ಆಳುವವರನ್ನು ಪ್ರಶ್ನಿಸುವ, ಜನಹಿತವನ್ನು ಮತ್ತು ಸಂವಿಧಾನವನ್ನು ಕಾಪಾಡುವ ಮಹಾಯಾನ ಮಾಡುವುದಕ್ಕಾಗಿ ಸಂವಿಧಾನ ಸಂರಕ್ಷಣಾ ಪಡೆ ಸಂಘಟಿಸುತ್ತಿದ್ದು, ಅದರ ಆರಂಭವಾಗಿ ಏಪ್ರಿಲ್ 26ರಂದು ದಾವಣಗೆರೆಯಲ್ಲಿ 10 ಸಾವಿರ ಕಾರ್ಯಕರ್ತರನ್ನು ಸಂಘಟಿಸಿ ಸಂವಿಧಾನ ಸಂರಕ್ಷಕರ ಸಮಾವೇಶವನ್ನು ನಡೆಸುತ್ತಿದ್ದೇವೆ ಎಂದು ಎದ್ದೇಳು ಕರ್ನಾಟಕದ ಕೇಂದ್ರ ಸಮಿತಿ ಸದಸ್ಯ, ಹೋರಾಟಗಾರ ನೂರ್ ಶ್ರೀಧರ್ ಅವರು ಮಂಗಳವಾರ ಹೇಳಿದರು. ಏಪ್ರಿಲ್ 26ರಂದು ದಾವಣಗೆರೆಯಲ್ಲಿ ನಡೆಯುತ್ತಿರುವ ಕಾರ್ಯಕ್ರಮದ ಭಾಗವಾಗಿ ಬೆಂಗಳೂರು ಪ್ರೆಸ್ ಕ್ಲಬ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.
ಮುಂದಿನ ಮೂರು ವರ್ಷಗಳಲ್ಲಿ 10 ಸಾವಿರ ಕಾರ್ಯಕರ್ತರ ಈ ಸಂವಿಧಾನ ಸಂರಕ್ಷಣಾ ಪಡೆಯನ್ನು ಒಂದು ಲಕ್ಷಕ್ಕೆ ಸಜ್ಜುಗೊಳಿಸಲಿದ್ದು, ಅದಕ್ಕಾಗಿ ರಾಜ್ಯಾದ್ಯಂತ ಎಲ್ಲಾ ತಾಲೂಕು, ಜಿಲ್ಲೆಗಳಲ್ಲಿ ಕೆಲಸ ಮಾಡಲಿದ್ದೇವೆ ಎಂದು ಅವರು ಹೇಳಿದರು. “ದ್ವೇಷವನ್ನು ಮಟ್ಟ ಹಾಕಿ ಪ್ರೀತಿಯ ಸಮಾಜಕ್ಕಾಗಿ ಈ ಪಡೆ ಕೆಲಸ ಮಾಡಲಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತನ್ನು ಈಡೇರಿಸುವ ಬಗ್ಗೆ ಒತ್ತಾಯಿಸುವುದು ಮತ್ತು ಕೇಂದ್ರ ಸರ್ಕಾರದ ವಿರುದ್ಧ ಬೃಹತ್ ಜನಾಂದೋಲನ ಪ್ರಾರಂಭಿಸುವುದು ಇದರ ಉದ್ದೇಶವಾಗಿದೆ” ಎಂದು ಅವರು ಹೇಳಿದ್ದಾರೆ.
“ಕಳೆದ ಹತ್ತು ತಿಂಗಳ ಚಿಂತನ ಮಂಥನದ ನಂತರ ಈ ಸಮಾವೇಶಕ್ಕೆ ಸಿದ್ಧತೆ ಮಾಡಿಕೊಂಡಿದ್ದೇವೆ. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಕೂಡಾ ಅಧಿಕಾರಕ್ಕೆ ಬಂದ ನಂತರ ಒಂದು ಎಂಬಂತೆ ಆಗಿದೆ. ಕಾಂಗ್ರೆಸ್ ಐದು ಗ್ಯಾರಂಟಿ ಬಿಟ್ಟು ಬೇರೆ ಕೆಲಸಗಳನ್ನು ಮಾಡುತ್ತಿಲ್ಲ” ಎಂದು ನೂರ್ ಶ್ರೀಧರ್ ಅವರು ಹೇಳಿದರು.
