ಬಾಂಗ್ಲಾದೇಶದ ರಾಜ್ಬರಿ ಜಿಲ್ಲೆಯಲ್ಲಿ ಸುಲಿಗೆ ಯತ್ನದ ಆರೋಪದ ಮೇಲೆ ವ್ಯಕ್ತಿಯೊಬ್ಬರನ್ನು ಗುಂಪೊಂದು ಥಳಿಸಿ ಕೊಂದಿದೆ. ಇದು ಇತ್ತೀಚೆಗೆ ಹಿಂದೂ ವ್ಯಕ್ತಿಯನ್ನು ಗುಂಪು ಹತ್ಯೆ ನಡೆಸಿರುವ ಎರಡನೇ ಘಟನೆಯಾಗಿದೆ. ಆದರೆ, ಅಲ್ಲಿನ ಮಧ್ಯಂತರ ಸರ್ಕಾರ ಈ ಘಟನೆಗೆ ಯಾವುದೇ ಕೋಮು ಆಯಾಮವಿಲ್ಲ, ಇದು ಸಾಮಾನ್ಯ ಅಪರಾಧ ಸ್ವರೂಪದ ಘಟನೆ ಎಂದು ಹೇಳಿದೆ.
ದಿ ಡೈಲಿ ಸ್ಟಾರ್ ವರದಿಯ ಪ್ರಕಾರ, ಡಿಸೆಂಬರ್ 24 ರಂದು ರಾತ್ರಿ 11 ಗಂಟೆ ಸುಮಾರಿಗೆ ರಾಜ್ಬರಿಯ ಪಂಗ್ಶಾ ಉಪಜಿಲ್ಲಾದ ಪಂಗ್ಶಾ ಪೊಲೀಸ್ ಠಾಣೆ ವ್ಯಾಪ್ತಿಯ ಹೊಸೆಂದಂಗಾ ಗ್ರಾಮದಲ್ಲಿ ‘ಸಾಮ್ರಾಟ್’ ಎಂದೂ ಕರೆಯಲ್ಪಡುವ ಅಮೃತ್ ಮೊಂಡಲ್ ಎಂಬ ವ್ಯಕ್ತಿಯನ್ನು ಸ್ಥಳೀಯರು ಥಳಿಸಿದ್ದಾರೆ. ಸುಲಿಗೆ ಹಣವನ್ನು ಸಂಗ್ರಹಿಸಲು ಮೊಂಡಲ್ ಈ ಪ್ರದೇಶಕ್ಕೆ ಹೋಗಿದ್ದರು ಎಂಬ ಆರೋಪದ ನಂತರ ಹಿಂಸಾಚಾರ ನಡೆಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಮಾಹಿತಿ ಪಡೆದ ನಂತರ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಗಂಭೀರ ಸ್ಥಿತಿಯಲ್ಲಿದ್ದ ಮೊಂಡಲ್ ಅವರನ್ನು ರಕ್ಷಿಸಿದರು. ಅವರನ್ನು ಪಂಗ್ಶಾ ಉಪಜಿಲ್ಲಾ ಆರೋಗ್ಯ ಸಂಕೀರ್ಣಕ್ಕೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು ಎಂದು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ದೇಬ್ರತಾ ಸರ್ಕಾರ್ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಮೊಂಡಲ್ ಅವರ ಸಹಚರರಲ್ಲಿ ಒಬ್ಬರಾದ ಮೊಹಮ್ಮದ್ ಸೆಲೀಮ್ ಅವರನ್ನು ಸ್ಥಳದಿಂದ ಬಂಧಿಸಿದ್ದಾರೆ ಮತ್ತು ಪಿಸ್ತೂಲ್, ಪೈಪ್ ಗನ್ ಸೇರಿದಂತೆ ಎರಡು ಬಂದೂಕುಗಳನ್ನು ವಶಪಡಿಸಿಕೊಂಡಿದ್ದಾರೆ. ಮೊಂಡಲ್ ವಿರುದ್ಧ ಪಂಗ್ಶಾ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ಸೇರಿದಂತೆ ಕನಿಷ್ಠ ಎರಡು ಪ್ರಕರಣಗಳು ದಾಖಲಾಗಿವೆ ಮತ್ತು 2023 ರಲ್ಲಿ ದಾಖಲಾದ ಹಲವಾರು ಸುಲಿಗೆ ಸಂಬಂಧಿತ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಎಂದು ಸರ್ಕಾರ್ ಹೇಳಿದ್ದಾರೆ.
