Homeಅಂಕಣಗಳುಸುಲಭಕ್ಕೆ ಮುಗಿಯದ ರಾಜಧಾನಿ ಎಂಬ ಮಾಯಾಮೋಹಿನಿಯ ಗಾರುಡಿ

ಸುಲಭಕ್ಕೆ ಮುಗಿಯದ ರಾಜಧಾನಿ ಎಂಬ ಮಾಯಾಮೋಹಿನಿಯ ಗಾರುಡಿ

- Advertisement -
- Advertisement -

ಇವತ್ತು ಬೆಳಿಗ್ಗೆ ಒಂದು ಸುದ್ದಿ ಓದಿದ ಮ್ಯಾಲೆ ಎಚ್ಚರ ಆತು. ಚುಂಚುಂ ಬೆಳಕಿನೊಳಗ ಚುರಕ್ ಅನ್ನಿಸುವಂಥ ಸುದ್ದಿ ಯಾವುದಪಾ ಅಂದರ ಅದು ಆಳುವವರು ಕೊಟ್ಟ ಆಶ್ವಾಸನೆಯ ಸುದ್ದಿ.

ಬೆಂಗಳೂರಿನ ಪ್ರತಿ ವಾರ್ಡ್‌ಗೆ ಒಂದು ಆಸ್ಪತ್ರೆ ಕಟ್ಟತೇವಿ, ಪ್ರತಿ ವಿಧಾನಸಭೆ ಕ್ಷೇತ್ರದೊಳಗ ಒಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟತೇವಿ. ಅದಕ್ಕ ನೀವು ಕೊಟ್ಟ ಸುಂಕದೊಳಗ ಇಷ್ಟು ಕೋಟಿ ಖರ್ಚು ಮಾಡ್ತೇವಿ, ರೊಕ್ಕ ನಿಮ್ಮದು, ಹೆಸರು ನಮ್ಮದು, ಅದನ್ನು ಮುಗಸಲಿಕ್ಕೆ ಐದು ವರ್ಷ ಬೇಕಾಗತದ, ಅಲ್ಲಿ ತನಕ ಯಾರು ಜೀವಂತ ಇರ್ತೀರಿ, ಅವರು ಇದರ ಉಪಯೋಗ ತೊಗೋಬಹುದು, ಇತ್ಯಾದಿ ಇತ್ಯಾದಿ. ಇದು ‘ಮಹಾಮಾರಿಗೆ ಮಾತೇ ಮದ್ದು’ ಎಂದು ಬಲವಾಗಿ ನಂಬಿರುವ ನಮ್ಮ ಘನ ಸರ್ಕಾರದ ಹೇಳಿಕೆ. ಇದನ್ನ ಹೇಳಿದವರು ಸಚಿವ ಡಾ. ಕೇಶವ ರೆಡ್ಡಿ ಸುಧಾಕರ್ ಅವರು.

ಅದನ್ನು ನೋಡಿದಾಗ ಓದುಗರ ಪ್ರತಿಕ್ರಿಯೆ ಏನು ಇರಬಹುದು ಅಂತ ಅನ್ನಿಸಿ ಭಿನ್ನ ಭಾವ ಮೂಡಿತು. ಬರೆ ಬೆಂಗಳೂರು ವಾರ್ಡುಗಳಿಗೆ ಯಾಕೆ ಈ ಕ್ಲಿನಿಕ್ ಭಾಗ್ಯ? ರಾಜ್ಯದ ಇತರ ವಿಧಾನಸಭಾ ಕ್ಷೇತ್ರಗಳಿಗೆ ಯಾವಾಗ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾಣಬಹುದು, ಅನ್ನುವುದು ಮೊದಲ ಅಭಿಪ್ರಾಯ. ಇದು ಬೆಂಗಳೂರಿನ ಓದುಗರಿಗೂ ಬರಬಹುದು, ಗದಗ ಬೆಟಗೇರಿಯ ಓದುಗರಿಗೂ ಬರಬಹುದು.

