ಕಾಂಗ್ರೆಸ್ ನಾಯಕರಾದ ಜಿತೇಂದ್ರ ಸಿಂಗ್, ಭೂಪೇಶ್ ಬಘೇಲ್ ಮತ್ತು ಗೌರವ್ ಗೊಗೊಯ್ ವಿರುದ್ದ 500 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಿದ್ದೇನೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ತಿಳಿಸಿದ್ದಾರೆ.
“ಪತ್ರಿಕಾಗೋಷ್ಠಿಯ ಮೂಲಕ ನನ್ನ ವಿರುದ್ಧ ಸುಳ್ಳು, ದುರುದ್ದೇಶಪೂರಿತ ಮತ್ತು ಮಾನನಷ್ಟಕರ ಆರೋಪಗಳನ್ನು ಮಾಡಿದ್ದಕ್ಕಾಗಿ ಕಾಂಗ್ರೆಸ್ ನಾಯಕರಾದ ಜಿತೇಂದ್ರ ಸಿಂಗ್, ಭೂಪೇಶ್ ಬಘೇಲ್ ಮತ್ತು ಗೌರವ್ ಗೊಗೊಯ್ ವಿರುದ್ಧ 500 ಕೋಟಿ ರೂ.ಗಳ ಪರಿಹಾರ ಕೋರಿ ನಾನು ಇಂದು ಮಾನನಷ್ಟ ಮೊಕದ್ದಮೆ ಹೂಡಿದ್ದೇನೆ” ಎಂದು ಆರೋಪಗಳನ್ನು ವಿವರಿಸದೆ ಸಿಎಂ ಶರ್ಮಾ ಮಂಗಳವಾರ (ಫೆ.10) ಎಕ್ಸ್ನಲ್ಲಿ ಪೋಸ್ಟ್ ಹಾಕಿದ್ದಾರೆ.
ಮತ್ತೊಂದೆಡೆ, ಅಸ್ಸಾಂ ಬಿಜೆಪಿಯ ಅಧಿಕೃತ ಎಕ್ಸ್ ಖಾತೆಯಲ್ಲಿ ಸಿಎಂ ಶರ್ಮಾ ಮುಸ್ಲಿಮರಿಗೆ ಗುಂಡಿಕ್ಕುವಂತೆ ತೋರಿಸುವ ವಿಡಿಯೋ ಹಂಚಿಕೊಂಡಿದ್ದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕರಾದ ಸಿಬಮೋನಿ ಬೋರಾ ಮತ್ತು ದಿಗಂತ ಬರ್ಮನ್ ಅವರು ಗುವಾಹಟಿಯ ದಿಸ್ಪುರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
“ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಮುಸ್ಲಿಮರಿಗೆ ಗುಂಡಿಕ್ಕುವಂತೆ ತೋರಿಸುವ ವಿವಾದಾತ್ಮಕ ಮತ್ತು ಪ್ರಚೋದನಾಕಾರಿ ವಿಡಿಯೋವೊಂದನ್ನು 2026ರ ಫೆಬ್ರವರಿ 7ರಂದು ಅಸ್ಸಾಂ ರಾಜ್ಯ ಬಿಜೆಪಿಯ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿತ್ತು. ಈ ವಿಡಿಯೋದಲ್ಲಿ ಸಿಎಂ ಶರ್ಮಾ ಅವರು ರೈಫಲ್ ಹಿಡಿದು “ಪಾಯಿಂಟ್ ಬ್ಲಾಂಕ್ ಶೂಟ್” (ಅತಿ ಸಮೀಪದಿಂದ ಗುಂಡು ಹಾರಿಸುವುದು) ಎಂಬ ಶೀರ್ಷಿಕೆಯೊಂದಿಗೆ ಮುಸ್ಲಿಮರನ್ನು ಸಾಂಕೇತಿಕವಾಗಿ ಗುರಿ ಮಾಡುತ್ತಿರುವುದನ್ನು ತೋರಿಸಲಾಗಿತ್ತು” ಎಂಬುವುದಾಗಿ ದೂರಿನಲ್ಲಿ ತಿಳಿಸಲಾಗಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಮುಂದುವರಿದು, “ಆ ವಿಡಿಯೋದಲ್ಲಿ ‘ವಿದೇಶಿ ಮುಕ್ತ ಅಸ್ಸಾಂ’ ‘ಯಾವುದೇ ಕರುಣೆ ಇಲ್ಲ’ ‘ನೀವು ಯಾಕೆ ಪಾಕಿಸ್ತಾನಕ್ಕೆ ಹೋಗಿಲ್ಲ?’ ಮತ್ತು ‘ಬಾಂಗ್ಲಾದೇಶಿಯರಿಗೆ ಕ್ಷಮೆಯಿಲ್ಲ’ ಎಂಬ ಬರಹಗಳನ್ನು ಬಳಸಲಾಗಿತ್ತು. ಈ ಬರಹಗಳು ಅಸ್ಸಾಂನ ಬಂಗಾಳಿ ಮೂಲದ ಮುಸ್ಲಿಮರನ್ನು ಗುರಿಯಾಗಿಸಿಕೊಂಡಿತ್ತು” ಎಂದು ಹೇಳಲಾಗಿದೆ ಎಂದು ವರದಿ ವಿವರಿಸಿದೆ.
ದೂರಿನಲ್ಲಿ ಕಾಂಗ್ರೆಸ್ ನಾಯಕರು, “ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ಹಂಚಲಾದ ವಿಡಿಯೋ ಅತ್ಯಂತ ಪ್ರಚೋದನಾಕಾರಿ ಮತ್ತು ಕೋಮು ದ್ವೇಷದಿಂದ ಕೂಡಿತ್ತು. ಇದು ಸಮಾಜದ ಜನರ ನಡುವೆ ಖಂಡಿತವಾಗಿಯೂ ಅಶಾಂತಿಯನ್ನು ಉಂಟುಮಾಡುತ್ತದೆ ಮತ್ತು ಸಾಮಾಜಿಕ ಸಾಮರಸ್ಯವನ್ನು ಕದಡುತ್ತದೆ. ಆದ್ದರಿಂದ, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಸಂಬಂಧಿತ ದಂಡ ಸಂಹಿತೆಯ ಸೂಕ್ತ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು ಮತ್ತು ಈ ಬಗ್ಗೆ ತಕ್ಷಣವೇ ಅಗತ್ಯ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಲಾಗಿದೆ ಎಂದು ವರದಿ ಹೇಳಿದೆ.


