Homeಮುಖಪುಟಭೀಮನೆಂಬ ಸಂತನನ್ನು ಹೊತ್ತು ಹೊರಟ ಕಳ್ಳರ ಸಂತೆ!

ಭೀಮನೆಂಬ ಸಂತನನ್ನು ಹೊತ್ತು ಹೊರಟ ಕಳ್ಳರ ಸಂತೆ!

ಬಹುಶಃ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಈ ದೇಶದಲ್ಲಿ ಹುಟ್ಟದೆ ಇದ್ದಿದ್ದರೂ ನಾವು ಬದುಕಿರುತ್ತಿದ್ದೆವು... ಅದು ಗುಲಾಮರಾಗಿ, ಹೆಣಗಳಾಗಿಯೇ..

- Advertisement -
- Advertisement -

ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ‌ ನಡ್ಡಾ ಅವರ ಹೆಸರಿನಲ್ಲಿ ಅಂಬೇಡ್ಕರ್ ಅವರ ದೊಡ್ಡ ಚಿತ್ರವಿರುವ ಪೋಸ್ಟರ್ ವೊಂದು‌ ಹರಿದಾಡುತ್ತಿದ್ದು, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿಯ‌ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಸಂದೇಶದ ಕರೆಯನ್ನು ನಡ್ಡಾ ನೀಡಿದ್ದಾರೆ. ಕಾರ್ಯಕರ್ತರು ಪ್ರತಿ ಮನೆಯಲ್ಲಿ ಅಂಬೇಡ್ಕರ್ ಅವರ ಭಾವ ಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜಿಸುವಂತೆ, ಬಡವರ ಪರ ಕೇಂದ್ರ ಸರ್ಕಾರ ಜಾರಿಗೆ ತಂದ ಕಾರ್ಯಕ್ರಮಗಳನ್ನು‌ಜನರಿಗೆ ಪ್ರಚುರ ಪಡಿಸುವಂತೆ ………. ಕೊರೊನಾದ ಈ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದು ಕೊಳ್ಳಲು ಜನರಿಗೆ ಅರಿವು ಮೂಡಿಸುವುದು……….., ಬಹುಮುಖ್ಯವಾಗಿ ಸಂವಿಧಾನ, ಅಂಬೇಡ್ಕರ್ ಅವರು ಪ್ರತಿ ಪಾದಿಸಿದ ಸ್ವಾತಂತ್ರ್ಯ, ಸಮಾನತೆ, ಸಹೋದರತೆಯ ಆಶಯಗಳ ಬಗ್ಗೆ ಲೇಖನಗಳನ್ನು ಬರೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಡುವಂತೆ‌ ಸಂದೇಶದಲ್ಲಿ ಕರೆ ನೀಡಿದ್ದಾರೆ. ಇದನ್ನು ನೋಡಿದಾಗ ನನಗೆ ಗೋಮುಖ ವ್ಯಾಘ್ರಗಳು ಪುಣ್ಯಕೋಟಿಯ ಮುಖಗವುಸು ತೊಟ್ಟು ಕೊಟ್ಟಿಗೆಯಲ್ಲಿ ಕೂಟ ನಡೆಸಿರುವಂತೆ ಕಾಣುತ್ತಿದೆ.

ಅಂಬೇಡ್ಕರ್ ಅವರು ಕೊಟ್ಟ ಶ್ರೇಷ್ಠ ಸಂವಿಧಾನವನ್ನೆ ಬದಲಾಯಿಸುತ್ತೇವೆ, ಬದಲಾಯಿಸಬೇಕು ಎಂದು ಗಂಟಲು ಹರದುಕೊಳ್ಳವವರ ತಲೆ ಕಾಯುತ್ತಲೆ ಮುನ್ನೆಡೆದಿರುವ ಮಂದಿ ಅದೇ ಸಂವಿಧಾನದ ನಿರ್ಮಾತೃ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಸೇಲಬಲ್ ಮಟಿರಿಯಲ್ ನಂತೆ ಹೊತ್ತು ಹೊರಟಿರುವುದು ನೌಟಂಕಿತನವೇ ಆಗಿದೆ.

