Homeಕರ್ನಾಟಕ"ಸಿದ್ದರಾಮಯ್ಯ ಯಾರನ್ನೂ ಬಿಜೆಪಿಗೆ ಕಳಿಸಿಲ್ಲ, ಅವರ ಮಾತುಗಳು ಪ್ರಚೋದನೆ ಮಾಡಿರಬಹುದು" : ಬಿ.ಸಿ ಪಾಟೀಲ್ ಸಂದರ್ಶನ

“ಸಿದ್ದರಾಮಯ್ಯ ಯಾರನ್ನೂ ಬಿಜೆಪಿಗೆ ಕಳಿಸಿಲ್ಲ, ಅವರ ಮಾತುಗಳು ಪ್ರಚೋದನೆ ಮಾಡಿರಬಹುದು” : ಬಿ.ಸಿ ಪಾಟೀಲ್ ಸಂದರ್ಶನ

- Advertisement -
- Advertisement -

ಬಿ.ಸಿ.ಪಾಟೀಲರ ಸಂದರ್ಶನಕ್ಕೆ ನಾವು ಹೋದಾಗ ತಮ್ಮ ಕ್ಷೇತ್ರದ ಕಡುಬಡವರಿಗೆ ಮನೆ ಮಂಜೂರಾತಿ ಮಾಡಿಸಿಕೊಳ್ಳಲು ವಸತಿಸಚಿವರಿಗೆ ಫೋನ್ ಮಾಡಲು ಯತ್ನಿಸುತ್ತಿದ್ದರು. ಅವರ ಮಗಳು ಸೃಷ್ಟಿ ಪಾಟೀಲ್ ಅಪ್ಪನಿಗೆ ಕೊಡುಗೆಯಿತ್ತಿದ್ದ ಫೋಟೋ ಕೊಲ್ಯಾಜನ್ನು ಗೋಡೆಗೆ ತೂಗು ಹಾಕಲಾಗಿತ್ತು. ಅದರಲ್ಲಿ ಪಾಟೀಲರು ಟಿಪ್ಪು ಸುಲ್ತಾನ್ ಆಗಿ ನಟಿಸಿದ್ದ ನಾಟಕದ ಫೋಟೋಗಳೂ ಇದ್ದವು. ಇವರು ಬಿಜೆಪಿಯ ಸಿದ್ಧಾಂತಕ್ಕೆ ಹೇಗೆ ಹೊಂದಿಕೊಳ್ಳಬಹುದು ಎಂಬ ಪ್ರಶ್ನೆ ನಮ್ಮ ಮನಸ್ಸಿನಲ್ಲಿ ಏಳುತ್ತಿರುವಾಗ ಸಂದರ್ಶನ ಶುರುವಾಯಿತು. ಆನ್ ರೆಕಾರ್ಡ್ ಮಾತಾಡಲು ಬಿ.ಸಿ.ಪಾಟೀಲರಿಗೆ ಹಲವು ತೊಡಕುಗಳಿದ್ದವು. ಪಕ್ಷಾಂತರ ನಿಷೇಧ ಕಾಯ್ದೆಯನ್ವಯ ಅನರ್ಹರಾಗಿ ಕೇಸು ಎದುರಿಸುತ್ತಿರುವಾಗ ತಾವಿನ್ನೂ ಬಿಜೆಪಿ ಸೇರುವ ತೀರ್ಮಾನ ಮಾಡಿಲ್ಲ ಎಂದು ಹೇಳುವುದು ಅವರಿಗೆ ಅನಿವಾರ್ಯ. ಹಾಗೆಯೇ ಬಿಜೆಪಿಗೆ ಸೇರಿದ ಮೇಲೂ ಏನಾಗುತ್ತದೋ ಎಂಬ ಬಗ್ಗೆ ಅವರಿಗೆ ಖಾತರಿಯಿರಲಿಲ್ಲ. ಹಾಗಾಗಿ ಆನ್ ರೆಕಾರ್ಡ್ ಬಹಳ ಟೆಕ್ನಿಕಲ್ ಆಗಿ ಮಾತಾಡಿದರು. ಸ್ಪೀಕರ್ ಆದೇಶದನ್ವಯ ಅನರ್ಹರಾಗಿರುವ ಶಾಸಕರು ಅತಂತ್ರರಾಗಿದ್ದರೂ, ತಮ್ಮ ಪ್ರಯತ್ನ ಮುಂದುವರೆಸುತ್ತಿರುವುದು ಮತ್ತು ಸುಪ್ರೀಂಕೋರ್ಟ್‍ನ ಆದೇಶದ ಕುರಿತು ಚಿಂತಿತರಾಗಿರುವುದು ಎದ್ದು ಕಂಡಿತು.

