Homeಮುಖಪುಟಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಯ ಕಿಡಿ: ಶಹೀದ್ ಅಶ್ಫಾಖುಲ್ಲಾ ಖಾನ್

ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಯ ಕಿಡಿ: ಶಹೀದ್ ಅಶ್ಫಾಖುಲ್ಲಾ ಖಾನ್

- Advertisement -
- Advertisement -

“ವೋ ಜಿಸ್ಮ್ ಬೀ ಕ್ಯಾ ಜಿಸ್ಮ್ ಹೈ, ಜಿಸ್ಮೆ ನಾಹೋ ಖೂನ್-ಎ-ಜುನೂನ್, ಕ್ಯಾ ಲಡೇ ತೂಫಾನೋಂ ಸೆ, ಜೋ ಕಶ್ತಿ-ಎ-ಸಾಹಿಲ್ ಮೆ ಹೈ… ಸರ್ಫರೋಶಿ ಕಿ ತಮನ್ನಾ ಅಬ್ ಹಮಾರೆ ದಿಲ್ ಮೆ ಹೈ, ದೇಖ್ ನಾ ಹೈ ಝೋರ್ ಕಿತ್ನಾ ಬಾಝು-ಎ-ಖಾತಿಲ್ ಮೆ ಹೈ”….

ಜೈಲಿನ ಕೋಣೆಗಳಿಂದ ಕೇಳಿ ಬರುತ್ತಿದ್ದ ಈ ಕ್ರಾಂತಿ ಗೀತೆ ಬ್ರಿಟಿಷ್ ಪ್ರಭುತ್ವದ ಎದೆಯಲ್ಲಿ ಅದ್ಯಾವ ಪರಿ ಭಯ ಹುಟ್ಟಿಸಿತ್ತೆಂದರೆ ಜೀವದ ಗೆಳೆಯರಾಗಿದ್ದ ಆ ಇಬ್ಬರು ಕ್ರಾಂತಿಕಾರಿಗಳನ್ನು ದೂರದೂರದ ಸೆಲ್ ಗಳಿಗೆ ಹಾಕಿಬಿಟ್ಟರು. ಅವರೇ ಶಹೀದ್ ಅಶ್ಫಾಕುಲ್ಲಾಹ್ ಖಾನ್ ಮತ್ತು ಶಹೀದ್ ರಾಂ ಪ್ರಸಾದ್ ಬಿಸ್ಮಿಲ್.

ಅಶ್ಫಾಕುಲ್ಲಾಹ್ ಖಾನ್ ಹುಟ್ಟಿದ್ದು ಉತ್ತರ ಪ್ರದೇಶದ ಶಹಜಹಾನ್ ಪುರದ ಪ್ರತಿಷ್ಠಿತ ಶ್ರೀಮಂತ ಮನೆತನದಲ್ಲಿ. ತಂದೆಯ ಕಡೆಯವರು ಅಂತಹ ವಿದ್ಯಾವಂತರೇನಲ್ಲ. ತಾಯಿ ಮಝ್ ಹರುನ್ನೀಸಾರ ಕಡೆಯಲ್ಲಿ ಎಲ್ಲರೂ ಆ ಕಾಲಕ್ಕೆ ಉನ್ನತ ಶಿಕ್ಷಣ ಪಡೆದು ಉನ್ನತ ಹುದ್ದೆಗಳಲ್ಲಿದ್ದರು. ಅವರ ಕುಟುಂಬಿಕರಲ್ಲಿ ಮ್ಯಾಜಿಸ್ಟ್ರೇಟ್ ಗಳೂ ಇದ್ದರು. ಅವೆಲ್ಲವೂ ಬ್ರಿಟಿಷ್ ಸರಕಾರದ ಹುದ್ದೆಗಳಾಗಿದ್ದವು. ತಂದೆ ಶಫೀಕುರ್ರಹ್ಮಾನ್ ಪೋಲೀಸ್ ಇಲಾಖೆಯಲ್ಲಿದ್ದರು.

