Homeಮುಖಪುಟಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಯ ಕಿಡಿ: ಶಹೀದ್ ಅಶ್ಫಾಖುಲ್ಲಾ ಖಾನ್

ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಯ ಕಿಡಿ: ಶಹೀದ್ ಅಶ್ಫಾಖುಲ್ಲಾ ಖಾನ್

- Advertisement -
- Advertisement -

“ವೋ ಜಿಸ್ಮ್ ಬೀ ಕ್ಯಾ ಜಿಸ್ಮ್ ಹೈ, ಜಿಸ್ಮೆ ನಾಹೋ ಖೂನ್-ಎ-ಜುನೂನ್, ಕ್ಯಾ ಲಡೇ ತೂಫಾನೋಂ ಸೆ, ಜೋ ಕಶ್ತಿ-ಎ-ಸಾಹಿಲ್ ಮೆ ಹೈ… ಸರ್ಫರೋಶಿ ಕಿ ತಮನ್ನಾ ಅಬ್ ಹಮಾರೆ ದಿಲ್ ಮೆ ಹೈ, ದೇಖ್ ನಾ ಹೈ ಝೋರ್ ಕಿತ್ನಾ ಬಾಝು-ಎ-ಖಾತಿಲ್ ಮೆ ಹೈ”….

ಜೈಲಿನ ಕೋಣೆಗಳಿಂದ ಕೇಳಿ ಬರುತ್ತಿದ್ದ ಈ ಕ್ರಾಂತಿ ಗೀತೆ ಬ್ರಿಟಿಷ್ ಪ್ರಭುತ್ವದ ಎದೆಯಲ್ಲಿ ಅದ್ಯಾವ ಪರಿ ಭಯ ಹುಟ್ಟಿಸಿತ್ತೆಂದರೆ ಜೀವದ ಗೆಳೆಯರಾಗಿದ್ದ ಆ ಇಬ್ಬರು ಕ್ರಾಂತಿಕಾರಿಗಳನ್ನು ದೂರದೂರದ ಸೆಲ್ ಗಳಿಗೆ ಹಾಕಿಬಿಟ್ಟರು. ಅವರೇ ಶಹೀದ್ ಅಶ್ಫಾಕುಲ್ಲಾಹ್ ಖಾನ್ ಮತ್ತು ಶಹೀದ್ ರಾಂ ಪ್ರಸಾದ್ ಬಿಸ್ಮಿಲ್.

ಅಶ್ಫಾಕುಲ್ಲಾಹ್ ಖಾನ್ ಹುಟ್ಟಿದ್ದು ಉತ್ತರ ಪ್ರದೇಶದ ಶಹಜಹಾನ್ ಪುರದ ಪ್ರತಿಷ್ಠಿತ ಶ್ರೀಮಂತ ಮನೆತನದಲ್ಲಿ. ತಂದೆಯ ಕಡೆಯವರು ಅಂತಹ ವಿದ್ಯಾವಂತರೇನಲ್ಲ. ತಾಯಿ ಮಝ್ ಹರುನ್ನೀಸಾರ ಕಡೆಯಲ್ಲಿ ಎಲ್ಲರೂ ಆ ಕಾಲಕ್ಕೆ ಉನ್ನತ ಶಿಕ್ಷಣ ಪಡೆದು ಉನ್ನತ ಹುದ್ದೆಗಳಲ್ಲಿದ್ದರು. ಅವರ ಕುಟುಂಬಿಕರಲ್ಲಿ ಮ್ಯಾಜಿಸ್ಟ್ರೇಟ್ ಗಳೂ ಇದ್ದರು. ಅವೆಲ್ಲವೂ ಬ್ರಿಟಿಷ್ ಸರಕಾರದ ಹುದ್ದೆಗಳಾಗಿದ್ದವು. ತಂದೆ ಶಫೀಕುರ್ರಹ್ಮಾನ್ ಪೋಲೀಸ್ ಇಲಾಖೆಯಲ್ಲಿದ್ದರು.