 

ಪತ್ರಿಕೆ: ಹಾವೇರಿ ಜಿಲ್ಲೆಯಲ್ಲಿ ಒಬ್ಬರೂ ಕಾಂಗ್ರೆಸ್ ಶಾಸಕರಿರದಾಗ ನಾನು ಗೆದ್ದಿದ್ದೀನಿ. ಮೂರನೇ ಬಾರಿಗೆ ಶಾಸಕ. ಹಾಗಾಗಿ ಮಂತ್ರಿಯಾಗಲು ನಾನು ಸಹಜ ಆಯ್ಕೆ ಎಂದು ಭಾವಿಸಿದ್ದಿರಿ. ಆದರೆ ಕಾಂಗ್ರೆಸ್ ಪಕ್ಷ ಯಾಕೆ ಆ ರೀತಿ ಭಾವಿಸಲಿಲ್ಲ?

ಬಿ.ಸಿ.ಪಾಟೀಲ್: ನಾನು ಮೂರು ಬಾರಿ ಹಿರೇಕೇರೂರು ಕ್ಷೇತ್ರದಿಂದ ಶಾಸಕನಾಗಿ ಆಯ್ಕೆಯಾದೆ. ಒಂದು ಬಾರಿ ಜೆಡಿಎಸ್ ಮತ್ತು ಎರಡು ಬಾರಿ ಕಾಂಗ್ರೆಸ್‍ನಿಂದ. ಈ ಬಾರಿ ಹಾವೇರಿ ಜಿಲ್ಲೆಯಲ್ಲಿಯೇ ಏಕೈಕ ಕಾಂಗ್ರೆಸ್ ಶಾಸಕನಾಗಿ ಗೆದ್ದೆ. ಹಿರೇಕೆರೂರು ತಾಲ್ಲೂಕಿಗೆ ನಲವತ್ತು ವರ್ಷಗಳಿಂದ ಮಂತ್ರಿ ಸ್ಥಾನ ಸಿಕ್ಕಿಲ್ಲ. ಜಾತಿವಾರು ನೋಡೋದಾದರೆ ಗದಗ, ಹಾವೇರಿ, ಧಾರವಾಡ ಮೂರು ಜಿಲ್ಲೆಗಳಲ್ಲಿ ನಾನೊಬ್ಬನೆ ಲಿಂಗಾಯತ ಶಾಸಕನಾಗಿದ್ದೆ. ಇವತ್ತು ಜಾತಿಯ ಆಧಾರದ ಮೇಲೆಯೇ ಬಹಳಷ್ಟು ತೀರ್ಮಾನ ಆಗ್ತಿದೆ. ಸಚಿವನಾಗಲು ನನಗೆ ಇಷ್ಟೆಲ್ಲಾ ಅರ್ಹತೆಗಳು ಇದ್ದಾಗಲೂ ಕೊಟ್ಟಿಲ್ಲ. ಮೂರನೇ ಬಾರಿ ಸಂಪುಟ ವಿಸ್ತರಣೆಯಲ್ಲಿ ಅವರೇ ಕರೆದು ಕೊಡುತ್ತೇವೆ ಎಂದು ಹೇಳಿದರು. ಆದರೆ ಕೊಡಲಿಲ್ಲ. ಬಹುಶಃ ಕಾಂಗ್ರೆಸ್ ಪಕ್ಷದಲ್ಲಿ ಧ್ವನಿ ಇದ್ದವರು ಮತ್ತು ಸಂಘಟನೆ ಮಾಡುವಂತಹ ಶಕ್ತಿ ಇದ್ದವರಿಗೆ ಬೆಲೆಯಿಲ್ಲ ಅನ್ನಿಸುತ್ತೆ.

ಇವರು ಎಲ್ಲಿ ಬೆಳೆದು ಬಿಡುತ್ತಾರೋ ಅನ್ನೋ ಭಾವನೆ ಪಕ್ಷದ ನಾಯಕರಲ್ಲಿ ಇದ್ದದ್ದರಿಂದ ಹೊರಗಿಟ್ಟರು. ಉಳಿದವರಿಗೆ ನಿಗಮ ಮಂಡಳಿ, ಬೋರ್ಡ್ ಎಲ್ಲ ಕೊಟ್ಟರು. ಕಳೆದ ಸಮ್ಮಿಶ್ರ ಸರ್ಕಾರದಲ್ಲಿ ಉತ್ತರ ಕರ್ನಾಟಕವನ್ನ ಸಂಪೂರ್ಣ ನಿರ್ಲಕ್ಷ್ಯ ಮಾಡಿದರು. ಸಮಗ್ರ ಕರ್ನಾಟಕ ಅಭಿವೃದ್ಧಿಯ ದೃಷ್ಟಿಯಿಂದ ಈ ಸರ್ಕಾರವನ್ನ ಅನಿವಾರ್ಯವಾಗಿ ತೆಗಿಬೇಕು ಅನಿಸಿತು, ತೆಗೆದೆವು.

