Homeಸಿನಿಮಾಕ್ರೀಡೆಭತ್ತದ ಗದ್ದೆಯಿಂದ ವಿಶ್ವ ಅಥ್ಲೆಟಿಕ್ಸ್‌ವರೆಗೆ ಓಡಿದ ಚಿನ್ನದ ಹುಡುಗಿ ಹಿಮಾ ದಾಸ್ ಬಗ್ಗೆ ನಿಮಗೆ ಗೊತ್ತೆ?

ಭತ್ತದ ಗದ್ದೆಯಿಂದ ವಿಶ್ವ ಅಥ್ಲೆಟಿಕ್ಸ್‌ವರೆಗೆ ಓಡಿದ ಚಿನ್ನದ ಹುಡುಗಿ ಹಿಮಾ ದಾಸ್ ಬಗ್ಗೆ ನಿಮಗೆ ಗೊತ್ತೆ?

ಭಾರತಕ್ಕೆ ಚಿನ್ನದ ಪದಕಗಳನ್ನು ಗಳಿಸಬಲ್ಲ ಪ್ರತಿಭೆಗಳು ಮಹಾನಗರಗಳ ಕಾನ್ವೆಂಟುಗಳಲ್ಲಿ, ಭವ್ಯವಾದ ಮಹಲುಗಳಲ್ಲಿ ಮಾತ್ರ ಇರುವುದಿಲ್ಲ; ನಮ್ಮ ಹಳ್ಳಿಗಾಡುಗಳಲ್ಲಿ, ಭತ್ತದ ಗದ್ದೆಗಳಲ್ಲಿ, ಆದಿವಾಸಿಗಳ ಹಾಡಿಗಳಲ್ಲಿಯೂ ಇದ್ದಾರೆ. ಆದರೆ ಅಲ್ಲಿನ ಪ್ರತಿಭೆಗಳನ್ನು ಹುಡುಕುವ ಮನಸ್ಸಿದೆಯೆ?

- Advertisement -
- Advertisement -

ಕಳೆದೆರೆಡು ವರ್ಷಗಳಿಂದ ಕ್ರೀಡಾಲೋಕದಲ್ಲಿ ತನ್ನ ಅನನ್ಯ ಸಾಧನೆಯ ಕಾರಣದಿಂದ ಕೇಳಿ ಬರುತ್ತಿರುವ ಹೆಸರು ಹಿಮಾ ದಾಸ್. ಕಠಿಣ ಮತ್ತು ಸತತ ಪ್ರಯತ್ನದಿಂದ ಯೂರೋಪಿಯನ್ ಅಥ್ಲೆಟಿಕ್ಸ್ ನಲ್ಲಿ ಒಂದಲ್ಲ ಎರಡಲ್ಲ ಆರು ಚಿನ್ನ ಬಾಚಿಕೊಂಡ ಈ ಚಿನ್ನದ ಹುಡುಗಿಗೆ ಸಚಿನ್ ತೆಂಡೂಲ್ಕರ್, ರಾಷ್ಟ್ರಪತಿ, ಕ್ರೀಡಾ ಮಂತ್ರಿಗಳೆಲ್ಲಾ ಅಭಿನಂದನೆಯನ್ನು ಸಲ್ಲಿಸಿ, ಆಕೆಯ ಸಾಧನೆಯನ್ನು ಹಾಡಿಹೊಗಳಿದ್ದರು. ಈ ಸಾಧನೆಯ ಹಾದಿಯಲ್ಲಿ ಈ ದಿಟ್ಟ ಹುಡುಗಿ ಅನುಭವಿಸಿದ ನೋವು-ನಲಿವನ್ನು ರೂಪ ಕೆ ಮತ್ತೀಕೆರೆಯವರು ಕಳೆದ ವರ್ಷ ತಮ್ಮ ಬರಹದಲ್ಲಿ ಕಟ್ಟಿಕೊಟ್ಟಿದ್ದರು. ಅದನ್ನು ಪುನರ್ ಮುದ್ರಿಸುತ್ತಿದ್ದೇವೆ.

ಭತ್ತದ ಗದ್ದೆಯ ತೆವರಿಗಳ ಮೇಲೆ ಬರಿಗಾಲಲ್ಲಿ ಓಡುತ್ತಿದ್ದ ಹಿಮಾದಾಸ್ ಈಗ ವಿಶ್ವ ಅಥ್ಲೆಟಿಕ್ ಜೂನಿಯರ್ ಚಾಂಪಿಯನ್‍ಶಿಪ್‍ನ ಚಿನ್ನದ ಪದಕ ಮುಡಿಗೇರಿಸಿಕೊಂಡ ಓಟದ ಜಿಂಕೆ. ಅಸ್ಸಾಂನ ನಾಗಾಂವ ಜಿಲ್ಲೆಯ ಧಿಂಗ್ ಹಳ್ಳಿಯ ಬಡರೈತ ಕುಟುಂಬದ ಈ ಕೂಸಿಗೆ ಕ್ರೀಡಾ ಹಿನ್ನೆಲೆ ಇಲ್ಲ. ಹುಟ್ಟಿದೂರಿನಲ್ಲಿ ಕ್ರೀಡೆಯ ಮೂಲ ಸೌಕರ್ಯದ ಯಾವ ಸವಲತ್ತೂ ಇರಲಿಲ್ಲ. ಇಂಥಾ ಹುಡುಗಿ ಇಡೀ ಜಗತ್ತೇ ನಿಬ್ಬೆರಗಾಗುವಂಥ ಸಾಧನೆ ಮಾಡಿದ್ದಾಳೆ. ಭಾರತದ ಕ್ರೀಡಾ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಚಿನ್ನ ಪಡೆದವಳು ಹಿಮಾ ದಾಸ್!

