Homeಸಿನಿಮಾಕ್ರೀಡೆಭತ್ತದ ಗದ್ದೆಯಿಂದ ವಿಶ್ವ ಅಥ್ಲೆಟಿಕ್ಸ್‌ವರೆಗೆ ಓಡಿದ ಚಿನ್ನದ ಹುಡುಗಿ ಹಿಮಾ ದಾಸ್ ಬಗ್ಗೆ ನಿಮಗೆ ಗೊತ್ತೆ?

ಭತ್ತದ ಗದ್ದೆಯಿಂದ ವಿಶ್ವ ಅಥ್ಲೆಟಿಕ್ಸ್‌ವರೆಗೆ ಓಡಿದ ಚಿನ್ನದ ಹುಡುಗಿ ಹಿಮಾ ದಾಸ್ ಬಗ್ಗೆ ನಿಮಗೆ ಗೊತ್ತೆ?

ಭಾರತಕ್ಕೆ ಚಿನ್ನದ ಪದಕಗಳನ್ನು ಗಳಿಸಬಲ್ಲ ಪ್ರತಿಭೆಗಳು ಮಹಾನಗರಗಳ ಕಾನ್ವೆಂಟುಗಳಲ್ಲಿ, ಭವ್ಯವಾದ ಮಹಲುಗಳಲ್ಲಿ ಮಾತ್ರ ಇರುವುದಿಲ್ಲ; ನಮ್ಮ ಹಳ್ಳಿಗಾಡುಗಳಲ್ಲಿ, ಭತ್ತದ ಗದ್ದೆಗಳಲ್ಲಿ, ಆದಿವಾಸಿಗಳ ಹಾಡಿಗಳಲ್ಲಿಯೂ ಇದ್ದಾರೆ. ಆದರೆ ಅಲ್ಲಿನ ಪ್ರತಿಭೆಗಳನ್ನು ಹುಡುಕುವ ಮನಸ್ಸಿದೆಯೆ?

- Advertisement -
- Advertisement -

ಕಳೆದೆರೆಡು ವರ್ಷಗಳಿಂದ ಕ್ರೀಡಾಲೋಕದಲ್ಲಿ ತನ್ನ ಅನನ್ಯ ಸಾಧನೆಯ ಕಾರಣದಿಂದ ಕೇಳಿ ಬರುತ್ತಿರುವ ಹೆಸರು ಹಿಮಾ ದಾಸ್. ಕಠಿಣ ಮತ್ತು ಸತತ ಪ್ರಯತ್ನದಿಂದ ಯೂರೋಪಿಯನ್ ಅಥ್ಲೆಟಿಕ್ಸ್ ನಲ್ಲಿ ಒಂದಲ್ಲ ಎರಡಲ್ಲ ಆರು ಚಿನ್ನ ಬಾಚಿಕೊಂಡ ಈ ಚಿನ್ನದ ಹುಡುಗಿಗೆ ಸಚಿನ್ ತೆಂಡೂಲ್ಕರ್, ರಾಷ್ಟ್ರಪತಿ, ಕ್ರೀಡಾ ಮಂತ್ರಿಗಳೆಲ್ಲಾ ಅಭಿನಂದನೆಯನ್ನು ಸಲ್ಲಿಸಿ, ಆಕೆಯ ಸಾಧನೆಯನ್ನು ಹಾಡಿಹೊಗಳಿದ್ದರು. ಈ ಸಾಧನೆಯ ಹಾದಿಯಲ್ಲಿ ಈ ದಿಟ್ಟ ಹುಡುಗಿ ಅನುಭವಿಸಿದ ನೋವು-ನಲಿವನ್ನು ರೂಪ ಕೆ ಮತ್ತೀಕೆರೆಯವರು ಕಳೆದ ವರ್ಷ ತಮ್ಮ ಬರಹದಲ್ಲಿ ಕಟ್ಟಿಕೊಟ್ಟಿದ್ದರು. ಅದನ್ನು ಪುನರ್ ಮುದ್ರಿಸುತ್ತಿದ್ದೇವೆ.

ಭತ್ತದ ಗದ್ದೆಯ ತೆವರಿಗಳ ಮೇಲೆ ಬರಿಗಾಲಲ್ಲಿ ಓಡುತ್ತಿದ್ದ ಹಿಮಾದಾಸ್ ಈಗ ವಿಶ್ವ ಅಥ್ಲೆಟಿಕ್ ಜೂನಿಯರ್ ಚಾಂಪಿಯನ್‍ಶಿಪ್‍ನ ಚಿನ್ನದ ಪದಕ ಮುಡಿಗೇರಿಸಿಕೊಂಡ ಓಟದ ಜಿಂಕೆ. ಅಸ್ಸಾಂನ ನಾಗಾಂವ ಜಿಲ್ಲೆಯ ಧಿಂಗ್ ಹಳ್ಳಿಯ ಬಡರೈತ ಕುಟುಂಬದ ಈ ಕೂಸಿಗೆ ಕ್ರೀಡಾ ಹಿನ್ನೆಲೆ ಇಲ್ಲ. ಹುಟ್ಟಿದೂರಿನಲ್ಲಿ ಕ್ರೀಡೆಯ ಮೂಲ ಸೌಕರ್ಯದ ಯಾವ ಸವಲತ್ತೂ ಇರಲಿಲ್ಲ. ಇಂಥಾ ಹುಡುಗಿ ಇಡೀ ಜಗತ್ತೇ ನಿಬ್ಬೆರಗಾಗುವಂಥ ಸಾಧನೆ ಮಾಡಿದ್ದಾಳೆ. ಭಾರತದ ಕ್ರೀಡಾ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಚಿನ್ನ ಪಡೆದವಳು ಹಿಮಾ ದಾಸ್!