ಸುಮಾರು ಹತ್ತು ವರ್ಷದ ಹಿಂದ ಅಂದಿನ ಕೇಂದ್ರ ಮಂತ್ರಿ ಮಲ್ಲಿಕಾರ್ಜುನ ಖರ್ಗೆ ಅವರು ‘ಗುಲ್ಬರ್ಗದಾಗ ಇಎಸ್‌ಐ ಆಸ್ಪತ್ರೆ ಕಟ್ಟತೇವಿ’ ಅಂತ ಅಂದಾಗ ಸ್ವಪಕ್ಷೀಯರು ಸಹಿತ ಭಿನ್ನರಾಗದ ಬಿನ್ನಹ ಮಾಡಿದರು. ‘ಆ ಮೂಲಿಯೊಳಗ ಐದಾರು ಸಾವಿರ ಹಾಸಿಗೆ ಆಸ್ಪತ್ರೆ ಯಾಕೆ ಬೇಕು?’ ‘ಬ್ಯಾಂಗ್‌ಲೋರ್-ಮೈಸೂರ್‌ಗೇ ಇಲ್ಲಾ?’ ಅನ್ನುವುದರಿಂದ ಶುರು ಆದ ಆ ಮಾತುಗಳು, ‘ಆ ಮಂತ್ರಿಗೆ ಏನು ಆಸಕ್ತಿ ಅದನೋ ಏನೋ’, ‘ಯಾರರ ಗುತ್ತಿಗೆದಾರರು ಹೇಳಿ ಕೊಟ್ಟಿರಬೇಕು’, ‘ಅದರಾಗ ಎನಾರ ಪರತ ಪಾವತಿ ಇರಬೇಕು’ ಇತ್ಯಾದಿ ಗುಸು-ಗುಸು ಪಿಸಿ-ಪಿಸಿ ಮಾಡಿದರು.

PC : Kannada News

ಆದರ ಅದು ಅದೇ ಮೊದಲು ಅಲ್ಲ. ಧಾರವಾಡದೊಳಗ ಐಐಟಿ ಬರಬೇಕಾದಾಗ, ಗುಲ್ಬರ್ಗಕ್ಕ ಕೇಂದ್ರೀಯ ವಿಶ್ವವಿದ್ಯಾಲಯ ಬಂದಾಗ, ಬೀದರದೊಳಗ ಪಶು ವಿಶ್ವವಿದ್ಯಾಲಯ ಆರಂಭವಾದಾಗ, ಹುಬ್ಬಳ್ಳಿಗೆ ರೈಲ್ವೆ ವಲಯ ಸಿಕ್ಕಾಗ, ಬಾಗಲಕೋಟೆಯೊಳಗ ಅಲಮಟ್ಟಿ, ಕೂಡಲ ಸಂಗಮ ಪ್ರಾಧಿಕಾರ ಎದ್ದು ನಿಂತಾಗ ಇದೇ ರೀತಿಯ ಮಾತು ಬಂದವು.

“ಅಲ್ರೀ, ಅಲ್ಲಿಗೆ ಯಾಕೆ? ಬ್ಯಾಂಗ್‌ಲೋರ-ಮೈಸೂರ್‌ಗೇ ಇಲ್ಲ” ಅನ್ನುವ ‘ಅಕಾರಣ ಅಭೋಗಿ ಕಾನಡಾ’ ರಾಗ – ‘ಹಳೆ ಗೋಳು’ ತಾಳ ಕೇಳಿ ಬಂದವು. ಇವತ್ತಿಗೂ ಬೆಂಗಳೂರು-ಮೈಸೂರು ರೈಲ್ವೆ ವಿಭಾಗಗಳಿಗೆ ಹುಬ್ಬಳ್ಳಿಯೇ ಕೇಂದ್ರ ಕಚೇರಿ ಅನ್ನೋದು ಅನೇಕ ರಾಜಧಾನಿಧೀಶರಿಗೆ ಗೊತ್ತಿಲ್ಲ. ಗೊತ್ತಾದರೂ ಅವರು ಒಪ್ಪಲು ತಯಾರು ಇಲ್ಲ.