ಗಾಂಧೀಜಿ ಅಸಹಕಾರ ಚಳವಳಿಗೆ ಕರೆಕೊಟ್ಟಾಗ ಅಶ್ಫಾಕ್ ಇನ್ನೂ ವಿದ್ಯಾರ್ಥಿಯಾಗಿದ್ದರು. ಅದು ಅವರ ಮೇಲೆ ಗಾಢ ಪ್ರಭಾವ ಬೀರಿತು. ತನ್ನ ಕುಟುಂಬಿಕರು ಬ್ರಿಟಿಷ್ ಸರಕಾರದ ಹುದ್ದೆಗಳಲ್ಲಿರುವುದು ಅಶ್ಫಾಕ್ ರಿಗೆ ಒಂದು ಕಪ್ಪು ಚುಕ್ಕೆಯಂತೆ ಅನಿಸುತ್ತಿತ್ತು. ಸುಶಿಕ್ಷಿತ ಕುಟುಂಬದ ಹಿನ್ನೆಲೆಯವರಾದ ಅವರ ಹೆತ್ತವರು ತಮ್ಮ ಕಿರಿಯ ಮಗ ಅಶ್ಫಾಕ್ ನನ್ನು ಪ್ರತಿಷ್ಟಿತ ಕಾನ್ವೆಂಟ್ ಶಾಲೆಯೊಂದಕ್ಕೆ ಸೇರಿಸಿದ್ದರು. ಪ್ರೌಢಶಾಲಾ ವಿದ್ಯಾರ್ಥಿಯಾಗಿದ್ದಾಗಲೇ ಬ್ರಿಟಿಷ್ ಪ್ರಭುತ್ವದ ವಿರುದ್ಧ ಮಾತನಾಡುತ್ತಿದ್ದ ಅವರನ್ನು ‘ಮಕ್ಕಳ ತಲೆಯಲ್ಲಿ ಸರಕಾರದ ವಿರುದ್ಧ ಭಾವನೆಗಳನ್ನು ಬಿತ್ತುತ್ತಾನೆಂದು’ ಶಾಲೆಯಿಂದ ಹೊರಹಾಕಲಾಗಿತ್ತು. ಗಾಂಧೀಜಿ ಅಸಹಕಾರ ಚಳವಳಿಗೆ ಕರೆಕೊಟ್ಟಾಗ ಅಶ್ಫಾಕ್ ತನ್ನ ಸಹಪಾಠಿಗಳೊಂದಿಗೆ ಬೀದಿಗಿಳಿದು ಸಂಗ್ರಾಮದ ಕೆಲಸಗಳಲ್ಲಿ ಸಕ್ರಿಯರಾದರು.

ಅದಾಗಲೇ ಕ್ರಾಂತಿಕಾರಿ ಪುಸ್ತಕಗಳು ಅಶ್ಫಾಕ್ ರ ಸಂಗಾತಿಗಳಾಗಿದ್ದವು. ಉರ್ದು ಮತ್ತು ಸಂಸ್ಕೃತದಲ್ಲಿ ಒಳ್ಳೆಯ ಪಾಂಡಿತ್ಯ ಪಡೆದಿದ್ದ ಅಶ್ಫಾಕ್ ಉರ್ದುವಿನಲ್ಲಿ ಹಲವಾರು ಕವಿತೆಗಳನ್ನು ಬರೆಯುತ್ತಿದ್ದರು. ಅಸಹಕಾರ ಚಳವಳಿ ಚೌರಿ ಚೌರಾದಲ್ಲಿ ಹಿಂಸಾಚಾರಕ್ಕೆ ತಿರುಗಿದ್ದರಿಂದ ಗಾಂಧೀಜಿ ಅಸಹಕಾರ ಚಳವಳಿಯನ್ನು ಹಿಂದೆಗೆದರು. ಬಿಸಿರಕ್ತದ ತರುಣರಾದ ಅಶ್ಫಾಕ್ ಅದರಿಂದಾಗಿ ಕ್ರುದ್ಧರಾದರು. ಬ್ರಿಟಿಷ್ ಪ್ರಭುತ್ವದ ವಿರುದ್ಧ ಇನ್ನು ಸಶಸ್ತ್ರ ಹೋರಾಟವೇ ಸರಿಯಾದ ಮಾರ್ಗ ಎಂದು ನಿರ್ಧರಿಸಿ ಕ್ರಾಂತಿಕಾರಿ ತಂಡದ ತಲಾಶೆಯಲ್ಲಿದ್ದರು. ಅಶ್ಫಾಕರಿಗಿಂತ ಮೂರು ವರ್ಷ ಹಿರಿಯರಾದ ರಾಂ ಪ್ರಸಾದ್ ಬಿಸ್ಮಿಲ್ ಅದಾಗಲೇ ಬ್ರಿಟಿಷ್ ಪ್ರಭುತ್ವದ ವಿರುದ್ಧದ ಸಿಡಿದೆದ್ದು ಪ್ರಸಿದ್ಧರಾಗಿದ್ದರು. ಅವರು ಅಶ್ಫಾಕ್ ರ ಹುಟ್ಟೂರು ಶಹಜಹಾನ್ ಪುರದವರೇ ಆಗಿದ್ದರೂ ಆಗಾಗ ಭೂಗತರಾಗಬೇಕಾದ ಅನಿವಾರ್ಯತೆಯಿತ್ತು.