ಸ್ಥಳೀಯ ನಿವಾಸಿಗಳು ದಿ ಡೈಲಿ ಸ್ಟಾರ್ಗೆ ನೀಡಿದ ಮಾಹಿತಿಯ ಪ್ರಕಾರ, ಮೊಂಡಲ್ ಸುಲಿಗೆ ಮತ್ತು ಇತರ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾನೆ ಮತ್ತು ಇತ್ತೀಚೆಗೆ ಭಾರತದಿಂದ ಹಿಂದಿರುಗಿದ್ದ. ಬಳಿಕ ಸ್ವಲ್ಪ ಸಮಯ ಸುಮ್ಮನಿದ್ದ. ಹತ್ಯೆಯಾದ ರಾತ್ರಿ, ಆತ ಮತ್ತು ಆತನ ಹಲವಾರು ಸಹಚರರು ಹಣ ಸಂಗ್ರಹಿಸಲು ಗ್ರಾಮಸ್ಥರ ಮನೆಗೆ ಹೋಗಿದ್ದರು ಎನ್ನಲಾಗಿದೆ. ನಿವಾಸಿಗಳು ಎಚ್ಚರಿಕೆ ನೀಡಿದಾಗ, ಸ್ಥಳೀಯರು ಒಟ್ಟುಗೂಡಿ ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಆತನ ಗುಂಪಿನ ಇತರರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಗುರುವಾರ (ಡಿಸೆಂಬರ್ 25) ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು ಹತ್ಯೆಯನ್ನು ಖಂಡಿಸಿದೆ. ಆದರೆ, ಸಾರ್ವಜನಿಕರು ಮತ್ತು ಅಂತಾರಾಷ್ಟ್ರೀಯ ವೀಕ್ಷಕರು ಈ ಘಟನೆಯನ್ನು ಧಾರ್ಮಿಕ ದೃಷ್ಟಿಕೋನದಿಂದ ನೋಡಿದ್ದಾರೆ.
“ಪೊಲೀಸರ ಮಾಹಿತಿ ಮತ್ತು ಪ್ರಾಥಮಿಕ ತನಿಖೆಯ ಆಧಾರದ ಮೇಲೆ, ಈ ಘಟನೆಯು ಯಾವುದೇ ರೀತಿಯಲ್ಲಿ ಕೋಮು ದಾಳಿಯಲ್ಲ ಎಂಬುದು ಸ್ಪಷ್ಟವಾಗಿದೆ. ಇದು ಸುಲಿಗೆ ಮತ್ತು ಅಪರಾಧ ಚಟುವಟಿಕೆಗಳ ಹಿನ್ನೆಲೆ ನಡೆದಿದೆ” ಎಂದು ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.
ಮೊಂಡಲ್ ಹಲವಾರು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ. ಆತನ ವಿರುದ್ದ 2023ರಿಂದ ಹಲವಾರು ವಾರೆಂಟ್ಗಳನ್ನು ಹೊರಡಿಸಲಾಗಿದೆ. ಕೆಲವು ಗುಂಪುಗಳು ಮೃತನ ಧಾರ್ಮಿಕ ಗುರುತನ್ನು ಮುಂದಿಟ್ಟುಕೊಂಡು ಈ ಘಟನೆಯನ್ನು ಕೋಮು ದಾಳಿ ಎಂದು ಬಿಂಬಿಸಲು ಪ್ರಯತ್ನಿಸುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದೆ. ಅಂತಹ ಪ್ರಯತ್ನವು ಸಂಪೂರ್ಣ ಆಧಾರರಹಿತ ಮತ್ತು ದುರುದ್ದೇಶಪೂರಿತ ಎಂದು ಹೇಳಿದೆ.
ಗುಂಪು ಹಿಂಸಾಚಾರದಲ್ಲಿ ಭಾಗಿಯಾಗಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಭರವಸೆ ನೀಡಿದೆ. ಯಾವುದೇ ರೀತಿಯ ಕಾನೂನುಬಾಹಿರ ಚಟುವಟಿಕೆ ಅಥವಾ ಗುಂಪು ಹಿಂಸಾಚಾರವನ್ನು ಬೆಂಬಲಿಸುವುದಿಲ್ಲ ಎಂದು ಪುನರುಚ್ಚರಿಸಿದೆ.


