Homeಮುಖಪುಟಯುದ್ಧ ವಿರೋಧಿ ವಾಟ್ಸಾಪ್ ಸ್ಟೇಟಸ್ : ಬಲಪಂಥೀಯರ ಕೆಂಗಣ್ಣಿಗೆ ಗುರಿಯಾಗಿದ್ದ ದಲಿತ ಪ್ರಾಧ್ಯಾಪಕಿ ವಜಾ

ಯುದ್ಧ ವಿರೋಧಿ ವಾಟ್ಸಾಪ್ ಸ್ಟೇಟಸ್ : ಬಲಪಂಥೀಯರ ಕೆಂಗಣ್ಣಿಗೆ ಗುರಿಯಾಗಿದ್ದ ದಲಿತ ಪ್ರಾಧ್ಯಾಪಕಿ ವಜಾ

- Advertisement -
- Advertisement -

ಭಾರತೀಯ ಸೇನೆಯ ಆಪರೇಷನ್ ಸಿಂಧೂರ್ ವೇಳೆ ಯುದ್ಧ ವಿರೋಧಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದ ಚೆನ್ನೈನ ಎಸ್‌ಆರ್‌ಎಂ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಲೋರಾ ಶಾಂತಕುಮಾರ್ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಎಸ್‌ಆರ್‌ಎಂನ ಆಂತರಿಕ ಸಮಿತಿಯ ವರದಿಯು ಲೋರಾ ‘ಗಂಭೀರ ತಪ್ಪು’ ಮಾಡಿದ್ದಾರೆ ಎಂದು ಹೇಳಿದೆ.

ವಿಶ್ವವಿದ್ಯಾನಿಲಯದ ವೃತ್ತಿ ಅಭಿವೃದ್ಧಿ ಕೇಂದ್ರದಲ್ಲಿ (ಸಿಡಿಸಿ) ಕೆಲಸ ಮಾಡುತ್ತಿದ್ದ ಲೋರಾ ಅವರು, ಕಳೆದ ಮೇ ತಿಂಗಳಲ್ಲಿ ಭಾರತೀಯ ಸೇನೆ ಅಪರೇಷನ್ ಸಿಂಧೂರ್ ಕೈಗೊಂಡಾಗ ಶಾಂತಿಗಾಗಿ ಕರೆ ನೀಡುವ ಸರಣಿ ವಾಟ್ಸಾಪ್ ಸ್ಟೇಟಸ್‌ಗಳನ್ನು ಪೋಸ್ಟ್ ಮಾಡಿದ್ದರು. ಆ ಬಳಿಕ ವಿದ್ಯಾರ್ಥಿಗಳು ಅವರನ್ನು ಅಪಹಾಸ್ಯ ಮಾಡಲು ಶುರು ಮಾಡಿದ್ದರು ಎಂದು ಆರೋಪಿಸಲಾಗಿದೆ.

“ನಮಗೆ ದೊರೆತ ಲೋರಾ ಅವರ ವಜಾ ಆದೇಶದಲ್ಲಿ, ಎಸ್‌ಆರ್‌ಎಂಐಎಸ್‌ಟಿಯ ಸಹಾಯಕ ಪ್ರಾಧ್ಯಾಪಕಿ ಎಂಬ ಹೆಸರಿನಲ್ಲಿ ಲೋರಾ ಸಶಸ್ತ್ರ ಪಡೆಗಳನ್ನು ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಾಕಿದ್ದಾರೆ. ಆದ್ದರಿಂದ, ಅವರು ಸಂಸ್ಥೆಯಲ್ಲಿ ತಮ್ಮ ಕೆಲಸ ಮುಂದುವರಿಸಲು ಅನರ್ಹರಾಗಿದ್ದಾರೆ ಮತ್ತು ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ವಜಾಗೊಳಿಸಲಾಗಿದೆ ಎಂಬುವುದಾಗಿ ಹೇಳಲಾಗಿದೆ” ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.