ನಮ್ಮ ಆರೋಗ್ಯ ಸಚಿವರ ಮಾತು ಕೇಳಿದಾಗ ಇನ್ನೊಂದು ಸಹಜ ಸಂಶಯ ಏನು ಬರ್ತದ ಅಂದ್ರ ‘ಈ ಸದುದ್ದೇಶದ ಯೋಜನೆ ಕೇವಲ ಬೆಂಗಳೂರಿಗೆ ಯಾಕ್ ಸೀಮಿತ ಆತು?’, ‘ಬ್ಯಾರೆ ಜಿಲ್ಲೆಗಳಿಗೆ ಯಾಕ್ ಬ್ಯಾಡ?’, ‘ಬೆಂಗಳೂರಿನ ಆಳರಸರು ಕೊಡಲಿಲ್ಲವೋ ಅಥವಾ ನಮ್ಮ ವೋಟು ತೊಗೊಂಡು ರಾಜಧಾನಿಯೊಳಗ ಸೆಟಿಲ್ ಆದ ನಮ್ಮ ಮಾಂಡಲಿಕರು ಕೇಳಲಿಲ್ಲವೋ?’, ‘ಮಗು ಅಳದೆ ಹೋದರೆ ಹೆತ್ತ ತಾಯಿಯೂ ಸಹಿತ ಹಾಲು ಕೊಡೋದಿಲ್ಲ ಅನ್ನೋ ಗಾದಿಮಾತು ಅವರು ಕೇಳೇ ಇಲ್ಲ ಏನು? ಅಂತಹಾ ತಾಯೀನ ಅಂತೂ ನಾವು ನೋಡಿಲ್ಲ. ಆದರ ತನ್ನ ‘ಕ್ಷೇತ್ರ ಅಭಿವೃದ್ಧಿ ಮಾಡ್ರಿ’ ಅನ್ನುವ ಮಾತೇ ಆಡದೆ ತನ್ನ ಸಂಪೂರ್ಣ ಅವಧಿ ಮುಗಿಸುವ ಎಂಎಲ್‌ಎ ಸಾಹೇಬರನ್ನ ಬಹಳ ನೋಡೇವಿ.

ಸಜ್ಜನ ಅಧಿಕಾರಿ ಚಿರಂಜೀವಿ ಸಿಂಗ್ ಅವರು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹುದ್ದೆಯನ್ನ ಅಭಿವೃದ್ದಿ ಆಯುಕ್ತ ಅಂತ ಬದಲಿಮಾಡಿ ಬೆಳಗಾವಿಗೆ ಬಂದಾಗ ಅವರ ಮುಂದೆ ಚಪ್ಪಾಳೆ ತಟ್ಟಿ ಹಿಂದೆ ವ್ಯಂಗ್ಯ ಮಾಡಿದವರೆ ಹೆಚ್ಚು. ‘ಹುಚ್ಚರ ಹಂಗ ಅಲ್ಲಿಗೆ ಹೋಗ್ಯಾನ. ಅಲ್ಲಿ ಕುತಗೊಂಡು ಏನು ಅಭಿವೃದ್ಧಿ ಮಾಡ್ಲಿಕ್ಕೆ ಬರ್ತದ? ಬೆಂಗಳೂರು ಆಫೀಸ್‌ದೊಳಗ ಇದ್ದಾರ ಏನಾದರೂ ಮಾಡಬಹುದು. ಅವನ ಫಸ್ಟ್, ಅವನ ಲಾಸ್ಟ್. ಆಮ್ಯಾಲೆ ಯಾರೂ ಹೋಗೋದಿಲ್ಲ, ಪಿಶ್ಯಾ!’ ಅಂತ ಅನೇಕ ವಿರಾಮ ಸೇನೆ (ಐಎಎಸ್ಸು ಮುಂತಾದ ವಿಕ್ಟೋರಿಯಾ ರಾಣಿಯ ನಾಗರಿಕ ಸೇವೆ ಅಧಿಕಾರಿಗಳು) ಮೂಗು ಮುರಿಯಿತು. ಅವರ ಭವಿಷ್ಯ ಖರೆ ಆತು. ಸಿಂಗ್ ಅವರ ನಂತರ ಅಷ್ಟು ದೊಡ್ಡ ಹುದ್ದೆಯ ಅಧಿಕಾರಿ ಯಾರೂ ಬರಲೇ ಇಲ್ಲ. ಬೆಳಗಾವಿಗೆ ಪ್ರಾದೇಶಿಕ ಆಯುಕ್ತರ ನೇಮಕನ ಕಾಯಂ ಆತು.