ಸಂಘಪರಿವಾರದ ಮುಖವಾಣಿ ಪತ್ರಿಕೆಯ ಸಂಪಾದಕೀಯದಲ್ಲಿ ಅಂಬೇಡ್ಕರ್ ಅವರನ್ನು ಸರ್ವಶ್ರೇಷ್ಠರು‌ ಎಂದು ಕರೆದವರು ಆ ಅಂಬೇಡ್ಕರ್ ಬರೆದ ಬರೆದ ಸಂವಿಧಾನವನ್ನು ಬದಲಾಯಿಸಲು ಹೊರಟಿದ್ದಾರೆ. ಹೀಗೆ ಎರಡೂ ಬಗೆಯ ಪಾತ್ರಗಳನ್ನು ಇಂದು ಮಾಡಲಾಗುತ್ತಿದೆ. ದಲಿತರ ಮತಗಳನ್ನು ಸೆಳೆಯಲು ಪಕ್ಷಗಳು ಅಂಬೇಡ್ಕರ್ ಅವರನ್ನು ದೋಚುತ್ತಿದ್ದು, ನಿಜವಾದ ಅಂಬೇಡ್ಕರ್ ಅವರನ್ನು ಕೊಲ್ಲುವ ಕೆಲಸ ಮಾಡಲಾಗುತ್ತಿದೆ. ಅಂಬೇಡ್ಕರ್ ಅವರ ಪ್ರಭಾವಳಿಯನ್ನು ಅಳಿಸಿ ಹಾಕುವ ಪ್ರಯತ್ನಗಳು ಎಲ್ಲಾ ಕಾಲಕ್ಕೂ ಮುಂದುವರೆದಿದೆ. ಅವರ ಪ್ರತಿಮೆಗಳನ್ನು‌ ಕುಟ್ಟಿ ಕೆಡವಲಾಯಿತು, ಸಗಣಿ ನೀರು ಎರಚಲಾಯಿತು. ಸಂವಿಧಾನವನ್ನು ಸುಟ್ಟು ವಿಷಕಾರಿಕೊಳ್ಳಲಾಯಿತು, ಅಂಬೇಡ್ಕರ್ ರೂಪಿಸಿದ ಮೀಸಲಾತಿ, ಸಮಾನತೆ, ಸಹೋದರತೆಯ ಉದಾತ್ತ ಭಾವನೆಗಳಿಗೆ ಪ್ರತಿಕ್ಷಣವೂ ಬೆಂಕಿ ಇಡಲಾಗುತ್ತಿದೆ. ಕುದುರೆ ಏರಿದ್ದಕ್ಕೆ, ಸತ್ತ ದನ ತಿಂದಿದ್ದಕ್ಕೆ, ಊರ ನಡು ಬೀದಿಯಲ್ಲಿ ನಡೆದಾಡಿದ್ದಕ್ಕೆ ದಲಿತರನ್ನು ಬಡಿದು ಕೊಲ್ಲಲ್ಲಾಗಿದೆ. ಇದೆಲ್ಲಾ ನಡೆಯುತ್ತಿರುವಾಗ ನಡ್ಡಾ ಇಂತಹದ್ದೊಂದು ಸಂದೇಶ ಹೊರಡಿಸಿರುವುದು ಆತ್ಮವಂಚನೆಯ ಪರಮಾವಧಿ. ಭೀಮನೆಂಬ ಸಂತನನ್ನು ಕಳ್ಳರ ಸಂತೆಯೊಂದು ಊರೂರಿಗೆ ಹೊತ್ತು ಮಾರುತ್ತಿದೆ.

