Homeಮುಖಪುಟಯುದ್ಧ ವಿರೋಧಿ ವಾಟ್ಸಾಪ್ ಸ್ಟೇಟಸ್ : ಬಲಪಂಥೀಯರ ಕೆಂಗಣ್ಣಿಗೆ ಗುರಿಯಾಗಿದ್ದ ದಲಿತ ಪ್ರಾಧ್ಯಾಪಕಿ ವಜಾ

ಯುದ್ಧ ವಿರೋಧಿ ವಾಟ್ಸಾಪ್ ಸ್ಟೇಟಸ್ : ಬಲಪಂಥೀಯರ ಕೆಂಗಣ್ಣಿಗೆ ಗುರಿಯಾಗಿದ್ದ ದಲಿತ ಪ್ರಾಧ್ಯಾಪಕಿ ವಜಾ

- Advertisement -
- Advertisement -

ಭಾರತೀಯ ಸೇನೆಯ ಆಪರೇಷನ್ ಸಿಂಧೂರ್ ವೇಳೆ ಯುದ್ಧ ವಿರೋಧಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದ ಚೆನ್ನೈನ ಎಸ್‌ಆರ್‌ಎಂ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಲೋರಾ ಶಾಂತಕುಮಾರ್ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಎಸ್‌ಆರ್‌ಎಂನ ಆಂತರಿಕ ಸಮಿತಿಯ ವರದಿಯು ಲೋರಾ ‘ಗಂಭೀರ ತಪ್ಪು’ ಮಾಡಿದ್ದಾರೆ ಎಂದು ಹೇಳಿದೆ.

ವಿಶ್ವವಿದ್ಯಾನಿಲಯದ ವೃತ್ತಿ ಅಭಿವೃದ್ಧಿ ಕೇಂದ್ರದಲ್ಲಿ (ಸಿಡಿಸಿ) ಕೆಲಸ ಮಾಡುತ್ತಿದ್ದ ಲೋರಾ ಅವರು, ಕಳೆದ ಮೇ ತಿಂಗಳಲ್ಲಿ ಭಾರತೀಯ ಸೇನೆ ಅಪರೇಷನ್ ಸಿಂಧೂರ್ ಕೈಗೊಂಡಾಗ ಶಾಂತಿಗಾಗಿ ಕರೆ ನೀಡುವ ಸರಣಿ ವಾಟ್ಸಾಪ್ ಸ್ಟೇಟಸ್‌ಗಳನ್ನು ಪೋಸ್ಟ್ ಮಾಡಿದ್ದರು. ಆ ಬಳಿಕ ವಿದ್ಯಾರ್ಥಿಗಳು ಅವರನ್ನು ಅಪಹಾಸ್ಯ ಮಾಡಲು ಶುರು ಮಾಡಿದ್ದರು ಎಂದು ಆರೋಪಿಸಲಾಗಿದೆ.

“ನಮಗೆ ದೊರೆತ ಲೋರಾ ಅವರ ವಜಾ ಆದೇಶದಲ್ಲಿ, ಎಸ್‌ಆರ್‌ಎಂಐಎಸ್‌ಟಿಯ ಸಹಾಯಕ ಪ್ರಾಧ್ಯಾಪಕಿ ಎಂಬ ಹೆಸರಿನಲ್ಲಿ ಲೋರಾ ಸಶಸ್ತ್ರ ಪಡೆಗಳನ್ನು ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಾಕಿದ್ದಾರೆ. ಆದ್ದರಿಂದ, ಅವರು ಸಂಸ್ಥೆಯಲ್ಲಿ ತಮ್ಮ ಕೆಲಸ ಮುಂದುವರಿಸಲು ಅನರ್ಹರಾಗಿದ್ದಾರೆ ಮತ್ತು ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ವಜಾಗೊಳಿಸಲಾಗಿದೆ ಎಂಬುವುದಾಗಿ ಹೇಳಲಾಗಿದೆ” ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.