ಪತ್ರಿಕೆ: ಅಭಿವೃದ್ಧಿ ಕಾರಣಕ್ಕೆ, ಉತ್ತರ ಕರ್ನಾಟಕದ ನಿರ್ಲಕ್ಷ್ಯದ ಕಾರಣಕ್ಕೆ ರಾಜೀನಾಮೆ ಕೊಟ್ಟಿದ್ದೇನೆ ಅಂತ ಹೇಳ್ತಿದೀರಿ. ಆದರೆ ಈಗ ಕೇಂದ್ರ ಸರ್ಕಾರದಿಂದ ಪ್ರವಾಹ ಪರಿಹಾರಕ್ಕೆ ಒಂದು ರೂ. ಸಹ ಬಿಡುಗಡೆಯಾಗಿಲ್ಲ. ಈ ಪಕ್ಷದಿಂದ ನೀವೇನು ನಿರೀಕ್ಷೆ ಮಾಡುತ್ತೀರಿ?

ಬಿ.ಸಿ.ಪಾಟೀಲ್: ನನಗೆ ಗೊತ್ತಿರುವ ಹಾಗೆ ಇನ್ನೆರಡು ದಿನಗಳಲ್ಲಿ ನೆರೆ ಪರಿಹಾರ ಸಿಗುತ್ತದೆ. ಇಲ್ಲಿಂದ 25 ಸಂಸದರನ್ನು ಬಿಜೆಪಿಯಿಂದ ಕಳಿಸಿರುವ ರಾಜ್ಯಕ್ಕೆ ಬೇಗನೇ ಪರಿಹಾರ ಘೋಷಿಸಬೇಕಿತ್ತು.

ಪತ್ರಿಕೆ: ನೀವು ಅಂದುಕೊಂಡ ಹಾಗೆ ಆಗಿದ್ದರೆ ಇಷ್ಟು ಹೊತ್ತಿಗೆ ಸಚಿವರಾಗಿ, ಚುನಾವಣಾ ಪ್ರಚಾರದಲ್ಲಿರುತ್ತಿದ್ದಿರಿ. ಆದರೆ ಅಂಥದ್ದೇನೂ ಆಗಿಲ್ಲ. ಸಂಪೂರ್ಣ ಅತಂತ್ರರಾಗಿದ್ದೀರಿ. ಇದರ ಬಗ್ಗೆ ಪಶ್ಚಾತ್ತಾಪ ಅನಿಸುತ್ತಿದೆಯಾ?

