Homeಕರ್ನಾಟಕಹಾದರವೋ, ಹನಿಟ್ರ್ಯಾಪೋ, ಅಸಹ್ಯವೋ?..

ಹಾದರವೋ, ಹನಿಟ್ರ್ಯಾಪೋ, ಅಸಹ್ಯವೋ?..

- Advertisement -
- Advertisement -

ಈ ಹನಿಟ್ರ್ಯಾಪ್ ಪ್ರಕರಣದಿಂದ ಹಲವು ಪ್ರಶ್ನೆಗಳು ಎದ್ದಿವೆ. ಹನಿಟ್ರ್ಯಾಪ್‍ಗೆ ಒಳಗಾದ ಶಾಸಕರಲ್ಲಿ ಐದು ಜನ ಡಿಸೆಂಬರ್ 5ರಂದು ನಡೆಯಲಿರುವ ಚುನಾವಣೆಯನ್ನು ಎದುರಿಸುತ್ತಿರುವ ಆಡಳಿತ ಪಕ್ಷದವರಾಗಿದ್ದಾರೆ ಎನ್ನಲಾಗಿದೆ. ಚುನಾವಣೆಗೆ ಸ್ಪರ್ಧಿಸಲಿರುವ ಅಭ್ಯರ್ಥಿಗಳಿಗೆ ಇದರಿಂದ ಯಾವುದಾದರೂ ನಷ್ಟ ಉಂಟಾಗಲಿದೆಯೇ?

ಕೋರ್ಟಿನಿಂದ ನಿರ್ಬಂಧ ಬರುವ ಮುಂಚೆ ಎಲ್ಲೆಡೆ ಓಡಾಡಿದ್ದು ಮಧ್ಯ ಕರ್ನಾಟಕದ ಹಾಲಿ ಶಾಸಕರೊಬ್ಬರ ರಾಸಲೀಲೆಯ ವಿಡಿಯೋ. ಆ ನಂತರ ಎಲ್ಲರಿಗೂ ಲಭ್ಯವಾಗಿದ್ದು ಸಾಹುಕಾರರೊಬ್ಬರ ಆಡಿಯೋ. ಅವರ ದನಿ ಪರಿಚಯ ಇರುವ ಯಾರಿಗೂ ಸಂದೇಹ ಉಳಿದಿಲ್ಲ. ಗುಟ್ಟಾಗಿ ಕೆಲವರಿಗೆ ಮಾತ್ರ ಲಭ್ಯವಾಗಿರುವುದು ಮಹಿಳೆಯೊಬ್ಬರು ಯಲ್ಲಮ್ಮನ ಜಾತ್ರೆ ನಂತರ ಸಿಗುತ್ತೇನೆ ಎಂದು ಹೇಳಿದ ‘ಅವರು’ ತನ್ನನ್ನು ಪಟಾಯಿಸಲು ಮಾಡಿದ ಯತ್ನದ ಕುರಿತಾದ ಆಡಿಯೋ. ಆದರೆ, ಎಲ್ಲಿಯೂ ಯಾವ ಆಡಿಯೋ ಅಥವಾ ವಿಡಿಯೋ ಸಿಗದೇ ಇದ್ದರೂ ಕೋರ್ಟಿಗೆ ಹೋಗಿ ಇನ್ನೊಬ್ಬ ಶಾಸಕರೂ ನಿರ್ಬಂಧಕಾಜ್ಞೆ ತಂದುಬಿಟ್ಟರು. ಅಲ್ಲಿಗೆ ಪತ್ರಕರ್ತರ ವಲಯದಲ್ಲಿ ವಿಪರೀತ ವದಂತಿಗಳು ಓಡಾಡಲು ಶುರು ಮಾಡಿದವು.