ಲೋರಾ ಅವರ ಪೋಸ್ಟ್ ಕುರಿತು ಆಂತರಿಕ ವಿಚಾರಣಾ ಸಮಿತಿಯನ್ನು ಎಸ್‌ಆರ್‌ಎಂಐಎಸ್‌ಟಿಯ ವಿದ್ಯಾರ್ಥಿ ವ್ಯವಹಾರಗಳ ನಿರ್ದೇಶಕಿ ಡಾ. ನಿಶಾ ಅಶೋಕನ್ ಅವರ ನೇತೃತ್ವದಲ್ಲಿ ರಚಿಸಲಾಗಿತ್ತು. ವಿದ್ಯಾರ್ಥಿ ವ್ಯವಹಾರಗಳ ಉಪನಿರ್ದೇಶಕ ಡಾ. ಪ್ರಿನ್ಸ್ ಕಲ್ಯಾಣಸುಂದರಂ ಸಮಿತಿಯ ನಿರೂಪಕ ಅಧಿಕಾರಿಯಾಗಿದ್ದರು.

ಜುಲೈ 15ರಿಂದ ಸೆಪ್ಟೆಂಬರ್ 26 ರವರೆಗೆ ಕಟ್ಟಂಕುಲತ್ತೂರ್ ಎಸ್‌ಆರ್‌ಎಂ ಕ್ಯಾಂಪಸ್‌ನಲ್ಲಿ ವಿಚಾರಣೆ ನಡೆದಿದೆ. ಸಮಿತಿಯು ಅಕ್ಟೋಬರ್ 30ರಂದು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್‌ಗೆ ತನ್ನ ವರದಿಯನ್ನು ಸಲ್ಲಿಸಿದೆ.

ದಲಿತ ಕ್ರಿಶ್ಚಿಯನ್ ಆಗಿರುವ ಲೋರಾ ಅವರ ವಾಟ್ಸಾಪ್ ಸ್ಟೇಟಸ್, ಫೋನ್ ನಂಬರ್ ಮತ್ತು ಫೋಟೋ ಬಲಪಂಥೀಯ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಿಗೆ ಸೋರಿಕೆಯಾದ ನಂತರ, ಅವರನ್ನು ಮೇ 8ರಂದು ಮೊದಲು ಅಮಾನತುಗೊಳಿಸಲಾಗಿತ್ತು.

ಲೋರಾ ಅವರಿಗೆ ಆನ್‌ಲೈನ್ ನಿಂದನೆ, ಬೆದರಿಕೆ ಫೋನ್ ಕರೆಗಳು ಮತ್ತು ಕೊಲೆ ಬೆದರಿಕೆಗಳು ಬಂದಿವೆ. ಅವರಿಗೆ ರಾಷ್ಟ್ರವಿರೋಧಿ ಎಂದು ಹಣೆಪಟ್ಟಿ ಕಟ್ಟಲಾಗಿದೆ ಮತ್ತು ಭಾರತೀಯ ಸೇನೆಯ ವಿರುದ್ಧ ಮಾತನಾಡಿದ ಆರೋಪ ಹೊರಿಸಲಾಗಿದೆ. ಇದಲ್ಲದೆ, ತನ್ನನ್ನು ತಾನು ರಕ್ಷಿಸಿಕೊಳ್ಳಲು ಚೆನ್ನೈನಲ್ಲಿರುವ ಮನೆಯನ್ನು ಖಾಲಿ ಮಾಡಿ ಸ್ವಂತ ಊರು ಕಲ್ಲಕುರಿಚಿಗೆ ಹಿಂತಿರುಗುವಂತೆ ಒತ್ತಾಯಿಸಲಾಗಿದೆ ಎಂದು ದಿ ನ್ಯೂಸ್‌ ಮಿನಿಟ್ ವರದಿ ವಿವರಿಸಿದೆ.