ದೇಶಕ್ಕೆ ವಿಶ್ವ ಚಾಂಪಿಯನ್ ಪಟ್ಟ ತಂದುಕೊಟ್ಟ ಹಿಮಾಳ ಬಗ್ಗೆ ದೇಶಾದ್ಯಂತ ಪ್ರಶಂಸೆಯ ಮಹಾಪೂರವೇ ಹರಿದು ಬಂತು. ಆಡಳಿತ ಪಕ್ಷ ವಿರೋಧ ಪಕ್ಷಗಳೆಲ್ಲವೂ ಹಿಮಾಳಿಗೆ ಅಭಿನಂದನೆ ಹೇಳಲು ಪೈಪೋಟಿಗೆ ಬಿದ್ದವು. ಕ್ರೀಡಾಲೋಕದ ದಿಗ್ಗಜರು, ಸಿನಿಮಾ ತಾರೆಯರು, ಸಾಹಿತ್ಯವಂತರು – ಹೀಗೆ ಎಲ್ಲರೂ ಅಭಿನಂದನೆಯ ಹೊಳೆಯನ್ನೇ ಹರಿಸಿದರು. ಸಾಮಾಜಿಕ ಜಾಲತಾಣಗಳಲ್ಲಂತೂ ಅಭಿನಂದನೆಯ ಪ್ರವಾಹವೇ ಹರಿಯಿತು. ಪ್ರಪ್ರಥಮ ಬಾರಿಗೆ ಭಾರತದ ಹುಡುಗಿ ವಿಶ್ವ ಚಾಂಪಿಯನ್ ಆಗಿ ಚಿನ್ನದ ಪದಕ ಗಳಿಸಿದ್ದರಿಂದ ಈ ಅಭಿಮಾನದ ಹೊಳೆ ಸಹಜವೇ ಆಗಿತ್ತು.

ಇಂಥಾ ಸಂಭ್ರಮದ ಗಳಿಗೆಯಲ್ಲೇ ಜಗತ್ತಿನೆದುರು ಭಾರತ ತಲೆತಗ್ಗಿಸಬೇಕಾದ ವಿದ್ಯಮಾನವೂ ಸಂಭವಿಸಿದೆ.

ಕ್ರೀಡಾ ಆಗಸದಲ್ಲಿ ದಿಡೀರ್ ಮಿಂಚಿನಂತೆ ಬಂದೆರಗಿದ ಹಿಮಾದಾಸ್ ಯಾರು, ಏನು ಎಂಬ ಬಗ್ಗೆ ಹೊರ ಜಗತ್ತಿಗಿರಲಿ, ಭಾರತೀಯರಿಗೇ ಗೊತ್ತಿರಲಿಲ್ಲ. ಹೀಗಾಗಿ ಕುತೂಹಲಭರಿತ ಭಾರತೀಯರು ಈ ಹೊಸ ತಾರೆಯ ಬಗ್ಗೆ ತಿಳಿದುಕೊಳ್ಳಲು ಗೂಗಲ್ ಸರ್ಚ್ ಇಂಜಿನ್‍ನ ಮೊರೆಹೋದರು. ಹಿಮಾದಾಸ್ ಯಾರು? ಯಾವ ಊರು? ಹಿಂದಿನ ಕ್ರೀಡಾ ಸಾಧನೆ ಏನು? ಆಕೆಯ ಶಿಕ್ಷಣ ಎಲ್ಲಿ ನಡೆದಿದೆ? ತರಬೇತು ನೀಡಿದವರು ಯಾರು? ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡಿರಬಹುದೆಂದು ನೀವು ಸಹಜವಾಗಿ ಊಹಿಸುತ್ತೀರಿ. ಆದರೆ ಗೂಗಲ್‍ನಲ್ಲಿ ಹೆಚ್ಚಿನ ಮಂದಿ ಹುಡುಕಿದ್ದು ಆಕೆಯ ಜಾತಿಯನ್ನು! ಭಾರತೀಯರಿಗೆ ಯಾಕೆ ಅಷ್ಟೊಂದು ಕುತೂಹಲ ಗೊತ್ತೆ? ಆಕೆಯ ಜಾತಿ ಯಾವುದೆಂದು ಪತ್ತೆಯಾದರೆ ಅದಕ್ಕೆ ತಕ್ಕಂತೆ ಅವಳಿಗೆ ಬಿರುದು ಸನ್ಮಾನಗಳನ್ನು ಕೊಡಬಹುದು. ಆಕೆಯನ್ನು ತಮ್ಮ ಜಾತಿಯ ‘ಹಿರಿಮೆ’ಗೆ ಗರಿಯನ್ನಾಗಿಯೂ, ಐಕಾನ್ ಆಗಿಯೂ ಬಳಸಿಕೊಳ್ಳಬಹುದು. ಇದು ವಿಚಿತ್ರ ಅನಿಸಬಹುದು. ಆದರೆ ಇದುವೇ ಭಾರತದ ಅತ್ಯಂತ ಸಹಜ ಸ್ಥಿತಿ. ಭಾರತೀಯರ ಇಂಥಾ ಜಾತಿ ಬುದ್ದಿಯ ಬಗ್ಗೆ ಜಗತ್ತಿನ ಸಾವಿರಾರು ಮಂದಿ ಛೀಮಾರಿ ಹಾಕಿದ್ದಾರೆ.