ಲೋರಾ ಅವರ ಪೋಸ್ಟ್ ಕುರಿತು ಆಂತರಿಕ ವಿಚಾರಣಾ ಸಮಿತಿಯನ್ನು ಎಸ್‌ಆರ್‌ಎಂಐಎಸ್‌ಟಿಯ ವಿದ್ಯಾರ್ಥಿ ವ್ಯವಹಾರಗಳ ನಿರ್ದೇಶಕಿ ಡಾ. ನಿಶಾ ಅಶೋಕನ್ ಅವರ ನೇತೃತ್ವದಲ್ಲಿ ರಚಿಸಲಾಗಿತ್ತು. ವಿದ್ಯಾರ್ಥಿ ವ್ಯವಹಾರಗಳ ಉಪನಿರ್ದೇಶಕ ಡಾ. ಪ್ರಿನ್ಸ್ ಕಲ್ಯಾಣಸುಂದರಂ ಸಮಿತಿಯ ನಿರೂಪಕ ಅಧಿಕಾರಿಯಾಗಿದ್ದರು.

ಜುಲೈ 15ರಿಂದ ಸೆಪ್ಟೆಂಬರ್ 26 ರವರೆಗೆ ಕಟ್ಟಂಕುಲತ್ತೂರ್ ಎಸ್‌ಆರ್‌ಎಂ ಕ್ಯಾಂಪಸ್‌ನಲ್ಲಿ ವಿಚಾರಣೆ ನಡೆದಿದೆ. ಸಮಿತಿಯು ಅಕ್ಟೋಬರ್ 30ರಂದು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್‌ಗೆ ತನ್ನ ವರದಿಯನ್ನು ಸಲ್ಲಿಸಿದೆ.

ದಲಿತ ಕ್ರಿಶ್ಚಿಯನ್ ಆಗಿರುವ ಲೋರಾ ಅವರ ವಾಟ್ಸಾಪ್ ಸ್ಟೇಟಸ್, ಫೋನ್ ನಂಬರ್ ಮತ್ತು ಫೋಟೋ ಬಲಪಂಥೀಯ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಿಗೆ ಸೋರಿಕೆಯಾದ ನಂತರ, ಅವರನ್ನು ಮೇ 8ರಂದು ಮೊದಲು ಅಮಾನತುಗೊಳಿಸಲಾಗಿತ್ತು.

ಲೋರಾ ಅವರಿಗೆ ಆನ್‌ಲೈನ್ ನಿಂದನೆ, ಬೆದರಿಕೆ ಫೋನ್ ಕರೆಗಳು ಮತ್ತು ಕೊಲೆ ಬೆದರಿಕೆಗಳು ಬಂದಿವೆ. ಅವರಿಗೆ ರಾಷ್ಟ್ರವಿರೋಧಿ ಎಂದು ಹಣೆಪಟ್ಟಿ ಕಟ್ಟಲಾಗಿದೆ ಮತ್ತು ಭಾರತೀಯ ಸೇನೆಯ ವಿರುದ್ಧ ಮಾತನಾಡಿದ ಆರೋಪ ಹೊರಿಸಲಾಗಿದೆ. ಇದಲ್ಲದೆ, ತನ್ನನ್ನು ತಾನು ರಕ್ಷಿಸಿಕೊಳ್ಳಲು ಚೆನ್ನೈನಲ್ಲಿರುವ ಮನೆಯನ್ನು ಖಾಲಿ ಮಾಡಿ ಸ್ವಂತ ಊರು ಕಲ್ಲಕುರಿಚಿಗೆ ಹಿಂತಿರುಗುವಂತೆ ಒತ್ತಾಯಿಸಲಾಗಿದೆ ಎಂದು ದಿ ನ್ಯೂಸ್‌ ಮಿನಿಟ್ ವರದಿ ವಿವರಿಸಿದೆ.