ಗಾಂಧೀಜಿ ಅಸಹಕಾರ ಚಳವಳಿಗೆ ಕರೆಕೊಟ್ಟಾಗ ಅಶ್ಫಾಕ್ ಇನ್ನೂ ವಿದ್ಯಾರ್ಥಿಯಾಗಿದ್ದರು. ಅದು ಅವರ ಮೇಲೆ ಗಾಢ ಪ್ರಭಾವ ಬೀರಿತು. ತನ್ನ ಕುಟುಂಬಿಕರು ಬ್ರಿಟಿಷ್ ಸರಕಾರದ ಹುದ್ದೆಗಳಲ್ಲಿರುವುದು ಅಶ್ಫಾಕ್ ರಿಗೆ ಒಂದು ಕಪ್ಪು ಚುಕ್ಕೆಯಂತೆ ಅನಿಸುತ್ತಿತ್ತು. ಸುಶಿಕ್ಷಿತ ಕುಟುಂಬದ ಹಿನ್ನೆಲೆಯವರಾದ ಅವರ ಹೆತ್ತವರು ತಮ್ಮ ಕಿರಿಯ ಮಗ ಅಶ್ಫಾಕ್ ನನ್ನು ಪ್ರತಿಷ್ಟಿತ ಕಾನ್ವೆಂಟ್ ಶಾಲೆಯೊಂದಕ್ಕೆ ಸೇರಿಸಿದ್ದರು. ಪ್ರೌಢಶಾಲಾ ವಿದ್ಯಾರ್ಥಿಯಾಗಿದ್ದಾಗಲೇ ಬ್ರಿಟಿಷ್ ಪ್ರಭುತ್ವದ ವಿರುದ್ಧ ಮಾತನಾಡುತ್ತಿದ್ದ ಅವರನ್ನು ‘ಮಕ್ಕಳ ತಲೆಯಲ್ಲಿ ಸರಕಾರದ ವಿರುದ್ಧ ಭಾವನೆಗಳನ್ನು ಬಿತ್ತುತ್ತಾನೆಂದು’ ಶಾಲೆಯಿಂದ ಹೊರಹಾಕಲಾಗಿತ್ತು. ಗಾಂಧೀಜಿ ಅಸಹಕಾರ ಚಳವಳಿಗೆ ಕರೆಕೊಟ್ಟಾಗ ಅಶ್ಫಾಕ್ ತನ್ನ ಸಹಪಾಠಿಗಳೊಂದಿಗೆ ಬೀದಿಗಿಳಿದು ಸಂಗ್ರಾಮದ ಕೆಲಸಗಳಲ್ಲಿ ಸಕ್ರಿಯರಾದರು.

ಅದಾಗಲೇ ಕ್ರಾಂತಿಕಾರಿ ಪುಸ್ತಕಗಳು ಅಶ್ಫಾಕ್ ರ ಸಂಗಾತಿಗಳಾಗಿದ್ದವು. ಉರ್ದು ಮತ್ತು ಸಂಸ್ಕೃತದಲ್ಲಿ ಒಳ್ಳೆಯ ಪಾಂಡಿತ್ಯ ಪಡೆದಿದ್ದ ಅಶ್ಫಾಕ್ ಉರ್ದುವಿನಲ್ಲಿ ಹಲವಾರು ಕವಿತೆಗಳನ್ನು ಬರೆಯುತ್ತಿದ್ದರು. ಅಸಹಕಾರ ಚಳವಳಿ ಚೌರಿ ಚೌರಾದಲ್ಲಿ ಹಿಂಸಾಚಾರಕ್ಕೆ ತಿರುಗಿದ್ದರಿಂದ ಗಾಂಧೀಜಿ ಅಸಹಕಾರ ಚಳವಳಿಯನ್ನು ಹಿಂದೆಗೆದರು. ಬಿಸಿರಕ್ತದ ತರುಣರಾದ ಅಶ್ಫಾಕ್ ಅದರಿಂದಾಗಿ ಕ್ರುದ್ಧರಾದರು. ಬ್ರಿಟಿಷ್ ಪ್ರಭುತ್ವದ ವಿರುದ್ಧ ಇನ್ನು ಸಶಸ್ತ್ರ ಹೋರಾಟವೇ ಸರಿಯಾದ ಮಾರ್ಗ ಎಂದು ನಿರ್ಧರಿಸಿ ಕ್ರಾಂತಿಕಾರಿ ತಂಡದ ತಲಾಶೆಯಲ್ಲಿದ್ದರು. ಅಶ್ಫಾಕರಿಗಿಂತ ಮೂರು ವರ್ಷ ಹಿರಿಯರಾದ ರಾಂ ಪ್ರಸಾದ್ ಬಿಸ್ಮಿಲ್ ಅದಾಗಲೇ ಬ್ರಿಟಿಷ್ ಪ್ರಭುತ್ವದ ವಿರುದ್ಧದ ಸಿಡಿದೆದ್ದು ಪ್ರಸಿದ್ಧರಾಗಿದ್ದರು. ಅವರು ಅಶ್ಫಾಕ್ ರ ಹುಟ್ಟೂರು ಶಹಜಹಾನ್ ಪುರದವರೇ ಆಗಿದ್ದರೂ ಆಗಾಗ ಭೂಗತರಾಗಬೇಕಾದ ಅನಿವಾರ್ಯತೆಯಿತ್ತು.