ಶಹಜಹಾನ್ ಪುರದಲ್ಲಿ ನಡೆಯಲಿರುವ ಗುಪ್ತ ಸಭೆಯೊಂದಕ್ಕೆ ಬಿಸ್ಮಿಲ್ ಬರುವ ವಿಚಾರ ಅಶ್ಫಾಕರಿಗೆ ತಿಳಿಯಿತು. ಅಂದಿನ ಆ ಗುಪ್ತ ಸಭೆಗೆ ಹೋಗಿ ರಾಂ ಪ್ರಸಾದ್ ಬಿಸ್ಮಿಲ್ ರ ಜೊತೆ ಅಶ್ಫಾಕ್ ಸೇರಿಕೊಂಡರು. ಅವರು ಮೊದಮೊದಲು ಒಂದು ವಿಧದಲ್ಲಿ ಗುರು ಶಿಷ್ಯರಂತಿದ್ದರು. ಆ ಬಳಿಕ ಅವರ ಸ್ನೇಹ ಗಾಢವಾಯಿತು. ಅದೆಷ್ಟು ಗಾಢವಾಯಿತೆಂದರೆ ಒಮ್ಮೆ ಅಶ್ಫಾಕ್ ವಿಪರೀತ ಜ್ವರದಿಂದ ಬಳಲುತ್ತಿದ್ದರು. ಆಗ ನಿದ್ದೆಯಲ್ಲಿ ‘ರಾಂ, ಮೇರೇ ಪ್ಯಾರೇ ರಾಂ’ ಎಂದು ನರಳುತ್ತಿದ್ದರಂತೆ. ಇದನ್ನು ಕೇಳಿಸಿಕೊಂಡ ಹೆತ್ತವರು ಪ್ರಶ್ನಿಸಿದಾಗ “ನಾನು ನನ್ನ ಪ್ರಾಣ ಸ್ನೇಹಿತ ರಾಂ ಪ್ರಸಾದನ ಹೆಸರು ಕರೆಯುತ್ತಿದ್ದೇನೆ” ಎಂದರು. ಕೂಡಲೇ ಅವರು ರಾಂ ಪ್ರಸಾದ್ ಬಿಸ್ಮಿಲ್ ರನ್ನು ಕರೆಸಿದರು. ರಾಂ ಪ್ರಸಾದ್ ಬಂದು ಅಶ್ಫಾಕರನ್ನು ಅಪ್ಪಿ ಹಿಡಿದು ಅತ್ತರಂತೆ.