ಇವೆಲ್ಲ ಎದುರಿಸಬೇಕಾಗುತ್ತೆ. ಜೀವನದಲ್ಲಿ ನಾವು ಅಂದುಕೊಂಡ ಹಾಗೆ ಎಲ್ಲವೂ ಆಗೋದಿಲ್ಲ. ನಾವು ರಾಜೀನಾಮೆ ಕೊಟ್ಟ ನಂತರ ದುರುದ್ದೇಶದಿಂದ ಇವರು ನಮ್ಮನ್ನು ಅನರ್ಹರನ್ನಾಗಿಸಿದರು. ಸರ್ಕಾರ ಇದ್ದಾಗ ಒಳ್ಳೆಯ ಆಡಳಿತ ಕೊಡಲಿಲ್ಲ, ಸಮನ್ವಯ ಸಮಿತಿಯ ಅಧ್ಯಕ್ಷರಾಗಿದ್ದ ಸಿದ್ಧರಾಮಯ್ಯನವರು ಹೀಗೆ ಮಾಡಿ ಅಂತ ನಿರ್ದೇಶನ ಮಾಡಲಿಲ್ಲ. 80 ಜನ ಶಾಸಕರಿದ್ದ ಕಾಂಗ್ರೆಸ್ಸಿಗರು 37 ಜನ ಜೆಡಿಎಸ್‍ನವರಿಗೆ ಅಧಿಕಾರ ಕೊಟ್ಟಾಗಲೂ ಸಹ ನಿರ್ಲಕ್ಷ್ಯ ಮಾಡಲಾಯಿತು. ಸಮ್ಮಿಶ್ರ ಸರ್ಕಾರದಲ್ಲಿ ಹೊಂದಾಣಿಕೆ ಇಲ್ಲದೆ ಸರಿಯಾದ ಆಡಳಿತ ಕೊಟ್ಟಿಲ್ಲ. ನನಗೆ ಯಾವ ಪಶ್ಚಾತ್ತಾಪವು ಇಲ್ಲ. ಕರ್ನಾಟಕದ ಹಿತದೃಷ್ಟಿಯಿಂದ ನಮ್ಮ ಸ್ಥಾನವನ್ನ ನಾವು ತ್ಯಾಗ ಮಾಡಿಕೊಂಡಿದ್ದೇವೆ. ಇಂದು ಒಬ್ಬ ಗ್ರಾಮ ಪಂಚಾಯಿತಿ ಸದಸ್ಯ ಕೂಡ ರಾಜೀನಾಮೆ ಕೊಡಲು ಹಿಂದೆ ಮುಂದೆ ನೋಡುತ್ತಾರೆ. ಆದರೆ ನಾವು ದೂರದೃಷ್ಟಿಯಿಂದ ರಾಜಿನಾಮೆ ನೀಡಿದ್ದೇವೆ.
ಆದರೆ ದುರುದ್ದೇಶದಿಂದ ನಮ್ಮನ್ನು ಅನರ್ಹಗೊಳಿಸಿದ್ದಾರೆ. ಸುಪ್ರೀಂಕೋರ್ಟ್ ಆದೇಶ ಸ್ಪಷ್ಟವಾಗಿತ್ತು. ಮೊದಲು ಅವರ ರಾಜೀನಾಮೆ ಬಗ್ಗೆ ತೀರ್ಮಾನ ತಗೋಬೇಕು ಮತ್ತು ಶಾಸಕರನ್ನ ವಿಧಾನಸಭೆಯಲ್ಲಿ ಪಾಲ್ಗೊಳ್ಳಿ ಅಂತ ಒತ್ತಾಯ ಮಾಡೋಹಾಗಿಲ್ಲ ಅಂತ ತೀರ್ಪಿತ್ತು. ಇಷ್ಟೆಲ್ಲ ಇದ್ದರೂ ಸಹ ಅವನ್ನೆಲ್ಲ ಲೆಕ್ಕಕ್ಕೆ ತೆಗೆದುಕೊಳ್ಳದೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಸೇರಿ ಸ್ಪೀಕರ್ ಮೇಲೆ ಒತ್ತಡ ಹಾಕಿ ಅನರ್ಹಗೊಳಿಸಿದರು. ಆದರೆ ಸುಪ್ರೀಂಕೋರ್ಟ್‍ಲ್ಲಿ ನಮಗೆ ನ್ಯಾಯ ಸಿಗುತ್ತೆ ಅನ್ನೋ ಭರವಸೆ ಖಂಡಿತ ಇದೆ.

 

ಪತ್ರಿಕೆ: ಸುಪ್ರೀಂಕೋರ್ಟ್ ತೀರ್ಪು ನಿಮ್ಮ ಪರವಾಗಿ ಬಂದರೂ ಸಹ ಬಿಜೆಪಿಯ ಯು.ಬಿ.ಬಣಕಾರ್ ಅವರು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆ ಇದ್ದಂತಿದೆ. ಅಂದರೆ ನಿಮಗೆ ಸುಲಭದ ಗೆಲುವು ಇರಲ್ಲ…

ನೋಡೋಣ. ಅದನ್ನ ತೀರ್ಮಾನ ಮಾಡಲಿಕ್ಕೆ ದೊಡ್ಡವರಿದ್ದಾರೆ. ನಾನು ಈಗಾಗಲೇ ಚುನಾವಣಾ ಸಂಘಟನೆ ಶುರು ಮಾಡಿಕೊಂಡಿದ್ದೇನೆ.