ಶಹಜಹಾನ್ ಪುರದಲ್ಲಿ ನಡೆಯಲಿರುವ ಗುಪ್ತ ಸಭೆಯೊಂದಕ್ಕೆ ಬಿಸ್ಮಿಲ್ ಬರುವ ವಿಚಾರ ಅಶ್ಫಾಕರಿಗೆ ತಿಳಿಯಿತು. ಅಂದಿನ ಆ ಗುಪ್ತ ಸಭೆಗೆ ಹೋಗಿ ರಾಂ ಪ್ರಸಾದ್ ಬಿಸ್ಮಿಲ್ ರ ಜೊತೆ ಅಶ್ಫಾಕ್ ಸೇರಿಕೊಂಡರು. ಅವರು ಮೊದಮೊದಲು ಒಂದು ವಿಧದಲ್ಲಿ ಗುರು ಶಿಷ್ಯರಂತಿದ್ದರು. ಆ ಬಳಿಕ ಅವರ ಸ್ನೇಹ ಗಾಢವಾಯಿತು. ಅದೆಷ್ಟು ಗಾಢವಾಯಿತೆಂದರೆ ಒಮ್ಮೆ ಅಶ್ಫಾಕ್ ವಿಪರೀತ ಜ್ವರದಿಂದ ಬಳಲುತ್ತಿದ್ದರು. ಆಗ ನಿದ್ದೆಯಲ್ಲಿ ‘ರಾಂ, ಮೇರೇ ಪ್ಯಾರೇ ರಾಂ’ ಎಂದು ನರಳುತ್ತಿದ್ದರಂತೆ. ಇದನ್ನು ಕೇಳಿಸಿಕೊಂಡ ಹೆತ್ತವರು ಪ್ರಶ್ನಿಸಿದಾಗ “ನಾನು ನನ್ನ ಪ್ರಾಣ ಸ್ನೇಹಿತ ರಾಂ ಪ್ರಸಾದನ ಹೆಸರು ಕರೆಯುತ್ತಿದ್ದೇನೆ” ಎಂದರು. ಕೂಡಲೇ ಅವರು ರಾಂ ಪ್ರಸಾದ್ ಬಿಸ್ಮಿಲ್ ರನ್ನು ಕರೆಸಿದರು. ರಾಂ ಪ್ರಸಾದ್ ಬಂದು ಅಶ್ಫಾಕರನ್ನು ಅಪ್ಪಿ ಹಿಡಿದು ಅತ್ತರಂತೆ.

