Homeಅಂಕಣಗಳುಸುಲಭಕ್ಕೆ ಮುಗಿಯದ ರಾಜಧಾನಿ ಎಂಬ ಮಾಯಾಮೋಹಿನಿಯ ಗಾರುಡಿ

ಸುಲಭಕ್ಕೆ ಮುಗಿಯದ ರಾಜಧಾನಿ ಎಂಬ ಮಾಯಾಮೋಹಿನಿಯ ಗಾರುಡಿ

- Advertisement -
- Advertisement -

ಇವತ್ತು ಬೆಳಿಗ್ಗೆ ಒಂದು ಸುದ್ದಿ ಓದಿದ ಮ್ಯಾಲೆ ಎಚ್ಚರ ಆತು. ಚುಂಚುಂ ಬೆಳಕಿನೊಳಗ ಚುರಕ್ ಅನ್ನಿಸುವಂಥ ಸುದ್ದಿ ಯಾವುದಪಾ ಅಂದರ ಅದು ಆಳುವವರು ಕೊಟ್ಟ ಆಶ್ವಾಸನೆಯ ಸುದ್ದಿ.

ಬೆಂಗಳೂರಿನ ಪ್ರತಿ ವಾರ್ಡ್‌ಗೆ ಒಂದು ಆಸ್ಪತ್ರೆ ಕಟ್ಟತೇವಿ, ಪ್ರತಿ ವಿಧಾನಸಭೆ ಕ್ಷೇತ್ರದೊಳಗ ಒಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟತೇವಿ. ಅದಕ್ಕ ನೀವು ಕೊಟ್ಟ ಸುಂಕದೊಳಗ ಇಷ್ಟು ಕೋಟಿ ಖರ್ಚು ಮಾಡ್ತೇವಿ, ರೊಕ್ಕ ನಿಮ್ಮದು, ಹೆಸರು ನಮ್ಮದು, ಅದನ್ನು ಮುಗಸಲಿಕ್ಕೆ ಐದು ವರ್ಷ ಬೇಕಾಗತದ, ಅಲ್ಲಿ ತನಕ ಯಾರು ಜೀವಂತ ಇರ್ತೀರಿ, ಅವರು ಇದರ ಉಪಯೋಗ ತೊಗೋಬಹುದು, ಇತ್ಯಾದಿ ಇತ್ಯಾದಿ. ಇದು ‘ಮಹಾಮಾರಿಗೆ ಮಾತೇ ಮದ್ದು’ ಎಂದು ಬಲವಾಗಿ ನಂಬಿರುವ ನಮ್ಮ ಘನ ಸರ್ಕಾರದ ಹೇಳಿಕೆ. ಇದನ್ನ ಹೇಳಿದವರು ಸಚಿವ ಡಾ. ಕೇಶವ ರೆಡ್ಡಿ ಸುಧಾಕರ್ ಅವರು.

ಅದನ್ನು ನೋಡಿದಾಗ ಓದುಗರ ಪ್ರತಿಕ್ರಿಯೆ ಏನು ಇರಬಹುದು ಅಂತ ಅನ್ನಿಸಿ ಭಿನ್ನ ಭಾವ ಮೂಡಿತು. ಬರೆ ಬೆಂಗಳೂರು ವಾರ್ಡುಗಳಿಗೆ ಯಾಕೆ ಈ ಕ್ಲಿನಿಕ್ ಭಾಗ್ಯ? ರಾಜ್ಯದ ಇತರ ವಿಧಾನಸಭಾ ಕ್ಷೇತ್ರಗಳಿಗೆ ಯಾವಾಗ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾಣಬಹುದು, ಅನ್ನುವುದು ಮೊದಲ ಅಭಿಪ್ರಾಯ. ಇದು ಬೆಂಗಳೂರಿನ ಓದುಗರಿಗೂ ಬರಬಹುದು, ಗದಗ ಬೆಟಗೇರಿಯ ಓದುಗರಿಗೂ ಬರಬಹುದು.