ಯಾರ ವಿಡಿಯೋ ಓಡಾಡಿತೋ, ಉತ್ತರ ಕರ್ನಾಟಕದ ಆ ಶಾಸಕರು ಹನಿಟ್ರ್ಯಾಪ್‍ಗೆ ಬಲಿಯಾಗಿದ್ದೇನೆಂದು ದೂರು ಕೊಟ್ಟು ಹೀಗೆ ಹೇಳಿದರಂತೆ. ಅವರಿಗೆ ಹಲವಾರು ಕೋಟಿ ದುಡ್ಡಿನ ಬೇಡಿಕೆಯಿಟ್ಟು, ಆ ದುಡ್ಡನ್ನು ಕೊಡದಿದ್ದರೆ ತಮ್ಮಲ್ಲಿರುವ ವಿಡಿಯೋ ಅನ್ನು ಬಹಿರಂಗ ಪಡಿಸುವುದಾಗಿ ಬ್ಲ್ಯಾಕ್ ಮಾಡಲಾಯಿತು. ಆಗ ಶಾಸಕರು ಪೊಲೀಸ್ ಮೊರೆ ಹೊಕ್ಕು, ಆರೋಪಿಗಳ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದಾರೆ ಹಾಗೂ ಆ ವಿಡಿಯೊ ಮತ್ತು ಆಡಿಯೊ ತುಣುಕಗಳು ಬಹಿರಂಗಪಡಿಸದಂತೆ ನ್ಯಾಯಾಲಯದಿಂದ ಪ್ರತಿಬಂಧಕಾಜ್ಞೆ ತಂದಿದ್ದಾರೆ.

ಈ ದೂರಿನ ಮೇಲೆ ಕ್ರಮ ಕೈಗೊಳ್ಳುತ್ತ ಪೊಲೀಸರು ರಾಘವೇಂದ್ರ ಎಂಬ ವ್ಯಕ್ತಿಯನ್ನು ಮತ್ತು ಆತನ ಇಬ್ಬರು ಮಹಿಳಾ ಸಹಚರರನ್ನು ಬಂಧಿಸಿದ್ದಾರೆ. ಬಂಧನದ ಜೊತೆಗೆ ಒಂದು ಹಾರ್ಡ್ ಡಿಸ್ಕ್, ಕೆಲವು ಪೆನ್ ಡ್ರೈವ್, ಕೆಲವು ಮೊಬೈಲ್ ಫೋನ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಇವರು ವಶಪಡಿಸಿಕೊಂಡದ್ದರಲ್ಲಿ ದೂರು ನೀಡಿದ ಶಾಸಕರಷ್ಟೇ ಅಲ್ಲದೇ ಇನ್ನೂ ಹತ್ತು ಶಾಸಕರ ವಿಡಿಯೋಗಳು ಇವೆ ಎನ್ನಲಾಗಿದೆ. ಬಂಧಿತನಾದ ರಾಘವೇಂದ್ರ ಶಿವಮೊಗ್ಗೆ ಜಿಲ್ಲೆಯವನಾಗಿದ್ದು, ಈಗಾಗಲೇ ಸೈಬರ್ ಅಪರಾಧ ಪ್ರಕರಣಗಳಲ್ಲಿ ಇವನ ವಿರುದ್ಧ ಅನೇಕ ಪ್ರಕರಣಗಳಿವೆ.

ಇಷ್ಟರಲ್ಲಿ ಆಡಿಯೋ ತುಣುಕು ವೈರಲ್ ಆಗಿದೆ. ಅದಕ್ಕೆ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ತಾವೂ ಆ ಆಡಿಯೊ ಅನ್ನು ಕೇಳಿಸಿಕೊಂಡಿದ್ದಾಗಿ ಹೇಳಿ, ಆ ಆಡಿಯೊದಲ್ಲಿನ ಧ್ವನಿ ಸಾಹುಕಾರರ ಧ್ವನಿ ಇದ್ದಂತಿದೆ ಎಂದರು. ಆ ಸಾಹುಕಾರ ಯಾರು ಎಂದು ಅವರು ಬಹಿರಂಗಪಡಿಸದಿದ್ದರೂ, ವಲಯದ ಎಲ್ಲರಿಗೂ ಆ ಸಾಹುಕಾರ ಯಾರು ಎಂಬುದು ಸ್ಪಷ್ಟವಾಗಿ ತಿಳಿದಿದೆ. ಈ ಹನಿಟ್ರ್ಯಾಪ್ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿ, ನಿಷ್ಪಕ್ಷಪಾತವಾದ ತನಿಖೆ ಆಗಬೇಕೆಂದು ಆಗ್ರಹಿಸಿದ್ದಾರೆ. ಈ ಮಧ್ಯೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ‘ಈ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಅಥವಾ ಉದ್ದೇಶಪೂರ್ವಕ ಬಲಿ ಹಾಕುವ ಪ್ರಯತ್ನ ತಮ್ಮದಲ್ಲ’ ಎಂದು ಹೇಳಿಕೆ ನೀಡಬೇಕಾಗಿ ಬಂದಿತು.