“ಎದ್ದೇಳು ಕರ್ನಾಟಕ ಎಂಬ 112 ಸಂಘಟನೆಗಳನ್ನೊಳಗೊಂಡ ನಾಗರೀಕ ವೇದಿಕೆಯು 2023ರ ವಿಧಾನಸಭಾ ಚುನಾವಣೆ ಹಾಗೂ 2024 ರ ಲೋಕಸಭಾ ಚುನಾವಣೆಗಳಲ್ಲಿ ಸಂವಿಧಾನ ವಿರೋಧಿ ಶಕ್ತಿಗಳನ್ನು ಅಧಿಕಾರದಿಂದ ಇಳಿಸಲು ಬೂತ್ ಮಟ್ಟಕ್ಕಿಳಿದು ಪರಿಣಾಮಕಾರಿ ಕೆಲಸ ಮಾಡಿತ್ತು. ಎದ್ದೇಳು ಕರ್ನಾಟಕ ಮಾತ್ರವಲ್ಲದೆ ಇನ್ನು ಹಲವು ಜನಪರ ಸಂಘಟನೆಗಳು ಮಾಡಿದ ಅವಿರತ ಪರಿಶ್ರಮದ ಫಲವಾಗಿಯೇ ಸಂವಿಧಾನ ವಿರೋಧಿ ಬಿಜೆಪಿ ಪಕ್ಷವನ್ನು ಕರ್ನಾಟಕದಲ್ಲಿ ಅಧಿಕಾರದಿಂದ ಕೆಳಗೆ ದಬ್ಬಲು ಸಾಧ್ಯವಾಯಿತು” ಎಂದು ಅವರು ಹೇಳಿದರು.
“ದೇಶವ್ಯಾಪಿ ಜನಪರ ಶಕ್ತಿಗಳು, ಜನಪರ ಮಾಧ್ಯಮಗಳು ಮಾಡಿದ ಪ್ರಯತ್ನದಿಂದಾಗಿ ಕೇಂದ್ರದಲ್ಲಿ ಅವರ ಶಕ್ತಿಯನ್ನು ಕಡಿತಗೊಳಿಸುವಲ್ಲಿ ಯಶಸ್ಸನ್ನೂ ಪಡೆದೆವು. ಆದರೆ ಅವಕಾಶ ವಾದಿಗಳ ಆಸರೆ ಪಡೆದು ಅವರೇ ಕೇಂದ್ರದ ಅಧಿಕಾರವನ್ನು ಮತ್ತೆ ಹಿಡಿದುಕೊಂಡಿದ್ದಾರೆ. ಅದಾನಿ, ಅಂಬಾನಿಗಳ ಪರವಾದ ನೀತಿಗಳನ್ನು ಮುಂದುವರೆಸಿದ್ದಾರೆ. ಜನಸಾಮಾನ್ಯರ ಬದುಕಿನ ಮೇಲಿನ ಆಕ್ರಮಣವನ್ನು ಹಾಗೂ ತಮ್ಮ ವಿಚ್ಚಿದ್ರಕಾರಿ ನೀತಿಗಳನ್ನು ಮುಂದುವರೆಸಿದ್ದಾರೆ. ಮುಂದೆ ಇದನ್ನು ಇನ್ನೂ ಹೆಚ್ಚಿಸಲಿದ್ದಾರೆ” ಎಂದು ಅವರು ಹೇಳಿದ್ದಾರೆ.
“ರಾಜ್ಯದಲ್ಲಿ ನಾವೆಲ್ಲಾ ಸೇರಿ ಬಿಜೆಪಿಯನ್ನು ಅಧಿಕಾರದಿಂದ ಇಳಿಸಿದ್ದರಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತು. ಆದರೆ ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತು ತಪ್ಪಿದೆ. ಬಿಜೆಪಿ ತಂದಿದ್ದ ಜನವಿರೋಧಿ ನೀತಿಗಳನ್ನೆಲ್ಲಾ ತಾನೂ ಮುಂದುವರೆಸುತ್ತಿದೆ. ಗ್ಯಾರಂಟಿಗಳಂತಹ ಕೆಲವು ಜನಹಿತ ನೀತಿಗಳನ್ನು ಮಾಡಿದ್ದು ಬಿಟ್ಟರೆ ಮಿಕ್ಕಂತೆ ಆಡಳಿತದಲ್ಲಿ ದೊಡ್ಡ ವ್ಯತ್ಯಾಸವಿಲ್ಲವಾಗಿದೆ” ಎಂದು ಅವರು ಹೇಳಿದ್ದಾರೆ.