ಈ ದೇಶದ ಸಂವಿಧಾನ ಪದೆ ಪದೇ ತನ್ನ ಅಸ್ತಿತ್ವದ ಆತಂಕವನ್ನು ಎದುರಿಸುತ್ತಿದೆ. ಸಂವಿಧಾನ ಪರ ಮಾತಾಡುವವರು ದೇಶದ್ರೋಹಿ ಪಟ್ಟ ಹೊತ್ತು ಜೈಲು ಸೇರಬೇಕಾಗಿದೆ. ನಕ್ಸಲ್ ಸಿಂಪಥೈಸರ್‌ಗಳಾಗಿಸಿ ಜೈಲಿನಲ್ಲಿ ಕೊಳೆಸಲಾಗುತ್ತಿದೆ. ಕೊರೆಗಾಂ ವಿಜಯೋತ್ಸವ ಸಂದರ್ಭವೂ ಅಪಥ್ಯವಾಗಿ ದಾಳಿ ತುತ್ತಾಗಬೇಕಾಗುತ್ತದೆ. ಸಂವಿಧಾನದ ಮೂಲ ತಳಹದಿಯಾದ ಚರ್ಚೆ, ಸಂವಾದಗಳಿಗೂ ತೆರೆದುಕೊಳ್ಳದ ಮನುವಾದಿಗಳು ಇಂದು ಪ್ರಶ್ನಿಸುವ ಕೊರಳುಗಳನ್ನು ಸರಪಳಿಯಿಂದು ಬಿಗಿದು ಬಿಸಾಡುವ ಫ್ಯಾಸಿಸಂನಲ್ಲಿ ಮುಳುಗಿವೆ. ಈ ದೇಶದ ಪ್ರಧಾನಿಯನ್ನು ಪ್ರಶ್ನಿಸುವುದೂ ಪರಮ ಅಪರಾಧ ಮತ್ತು ದೇಶದ್ರೋಹದ ಕೃತ್ಯವಾಗುತ್ತದೆ. ಇದನ್ನೆಲ್ಲಾ‌ ಮರೆಮಾಚಲು ಮತ್ತೆ ಮತ್ತೆ ಅಂಬೇಡ್ಕರ್ ಅವರ ಚಿತ್ರ ತೋರಿಸುತ್ತಾ ಮಾರ್ಜಾಲ ನಡಿಗೆ (cat walk) ನಡೆದಿದೆ.

ಅಂಬೇಡ್ಕರ್ ಅವರನ್ನು ಇಂತವರ ಬಂಧನದಿಂದ ಬಿಡಿಸಿಕೊಳ್ಳುವ ಕೆಲಸ ಇಂದಿನ ಜರೂರು ಆಗಿದೆ. ಈ ಹಿಂದಿನಿಂದಲೂ ಒಂದು ತಂತ್ರವನ್ನು ಮನುವಾದಿಗಳು ಅನುಸರಿಸುತ್ತಲೆ ಬಂದಿದ್ದಾರೆ ಅದೆಂದರೆ : ತಮ್ಮ ವಿರೋಧಿ ಆದ ಸೈದ್ಧಾಂತಿಕ ಬದ್ದತೆಯುಳ್ಳ ಜನನಾಯಕನೊಬ್ಬನನ್ನು ತುಳಿದು ಹೊಸಕಿ ಹಾಕುವುದು. ಅದು ಸಾಧ್ಯವಾಗದಿದ್ದರೆ ಆತನ ಚಾರಿತ್ರ್ಯವಧೆ ಮಾಡುವುದು. ಅದೂ ಫಲ ನೀಡದಿದ್ದರೆ ಆತನನ್ನು ತಮ್ಮವನನ್ನಾಗಿಸಿಕೊಂಡು ದೈವೀಕರಿಸುವುದು.

ಅಂಬೇಡ್ಕರ್, ಗಾಂಧಿಯವರನ್ನು ಚರಿತ್ರೆಯಿಂದ ಅಳಿಸಲಾಗದ, ಅವರ ಪ್ರಭೆಯನ್ನು ಮುಚ್ಚಿಡಲಾಗದ ಕಾರಣ ಅವರನ್ನು ಈಗ ದೈವೀಕರಿಸುವ ಷಡ್ಯಂತ್ರಗಳು ನಡೆದಿವೆ. ಸಿದ್ದ ಮಾದರಿಗಳನ್ನು ಈ ದೇಶದ ಬಹುಜನರಲ್ಲಿ ಬಿತ್ತಲಾಗುತ್ತಿದೆ. ಇದು ಅಪಾಯಕಾರಿಯಾದುದ್ದು. ಜನನಾಯಕರುಗಳನ್ನು ದೈವೀಕರಿಸುವ ಮೂಲಕ ಅಥವಾ ದೇವರು, ಒಂದು ಸಮುದಾಯದ ನಾಯಕ ಎಂದು ಸಿದ್ದಮಾದರಿಗಳಿಗೆ ಬಿಗಿದು ಅವರೊಳಗಿನ ಸಮಷ್ಟಿಯ ವಿಚಾರ, ಸಿದ್ದಾಂತಗಳನ್ನು ಪ್ರಜ್ಞಾಹೀನಗೊಳಿಸುವ ಕುತಂತ್ರ ಜಾರಿಯಲ್ಲಿದೆ. ಒಂದೆಡೆ ಅಂಬೇಡ್ಕರ್ ವಿಚಾರಧಾರೆಗಳನ್ನು ಪ್ರಚುರ ಪಡಿಸಿ ಎಂದು ತಮ್ಮ ಕಾರ್ಯಕರ್ತರಿಗೆ ಕರೆ ನೀಡುತ್ತಲೆ ಅದೇ ವಿಚಾರಧಾರೆ ಎತ್ತುವವರನ್ನು ದೇಶದ್ರೋಹಿಗಳನ್ನಾಗಿಸಲಾಗುತ್ತಿದೆ.