ಗೂಗಲ್‍ನಲ್ಲಿ ಹಿಮಾ ದಾಸ್ ಎಂದು ಸರ್ಚ್ ಕೊಟ್ಟರೆ ನಮಗೆ ಮೊದಲು ಅದರ ನ್ಯೂಸ್ ಫೀಡ್‍ನ ಆಯ್ಕೆಗಳು ಕಾಣಸಿಗುತ್ತವೆ. ಇದೇ ವಿಷಯದ ವಿಭಿನ್ನ ಆಯಾಮಗಳ ಬಗ್ಗೆ ಅತಿ ಹೆಚ್ಚು ಹುಡುಕಾಟ ನಡೆಸಿರುವ ವಿಷಯ ಪಟ್ಟಿಯನ್ನು ಅನುಕ್ರಮವಾಗಿ ಗೂಗಲ್ ನಿಮಗೆ ಒದಗಿಸುತ್ತದೆ. ಹೀಗೆ ಭಾರತೀಯರ ಜಾತಿವಾದಿ ಮನಸ್ಥಿತಿ ಸರ್ಚ್ ಲಿಸ್ಟ್‍ನಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಹಿಮಾ ದಾಸ್‍ಳ ಪ್ರತಿಭೆ ವಿಶ್ವಮಟ್ಟದಲ್ಲಿ ಸಾಬೀತಾಗಿದೆಯಲ್ಲಾ? ಆಕೆಯ ಪ್ರತಿಭೆಯನ್ನು ಗುರುತಿಸಿದರಷ್ಟೇ ಸಾಲದೆ? ಇಲ್ಲ. ಆಕೆಯ ಜಾತಿ ಯಾವುದೆಂದು ತಿಳಿದುಕೊಂಡ ನಂತರವೇ ಆಕೆಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕೋ ಬೇಡವೋ ಎಂದು ನಿರ್ಧರಿಸಲು ಬಹುಶಃ ಈ ಮಂದಿ ನಿರ್ಣಯಿಸಿದ್ದಿರಬಹುದು. ಇದು ಭಾರತೀಯ ಮನಸ್ಥಿತಿ.

ಭಾರತದಲ್ಲಿ ಜಾತಿ ವ್ಯವಸ್ಥೆ ಮುಂದುವರೆದಿರುವುದಕ್ಕೆ ಶಿಕ್ಷಣದ ಕೊರತೆ ಪ್ರಮುಖ ಕಾರಣ ಎಂದೂ, ಎಲ್ಲೋ ಮೂಲೆಯ ಕುಗ್ರಾಮಗಳಲ್ಲಿ ಮಾತ್ರ ಜಾತಿ ವ್ಯವಸ್ಥೆ ಉಳಿದುಕೊಂಡಿದೆ, ನಗರಪ್ರದೇಶಗಳಲ್ಲಿ ಜಾತಿ ವ್ಯವಸ್ಥೆ ನಾಮಾವಶೇಷವಾಗಿದೆಯೆಂತಲೂ ಎಂದು ಅನೇಕ ಆಸ್ಥಾನ ಪಂಡಿತರು ಸದಾ ತೌಡು ಕುಟ್ಟುತ್ತಾರೆ. ಹಾಗಾದರೆ ಜಾಲತಾಣದಲ್ಲಿ ಹಿಮಾಳ ಜಾತಿ ಕಂಡುಕೊಳ್ಳಲು ಪ್ರಯಾಸಪಟ್ಟವರು ಅವಿದ್ಯಾವಂತರೆ? ಅಥವಾ ಕುಗ್ರಾಮದ ಗಮಾರರೆ? ಹೀಗೆ ಕ್ಯಾಸ್ಟ್ ಸರ್ಚ್ ಮಾಡಿದ ಬಹುತೇಕರು ತಮ್ಮ ಕೈಗಳಲ್ಲಿ ಸ್ಮಾರ್ಟ್ ಫೋನ್ ಹಿಡಿದಿರುವ ಸುಶಿಕ್ಷಿತ ನಗರವಾಸಿಗಳೇ.

ವಿಪರ್ಯಾಸವೆಂದರೆ, ಸಾರ್ವಜನಿಕ ಚರ್ಚೆಗಳಲ್ಲಿ ‘ಜಾತಿ ಎಲ್ಲಿದೆ ಹೇಳಿ?’ ಎಂಬ ವಿತಂಡ ವಾದ ಹೂಡುವವರು ಇದೇ ಮಂದಿ! ನಮ್ಮ ಸಮಾಜದಲ್ಲಿ ಇಂಥಾ ಆಷಾಡಭೂತಿತನ ರಕ್ತಗತವಾಗಿಬಿಟ್ಟಂತಿದೆ.