ಹೊಸಸಂದರ್ಭ ಹೊಸದಿಟ್ಟ ಹೆಜ್ಜೆಯನ್ನು ನಾಗರೀಕರಾದ ನಮ್ಮೆಲ್ಲರಿಂದ ಅಪೇಕ್ಷಿಸುತ್ತಿದೆ. ಈ ದೇಶವನ್ನು ಈ ಬಲಾಢ್ಯ ಪಕ್ಷಗಳು ರಕ್ಷಿಸುತ್ತವೆ ಎಂದು ಕಾಯುತ್ತಾ ಕೂರಲು ಸಾಧ್ಯವಿಲ್ಲ. ನಾಗರೀಕರಾದ ನಾವೇ ಒಂದು ಪ್ರಬಲ ಸಾಮಾಜಿಕ ಶಕ್ತಿಯಾಗಿ ರೂಪಗೊಳ್ಳಬೇಕಿದೆ. ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಬಲ್ಲ, ಆಳುವವರನ್ನು ಪ್ರಶ್ನಿಸಬಲ್ಲ ಅಳ್ವಿಕೆಯನ್ನು ಬದಲಿಸಬಲ್ಲ ನಾಗರೀಕ ಶಕ್ತಿಯಾಗಿ ತಳಮಟ್ಟದಿಂದ ದೇಶಮಟ್ಟದ ತನಕ ನಮ್ಮನ್ನು ನಾವು ಕಟ್ಟಿಕೊಳ್ಳಬೇಕಿದೆ.
ಈ ಗುರಿಯೊಂದಿಗೆಯೇ ಪ್ರತಿ ಊರು, ಕೇರಿ, ಹಾಡಿ, ಬೀದಿಗಳಲ್ಲಿ, “ಸಂವಿಧಾನ ಸಂರಕ್ಷಕ ಪಡೆ” ಹೆಸರಿನಲ್ಲಿ ದೇಶಪ್ರೇಮಿ ತಂಡಗಳನ್ನು ಕಟ್ಟುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಮುಂದಿನ ಮೂರು ವರ್ಷಗಳಲ್ಲಿ ಒಂದು ಲಕ್ಷಕಾರ್ಯಕರ್ತರ ಪಡೆಯನ್ನು ಸಜ್ಜುಗೊಳಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಈ ಪ್ರಕ್ರಿಯೆಗೆ ರಾಜ್ಯಮಟ್ಟದ ಚಾಲನೆ ನೀಡಲು ಇದೇ ತಿಂಗಳ 26 ರಂದು ದಾವಣಗೆರೆಯಲ್ಲಿ “ಸಂವಿಧಾನ ಸಂರಕ್ಷಕರ ಸಮಾವೇಶ”ವನ್ನು ಆಯೋಜಿಸಲಾಗುತ್ತಿದೆ. ಸಮಾವೇಶದಲ್ಲಿ ಹತ್ತು ಸಾವಿರಕ್ಕೂ ಹೆಚ್ಚಿನ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಶ್ರೀಧರ್ ಹೇಳಿದರು.
ಯುವಕ ಯುವತಿಯರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸುತ್ತಿರುವುದು ಸಮಾವೇಶದ ಮತ್ತೊಂದು ಮುಖ್ಯ ವಿಚಾರವಾಗಿದೆ. ವಾಡಿಯಿಂದ ದಾವಣಗೆರೆ ತನಕ 20 ಜಿಲ್ಲೆಗಳ ಮೂಲಕ ಹಾಗೂ 2000 ಕಿ.ಮೀ ಉದ್ದದ ದಾರಿಯನ್ನು ಕ್ರಮಿಸುತ್ತಾ ಬೈಕುಗಳಲ್ಲಿ ಯುವಯಾನ ನಡೆಯುತ್ತಿದೆ. ಅದು ಏಪ್ರಿಲ್ 25 ರ ಸಂಜೆ ದಾವಣಗೆರೆ ತಲುಪಲಿದ್ದು ಅಲ್ಲಿಯೂ ಬೃಹತ್ ಬೈಕ್ ರ್ಯಾಲಿ ನಡೆಯಲಿದೆ. ಯುವ ಮುಂದಾಳು ಸರೋವರ್ ಬೆಂಕಿಕೆರೆ ಅದರ ನೇತೃತ್ವ ವಹಿಸಿದ್ದಾರೆ ಎಂದು ಅವರು ಹೇಳಿದರು.
