Homeಅಂತರಾಷ್ಟ್ರೀಯಪ್ಯಾಲೆಸ್ತೀನಿಯರಿಗೆ ಮರಣದಂಡನೆ : ಹೊಸ ಮಸೂದೆ ಅಂಗೀಕರಿಸಿದ ಇಸ್ರೇಲ್ ಸಂಸತ್ತು

ಪ್ಯಾಲೆಸ್ತೀನಿಯರಿಗೆ ಮರಣದಂಡನೆ : ಹೊಸ ಮಸೂದೆ ಅಂಗೀಕರಿಸಿದ ಇಸ್ರೇಲ್ ಸಂಸತ್ತು

- Advertisement -
- Advertisement -

ಇಸ್ರೇಲ್ ಸಂಸತ್ತು ಸೋಮವಾರ (ಮಾರ್ಚ್ 30, 2026) ಹೊಸ ಮಸೂದೆಯೊಂದನ್ನು ಅಂಗೀಕರಿಸಿದೆ. ಇದರ ಪ್ರಕಾರ, ಮಿಲಿಟರಿ ನ್ಯಾಯಾಲಯದಲ್ಲಿ ಮಾರಣಾಂತಿಕ ದಾಳಿಗಳ ಅಪರಾಧ ಸಾಬೀತಾದ ಪ್ಯಾಲೆಸ್ತೀನಿಯರಿಗೆ ಮರಣದಂಡನೆಯನ್ನು ಕಡ್ಡಾಯ ಶಿಕ್ಷೆಯನ್ನಾಗಿ ನಿಗದಿಪಡಿಸಲಾಗಿದೆ. ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ತೀವ್ರ ಬಲಪಂಥೀಯ ಮಿತ್ರಪಕ್ಷಗಳು ನೀಡಿದ್ದ ಪ್ರಮುಖ ಭರವಸೆಯನ್ನು ಈ ಮೂಲಕ ಈಡೇರಿಸಿದಂತಾಗಿದೆ.

ಹೊಸ ಕಾನೂನಿನಿಂದಾಗಿ ಇಸ್ರೇಲ್ ದೇಶವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಟೀಕೆಗೆ ಗುರಿಯಾಗಿದೆ. ಈಗಾಗಲೇ ಆಕ್ರಮಿತ ಪಶ್ಚಿಮ ದಂಡೆಯಲ್ಲಿ, ಇಸ್ರೇಲ್ ಸೇನೆ ಮತ್ತು ಅಲ್ಲಿನ ವಸಾಹತುಗಾರರು ಪ್ಯಾಲೆಸ್ತೀನಿಯರ ಮೇಲೆ ನಡೆಸುತ್ತಿರುವ ಹಿಂಸಾಚಾರ ಹೆಚ್ಚುತ್ತಿದೆ. ಈ ಕಾರಣದಿಂದಾಗಿ ಇಸ್ರೇಲ್ ಜಗತ್ತಿನಾದ್ಯಂತ ಹಲವು ದೇಶಗಳ ಕೆಂಗಣ್ಣಿಗೆ ಗುರಿಯಾಗಿವೆ.

ವರದಿಗಳ ಪ್ರಕಾರ, ಇಸ್ರೇಲ್ ಅಂಗೀಕರಿಸಿದ ಹೊಸ ಕಾನೂನಿನಡಿ ಅಪರಾಧಿಯನ್ನು ಶಿಕ್ಷೆ ಪ್ರಕಟವಾದ 90 ದಿನಗಳ ಒಳಗಾಗಿ ಗಲ್ಲಿಗೇರಿಸಬೇಕು. ಈ ಶಿಕ್ಷೆಯನ್ನು ರದ್ದುಗೊಳಿಸುವಂತೆ ಅಥವಾ ಕ್ಷಮಿಸುವಂತೆ ಕೇಳಿಕೊಳ್ಳುವ ಹಕ್ಕು ಅಪರಾಧಿಗೆ ಇರುವುದಿಲ್ಲ. ಕೆಲವು ಸಂದರ್ಭಗಳಲ್ಲಿ ಮರಣದಂಡನೆಗೆ ಬದಲಾಗಿ ಜೀವಾವಧಿ ಶಿಕ್ಷೆಯನ್ನು ನೀಡುವ ಅವಕಾಶವೂ ಇದೆ. ವಿಶೇಷ ಸಂದರ್ಭಗಳಲ್ಲಿ ಶಿಕ್ಷೆ ಜಾರಿಯನ್ನು ಸ್ವಲ್ಪ ದಿನ ಮುಂದೂಡಲು ಅವಕಾಶವಿದೆ.

