ಅಮೇಜಾನ್ ಪ್ರೈಮ್ನಲ್ಲಿ ಬಿಡುಗಡೆಯಾಗಿರುವ ‘ತಾಂಡವ್’ ವೆಬ್ ಸೀರೀಸ್ನ ನಿರ್ಮಾಪಕರು ಮತ್ತು ಪ್ರಸಾರ ಸೇವೆಯ ವಿರುದ್ಧ ಉತ್ತರ ಪ್ರದೇಶದಲ್ಲಿ ಪ್ರಕರಣ ದಾಖಲಾಗಿದ್ದು, ಬಂಧನದ ಎಚ್ಚರಿಕೆ ನೀಡಲಾಗಿದೆ.
ಸೈಫ್ ಅಲಿಖಾನ್ ಮತ್ತು ಡಿಂಪಲ್ ಕಪಾಡಿಯ ನಟಿಸಿರುವ ಹೊಸ ವೆಬ್ ಸೀರೀಸ್ ‘ತಾಂಡವ್’ನಲ್ಲಿ ಹಿಂದೂ ದೇವತೆಗಳನ್ನು ಅವಮಾನಿಸಲಾಗಿದೆ ಎಂದು ಆರೋಪಿಸಿರುವ ಮಹಾರಾಷ್ಟ್ರ ಬಿಜೆಪಿ ಶಾಸಕ ರಾಮ್ ಕದಮ್, ಇದರ ನಿರ್ಮಾಪಕರು, ನಿರ್ದೇಶಕರು ಮತ್ತು ನಟರ ವಿರುದ್ಧ ದೂರು ದಾಖಲಿಸಿದ್ದರು.
ಇದರ ಬೆನ್ನಲ್ಲೇ ಉತ್ತರ ಪ್ರದೇಶದ ಲಕ್ನೋದ ಹಜರತ್ಗಂಜ್ ಪೊಲೀಸ್ ಠಾಣೆಯಲ್ಲಿ ಸ್ವತಃ ಸಬ್ ಇನ್ಸ್ಪೆಕ್ಟರ್ ದೂರು ದಾಖಲಿಸಲಾಗಿದ್ದಾರೆ.
‘ತಾಂಡವ್’ನ ನಿರ್ದೇಶಕ, ನಿರ್ಮಾಪಕ ಮತ್ತು ಬರಹಗಾರ ಹಾಗೂ ಅಮೆಜಾನ್ ಇಂಡಿಯಾದ ಮುಖ್ಯಸ್ಥರು ಕೋಮು ದ್ವೇಷವನ್ನು ಉತ್ತೇಜಿಸಿ, ಪೂಜಾ ಸ್ಥಳವನ್ನು ಅವಮಾನಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿಲಾಗಿದೆ.
ಇದನ್ನೂ ಓದಿ: ರಾವಣ ಮಾನವೀಯ ಗುಣವುಳ್ಳವನು ಎಂದಿದ್ದ ನಟ ಸೈಫ್ ಅಲಿ ಖಾನ್ ವಿರುದ್ಧ ದೂರು
ಪ್ರಕರಣ ದಾಖಲಾದ ಕೂಡಲೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರ ಮಾಧ್ಯಮ ಸಲಹೆಗಾರ ಶಲಾಭ್ ಮಣಿ ತ್ರಿಪಾಠಿ ಅದರ ಪ್ರತಿಯನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
जन भावनाओं के साथ खिलवाड़ बर्दाश्त नहीं, घटिया वेब सीरीज की आड़ मं नफरत फैलाने वाली वेब सीरीज तांडव की पूरी टीम के खिलाफ योगीजी के उत्तर प्रदेश में गंभीर धाराओं में मामला दर्ज, जल्द गिरफ्तारी की तैयारी !! pic.twitter.com/V9ZewGNOHw
— Shalabh Mani Tripathi (@shalabhmani) January 18, 2021
“ಯೋಗಿ ಆದಿತ್ಯನಾಥರ ಉತ್ತರಪ್ರದೇಶದಲ್ಲಿ ಜನರ ಭಾವನೆಗಳೊಂದಿಗೆ ಆಟವಾಡುವುದನ್ನು ಸಹಿಸಲು ಸಾಧ್ಯವಿಲ್ಲ. ವೆಬ್ ಸರಣಿಯ ನೆಪದಲ್ಲಿ ದ್ವೇಷವನ್ನು ಹರಡುತ್ತಿರುವ ಇಡೀ ‘ತಾಂಡವ್’ ತಂಡದ ವಿರುದ್ಧ ಗಂಭೀರ ಪ್ರಕರಣ ದಾಖಲಿಸಲಾಗಿದೆ. ಬಂಧನಕ್ಕೆ ಸಿದ್ಧರಾಗಿ” ಎಂದು ಅವರು ಹಿಂದಿಯಲ್ಲಿ ಬರೆದಿದ್ದಾರೆ.
“ತಾಂಡವ್ ಸೀರೀಸ್ ಬಗ್ಗೆ ಟ್ವಿಟರ್ನಲ್ಲಿ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ, ಇದರ ಬಗ್ಗೆ ನಿಗಾ ವಹಿಸುವಂತೆ ಮೇಲಧಿಕಾರಿಗಳು ಆದೇಶಿಸಿದರು” ಎಂದು ಪ್ರಕರಣ ದಾಖಲಿಸಿದ ಪೊಲೀಸ್ ಅಧಿಕಾರಿ ಹೇಳಿದ್ದಾರೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಇದನ್ನೂ ಓದಿ: ಹಿಂದೂ ದೇವತೆಗಳಿಗೆ ಅವಮಾನ ಮಾಡಿದ ಆರೋಪ: ‘ತಾಂಡವ್’ ವೆಬ್ ಸೀರೀಸ್ ವಿರುದ್ಧ ದೂರು