ಪಿಟಿ ಉಷಾ ವಿಚಾರದಲ್ಲೂ ಇದೇ ಆಶ್ಚರ್ಯ ನಿಮಗೆ ಕಾದಿರುತ್ತದೆ. ಉಷಾ ಅಥ್ಲೀಟ್‍ನಿಂದ ನಿವೃತ್ತಿಯಾಗಿ ದಶಕ ಕಳೆದಿದ್ದರೂ ಇಂದಿಗೂ ಆಕೆಯ ಜಾತಿ ತಿಳಿದುಕೊಳ್ಳಲು ಹೆಚ್ಚಿನ ಜನ ಆಸಕ್ತಿ ತೋರುತ್ತಿದ್ದಾರೆ. 2016ರ ರಿಯೋ ಒಲಂಪಿಕ್ಸ್‍ನ ಬ್ಯಾಡ್ಮಿಂಟನ್‍ನಲ್ಲಿ ಪಿವಿ ಸಿಂಧು ಬೆಳ್ಳಿ ಪದಕ ಗಳಿಸಿದಾಗಲೂ ನಮ್ಮ ಹೆಮ್ಮೆಯ ಭಾರತೀಯರು ತಮ್ಮ ಚಿಲ್ಲರೆ ಜಾತಿ ಬುದ್ದಿ ತೋರಿಸಿದ್ದರು.

ಈ ಮೇಲಿನ ಉದಾಹರಣೆಗಳೆಲ್ಲ ಜಾತಿಯ ಬೇರುಗಳು ಎಷ್ಟು ಆಳದಲ್ಲಿವೆ ಎಂಬುದನ್ನು ನಿರ್ವಿವಾದಿತವಾಗಿ ಎತ್ತಿ ತೋರಿಸುತ್ತಿವೆ. ಮೋದಿ ಭಕ್ತಪಡೆ ಭಾರತ ‘ವಿಶ್ವ ಗುರು’ ಎಂದು ಬೊಬ್ಬಿಡುತ್ತಿದ್ದಾರೆ. ಆದರೆ ಭಾರತ ಸಾಗಬೇಕಾದ ದೂರ ಇನ್ನೂ ಬಹಳವಿದೆ ಎಂಬುದನ್ನು ಹಿಮಾ ದಾಸ್ ಎಪಿಸೋಡ್ ಅನುಮಾನಕ್ಕೆಡೆಯಿಲ್ಲದಂತೆ ತೋರಿಸಿಕೊಟ್ಟಿದೆ.

ಸಾಮಾನ್ಯ ಜನರ ಮಾತು ಒತ್ತಟ್ಟಿಗಿರಲಿ, ಅಥ್ಲೀಟ್ ಫೆಡರೇಷನ್ ಇಂಡಿಯ ಸಂಸ್ಥೆ ನಡೆದುಕೊಂಡ ರೀತಿ ನೋಡಿ.ಅಭಿನಂದನೆಗಳನ್ನು ಹೇಳಲಿಕ್ಕಾಗಿ ಟ್ವೀಟ್ ಮಾಡಿದ ಎಎಫ್‍ಐ “ಇಂಗ್ಲಿಷ್ ಮಾತಾಡಲು ಸರಿಯಾಗಿ ಬರದಿದ್ದರೂ ಕೂಡ ಹಿಮಾ ಉತ್ತಮ ಸಾಧನೆ ಮಾಡಿದ್ದಾಳೆ… ಹಿಮಾ ದಾಸ್‍ಗೆ ಅಭಿನಂದನೆಗಳು…”. ಎಎಫ್‍ಐನ ಧೋರಣೆಗೆ ಟ್ವಿಟ್ಟಿಗರು ‘ಹಿಮಾ ದಾಸ್ ಹೋಗಿದ್ದುದು ಓಟದ ಸ್ಪರ್ದೆಗೋ ? ಅಥವಾ ಇಂಗ್ಲಿಷ್ ಭಾಷಾ ಪಾಂಡಿತ್ಯ ಸ್ಪರ್ಧೆಗೋ?’ ಎಂದು ತಿರುಗೇಟು ನೀಡಿದ್ದಾರೆ.

ಆದರೆ ಫಿನ್‍ಲೆಂಡ್‍ನ ವಿದೇಶಿ ನೆಲದಲ್ಲಿ ನೆಲೆಸಿರುವ ಕೆಲವು ಭಾರತೀಯರು ಈ ಚಿನ್ನದ ಹುಡುಗಿಗೆ ಏನಾದರೂ ಉಡುಗೊರೆ ಕೊಡಬೇಕೆಂದು ತಮ್ಮ ವಾಟ್ಸಪ್ ಗ್ರೂಪಿನಲ್ಲಿ ಚರ್ಚಿಸಿದರು. ಒಂದಷ್ಟು ಹಣವನ್ನು ಬಹುಮಾನವಾಗಿ ಕೊಡಲು ತೀರ್ಮಾನಿಸಿ ಅಂದೇ ಒಂದು ಲಕ್ಷ ರೂನಷ್ಟು ಹಣ ಸಂಗ್ರಹಿಸಿದರು. ಹಿಮಾ ದಾಸ್‍ಳನ್ನು ಭೇಟಿಯಾಗಿ ಅಭಿನಂದಿಸಿ, ಆತಿಥ್ಯ ನೀಡಿ ಸತ್ಕರಿಸಿದರು. ಆದರೆ ಹಣವನ್ನು ಸ್ಥಳದಲ್ಲೇ ಹಸ್ತಾಂತರಿಸಲಿಲ್ಲ. ಯಾಕೆಂದರೆ ಆ ಹಣ ಯಾರ ಕೈಗೆ ಸೇರುತ್ತದೋ ಎಂಬುದು ಅವರಿಗೆ ಖಾತ್ರಿಯಿರಲಿಲ್ಲ. ಹಾಗಾಗಿ ಆ ಹಣವನ್ನು ನೇರವಾಗಿ ಹಿಮಾಳ ಖಾತೆಗೆ ವರ್ಗಾಯಿಸಲು ತೀರ್ಮಾನಿಸಿದ್ದಾರೆ. ಅರ್ಹ ವ್ಯಕ್ತಿಗೆ ಸೇರಬೇಕಾದ ಹಣ ಮತ್ಯಾರೋ ಮಧ್ಯವರ್ತಿಗಳ ಪಾಲಾಗುತ್ತದೆಂಬುದು ಅವರ ಈ ತೀರ್ಮಾನಕ್ಕೆ ಕಾರಣ.