ಹೊಸ ಕಾನೂನನ್ನು ಇಸ್ರೇಲ್‌ನ ತೀವ್ರ ಬಲಪಂಥೀಯ ರಾಷ್ಟ್ರೀಯ ಭದ್ರತಾ ಸಚಿವ ಇಟಮಾರ್ ಬೆನ್-ಗ್ವಿರ್ ಅವರು ರೂಪಿಸಿದ್ದಾರೆ. ವಿಶೇಷವೆಂದರೆ, ಈ ಕಾನೂನಿನ ಪರವಾಗಿ ಮತದಾನ ನಡೆಯುವ ಮುನ್ನ ಅವರು ತಮ್ಮ ಅಂಗಿಯ ಮೇಲೆ ‘ ನೇಣು ಕುಣಿಕೆ’ ಆಕಾರದ ಪಿನ್ ಧರಿಸುವ ಮೂಲಕ ಈ ಕಠಿಣ ಶಿಕ್ಷೆಯ ಪರವಾಗಿ ತಮ್ಮ ಬೆಂಬಲವನ್ನು ಪ್ರದರ್ಶಿಸಿದ್ದರು.

ಹೊಸ ಕಾನೂನು ಇಸ್ರೇಲ್‌ನ ಮಿತ್ರ ದೇಶಗಳಲ್ಲಿ (ವಿಶೇಷವಾಗಿ ಪಾಶ್ಚಿಮಾತ್ಯ ದೇಶಗಳಲ್ಲಿ) ಆತಂಕ ಮೂಡಿಸಿದೆ. ಪ್ರಧಾನಿ ನೆತನ್ಯಾಹು ಅವರ ನೇತೃತ್ವದ ‘ರಾಷ್ಟ್ರೀಯವಾದಿ-ಧಾರ್ಮಿಕ’ ಮೈತ್ರಿಕೂಟವು ಇತ್ತೀಚೆಗೆ ಕೈಗೊಳ್ಳುತ್ತಿರುವ ಸರಣಿ ನಿರ್ಧಾರಗಳಲ್ಲಿ ಇದೂ ಒಂದು. ಈಗಾಗಲೇ ಆಕ್ರಮಿತ ಪಶ್ಚಿಮ ದಂಡೆ ಪ್ರದೇಶದಲ್ಲಿ ಪ್ಯಾಲೆಸ್ತೀನಿಯರ ಮೇಲೆ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಅಸಮಾಧಾನ ಹೊಂದಿರುವ ಈ ಮಿತ್ರ ದೇಶಗಳು, ಈಗ ಈ ಮರಣದಂಡನೆ ಕಾನೂನಿನ ಬಗ್ಗೆಯೂ ತೀವ್ರ ಟೀಕೆ ವ್ಯಕ್ತಪಡಿಸಿವೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಎದುರಾಗಬಹುದಾದ ತೀವ್ರ ವಿರೋಧ ಮತ್ತು ಟೀಕೆಗಳನ್ನು ತಡೆಯುವ ಪ್ರಯತ್ನವಾಗಿ, ಈ ಕಾನೂನಿನ ಕೆಲವು ಕಠಿಣ ನಿಯಮಗಳನ್ನು ಸ್ವಲ್ಪ ಸಡಿಲಗೊಳಿಸುವಂತೆ ಪ್ರಧಾನಿ ನೆತನ್ಯಾಹು ಅವರು ಸೂಚಿಸಿದ್ದಾರೆ ಎಂದು ಇಸ್ರೇಲ್‌ನ ಮಾಧ್ಯಮಗಳು ವರದಿ ಮಾಡಿವೆ.

ಆರಂಭದಲ್ಲಿ ಸಿದ್ಧಪಡಿಸಿದ ಮಸೂದೆಯಲ್ಲಿ, ಪಶ್ಚಿಮ ದಂಡೆಯ ಮಿಲಿಟರಿ ನ್ಯಾಯಾಲಯಗಳಲ್ಲಿ ಭಯೋತ್ಪಾದನಾ ಕೃತ್ಯಗಳ ಅಪರಾಧ ಸಾಬೀತಾದ ಇಸ್ರೇಲೇತರ ನಾಗರಿಕರಿಗೆ (ಪ್ಯಾಲೆಸ್ತೀನಿಯರಿಗೆ) ಕಡ್ಡಾಯವಾಗಿ ಮರಣದಂಡನೆ ವಿಧಿಸಬೇಕು ಎಂದಿತ್ತು.

ಈಗ ಬದಲಾದ ಕಾನೂನಿನಲ್ಲಿ, ಮರಣದಂಡನೆಗೆ ಬದಲಾಗಿ ಜೀವಾವಧಿ ಶಿಕ್ಷೆಯನ್ನು ನೀಡುವ ಆಯ್ಕೆಯನ್ನೂ ಸೇರಿಸಲಾಗಿದೆ.