ದೇಶಕ್ಕೆ ವಿಶ್ವ ಚಾಂಪಿಯನ್ ಪಟ್ಟ ತಂದುಕೊಟ್ಟ ಹಿಮಾಳ ಬಗ್ಗೆ ದೇಶಾದ್ಯಂತ ಪ್ರಶಂಸೆಯ ಮಹಾಪೂರವೇ ಹರಿದು ಬಂತು. ಆಡಳಿತ ಪಕ್ಷ ವಿರೋಧ ಪಕ್ಷಗಳೆಲ್ಲವೂ ಹಿಮಾಳಿಗೆ ಅಭಿನಂದನೆ ಹೇಳಲು ಪೈಪೋಟಿಗೆ ಬಿದ್ದವು. ಕ್ರೀಡಾಲೋಕದ ದಿಗ್ಗಜರು, ಸಿನಿಮಾ ತಾರೆಯರು, ಸಾಹಿತ್ಯವಂತರು – ಹೀಗೆ ಎಲ್ಲರೂ ಅಭಿನಂದನೆಯ ಹೊಳೆಯನ್ನೇ ಹರಿಸಿದರು. ಸಾಮಾಜಿಕ ಜಾಲತಾಣಗಳಲ್ಲಂತೂ ಅಭಿನಂದನೆಯ ಪ್ರವಾಹವೇ ಹರಿಯಿತು. ಪ್ರಪ್ರಥಮ ಬಾರಿಗೆ ಭಾರತದ ಹುಡುಗಿ ವಿಶ್ವ ಚಾಂಪಿಯನ್ ಆಗಿ ಚಿನ್ನದ ಪದಕ ಗಳಿಸಿದ್ದರಿಂದ ಈ ಅಭಿಮಾನದ ಹೊಳೆ ಸಹಜವೇ ಆಗಿತ್ತು.

ಇಂಥಾ ಸಂಭ್ರಮದ ಗಳಿಗೆಯಲ್ಲೇ ಜಗತ್ತಿನೆದುರು ಭಾರತ ತಲೆತಗ್ಗಿಸಬೇಕಾದ ವಿದ್ಯಮಾನವೂ ಸಂಭವಿಸಿದೆ.

ಕ್ರೀಡಾ ಆಗಸದಲ್ಲಿ ದಿಡೀರ್ ಮಿಂಚಿನಂತೆ ಬಂದೆರಗಿದ ಹಿಮಾದಾಸ್ ಯಾರು, ಏನು ಎಂಬ ಬಗ್ಗೆ ಹೊರ ಜಗತ್ತಿಗಿರಲಿ, ಭಾರತೀಯರಿಗೇ ಗೊತ್ತಿರಲಿಲ್ಲ. ಹೀಗಾಗಿ ಕುತೂಹಲಭರಿತ ಭಾರತೀಯರು ಈ ಹೊಸ ತಾರೆಯ ಬಗ್ಗೆ ತಿಳಿದುಕೊಳ್ಳಲು ಗೂಗಲ್ ಸರ್ಚ್ ಇಂಜಿನ್‍ನ ಮೊರೆಹೋದರು. ಹಿಮಾದಾಸ್ ಯಾರು? ಯಾವ ಊರು? ಹಿಂದಿನ ಕ್ರೀಡಾ ಸಾಧನೆ ಏನು? ಆಕೆಯ ಶಿಕ್ಷಣ ಎಲ್ಲಿ ನಡೆದಿದೆ? ತರಬೇತು ನೀಡಿದವರು ಯಾರು? ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡಿರಬಹುದೆಂದು ನೀವು ಸಹಜವಾಗಿ ಊಹಿಸುತ್ತೀರಿ. ಆದರೆ ಗೂಗಲ್‍ನಲ್ಲಿ ಹೆಚ್ಚಿನ ಮಂದಿ ಹುಡುಕಿದ್ದು ಆಕೆಯ ಜಾತಿಯನ್ನು! ಭಾರತೀಯರಿಗೆ ಯಾಕೆ ಅಷ್ಟೊಂದು ಕುತೂಹಲ ಗೊತ್ತೆ? ಆಕೆಯ ಜಾತಿ ಯಾವುದೆಂದು ಪತ್ತೆಯಾದರೆ ಅದಕ್ಕೆ ತಕ್ಕಂತೆ ಅವಳಿಗೆ ಬಿರುದು ಸನ್ಮಾನಗಳನ್ನು ಕೊಡಬಹುದು. ಆಕೆಯನ್ನು ತಮ್ಮ ಜಾತಿಯ ‘ಹಿರಿಮೆ’ಗೆ ಗರಿಯನ್ನಾಗಿಯೂ, ಐಕಾನ್ ಆಗಿಯೂ ಬಳಸಿಕೊಳ್ಳಬಹುದು. ಇದು ವಿಚಿತ್ರ ಅನಿಸಬಹುದು. ಆದರೆ ಇದುವೇ ಭಾರತದ ಅತ್ಯಂತ ಸಹಜ ಸ್ಥಿತಿ. ಭಾರತೀಯರ ಇಂಥಾ ಜಾತಿ ಬುದ್ದಿಯ ಬಗ್ಗೆ ಜಗತ್ತಿನ ಸಾವಿರಾರು ಮಂದಿ ಛೀಮಾರಿ ಹಾಕಿದ್ದಾರೆ.