ಪತ್ರಿಕೆ: ಪೊಲೀಸ್ ಅಧಿಕಾರಿಯಾಗಿದ್ದಿರಿ. ರಂಗನಟರಾಗಿದ್ದು, ಸಿನೆಮಾಗೆ ಬಂದಿರಿ. ನೀವು ಒಂದು ಕಾಲಕ್ಕೆ ಇಷ್ಟಪಟ್ಟು ಟಿಪ್ಪು ಸುಲ್ತಾನ್ ನಾಟಕವನ್ನು ಮಾಡಿದವರು. ಆದರೆ ನೀವು ಹೋಗುತ್ತಿರುವ ಬಿಜೆಪಿ ತೀರ ಭಿನ್ನವಾದ ಸಿದ್ಧಾಂತದ ಪಕ್ಷ. ಟಿಪ್ಪು ಸುಲ್ತಾನ್, ಮುಸ್ಲಿಮರನ್ನು ದ್ವೇಷಿಸುವ ಪಕ್ಷ. ಸೆಕ್ಯುಲರ್ ಪಕ್ಷದಿಂದ ನೀವು ಮಾಡುತ್ತಿರುವ ಈ ಶಿಪ್ಟ್ ಬಗ್ಗೆ ಏನು ಅನಿಸುತ್ತೆ?

ಬಿ.ಸಿ.ಪಾಟೀಲ್: ಪಕ್ಷ ಬದಲಾವಣೆ ಆದರೂ ಮನಸ್ಸು ಬದಲಾವಣೆ ಆಗಲ್ಲ. ನಮಗೂ ಇಷ್ಟು ವಯಸ್ಸು ಆಗಿದೆ. ಜಾತಿ, ಧರ್ಮದ ಮೇಲೆ ರಾಜಕೀಯ ಮಾಡುವಂತಹ ಪರಿಸ್ಥಿತಿ ಇಲ್ಲ. ನಾನು ಪೊಲೀಸ್ ಅಧಿಕಾರಿಯಾಗಿದ್ದವನು. ಬಿ.ಸಿ.ಪಾಟೀಲ್ ಯಾವತ್ತು ಬದಲಾಗೋದಿಲ್ಲ. ಮೋದಿಯವರನ್ನ ಜನ ಎರಡು ಬಾರಿ ಗೆಲ್ಲಿಸಿದ್ದು ಅಭಿವೃದ್ಧಿ ನೋಡಿ. ನಾನು ಸಹ ಮೂರು ಬಾರಿ ಶಾಸಕನಾಗಿದ್ದೇನೆ. ರೈತರು, ಬಡವರು, ಹಿಂದುಳಿದವರಿಗೆ ಬೇಕಾದ ಕೆಲಸವನ್ನು ಮಾಡಿಕೊಡುತ್ತಿದ್ದೇವೆ.

ಪತ್ರಿಕೆ: ಕಾಂಗ್ರೆಸ್ ಶಾಸಕರು ರಾಜಿನಾಮೆ ಹಿಂದೆ ಸಿದ್ದರಾಮಯ್ಯನವರೇ ಇದ್ದರು ಎನ್ನುವ ಆರೋಪ ಇದೆ. ಹಲವರು ಸಿದ್ದರಾಮಯ್ಯನವರಿಗೆ ಆಪ್ತರು. ನೀವು ಅವರೆಲ್ಲರ ಜೊತೆಗೆ ಇದ್ದವರು. ಇದು ಎಷ್ಟು ನಿಜ?

ಬಿ.ಸಿ.ಪಾಟೀಲ್: ಅವರೇ ಕಳಿಸಿದ್ದು ಅನ್ನೋದು ನಿಜ ಅಲ್ಲ. ಆದರೆ ಅವರ ಮಾತುಕತೆಗಳನ್ನು ನೀವೇ ನೋಡಿದೀರಲ್ಲ. ಲೋಕಸಭೆ ನಂತರ ಈ ಸರ್ಕಾರ ಇರಲ್ಲ ಅನ್ನುವಂತಹದ್ದು. ಇವೆಲ್ಲ ಪರೋಕ್ಷವಾಗಿ ಪ್ರಚೋದನೆಯಾಯಿತು. ಆದರೆ ಅವರೇ ನೇರವಾಗಿ ಕಳುಹಿಸಿಲ್ಲ ಮತ್ತು ಪ್ರತಿಯೊಬ್ಬ ಶಾಸಕನಿಗೂ ತನ್ನದೇ ಆದ ಕಾರಣಗಳಿವೆ. ತಮ್ಮ ಕ್ಷೇತ್ರದ ಅಭಿವೃದ್ಧಿ ಆಗಿಲ್ಲ ಅನ್ನೋದು ಒಂದು ಕಾರಣ.