ಇನ್ನೊಂದು ಮಜಾ ಕತಿ ಐತಿ. ಸಣ್ಣ ವಯಸ್ಸಿನಲ್ಲೆ ರಾಷ್ಟ್ರೀಯ ಪತ್ರಿಕೆಯ ಪ್ರಾದೇಶಿಕ ಸಂಪಾದಕ ಆಗಿ, ಆನಂತರ ಟಿವಿ ಚಾನೆಲ್‌ನ ಮುಖ್ಯಸ್ಥರಾಗಿ ಹೋದ ದೊಡ್ಡ ಪತ್ರಕರ್ತರೊಬ್ಬರು ತಮ್ಮ ಪತ್ರಿಕೆಯೊಳಗ ಐಎಎಸ್ಸು ಅಧಿಕಾರಿಗಳ ಕುಟುಂಬ ಜೀವನದ ಬಗ್ಗೆ ಒಂದು ಕಾಲಂ ಶುರು ಮಾಡಿದರು. ಅವರ ಕಣ್ಣು ಕುಮಾರ್ ಅನ್ನುವ ಒಬ್ಬ ಅಧಿಕಾರಿ ಮ್ಯಾಲೆ ಬಿತ್ತು. ಅವರು ‘ಗ್ರೇಟ್ ಆಫೀಸರ್’ ಅಂತ ಬೆಂಗಳೂರಿನ ಸುತ್ತಮುತ್ತ ಎಲ್ಲಾ ಜಗತ್ ಪ್ರಸಿದ್ಧರಾಗಿದ್ದರು. ಅವರನ್ನ ಭೇಟಿ ಆಗಲಿಕ್ಕೆ ಒಬ್ಬ ಕಿರಿಯ ಪತ್ರಕರ್ತನಿಗೆ ಸಂಪಾದಕರು ಹೇಳಿದರು. ಅವರ ಸಂದರ್ಶನ ಮಾಡಲಿಕ್ಕೆ ಹೋಗುವಾಗ ‘ನಾನೂ ಬರತೇನೆ’ ಅಂತ ಹೇಳಿ ಅವರ ಸಂಗತೆ ಹೋದರು. ‘ನಾವು ಹೋದರ ಸುಡುಗಾಡು ಕೆಎಸ್‌ಆರ್‌ಟಿಸಿ ಬಸ್ಸಿನಾಗ ಹೋಗಬೇಕು. ಸಂಪಾದಕರು ಬಂದರ ಕಾರಿನೊಳಗ ಹೋಗಲಿಕ್ಕೆ ಬರತದ’ ಅಂತ ಹೇಳಿ ವರದಿಗಾರರು ಒಪ್ಪಿಕೊಂಡರು.