ಈ ಹನಿಟ್ರ್ಯಾಪ್ ಪ್ರಕರಣದಿಂದ ಹಲವು ಪ್ರಶ್ನೆಗಳು ಎದ್ದಿವೆ. ಹನಿಟ್ರ್ಯಾಪ್‍ಗೆ ಒಳಗಾದ ಶಾಸಕರಲ್ಲಿ ಐದು ಜನ ಡಿಸೆಂಬರ್ 5ರಂದು ನಡೆಯಲಿರುವ ಚುನಾವಣೆಯನ್ನು ಎದುರಿಸುತ್ತಿರುವ ಆಡಳಿತ ಪಕ್ಷದವರಾಗಿದ್ದಾರೆ ಎನ್ನಲಾಗಿದೆ. ಚುನಾವಣೆಗೆ ಸ್ಪರ್ಧಿಸಲಿರುವ ಅಭ್ಯರ್ಥಿಗಳಿಗೆ ಇದರಿಂದ ಯಾವುದಾದರೂ ನಷ್ಟ ಉಂಟಾಗಲಿದೆಯೇ? ಬರೀ ಹನಿ ಟ್ರ್ಯಾಪ್ ಅಷ್ಟೇ ಅಲ್ಲ. ನಮ್ಮ ಪ್ರತಿನಿಧಿಗಳು ಒಳಗೊಂಡಿದ್ದಾರೆ ಎನ್ನಲಾದ ಲೈಂಗಿಕ ಹಗರಣಗಳು ಈ ಮುಂಚೆಯೂ ಹೊರಬಂದಿವೆ. ವಿಧಾನಸಭೆಯಲ್ಲಿ ನೀಲಿ ಚಿತ್ರವನ್ನು ನೋಡುತ್ತ ಕೆಲವರು ಸಿಕ್ಕಿಹಾಕಿಕೊಂಡಿದ್ದರು. ಅವರೇ ಇಂದು ರಾಜ್ಯದ ಉಪಮುಖ್ಯಮಂತ್ರಿಯಾಗಿ ಬಡ್ತಿ ಪಡೆದಿದ್ದಾರೆ. ಇಂದಿನ ಡಿಜಿಟಲ್ ಯುಗದಲ್ಲಿ ಸಾರ್ವಜನಿಕರು ಇದೆಲ್ಲದರಿಂದ ತಮಗೆ ಪುಗಸಟ್ಟೆ ಮನರಂಜನೆ ಸಿಕ್ಕಿತು ಎಂದು ಕೃತಜ್ಞರಾಗುವ ಸಂಭವವೇ ಹೆಚ್ಚು ಎಂಬುದಕ್ಕೆ ಮೈಸೂರಿನ ಹಾಲಿ ಸಂಸದರೇ ಸಾಕ್ಷಿ. ಅವರ ಕುರಿತಾದ ಆಡಿಯೋ ಮತದಾನಕ್ಕೆ ಮುಂಚೆ ಯಾವ ಪರಿ ಓಡಿತೆಂದರೆ, ಬಹುಶಃ ಅತ್ಯಂತ ಹೆಚ್ಚು ವೈರಲ್ ಆದ ಧ್ವನಿಮುದ್ರಿಕೆ ಅದು. ಅಂದರೆ, ಜನರು ಈ ಹಗರಣಗಳನ್ನು ಸುಲಭವಾಗಿ ಕ್ಷಮಿಸಿಬಿಡುತ್ತಾರೆಯೇ? ಅಥವಾ ಪುರುಷನ ಲೈಂಗಿಕ ಸ್ವೇಚ್ಛಾಚಾರವು ಎಂದಿಗೂ ಕ್ಷಮಾರ್ಹ ವಿಷಯವೇ ಆಗಿದೆಯೇ? ‘ಶೀಲ’ ಎನ್ನುವುದು ಮಹಿಳೆಯರಿಗೆ ಮೀಸಲಾಗಿಸಲ್ಪಟ್ಟ ವಿಷಯ ಎನ್ನುವುದು ಮುಂಚೆಯಿಂದಲೂ ತಿಳಿದ ವಿಷಯ.