ಇಂತಹ ಸಂದರ್ಭದಲ್ಲಿ ಈ ದೇಶದ ಬಹುಜನರು ಎಚ್ಚರಗೊಳ್ಳಬೇಕಿದೆ. ಅಂಬೇಡ್ಕರ್ ಅವರ ದೋಚುಕೋರರಿಂದ ಉಳಿಸಿಕೊಳ್ಳುವುದು ಎಂದರೆ ಅವರ ಪೋಟೊಗೆ , ಪ್ರತಿಮೆಗಳಿಗೆ ಹಾರ ಹಾಕಿ ಪೂಜಿಸುವುದಲ್ಲ. ಅಂಬೇಡ್ಕರ್ ಅವರು ಹೇಳಿದಂತೆ ಓಟ್ ಬ್ಯಾಂಕ್‌ನ ಸರಕನ್ನಾಗಿಸಿಕೊಂಡು ದಲಿತರ ಮತ ದೋಚುವ ಸಂಚನ್ನು ಬಯಲು ಮಾಡವುದು. ಅಂಬೇಡ್ಕರ್ ಎಂಬ ಮಹಾನ್ ದಾರ್ಶನಿಕನ ವಿಚಾರಧಾರೆ ಗಳನ್ನು ಎದೆಗಿಳಿಸಿಕೊಂಡು ಸ್ವಾಭಿಮಾನದಿಂದ ನಡೆಯುವುದೇ ಆಗಿದೆ.

ಇಪ್ಪತ್ತು ವರ್ಷಗಳ ನಂತರ ಆ ಶಾಲೆಗೆ ಹೋಗಿದ್ದೆ. ಮೂರು ವರ್ಷ ಹೈಸ್ಕೂಲ್, ಎರಡು ವರ್ಷ ಪಿಯು ಓದಿದ ಶಾಲೆ. ಬಹಳಷ್ಟು ಬದಲಾಗಿತ್ತು. ಪ್ರಿನ್ಸಿಪಾಲ್ ರೂಂನ ಕುರ್ಚಿಯಲ್ಲಿ ರಾಜಾರೋಷವಾಗಿ ಕುಳಿತು ಹುಡುಕಾಡುತ್ತಿದ್ದ ನನ್ನ‌ ಕಣ್ಣುಗಳಿಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪೋಟೊವೊಂದು ಗೋಡೆಯಲ್ಲಿ ತೂಗುತ್ತಿರುವುದು ಕೊನೆಗೂ ಕಾಣ ಸಿಕ್ಕಿತು.

ಪೋಟೊದ ಪ್ರೇಮ್‌ನ ಕೆಳ ತುದಿಯಲ್ಲಿ ಬಿಳಿ ಅಕ್ಷರದಲ್ಲಿ ” ಕೊಡುಗೆ: ಡಾ.ಬಿ.ಆರ್ ಅಂಬೇಡ್ಕರ್ ಯುವಕರ ಸಂಘ” ಎಂಬ ಮಾಸಲು ಅಕ್ಷರಗಳಿದ್ದವು. ಇಪ್ಪತ್ತು ವರ್ಷಗಳ ಹಿಂದಕ್ಕೆ ಜಾರಿದೆ…