ಬ್ರಿಟಿಷ್ ಪ್ರಭುತ್ವದ ವಿರುದ್ಧ ಇನ್ನು ಸಶಸ್ತ್ರ ಹೋರಾಟವೇ ಸರಿಯಾದ ಮಾರ್ಗವೆಂದು ನಿರ್ಧರಿಸಿದ್ದ ಅಶ್ಫಾಕ್, ಬಿಸ್ಮಿಲ್ ಮತ್ತವರ ಸಂಗಡಿಗರ ಕೈಯಲ್ಲಿ ಶಸ್ತ್ರಾಸ್ತ್ರ ಖರೀದಿಸಲು ಕಾಸಿರಲಿಲ್ಲ. ಹೀಗಿರಲು ದುಡ್ಡು ಸಂಗ್ರಹಿಸಲು ಏನು ಮಾಡುವುದಪ್ಪಾ ಎಂಬ ಚಿಂತೆಯಲ್ಲಿದ್ದಾಗ ಅವರಿಗೆ ಲಕ್ನೋದಿಂದ ಲಾಹೋರ್ ಗೆ ಹೋಗುವ ರೈಲಿನಲ್ಲಿ ಬ್ರಿಟಿಷ್ ಪ್ರಭುತ್ವ ದುಡ್ಡು ಸಾಗಿಸುತ್ತದೆಯೆಂಬ ಮಾಹಿತಿ ಸಿಕ್ಕಿತ್ತು. ಅವರು ಆ ರೈಲನ್ನು ದರೋಡೆ ಮಾಡುವುದೆಂದು ತೀರ್ಮಾನಿಸಿದರು. ಆದರೆ ಧರ್ಮನಿಷ್ಠ ಕುಟುಂಬದ ಹಿನ್ನೆಲೆಯವರಾದ ಅಶ್ಫಾಕ್ ರಿಗೆ ದರೋಡೆಯ ವಿಚಾರದಲ್ಲಿ ಮೊದಲು ಸಹಮತವಿರಲಿಲ್ಲ.

1925ರ ಅಗಸ್ಟ್ ಎಂಟರಂದು ಬಿಸ್ಮಿಲ್, ಅಶ್ಫಾಕ್ ನೇತೃತ್ವದ ತಂಡ ಗುಪ್ತ ಸಭೆ ಸೇರಿದಾಗ ಅಶ್ಫಾಕ್ ಮೊದಲು ದರೋಡೆಯ ವಿಚಾರದಲ್ಲಿ ಸಹಮತ ತೋರಲಿಲ್ಲ. ಆಗ ಅವರ ತಂಡದಲ್ಲಿದ್ದ ಇತರರು ನಾವು ಈ ಮುಸಲ್ಮಾನನನ್ನು ನಮ್ಮ ತಂಡದಲ್ಲಿ ಸೇರಿಸಿದ್ದೇ ತಪ್ಪಾಯಿತು ಎಂದು ಅಸಹನೆ ವ್ಯಕ್ತಪಡಿಸಿದರು. ಆ ರೀತಿ ಅಸಹನೆ ತೋರಿದವರ ಮೇಲೆ ರಾಂ ಪ್ರಸಾದ್ ಗರಂ ಆದರು.

ಆ ಬಳಿಕ ಬಿಸ್ಮಿಲ್ ತನ್ನ ಪ್ರಾಣ ಸ್ನೇಹಿತನಿಗೆ ಮನವರಿಕೆ ಮಾಡುತ್ತಾರೆ… “ಅಶ್ಫಾಕ್… ನಾವು ಲೂಟಿ ಬಯಸಿರುವುದು ಬ್ರಿಟಿಷರ ವಶದಲ್ಲಿರುವ ನಮ್ಮದೇ ನೆಲದ ಸೊತ್ತನ್ನು.. ಅವರು ನಮ್ಮಿಂದ ಕೊಳ್ಳೆ ಹೊಡೆದುದರ ಒಂದು ಅತೀ ಸಣ್ಣ ಅಂಶವೊಂದನ್ನು ಮಾತ್ರ.. ಅದೂ ಯಾಕಾಗಿ.. ನಮ್ಮ ಸ್ವಂತ ಲಾಭಕ್ಕಾಗಿಯೇ..? ನಮ್ಮ ಮಾತೃಭೂಮಿಯನ್ನು ಅವರ ಕೈಯಿಂದ ವಿಮೋಚನೆಗೊಳಿಸುವ ಏಕೈಕ ಉದ್ದೇಶಕ್ಕಾಗಿ.. ಇದರಲ್ಲಿ ಪುಣ್ಯವಲ್ಲದೇ ಅಪರಾಧವೇನಿದೆ..?”…