ಮೇ 7, 2025ರಂದು ಭಾರತ-ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ಇದ್ದಾಗ, ಲೋರಾ ಅವರು ಯುದ್ದೋನ್ಮಾದವನ್ನು ತೀವ್ರವಾಗಿ ವಿರೋಧಿಸಿ ವಾಟ್ಸಾಪ್ ಸ್ಟೇಟಸ್ ಹಾಕಿದ್ದರು. ಯುದ್ಧದಲ್ಲಿ ಮನುಷ್ಯರು ಸಾಯುತ್ತಾರೆ, ಕುಟುಂಬಗಳು ಒಡೆಯುತ್ತವೆ, ಆ ಮಾನವೀಯ ನಷ್ಟವನ್ನು ಮರೆಯಬೇಡಿ ಎಂದು ಜನರಿಗೆ ಮನವಿ ಮಾಡಿದ್ದರು. ಯುದ್ಧ ಪ್ರಚಾರ ಹೇಗೆ ಜನರನ್ನು ಮೋಸ ಮಾಡುತ್ತದೆ ಎಂಬುದನ್ನು ಹೇಳುವ ಜಾರ್ಜ್ ಆರ್ವೆಲ್ ಅವರ ಪ್ರಸಿದ್ಧ ಉಲ್ಲೇಖವನ್ನು ಅವರು ಹಂಚಿಕೊಂಡಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಭಾರತೀಯ ಸೇನಾಧಿಕಾರಿಗಳ ಹೆಸರಿನಲ್ಲಿ ಮಾಡಿದ ನಕಲಿ ಖಾತೆಗಳನ್ನು ಗುರುತಿಸಿ, ಇವು ನಕಲಿ ಖಾತೆಗಳು, ಇವುಗಳ ಪೋಸ್ಟ್‌ಗಳನ್ನು ಶೇರ್ ಮಾಡಬೇಡಿ, ಯುದ್ಧದ ಉನ್ಮಾದವನ್ನು ಹೆಚ್ಚಿಸಬೇಡಿ ಎಂದು ಎಲ್ಲರಿಗೂ ಎಚ್ಚರಿಕೆ ನೀಡಿದ್ದರು. ಸತ್ಯ-ಅಸತ್ಯವನ್ನು ಪರಿಶೀಲಿಸಿ (ಫ್ಯಾಕ್ಟ್-ಚೆಕ್) ಸರಿಯಾದ ಮಾಹಿತಿಯನ್ನು ಮಾತ್ರ ಹರಡಿ ಎಂದು ಎಂದು ಕೋರಿದ್ದರು ಎನ್ನಲಾಗಿದೆ.

ಲೋರಾ ಅವರು ಒಟ್ಟು 12 ಸಂದೇಶಗಳನ್ನು ವಾಟ್ಸಾಪ್ ಸ್ಟೇಟಸ್‌ನಲ್ಲಿ ಹಾಕಿದ್ದರು. ಇವೆಲ್ಲವೂ ಯುದ್ಧದ ವಿರುದ್ಧ ಮತ್ತು ಶಾಂತಿಯ ಪರವಾಗಿದ್ದವು. ಆದರೆ, ಅವುಗಳಲ್ಲಿ ಕೇವಲ ಎರಡು ಸಂದೇಶಗಳು ಮಾತ್ರ ಸಾರ್ವಜನಿಕವಾಗಿ (ಸ್ಕ್ರೀನ್‌ಶಾಟ್ ಆಗಿ) ಹರಿದಾಡಿದ್ದವು. ಒಂದು ಸಂದೇಶದಲ್ಲಿ ಆರ್ಥಿಕ ಸ್ಥಗಿತದಿಂದ ಹಿಡಿದು ಜೀವಹಾನಿಯವರೆಗೆ ಯುದ್ಧದ ನಿಜ ಜೀವನದ ಪರಿಣಾಮಗಳನ್ನು ಪಟ್ಟಿ ಮಾಡಿದ್ದರು. ಮತ್ತು ಇನ್ನೊಂದು ಸಂದೇಶದಲ್ಲಿ ಯುದ್ದದಲ್ಲಿ ನಾಗರಿಕರ ಹತ್ಯೆಯನ್ನು ಟೀಕಿಸಿದ್ದರು. ಅದನ್ನು ಧೈರ್ಯಕ್ಕಿಂತ ಹೇಡಿತನ ಎಂದು ಕರೆದಿದ್ದರು.