ಇನ್ನು ಹಿಮಾಳ ವೈಯುಕ್ತಿಕ ಹಿನ್ನೆಲೆಯನ್ನು ಗಮನಿಸಿದರೆ ಅವಳ ಸಾಧನೆಯ ಮಹತ್ವ ನಮ್ಮ ಅರಿವಿಗೆ ಬರುತ್ತದೆ. ಶಾಲಾ ದಿನಗಳಲ್ಲಿ ಹುಡುಗರ ತಂಡದಲ್ಲಿ ಪುಟ್ಬಾಲ್ ಆಡುತ್ತಿದ್ದ ಹಿಮಾ ಫಿನ್ಲೆಂಡ್‍ನಲ್ಲಿ ನಡೆದ 20 ವರ್ಷದೊಳಗಿನ ವಿಶ್ವ ಅಥ್ಲೇಟಿಕ್ ಜೂನಿಯರ್ಸ್ ಮಹಿಳಾ ವಿಭಾಗದ 400 ಮೀಟರ್ ಓಟದಲ್ಲಿ ಕೇವಲ 51.46 ಸೆಕೆಂಡುಗಳಲ್ಲಿ ಚಿನ್ನದ ಜಯ ಸಾಧಿಸಿ ದಾಖಲೆ ಬರೆದ ಭಾರತದ ಮೊದಲ ಅಥ್ಲೇಟ್.

16 ಜನರ ಅವಿಭಕ್ತ ಕುಟುಂಬದಲ್ಲಿ ಜೋನಿಲಾ ಮತ್ತು ರಂಜಿತ ದಾಸ್ ರೈತ ದಂಪತಿಗಳ ಕೂಸು ಹಿಮ. ಇಡೀ ಕುಟುಂಬ ಇರುವ ಭತ್ತದ ಗದ್ದೆಯಲ್ಲಿ ದುಡಿದರಷ್ಟೇ ಆದಾಯ. ಆದರೆ ಇದಾವುದು ಹಿಮಾ ಸಾಧನೆಗೆ ಅಡ್ಡಿಯಾಗಲೇ ಇಲ್ಲ. ಫುಟ್ಬಾಲ್ ಕನಸು ಕಂಡು, ವಾಸ್ತವದಲ್ಲಿ ಅಥ್ಳೇಟಿಕ್ಸ್‍ನಲ್ಲಿ ಹೆಜ್ಜೆಯಿರಿಸಿದ ಹಿಮಾಗೆ ಗುವಾಹಟಿಯ ಯುವಜನ ಕ್ರೀಡಾ ಇಲಾಖೆಯ ತರಬೇತುದಾರ ನಿಪೋ ದಾಸ್ ಬೆಂಬಲವಾಗಿ ನಿಂತರು. ರಾಷ್ಟ್ರೀಯ ತಂಡದ ಕೋಚ್ ಬಸಂತ ಸಿಂಗ್ ಹಿಮಾಳ ಹಾದಿಯನ್ನು ಮತ್ತಷ್ಟು ಸ್ಪಷ್ಟ ಮತ್ತು ನಿಚ್ಚಳವಾಗಿಸಿದರು. ಪಿ.ಟಿ.ಉಷಾ ಕೂಡ ಹಿಮಾಳ ಜೊತೆಯಲ್ಲೇ ಇದ್ದು ಆಕೆಯನ್ನು ಹುರಿದುಂಬಿಸಿದ್ದರು. ಈ ಎಲ್ಲರ ಶ್ರಮವನ್ನು ನಾವು ಗೌರವದಿಂದ ನೆನೆಯಬೇಕು.

ಕಳೆದ ತಿಂಗಳಿಂದ ಯೂರೋಪ್ ನಲ್ಲಿ ಹಿಮಾ ದಾಸ್ ರವರ ಸಾಧನೆಯ ವಿವರ ಹೀಗಿದೆ.