ಗೂಗಲ್‍ನಲ್ಲಿ ಹಿಮಾ ದಾಸ್ ಎಂದು ಸರ್ಚ್ ಕೊಟ್ಟರೆ ನಮಗೆ ಮೊದಲು ಅದರ ನ್ಯೂಸ್ ಫೀಡ್‍ನ ಆಯ್ಕೆಗಳು ಕಾಣಸಿಗುತ್ತವೆ. ಇದೇ ವಿಷಯದ ವಿಭಿನ್ನ ಆಯಾಮಗಳ ಬಗ್ಗೆ ಅತಿ ಹೆಚ್ಚು ಹುಡುಕಾಟ ನಡೆಸಿರುವ ವಿಷಯ ಪಟ್ಟಿಯನ್ನು ಅನುಕ್ರಮವಾಗಿ ಗೂಗಲ್ ನಿಮಗೆ ಒದಗಿಸುತ್ತದೆ. ಹೀಗೆ ಭಾರತೀಯರ ಜಾತಿವಾದಿ ಮನಸ್ಥಿತಿ ಸರ್ಚ್ ಲಿಸ್ಟ್‍ನಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಹಿಮಾ ದಾಸ್‍ಳ ಪ್ರತಿಭೆ ವಿಶ್ವಮಟ್ಟದಲ್ಲಿ ಸಾಬೀತಾಗಿದೆಯಲ್ಲಾ? ಆಕೆಯ ಪ್ರತಿಭೆಯನ್ನು ಗುರುತಿಸಿದರಷ್ಟೇ ಸಾಲದೆ? ಇಲ್ಲ. ಆಕೆಯ ಜಾತಿ ಯಾವುದೆಂದು ತಿಳಿದುಕೊಂಡ ನಂತರವೇ ಆಕೆಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕೋ ಬೇಡವೋ ಎಂದು ನಿರ್ಧರಿಸಲು ಬಹುಶಃ ಈ ಮಂದಿ ನಿರ್ಣಯಿಸಿದ್ದಿರಬಹುದು. ಇದು ಭಾರತೀಯ ಮನಸ್ಥಿತಿ.

ಭಾರತದಲ್ಲಿ ಜಾತಿ ವ್ಯವಸ್ಥೆ ಮುಂದುವರೆದಿರುವುದಕ್ಕೆ ಶಿಕ್ಷಣದ ಕೊರತೆ ಪ್ರಮುಖ ಕಾರಣ ಎಂದೂ, ಎಲ್ಲೋ ಮೂಲೆಯ ಕುಗ್ರಾಮಗಳಲ್ಲಿ ಮಾತ್ರ ಜಾತಿ ವ್ಯವಸ್ಥೆ ಉಳಿದುಕೊಂಡಿದೆ, ನಗರಪ್ರದೇಶಗಳಲ್ಲಿ ಜಾತಿ ವ್ಯವಸ್ಥೆ ನಾಮಾವಶೇಷವಾಗಿದೆಯೆಂತಲೂ ಎಂದು ಅನೇಕ ಆಸ್ಥಾನ ಪಂಡಿತರು ಸದಾ ತೌಡು ಕುಟ್ಟುತ್ತಾರೆ. ಹಾಗಾದರೆ ಜಾಲತಾಣದಲ್ಲಿ ಹಿಮಾಳ ಜಾತಿ ಕಂಡುಕೊಳ್ಳಲು ಪ್ರಯಾಸಪಟ್ಟವರು ಅವಿದ್ಯಾವಂತರೆ? ಅಥವಾ ಕುಗ್ರಾಮದ ಗಮಾರರೆ? ಹೀಗೆ ಕ್ಯಾಸ್ಟ್ ಸರ್ಚ್ ಮಾಡಿದ ಬಹುತೇಕರು ತಮ್ಮ ಕೈಗಳಲ್ಲಿ ಸ್ಮಾರ್ಟ್ ಫೋನ್ ಹಿಡಿದಿರುವ ಸುಶಿಕ್ಷಿತ ನಗರವಾಸಿಗಳೇ.