ಅವ್ವ ಸವೆದ ಸೆರಗ ಜುಂಗಿನ ಗಂಟು ಬಿಚ್ಚಿ ಅರವತ್ತೈದು ರೂಪಾಯಿಗಳ ಚಿಲ್ಲರೆ ಕಾಸುಗಳನ್ನು ಆ ಮನುಷ್ಯನ (?) ನ ಮುಂದೆ ಸುರಿದು ಪ್ರಿನ್ಸಿಪಾಲ್ ರೂಂ ನ ತಲೆಬಾಗಿಲಿಗೆ ಒರಗಿ ಕೈ ಮುಗಿದು ನಿಂತಳು..

“ಏನಮ್ಮ ಸ್ವಲ್ಪ‌ಇನ್ನೂ ದೂರ ನಿಂತ್ಕೋ…. ಇಷ್ಟು ದುಡ್ಡಲ್ಲಿ ನಿನ್ಮಗನಿಗೆ ಸೀಟು ಕೊಡೋಕಾಗೋಲ್ಲ… ಮುನ್ನೂರು ರೂಪಾಯಿ ತಂದ್ರೆ ಸೀಟು. ದುಡ್ಡಿಲ್ಲದ ಮೇಲೆ‌ ಗೌರ್ಮೆಂಟ್ ಸ್ಕೂಲ್ಗೆ ಸೇರ್ಸು… ನಡಿ…, ನಡಿ‌‌‌ …. ಮುಖ ತೋರಿಸಬೇಡಿ ದುಡ್ಡು ತಂದ್ರೆ ಸೀಟು.” ಎಂದವನೆ ಆತ ಗೊಣಗಾಡಿಕೊಂಡು ತನ್ನ ಟೇಬಲ್ ಮೇಲಿದ್ದ ಚಿಲ್ರೆ ಕಾಸುಗಳನ್ನು ಲೆಡ್ಜರ್‌ನಿಂದ ಅವ್ವನ ಕಡೆಗೆ ನೂಕಿದ.

ಸಿಟ್ಟಿಗೆದ್ದವಳಂತೆ ಬರಬರನೆ ಕಾಸುಗಳನ್ನು ಬಾಚಿ ಸೆರಗಿಗೆ ಗಂಟಿಕ್ಕಿಕೊಂಡು ದರದರನೆ ಎಡಗೈಲಿ‌ ನನ್ನ ಎಳೆದಾಡಿಕೊಂಡು ತಾನು ಕೆಲಸ ಮಾಡುತ್ತಿದ್ದ ರೈಸ್ ಮಿಲ್‌ನ ಹುಬ್ಲು ಹಾರುವ ಗೋಡೌನ್‌ಗೆ ಸೇರಿಕೊಂಡು ಹಠಕ್ಕೆ ಬಿದ್ದವಳಂತೆ ತೌಡು ಸಾಣಿಸಿ ಬುಟ್ಟಿಯಲ್ಲಿ ತುಂಬಿಕೊಂಡು ಕೊಟ್ಟಿಗೆ ಕಟ್ಟಿದ್ದ ಬಸವಣ್ಯಮ್ಮರ ಮನೆಗೆ ಅಳೆದು ಕಾಸು ಎಣಿಸಿಕೊಂಡಳು. ಅಪ್ಪ ಕೈ ಜೋಡಿಸಿದ ಮುನ್ನೂರು ರೂಪಾಯಿ ಅವಳ ಕೈ ತುಂಬಿಕೊಂಡಿತು. ಮರು ದಿನ ಅದೇ ಪ್ರಿನ್ಸಿಪಾಲ್ ರೂಂ ತಲೆ ಬಾಗಿಲಿಗೆ ಒರಗಿ ನಡಿ ನಡಿ… ಎಂದವನ ಮುಖಬಣ್ಣ ಬಿಳಿಚಿಕೊಳ್ಳುವಂತೆ ನನ್ನನ್ನು ಸ್ಕೂಲ್ ಗೆ ದಾಖಲಿಸಿಯೇ ಬಿಟ್ಟಳು.