ಬ್ರಿಟಿಷ್ ಪ್ರಭುತ್ವದ ವಿರುದ್ಧ ಇನ್ನು ಸಶಸ್ತ್ರ ಹೋರಾಟವೇ ಸರಿಯಾದ ಮಾರ್ಗವೆಂದು ನಿರ್ಧರಿಸಿದ್ದ ಅಶ್ಫಾಕ್, ಬಿಸ್ಮಿಲ್ ಮತ್ತವರ ಸಂಗಡಿಗರ ಕೈಯಲ್ಲಿ ಶಸ್ತ್ರಾಸ್ತ್ರ ಖರೀದಿಸಲು ಕಾಸಿರಲಿಲ್ಲ. ಹೀಗಿರಲು ದುಡ್ಡು ಸಂಗ್ರಹಿಸಲು ಏನು ಮಾಡುವುದಪ್ಪಾ ಎಂಬ ಚಿಂತೆಯಲ್ಲಿದ್ದಾಗ ಅವರಿಗೆ ಲಕ್ನೋದಿಂದ ಲಾಹೋರ್ ಗೆ ಹೋಗುವ ರೈಲಿನಲ್ಲಿ ಬ್ರಿಟಿಷ್ ಪ್ರಭುತ್ವ ದುಡ್ಡು ಸಾಗಿಸುತ್ತದೆಯೆಂಬ ಮಾಹಿತಿ ಸಿಕ್ಕಿತ್ತು. ಅವರು ಆ ರೈಲನ್ನು ದರೋಡೆ ಮಾಡುವುದೆಂದು ತೀರ್ಮಾನಿಸಿದರು. ಆದರೆ ಧರ್ಮನಿಷ್ಠ ಕುಟುಂಬದ ಹಿನ್ನೆಲೆಯವರಾದ ಅಶ್ಫಾಕ್ ರಿಗೆ ದರೋಡೆಯ ವಿಚಾರದಲ್ಲಿ ಮೊದಲು ಸಹಮತವಿರಲಿಲ್ಲ.

1925ರ ಅಗಸ್ಟ್ ಎಂಟರಂದು ಬಿಸ್ಮಿಲ್, ಅಶ್ಫಾಕ್ ನೇತೃತ್ವದ ತಂಡ ಗುಪ್ತ ಸಭೆ ಸೇರಿದಾಗ ಅಶ್ಫಾಕ್ ಮೊದಲು ದರೋಡೆಯ ವಿಚಾರದಲ್ಲಿ ಸಹಮತ ತೋರಲಿಲ್ಲ. ಆಗ ಅವರ ತಂಡದಲ್ಲಿದ್ದ ಇತರರು ನಾವು ಈ ಮುಸಲ್ಮಾನನನ್ನು ನಮ್ಮ ತಂಡದಲ್ಲಿ ಸೇರಿಸಿದ್ದೇ ತಪ್ಪಾಯಿತು ಎಂದು ಅಸಹನೆ ವ್ಯಕ್ತಪಡಿಸಿದರು. ಆ ರೀತಿ ಅಸಹನೆ ತೋರಿದವರ ಮೇಲೆ ರಾಂ ಪ್ರಸಾದ್ ಗರಂ ಆದರು.

ಆ ಬಳಿಕ ಬಿಸ್ಮಿಲ್ ತನ್ನ ಪ್ರಾಣ ಸ್ನೇಹಿತನಿಗೆ ಮನವರಿಕೆ ಮಾಡುತ್ತಾರೆ… “ಅಶ್ಫಾಕ್… ನಾವು ಲೂಟಿ ಬಯಸಿರುವುದು ಬ್ರಿಟಿಷರ ವಶದಲ್ಲಿರುವ ನಮ್ಮದೇ ನೆಲದ ಸೊತ್ತನ್ನು.. ಅವರು ನಮ್ಮಿಂದ ಕೊಳ್ಳೆ ಹೊಡೆದುದರ ಒಂದು ಅತೀ ಸಣ್ಣ ಅಂಶವೊಂದನ್ನು ಮಾತ್ರ.. ಅದೂ ಯಾಕಾಗಿ.. ನಮ್ಮ ಸ್ವಂತ ಲಾಭಕ್ಕಾಗಿಯೇ..? ನಮ್ಮ ಮಾತೃಭೂಮಿಯನ್ನು ಅವರ ಕೈಯಿಂದ ವಿಮೋಚನೆಗೊಳಿಸುವ ಏಕೈಕ ಉದ್ದೇಶಕ್ಕಾಗಿ.. ಇದರಲ್ಲಿ ಪುಣ್ಯವಲ್ಲದೇ ಅಪರಾಧವೇನಿದೆ..?”…