ಆ ಅಧಿಕಾರಿ ವಿಧಾನಸೌಧ ಎಂಬೊ ಜೇನುಗೂಡಿನೊಳಗ ಯಾವುದೋ ಒಂದು ಕೋಣೆಯೊಳಗ ಇದ್ದರು. ತಮ್ಮ ವೃತ್ತಿಜೀವನದೊಳಗ ವಿಧಾನಸೌಧದ ಒಳಗೆ ಕಾಲು ಇಡಲಾರದೇ ಮುಖ್ಯ ಸಂಪಾದಕರಾಗಿದ್ದ ಆ ಹಿರಿಯರು ಕಿರಿಯನನ್ನು ನೋಡುತ್ತಲೇ ಇದ್ದರು. ಅವರು ಕೇಳುವ ಪ್ರಶ್ನೆಗಳನ್ನು ಗಮನಿಸಿ, ಅಧಿಕಾರಿ ಕೊಡುವ ಉತ್ತರ ಕೇಳಿಸಿಕೊಂಡು ಸುಮ್ಮನೇ ಕೂತಿದ್ದರು. “ನಮ್ಮ ಮನೆಗೆ ಬಂದಿದ್ದರೆ ಸಮೋಸ ಕೊಡುತ್ತಾ ಇದ್ದೇ. ಆದರೆ ನಮ್ಮ ಕಚೇರಿಯಲ್ಲಿ ಸಿಗೋದು ಬರೇ ಸರಕಾರಿ ಚಹಾ ಅಷ್ಟೇ” ಅಂತ ‘ಜೋಕ್’ ಕುಮಾರ್ ಅವರು ನುಡಿದರು. ಸಂಪಾದಕರಿಗೆ ಅದು ಇಡೀ ಇಂಡಿಯಾದ ಕೆರ ಹಿಡಿದು ಹೋದ ಸರಕಾರಿ ವ್ಯವಸ್ಥೆಯ ಬಗ್ಗೆ ಹೇಳಿದ ಕಾಮೆಂಟ್ ಅನ್ನಿಸಿತು. ಅವರು ಗಹಗಹಿಸಿ ನಕ್ಕರು. ಆದರ “ಬೆಣ್ಣಿ ತಿಂದ ಮ್ಯಾಲೆ ಪಾತ್ರೆಯ ತಳಕ್ಕೆ ಕಿಲುಬು” ಅಂತ ಮೂಗು ಮುರಿಯುವ ಇಂಥ ಅಧಿಕಾರಿಗಳನ್ನು ದಿನಾಲು ನೋಡಿದ್ದ ವರದಿಗಾರ ನಗಲಿಲ್ಲ. ಸಂದರ್ಶನ ಮುಗಿದು ಅವರಿಬ್ಬರೂ ವಾಪಸ್ ಹೋಗಲು ಎದ್ದಾಗ ಸಂಪಾದಕರು ಅಧಿಕಾರಿಯನ್ನು ಕೇಳಿದರು “ನೀವು ಕರ್ನಾಟಕಕ್ಕೆ ಬಂದು ಎಷ್ಟು ವರ್ಷ ಆಯಿತು? ಬೆಂಗಳೂರಿಗೆ ಯಾವಾಗ ಬಂದಿರಿ? ಐಐಟಿಯಲ್ಲಿ ನಿಮ್ಮ ಬ್ಯಾಚ್ ಯಾವುದು?, ಇನ್ನೂ ಎಷ್ಟು ವರ್ಷ ಸರ್ವಿಸ್ ಇದೆ? ಇತ್ಯಾದಿ. ಅವರು ಹಳ್ಳಿಯ ದಲ್ಲಾಳಿ ಅಂಗಡಿಯ ಶೆಟ್ಟಿಯ ರೀತಿ ಗೋಳಾಡಿಕೊಂಡು ಅತ್ತುಬಿಟ್ಟರು.