ಇಸ್ರೇಲ್‌ನ ಸಾಮಾನ್ಯ ನಾಗರಿಕ ನ್ಯಾಯಾಲಯಗಳಲ್ಲಿಯೂ ಈ ಹೊಸ ನಿಯಮ ಜಾರಿಗೆ ಬರಲಿದೆ. ನಾಗರಿಕ ನ್ಯಾಯಾಲಯಗಳ ಕಾನೂನು ಪ್ರಕಾರ, ಇಸ್ರೇಲ್ ದೇಶದ ಅಸ್ತಿತ್ವವನ್ನು ಅಳಿಸಿಹಾಕಬೇಕು ಎಂಬ ಕೆಟ್ಟ ಉದ್ದೇಶದಿಂದ ಯಾರನ್ನಾದರೂ ಕೊಲೆ ಮಾಡಿದವರಿಗೆ ಈ ಶಿಕ್ಷೆ ಅನ್ವಯವಾಗುತ್ತದೆ. ಅಂತಹ ಅಪರಾಧಿಗಳಿಗೆ ಕಡ್ಡಾಯವಾಗಿ ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆಯನ್ನು ನೀಡಲೇಬೇಕು ಎಂದು ಈ ಕಾನೂನು ಹೇಳುತ್ತದೆ.

ವಿವಿಧ ದೇಶಗಳು ಮತ್ತು ಮಾನವ ಹಕ್ಕು ಸಂಘಟನೆಗಳಿಂದ ವಿರೋಧ

ಇಸ್ರೇಲ್‌ನ ಹೊಸ ಕಾನೂನಿನ ಮೇಲೆ ಮತದಾನ ನಡೆಯುವ ಮೊದಲೇ, ಯುರೋಪಿನ ಪ್ರಮುಖ ದೇಶಗಳಾದ ಜರ್ಮನಿ, ಫ್ರಾನ್ಸ್, ಇಟಲಿ ಮತ್ತು ಬ್ರಿಟನ್ ವಿದೇಶಾಂಗ ಸಚಿವರು ಇದನ್ನು ತೀವ್ರವಾಗಿ ವಿರೋಧಿಸಿದ್ದರು.

ಈ ಕಾನೂನು ಮುಖ್ಯವಾಗಿ ಪ್ಯಾಲೆಸ್ತೀನಿಯರನ್ನು ಗುರಿಯಾಗಿಸಿಕೊಂಡಿದೆ, ಹಾಗಾಗಿ ಇದು ಒಂದು ಕಡೆಯ ಜನರನ್ನು ಮಾತ್ರ ಶಿಕ್ಷಿಸುವ ‘ತಾರತಮ್ಯದ ಕಾನೂನು’ ಎಂದು ಅವರು ಟೀಕಿಸಿದ್ದರು.

ಹೊಸ ಕಾನೂನನ್ನು ಜಾರಿಗೆ ತಂದರೆ, ಇಸ್ರೇಲ್ ದೇಶವು ಈವರೆಗೆ ಪಾಲಿಸಿಕೊಂಡು ಬಂದಿರುವ ಪ್ರಜಾಪ್ರಭುತ್ವದ ತತ್ವಗಳಿಗೆ ಧಕ್ಕೆ ಉಂಟಾಗುತ್ತದೆ. ಇಸ್ರೇಲ್ ಜಾಗತಿಕ ಮಟ್ಟದಲ್ಲಿ ಪ್ರಜಾಪ್ರಭುತ್ವ ರಾಷ್ಟ್ರವಾಗಿ ನೀಡಿರುವ ಭರವಸೆಗಳಿಗೆ ಈ ಕಾನೂನು ವಿರುದ್ಧವಾಗಿದೆ ಎಂದು ಜರ್ಮನಿ, ಫ್ರಾನ್ಸ್, ಇಟಲಿ ಮತ್ತು ಬ್ರಿಟನ್ ದೇಶಗಳ ವಿದೇಶಾಂಗ ಸಚಿವರು ಭಾನುವಾರ (ಮಾರ್ಚ್ 29, 2026) ಜಂಟಿ ಹೇಳಿಕೆ ನೀಡಿದ್ದಾರೆ.

ವಿಶ್ವಸಂಸ್ಥೆಯ ತಜ್ಞರ ತಂಡವೊಂದು ಈ ಕಾನೂನಿನ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಈ ಕಾನೂನಿನಲ್ಲಿ ‘ಭಯೋತ್ಪಾದಕ’ ಎಂಬ ಪದಕ್ಕೆ ನೀಡಿರುವ ವಿವರಣೆ ತುಂಬಾ ಅಸ್ಪಷ್ಟವಾಗಿದೆ ಮತ್ತು ಅತಿಯಾಗಿ ವಿಸ್ತರಿಸಲ್ಪಟ್ಟಿದೆ ಎಂದು ಅವರು ಹೇಳಿದ್ದಾರೆ.