ಜುಲೈ 02 ರಂದು ಪೋಲಾಂಡ್ ನಲ್ಲಿ ನಡೆದ ಪ್ರೊಜ್ನಾನ್ ಗ್ರ್ಯಾನ್ ಫ್ರಿ ರೇಸ್ ನಲ್ಲಿ 200 ಮೀಟರ್ ಓಟದಲ್ಲಿ ಚಿನ್ನದ ಗೆಲುವು

ಜುಲೈ 07 ರಂದು ಪೋಲಾಂಡ್ ನಲ್ಲಿ ನಡೆದ ಕುಂಟೋ ಅಥ್ಲೆಟಿಕ್ ಕ್ರೀಡಾಕೂಟದ 200 ಮೀಟರ್ ಓಟದಲ್ಲಿ ಚಿನ್ನದ ಸಾಧನೆ

ಜುಲೈ 13 ರಂದು ಜೆಕ್ ರಿಪಬ್ಲಿಕ್ ನಲ್ಲಿ ನಡೆದ ಕ್ಲಾಡೋ ಅಥ್ಲೆಟಿಕ್ ಕ್ರೀಡಾಕೂಟದ 200 ಮೀಟರ್ ಓಟದಲ್ಲಿ ಚಿನ್ನದ ಪದಕ

ಜುಲೈ 17 ರಂದು ಜೆಕ್ ರಿಪಬ್ಲಿಕ್ ನಲ್ಲಿ ನಡೆದ ತಬೂರ್ ಅಥ್ಲೆಟಿಕ್ ಕೂಟದಲ್ಲಿ ಚಿನ್ನದ ಗೆಲುವು

ಜುಲೈ 20 ರಂದು ಪ್ರಾಗ್ ನಲ್ಲಿ ನಡೆದ ನೊವಾ ಮೆಸ್ಟೊ ಅಥ್ಲೆಟಿಕ್ ಕೂಟದಲ್ಲಿ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ್ದರು.

ಆಗಸ್ಟ್ 19 ರಂದು ಜೆಕ್ ಗಣರಾಜ್ಯದಲ್ಲಿ ನಡೆದ ಅಥ್ಲೆಟಿಕ್ ಮಿಟಿಂಗ್ ರೇಟರ್ ಸ್ಪರ್ಧೆಯ 300 ಮೀಟರ್ ಓಟದ ವಿಭಾಗದಲ್ಲಿ ಅವರು ಚಿನ್ನ ಗೆದ್ದಿದ್ದಾರೆ.

ಹಿಮಾ ದಾಸ್ ಒಂದು ಅಂಶವನ್ನಂತೂ ಅನುಮಾನಕ್ಕೆಡೆಯಿಲ್ಲದಂತೆ ಸಾಬೀತುಪಡಿಸಿದ್ದಾಳೆ. ಭಾರತಕ್ಕೆ ಚಿನ್ನದ ಪದಕಗಳನ್ನು ಗಳಿಸಬಲ್ಲ ಪ್ರತಿಭೆಗಳು ಮಹಾನಗರಗಳ ಕಾನ್ವೆಂಟುಗಳಲ್ಲಿ, ಭವ್ಯವಾದ ಮಹಲುಗಳಲ್ಲಿ ಮಾತ್ರ ಇರುವುದಿಲ್ಲ; ನಮ್ಮ ಹಳ್ಳಿಗಾಡುಗಳಲ್ಲಿ, ಭತ್ತದ ಗದ್ದೆಗಳಲ್ಲಿ, ಆದಿವಾಸಿಗಳ ಹಾಡಿಗಳಲ್ಲಿಯೂ ಇದ್ದಾರೆ. ಆದರೆ ಅಲ್ಲಿನ ಪ್ರತಿಭೆಗಳನ್ನು ಹುಡುಕುವ ಮನಸ್ಸಿದೆಯೆ?


ಇದನ್ನೂ ಓದಿ: ಅಸ್ಸಾಂ DSP ಆಗಿ ನೇಮಕಗೊಂಡ ಓಟಗಾರ್ಟಿ ಹಿಮಾ ದಾಸ್!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. Balangochii yediYoorappana Ashahaykathe.. BJP RSS Raajjkeya.Hindi Virodi Banna BaleyaLethnishuva Hindi Lobi .. Kendrra Kaivadda.
    Bangalore MP Thejashvii Gumpugarrikke Annyaa Bhasha Gumpanna UpaYogishi Kannada HorrattGarara Rannu Arrest Mandishii Dhandalle.

LEAVE A REPLY

Please enter your comment!
Please enter your name here

- Advertisment -

ಮಗಳ ವಿಚ್ಛೇದನ: ಸಿಹಿ ಹಂಚಿ, ಮೆರವಣಿಗೆಯಲ್ಲಿ ಆಕೆಯನ್ನು ಮನೆಗೆ ಕರೆತಂದ ನೀವೃತ್ತ ನ್ಯಾಯಾದೀಶ ಮತ್ತು ಕುಟುಂಬ

ಮೀರತ್: ಕೌಟುಂಬಿಕ ನ್ಯಾಯಾಲಯದಲ್ಲಿ ಮಗಳ ವಿಚ್ಛೇದನ ಅಂತಿಮವಾದ ನಂತರ ಆಕೆಯನ್ನು ಡೋಲು, ನೃತ್ಯಗಳ ಮೆರವಣಿಗೆಯಲ್ಲಿ ಸಂಭ್ರಮದಿಂದ ತಂದೆ ಮನೆಗೆ ಕರೆತಂದ ಘಟನೆ ಮೀರನ್ ನಲ್ಲಿ ನಡೆದಿದೆ.  ಪೋಷಕರ ಬೆಂಬಲದ ಅಪರೂಪದ ಮತ್ತು ಹೃದಯಸ್ಪರ್ಶಿ ಪ್ರದರ್ಶನದಲ್ಲಿ,...