ಸುಮಾರು ಹತ್ತು ವರ್ಷದ ಹಿಂದ ಅಂದಿನ ಕೇಂದ್ರ ಮಂತ್ರಿ ಮಲ್ಲಿಕಾರ್ಜುನ ಖರ್ಗೆ ಅವರು ‘ಗುಲ್ಬರ್ಗದಾಗ ಇಎಸ್‌ಐ ಆಸ್ಪತ್ರೆ ಕಟ್ಟತೇವಿ’ ಅಂತ ಅಂದಾಗ ಸ್ವಪಕ್ಷೀಯರು ಸಹಿತ ಭಿನ್ನರಾಗದ ಬಿನ್ನಹ ಮಾಡಿದರು. ‘ಆ ಮೂಲಿಯೊಳಗ ಐದಾರು ಸಾವಿರ ಹಾಸಿಗೆ ಆಸ್ಪತ್ರೆ ಯಾಕೆ ಬೇಕು?’ ‘ಬ್ಯಾಂಗ್‌ಲೋರ್-ಮೈಸೂರ್‌ಗೇ ಇಲ್ಲಾ?’ ಅನ್ನುವುದರಿಂದ ಶುರು ಆದ ಆ ಮಾತುಗಳು, ‘ಆ ಮಂತ್ರಿಗೆ ಏನು ಆಸಕ್ತಿ ಅದನೋ ಏನೋ’, ‘ಯಾರರ ಗುತ್ತಿಗೆದಾರರು ಹೇಳಿ ಕೊಟ್ಟಿರಬೇಕು’, ‘ಅದರಾಗ ಎನಾರ ಪರತ ಪಾವತಿ ಇರಬೇಕು’ ಇತ್ಯಾದಿ ಗುಸು-ಗುಸು ಪಿಸಿ-ಪಿಸಿ ಮಾಡಿದರು.

PC : Kannada News

ಆದರ ಅದು ಅದೇ ಮೊದಲು ಅಲ್ಲ. ಧಾರವಾಡದೊಳಗ ಐಐಟಿ ಬರಬೇಕಾದಾಗ, ಗುಲ್ಬರ್ಗಕ್ಕ ಕೇಂದ್ರೀಯ ವಿಶ್ವವಿದ್ಯಾಲಯ ಬಂದಾಗ, ಬೀದರದೊಳಗ ಪಶು ವಿಶ್ವವಿದ್ಯಾಲಯ ಆರಂಭವಾದಾಗ, ಹುಬ್ಬಳ್ಳಿಗೆ ರೈಲ್ವೆ ವಲಯ ಸಿಕ್ಕಾಗ, ಬಾಗಲಕೋಟೆಯೊಳಗ ಅಲಮಟ್ಟಿ, ಕೂಡಲ ಸಂಗಮ ಪ್ರಾಧಿಕಾರ ಎದ್ದು ನಿಂತಾಗ ಇದೇ ರೀತಿಯ ಮಾತು ಬಂದವು.

“ಅಲ್ರೀ, ಅಲ್ಲಿಗೆ ಯಾಕೆ? ಬ್ಯಾಂಗ್‌ಲೋರ-ಮೈಸೂರ್‌ಗೇ ಇಲ್ಲ” ಅನ್ನುವ ‘ಅಕಾರಣ ಅಭೋಗಿ ಕಾನಡಾ’ ರಾಗ – ‘ಹಳೆ ಗೋಳು’ ತಾಳ ಕೇಳಿ ಬಂದವು. ಇವತ್ತಿಗೂ ಬೆಂಗಳೂರು-ಮೈಸೂರು ರೈಲ್ವೆ ವಿಭಾಗಗಳಿಗೆ ಹುಬ್ಬಳ್ಳಿಯೇ ಕೇಂದ್ರ ಕಚೇರಿ ಅನ್ನೋದು ಅನೇಕ ರಾಜಧಾನಿಧೀಶರಿಗೆ ಗೊತ್ತಿಲ್ಲ. ಗೊತ್ತಾದರೂ ಅವರು ಒಪ್ಪಲು ತಯಾರು ಇಲ್ಲ.