ಬಿಸ್ಮಿಲ್ಲ ಅವರ ಮಾತುಗಳು ನಿಧಾನಕ್ಕೆ ಅಶ್ಫಾಕ್ ರ ಹೃದಯಕ್ಕಿಳಿಯಿತು. ಆಗ ಅಶ್ಫಾಕ್ ತನ್ನ ವಿರುದ್ಧ ಮತ್ತು ತನ್ನ ಧರ್ಮದ ವಿರುದ್ಧ ಅಸಹನೆ ತೋರಿದ ಸಂಗಾತಿಗಳನ್ನುದ್ದೇಶಿಸಿ, “ಈ ದೇಶಕ್ಕಾಗಿ ನಮ್ಮ ತಂಡದ ಮೊದಲ ಹುತಾತ್ಮ ಮುಸಲ್ಮಾನ ಅಶ್ಫಾಕ್ ಆಗಲಿದ್ದಾನೆ.. ಇಂಶಾ ಅಲ್ಲಾಹ್” ಎಂದು ಶಪಥ ಮಾಡಿದರು.

1925ರ ಅಗಸ್ಟ್ ಒಂಬತ್ತರಂದು ಲಕ್ನೋದಿಂದ ಲಾಹೋರಿಗೆ ಹೊರಟ ರೈಲನ್ನು ಕಾಕೋರಿಯಲ್ಲಿ ದರೋಡೆ ಮಾಡಿದರು. ಈ ಘಟನೆ ಬ್ರಿಟಿಷ್ ಪ್ರಭುತ್ವದ ಎದೆ ನಡುಗಿಸಿತು. ಎಲ್ಲಾ ಕ್ರಾಂತಿಕಾರಿಗಳು ತಪ್ಪಿಸಿಕೊಂಡು ಭೂಗತರಾದರು. ಕೆಲವೇ ದಿನಗಳಲ್ಲಿ ಒಬ್ಬೊಬ್ಬರನ್ನೇ ಬ್ರಿಟಿಷ್ ಪ್ರಭುತ್ವ ಹಿಡಿದು ಕಂಬಿಯೊಳಗೆ ತಳ್ಳಿತು. ಅಶ್ಫಾಕ್ ಬಿಹಾರಕ್ಕೆ ಪರಾರಿಯಾದರು.

1925 ಡಿಸೆಂಬರ್ 24ರಂದು ಅಲ್ಲಿಂದ ದೆಹಲಿಗೆ ಹೋದರು. ಅಲ್ಲಿ ಸಹಾಯಕ್ಕಾಗಿ ಗೆಳೆಯನೊಬ್ಬನನ್ನು ಸಂಪರ್ಕಿಸಿದರು. ಅಶ್ಫಾಕ್ ವಿದೇಶಕ್ಕೆ ಪರಾರಿಯಾಗಿ ಅಲ್ಲಿ ಇಂಜಿನಿಯರಿಂಗ್ ಓದಿ ಶಸ್ತ್ರಾಸ್ತ್ರ ತಯಾರಿಕೆಯನ್ನು ಕಲಿಯಬೇಕೆಂದಿದ್ದರು. ಆದರೆ ಅಶ್ಫಾಕ್ ಸಹಾಯಕ್ಕೆಂದು ಯಾವ ಗೆಳೆಯನನ್ನು ಸಂಪರ್ಕಿಸಿದ್ದರೋ ಆತ ಬೆನ್ನಿಗೆ ಚೂರಿ ಇರಿಯುವ ಕೆಲಸ ಮಾಡಿದ. ಅಂದರೆ ಬ್ರಿಟಿಷ್ ಪ್ರಭುತ್ವ ಹುಡುಕುತ್ತಿದ್ದ “ಮೋಸ್ಟ್ ವಾಂಟೆಡ್” ಅಶ್ಫಾಕ್ ರನ್ನು ಹಿಡಿಸಿದ.

