ಹಿಂದೂ ಮಹಾಸಾಗರದಲ್ಲಿ ಇರಾನ್ ಯುದ್ಧನೌಕೆ ಐರಿಸ್ ದೇನಾದ ಮೇಲೆ ಅಮೆರಿಕಾ ದಾಳಿ ಮಾಡಿದ ಒಂದು ದಿನದ ನಂತರ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಪಶ್ಚಿಮ ಏಷ್ಯಾ ಸಂಘರ್ಷ ಭಾರತೀಯ ಉಪಖಂಡದ ಹತ್ತಿರ ಬಂದಿದ್ದರೂ ಅವರು ಮೌನವಾಗಿದ್ದಾರೆ ಎಂದು ಆರೋಪಿಸಿದ್ದಾರೆ.
“ದೇಶಕ್ಕೆ ಈ ಸಮಯದಲ್ಲಿ ಸ್ಥಿರವಾದ ಮತ್ತು ದೃಢವಾದ ನಾಯಕತ್ವ ಬೇಕು, ಆದರೆ ನಮಗೆ ಸಿಕ್ಕಿರುವುದು ‘ರಾಜಿ ಮಾಡಿಕೊಂಡ ದುರ್ಬಲ ಪ್ರಧಾನಿ’, ಅವರು ನಮ್ಮ ಕಾರ್ಯತಂತ್ರದ ಸ್ವಾಯತ್ತತೆಯನ್ನು (ಸ್ವತಂತ್ರ ನಿರ್ಧಾರ ಶಕ್ತಿ) ಬಿಟ್ಟುಕೊಟ್ಟಿದ್ದಾರೆ.” ಎಂದು ಹೇಳಿದ್ದಾರೆ.
ಜಗತ್ತು ಅಸ್ಥಿರ ಹಂತವನ್ನು ಪ್ರವೇಶಿಸಿದೆ ಮತ್ತು “ಬಿರುಗಾಳಿಯ ಸಮುದ್ರಗಳು ಮುಂದಿವೆ” ಎಂದು ಹೇಳಿರುವ ರಾಹುಲ್ ಗಾಂಧಿ “ಭಾರತದ ತೈಲ ಸರಬರಾಜು ಅಪಾಯದಲ್ಲಿದೆ, ನಮ್ಮ ಆಮದುಗಳಲ್ಲಿ 40% ಕ್ಕಿಂತ ಹೆಚ್ಚು ಹಾರ್ಮುಜ್ ಜಲಸಂಧಿಯ ಮೂಲಕ ಸಾಗುತ್ತವೆ. LPG ಮತ್ತು LNG ಪರಿಸ್ಥಿತಿ ಇನ್ನೂ ಕೆಟ್ಟದಾಗಿದೆ” ಎಂದು ತಮ್ಮ ಸಾಮಾಜಿಕ ಜಾಲತಾಣ X ನಲ್ಲಿ ಬರೆದುಕೊಂಡಿದ್ದಾರೆ.
ಜೊತೆಗೆ “ಸಂಘರ್ಷವು ನಮ್ಮ ಹಿತ್ತಲನ್ನು ತಲುಪಿದೆ, ಇರಾನಿನ ಯುದ್ಧನೌಕೆ ಹಿಂದೂ ಮಹಾಸಾಗರದಲ್ಲಿ ಮುಳುಗಿದೆ. ಆದರೂ ಪ್ರಧಾನಿ ಏನನ್ನೂ ಹೇಳಿಲ್ಲ” ಎಂದು ಗಾಂಧಿ ಆರೋಪಿಸಿದ್ದಾರೆ. ಇಂತಹ ಸಮಯದಲ್ಲಿ ಭಾರತಕ್ಕೆ ಒಂದು ಸದೃಢ ನಾಯಕನ ಅಗತ್ಯವಿದೆ, ಆದರೆ “ಬದಲಾಗಿ, ಭಾರತವು ನಮ್ಮ ಕಾರ್ಯತಂತ್ರದ ಸ್ವಾಯತ್ತತೆಯನ್ನು ಬಿಟ್ಟುಕೊಟ್ಟ ರಾಜಿ ಮಾಡಿಕೊಂಡ ಪ್ರಧಾನಿಯನ್ನು ಹೊಂದಿದೆ” ಎಂದು ಗಾಂಧಿ ಹೇಳಿದ್ದಾರೆ.
ಭಾರತ ಆಯೋಜಿಸಿದ್ದ ಬಹುಪಕ್ಷೀಯ ಯುದ್ಧನೌಕೆಯಾದ ಮಿಲನ್ ನೌಕಾ ವ್ಯಾಯಾಮದಲ್ಲಿ ಭಾಗವಹಿಸಿ ಹಿಂತಿರುಗುತ್ತಿದ್ದಾಗ ಶ್ರೀಲಂಕಾದ ಕರಾವಳಿಯ ಅಂತರರಾಷ್ಟ್ರೀಯ ನೀರಿನಲ್ಲಿ ಅಮೆರಿಕದ ಜಲಾಂತರ್ಗಾಮಿ ನೌಕೆಯೊಂದು ಇರಾನ್ ಯುದ್ಧನೌಕೆಯನ್ನು ಟಾರ್ಪಿಡೊ ಮಾಡಿ ಮುಳುಗಿಸಿದ ಒಂದು ದಿನದ ನಂತರ ಅವರು ಈ ಹೇಳಿಕೆಗಳನ್ನು ನೀಡಿದ್ದಾರೆ.