ನಮ್ಮ ಆರೋಗ್ಯ ಸಚಿವರ ಮಾತು ಕೇಳಿದಾಗ ಇನ್ನೊಂದು ಸಹಜ ಸಂಶಯ ಏನು ಬರ್ತದ ಅಂದ್ರ ‘ಈ ಸದುದ್ದೇಶದ ಯೋಜನೆ ಕೇವಲ ಬೆಂಗಳೂರಿಗೆ ಯಾಕ್ ಸೀಮಿತ ಆತು?’, ‘ಬ್ಯಾರೆ ಜಿಲ್ಲೆಗಳಿಗೆ ಯಾಕ್ ಬ್ಯಾಡ?’, ‘ಬೆಂಗಳೂರಿನ ಆಳರಸರು ಕೊಡಲಿಲ್ಲವೋ ಅಥವಾ ನಮ್ಮ ವೋಟು ತೊಗೊಂಡು ರಾಜಧಾನಿಯೊಳಗ ಸೆಟಿಲ್ ಆದ ನಮ್ಮ ಮಾಂಡಲಿಕರು ಕೇಳಲಿಲ್ಲವೋ?’, ‘ಮಗು ಅಳದೆ ಹೋದರೆ ಹೆತ್ತ ತಾಯಿಯೂ ಸಹಿತ ಹಾಲು ಕೊಡೋದಿಲ್ಲ ಅನ್ನೋ ಗಾದಿಮಾತು ಅವರು ಕೇಳೇ ಇಲ್ಲ ಏನು? ಅಂತಹಾ ತಾಯೀನ ಅಂತೂ ನಾವು ನೋಡಿಲ್ಲ. ಆದರ ತನ್ನ ‘ಕ್ಷೇತ್ರ ಅಭಿವೃದ್ಧಿ ಮಾಡ್ರಿ’ ಅನ್ನುವ ಮಾತೇ ಆಡದೆ ತನ್ನ ಸಂಪೂರ್ಣ ಅವಧಿ ಮುಗಿಸುವ ಎಂಎಲ್‌ಎ ಸಾಹೇಬರನ್ನ ಬಹಳ ನೋಡೇವಿ.

ಸಜ್ಜನ ಅಧಿಕಾರಿ ಚಿರಂಜೀವಿ ಸಿಂಗ್ ಅವರು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹುದ್ದೆಯನ್ನ ಅಭಿವೃದ್ದಿ ಆಯುಕ್ತ ಅಂತ ಬದಲಿಮಾಡಿ ಬೆಳಗಾವಿಗೆ ಬಂದಾಗ ಅವರ ಮುಂದೆ ಚಪ್ಪಾಳೆ ತಟ್ಟಿ ಹಿಂದೆ ವ್ಯಂಗ್ಯ ಮಾಡಿದವರೆ ಹೆಚ್ಚು. ‘ಹುಚ್ಚರ ಹಂಗ ಅಲ್ಲಿಗೆ ಹೋಗ್ಯಾನ. ಅಲ್ಲಿ ಕುತಗೊಂಡು ಏನು ಅಭಿವೃದ್ಧಿ ಮಾಡ್ಲಿಕ್ಕೆ ಬರ್ತದ? ಬೆಂಗಳೂರು ಆಫೀಸ್‌ದೊಳಗ ಇದ್ದಾರ ಏನಾದರೂ ಮಾಡಬಹುದು. ಅವನ ಫಸ್ಟ್, ಅವನ ಲಾಸ್ಟ್. ಆಮ್ಯಾಲೆ ಯಾರೂ ಹೋಗೋದಿಲ್ಲ, ಪಿಶ್ಯಾ!’ ಅಂತ ಅನೇಕ ವಿರಾಮ ಸೇನೆ (ಐಎಎಸ್ಸು ಮುಂತಾದ ವಿಕ್ಟೋರಿಯಾ ರಾಣಿಯ ನಾಗರಿಕ ಸೇವೆ ಅಧಿಕಾರಿಗಳು) ಮೂಗು ಮುರಿಯಿತು. ಅವರ ಭವಿಷ್ಯ ಖರೆ ಆತು. ಸಿಂಗ್ ಅವರ ನಂತರ ಅಷ್ಟು ದೊಡ್ಡ ಹುದ್ದೆಯ ಅಧಿಕಾರಿ ಯಾರೂ ಬರಲೇ ಇಲ್ಲ. ಬೆಳಗಾವಿಗೆ ಪ್ರಾದೇಶಿಕ ಆಯುಕ್ತರ ನೇಮಕನ ಕಾಯಂ ಆತು.