ಕಾಕೋರಿ ದರೋಡೆಯ ಎಲ್ಲಾ ಆರೋಪಿಗಳೂ ಜೈಲು ಪಾಲಾದರು. ಅದರಲ್ಲಿ ಅಶ್ಫಾಕ್ ರನ್ನು ಪ್ರಮುಖ ಆರೋಪಿಯಾಗಿಸಲಾಯಿತು. ಅಶ್ಫಾಕ್ ರ ಸಹೋದರ ಅಡ್ವಕೇಟ್ ರಿಯಾಸತುಲ್ಲಾ ಖಾನ್ ಕ್ರಾಂತಿಕಾರಿಗಳ ಪರವಾಗಿ ನ್ಯಾಯಾಲಯಗಳಲ್ಲಿ ವಾದಿಸಿದರು. ಆದರೆ ಬ್ರಿಟಿಷ್ ಪ್ರಭುತ್ವ ಅದಾಗಲೇ ಅಶ್ಫಾಕ್, ಬಿಸ್ಮಿಲ್ ಮತ್ತಿತರರನ್ನು ಗಲ್ಲಿಗೇರಿಸುವ ತೀರ್ಮಾನ ಮಾಡಿಯಾಗಿತ್ತು. ಆದರೂ ಬಿಡುಗಡೆಗೊಳಿಸುವ ಪ್ರಯತ್ನ ಭರದಿಂದ ಸಾಗಿತ್ತು. ತನ್ನ ಕಿರಿಯ ಮಗನಿಗೆ ಗಲ್ಲಾಗುತ್ತದೆಂದು ತಾಯಿ ಮಝ್ ಹರುನ್ನಿಸಾ ತೀವ್ರ ಚಿಂತಿತರಾದರು.

ಅಶ್ಫಾಕ್ ಜೈಲಿನಿಂದ ಅಮ್ಮನಿಗೆ ಬರೆದ ಪತ್ರದಲ್ಲೂ ಸಾವಿನ ಬಗ್ಗೆ ನಿರ್ಭೀತರಾಗಿ ಬರೆದಿದ್ದರು ಮತ್ತು ತನಗಾಗಿ ದುಆ ಮಾಡುವಂತೆ ತಾಯಿಗೆ ಕೋರಿದ್ದರು. ಅಶ್ಫಾಕ್ ರ ಕುಟುಂಬಿಕರು ಮತ್ತಿತರ ಹಿರಿಯ ಹೋರಾಟಗಾರರು ಬ್ರಿಟಿಷ್ ಪ್ರಭುತ್ವಕ್ಕೆ ಪರಿ ಪರಿಯಾಗಿ ಬೇಡಿಕೊಂಡರು. ಕೊನೆಯಲ್ಲಿ ಅಶ್ಫಾಕ್ ಕುಟುಂಬ ಸ್ನೇಹಿತ ವಕೀಲರೊಬ್ಬರು ಜೈಲಿನಲ್ಲಿ ಅವರನ್ನು ಭೇಟಿಯಾಗಿ ಮಾಫಿನಾಮಾ ಬರೆಯುವಂತೆ ಕೋರಿದರು. ಕ್ರುದ್ಧರಾದ ಅಶ್ಫಾಕ್ “ನಾನು ಬ್ರಿಟಿಷ್ ಪ್ರಭುತ್ವದೊಂದಿಗೆ ಕ್ಷಮೆ ಯಾಚಿಸಬೇಕೇ…?, ಕ್ಷಮೆಯಾಚಿಸುವುದರ ಅರ್ಥವೇನು..?, ನಾನು ತಪ್ಪು ಮಾಡಿದ್ದೇನೆಂದಲ್ಲವೇ…?, ನನ್ನ ಮಾತೃಭೂಮಿಯ ವಿಮೋಚನೆಗಾಗಿ ನಾನು ಮತ್ತು ನನ್ನ ಸ್ನೇಹಿತರು ಮಾಡಿದ ಕೆಲಸ ಅಪರಾಧವೇ…?, ಅವರೊಂದಿಗೆ ಮಾಫಿ ಕೇಳಿ ಪ್ರಾಣಬಿಕ್ಷೆ ಪಡೆಯುವುದಕ್ಕಿಂತ ಓರ್ವ ಕ್ರಾಂತಿಕಾರಿಗೆ ವೀರ ಮರಣವೇ ಲೇಸು…” ಎಂದು ಅವರನ್ನು ಅಲ್ಲಿಂದ ವಾಪಾಸು ಕಳುಹಿಸಿದರು.