ವಿಪರ್ಯಾಸವೆಂದರೆ, ಸಾರ್ವಜನಿಕ ಚರ್ಚೆಗಳಲ್ಲಿ ‘ಜಾತಿ ಎಲ್ಲಿದೆ ಹೇಳಿ?’ ಎಂಬ ವಿತಂಡ ವಾದ ಹೂಡುವವರು ಇದೇ ಮಂದಿ! ನಮ್ಮ ಸಮಾಜದಲ್ಲಿ ಇಂಥಾ ಆಷಾಡಭೂತಿತನ ರಕ್ತಗತವಾಗಿಬಿಟ್ಟಂತಿದೆ.

ಪಿಟಿ ಉಷಾ ವಿಚಾರದಲ್ಲೂ ಇದೇ ಆಶ್ಚರ್ಯ ನಿಮಗೆ ಕಾದಿರುತ್ತದೆ. ಉಷಾ ಅಥ್ಲೀಟ್‍ನಿಂದ ನಿವೃತ್ತಿಯಾಗಿ ದಶಕ ಕಳೆದಿದ್ದರೂ ಇಂದಿಗೂ ಆಕೆಯ ಜಾತಿ ತಿಳಿದುಕೊಳ್ಳಲು ಹೆಚ್ಚಿನ ಜನ ಆಸಕ್ತಿ ತೋರುತ್ತಿದ್ದಾರೆ. 2016ರ ರಿಯೋ ಒಲಂಪಿಕ್ಸ್‍ನ ಬ್ಯಾಡ್ಮಿಂಟನ್‍ನಲ್ಲಿ ಪಿವಿ ಸಿಂಧು ಬೆಳ್ಳಿ ಪದಕ ಗಳಿಸಿದಾಗಲೂ ನಮ್ಮ ಹೆಮ್ಮೆಯ ಭಾರತೀಯರು ತಮ್ಮ ಚಿಲ್ಲರೆ ಜಾತಿ ಬುದ್ದಿ ತೋರಿಸಿದ್ದರು.

ಈ ಮೇಲಿನ ಉದಾಹರಣೆಗಳೆಲ್ಲ ಜಾತಿಯ ಬೇರುಗಳು ಎಷ್ಟು ಆಳದಲ್ಲಿವೆ ಎಂಬುದನ್ನು ನಿರ್ವಿವಾದಿತವಾಗಿ ಎತ್ತಿ ತೋರಿಸುತ್ತಿವೆ. ಮೋದಿ ಭಕ್ತಪಡೆ ಭಾರತ ‘ವಿಶ್ವ ಗುರು’ ಎಂದು ಬೊಬ್ಬಿಡುತ್ತಿದ್ದಾರೆ. ಆದರೆ ಭಾರತ ಸಾಗಬೇಕಾದ ದೂರ ಇನ್ನೂ ಬಹಳವಿದೆ ಎಂಬುದನ್ನು ಹಿಮಾ ದಾಸ್ ಎಪಿಸೋಡ್ ಅನುಮಾನಕ್ಕೆಡೆಯಿಲ್ಲದಂತೆ ತೋರಿಸಿಕೊಟ್ಟಿದೆ.

ಸಾಮಾನ್ಯ ಜನರ ಮಾತು ಒತ್ತಟ್ಟಿಗಿರಲಿ, ಅಥ್ಲೀಟ್ ಫೆಡರೇಷನ್ ಇಂಡಿಯ ಸಂಸ್ಥೆ ನಡೆದುಕೊಂಡ ರೀತಿ ನೋಡಿ.ಅಭಿನಂದನೆಗಳನ್ನು ಹೇಳಲಿಕ್ಕಾಗಿ ಟ್ವೀಟ್ ಮಾಡಿದ ಎಎಫ್‍ಐ “ಇಂಗ್ಲಿಷ್ ಮಾತಾಡಲು ಸರಿಯಾಗಿ ಬರದಿದ್ದರೂ ಕೂಡ ಹಿಮಾ ಉತ್ತಮ ಸಾಧನೆ ಮಾಡಿದ್ದಾಳೆ… ಹಿಮಾ ದಾಸ್‍ಗೆ ಅಭಿನಂದನೆಗಳು…”. ಎಎಫ್‍ಐನ ಧೋರಣೆಗೆ ಟ್ವಿಟ್ಟಿಗರು ‘ಹಿಮಾ ದಾಸ್ ಹೋಗಿದ್ದುದು ಓಟದ ಸ್ಪರ್ದೆಗೋ ? ಅಥವಾ ಇಂಗ್ಲಿಷ್ ಭಾಷಾ ಪಾಂಡಿತ್ಯ ಸ್ಪರ್ಧೆಗೋ?’ ಎಂದು ತಿರುಗೇಟು ನೀಡಿದ್ದಾರೆ.