ಬಿಸ್ಮಿಲ್ಲ ಅವರ ಮಾತುಗಳು ನಿಧಾನಕ್ಕೆ ಅಶ್ಫಾಕ್ ರ ಹೃದಯಕ್ಕಿಳಿಯಿತು. ಆಗ ಅಶ್ಫಾಕ್ ತನ್ನ ವಿರುದ್ಧ ಮತ್ತು ತನ್ನ ಧರ್ಮದ ವಿರುದ್ಧ ಅಸಹನೆ ತೋರಿದ ಸಂಗಾತಿಗಳನ್ನುದ್ದೇಶಿಸಿ, “ಈ ದೇಶಕ್ಕಾಗಿ ನಮ್ಮ ತಂಡದ ಮೊದಲ ಹುತಾತ್ಮ ಮುಸಲ್ಮಾನ ಅಶ್ಫಾಕ್ ಆಗಲಿದ್ದಾನೆ.. ಇಂಶಾ ಅಲ್ಲಾಹ್” ಎಂದು ಶಪಥ ಮಾಡಿದರು.

1925ರ ಅಗಸ್ಟ್ ಒಂಬತ್ತರಂದು ಲಕ್ನೋದಿಂದ ಲಾಹೋರಿಗೆ ಹೊರಟ ರೈಲನ್ನು ಕಾಕೋರಿಯಲ್ಲಿ ದರೋಡೆ ಮಾಡಿದರು. ಈ ಘಟನೆ ಬ್ರಿಟಿಷ್ ಪ್ರಭುತ್ವದ ಎದೆ ನಡುಗಿಸಿತು. ಎಲ್ಲಾ ಕ್ರಾಂತಿಕಾರಿಗಳು ತಪ್ಪಿಸಿಕೊಂಡು ಭೂಗತರಾದರು. ಕೆಲವೇ ದಿನಗಳಲ್ಲಿ ಒಬ್ಬೊಬ್ಬರನ್ನೇ ಬ್ರಿಟಿಷ್ ಪ್ರಭುತ್ವ ಹಿಡಿದು ಕಂಬಿಯೊಳಗೆ ತಳ್ಳಿತು. ಅಶ್ಫಾಕ್ ಬಿಹಾರಕ್ಕೆ ಪರಾರಿಯಾದರು.

1925 ಡಿಸೆಂಬರ್ 24ರಂದು ಅಲ್ಲಿಂದ ದೆಹಲಿಗೆ ಹೋದರು. ಅಲ್ಲಿ ಸಹಾಯಕ್ಕಾಗಿ ಗೆಳೆಯನೊಬ್ಬನನ್ನು ಸಂಪರ್ಕಿಸಿದರು. ಅಶ್ಫಾಕ್ ವಿದೇಶಕ್ಕೆ ಪರಾರಿಯಾಗಿ ಅಲ್ಲಿ ಇಂಜಿನಿಯರಿಂಗ್ ಓದಿ ಶಸ್ತ್ರಾಸ್ತ್ರ ತಯಾರಿಕೆಯನ್ನು ಕಲಿಯಬೇಕೆಂದಿದ್ದರು. ಆದರೆ ಅಶ್ಫಾಕ್ ಸಹಾಯಕ್ಕೆಂದು ಯಾವ ಗೆಳೆಯನನ್ನು ಸಂಪರ್ಕಿಸಿದ್ದರೋ ಆತ ಬೆನ್ನಿಗೆ ಚೂರಿ ಇರಿಯುವ ಕೆಲಸ ಮಾಡಿದ. ಅಂದರೆ ಬ್ರಿಟಿಷ್ ಪ್ರಭುತ್ವ ಹುಡುಕುತ್ತಿದ್ದ “ಮೋಸ್ಟ್ ವಾಂಟೆಡ್” ಅಶ್ಫಾಕ್ ರನ್ನು ಹಿಡಿಸಿದ.