“ಅಯ್ಯೋ ಅದನ್ನು ಏನು ಕೇಳ್ತೀರಾ! ನಮಗೆ ಒಟ್ಟು 30 ವರ್ಷ ಸರ್ವೀಸ್ ಇರ್ತದೆ, ಅದರಲ್ಲಿ ಹತ್ತು ವರ್ಷ ಬೆಂಗಳೂರು ಬಿಟ್ಟು ಹೊರಗೆ ಹೋಗಬೇಕು. ನಾನು ಮೊದಲು ಪೋಸ್ಟಿಂಗ್ ಸವಣೂರಿನಲ್ಲಿ ಮಾಡಿದೆ. ದ ಹೋಲ್ ಆಫ್ ಸವನುರ ಈಸ್ ಲೈಕ್ ಒರಿಸ್ಸಾ. ವೆರೀ ಬ್ಯಾಡ್ ಸ್ಟೇಟ್ ಆಫ್ ಅಫೇರ್ಸ. ಅದೆಲ್ಲ ಮುಗಿಸಿ ಇಲ್ಲಿಗೆ ಬಂದಿದ್ದೇವೆ. ಆ ನಂತರ ರಿಟೈರ್ ಆಗುವವರೆಗೂ ಗಾರ್ಡನ್ ಸಿಟಿ ವಾಸ. ಇಲ್ಲಿ ನಮ್ಮ ಮಕ್ಕಳಿಗೆ ಫ್ಯೂಚರ್ ಇದೆ. ನಾವು ಐಐಟಿಯಲ್ಲಿ ಓದಿ, ಐಎಎಸ್ಸು ಪಾಸು ಮಾಡಿದ್ದು ಸಾರ್ಥಕ ಆಯಿತು” ಅಂತ ಅವರು ನಿಟ್ಟುಸಿರುಬಿಟ್ಟರು. ತಂದೆ ತಾಯಿಯನ್ನು ದೂರದ ವೃದ್ಧಾಶ್ರಮದಲ್ಲಿ ಬಿಟ್ಟು ಅಪಾರ್ಟ್ಮೆಂಟ್‌ಗೆ ವಾಪಸ್ ಬಂದು ನಿರಾಳವಾದ ಮಧ್ಯಮವರ್ಗದ ಯುವಕನಂತೆ ಖುಷಿಪಟ್ಟರು.

“ಅಯ್ಯಯ್ಯೋ ಇದು ಏನು ಕತೆ. ಈಗಾದ್ರೂ ಬಂದಿರಲ್ಲ, ಒಳ್ಳೇದು ಆಯಿತು ಬಿಡಿ. ನಾಳೆ ಗಾಲ್ಫ್ ಕ್ಲಬ್‌ನಲ್ಲಿ ಸಿಗೋಣ” ಅಂತ ಹೇಳಿ ಸಂಪಾದಕರು ಹೊರಟರು.