ಆದರೆ ಫಿನ್‍ಲೆಂಡ್‍ನ ವಿದೇಶಿ ನೆಲದಲ್ಲಿ ನೆಲೆಸಿರುವ ಕೆಲವು ಭಾರತೀಯರು ಈ ಚಿನ್ನದ ಹುಡುಗಿಗೆ ಏನಾದರೂ ಉಡುಗೊರೆ ಕೊಡಬೇಕೆಂದು ತಮ್ಮ ವಾಟ್ಸಪ್ ಗ್ರೂಪಿನಲ್ಲಿ ಚರ್ಚಿಸಿದರು. ಒಂದಷ್ಟು ಹಣವನ್ನು ಬಹುಮಾನವಾಗಿ ಕೊಡಲು ತೀರ್ಮಾನಿಸಿ ಅಂದೇ ಒಂದು ಲಕ್ಷ ರೂನಷ್ಟು ಹಣ ಸಂಗ್ರಹಿಸಿದರು. ಹಿಮಾ ದಾಸ್‍ಳನ್ನು ಭೇಟಿಯಾಗಿ ಅಭಿನಂದಿಸಿ, ಆತಿಥ್ಯ ನೀಡಿ ಸತ್ಕರಿಸಿದರು. ಆದರೆ ಹಣವನ್ನು ಸ್ಥಳದಲ್ಲೇ ಹಸ್ತಾಂತರಿಸಲಿಲ್ಲ. ಯಾಕೆಂದರೆ ಆ ಹಣ ಯಾರ ಕೈಗೆ ಸೇರುತ್ತದೋ ಎಂಬುದು ಅವರಿಗೆ ಖಾತ್ರಿಯಿರಲಿಲ್ಲ. ಹಾಗಾಗಿ ಆ ಹಣವನ್ನು ನೇರವಾಗಿ ಹಿಮಾಳ ಖಾತೆಗೆ ವರ್ಗಾಯಿಸಲು ತೀರ್ಮಾನಿಸಿದ್ದಾರೆ. ಅರ್ಹ ವ್ಯಕ್ತಿಗೆ ಸೇರಬೇಕಾದ ಹಣ ಮತ್ಯಾರೋ ಮಧ್ಯವರ್ತಿಗಳ ಪಾಲಾಗುತ್ತದೆಂಬುದು ಅವರ ಈ ತೀರ್ಮಾನಕ್ಕೆ ಕಾರಣ.

ಇನ್ನು ಹಿಮಾಳ ವೈಯುಕ್ತಿಕ ಹಿನ್ನೆಲೆಯನ್ನು ಗಮನಿಸಿದರೆ ಅವಳ ಸಾಧನೆಯ ಮಹತ್ವ ನಮ್ಮ ಅರಿವಿಗೆ ಬರುತ್ತದೆ. ಶಾಲಾ ದಿನಗಳಲ್ಲಿ ಹುಡುಗರ ತಂಡದಲ್ಲಿ ಪುಟ್ಬಾಲ್ ಆಡುತ್ತಿದ್ದ ಹಿಮಾ ಫಿನ್ಲೆಂಡ್‍ನಲ್ಲಿ ನಡೆದ 20 ವರ್ಷದೊಳಗಿನ ವಿಶ್ವ ಅಥ್ಲೇಟಿಕ್ ಜೂನಿಯರ್ಸ್ ಮಹಿಳಾ ವಿಭಾಗದ 400 ಮೀಟರ್ ಓಟದಲ್ಲಿ ಕೇವಲ 51.46 ಸೆಕೆಂಡುಗಳಲ್ಲಿ ಚಿನ್ನದ ಜಯ ಸಾಧಿಸಿ ದಾಖಲೆ ಬರೆದ ಭಾರತದ ಮೊದಲ ಅಥ್ಲೇಟ್.