ಪತ್ರಿಕೆ: ಒಂದು ವೇಳೆ ಸುಪ್ರೀಂಕೋರ್ಟ್ ನಿಮ್ಮ ಅನರ್ಹತೆಯನ್ನ ಎತ್ತಿ ಹಿಡಿದು ನೀವು ಚುನಾವಣೆಗೆ ಸ್ಪರ್ಧಿಸೋ ಹಾಗಿಲ್ಲ ಅಂದರೆ ನೀವು ಯಾರಿಗೆ ಟಿಕೆಟ್ ಕೇಳುತ್ತೀರಿ?

ಬಿ.ಸಿ.ಪಾಟೀಲ್: ಈಗಾಗಲೇ ಸುಪ್ರೀಂಕೋರ್ಟ್‍ಗೆ ಚುನಾವಣಾ ಆಯೋಗದ ವಕೀಲರು ಮನವಿ ಸಲ್ಲಿಸಿದ್ದಾರೆ. ಅನರ್ಹರಾದರೂ ಸಹ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನ ತಡೆಯಲು ಆಗುವುದಿಲ್ಲ ಅಂತ. ಹಾಗಾಗಿ ಅಂತಹ ಪರಿಸ್ಥಿತಿ ಉಂಟಾಗುವುದಿಲ್ಲ.

ಪತ್ರಿಕೆ: ಯಡಿಯೂರಪ್ಪನವರ ಮೇಲೆ ವಿಶ್ವಾಸ ಇಟ್ಟು ನೀವು ಹೋಗಿದ್ದೀರಿ. ಆದರೆ ಬಿಜೆಪಿಯಲ್ಲಿ ಅವರ ಮಾತೇ ನಡೆಯುತ್ತಿಲ್ಲ. ಸಂತೋಷ್ ಅವರೇ ಹೈಕಮಾಂಡ್ ರೀತಿ ನಡೆದುಕೊಳ್ಳುತ್ತಿದ್ದಾರೆ. ಅವರನ್ನ ನಂಬಿ ಹೋಗಿರೋರ ಪರಿಸ್ಥಿತೀನೂ ಚೆನ್ನಾಗಿರೊಲ್ಲ ಅಂತ ಕಾಣ್ತಾ ಇದೆ. ಇದರ ಬಗ್ಗೆ ಏನು ಹೇಳತೀರಿ?

ಬಿ.ಸಿ.ಪಾಟೀಲ್: ಇಟ್ ಈಸ್ ಟೂ ಅರ್ಲಿ ಸೇ ಎನಿಥಿಂಗ್

ಪತ್ರಿಕೆ: ವೈದಿಕಶಾಹಿ ಧರ್ಮದ ವಿರುದ್ಧ ಲಿಂಗಾಯತ ಧರ್ಮದ ಚಳವಳಿಯ ಹೋರಾಟ ನಡೆಯಿತಲ್ಲ ಇದರ ಬಗ್ಗೆ ನಿಮಗೆ ಏನನ್ನಿಸುತ್ತೆ?

ಬಿ.ಸಿ.ಪಾಟೀಲ್: ಇದು ಬಹಳ ಸೂಕ್ಷ್ಮವಾದ ವಿಚಾರ. ಧರ್ಮದಲ್ಲಿ ಕೈಹಾಕೋದು ಧರ್ಮದ ಭಾವನೆಗಳನ್ನ ಕೆಣಕೋದು ಬಹಳ ಸೂಕ್ಷ್ಮವಾದ ವಿಚಾರ. ಅದನ್ನ ಸಾರ್ವಜನಿಕವಾಗಿ ಚರ್ಚೆ ಮಾಡಿಕೊಳ್ಳೋದಕ್ಕಿಂತ ಒಳಗಡೆ ಕುಳಿತುಕೊಂಡು ಚರ್ಚೆ ಮಾಡೋದು ಬಹಳ ಮುಖ್ಯ.

ಪತ್ರಿಕೆ: 2018ರಲ್ಲಿ ಯಡಿಯೂರಪ್ಪನವರು ನಿಮ್ಮ ಹತ್ತಿರ ಪಕ್ಷಾಂತರ ಮಾಡಲು ಮಾತನಾಡಿದಾಗ ನೀವು ಆ ಆಡಿಯೊವನ್ನ ಬಹಿರಂಗಪಡಿಸಿದಿರಿ. ಈಗ ಅದೇ ಯಡಿಯೂರಪ್ಪನವರ ಜೊತೆಗೆ ಇದ್ದೀರಿ…..