ಆಂತರಿಕ ವಿಚಾರಣೆಯ ಸಮಯದಲ್ಲಿ ಲೋರಾ ವಿರುದ್ಧ 5 ಆರೋಪಗಳನ್ನು ಹೊರಿಸಲಾಗಿದೆ ಮತ್ತು ಜೂನ್ 16ರಂದು ಅವರ ವಿರುದ್ಧ ಚಾರ್ಜ್ ಮೆಮೊ ಹೊರಡಿಸಲಾಗಿತ್ತು. ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಭಾರತದ ಸಶಸ್ತ್ರ ಪಡೆಗಳ ವಿರುದ್ಧ ಪೋಸ್ಟ್ ಹಾಕಿದ್ದಾರೆ ಎಂದು ಚಾರ್ಜ್ ಮೆಮೊದಲ್ಲಿ ಆರೋಪಿಸಲಾಗಿತ್ತು. ರಾಷ್ಟ್ರೀಯ ಹಿತಾಸಕ್ತಿಗಳಿಗೆ ವಿರುದ್ಧವಾಗಿ ವರ್ತಿಸಿದ್ದಾರೆ ಮತ್ತು ದೇಶಭಕ್ತಿಯ ಕೊರತೆಯನ್ನು ಹೊಂದಿದ್ದಾರೆ ಎಂಬ ಆರೋಪವನ್ನೂ ಅವರ ಮೇಲೆ ಹೊರಿಸಲಾಗಿತ್ತು.

ಲೋರಾ ಅವರ ಕೃತ್ಯವು ರಾಷ್ಟ್ರದ ಹಿತಾಸಕ್ತಿಗಳಿಗೆ ವಿರುದ್ಧವಾದ ಕ್ರಮವಾಗಿದೆ ಮತ್ತು ಸಂಸ್ಥೆಯ ಸೌಹಾರ್ದಯುತ ವಾತಾವರಣ ಮತ್ತು ಸುಗಮ ಕಾರ್ಯನಿರ್ವಹಣೆಗೆ ಅಡ್ಡಿಪಡಿಸುತ್ತದೆ. ಅಲ್ಲದೆ, ಸಂಸ್ಥೆಯ ಖ್ಯಾತಿಗೆ ಹಾನಿಕಾರಕ ಕಾನೂನು ಪರಿಣಾಮಗಳನ್ನು ಆಹ್ವಾನಿಸುತ್ತದೆ ಮತ್ತು ಇದು ದೊಡ್ಡ ದುಷ್ಕೃತ್ಯವಾಗಿದೆ. ಇದಲ್ಲದೆ, ಅವರು ‘ಕ್ರಿಮಿನಲ್’ ಆಗಿರುವ ಸಮಾಜವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆಂದು ಆರೋಪ ಹೊರಿಸಲಾಗಿದೆ. ಇದನ್ನು ಸಮಿತಿಯು ‘ಪ್ರಮುಖ ದುಷ್ಕೃತ್ಯ’ ಎಂದು ಪರಿಗಣಿಸಿದೆ.

ಲೋರಾ ಅವರು ಈ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ. ನಾನು ರಾಷ್ಟ್ರ ವಿರೋಧಿ ಸ್ಟೇಟಸ್ ಹಾಕಿಲ್ಲ, ಅವುಗಳನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ವಿಶ್ವವಿದ್ಯಾನಿಲಯಕ್ಕೆ ತಾನು ಅಪಖ್ಯಾತಿ ತಂದಿದ್ದೇನೆ ಎಂಬ ಆರೋಪವನ್ನು ತಳ್ಳಿ ಹಾಕಿದ್ದು, ನನ್ನ ಪೋಸ್ಟ್‌ಗಳಲ್ಲಿ ನಾನು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕಿ ಎಂದು ಗುರುತಿಸಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಾನು ಸ್ಟೇಟಸ್ ಪೋಸ್ಟ್ ಮಾಡಿದ ವಾಟ್ಸಾಪ್ ಸಂಖ್ಯೆ ವೈಯಕ್ತಿಕವಾಗಿದ್ದು, ವಿಶ್ವವಿದ್ಯಾನಿಲಯಕ್ಕೆ ಯಾವುದೇ ರೀತಿಯಲ್ಲಿ ಸಂಬಂಧಿಸಿಲ್ಲ ಎಂದು ಹೇಳಿದ್ದಾರೆ. ನನ್ನ ಹೇಳಿಕೆಗಳನ್ನು ಅಥವಾ ಸ್ಟೇಟಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿಲ್ಲ, ಬದಲಿಗೆ ತಾತ್ಕಾಲಿಕ ಸ್ವರೂಪದ ವೈಯಕ್ತಿಕ ವಾಟ್ಸಾಪ್ ಸ್ಟೇಟಸ್ ಪೋಸ್ಟ್ ಮಾಡಿದ್ದೆ ಎಂದು ತಿಳಿಸಿದ್ದಾರೆ.