ಇನ್ನೊಂದು ಮಜಾ ಕತಿ ಐತಿ. ಸಣ್ಣ ವಯಸ್ಸಿನಲ್ಲೆ ರಾಷ್ಟ್ರೀಯ ಪತ್ರಿಕೆಯ ಪ್ರಾದೇಶಿಕ ಸಂಪಾದಕ ಆಗಿ, ಆನಂತರ ಟಿವಿ ಚಾನೆಲ್‌ನ ಮುಖ್ಯಸ್ಥರಾಗಿ ಹೋದ ದೊಡ್ಡ ಪತ್ರಕರ್ತರೊಬ್ಬರು ತಮ್ಮ ಪತ್ರಿಕೆಯೊಳಗ ಐಎಎಸ್ಸು ಅಧಿಕಾರಿಗಳ ಕುಟುಂಬ ಜೀವನದ ಬಗ್ಗೆ ಒಂದು ಕಾಲಂ ಶುರು ಮಾಡಿದರು. ಅವರ ಕಣ್ಣು ಕುಮಾರ್ ಅನ್ನುವ ಒಬ್ಬ ಅಧಿಕಾರಿ ಮ್ಯಾಲೆ ಬಿತ್ತು. ಅವರು ‘ಗ್ರೇಟ್ ಆಫೀಸರ್’ ಅಂತ ಬೆಂಗಳೂರಿನ ಸುತ್ತಮುತ್ತ ಎಲ್ಲಾ ಜಗತ್ ಪ್ರಸಿದ್ಧರಾಗಿದ್ದರು. ಅವರನ್ನ ಭೇಟಿ ಆಗಲಿಕ್ಕೆ ಒಬ್ಬ ಕಿರಿಯ ಪತ್ರಕರ್ತನಿಗೆ ಸಂಪಾದಕರು ಹೇಳಿದರು. ಅವರ ಸಂದರ್ಶನ ಮಾಡಲಿಕ್ಕೆ ಹೋಗುವಾಗ ‘ನಾನೂ ಬರತೇನೆ’ ಅಂತ ಹೇಳಿ ಅವರ ಸಂಗತೆ ಹೋದರು. ‘ನಾವು ಹೋದರ ಸುಡುಗಾಡು ಕೆಎಸ್‌ಆರ್‌ಟಿಸಿ ಬಸ್ಸಿನಾಗ ಹೋಗಬೇಕು. ಸಂಪಾದಕರು ಬಂದರ ಕಾರಿನೊಳಗ ಹೋಗಲಿಕ್ಕೆ ಬರತದ’ ಅಂತ ಹೇಳಿ ವರದಿಗಾರರು ಒಪ್ಪಿಕೊಂಡರು.