ಬಿ.ಸಿ.ಪಾಟೀಲ್: ಆವತ್ತಿನ ಪರಿಸ್ಥಿತಿ ಆಗಿತ್ತು. ಆಗ ನನಗೆ ಇದೆಲ್ಲ ತಪ್ಪು ಎನಿಸಿತ್ತು. ಆದರೆ ಒಂದು ವರ್ಷ ಎರಡು ತಿಂಗಳ ಆಡಳಿತ ನೋಡಿದಾಗ ಅನಿವಾರ್ಯತೆ ಬಂತು. ರಾಜಕೀಯದಲ್ಲಿ ಯಾರು ಶತ್ರುಗಳಲ್ಲ ಶಾಶ್ವತವಾಗಿ. ಹಾಗಾಗಿ ಅವರು ಸಿಟ್ಟಾಗಿಲ್ಲ. ನಮಗೆ ಬೇಕಾಗಿರೋದು ಅಭಿವೃದ್ಧಿ. ನಾವು ರಾಜೀನಾಮೆ ಕೊಟ್ಟಿರೋದಕ್ಕೆ ಬಿಜೆಪಿ ಸರ್ಕಾರ ಬಂದಿದೆ. ಅವರು ಸರ್ಕಾರ ಬರಲಿ ಅಂತ ಏನು ನಾವು ರಾಜೀನಾಮೆ ಕೊಟ್ಟಿಲ್ಲ. ರಾಜೀನಾಮೆ ಕೊಟ್ಟನಂತರ ಅವರ ಸರ್ಕಾರ ಬಂದಿರೋದಕ್ಕೆ ಅವರು ಕೃತಜ್ಞರಾಗಿದ್ದಾರೆ. ಆಮೇಲೆ ನಮ್ಮ ಕ್ಷೇತ್ರಕ್ಕೆ ಬೇಕಾದ ಕೆಲಸ ಮಾಡಿಕೊಡುತಿದ್ದಾರೆ; ನಮಗೆ ಬೇಕಾದದ್ದು ಅದೇ. ಮುಂದಿನ ದಿನಗಳಲ್ಲಿ ಸುಪ್ರೀಂಕೋರ್ಟ್ ತೀರ್ಪು ಬಂದಮೇಲೆ ಎಲ್ಲರೂ ಕುಳಿತು ಯಾವ ಪಕ್ಷಕ್ಕೆ ಹೋಗದು ಅಂತ ಎಲ್ಲಾ ಮಾತಾಡಿ ತೀರ್ಮಾನ ಮಾಡತೀವಿ.

ಪತ್ರಿಕೆ: ಪ್ರಜಾಪ್ರಭುತ್ವದಲ್ಲಿ ಸಂಸದೀಯ ಪಕ್ಷಗಳಿಗೆ ಒಂದು ಮಹತ್ವ ಇದೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ನೀವು ಗೆದ್ದು, ಐದು ವರ್ಷ ಕಾಯದೆ ಹೀಗೆ ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಶಿಫ್ಟ್ ಆದರೆ ನೀವು ಜನರ ವಿಶ್ವಾಸಕ್ಕೆ ದ್ರೋಹ ಮಾಡಿದ ಹಾಗೆ ಆಗಲಿಲ್ಲವಾ?

ಬಿ.ಸಿ.ಪಾಟೀಲ್: ನಾವು ರಾಜಿನಾಮೆ ಕೊಟ್ಟಿದ್ದೇವೆ. ಶಿಫ್ಟ್ ಆಗಿಲ್ಲ. ಮತ್ತೆ ಜನರ ಹತ್ತಿರವೇ ಹೋಗಿ ಆದೇಶ ಕೇಳುತ್ತೇವೆ. ನನಗಿಂತ ನಮ್ಮ ತಾಲ್ಲೂಕಿನ ಜನತೆ ನನಗೆ ಆದ ಮೋಸಕ್ಕೆ ನಾನಿದನ್ನು ಮಾಡಿದ್ದು. ಪ್ರತಿಯೊಬ್ಬರು ನಮ್ಮ ಪರವಾಗಿದ್ದಾರೆ. ನಾನು ಶಿಫ್ಟ್ ಆಗಿಲ್ಲ ಯಾವ ಪಕ್ಷಕ್ಕೂ ಹೋಗಿಲ್ಲ ಇನ್ನೂ.

ಪತ್ರಿಕೆ: ನಿಮಗೆ ಒಳ್ಳೆಯದಾಗಲಿ. ಬಿಜೆಪಿ ಸರ್ಕಾರಕ್ಕೆ ನಿಮ್ಮಂಥವರು ಸೇರುವುದರಿಂದ ಏನಾದರೂ ಬ್ಯಾಲೆನ್ಸ್ ಆದರೂ ಆಗುತ್ತದಾ ಕಾದು ನೋಡುತ್ತೇವೆ.