ಸಂಜೆ ಕಚೇರಿಯ ಮೂಲೆಯಲ್ಲಿ ಪೈಪು ಸೇದುವಾಗ ಸಂಪಾದಕರು ವರದಿಗಾರ ನನ್ನು ಕರೆದರು. “ನಾಳೆ ಎಡಿಟೋರಿಯಲ್ ಬರಿಬೇಕು. ಯಾವ ಶಿಲಾಯುಗದ ಸರಕಾರ ಇದು. ಐಐಟಿ ಓದಿದವರನ್ನು ಸಾವನೂರಿಗೆ ಎತ್ತು ಹಾಕಿದರೆ ಹೇಗೆ” ಅಂತ ಸ್ವಗತ ಎಂಬುವಂತ ಮಾತು ಆಡಿದರು. ಅವರ ಎದುರು ಅಪರೂಪಕ್ಕೆ ಮಾತಾಡುವ ವರದಿಗಾರ ಅಪೂರ್ವ ವಿಚಾರಸರಣಿಗೆ ತುಂಡು ಹಾಕಿದ. “ಅದು ಸಾವನೂರು ಅಲ್ಲ ಸರ್, ಅದು ಸವಣೂರು. ಹಿಂದೆ ಅದು ಒಂದು ಪ್ರದೇಶದ ರಾಜಧಾನಿ ಆಗಿತ್ತು. ಗೋಕಾಕ ಚಳವಳಿಗೆ ಕಾರಣವಾದ ವರದಿ ಸಿದ್ಧ ಮಾಡಿದ ವಿ.ಕೆ ಗೋಕಾಕ ಅವರು, ನಮ್ಮ ಪತ್ರಿಕೆಯ ಮಾಜಿ ಸಂಪಾದಕ ದಿಲೀಪ್ ಪಡಗಾಂವ್‌ಕರ್ ಅವರು ಸವಣೂರಿನವರೆ” ಅಂತ ಹೇಳಿದ. “ಅಯ್ಯೋ ಹೌದೇ, ಗೋಕಾಕ ಚಳವಳಿ ಅಂದರೆ ನಾನು ರಮೇಶ್ ಜಾರಕಿಹೊಳಿ ಅವರು ಶುರು ಮಾಡಿದ್ದ ರಾಜಕೀಯ ಬಂಡಾಯ ಅಂತ ನಾನು ತಿಳಿದುಕೊಂಡಿದ್ದೆ” ಅಂತ ಗೋಳಾಡಿದರು. “ಅಷ್ಟಕ್ಕೂ ಸವಣೂರು ಒರಿಸ್ಸಾದಂತೆ ಹಿಂದುಳಿದ ಪ್ರದೇಶ ಅಂತ ಹೇಳಿದ ಆ ಅಧಿಕಾರಿ ಮೂಲ ಒರಿಸ್ಸಾದವರು” ಅಂತ ಅಷ್ಟೇ ಹೇಳಿ ವರದಿಗಾರ ಅಲ್ಲಿಂದ ಹೋದ.

PC : Public Tv

ಇಂದಿಗೂ ಸರಕಾರಕ್ಕೆ ಸಲಹೆ ನೀಡುವ ಕಾರ್ಯನಿರ್ವಾಹಕ ಸಂಪಾದಕರು, ಅವರ ಕೆಳಗಿನ ಅಸಹಾಯಕ ಸಂಪಾದಕರು ಇತ್ಯಾದಿ ನೀತಿ ನಿರೂಪಕರಿಗೆ, ಜನಾಭಿಪ್ರಾಯ ಜನಕರಿಗೆ ಇಂತಹ ವಿಷಯಗಳು ಗಲಿಬಿಲಿ ಹುಟ್ಟಿಸತಾವ. ಅವರಿಗೆ ಒಬ್ಬ ಐಎಎಸ್ಸು ಅಧಿಕಾರಿ ತನ್ನ 35 ವರ್ಷ ಸೇವಾ ಕಾಲದಲ್ಲಿ 10 ವರ್ಷ ಬೆಂಗಳೂರಿನಿಂದ ಹೊರಗೆ ಕಳೆದರೆ ಅದು ವ್ಯರ್ಥ ಕಾಲಹರಣ ಅನ್ನಿಸುತ್ತದ.