ಆ ಅಧಿಕಾರಿ ವಿಧಾನಸೌಧ ಎಂಬೊ ಜೇನುಗೂಡಿನೊಳಗ ಯಾವುದೋ ಒಂದು ಕೋಣೆಯೊಳಗ ಇದ್ದರು. ತಮ್ಮ ವೃತ್ತಿಜೀವನದೊಳಗ ವಿಧಾನಸೌಧದ ಒಳಗೆ ಕಾಲು ಇಡಲಾರದೇ ಮುಖ್ಯ ಸಂಪಾದಕರಾಗಿದ್ದ ಆ ಹಿರಿಯರು ಕಿರಿಯನನ್ನು ನೋಡುತ್ತಲೇ ಇದ್ದರು. ಅವರು ಕೇಳುವ ಪ್ರಶ್ನೆಗಳನ್ನು ಗಮನಿಸಿ, ಅಧಿಕಾರಿ ಕೊಡುವ ಉತ್ತರ ಕೇಳಿಸಿಕೊಂಡು ಸುಮ್ಮನೇ ಕೂತಿದ್ದರು. “ನಮ್ಮ ಮನೆಗೆ ಬಂದಿದ್ದರೆ ಸಮೋಸ ಕೊಡುತ್ತಾ ಇದ್ದೇ. ಆದರೆ ನಮ್ಮ ಕಚೇರಿಯಲ್ಲಿ ಸಿಗೋದು ಬರೇ ಸರಕಾರಿ ಚಹಾ ಅಷ್ಟೇ” ಅಂತ ‘ಜೋಕ್’ ಕುಮಾರ್ ಅವರು ನುಡಿದರು. ಸಂಪಾದಕರಿಗೆ ಅದು ಇಡೀ ಇಂಡಿಯಾದ ಕೆರ ಹಿಡಿದು ಹೋದ ಸರಕಾರಿ ವ್ಯವಸ್ಥೆಯ ಬಗ್ಗೆ ಹೇಳಿದ ಕಾಮೆಂಟ್ ಅನ್ನಿಸಿತು. ಅವರು ಗಹಗಹಿಸಿ ನಕ್ಕರು. ಆದರ “ಬೆಣ್ಣಿ ತಿಂದ ಮ್ಯಾಲೆ ಪಾತ್ರೆಯ ತಳಕ್ಕೆ ಕಿಲುಬು” ಅಂತ ಮೂಗು ಮುರಿಯುವ ಇಂಥ ಅಧಿಕಾರಿಗಳನ್ನು ದಿನಾಲು ನೋಡಿದ್ದ ವರದಿಗಾರ ನಗಲಿಲ್ಲ. ಸಂದರ್ಶನ ಮುಗಿದು ಅವರಿಬ್ಬರೂ ವಾಪಸ್ ಹೋಗಲು ಎದ್ದಾಗ ಸಂಪಾದಕರು ಅಧಿಕಾರಿಯನ್ನು ಕೇಳಿದರು “ನೀವು ಕರ್ನಾಟಕಕ್ಕೆ ಬಂದು ಎಷ್ಟು ವರ್ಷ ಆಯಿತು? ಬೆಂಗಳೂರಿಗೆ ಯಾವಾಗ ಬಂದಿರಿ? ಐಐಟಿಯಲ್ಲಿ ನಿಮ್ಮ ಬ್ಯಾಚ್ ಯಾವುದು?, ಇನ್ನೂ ಎಷ್ಟು ವರ್ಷ ಸರ್ವಿಸ್ ಇದೆ? ಇತ್ಯಾದಿ. ಅವರು ಹಳ್ಳಿಯ ದಲ್ಲಾಳಿ ಅಂಗಡಿಯ ಶೆಟ್ಟಿಯ ರೀತಿ ಗೋಳಾಡಿಕೊಂಡು ಅತ್ತುಬಿಟ್ಟರು.