16 ಜನರ ಅವಿಭಕ್ತ ಕುಟುಂಬದಲ್ಲಿ ಜೋನಿಲಾ ಮತ್ತು ರಂಜಿತ ದಾಸ್ ರೈತ ದಂಪತಿಗಳ ಕೂಸು ಹಿಮ. ಇಡೀ ಕುಟುಂಬ ಇರುವ ಭತ್ತದ ಗದ್ದೆಯಲ್ಲಿ ದುಡಿದರಷ್ಟೇ ಆದಾಯ. ಆದರೆ ಇದಾವುದು ಹಿಮಾ ಸಾಧನೆಗೆ ಅಡ್ಡಿಯಾಗಲೇ ಇಲ್ಲ. ಫುಟ್ಬಾಲ್ ಕನಸು ಕಂಡು, ವಾಸ್ತವದಲ್ಲಿ ಅಥ್ಳೇಟಿಕ್ಸ್‍ನಲ್ಲಿ ಹೆಜ್ಜೆಯಿರಿಸಿದ ಹಿಮಾಗೆ ಗುವಾಹಟಿಯ ಯುವಜನ ಕ್ರೀಡಾ ಇಲಾಖೆಯ ತರಬೇತುದಾರ ನಿಪೋ ದಾಸ್ ಬೆಂಬಲವಾಗಿ ನಿಂತರು. ರಾಷ್ಟ್ರೀಯ ತಂಡದ ಕೋಚ್ ಬಸಂತ ಸಿಂಗ್ ಹಿಮಾಳ ಹಾದಿಯನ್ನು ಮತ್ತಷ್ಟು ಸ್ಪಷ್ಟ ಮತ್ತು ನಿಚ್ಚಳವಾಗಿಸಿದರು. ಪಿ.ಟಿ.ಉಷಾ ಕೂಡ ಹಿಮಾಳ ಜೊತೆಯಲ್ಲೇ ಇದ್ದು ಆಕೆಯನ್ನು ಹುರಿದುಂಬಿಸಿದ್ದರು. ಈ ಎಲ್ಲರ ಶ್ರಮವನ್ನು ನಾವು ಗೌರವದಿಂದ ನೆನೆಯಬೇಕು.

ಕಳೆದ ತಿಂಗಳಿಂದ ಯೂರೋಪ್ ನಲ್ಲಿ ಹಿಮಾ ದಾಸ್ ರವರ ಸಾಧನೆಯ ವಿವರ ಹೀಗಿದೆ.

ಜುಲೈ 02 ರಂದು ಪೋಲಾಂಡ್ ನಲ್ಲಿ ನಡೆದ ಪ್ರೊಜ್ನಾನ್ ಗ್ರ್ಯಾನ್ ಫ್ರಿ ರೇಸ್ ನಲ್ಲಿ 200 ಮೀಟರ್ ಓಟದಲ್ಲಿ ಚಿನ್ನದ ಗೆಲುವು

ಜುಲೈ 07 ರಂದು ಪೋಲಾಂಡ್ ನಲ್ಲಿ ನಡೆದ ಕುಂಟೋ ಅಥ್ಲೆಟಿಕ್ ಕ್ರೀಡಾಕೂಟದ 200 ಮೀಟರ್ ಓಟದಲ್ಲಿ ಚಿನ್ನದ ಸಾಧನೆ

ಜುಲೈ 13 ರಂದು ಜೆಕ್ ರಿಪಬ್ಲಿಕ್ ನಲ್ಲಿ ನಡೆದ ಕ್ಲಾಡೋ ಅಥ್ಲೆಟಿಕ್ ಕ್ರೀಡಾಕೂಟದ 200 ಮೀಟರ್ ಓಟದಲ್ಲಿ ಚಿನ್ನದ ಪದಕ

ಜುಲೈ 17 ರಂದು ಜೆಕ್ ರಿಪಬ್ಲಿಕ್ ನಲ್ಲಿ ನಡೆದ ತಬೂರ್ ಅಥ್ಲೆಟಿಕ್ ಕೂಟದಲ್ಲಿ ಚಿನ್ನದ ಗೆಲುವು

ಜುಲೈ 20 ರಂದು ಪ್ರಾಗ್ ನಲ್ಲಿ ನಡೆದ ನೊವಾ ಮೆಸ್ಟೊ ಅಥ್ಲೆಟಿಕ್ ಕೂಟದಲ್ಲಿ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ್ದರು.

ಆಗಸ್ಟ್ 19 ರಂದು ಜೆಕ್ ಗಣರಾಜ್ಯದಲ್ಲಿ ನಡೆದ ಅಥ್ಲೆಟಿಕ್ ಮಿಟಿಂಗ್ ರೇಟರ್ ಸ್ಪರ್ಧೆಯ 300 ಮೀಟರ್ ಓಟದ ವಿಭಾಗದಲ್ಲಿ ಅವರು ಚಿನ್ನ ಗೆದ್ದಿದ್ದಾರೆ.

ಹಿಮಾ ದಾಸ್ ಒಂದು ಅಂಶವನ್ನಂತೂ ಅನುಮಾನಕ್ಕೆಡೆಯಿಲ್ಲದಂತೆ ಸಾಬೀತುಪಡಿಸಿದ್ದಾಳೆ. ಭಾರತಕ್ಕೆ ಚಿನ್ನದ ಪದಕಗಳನ್ನು ಗಳಿಸಬಲ್ಲ ಪ್ರತಿಭೆಗಳು ಮಹಾನಗರಗಳ ಕಾನ್ವೆಂಟುಗಳಲ್ಲಿ, ಭವ್ಯವಾದ ಮಹಲುಗಳಲ್ಲಿ ಮಾತ್ರ ಇರುವುದಿಲ್ಲ; ನಮ್ಮ ಹಳ್ಳಿಗಾಡುಗಳಲ್ಲಿ, ಭತ್ತದ ಗದ್ದೆಗಳಲ್ಲಿ, ಆದಿವಾಸಿಗಳ ಹಾಡಿಗಳಲ್ಲಿಯೂ ಇದ್ದಾರೆ. ಆದರೆ ಅಲ್ಲಿನ ಪ್ರತಿಭೆಗಳನ್ನು ಹುಡುಕುವ ಮನಸ್ಸಿದೆಯೆ?