ಗೌರ್ಮೆಂಟ್ ಸ್ಕೂಲ್‌ನಲ್ಲಿ ಪ್ರೈಮರಿ ಓದು ಮುಗಿಸಿದ ನಾನು ಖಾಸಗಿ ಸ್ಕೂಲ್‌ನಲ್ಲಿ ಹೈಸ್ಕೂಲ್ ಓದಬೇಕೆಂಬ ಆಸೆ ಈಡೇರಿತ್ತು. ಈ‌ ಖಾಸಗಿ ಸ್ಕೂಲ್ ಜಾತಿವಂತರ ಮುಷ್ಟಿಯಲ್ಲಿದ್ದಿದ್ದರಿಂದ ಸೇರುವಾಗಲೇ ಜಾತಿ ಆಧಾರಿತ ತೀರ್ಮಾನ, ನಿಗಾ ವಹಿಸಲಾಗುತ್ತಿತ್ತು. ಇದೊಂದು ಯಾತನೆ. ಮಾತು ಮಾತಿಗೂ ಜಾತಿಯ ಹೀಗಳಿಕೆ ಮಾಮೂಲು ಆಗಿ ಹೋಗಿತ್ತು. ಸ್ಕಾಲರ್ ಶಿಫ್‌ಗೆ ಸಾಲು ನಿಂತಾಗ ಕ್ಲರ್ಕ್ ನಾಮದಯ್ಯ ಹಂಗಿಸದ ಮಾತೇ ಇರಲಿಲ್ಲ. “ಬಂದ್ರೇನೇನ್ರೋ…. ನಿಮ್ಮಪ್ಪನ ಮನೆ ಆಸ್ತಿ ತಗೊಂಡೋಕೆ ಬಂದಿದ್ದೀರ …” ಎಂದು ಉಗಿದು ಹೀಯಾಳಿಸಿ ನೋಟುಗಳ ಮುಖಕ್ಕೆಸೆದು ಕಳುಸುತ್ತಿದ್ದ. ಹೀಗಿರಲು ಅದೊಂದು ದಿನ ಸ್ಕೂಲ್‌ನಲ್ಲಿ ಅಂಬೇಡ್ಕರ್ ಯುವಕ ಸಂಘ ವನ್ನು ಹುಟ್ಟು‌ಹಾಕಿಬಿಟ್ಟೆವು. ದಲಿತರ ಹುಡುಗರ ಜೊತೆ ಕೆಲ ಶೂದ್ರ , ಸಾಬ್ರು ಗೆಳೆಯರು ಜೊತೆಗೂಡಿದರು. ಮೇಲ್ಜಾತಿಯ ಮೇಸ್ಟ್ರಿಗೆ ಸಹಿಸಲಾಗದ ಸಿಟ್ಟು ಸ್ಪೋಟಗೊಂಡಿತು. ಯೂನಿಫಾರಂ ಇಲ್ಲ. ಹೋಂ ವರ್ಕ್ ಸರಿಯಾಗಿ ಮಾಡಿಲ್ಲ, ಡ್ರಿಲ್ ಮಾಡೋಕೆ ಬರೋಲ್ಲ.. ಹೀಗೆ ಕುಂಟು ನೆಪಗಳ ಒಡ್ಡಿ ಬಡಿಯಲಾಗುತ್ತಿತ್ತು. ಇಂತಹವರ ನಡುವೆ ಅಂತಃಕರಣ, ಮಾನವೀಯತೆ ಜಾತಿಯನ್ನು ಮೀರಿದ್ದು ಎಂಬುದಕ್ಕೆ ಮೇಲ್ಜಾತಿಯವರೇ ಆಗಿದ್ದ ಮೇಷ್ಟ್ರೊಬ್ಬರು ನಮ್ಮ ವಿರುದ್ಧದ ಜಾತಿ‌ ಮಸಲತ್ತನ್ನು ಖಂಡಿಸುತ್ತಾ ನಮ್ಮನ್ನು ತಾಯಿ ಪ್ರೀತಿಯಿಂದ ಕಾಣುತ್ತಿದ್ದದ್ದು ನಮಗೆ ವಿಸ್ಮಯವೂ… ಬಲವೂ ಆಗಿತ್ತು.