ಮೇ 7, 2025ರಂದು ಭಾರತ-ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ಇದ್ದಾಗ, ಲೋರಾ ಅವರು ಯುದ್ದೋನ್ಮಾದವನ್ನು ತೀವ್ರವಾಗಿ ವಿರೋಧಿಸಿ ವಾಟ್ಸಾಪ್ ಸ್ಟೇಟಸ್ ಹಾಕಿದ್ದರು. ಯುದ್ಧದಲ್ಲಿ ಮನುಷ್ಯರು ಸಾಯುತ್ತಾರೆ, ಕುಟುಂಬಗಳು ಒಡೆಯುತ್ತವೆ, ಆ ಮಾನವೀಯ ನಷ್ಟವನ್ನು ಮರೆಯಬೇಡಿ ಎಂದು ಜನರಿಗೆ ಮನವಿ ಮಾಡಿದ್ದರು. ಯುದ್ಧ ಪ್ರಚಾರ ಹೇಗೆ ಜನರನ್ನು ಮೋಸ ಮಾಡುತ್ತದೆ ಎಂಬುದನ್ನು ಹೇಳುವ ಜಾರ್ಜ್ ಆರ್ವೆಲ್ ಅವರ ಪ್ರಸಿದ್ಧ ಉಲ್ಲೇಖವನ್ನು ಅವರು ಹಂಚಿಕೊಂಡಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಭಾರತೀಯ ಸೇನಾಧಿಕಾರಿಗಳ ಹೆಸರಿನಲ್ಲಿ ಮಾಡಿದ ನಕಲಿ ಖಾತೆಗಳನ್ನು ಗುರುತಿಸಿ, ಇವು ನಕಲಿ ಖಾತೆಗಳು, ಇವುಗಳ ಪೋಸ್ಟ್‌ಗಳನ್ನು ಶೇರ್ ಮಾಡಬೇಡಿ, ಯುದ್ಧದ ಉನ್ಮಾದವನ್ನು ಹೆಚ್ಚಿಸಬೇಡಿ ಎಂದು ಎಲ್ಲರಿಗೂ ಎಚ್ಚರಿಕೆ ನೀಡಿದ್ದರು. ಸತ್ಯ-ಅಸತ್ಯವನ್ನು ಪರಿಶೀಲಿಸಿ (ಫ್ಯಾಕ್ಟ್-ಚೆಕ್) ಸರಿಯಾದ ಮಾಹಿತಿಯನ್ನು ಮಾತ್ರ ಹರಡಿ ಎಂದು ಎಂದು ಕೋರಿದ್ದರು ಎನ್ನಲಾಗಿದೆ.

ಲೋರಾ ಅವರು ಒಟ್ಟು 12 ಸಂದೇಶಗಳನ್ನು ವಾಟ್ಸಾಪ್ ಸ್ಟೇಟಸ್‌ನಲ್ಲಿ ಹಾಕಿದ್ದರು. ಇವೆಲ್ಲವೂ ಯುದ್ಧದ ವಿರುದ್ಧ ಮತ್ತು ಶಾಂತಿಯ ಪರವಾಗಿದ್ದವು. ಆದರೆ, ಅವುಗಳಲ್ಲಿ ಕೇವಲ ಎರಡು ಸಂದೇಶಗಳು ಮಾತ್ರ ಸಾರ್ವಜನಿಕವಾಗಿ (ಸ್ಕ್ರೀನ್‌ಶಾಟ್ ಆಗಿ) ಹರಿದಾಡಿದ್ದವು. ಒಂದು ಸಂದೇಶದಲ್ಲಿ ಆರ್ಥಿಕ ಸ್ಥಗಿತದಿಂದ ಹಿಡಿದು ಜೀವಹಾನಿಯವರೆಗೆ ಯುದ್ಧದ ನಿಜ ಜೀವನದ ಪರಿಣಾಮಗಳನ್ನು ಪಟ್ಟಿ ಮಾಡಿದ್ದರು. ಮತ್ತು ಇನ್ನೊಂದು ಸಂದೇಶದಲ್ಲಿ ಯುದ್ದದಲ್ಲಿ ನಾಗರಿಕರ ಹತ್ಯೆಯನ್ನು ಟೀಕಿಸಿದ್ದರು. ಅದನ್ನು ಧೈರ್ಯಕ್ಕಿಂತ ಹೇಡಿತನ ಎಂದು ಕರೆದಿದ್ದರು.