“ಅಯ್ಯೋ ಅದನ್ನು ಏನು ಕೇಳ್ತೀರಾ! ನಮಗೆ ಒಟ್ಟು 30 ವರ್ಷ ಸರ್ವೀಸ್ ಇರ್ತದೆ, ಅದರಲ್ಲಿ ಹತ್ತು ವರ್ಷ ಬೆಂಗಳೂರು ಬಿಟ್ಟು ಹೊರಗೆ ಹೋಗಬೇಕು. ನಾನು ಮೊದಲು ಪೋಸ್ಟಿಂಗ್ ಸವಣೂರಿನಲ್ಲಿ ಮಾಡಿದೆ. ದ ಹೋಲ್ ಆಫ್ ಸವನುರ ಈಸ್ ಲೈಕ್ ಒರಿಸ್ಸಾ. ವೆರೀ ಬ್ಯಾಡ್ ಸ್ಟೇಟ್ ಆಫ್ ಅಫೇರ್ಸ. ಅದೆಲ್ಲ ಮುಗಿಸಿ ಇಲ್ಲಿಗೆ ಬಂದಿದ್ದೇವೆ. ಆ ನಂತರ ರಿಟೈರ್ ಆಗುವವರೆಗೂ ಗಾರ್ಡನ್ ಸಿಟಿ ವಾಸ. ಇಲ್ಲಿ ನಮ್ಮ ಮಕ್ಕಳಿಗೆ ಫ್ಯೂಚರ್ ಇದೆ. ನಾವು ಐಐಟಿಯಲ್ಲಿ ಓದಿ, ಐಎಎಸ್ಸು ಪಾಸು ಮಾಡಿದ್ದು ಸಾರ್ಥಕ ಆಯಿತು” ಅಂತ ಅವರು ನಿಟ್ಟುಸಿರುಬಿಟ್ಟರು. ತಂದೆ ತಾಯಿಯನ್ನು ದೂರದ ವೃದ್ಧಾಶ್ರಮದಲ್ಲಿ ಬಿಟ್ಟು ಅಪಾರ್ಟ್ಮೆಂಟ್‌ಗೆ ವಾಪಸ್ ಬಂದು ನಿರಾಳವಾದ ಮಧ್ಯಮವರ್ಗದ ಯುವಕನಂತೆ ಖುಷಿಪಟ್ಟರು.

“ಅಯ್ಯಯ್ಯೋ ಇದು ಏನು ಕತೆ. ಈಗಾದ್ರೂ ಬಂದಿರಲ್ಲ, ಒಳ್ಳೇದು ಆಯಿತು ಬಿಡಿ. ನಾಳೆ ಗಾಲ್ಫ್ ಕ್ಲಬ್‌ನಲ್ಲಿ ಸಿಗೋಣ” ಅಂತ ಹೇಳಿ ಸಂಪಾದಕರು ಹೊರಟರು.