ದೌರ್ಜನ್ಯ ವಿರುದ್ಧ ಹೋರಾಟಕ್ಕಿಳಿದೆವು. ಸ್ಕೂಲ್ ವಾರ್ಷಿಕೋತ್ಸವದ‌ ದಿನ ದೌರ್ಜನ್ಯಕ್ಕೆ ಪ್ರತಿಕಾರವೆಂಬಂತೆ ಅಂಬೇಡ್ಕರ್ ಪೋಟೊವೊಂದನ್ನು ಪ್ರೇಮ್ ಹಾಕಿಸಿ ಅದರ ಕೆಳ ತುದಿಯಲ್ಲಿ ಕೊಡುಗೆಯನ್ನು ಬರೆದು ವೇದಿಕೆಯಲ್ಲೆ ಪ್ರಿನ್ಸಿಪಾಲರ ಕೈಗಿಟ್ಟೆವೆ. ಪರಿಸ್ಥಿತಿ ಕೈ ಮೀರಿದ್ದನ್ನು ಅರಿತ ಪ್ರಿನ್ಸಿಪಾಲರು ಮತ್ತವರ ಗುಂಪು ಅಂಬೇಡ್ಕರ್ ಪೋಟೋವನ್ನು ಲ್ಯಾಬ್ ರೂಂ ನಲ್ಲಿ ತೂಗು ಹಾಕಿದ್ದರು. ಕೆಲವು ವರ್ಷಗಳ ನಂತರ ಆ ಶಾಲೆಗೆ ದಲಿತರೊಬ್ಬರು ಪ್ರಿನ್ಸಿಪಾಲ್ ಆಗಿ ಬಂದಾಗ ಲ್ಯಾಬ್ ರೂಂನಲ್ಲಿ ಧೂಳು ಹಿಡಿದಿದ್ದ ಅಂಬೇಡ್ಕರ್ ಪ್ರಿನ್ಸಿಪಾಲ್ ಛೇಂಬರ್‌ನ ಒಳಬಾಗಿಲ ತಲೆಯಲ್ಲಿ ಕುಳಿತಿದ್ದರು. ನಾನು ಕಾಲು ಮೇಲೆ ಕಾಲು ಏರಿಸಿಕೊಂಡು ಎದೆ ಎತ್ತಿ ಕುಳಿತು ಅವರತ್ತ ನೋಡುವಾಗ ಬಹುಶಃ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಈ ದೇಶದಲ್ಲಿ ಹುಟ್ಟದೆ ಇದ್ದಿದ್ದರೂ ನಾವು ಬದುಕಿರುತ್ತಿದ್ದೆವು… ಅದು ಗುಲಾಮರಾಗಿ, ಹೆಣಗಳಾಗಿಯೇ..

ಬಾಬಾ ಸಾಹೇಬ್ ಅಂಬೇಡ್ಕರ್ ‌ನಿಮಗೆ ಸಾವಿರದ ಶರಣು..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಬರಹ ಅದ್ಭುತವಾಗಿದೆ ಮತ್ತಿ ವಾಸ್ತವ ಸತ್ಯದಿಂದ ಕೂಡಿದೆ.. ಧನ್ಯವಾದಗಳು

  2. ಇದೇ ಮೀಸಲಾತಿ ಪಡೆದು ಮುಂದುವರೆದವರಲ್ಲಿ ಹೊಲೆಯ(ಬಲಗಯ್) ಗುಂಪು ಸಿಂಹಪಾಲು ಪಡೆದಿದ್ದಾರೆ.ಅದೇ ಮಾದಿಗ(ಎಡಗಯ್)ರಿಗೆ ಅವರ ಮಂದಿಎಣಿಕೆಗೆ ತಕ್ಕಂತೆ ಪಾಲು ಸಿಗದೆ ತುಳಿತಕ್ಕೊಳಗಾಗಿದ್ದಾರೆ. ಇದನ್ನು ಸರಿಮಾಡಲು ಬಂದ ಜ.ಸದಾಶಿವ ವರದಿಯನ್ನು ಕಡೆಗಣಿಸಲಾಗಿದೆ.ಅಂಬೇಡ್ಕರ್ ಹುಟ್ಟುಹಬ್ಬದ ಈ ಹೊತ್ತಿನಲ್ಲಿ ಈ ಬಗೆಗೆ ತಕ್ಕ ಚರ್ಚೆಯಾಗಬೇಕು.

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....