ಲೋರಾ ಅವರ ವಿರುದ್ಧ ಹೊರಿಸಲಾಗಿದ್ದ ಒಟ್ಟು 5 ಆರೋಪಗಳೂ ಸಾಬೀತಾಗಿವೆ. ಎಲ್ಲಾ ಆರೋಪಗಳಿಗೂ ಒಂದೇ ರೀತಿಯ ತೀರ್ಪು ನೀಡಲಾಗಿದೆ ಎಂದು ಆಂತರಿಕ ತನಿಖಾ ಸಮಿತಿ ಹೇಳಿದೆ.

ಈ ಪ್ರಕರಣದಲ್ಲಿ ಮೇಲ್ಮನವಿ ಪ್ರಾಧಿಕಾರವಾಗಿರುವ ಉಪಕುಲಪತಿಗಳಿಗೆ ಮೇಲ್ಮನವಿ ಸಲ್ಲಿಸಲು ಎಸ್‌ಆರ್‌ಎಂ ವಿಶ್ವವಿದ್ಯಾಲಯವು ಲೋರಾ ಅವರಿಗೆ 30 ದಿನಗಳ ಕಾಲಾವಕಾಶ ನೀಡಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೆಲಸದ ಅವಧಿ ಬಳಿಕ ಯಾವುದೇ ಕರೆಗಳು, ಇಮೇಲ್‌ಗಳಿಗೆ ಉತ್ತರಿಸಬೇಕಿಲ್ಲ : ಸಂಪರ್ಕ ಕಡಿತ ಹಕ್ಕು ಮಸೂದೆ ಹೇಳುವುದೇನು?

ದೇಶದಲ್ಲಿ ಕಾರ್ಪೋರೇಟ್ ಸಂಸ್ಥೆಗಳು ಉದ್ಯೋಗಿಗಳ ಮೇಲೆ ಅತೀವ ಕೆಲಸದ ಹೊರೆಯನ್ನು ಹೇರಿ ಅವರ ಖಾಸಗಿ ಜೀವನವನ್ನು ಕಿತ್ತುಕೊಳ್ಳುವ ಮೂಲಕ ಮಾನಸಿಕ ಒತ್ತಡಕ್ಕೆ ತಳ್ಳುತ್ತಿರುವ ಪರಿಸ್ಥಿತಿ ಗಂಭೀರ ಹಂತಕ್ಕೆ ತಲುಪಿದೆ. ಅದಾಗ್ಯೂ ಕೆಲ ಕಾರ್ಪೋರೇಟ್‌...

ಗಾಝಾದಲ್ಲಿ ಕದನ ವಿರಾಮ : ಎರಡು ವರ್ಷಗಳ ಬಳಿಕ ಬೆಥ್ಲೆಹೆಮ್‌ನಲ್ಲಿ ಮರುಕಳಿಸಿದ ಕ್ರಿಸ್‌ಮಸ್ ಸಂಭ್ರಮ

ಗಾಝಾದಲ್ಲಿ ಕದನ ವಿರಾಮ ಜಾರಿಯಾಗಿರುವ ಹಿನ್ನೆಲೆ, ಎರಡು ವರ್ಷಗಳ ನಂತರ ಈ ಬಾರಿ ಯೇಸು ಕ್ರಿಸ್ತನ ಜನ್ಮಸ್ಥಳ ಜೆರುಸಲೇಂನ ಬೆಥ್ಲೆಹೆಮ್‌ನಲ್ಲಿ ಕ್ರಿಸ್‌ಮಸ್‌ ಸಂಭ್ರಮಾಚರಣೆ ಮರುಕಳಿಸಿದೆ. ಶನಿವಾರ (ಡಿಸೆಂಬರ್ 6) ಬೆಥ್ಲೆಹೆಮ್‌ನ ಮ್ಯಾಂಗರ್ ಸ್ಕ್ವೇರ್‌ನಲ್ಲಿರುವ ಚರ್ಚ್...