ಹಾಗಾಗಿ ಸಾರ್ವಜನಿಕವಾಗಿ ಸದರಿ ಪ್ರಕರಣದಲ್ಲಿ ಉಳಿದುಕೊಂಡಿರುವುದು ಇನ್ನೂ ಯಾರ್ಯಾರ ವೀಡಿಯೋಗಳು ಅಥವಾ ಆಡಿಯೋಗಳು ಸಿಕ್ಕಿವೆಯಂತೆ ಎಂಬ ಕುತೂಹಲ ಬಿಟ್ಟರೆ ಬೇರೇನೂ ಇಲ್ಲ. ಹನಿಟ್ರ್ಯಾಪ್ ಮಾಡಿದವರ ದುರುದ್ದೇಶವೂ ಈಡೇರದೇ ಹೋಗುವ ದುಸ್ಥಿತಿ ಇದೆ. ಏಕೆಂದರೆ ಯಾರಿಗೂ ಮರ್ಯಾದೆ ಹೋಗುತ್ತದೆಂಬ ಭಯ ಕಾಡುತ್ತಿರುವ ಸಾಧ್ಯತೆ ಕಾಣುತ್ತಿಲ್ಲ. ಬೆತ್ತಲೆ ವಿಡಿಯೋಗಳು ಎಲ್ಲೆಡೆ ಕಂಡುಬಂದ ಶಾಸಕರೊಬ್ಬರ ಪತ್ನಿಯ ನಿಗೂಢ ಸಾವೂ ಸಹ ಅವರನ್ನು ಒಂದು ಅವಧಿಗೆ ಮಾತ್ರ ಶಾಸಕಸ್ಥಾನದಿಂದ ವಂಚಿತನನ್ನಾಗಿಸಿತು. ಅದೂ ಸಹಾ ರಾಜ್ಯಾದ್ಯಂತ ಅವರ ಪಕ್ಷದ ಪರವಾದ ಅಲೆ ಇರದಿದ್ದಾಗ. ಈ ಮಧ್ಯೆ ದೇಶಕ್ಕೆಲ್ಲಾ ರಾಮರಾಜ್ಯದ ಕುರಿತು ಪಾಠ ಮಾಡುವ ಸ್ವಾಮೀಜಿಗಳ ಜೊತೆಗೇ ಓಡಾಡುತ್ತಾ ಅವರು ಉಳಿದುಕೊಂಡಿದ್ದರು.

ಇನ್ನು ಸ್ವಾಮೀಜಿಗಳ ವಿಚಾರಕ್ಕೆ ಬರುವುದಾದರೆ, ಅದನ್ನು ಹೇಳದಿರುವುದೇ ಲೇಸು. ಒಪ್ಪಿತ ಲೈಂಗಿಕ ಸಂಬಂಧ ಅಷ್ಟೇ ಅಲ್ಲದೇ ವಿಕೃತ ಲೈಂಗಿಕತೆಗೂ ಮುಂದಾಗಿರುವ ಸ್ವಾಮೀಜಿಗಳು ಸರ್ವಮಾನ್ಯರಾಗಿ ವ್ಯವಹಾರಗಳನ್ನು ನಡೆಸಿಕೊಂಡು ಮುಂದಾಗಿದ್ದಾರೆ. ಶಿಶುಕಾಮಿಯೂ ಇರಬಹುದು ಎನ್ನುವ ಸ್ವಾಮೀಜಿಯ ತೊಡೆಯ ಮೇಲೆ ಹೆಣ್ನುಮಕ್ಕಳನ್ನು ಕುಳ್ಳಿರಿಸಿ ದೀಕ್ಷೆ ಕೊಡಿಸುವ ಸುಶಿಕ್ಷಿತ ತಂದೆ ತಾಯಂದಿರು ಈಗಲೂ ಇದ್ದಾರೆ.