ಆಂತರಿಕ ವಿಚಾರಣೆಯ ಸಮಯದಲ್ಲಿ ಲೋರಾ ವಿರುದ್ಧ 5 ಆರೋಪಗಳನ್ನು ಹೊರಿಸಲಾಗಿದೆ ಮತ್ತು ಜೂನ್ 16ರಂದು ಅವರ ವಿರುದ್ಧ ಚಾರ್ಜ್ ಮೆಮೊ ಹೊರಡಿಸಲಾಗಿತ್ತು. ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಭಾರತದ ಸಶಸ್ತ್ರ ಪಡೆಗಳ ವಿರುದ್ಧ ಪೋಸ್ಟ್ ಹಾಕಿದ್ದಾರೆ ಎಂದು ಚಾರ್ಜ್ ಮೆಮೊದಲ್ಲಿ ಆರೋಪಿಸಲಾಗಿತ್ತು. ರಾಷ್ಟ್ರೀಯ ಹಿತಾಸಕ್ತಿಗಳಿಗೆ ವಿರುದ್ಧವಾಗಿ ವರ್ತಿಸಿದ್ದಾರೆ ಮತ್ತು ದೇಶಭಕ್ತಿಯ ಕೊರತೆಯನ್ನು ಹೊಂದಿದ್ದಾರೆ ಎಂಬ ಆರೋಪವನ್ನೂ ಅವರ ಮೇಲೆ ಹೊರಿಸಲಾಗಿತ್ತು.

ಲೋರಾ ಅವರ ಕೃತ್ಯವು ರಾಷ್ಟ್ರದ ಹಿತಾಸಕ್ತಿಗಳಿಗೆ ವಿರುದ್ಧವಾದ ಕ್ರಮವಾಗಿದೆ ಮತ್ತು ಸಂಸ್ಥೆಯ ಸೌಹಾರ್ದಯುತ ವಾತಾವರಣ ಮತ್ತು ಸುಗಮ ಕಾರ್ಯನಿರ್ವಹಣೆಗೆ ಅಡ್ಡಿಪಡಿಸುತ್ತದೆ. ಅಲ್ಲದೆ, ಸಂಸ್ಥೆಯ ಖ್ಯಾತಿಗೆ ಹಾನಿಕಾರಕ ಕಾನೂನು ಪರಿಣಾಮಗಳನ್ನು ಆಹ್ವಾನಿಸುತ್ತದೆ ಮತ್ತು ಇದು ದೊಡ್ಡ ದುಷ್ಕೃತ್ಯವಾಗಿದೆ. ಇದಲ್ಲದೆ, ಅವರು ‘ಕ್ರಿಮಿನಲ್’ ಆಗಿರುವ ಸಮಾಜವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆಂದು ಆರೋಪ ಹೊರಿಸಲಾಗಿದೆ. ಇದನ್ನು ಸಮಿತಿಯು ‘ಪ್ರಮುಖ ದುಷ್ಕೃತ್ಯ’ ಎಂದು ಪರಿಗಣಿಸಿದೆ.

ಲೋರಾ ಅವರು ಈ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ. ನಾನು ರಾಷ್ಟ್ರ ವಿರೋಧಿ ಸ್ಟೇಟಸ್ ಹಾಕಿಲ್ಲ, ಅವುಗಳನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ವಿಶ್ವವಿದ್ಯಾನಿಲಯಕ್ಕೆ ತಾನು ಅಪಖ್ಯಾತಿ ತಂದಿದ್ದೇನೆ ಎಂಬ ಆರೋಪವನ್ನು ತಳ್ಳಿ ಹಾಕಿದ್ದು, ನನ್ನ ಪೋಸ್ಟ್‌ಗಳಲ್ಲಿ ನಾನು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕಿ ಎಂದು ಗುರುತಿಸಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಾನು ಸ್ಟೇಟಸ್ ಪೋಸ್ಟ್ ಮಾಡಿದ ವಾಟ್ಸಾಪ್ ಸಂಖ್ಯೆ ವೈಯಕ್ತಿಕವಾಗಿದ್ದು, ವಿಶ್ವವಿದ್ಯಾನಿಲಯಕ್ಕೆ ಯಾವುದೇ ರೀತಿಯಲ್ಲಿ ಸಂಬಂಧಿಸಿಲ್ಲ ಎಂದು ಹೇಳಿದ್ದಾರೆ. ನನ್ನ ಹೇಳಿಕೆಗಳನ್ನು ಅಥವಾ ಸ್ಟೇಟಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿಲ್ಲ, ಬದಲಿಗೆ ತಾತ್ಕಾಲಿಕ ಸ್ವರೂಪದ ವೈಯಕ್ತಿಕ ವಾಟ್ಸಾಪ್ ಸ್ಟೇಟಸ್ ಪೋಸ್ಟ್ ಮಾಡಿದ್ದೆ ಎಂದು ತಿಳಿಸಿದ್ದಾರೆ.

