2025ರ ಅಕ್ಟೋಬರ್ನಲ್ಲಿ ‘R.ಕನ್ನಡ’ ಸುದ್ದಿ ವಾಹಿನಿಯಲ್ಲಿ ಧರ್ಮಸ್ಥಳ ಪ್ರಕರಣ ಸಂಬಂಧ ನಡೆದಿದ್ದ ಚರ್ಚಾ ಕಾರ್ಯಕ್ರಮದ ವೇಳೆ ದಾಂಧಲೆ ನಡೆಸಿ, ಹಲ್ಲೆಗೆ ಯತ್ನಿಸಿದ್ದ ಹಿಂದುತ್ವ ಕೋಮುವಾದಿ ಕಾರ್ಯಕರ್ತ ವಸಂತ್ ಗಿಳಿಯಾರ್, ಪುನೀತ್ ಕೆರೆಹಳ್ಳಿ ಹಾಗೂ ಕಿರಿಕ್ ಕೀರ್ತಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಬೆಂಗಳೂರಿನ ಎಸ್.ಜೆ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧವೂ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್)-2023ರ ಸೆಕ್ಷನ್ 352, 251(2), 351(3), 3(5)ರ ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ. ಮೂವರ ವಿರುದ್ಧವೂ ಕರ್ನಾಟಕ ರಣಧೀರ ಪಡೆಯ ಹರೀಶ್ ಭೈರಪ್ಪ ಅವರು ಅಕ್ಟೋಬರ್ ತಿಂಗಳಿನಲ್ಲಿಯೇ ದೂರು ದಾಖಲಿಸಿದ್ದರು. ಇದೀಗ, ಎಫ್ಐಆರ್ ದಾಖಲಾಗಿದೆ.
ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ನಡೆದು 13 ವರ್ಷಗಳಾಗಿದ್ದ ಹಿನ್ನೆಲೆ ಅಕ್ಟೋಬರ್ 9ರಂದು ‘ರಿಪಬ್ಲಿಕ್ ಟಿವಿ’ ಕನ್ನಡ (ಆರ್ ಕನ್ನಡ)ದಲ್ಲಿ ನಡೆದ ಚರ್ಚಾ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕರ್ನಾಟಕ ರಣಧೀರ ಪಡೆಯ ಹರೀಶ್ ಭೈರಪ್ಪ ಮತ್ತು ವಸಂತ್ ಗಿಳಿಯಾರ್ ಭಾಗವಹಿಸಿದ್ದರು. ಈ ವೇಳೆ, ಒಬ್ಬರ ನಡುವೆ ವಾಗ್ವಾದ ನಡೆದಿತ್ತು. ಕಾರ್ಯಕ್ರಮ ಮುಗಿದು ಮನೆಗೆ ತೆರಳುವ ವೇಳೆ, ಧರ್ಮಸ್ಥಳದ ಪ್ರತಿಷ್ಠಿತ ಕುಟುಂಬದ ಸಮರ್ಥಕನಾಗಿರುವ ವಸಂತ್ ಗಿಳಿಯಾರ್ ತಮ್ಮ ಪುಢಾರಿಗಳನ್ನು ನ್ಯೂಸ್ ಚಾನೆಲ್ನ ಕಚೇರಿಗೆ ಕರೆಸಿಕೊಂಡು ಹರೀಶ್ ಮತ್ತು ಇತರರೊಂದಿಗೆ ದಾಂಧಲೆ ನಡೆಸಿದ್ದರು ಎಂದು ಆರೋಪಿಸಲಾಗಿದೆ.
ಗಿಳಿಯಾರ್ ಅವರ ಸಹವರ್ತಿ ಪುನೀತ್ ಕೆರೆಹಳ್ಳಿಯ ಹಿಂಬಾಲಕರು ಮತ್ತು ಇನ್ನಿತರ ಪುಡಿರೌಡಿಗಳು ‘R.ಕನ್ನಡ’ ಕಚೇರಿಗೆ ಬಂದು ಹರೀಶ್ ಮತ್ತು ಮತ್ತೊಬ್ಬ ಅತಿಥಿ ಅಬ್ದುಲ್ ರಜಾಕ್ ಅವರೊಂದಿಗೆ ಗಲಾಟೆ ನಡೆಸಿದ್ದರು. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಧಾವಿಸಿ, ಪುಂಡರನ್ನು ಪೊಲೀಸ್ ಠಾಣೆಗೆ ಒಯ್ದಿದ್ದರು.
ಆ ಸಮಯದಲ್ಲಿ, “ಒಂದು ಚರ್ಚಾ ಕಾರ್ಯಕ್ರಮವನ್ನು ಆಯೋಜಿಸಿ, ಚರ್ಚೆಗೆ ಆಹ್ವಾನಿಸುವ ವಾಹಿನಿಯು ತನ್ನ ಕಚೇರಿಗೆ ಬರುವ ಅತಿಥಿಗಳ ರಕ್ಷಣೆ ಮತ್ತು ಆತ್ಮಗೌರವವನ್ನು ಕಾಪಾಡುವ ಜವಾಬ್ದಾರಿಯನ್ನೂ ಹೊತ್ತಿರುತ್ತದೆ. ಆದರೆ, ಗಲಾಟೆ ನಡೆಯುವ ಸಮಯದಲ್ಲಿ ವಸಂತ್ ಗಿಳಿಯಾರ್ ಬೆಂಬಲಿತ ಪುಡಾರಿಗಳನ್ನು ತನ್ನ ಕಚೇರಿಯ ಆವರಣಕ್ಕೆ ಬಿಟ್ಟುಕೊಂಡ ‘ರಿಪಬ್ಲಿಕ್ ಟಿವಿ’ಯ ಉದ್ದೇಶವೇನಿತ್ತು” ಎಂದು ಸಾರ್ವಜನಿಕ ಆಕ್ರೋಶವೂ ವ್ಯಕ್ತವಾಗಿತ್ತು.