ಈ ಸದ್ಯ ಇದರಲ್ಲೇನಾದರೂ ರಾಜಕೀಯ ಹುನ್ನಾರದ ವಾಸನೆ ಇದೆಯೇ ಎಂಬುದನ್ನು ಪತ್ರಿಕೆ ಕೆದಕಲು ನೋಡಿತು. ಹಾಲಿ (ನಮ್ಮ ಕೈಗೇ ಆಡಿಯೋ, ವಿಡಿಯೋ ಸಿಕ್ಕಿಲ್ಲವಾದರೂ) ಸಿಕ್ಕಿ ಹಾಕಿಕೊಂಡಿದ್ದಾರೆ ಎಂದು ಹೇಳಲಾಗುತ್ತಿರುವ ಹೆಚ್ಚಿನವರು ಬಿಜೆಪಿಯಲ್ಲಿ ಇದ್ದಾರಾದರೂ ಒಂದಿಬ್ಬರು ಕಾಂಗ್ರೆಸ್ ಶಾಸಕರೂ ಇದ್ದಾರೆ. ಹೀಗಾಗಿ ಇದನ್ನು ಒಂದು ಪಕ್ಷದವರು ಇನ್ನಾರನ್ನೋ ಸಿಕ್ಕಿ ಹಾಕಿಸಲು ಮಾಡಿದ ತಂತ್ರ ಎನ್ನುವ ಹಾಗಿಲ್ಲ. ಅನರ್ಹ ಶಾಸಕರನ್ನು ಬೆದರಿಸಲು ಬಿಜೆಪಿ ಮೊದಲೇ ಮಾಡಿಸಿತ್ತು ಎಂಬ ವದಂತಿಯೂ ಒಂದಷ್ಟು ಓಡಾಡಿತಾದರೂ, ಬಿಜೆಪಿಯೊಳಗೇ ಇರುವ ಶಾಸಕರು ಮತ್ತು ಸಂಘಪರಿವಾರದ ಮೂಲದ ಶಾಸಕರೂ ಇರುವುದು ಅದನ್ನೂ ಸುಳ್ಳಾಗಿಸಿದೆ. ಯಡಿಯೂರಪ್ಪನವರ ಸರ್ಕಾರ ರಚನೆಯಾಗುವ ಸಂದರ್ಭದಲ್ಲಿ ಅರವಿಂದ ಲಿಂಬಾವಳಿಯ ಸಲಿಂಗರತಿಯ ವಿಡಿಯೋ ಬಹಿರಂಗವಾಗಿದ್ದು ಬಿಜೆಪಿಯವರಿಂದಲೇ ಎಂಬುದರಲ್ಲಿ ಯಾರಿಗೂ ಸಂಶಯವಿಲ್ಲ. ಏಕೆಂದರೆ, ಆಗ ಓಡಾಡಿದ ಆಡಿಯೋಗಳಲ್ಲಿ ಒಂದು ಸದರಿ ‘ಹುಡುಗರು’ ಈಶ್ವರಪ್ಪನವರ ಜೊತೆ ಇದರ ಕುರಿತೇ ಮಾತನಾಡುತ್ತಿದ್ದುದೂ ಇತ್ತು. ಅದಕ್ಕೆ ತಕ್ಕುನಾಗಿ ‘ಪ್ರಭಾವಿ’ಗಳಲ್ಲೊಬ್ಬರಾದ ಲಿಂಬಾವಳಿಯು ನಂತರ ಸಚಿವರೂ ಆಗಲಿಲ್ಲ; ರಾಜ್ಯಾಧ್ಯಕ್ಷರೂ ಆಗಲಿಲ್ಲ.