ಕಾಕೋರಿ ದರೋಡೆಯ ಎಲ್ಲಾ ಆರೋಪಿಗಳೂ ಜೈಲು ಪಾಲಾದರು. ಅದರಲ್ಲಿ ಅಶ್ಫಾಕ್ ರನ್ನು ಪ್ರಮುಖ ಆರೋಪಿಯಾಗಿಸಲಾಯಿತು. ಅಶ್ಫಾಕ್ ರ ಸಹೋದರ ಅಡ್ವಕೇಟ್ ರಿಯಾಸತುಲ್ಲಾ ಖಾನ್ ಕ್ರಾಂತಿಕಾರಿಗಳ ಪರವಾಗಿ ನ್ಯಾಯಾಲಯಗಳಲ್ಲಿ ವಾದಿಸಿದರು. ಆದರೆ ಬ್ರಿಟಿಷ್ ಪ್ರಭುತ್ವ ಅದಾಗಲೇ ಅಶ್ಫಾಕ್, ಬಿಸ್ಮಿಲ್ ಮತ್ತಿತರರನ್ನು ಗಲ್ಲಿಗೇರಿಸುವ ತೀರ್ಮಾನ ಮಾಡಿಯಾಗಿತ್ತು. ಆದರೂ ಬಿಡುಗಡೆಗೊಳಿಸುವ ಪ್ರಯತ್ನ ಭರದಿಂದ ಸಾಗಿತ್ತು. ತನ್ನ ಕಿರಿಯ ಮಗನಿಗೆ ಗಲ್ಲಾಗುತ್ತದೆಂದು ತಾಯಿ ಮಝ್ ಹರುನ್ನಿಸಾ ತೀವ್ರ ಚಿಂತಿತರಾದರು.

ಅಶ್ಫಾಕ್ ಜೈಲಿನಿಂದ ಅಮ್ಮನಿಗೆ ಬರೆದ ಪತ್ರದಲ್ಲೂ ಸಾವಿನ ಬಗ್ಗೆ ನಿರ್ಭೀತರಾಗಿ ಬರೆದಿದ್ದರು ಮತ್ತು ತನಗಾಗಿ ದುಆ ಮಾಡುವಂತೆ ತಾಯಿಗೆ ಕೋರಿದ್ದರು. ಅಶ್ಫಾಕ್ ರ ಕುಟುಂಬಿಕರು ಮತ್ತಿತರ ಹಿರಿಯ ಹೋರಾಟಗಾರರು ಬ್ರಿಟಿಷ್ ಪ್ರಭುತ್ವಕ್ಕೆ ಪರಿ ಪರಿಯಾಗಿ ಬೇಡಿಕೊಂಡರು. ಕೊನೆಯಲ್ಲಿ ಅಶ್ಫಾಕ್ ಕುಟುಂಬ ಸ್ನೇಹಿತ ವಕೀಲರೊಬ್ಬರು ಜೈಲಿನಲ್ಲಿ ಅವರನ್ನು ಭೇಟಿಯಾಗಿ ಮಾಫಿನಾಮಾ ಬರೆಯುವಂತೆ ಕೋರಿದರು. ಕ್ರುದ್ಧರಾದ ಅಶ್ಫಾಕ್ “ನಾನು ಬ್ರಿಟಿಷ್ ಪ್ರಭುತ್ವದೊಂದಿಗೆ ಕ್ಷಮೆ ಯಾಚಿಸಬೇಕೇ…?, ಕ್ಷಮೆಯಾಚಿಸುವುದರ ಅರ್ಥವೇನು..?, ನಾನು ತಪ್ಪು ಮಾಡಿದ್ದೇನೆಂದಲ್ಲವೇ…?, ನನ್ನ ಮಾತೃಭೂಮಿಯ ವಿಮೋಚನೆಗಾಗಿ ನಾನು ಮತ್ತು ನನ್ನ ಸ್ನೇಹಿತರು ಮಾಡಿದ ಕೆಲಸ ಅಪರಾಧವೇ…?, ಅವರೊಂದಿಗೆ ಮಾಫಿ ಕೇಳಿ ಪ್ರಾಣಬಿಕ್ಷೆ ಪಡೆಯುವುದಕ್ಕಿಂತ ಓರ್ವ ಕ್ರಾಂತಿಕಾರಿಗೆ ವೀರ ಮರಣವೇ ಲೇಸು…” ಎಂದು ಅವರನ್ನು ಅಲ್ಲಿಂದ ವಾಪಾಸು ಕಳುಹಿಸಿದರು.