ಸಂಜೆ ಕಚೇರಿಯ ಮೂಲೆಯಲ್ಲಿ ಪೈಪು ಸೇದುವಾಗ ಸಂಪಾದಕರು ವರದಿಗಾರ ನನ್ನು ಕರೆದರು. “ನಾಳೆ ಎಡಿಟೋರಿಯಲ್ ಬರಿಬೇಕು. ಯಾವ ಶಿಲಾಯುಗದ ಸರಕಾರ ಇದು. ಐಐಟಿ ಓದಿದವರನ್ನು ಸಾವನೂರಿಗೆ ಎತ್ತು ಹಾಕಿದರೆ ಹೇಗೆ” ಅಂತ ಸ್ವಗತ ಎಂಬುವಂತ ಮಾತು ಆಡಿದರು. ಅವರ ಎದುರು ಅಪರೂಪಕ್ಕೆ ಮಾತಾಡುವ ವರದಿಗಾರ ಅಪೂರ್ವ ವಿಚಾರಸರಣಿಗೆ ತುಂಡು ಹಾಕಿದ. “ಅದು ಸಾವನೂರು ಅಲ್ಲ ಸರ್, ಅದು ಸವಣೂರು. ಹಿಂದೆ ಅದು ಒಂದು ಪ್ರದೇಶದ ರಾಜಧಾನಿ ಆಗಿತ್ತು. ಗೋಕಾಕ ಚಳವಳಿಗೆ ಕಾರಣವಾದ ವರದಿ ಸಿದ್ಧ ಮಾಡಿದ ವಿ.ಕೆ ಗೋಕಾಕ ಅವರು, ನಮ್ಮ ಪತ್ರಿಕೆಯ ಮಾಜಿ ಸಂಪಾದಕ ದಿಲೀಪ್ ಪಡಗಾಂವ್‌ಕರ್ ಅವರು ಸವಣೂರಿನವರೆ” ಅಂತ ಹೇಳಿದ. “ಅಯ್ಯೋ ಹೌದೇ, ಗೋಕಾಕ ಚಳವಳಿ ಅಂದರೆ ನಾನು ರಮೇಶ್ ಜಾರಕಿಹೊಳಿ ಅವರು ಶುರು ಮಾಡಿದ್ದ ರಾಜಕೀಯ ಬಂಡಾಯ ಅಂತ ನಾನು ತಿಳಿದುಕೊಂಡಿದ್ದೆ” ಅಂತ ಗೋಳಾಡಿದರು. “ಅಷ್ಟಕ್ಕೂ ಸವಣೂರು ಒರಿಸ್ಸಾದಂತೆ ಹಿಂದುಳಿದ ಪ್ರದೇಶ ಅಂತ ಹೇಳಿದ ಆ ಅಧಿಕಾರಿ ಮೂಲ ಒರಿಸ್ಸಾದವರು” ಅಂತ ಅಷ್ಟೇ ಹೇಳಿ ವರದಿಗಾರ ಅಲ್ಲಿಂದ ಹೋದ.

PC : Public Tv

ಇಂದಿಗೂ ಸರಕಾರಕ್ಕೆ ಸಲಹೆ ನೀಡುವ ಕಾರ್ಯನಿರ್ವಾಹಕ ಸಂಪಾದಕರು, ಅವರ ಕೆಳಗಿನ ಅಸಹಾಯಕ ಸಂಪಾದಕರು ಇತ್ಯಾದಿ ನೀತಿ ನಿರೂಪಕರಿಗೆ, ಜನಾಭಿಪ್ರಾಯ ಜನಕರಿಗೆ ಇಂತಹ ವಿಷಯಗಳು ಗಲಿಬಿಲಿ ಹುಟ್ಟಿಸತಾವ. ಅವರಿಗೆ ಒಬ್ಬ ಐಎಎಸ್ಸು ಅಧಿಕಾರಿ ತನ್ನ 35 ವರ್ಷ ಸೇವಾ ಕಾಲದಲ್ಲಿ 10 ವರ್ಷ ಬೆಂಗಳೂರಿನಿಂದ ಹೊರಗೆ ಕಳೆದರೆ ಅದು ವ್ಯರ್ಥ ಕಾಲಹರಣ ಅನ್ನಿಸುತ್ತದ.