ಸಮಾವೇಶದಲ್ಲಿ ನಾಡೋಜ ಬರಗೂರು ರಾಮಚಂದ್ರಪ್ಪ, ಪ್ರಸಿದ್ಧ ಚಿತ್ರ ನಟಪ್ರಕಾಶ್ ರಾಜ್, ಗುಜರಾತಿನ ಶಾಸಕ ಹಾಗೂ ಹೋರಾಟಗಾರ ಜಿನ್ನೇಶ್ ಮೇವಾನಿ, ಪ್ರಖರ ಚಿಂತಕರಾದ ಪರಕಾಲ ಪ್ರಭಾಕರ್, ಮುಸ್ಲಿಂ ನಾಯಕ ಮೊಹಮ್ಮದ್ ಸಲೀಂ, ಸಂಯುಕ್ತ ಕಿಸಾನ್ ಮೋರ್ಚಾದ ಡಾ.ಸುನೀಲಮ್, ಚಲನಚಿತ್ರ ನಿರ್ದೇಶಕಿ ಕವಿತಾ ಲಂಕೇಶ್, ಮಾಜಿ ಸಚಿವೆ ಬಿ.ಟಿ.ಲಲಿತಾನಾಯ್. ಶೋಷಿತ ಸಮುದಾಯಗಳ ಒಕ್ಕೂಟದ ಪ್ರಧಾನ ಸಂಚಾಲಕರಾದ ಕೆ.ಎಂ.ರಾಮಚಂದ್ರಪ್ಪ, ರೈತ ಚಳವಳಿಯ ಮುಂದಾಳುಗಳಾದ ಹೆಚ್.ಆರ್.ಬಸವರಾಜಪ್ಪ, ಬಡಗಲಪುರ ನಾಗೇಂದ್ರ, ದಲಿತ ಚಳವಳಿಯ ಹಿರಿಯ ಮುಂಡರಾದ ಗುರುಪ್ರಸಾದ್ ಕೆರಗೋಡು, ಎನ್.ವೆಂಕಟೇಶ್, ಮಾವಳ್ಳಿ ಶಂಕರ್, ವಿ.ನಾಗರಾಜ್, ಕ್ರೈಸ್ತ ಸಮುದಾಯದ ಮುಖಂಡರಾದ ಫಾ. ವೀರೇಶ್ ಮೋರೆಸ್, ಫಾ.ಜೆರಾಲ್ಡ್, ಮಾನವ ಬಂಧುತ್ವ ವೇದಿಕೆಯ ಎ.ಬಿ.ರಾಮಚಂದ್ರಪ್ಪ, ರವಿ ನಾಯ್ಕರ್, ಹೋರಾಟಗಾರ ಸಿದ್ಧನಗೌಡ ಪಾಟೀಲ್ ಸೇರಿದಂತೆ ಇನ್ನು ಮುಂತಾದ ಅನೇಕ ಗಣ್ಯರು ಭಾಗವಹಿಸುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಾವೇಶದ ಸ್ವಾಗತ ಸಮಿತಿ ಪರವಾಗಿ ಮಾಜಿ ಸಚಿವರಾದ ಬಿ.ಟಿ. ಲಲಿತಾ ನಾಯ್ಕ್, ರೈತ ಮುಖಂಡರಾದ ವೀರಸಂಗಯ್ಯ, ಜಮಾತೆ ಇಸ್ಲಾಮಿ ಮುಖಂಡ ಯೂಸುಫ್ ಕನ್ನಿ, ಹೋರಾಟಗಾರ್ತಿ ತಾರಾ ರಾವರ್, ಫಾದರ್ ರೆವರೆಂಡ್ ಚಂದ್ರಪ್ರಸಾದ್ ಇದ್ದರು. ಸಂವಿಧಾನ ಸಂರಕ್ಷಣಾ ಪಡೆ