1927 ಡಿಸೆಂಬರ್ ಹತ್ತೊಂಬತ್ತರಂದು ಅಶ್ಫಾಕುಲ್ಲಾಹ್ ಖಾನ್, ರಾಂ ಪ್ರಸಾದ್ ಬಿಸ್ಮಿಲ್, ರಾಜೇಂದ್ರ ಲಾಹಿರಿ, ಠಾಕೂರ್ ರೋಶನ್ ಸಿಂಗರನ್ನು ಗಲ್ಲಿಗೇರಿಸಲಾಯಿತು. ಇತರ ಕ್ರಾಂತಿಕಾರಿಗಳಲ್ಲಿ ಕೆಲವರಿಗೆ ಕಾಲಾಪಾನಿ, ಮತ್ತೆ ಕೆಲವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು.
1925 ಆಗಸ್ಟ್ ಎಂಟರಂದು ಕ್ರಾಂತಿಕಾರಿಗಳ ಗುಪ್ತ ಸಭೆಯಲ್ಲಿ ಗರ್ಜಿಸಿದಂತೆ ಆ ತಂಡದ ಮೊದಲ ಹುತಾತ್ಮ ಅಶ್ಫಾಕುಲ್ಲಾಹ್ ಖಾನ್ ಅವರೇ ಆಗಿಬಿಟ್ಟರು.

ಗಲ್ಲಿಗೇರಿಸಲು ಕರೆತಂದು ಗಲ್ಲು ಪೀಠದಲ್ಲಿ ನಿಲ್ಲಿಸಿದಾಗ ಕೇವಲ ಇಪ್ಪತ್ತೇಳರ ಹರೆಯದ ಆ ಕ್ರಾಂತಿಕಾರಿ ಅಶ್ಪಾಕ್ ನಗು ನಗುತ್ತಾ ನೇಣಿನ ಹಗ್ಗವನ್ನು ಮುತ್ತಿಕ್ಕಿ ‘ಲಾ ಇಲಾಹ ಇಲ್ಲಲ್ಲಾಹ್.. ಮುಹಮ್ಮದುರ್ರಸೂಲುಲ್ಲಾಹ್ ಎಂದು ನೇಣುಗಂಬ ಏರಿದರು.
****

  • ಇಸ್ಮತ್ ಪಜೀರ್

(ಮಂಗಳೂರಿನ ಯುವ ಲೇಖಕರಾದ ಇಸ್ಮತ್ ಪಜೀರ್ ಬ್ಯಾರಿ ಪಠ್ಯಪುಸ್ತಕ ರಚನಾ ಸಮಿತಿಯ ಸದಸ್ಯರಾಗಿದ್ದರು. ಆದರೆ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟಗಾರರ ಮೇಲಿನ ಹಲ್ಲೆ ಖಂಡಿಸಿ ಅದಕ್ಕೆ ರಾಜೀನಾಮೆ ನೀಡಿ ಹೊರಬಂದವರು. ತಮ್ಮದೇ ಆದ ಪಾಲಿಕ್ಲಿನಿಕ್ ನಡೆಸುತ್ತಿದ್ದಾರೆ.)


ಇದನ್ನೂ ಓದಿ: ಸರ್ದಾರ್ ಉದಮ್: ಇದು ಶೂಜಿತ್ ನ ಗೆಲುವು ಮತ್ತು ಪ್ರಜಾಪ್ರಭುತ್ವದ ಗೆಲುವು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...