“ನೀನು ನಿಜವಾಗಿಯೂ ಅಂಬೇಡ್ಕರ್ ಮಗಳಾ ಎಂದು ತಿಳಿಯಲು ನಾವು ನಿನ್ನ ಡಿಎನ್‌ಎ ಟೆಸ್ಟ್ ಮಾಡುತ್ತೇವೆ” ದೆಹಲಿ ಸಭೆಯಲ್ಲಿ ದಲಿತ ಟ್ರಾನ್ಸ್ ಹೋರಾಟಗಾರ್ತಿ ಗ್ರೇಸ್ ಬಾನುಗೆ ಜಾತಿ ನಿಂದನೆ ಆರೋಪ

ಕೇಂದ್ರ ಸರ್ಕಾರದ ವಿವಾದಾತ್ಮಕ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಕಾಯ್ದೆ, 2026ರ ವಿರುದ್ಧ ಕಳೆದ ಕೆಲ ವಾರಗಳಿಂದ ಇಡೀ ಟ್ರಾನ್ಸ್‌ಜೆಂಡರ್ ಮತ್ತು ಪ್ರಗತಿಪರ ಸಮುದಾಯ ಪ್ರತಿಭಟನೆ ನಡೆಸುತ್ತಿದೆ. ಈ ನಡುವೆ ಶುಕ್ರವಾರ...

‘ಮೋದಿ ಕ್ರಿಶ್ಚಿಯನ್ ಸಂಸ್ಥೆಗಳಲ್ಲಿ ಭಯ ಹುಟ್ಟಿಸಲು ಪ್ರಯತ್ನಿಸುತ್ತಿದ್ದಾರೆ’: ಎಫ್‌ಸಿಆರ್‌ಎ ತಿದ್ದುಪಡಿ ಕುರಿತು ಮಲ್ಲಿಕಾರ್ಜುನ ಖರ್ಗೆ

ಇಡುಕ್ಕಿ (ಕೇರಳ): ಸಾರ್ವಜನಿಕ ಮತ್ತು ಸಾಮಾಜಿಕ ಕಲ್ಯಾಣ ಕ್ಷೇತ್ರದಲ್ಲಿ ಕೆಲಸ ಮಾಡುವ ಕ್ರಿಶ್ಚಿಯನ್ ಸಂಸ್ಥೆಗಳು, ಎನ್‌ಜಿಒಗಳು ಮತ್ತು ನಾಗರಿಕ ಸಮಾಜದ ಮೇಲೆ ದಾಳಿ ಮಾಡಲು ಪ್ರಧಾನಿ ನರೇಂದ್ರ ಮೋದಿ ಎಫ್‌ಸಿಆರ್‌ಎ (ವಿದೇಶಿ ದೇಣಿಗೆ...

ವೈದ್ಯಕೀಯ, ತಾಂತ್ರಿಕ ಶಿಕ್ಷಣದಲ್ಲಿ ಎಸ್‌ಸಿ/ಎಸ್‌ಟಿ ಮೀಸಲಾತಿ ಹೆಚ್ಚಿಸಿದ ಒಡಿಶಾ ಸರ್ಕಾರ, ಒಬಿಸಿ ವಿದ್ಯಾರ್ಥಿಗಳಿಗೆ ಹೊಸ ಕೋಟಾ

ಮಹತ್ವದ ನಿರ್ಧಾರ ಕೈಗೊಂಡಿರುವ ಒಡಿಶಾ ಸರ್ಕಾರ, ವೈದ್ಯಕೀಯ, ಇಂಜಿನಿಯರಿಂಗ್ ಮತ್ತು ಇತರ ತಾಂತ್ರಿಕ ಹಾಗೂ ವೃತ್ತಿಪರ ಶಿಕ್ಷಣ ಕೋರ್ಸ್‌ಗಳಲ್ಲಿ ಪರಿಶಿಷ್ಟ ಪಂಗಡ (ಎಸ್‌ಟಿ), ಪರಿಶಿಷ್ಟ ಜಾತಿ (ಎಸ್‌ಸಿ) ಅಭ್ಯರ್ಥಿಗಳಿಗೆ ಮೀಸಲಾತಿಯನ್ನು ಗಣನೀಯವಾಗಿ ಹೆಚ್ಚಿಸಿದೆ....

ಶಾಲಾ ವಾರ್ಷಿಕೋತ್ಸವದಲ್ಲಿ ಲವಲವಿಕೆಯಿಂದ ಭಾಗವಹಿಸಿದ್ದ 6 ಮಕ್ಕಳು, ತಡರಾತ್ರಿ ಹೊತ್ತಿಗೆ ಶವವಾದರು : ಮಹಾರಾಷ್ಟ್ರದಲ್ಲೊಂದು ಹೃದಯ ವಿದ್ರಾವಕ ಘಟನೆ

ಶಾಲಾ ವಾರ್ಷಿಕೋತ್ಸವದಲ್ಲಿ ಬಹಳ ಉತ್ಸಾಹದಿಂದ ಭಾಗವಹಿಸಿದ್ದ ಆರು ಮಂದಿ ಮಕ್ಕಳು, ತಡ ರಾತ್ರಿ ಹೊತ್ತಿಗೆ ಶವವಾದ ಹೃದಯ ವಿದ್ರಾವಕ ಘಟನೆಯೊಂದು ಮಹಾರಾಷ್ಟ್ರದ ದಿಂಡೋರಿಯಲ್ಲಿ ಶುಕ್ರವಾರ (ಏ.3) ನಡೆದಿದೆ. ನಾಸಿಕ್‌ ನಗರದಿಂದ 20 ಕಿಲೋ...