ಹಿಂದೊಮ್ಮೆ ರಾಜ್ಯ ಸರಕಾರ ರಾಜ್ಯದ ಕೆಲವು ಕಡೆ ಹೊಸ ಪೊಲೀಸ್ ವಲಯಗಳನ್ನು ಮಾಡಿ ಐಜಿಪಿಗಳನ್ನು ನೇಮಕ ಮಾಡಿತು. ಈಗ ನಿವೃತ್ತರಾಗಿರುವ, ಆಗ ಕುಡಿಮೀಸೆಯ ಯುವಕರಾಗಿದ್ದ ರಾಜಸ್ತಾನ ಮೂಲದ ಐಪಿಎಸ್ಸು ಅಧಿಕಾರಿಯೊಬ್ಬರಿಗೆ ದಾವಣಗೆರೆ ವಲಯಕ್ಕೆ ನೇಮಕ ಆತು. ಅವರು ‘ನಾ ಒಲ್ಲೆ’ ಅಂತ ಹಠ ಹಿಡಿದರು. ಡಿಜಿಪಿ ಸಾಹೇಬರ ಹತ್ತಿರ ಹೋಗಿ ಗೋಳಾಡಿದರು. ತಾನು ಎಸ್ಪಿ ಆಗಿದ್ದಾಗ ಇಸ್ಪೀಟು ಆಡಿ ಸಿಕ್ಕಿದ್ದ, ಮುಂದೆ ಎಂಎಲ್‌ಎ ಆಗಿ ಕುಕ್ಕರಿಸಿದ್ದ ಪುಢಾರಿಯೊಬ್ಬರ ಹತ್ತಿರ ಹೋಗಿ ಆ ಆದೇಶ ರದ್ದು ಮಾಡಿಸಿದರು. ತನ್ನ ಬ್ಯಾಚ್‌ಮೇಟ್ ಅಧಿಕಾರಿಯೊಬ್ಬ “ಯಾಕೋ ದಾವಣಗೆರೆಗೆ ಹೋಗಲಿಲ್ಲ? ಹೊಸ ರೇಂಜ್, ಒಳ್ಳೆ ಕೆಲಸ ಮಾಡಬಹುದಿತ್ತು. ಅಂತ ಕಡೆ ಒಳ್ಳೆ ಅಧಿಕಾರಿಗಳು ಬೇಕು” ಅಂತ ಕೇಳಿದರು. ಇವರು ಸಟಕ್ಕನೆ “ಯಾಕೆ ಬೆಂಗಳೂರಿಗೆ ಒಳ್ಳೆ ಅಧಿಕಾರಿಗಳು ಬೇಡವಾ? ನೀವ್ ಮಾತ್ರ ಇಲ್ಲಿ ಎಂಜಾಯ್ ಮಾಡಬೇಕಾ” ಅಂತ ಮರುಉತ್ತರ ಕೊಟ್ಟರು.

ಮುಂದೆ ಸದರಿ ಅಧಿಕಾರಿ ಪೊಲೀಸು ಇಲಾಖೆಯಲ್ಲಿ ಜಾಗ ಸಿಗದೇ ನೀರಾವರಿ ಇಲಾಖೆಯಲ್ಲಿ ಒಂದು ಕುರ್ಚಿ-ಟೇಬಲ್ ಹಾಕಿಕೊಂಡು ಕೂತರು. ರಾಜ್ಯಮಟ್ಟದ ಪತ್ರಿಕೆಗೆ ಕೊಟ್ಟ ಸಂದರ್ಶನದಲ್ಲಿ ನಾನು ರಾಜಸ್ತಾನದ ಕುಗ್ರಾಮದಲ್ಲಿ ಬಡತನದಲ್ಲಿ ಹುಟ್ಟಿದೆ. ನಾನು ಕಾಲೇಜು ಓದುವಾಗಲೂ ದಿನಗೂಲಿ ಮಾಡುತ್ತಾ ಇದ್ದೇ. ಸಿಗುತ್ತಿದ್ದ ಒಂದು ರೂಪಾಯಿ ಕೂಲಿಯಲ್ಲಿ ನನ್ನ ಮನೆ ನಡೆಸಿ, ಕಾಲೇಜು ಮುಗಿಸಿದೆ ಅಂತ ಅಭಿಮಾನದಿಂದ ಹೇಳಿಕೊಂಡಿದ್ದರು.

ರಾಜಧಾನಿ ಎಂಬ ಮಾಯಾಮೋಹಿನಿಯ ಗಾರುಡಿ ಸುಲಭಕ್ಕೆ ಮುಗಿಯುವಂತೆ ಕಾಣುವುದಿಲ್ಲ.


ಇದನ್ನೂ ಓದಿ: ಹೋರಾಟಗಾರ ಅಖಿಲ್ ಗೊಗೋಯ್‌ ವಿರುದ್ಧದ ಎಲ್ಲಾ ಪ್ರಕರಣಗಳನ್ನು ಕೈಬಿಟ್ಟ ಎನ್‌ಐಎ ನ್ಯಾಯಾಲಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...