ರಾಷ್ಟ್ರವ್ಯಾಪಿ ವಿಮಾನಯಾನ ಬಿಕ್ಕಟ್ಟು : ಜೆಪಿಸಿ ವಿಚಾರಣೆ ಕೋರಿ ಪ್ರಧಾನಿಗೆ ಪತ್ರ ಬರೆದ ಸಂಸದ ಜಾನ್ ಬ್ರಿಟ್ಟಾಸ್

ಇಂಡಿಗೋ ವಿಮಾನಗಳ ಹಾರಾಟ ವ್ಯತ್ಯಯದಿಂದ ಉಂಟಾದ ರಾಷ್ಟ್ರವ್ಯಾಪಿ ವಿಮಾನಯಾನ ಬಿಕ್ಕಟ್ಟಿನ ಕುರಿತು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ವಿಚಾರಣೆ ಅಥವಾ ನ್ಯಾಯಾಂಗ ತನಿಖೆ ಮಾಡಿಸುವಂತೆ ಕೋರಿ ರಾಜ್ಯಸಭಾ ಸಂಸದ ಜಾನ್ ಬ್ರಿಟ್ಟಾಸ್ ಪ್ರಧಾನಿ...

ಒಳಮೀಸಲಾತಿ : ಶೇ.17ರ ಪ್ರಮಾಣದಲ್ಲೇ ಮುಂದುವರಿಯಲು ಸರ್ಕಾರ ತೀರ್ಮಾನ?

ಒಳಮೀಸಲಾತಿಗೆ ಸಂಬಂಧಿಸಿದಂತೆ ಉಂಟಾಗಿರುವ ಕಗ್ಗಂಟನ್ನು ಎದುರಿಸಲು ಮುಂದಾಗಿರುವ ರಾಜ್ಯ ಸರ್ಕಾರ, ಶೇಕಡ 17ರ ಮೀಸಲಾತಿ ಪ್ರಮಾಣದಲ್ಲೇ ಮುಂದುವರಿಯಲು ತೀರ್ಮಾನಿಸಿರುವುದಾಗಿ ತಿಳಿದುಬಂದಿದೆ. ಶನಿವಾರ ಸಂಜೆ (ಡಿಸೆಂಬರ್ 6) ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ...

ಗೋವಾ ನೈಟ್ ಕ್ಲಬ್‌ನಲ್ಲಿ ಸಿಲಿಂಡರ್ ಸ್ಫೋಟ; 25 ಮಂದಿ ಸಾವು

ಉತ್ತರ ಗೋವಾದ ನೈಟ್‌ ಕ್ಲಬ್‌ವೊಂದರಲ್ಲಿ ಶನಿವಾರ (ಡಿಸೆಂಬರ್ 6) ತಡರಾತ್ರಿ ಸಂಭವಿಸಿದ ಸಿಲಿಂಡರ್ ಸ್ಫೋಟದಲ್ಲಿ ಕನಿಷ್ಠ 25 ಜನರು ಸಾವನ್ನಪ್ಪಿದ್ದು, ಆರು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಸಾವಿಗೀಡಾದವರಲ್ಲಿ ಹೆಚ್ಚಿನವರು ಕ್ಲಬ್‌ನ ಅಡುಗೆ ಸಿಬ್ಬಂದಿಯಾಗಿದ್ದು,...

ಮೈಸೂರು| ಒಳಮೀಸಲಾತಿ ಹೋರಾಟ ಹತ್ತಿಕ್ಕಲು ನಿಷೇಧಾಜ್ಞೆ ಹೇರಿದ ಕಾಂಗ್ರೆಸ್ ಸರ್ಕಾರ

ಪೂರ್ಣ ಪ್ರಮಾಣದ ಒಳಮೀಸಲಾತಿ ಜಾರಿಗೆ ಆಗ್ರಹಿಸಿ 'ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಹೋರಾಟ ಸಮಿತಿ' ನಡೆಸುತ್ತಿದ್ದ ಹೋರಾಟಕ್ಕೆ ಜಿಲ್ಲಾ ಪೊಲೀಸರು ಅನುಮತಿ ನಿರಾಕರಿಸಿದ್ದು, ಸಿದ್ದರಾಮನಹುಂಡಿಯಿಂದ ಮೈಸೂರಿಗೆ ಇಂದು ಪಾದಯಾತ್ರೆ ಆರಂಭಿಸಿದ ಹೋರಾಟಗಾರರನ್ನು...