ಲೋರಾ ಅವರ ವಿರುದ್ಧ ಹೊರಿಸಲಾಗಿದ್ದ ಒಟ್ಟು 5 ಆರೋಪಗಳೂ ಸಾಬೀತಾಗಿವೆ. ಎಲ್ಲಾ ಆರೋಪಗಳಿಗೂ ಒಂದೇ ರೀತಿಯ ತೀರ್ಪು ನೀಡಲಾಗಿದೆ ಎಂದು ಆಂತರಿಕ ತನಿಖಾ ಸಮಿತಿ ಹೇಳಿದೆ.

ಈ ಪ್ರಕರಣದಲ್ಲಿ ಮೇಲ್ಮನವಿ ಪ್ರಾಧಿಕಾರವಾಗಿರುವ ಉಪಕುಲಪತಿಗಳಿಗೆ ಮೇಲ್ಮನವಿ ಸಲ್ಲಿಸಲು ಎಸ್‌ಆರ್‌ಎಂ ವಿಶ್ವವಿದ್ಯಾಲಯವು ಲೋರಾ ಅವರಿಗೆ 30 ದಿನಗಳ ಕಾಲಾವಕಾಶ ನೀಡಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

1962ರ ಯುದ್ಧದಲ್ಲಿ ಸೈನ್ಯಕ್ಕೆ 600 ಕೆಜಿ ಚಿನ್ನ ದಾನ ಮಾಡಿದ್ದ ದರ್ಭಂಗಾದ ಕೊನೆಯ ಮಹಾರಾಣಿ ಕಾಮಸುಂದರಿ ದೇವಿ ನಿಧನ

ದರ್ಭಾಂಗ ರಾಜಮನೆತನದ ಕೊನೆಯ ಮಹಾರಾಣಿ ಕಾಮಸುಂದರಿ ದೇವಿ 2025 ಜನವರಿ 12 ರಂದು ನಿಧನರಾಗಿದ್ದಾರೆ.  ಅನಾರೋಗ್ಯದಿಂದ ಬಳಲುತ್ತಿದ್ದ ಮಹಾರಾಣಿ ಕಾಮಸುಂದರಿ ಅವರು, ಬಿಹಾರದ ದರ್ಭಾಂಗದಲ್ಲಿರುವ ತಮ್ಮ ಐತಿಹಾಸಿಕ ನಿವಾಸ 'ಕಲ್ಯಾಣಿ'ಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರ ನಿಧನದೊಂದಿಗೆ...

ವಿಧಾನಸಭೆ ಸೇರಿದಂತೆ ಎಲ್ಲಾ ಚುನಾವಣೆಗಳಲ್ಲಿ ಬಿಎಸ್‌ಪಿ ಏಕಾಂಗಿ ಸ್ಪರ್ಧೆ: ಮಾಯಾವತಿ

2027 ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಸೇರಿದಂತೆ ದೇಶಾದ್ಯಂತ ಎಲ್ಲಾ ಚುನಾವಣೆಗಳಲ್ಲಿ ತಮ್ಮ ಪಕ್ಷವು ಏಕಾಂಗಿಯಾಗಿ ಸ್ಪರ್ಧಿಸಲಿದೆ. ರಾಜ್ಯದಲ್ಲಿ ಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸಲಿದೆ ಎಂದು ಬಹುಜನ ಸಮಾಜ ಪಕ್ಷ (ಬಿಎಸ್‌ಪಿ)...