ಹಿಂದೊಮ್ಮೆ ರಾಜ್ಯ ಸರಕಾರ ರಾಜ್ಯದ ಕೆಲವು ಕಡೆ ಹೊಸ ಪೊಲೀಸ್ ವಲಯಗಳನ್ನು ಮಾಡಿ ಐಜಿಪಿಗಳನ್ನು ನೇಮಕ ಮಾಡಿತು. ಈಗ ನಿವೃತ್ತರಾಗಿರುವ, ಆಗ ಕುಡಿಮೀಸೆಯ ಯುವಕರಾಗಿದ್ದ ರಾಜಸ್ತಾನ ಮೂಲದ ಐಪಿಎಸ್ಸು ಅಧಿಕಾರಿಯೊಬ್ಬರಿಗೆ ದಾವಣಗೆರೆ ವಲಯಕ್ಕೆ ನೇಮಕ ಆತು. ಅವರು ‘ನಾ ಒಲ್ಲೆ’ ಅಂತ ಹಠ ಹಿಡಿದರು. ಡಿಜಿಪಿ ಸಾಹೇಬರ ಹತ್ತಿರ ಹೋಗಿ ಗೋಳಾಡಿದರು. ತಾನು ಎಸ್ಪಿ ಆಗಿದ್ದಾಗ ಇಸ್ಪೀಟು ಆಡಿ ಸಿಕ್ಕಿದ್ದ, ಮುಂದೆ ಎಂಎಲ್‌ಎ ಆಗಿ ಕುಕ್ಕರಿಸಿದ್ದ ಪುಢಾರಿಯೊಬ್ಬರ ಹತ್ತಿರ ಹೋಗಿ ಆ ಆದೇಶ ರದ್ದು ಮಾಡಿಸಿದರು. ತನ್ನ ಬ್ಯಾಚ್‌ಮೇಟ್ ಅಧಿಕಾರಿಯೊಬ್ಬ “ಯಾಕೋ ದಾವಣಗೆರೆಗೆ ಹೋಗಲಿಲ್ಲ? ಹೊಸ ರೇಂಜ್, ಒಳ್ಳೆ ಕೆಲಸ ಮಾಡಬಹುದಿತ್ತು. ಅಂತ ಕಡೆ ಒಳ್ಳೆ ಅಧಿಕಾರಿಗಳು ಬೇಕು” ಅಂತ ಕೇಳಿದರು. ಇವರು ಸಟಕ್ಕನೆ “ಯಾಕೆ ಬೆಂಗಳೂರಿಗೆ ಒಳ್ಳೆ ಅಧಿಕಾರಿಗಳು ಬೇಡವಾ? ನೀವ್ ಮಾತ್ರ ಇಲ್ಲಿ ಎಂಜಾಯ್ ಮಾಡಬೇಕಾ” ಅಂತ ಮರುಉತ್ತರ ಕೊಟ್ಟರು.

ಮುಂದೆ ಸದರಿ ಅಧಿಕಾರಿ ಪೊಲೀಸು ಇಲಾಖೆಯಲ್ಲಿ ಜಾಗ ಸಿಗದೇ ನೀರಾವರಿ ಇಲಾಖೆಯಲ್ಲಿ ಒಂದು ಕುರ್ಚಿ-ಟೇಬಲ್ ಹಾಕಿಕೊಂಡು ಕೂತರು. ರಾಜ್ಯಮಟ್ಟದ ಪತ್ರಿಕೆಗೆ ಕೊಟ್ಟ ಸಂದರ್ಶನದಲ್ಲಿ ನಾನು ರಾಜಸ್ತಾನದ ಕುಗ್ರಾಮದಲ್ಲಿ ಬಡತನದಲ್ಲಿ ಹುಟ್ಟಿದೆ. ನಾನು ಕಾಲೇಜು ಓದುವಾಗಲೂ ದಿನಗೂಲಿ ಮಾಡುತ್ತಾ ಇದ್ದೇ. ಸಿಗುತ್ತಿದ್ದ ಒಂದು ರೂಪಾಯಿ ಕೂಲಿಯಲ್ಲಿ ನನ್ನ ಮನೆ ನಡೆಸಿ, ಕಾಲೇಜು ಮುಗಿಸಿದೆ ಅಂತ ಅಭಿಮಾನದಿಂದ ಹೇಳಿಕೊಂಡಿದ್ದರು.

ರಾಜಧಾನಿ ಎಂಬ ಮಾಯಾಮೋಹಿನಿಯ ಗಾರುಡಿ ಸುಲಭಕ್ಕೆ ಮುಗಿಯುವಂತೆ ಕಾಣುವುದಿಲ್ಲ.


ಇದನ್ನೂ ಓದಿ: ಹೋರಾಟಗಾರ ಅಖಿಲ್ ಗೊಗೋಯ್‌ ವಿರುದ್ಧದ ಎಲ್ಲಾ ಪ್ರಕರಣಗಳನ್ನು ಕೈಬಿಟ್ಟ ಎನ್‌ಐಎ ನ್ಯಾಯಾಲಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...