ರಿಪಬ್ಲಿಕ್ ಟಿವಿ ಸಂಪಾದಕ ಅರ್ನಾಬ್ ಗೋಸ್ವಾಮಿಯ ವಾಟ್ಸಾಪ್ ಚಾಟ್ಗಳ ಬಗ್ಗೆ ಶಿವಸೇನೆ ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ್ದು, ವಾಟ್ಸಪ್ ಚಾಟ್ಗಳಲ್ಲಿ ದೇಶದ ಆಂತರಿಕ ಭದ್ರತೆಯ ಉಲ್ಲಂಘನೆಯಾಗಿದೆ ಮತ್ತು ಅರ್ನಾಬ್ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಅದು ಒತ್ತಾಯಿಸಿದೆ.
ಫೆಬ್ರವರಿ 26, 2019 ರಂದು ಬಾಲಕೋಟ್ನ ಭಯೋತ್ಪಾದಕ ಶಿಬಿರದ ಮೇಲೆ ಭಾರತೀಯ ಏರ್ ಫೋರ್ಸ್ ಬಾಂಬ್ ಸ್ಫೋಟಿಸಿದೆ ಎನ್ನಲಾದ ಈ ಯೋಜನೆಯು ಗೌಪ್ಯವಾಗಿತ್ತು ಕೇಂದ್ರ ಸರ್ಕಾರ ಹೇಳಿತ್ತು. ಆದರೆ ಅರ್ನಾಬ್ ಮತ್ತು ಆಗಿನ ಬಾರ್ಕ್ನ ಮುಖ್ಯ ಕಾರ್ಯನಿರ್ವಾಹಕ ಪಾರ್ಥೋ ದಾಸ್ಗುಪ್ತಾ ನಡುವೆ ನಡೆದಿರುವ ವಾಟ್ಸಾಪ್ ಸಂಭಾಷಣೆಯಲ್ಲಿ, ಭಾರತೀಯ ವಾಯುಸೇನೆ ನಡೆಸಲಿರುವ ಬಾಲಕೋಟ್ ವಾಯುದಾಳಿಯ ಬಗ್ಗೆ ದಾಳಿಗಿಂತಲೂ ಮೂರು ದಿನ ಮೊದಲೇ ಚರ್ಚಿಸಿದ್ದರು. ಇದು ದೇಶಾದ್ಯಂತ ಕೋಲಾಹಲ ಸೃಷ್ಟಿಸಿದೆ.
ಇದನ್ನೂ ಓದಿ: ‘ಪಿಎಂಒ ಮಾತ್ರವಲ್ಲ ಎನ್ಎಸ್ಎ ಕೂಡ ಅರ್ನಾಬ್ ಜೊತೆಯಿತ್ತು’: ಅರ್ನಾಬ್ ವಾಟ್ಸಾಪ್ ಲೀಕ್ ಸಂಪೂರ್ಣ ವಿವರ ಇಲ್ಲಿದೆ
ಈ ಚಾಟ್ಗಳು ರಾಷ್ಟ್ರೀಯ ಭದ್ರತೆಗೆ ಅಪಾಯವನ್ನು ಒಡ್ಡಿದೆ ಎಂದಿರುವ ಶಿವಸೇನೆಯ ನಾಯಕ ಸಂಜಯ್ ರಾವತ್, “ಇದು ದೇಶದ ಆಂತರಿಕ ಭದ್ರತೆಗೆ ಅಪಾಯ ಎಂದು ನಾನು ಭಾವಿಸುತ್ತೇನೆ. ಕೆಲವೊಮ್ಮೆ, ಇಂತಹ ಮಿಲಿಟರಿ ರಹಸ್ಯಗಳು ಉನ್ನತ ಅಧಿಕಾರಿಗಳಿಗೆ ತಿಳಿದಿರುವುದಿಲ್ಲ. ಒಂದು ವೇಳೆ ಸೈನಿಕರು ಇಂತಹ ಯಾವುದೇ ರಹಸ್ಯಗಳನ್ನು ಅಥವಾ ದಾಖಲೆಗಳನ್ನು ಹೊಂದಿರುವುದು ಕಂಡುಬಂದರೆ, ಅವರನ್ನು ವಿಚಾರಣೆ ನಡೆಸಲಾಗುತ್ತದೆ ಎಂದಿದ್ದಾರೆ.
ಆದರೆ ಈ ಘಟನೆಯಲ್ಲಿ, ಬಾಲಕೋಟ್ನಲ್ಲಿ ವಾಯುದಾಳಿ ಸಂಭವಿಸುತ್ತದೆ ಎಂದು ಅರ್ನಾಬ್ಗೆ ತಿಳಿದಿತ್ತು. ಇದರರ್ಥ ರಾಷ್ಟ್ರೀಯ ಭದ್ರತೆಯ ಉಲ್ಲಂಘನೆಯಾಗಿದೆ. ದೇಶದ ಗೃಹ ಸಚಿವರು ಮತ್ತು ರಕ್ಷಣಾ ಸಚಿವರು ಈ ಬಗ್ಗೆ ಯಾವ ಕ್ರಮ ತೆಗೆದುಕೊಳ್ಳುತ್ತಾರೆ? ಇದು ರಕ್ಷಣೆಗೆ ಸಂಬಂಧಿಸಿದ ವಿಷಯವಾಗಿದೆ. ನೀವು ಅವರನ್ನು ಕೋರ್ಟ್ ಮಾರ್ಷಲ್ ಮಾಡುತ್ತೀರಾ?’’ ಎಂದು ಪ್ರಶ್ನಿಸಿದ್ದಾರೆ.
ಶಿವಸೇನೆ ಸೋಮವಾರ ತನ್ನ ಮುಖವಾಣಿ ಸಾಮ್ನಾದಲ್ಲಿ ಬಿಜೆಪಿಯನ್ನು ಗುರಿಯಾಗಿಸಿಕೊಂಡಿದೆ. “ರಾಷ್ಟ್ರೀಯ ರಹಸ್ಯಗಳನ್ನು ಹಂಚಿಕೊಳ್ಳುವುದು ರಾಷ್ಟ್ರ ವಿರೋಧಿ ಅಲ್ಲ ಎಂದು ಬಿಜೆಪಿಯ ಜನರು ಭಾವಿಸಿದರೆ, ರಾಷ್ಟ್ರೀಯತೆಯ ಬಗ್ಗೆಗಿನ ಅವರ ವ್ಯಾಖ್ಯಾನವನ್ನು ಪರೀಕ್ಷಿಸುವುದು ಅಗತ್ಯವಾಗಿದೆ” ಎಂದು ಬರೆದಿದ್ದಾರೆ.
ಸಾಮ್ನಾ ಸಂಪಾದಕೀಯವು ಟಿಆರ್ಪಿ ಹಗರಣವನ್ನು ಭೇದಿಸಿದ ಮುಂಬೈ ಪೊಲೀಸರನ್ನು ಶ್ಲಾಘಿಸಿದ್ದು, ಅವರಿಗೆ “ಜೀವಮಾನದ ಸಾಧನೆ ಪ್ರಶಸ್ತಿ” ನೀಡಬೇಕು ಎಂದು ಹೇಳಿದೆ.
ಇದನ್ನೂ ಓದಿ: ಭಾರತೀಯ ಸೈನಿಕರ ಸಾವನ್ನು ಸಂಭ್ರಮಿಸಿದ್ದ ಅರ್ನಾಬ್: ಉನ್ನತ ತನಿಖೆಗೆ ಒತ್ತಾಯಿಸಿದ ವಿರೋಧ ಪಕ್ಷಗಳು