ಇದನ್ನೂ ಓದಿ: ಅಸ್ಸಾಂ DSP ಆಗಿ ನೇಮಕಗೊಂಡ ಓಟಗಾರ್ಟಿ ಹಿಮಾ ದಾಸ್!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. Balangochii yediYoorappana Ashahaykathe.. BJP RSS Raajjkeya.Hindi Virodi Banna BaleyaLethnishuva Hindi Lobi .. Kendrra Kaivadda.
    Bangalore MP Thejashvii Gumpugarrikke Annyaa Bhasha Gumpanna UpaYogishi Kannada HorrattGarara Rannu Arrest Mandishii Dhandalle.

LEAVE A REPLY

Please enter your comment!
Please enter your name here

- Advertisment -

ಕೇಂದ್ರ ಬಜೆಟ್ 2026: ‘ಇದು ನನ್ನ ರಾಜಕೀಯ ಜೀವನದ ಅತ್ಯಂತ ನಿರಾಶಾದಾಯಕ ಬಜೆಟ್’: ಸಿಎಂ ಸಿದ್ದರಾಮಯ್ಯ

‘ಮೋದಿ ಸರ್ಕಾರ ಆರ್ಥಿಕ ದೂರದೃಷ್ಟಿಕೋನಗಳಿಲ್ಲದೆ, ದೇಶವನ್ನು ಯಾವ ದಿಕ್ಕಿನತ್ತ ಮುನ್ನಡೆಸಬೇಕು ಎನ್ನುವುದರ ಬಗ್ಗೆ ಸ್ಪಷ್ಟತೆ ಇಲ್ಲದೆ ದಣಿದಿದೆ ಎಂಬುದರ ಸಂಕೇತ ಈ 2026 ಬಜೆಟ್’ ಎಂದು ಸಿಎಂ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.  ಕಲಬುರಗಿ ವಿಮಾನ...

ಕೇಂದ್ರ ಬಜೆಟ್ 2026: ಅಪರೂಪದ ಭೂಮಿಯ ಕಾರಿಡಾರ್‌ನಿಂದ ಹೈಸ್ಪೀಡ್ ರೈಲಿನವರೆಗೆ: ಚುನಾವಣೆ ನಡೆಯಲಿರುವ ರಾಜ್ಯಗಳಿಗೆ ಕೇಂದ್ರ ಬಜೆಟ್ ನಲ್ಲಿ ಸಿಕ್ಕಿದ್ದೇನು?

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಲೋಕಸಭೆಯಲ್ಲಿ ತಮ್ಮ ಸತತ 9 ನೇ ಬಜೆಟ್ ಅನ್ನು ಮಂಡಿಸಿದ್ದಾರೆ. ಈ ಬಜೆಟ್ ನಲ್ಲಿ ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಂತಹ ಚುನಾವಣೆ...

ಬಲೂಚಿಸ್ತಾನ: ಭದ್ರತಾ ಕಾರ್ಯಾಚರಣೆಯಲ್ಲಿ 15 ಪಾಕ್ ಸೈನಿಕರು, 92 ಭಯೋತ್ಪಾದಕರು ಸಾವು

ಬಲೂಚಿಸ್ತಾನ ಪ್ರಾಂತ್ಯದ ಸುಮಾರು 12 ಸ್ಥಳಗಳಲ್ಲಿ ನಡೆದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಲ್ಲಿ ಕನಿಷ್ಠ 15 ಪಾಕಿಸ್ತಾನಿ ಸೈನಿಕರು ಮತ್ತು 92 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಪಾಕಿಸ್ತಾನಿ ಸೇನೆ ತಿಳಿಸಿರುವುದಾಗಿ ಪಿಟಿಐ ವರದಿ...

ಕೇಂದ್ರ ಬಜೆಟ್ 2026 | ಯಾವುದು ಅಗ್ಗ ಮತ್ತು ಯಾವುದು ದುಬಾರಿ..? 

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ (ಫೆಬ್ರವರಿ 1, 2026) ತಮ್ಮ ಒಂಬತ್ತನೇ ಬಜೆಟ್ ಮಂಡಿಸಿದ್ದಾರೆ. ಈ ವರ್ಷದ (2026-27 ಹಣಕಾಸು) ಬಜೆಟ್ ತೀವ್ರಗೊಳ್ಳುತ್ತಿರುವ ಜಾಗತಿಕ ವ್ಯಾಪಾರ ಉದ್ವಿಗ್ನತೆ, ರೂಪಾಯಿ ಮೌಲ್ಯದಲ್ಲಿ...