1927 ಡಿಸೆಂಬರ್ ಹತ್ತೊಂಬತ್ತರಂದು ಅಶ್ಫಾಕುಲ್ಲಾಹ್ ಖಾನ್, ರಾಂ ಪ್ರಸಾದ್ ಬಿಸ್ಮಿಲ್, ರಾಜೇಂದ್ರ ಲಾಹಿರಿ, ಠಾಕೂರ್ ರೋಶನ್ ಸಿಂಗರನ್ನು ಗಲ್ಲಿಗೇರಿಸಲಾಯಿತು. ಇತರ ಕ್ರಾಂತಿಕಾರಿಗಳಲ್ಲಿ ಕೆಲವರಿಗೆ ಕಾಲಾಪಾನಿ, ಮತ್ತೆ ಕೆಲವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು.
1925 ಆಗಸ್ಟ್ ಎಂಟರಂದು ಕ್ರಾಂತಿಕಾರಿಗಳ ಗುಪ್ತ ಸಭೆಯಲ್ಲಿ ಗರ್ಜಿಸಿದಂತೆ ಆ ತಂಡದ ಮೊದಲ ಹುತಾತ್ಮ ಅಶ್ಫಾಕುಲ್ಲಾಹ್ ಖಾನ್ ಅವರೇ ಆಗಿಬಿಟ್ಟರು.

ಗಲ್ಲಿಗೇರಿಸಲು ಕರೆತಂದು ಗಲ್ಲು ಪೀಠದಲ್ಲಿ ನಿಲ್ಲಿಸಿದಾಗ ಕೇವಲ ಇಪ್ಪತ್ತೇಳರ ಹರೆಯದ ಆ ಕ್ರಾಂತಿಕಾರಿ ಅಶ್ಪಾಕ್ ನಗು ನಗುತ್ತಾ ನೇಣಿನ ಹಗ್ಗವನ್ನು ಮುತ್ತಿಕ್ಕಿ ‘ಲಾ ಇಲಾಹ ಇಲ್ಲಲ್ಲಾಹ್.. ಮುಹಮ್ಮದುರ್ರಸೂಲುಲ್ಲಾಹ್ ಎಂದು ನೇಣುಗಂಬ ಏರಿದರು.
****

  • ಇಸ್ಮತ್ ಪಜೀರ್

(ಮಂಗಳೂರಿನ ಯುವ ಲೇಖಕರಾದ ಇಸ್ಮತ್ ಪಜೀರ್ ಬ್ಯಾರಿ ಪಠ್ಯಪುಸ್ತಕ ರಚನಾ ಸಮಿತಿಯ ಸದಸ್ಯರಾಗಿದ್ದರು. ಆದರೆ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟಗಾರರ ಮೇಲಿನ ಹಲ್ಲೆ ಖಂಡಿಸಿ ಅದಕ್ಕೆ ರಾಜೀನಾಮೆ ನೀಡಿ ಹೊರಬಂದವರು. ತಮ್ಮದೇ ಆದ ಪಾಲಿಕ್ಲಿನಿಕ್ ನಡೆಸುತ್ತಿದ್ದಾರೆ.)


ಇದನ್ನೂ ಓದಿ: ಸರ್ದಾರ್ ಉದಮ್: ಇದು ಶೂಜಿತ್ ನ ಗೆಲುವು ಮತ್ತು ಪ್ರಜಾಪ್ರಭುತ್ವದ ಗೆಲುವು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...