ತೇಜಸ್ವಿ ಸೂರ್ಯರ ‘ಹಗರಣ’ಗಳ ವಿಚಾರದಲ್ಲಿ ‘ಸಂತ್ರಸ್ತೆ’ ಪ್ರತಾಪ್‍ಸಿಂಹರಿಗೆ ದೂರು ಕೊಡುವುದು; ಪ್ರತಾಪ್‍ಸಿಂಹರ ಆಡಿಯೋದಲ್ಲಿ ರಾಮದಾಸ್ ಹೆಸರು ಕೇಳಿಬರುವುದು ಇವೆಲ್ಲವೂ ಬಿಜೆಪಿಯೊಳಗೆ ಇಂಥಾ ಹಲವು ಒಳಸುಳಿಗಳಿರುವ ಸೂಚನೆಯನ್ನಂತೂ ನೀಡುತ್ತಿವೆ. ಕಾಂಗ್ರೆಸ್ ಸರ್ಕಾರವಿದ್ದಾಗ ಸಚಿವ ಎಚ್.ವೈ.ಮೇಟಿ ಇಂಥದ್ದೇ ಒಂದರಲ್ಲಿ ಸಿಕ್ಕಿಕೊಂಡು ರಾಜೀನಾಮೆ ಕೊಟ್ಟರು. ಒಂದೆರಡು ಚಾನೆಲ್ ಬಿಟ್ಟರೆ ಮಿಕ್ಕೆಲ್ಲವೂ ಎಗ್ಗು ಸಿಗ್ಗಿಲ್ಲದೇ ವಿಡಿಯೋವನ್ನೇ ಪ್ರಸಾರ ಮಾಡಿದ್ದವು. ಕಾಂಗ್ರೆಸ್ ನಾಯಕರುಗಳ ಲೈಂಗಿಕ ಸಂಬಂಧಗಳ ಕುರಿತಂತೆ ಗಾಸಿಪ್‍ಗಳಿಗೆ ಕಡಿಮೆಯಿಲ್ಲವಾದರೂ ಮೇಟಿಯವರ ವಿಡಿಯೋ ಬಿಟ್ಟರೆ ಹೊರಬಂದಿದ್ದು ಕಡಿಮೆ. ಆದರೆ, ಬಿಜೆಪಿಯೊಳಗೆ ಸದಾಕಾಲ ಒಂದಲ್ಲಾ ಒಂದು ಕಡೆ ಯಾರದ್ದೋ ರೆಕಾರ್ಡಿಂಗ್ ನಡೆಯುತ್ತಿರಬಹುದು ಇಲ್ಲವೇ ಸಂಚು ರೂಪಿತವಾಗುತ್ತಿರಬಹುದು ಎನ್ನುವ ಮಟ್ಟಿಗೆ ‘ಲೀಲೆಗಳು’ ಇದ್ದಂತಿವೆ. ಇಂತಹ ಲೀಲೆಗಳಲ್ಲಿ ಈಗ ಸಿಕ್ಕಿ ಹಾಕಿಕೊಂಡಿರುವ ಅನರ್ಹರೂ ಕಾಂಗ್ರೆಸ್‍ನಲ್ಲಿದ್ದವರೇ ಆಗಿರುವುದನ್ನೂ ಮರೆಯುವಂತಿಲ್ಲ. ಒಟ್ಟಿನಲ್ಲಿ ಸಾರ್ವಜನಿಕ ಜೀವನದಲ್ಲಿರುವವರಿಗೆ ಇರಬೇಕಾದ ಶಿಸ್ತು, ನೀತಿ ಸಂಹಿತೆಗಳಿಂದ ದೂರ ನಿಂತಿರುವುದಷ್ಟೇ ಅಲ್ಲದೇ, ಸಾರ್ವಜನಿಕರೂ ಇವೆಲ್ಲವನ್ನೂ ಗಂಭೀರವಾಗಿ ತೆಗೆದುಕೊಳ್ಳದಿರುವುದು ಒಳ್ಳೆಯ ಬೆಳವಣಿಗೆಯೋ ದುರಂತವೋ ಗೊತ್ತಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಮೂರೂ ಬಿಟ್ಟವರು ಊರಿಗೆ ದೊಡ್ಡವರು ಎಂಬ ಮಾತಿಗೆ ಅನುಗುಣವಾಗಿ ನಮ್ಮ ರಾಜಕಾರಣಿಗಳು ನಡೆದುಕೊಳ್ಳುತ್ತಿದ್ದಾರೆ.

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....