ಕೇರಳ: ಕೊಲ್ಲಂನಲ್ಲಿ ಟಿವಿ ಚಾನೆಲ್ ಕಚೇರಿ ಮೇಲೆ ಸ್ಫೋಟಕ ವಸ್ತು ಎಸೆತ

ಕೊಲ್ಲಂ: ಇಲ್ಲಿನ ಟಿವಿ ಚಾನೆಲ್ ಒಂದರ ಕಚೇರಿಯ ಮೇಲೆ ಭಾನುವಾರ ಬೆಳಿಗ್ಗೆ ಸ್ಫೋಟಕ ವಸ್ತು ಎಸೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಆ ಪ್ರದೇಶ ಮತ್ತು ಚಾನೆಲ್ ಕಚೇರಿಯ ಸಿಸಿಟಿವಿ ದೃಶ್ಯಗಳಲ್ಲಿ ಇಬ್ಬರು...

ಹತ್ಯೆಯಾದ ಇರಾನ್ ಕಮಾಂಡರ್ ಖಾಸಿಮ್ ಸುಲೈಮಾನಿ ಅವರ ಸೊಸೆ, ಮೊಮ್ಮಗಳನ್ನು ಬಂಧಿಸಿದ ಅಮೆರಿಕ

ನವದೆಹಲಿ: ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಶುಕ್ರವಾರ ತಮ್ಮ ಶಾಶ್ವತ ನಿವಾಸಿ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ನ ದಿವಂಗತ ನಾಯಕ ಖಾಸಿಮ್ ಸೊಲೈಮಾನಿ ಅವರ...

ಇರಾನ್ ಮೇಲೆ ಬೃಹತ್ ದಾಳಿ: ಹಲವು ಉನ್ನತ ನಾಯಕರನ್ನು ಕೊಲ್ಲಲಾಗಿದೆ ಎಂದು ವಿಡಿಯೋ ಹಂಚಿಕೊಂಡ ಟ್ರಂಪ್

ಟೆಹ್ರಾನ್ ಮೇಲೆ ನಡೆದ ದಾಳಿಯ ವೀಡಿಯೊವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಂಚಿಕೊಂಡಿದ್ದು, ಹಲವಾರು ಇರಾನ್ ಮಿಲಿಟರಿ ನಾಯಕರ ಸಾವಿಗೆ ಅದು ಕಾರಣ ಎಂದು ಹೇಳಿಕೊಂಡಿದ್ದಾರೆ. "ಟೆಹ್ರಾನ್‌ನಲ್ಲಿ ನಡೆದ ಈ ಬೃಹತ್ ದಾಳಿಯೊಂದಿಗೆ, ಇರಾನ್‌ನ...

ಅಸ್ಸಾಂ ಚುನಾವಣೆ : ನುಸುಳುಕೋರರಿಂದ ಯುವ ಕಲ್ಯಾಣಕ್ಕೆ ವರಸೆ ಬದಲಿಸಿದ ಬಿಜೆಪಿ

ಅಸ್ಸಾಂ ವಿಧಾನಸಭಾ ಚುನಾವಣೆಗೆ ನಾಲ್ಕು ದಿನಗಳು ಬಾಕಿ ಇರುವಾಗ ಬಿಜೆಪಿ ತನ್ನ ಪ್ರಚಾರದ ವರಸೆಯನ್ನು ಬದಲಿಸಿಕೊಂಡಿದೆ. ನುಸುಳುಕೋರರನ್ನು ಹೊರಹಾಕುತ್ತೇವೆ, ಅಕ್ರಮ ವಲಸೆಗೆ ಕಡಿವಾಣ ಹಾಕುತ್ತೇವೆಂದು ಅಬ್ಬರಿಸುತ್ತಿದ್ದ ಬಿಜೆಪಿಗರು, ಈಗ ನುಸುಳಕೋರರ ವಿಷಯವನ್ನು ಬದಿಗೊತ್ತಿದ್ದಾರೆ....

ಕುಡಿದ ಮತ್ತಿನಲ್ಲಿ ಕಾರು ಚಾಲನೆ: ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ 19ವರ್ಷದ ಯುವಕ ಸಾವು 

ಬೆಂಗಳೂರು: ಕುಡಿದ ಮತ್ತಿನಲ್ಲಿ ಹದಿಹರೆಯದ ಯುವಕನೊಬ್ಬ ಚಲಾಯಿಸುತ್ತಿದ್ದ ಕಾರು, 19 ವರ್ಷದ ಯುವಕನ ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಆತ ಸಾವನ್ನಪ್ಪಿದ್ದಾನೆ. ಮಲ್ಲೇಶಪಾಳ್ಯದ ಮಾರುತಿನಗರದ 10 ನೇ ಮುಖ್ಯ ರಸ್ತೆಯಲ್ಲಿ ಶುಕ್ರವಾರ ತಡರಾತ್ರಿ...