ಐ-ಪ್ಯಾಕ್ ದಾಳಿ | ಇಡಿ ಅಧಿಕಾರಿಗಳ ವಿರುದ್ಧದ ಎಫ್‌ಐಆರ್‌ಗೆ ಸುಪ್ರೀಂ ಕೋರ್ಟ್ ತಡೆ : ಮಮತಾ ಬ್ಯಾನರ್ಜಿ, ಪ.ಬಂಗಾಳ ಸರ್ಕಾರಕ್ಕೆ ನೋಟಿಸ್

ಐ-ಪ್ಯಾಕ್ ಕಚೇರಿ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಿ ಇಡಿ ಅಧಿಕಾರಿಗಳ ವಿರುದ್ದ ಕೋಲ್ಕತ್ತಾ ಪೊಲೀಸರು ದಾಖಲಿಸಿದ್ದ ಎಫ್‌ಐಆರ್‌ಗೆ ಸುಪ್ರೀಂ ಕೋರ್ಟ್ ಗುರುವಾರ (ಜ.15) ತಡೆ ನೀಡಿದೆ. ಇದರಿಂದ...

ಕಾಶ್ಮೀರ: ಭಯೋತ್ಪಾದನಾ ಪ್ರಕರಣದಲ್ಲಿ ಆಸಿಯಾ ಅಂದ್ರಾಬಿ ಮತ್ತು ಅವರ ಇಬ್ಬರು ಸಹಚರರು ದೋಷಿಗಳು ಎಂದು ತೀರ್ಪು ನೀಡಿದ ದೆಹಲಿ ನ್ಯಾಯಾಲಯ 

ದೆಹಲಿಯ ಎನ್ಐಎ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಚಂದರ್ ಜಿತ್ ಸಿಂಗ್ ಬುಧವಾರ ನಿಷೇಧಿತ ಕಾಶ್ಮೀರಿ ಸಂಘಟನೆ ದುಖ್ತರನ್-ಎ-ಮಿಲ್ಲತ್ (ಡಿಇಎಂ) ಮುಖ್ಯಸ್ಥೆ ಆಸಿಯಾ ಅಂದ್ರಾಬಿ ಮತ್ತು ಆಕೆಯ ಇಬ್ಬರು ಸಹಚರರಾದ ಸೋಫಿ ಫೆಹ್ಮಿದಾ...

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಅಕ್ರಮಗಳು ನಡೆದಿವೆ: ಉದ್ಧವ್ ಠಾಕ್ರೆ ಆರೋಪ

ಮಹಾರಾಷ್ಟ್ರದ ನಾಗರಿಕ ಚುನಾವಣೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಗುರುವಾರ ಆರೋಪಿಸಿದ್ದು, ಇದು ಪ್ರಜಾಪ್ರಭುತ್ವವನ್ನು ಕೊಲೆ ಮಾಡುವ ಪ್ರಯತ್ನ ಎಂದು ಹೇಳಿದ್ದಾರೆ. ನಗರಸಭೆ ಚುನಾವಣೆಯಲ್ಲಿ ಅಕ್ರಮಗಳು ನಡೆದಿವೆ ಎಂಬ...

2025ರಲ್ಲಿ ಭಾರತದಲ್ಲಿ 1,318 ದ್ವೇಷ ಭಾಷಣ ಪ್ರಕರಣಗಳು ವರದಿಯಾಗಿದ್ದು, ಅವುಗಳಲ್ಲಿ ಶೇ. 98 ಮುಸ್ಲಿಮರನ್ನು ಗುರಿಯಾಗಿಸಿಕೊಂಡಿವೆ; ವರದಿ

2025ರಲ್ಲಿ ಭಾರತವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಧಾರ್ಮಿಕ ಅಲ್ಪಸಂಖ್ಯಾತರನ್ನು, ವಿಶೇಷವಾಗಿ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರನ್ನು ಗುರಿಯಾಗಿಸಿಕೊಂಡ ಕನಿಷ್ಠ 1,318 ದ್ವೇಷ ಭಾಷಣ ಘಟನೆಗಳಿಗೆ ಸಾಕ್ಷಿಯಾಗಿದೆ. ದಿನಕ್ಕೆ ಸರಾಸರಿ ನಾಲ್ಕು ದ್ವೇಷ ಭಾಷಣ...