ಕೇಂದ್ರ ಬಜೆಟ್ 2026| ರಕ್ಷಣಾ ಇಲಾಖೆಗೆ 7.85 ಲಕ್ಷ ಕೋಟಿ ರೂ. ಮೀಸಲು

ಕೇಂದ್ರ ಸರ್ಕಾರದ ಬಜೆಟ್ 2026 ರಲ್ಲಿ ರಕ್ಷಣಾ ವೆಚ್ಚವನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ಈ ವಲಯಕ್ಕೆ 7.85 ಲಕ್ಷ ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಇದು ಕಳೆದ ವರ್ಷದ 6.81 ಲಕ್ಷ ಕೋಟಿ ರೂ.ಗಳಿಗಿಂತ ಗಮನಾರ್ಹ...

‘ಭಾರತ ವೆನೆಜುವೆಲಾದ ತೈಲ ಖರೀದಿಸಲಿದೆ’ ಎಂದ ಟ್ರಂಪ್: ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್

ನವದೆಹಲಿ: ಭಾರತ ಇರಾನ್ ಬದಲು ವೆನೆಜುವೆಲಾದಿಂದ ತೈಲ ಖರೀದಿಸಲಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಭಾನುವಾರ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಅಮೆರಿಕದ ನಾಯಕ "ನಮ್ಮ...

ಕೇಂದ್ರ ಬಜೆಟ್ 2026: ಕ್ಯಾನ್ಸರ್ ಸೇರಿದಂತೆ ಇತರ 7 ಕಾಯಿಲೆಗಳ ಔಷಧಿ ಬೆಲೆಯಲ್ಲಿ ಇಳಿಕೆ

ಗಂಭೀರ ಖಾಯಿಲೆಗಳಿಂದ ಬಳುತ್ತಿರುವ ರೋಗಿಗಳಿಗೆ ಗಮನಾರ್ಹ ಪರಿಹಾರವಾಗಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2026 ರ ಬಜೆಟ್‌ನಲ್ಲಿ 17 ವಿಧದ ಕ್ಯಾನ್ಸರ್ ಮತ್ತು ಇತರ ಏಳು ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ಬಳಸುವ ಔಷಧಿಗಳನ್ನು...

ಕೇಂದ್ರ ಬಜೆಟ್ 2026: ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ; ವಿದೇಶಿ ಪ್ರವಾಸದ ಟಿಸಿಎಸ್ ದರ ಶೇ.2ಕ್ಕೆ ಇಳಿಕೆ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಕೇಂದ್ರ ಬಜೆಟ್ 2026 ಅನ್ನು ಮಂಡಿಸಿದರು. "2025ರ ಏಪ್ರಿಲ್ 1 ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ ಬರಲಿದೆ, ಪ್ರಸ್ತುತ ಶೇ.5 ಮತ್ತು ಶೇ.20...

ಗಾಜಾದಲ್ಲಿ ಇಸ್ರೇಲ್ ನಡೆಸಿದ ಹೊಸ ಕದನ ವಿರಾಮ ಉಲ್ಲಂಘನೆಯಲ್ಲಿ ಮಕ್ಕಳು ಸೇರಿದಂತೆ 31 ಮಂದಿ ಸಾವು

ಮೇ 2024ರ ನಂತರ ಇಸ್ರೇಲ್ ಮೊದಲ ಬಾರಿಗೆ ಈಜಿಪ್ಟ್‌ನೊಂದಿಗೆ ರಫಾ ಕ್ರಾಸಿಂಗ್ ಅನ್ನು ಮತ್ತೆ ತೆರೆಯಲು ಸಜ್ಜಾಗುತ್ತಿರುವ ಒಂದು ದಿನ ಮೊದಲು, ಅಲ್ ಜಜೀರಾ ಜೊತೆ ಮಾತನಾಡಿದ ವೈದ್ಯಕೀಯ ಮೂಲಗಳು, ಬೆಳಗಿನ ಜಾವದಿಂದ...

ಶಬರಿಮಲೆ ಚಿನ್ನ ಕಳವು ಪ್ರಕರಣ: ಎರಡನೇ ಪ್ರಕರಣದಲ್ಲೂ ಜಾಮೀನು ಕೋರಿ ಅರ್ಜಿ ಸಲ್ಲಿಸಿದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ

ಕೊಲ್ಲಂ (ಕೇರಳ): ಶಬರಿಮಲೆ ಚಿನ್ನ ಕಳವು ಪ್ರಕರಣದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ, ತಮ್ಮ ವಿರುದ್ಧ ದಾಖಲಾಗಿರುವ ಎರಡನೇ ಪ್ರಕರಣದಲ್ಲಿ ಶಾಸನಬದ್ಧ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ದ್ವಾರಪಾಲಕ (ರಕ್ಷಕ ದೇವತೆ) ವಿಗ್ರಹ...