ಇದರ ಅರ್ಥವೇನೆಂದರೆ, ನಿಜವಾಗಿ ಭಯೋತ್ಪಾದನಾ ಕೃತ್ಯವಲ್ಲದ ಸಾಮಾನ್ಯ ಪ್ರತಿಭಟನೆ ಅಥವಾ ನಡವಳಿಕೆಗಳಿಗೂ ಸಹ ಈ ಕಾನೂನಿನ ಅಡಿಯಲ್ಲಿ ಮರಣದಂಡನೆ ವಿಧಿಸುವ ಅಪಾಯವಿದೆ.

ಇಸ್ರೇಲ್‌ನ ಸಚಿವ ಬೆನ್-ಗ್ವಿರ್, ಮರಣದಂಡನೆ ಶಿಕ್ಷೆ ಜಾರಿಗೆ ಬಂದರೆ ಪ್ಯಾಲೆಸ್ತೀನಿಯರು ಇಸ್ರೇಲಿಗಳ ಮೇಲೆ ದಾಳಿ ನಡೆಸಲು ಹೆದರುತ್ತಾರೆ ಎಂದು ವಾದಿಸಿದ್ದಾರೆ. ಇಸ್ರೇಲಿ ಜೈಲಿನಲ್ಲಿರುವ ಪ್ಯಾಲೆಸ್ತೀನಿಯನ್ ಕೈದಿಗಳನ್ನು ಬಿಡಿಸಿಕೊಳ್ಳುವ ಉದ್ದೇಶದಿಂದ ಇಸ್ರೇಲಿಗಳನ್ನು ಅಪಹರಿಸಿ, ನಂತರ ಅವರನ್ನು ಅದಲು-ಬದಲು (swap deals) ಮಾಡಿಕೊಳ್ಳುವ ಪ್ರಯತ್ನಗಳಿಗೆ ಈ ಕಾನೂನು ತಡೆ ಹಾಕುತ್ತದೆ ಎಂದು ಹೇಳಿದ್ದಾರೆ.

ಮಾನವ ಹಕ್ಕುಗಳ ಸಂಸ್ಥೆ ಅಮ್ನೆಸ್ಟಿ ಇಂಟರ್‌ ನ್ಯಾಷನಲ್ ಇಸ್ರೇಲ್‌ನ ಹೊಸ ಕಾನೂನನ್ನು ತೀವ್ರವಾಗಿ ವಿರೋಧಿಸಿದೆ. ಅಪರಾಧಗಳನ್ನು ಕಡಿಮೆ ಮಾಡುವಲ್ಲಿ ಮರಣದಂಡನೆಯು ಜೀವಾವಧಿ ಶಿಕ್ಷೆಗಿಂತ ಹೆಚ್ಚು ಪರಿಣಾಮಕಾರಿ ಎಂಬುದಕ್ಕೆ ಯಾವುದೇ ಆಧಾರ ಅಥವಾ ಸಾಕ್ಷ್ಯಗಳಿಲ್ಲ ಎಂದಿದೆ.

ವರದಿಗ ಪ್ರಕಾರ, ಹೊಸ ಕಾನೂನು ಜಾರಿಯಾಗುವ ಹಂತದಲ್ಲಿದ್ದಾಗ, ಇಸ್ರೇಲ್‌ನ ಸ್ವಂತ ಭದ್ರತಾ ತಜ್ಞರು ಮತ್ತು ಕಾನೂನು ತಜ್ಞರು ಕೂಡ ಇದನ್ನು ವಿರೋಧಿಸಿದ್ದರು. ಈ ಕಾನೂನು ಇಸ್ರೇಲ್‌ನ ಮೂಲಭೂತ ಕಾನೂನುಗಳಿಗೆ ಅಥವಾ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಕಠಿಣ ಶಿಕ್ಷೆ ನೀಡುವುದರಿಂದ ಅಪರಾಧಗಳು ಕಡಿಮೆಯಾಗುತ್ತವೆ ಎನ್ನುವುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ, ಹಾಗಾಗಿ ಇದು ಪರಿಣಾಮಕಾರಿಯಲ್ಲ ಎಂದು ಅವರು ವಾದಿಸಿದ್ದಾರೆ.

ಇಸ್ರೇಲ್‌ನ ಮಾನವ ಹಕ್ಕುಗಳ ಸಂಘಟನೆಗಳು ಮತ್ತು ವಿರೋಧ ಪಕ್ಷದ ಸಂಸದರು ಈ ಹೊಸ ಕಾನೂನನ್ನು ವಿರೋಧಿಸಿದ್ದಾರೆ.

 



ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...