‘ನಕಲಿ ಬ್ಯಾಂಕ್ ಗ್ಯಾರಂಟಿ’ ಪ್ರಕರಣ : ರಿಲಯನ್ಸ್ ಪವರ್, ಇತರ ಸಂಸ್ಥೆಗಳ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಿದ ಇಡಿ

ರಿಲಯನ್ಸ್ ಪವರ್ ಕಂಪನಿಯು ಭಾರತೀಯ ಸೌರಶಕ್ತಿ ನಿಗಮಕ್ಕೆ (ಎಸ್‌ಇಸಿಐ) ಟೆಂಡರ್ ಪಡೆಯಲು ಸಲ್ಲಿಸಿದ 68 ಕೋಟಿ ರೂಪಾಯಿಗಳ ನಕಲಿ ಬ್ಯಾಂಕ್ ಗ್ಯಾರಂಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಲಯನ್ಸ್ ಪವರ್ ಲಿಮಿಟೆಡ್ ಮತ್ತು ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್‌ನ...

ಉತ್ತರ ಪ್ರದೇಶ| ಬಾಬರಿ ಮಸೀದಿ ಮೇಲಿನ ದಾಳಿಗೆ 33 ವರ್ಷ; ಅಯೋಧ್ಯೆ-ವಾರಣಾಸಿಯಲ್ಲಿ ಬಿಗಿ ಭದ್ರತೆ

ಬಾಬರಿ ಮಸೀದಿ ಧ್ವಂಸವಾಗಿ 33ನೇ ವರ್ಷ ತುಂಬುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಅಯೋಧ್ಯೆ ಮತ್ತು ಉತ್ತರ ಪ್ರದೇಶದ ಇತರ ಪ್ರದೇಶಗಳಲ್ಲಿ ಭದ್ರತಾ ಪಡೆಗಳು ಜಾಗರೂಕರಾಗಿದ್ದು, ಎಲ್ಲಾ ಮಾರ್ಗಗಳಲ್ಲಿ ವಾಹನಗಳ ಸಂಪೂರ್ಣ ತಪಾಸಣೆ ನಡೆಸುತ್ತಿವೆ. ಈ ಕುರಿತು...

ನ್ಯಾಷನಲ್ ಹೆರಾಲ್ಡ್‌ಗೆ ದೇಣಿಗೆ: ‘ಡಿಕೆ’ ಸಹೋದರರಿಗೆ ಇಡಿ-ದೆಹಲಿ ಪೊಲೀಸರಿಂದ ಸಮನ್ಸ್

ನ್ಯಾಷನಲ್ ಹೆರಾಲ್ಡ್ ಮತ್ತು ಯಂಗ್ ಇಂಡಿಯಾ ಸಂಸ್ಥೆಗಳಿಗೆ ನೀಡಿದ ದೇಣಿಗೆಗಳಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಕೈಗೊಂಡಿರುವ ತನಿಖೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಮತ್ತು ಜಾರಿ ನಿರ್ದೇಶನಾಲಯವು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮತ್ತು...

ಇಂಡಿಗೋ ಹಾರಾಟದಲ್ಲಿ ಐದನೇ ದಿನವೂ ವ್ಯತ್ಯಯ: ವಿಮಾನ ದರಕ್ಕೆ ತಾತ್ಕಾಲಿಕ ಮಿತಿ ವಿಧಿಸಿದ ಕೇಂದ್ರ

ಇಂಡಿಗೋದ ದೇಶೀಯ ಕಾರ್ಯಾಚರಣೆಗಳು ಸತತ ಐದನೇ ದಿನವೂ ಅಸ್ತವ್ಯಸ್ತಗೊಂಡಿದ್ದರಿಂದ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಶನಿವಾರ (ಡಿಸೆಂಬರ್ 6) ವಿಮಾನ ಟಿಕೆಟ್ ದರಗಳ ಮೇಲೆ ತಾತ್ಕಾಲಿಕ ಮಿತಿಯನ್ನು ವಿಧಿಸಿದೆ. ನಿಗದಿತ ಮಾನದಂಡಗಳ ಯಾವುದೇ...