಳುತ್ತಿದ್ದಾರೆ. ಆದರೆ, ಇದು ಕೊಲೆ ಎಂದು ತೇಜ ಆರೋಪಿಸಿದ್ದಾರೆ. ಪೊಲೀಸರಿಗೆ ದೂರು ನೀಡಿರುವ ತೇಜ, “ಬಾನು ಅವರನ್ನು ಆಕೆಯ ಕುಟುಂಬದವರು ಕೊಲೆ ಮಾಡಿದ್ದಾರೆ. ಆತ್ಮಹತ್ಯೆಯೆಂದು ಬಿಂಬಿಸಲು ಯತ್ನಿಸುತ್ತಿದ್ದಾರೆ. ಆಕೆಯನ್ನು ಪೋಷಕರ ಮನೆಗೆ ಕರೆದುಕೊಂಡ ಹೋಗಿದ್ದ ಸಂಬಂಧಿಕರು ಪರಾರಿಯಾಗಿದ್ದಾರೆ” ಎಂದು ಆರೋಪಿಸಿದ್ದಾರೆ.
ಬಾನು ಅವರ ತಾಯಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ನಡೆಸುತ್ತಿದ್ದಾರೆ. ಎಲ್ಲ ಆಯಾಮಗಳಲ್ಲೂ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹರಿಯಾಣ ಭೂ ವ್ಯವಹಾರ ಪ್ರಕರಣ: ‘ನನ್ನನ್ನು ಕೆಟ್ಟದಾಗಿ ಬಿಂಬಿಸಲಾಗುತ್ತಿದೆ..’; ಎಂದ ರಾಬರ್ಟ್ ವಾದ್ರಾ