ಪಶ್ಚಿಮ ಬಂಗಾಳ ಎಸ್‌ಐಆರ್ ಪ್ರತಿಭಟನೆ; ಉತ್ತರ ದಿನಾಜ್‌ಪುರದ ಸರ್ಕಾರಿ ಕಚೇರಿ ಧ್ವಂಸ

ಪಶ್ಚಿಮ ಬಂಗಾಳದ ಉತ್ತರ ದಿನಾಜ್‌ಪುರ ಜಿಲ್ಲೆಯಲ್ಲಿ ಗುರುವಾರ ನಡೆದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ಸರ್ಕಾರಿ ಕಚೇರಿಯನ್ನು ಧ್ವಂಸಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮುಂಜಾನೆಯಿಂದಲೇ, ಚಾಕುಲಿಯಾದಲ್ಲಿನ ಕಹಾಟಾ...

ಕೇರಳದ ಭಾರತೀಯ ಕ್ರೀಡಾ ಪ್ರಾಧಿಕಾರದ ಹಾಸ್ಟೆಲ್‌ನಲ್ಲಿ ಇಬ್ಬರು ಬಾಲಕಿಯರ ಶವಗಳು ಪತ್ತೆ

ಕೇರಳದ ಕೊಲ್ಲಂನಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರ (SAI) ಹಾಸ್ಟೆಲ್‌ನಲ್ಲಿ ತಂಗಿದ್ದ ಇಬ್ಬರು ಹುಡುಗಿಯರು ಗುರುವಾರ ಬೆಳಿಗ್ಗೆ ತಮ್ಮ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ಕೋಝಿಕ್ಕೋಡ್ ಜಿಲ್ಲೆಯ ಸಾಂಡ್ರಾ (17) ಮತ್ತು...

ಪಿಎಚ್‌ಡಿ ಪ್ರವೇಶ ನಿರಾಕರಿಸಿದ ಜಾಮಿಯಾ ಯೂನಿವರ್ಸಿಟಿ; ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿ

2025–26 ಶೈಕ್ಷಣಿಕ ಅವಧಿಗೆ ಅಧಿಕೃತ ಪ್ರವೇಶ ಪ್ರಕ್ರಿಯೆಯ ಮೂಲಕ ಆಯ್ಕೆಯಾದ ತನ್ನನ್ನು ಜಾಮಿಯಾ ಮಿಲಿಯಾ ಇಸ್ಲಾಮಿಯಾ (ಜೆಎಂಐ) ವಿನಾಕಾರಣ ಪ್ರವೇಶ ನಿರಾಕರಿಸಿದೆ ಎಂದು ಆರೋಪಿಸಿ ವಿದ್ಯಾರ್ಥಿಯೊಬ್ಬರು ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಯುಜಿಸಿ-ನೆಟ್ ವಿನಾಯಿತಿ...

ಮದ್ರಸಾ ನಿರ್ಮಾಣದ ವದಂತಿ : ಖಾಸಗಿ ಶಾಲಾ ಕಟ್ಟಡ ಕೆಡವಿದ ಅಧಿಕಾರಿಗಳು

ಅನಧಿಕೃತವಾಗಿ ಮದ್ರಸಾ ನಿರ್ಮಿಸಲಾಗುತ್ತಿದೆ ಎಂಬ ವದಂತಿ ಹರಡಿದ ಹಿನ್ನೆಲೆ ನಿರ್ಮಾಣ ಹಂತದಲ್ಲಿದ್ದ ಶಾಲಾ ಕಟ್ಟಡವನ್ನು ಅಧಿಕಾರಿಗಳು ಬುಲ್ಡೋಝರ್ ಬಳಸಿ ಕೆಡವಿದ ಘಟನೆ ಮಧ್ಯಪ್ರದೇಶದ ಬೇತುಲ್ ಜಿಲ್ಲೆಯಲ್ಲಿ ನಡೆದಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್...