ಬಿ.ಸಿ.ಪಾಟೀಲ್: (ನಗು)

ಸಂದರ್ಶನ:
ವಾಸು ಎಚ್.ವಿ ಮತ್ತು
ಅನಿಲ್‍ಕುಮಾರ್ ಚಿಕ್ಕದಾಳವಟ್ಟ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಆಸ್ಪತ್ರೆಗೆ ದಾಖಲು; ಕಾರ್ಯಕ್ರಮದಲ್ಲಿ ಏಕಾಏಕಿ ಕುಸಿದು ಬಿದ್ದು ಅಸ್ವಸ್ಥ

ಬೆಂಗಳೂರು: ಕರ್ನಾಟಕದ ನಿವೃತ್ತ ಲೋಕಾಯುಕ್ತ ಎನ್‌.ಸಂತೋಷ್‌ ಹೆಗ್ಡೆ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಭಾಷಣದ ವೇಳೆ ಕುಸಿದು ಬಿದ್ದು ಅಸ್ವಸ್ಥರಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಏಪ್ರಿಲ್ 4ರ, ಶುಕ್ರವಾರ ಬೆಂಗಳೂರಿನ ಕೊಂಡಜಿ ಬಸಪ್ಪ ಸಭಾಂಗಣದಲ್ಲಿ...

ಎಸ್‌ಎಸ್‌ಎಲ್‌ಸಿಯಲ್ಲಿ ತೃತೀಯ ಭಾಷೆಗೆ ಗ್ರೇಡ್: ನಿರ್ಧಾರ ಪರಿಶೀಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದ ರಾಜ್ಯಪಾಲ ಗೆಹ್ಲೋಟ್ 

ಬೆಂಗಳೂರು: 10ನೇ ತರಗತಿ ಪರೀಕ್ಷೆಯಲ್ಲಿ ತೃತೀಯ ಭಾಷೆಯ ವಿಷಯಕ್ಕೆ ಅಂಕಗಳನ್ನು ಬದಲಿಸುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ರಾಜ್ಯ ಸರ್ಕಾರವನ್ನು ಕೇಳಿದ್ದಾರೆ. ಸರ್ಕಾರವು ಈ ನಿರ್ಧಾರವನ್ನು "ಸಮಗ್ರವಾಗಿ ಪರಿಶೀಲಿಸಬೇಕು" ಎಂದು ಲೋಕಭವನವು...

ತಿರುಚ್ಚಿ ಪೂರ್ವದ ಪೆರಂಬೂರಿನಲ್ಲಿ ಟಿವಿಕೆ ಸಂಸ್ಥಾಪಕ ವಿಜಯ್ ಸಲ್ಲಿಸಿದ ಅಫಿಡವಿಟ್‌ಗಳಲ್ಲಿ ಹಲವು ವ್ಯತ್ಯಾಸಗಳಿರುವುದಾಗಿ ವರದಿ  

ಚೆನ್ನೈ: ನಟ ಮತ್ತು ಟಿವಿಕೆ ಸಂಸ್ಥಾಪಕ ವಿಜಯ್ ಸಲ್ಲಿಸಿದ ಎರಡು ಪ್ರತ್ಯೇಕ ಚುನಾವಣಾ ಅಫಿಡವಿಟ್‌ಗಳಲ್ಲಿ ವ್ಯತ್ಯಾಸಗಳು ಕಾಣಿಸಿಕೊಂಡಿದ್ದು, ವಿಧಾನಸಭಾ ಚುನಾವಣೆಗೆ ಮುನ್ನ ಕಾನೂನು ಮತ್ತು ರಾಜಕೀಯ ಪರಿಶೀಲನೆಗೆ ಅವಕಾಶ ನೀಡುವ ಸಾಧ್ಯತೆಯಿದೆ. ಪೆರಂಬೂರು ಮತ್ತು...

ಉತ್ತಮ್ ನಗರದಲ್ಲಿ ಶಾಂತಿ ಕಾಪಾಡುವಲ್ಲಿ ದೆಹಲಿ ಪೊಲೀಸರ ಪ್ರಯತ್ನಗಳನ್ನು ಶ್ಲಾಘಿಸಿದ ಎಪಿಸಿಆರ್

ಈದ್ ಅಲ್-ಫಿತರ್, ರಾಮ ನವಮಿ ಮತ್ತು ಹನುಮಾನ್ ಜಯಂತಿ ಸೇರಿದಂತೆ ಧಾರ್ಮಿಕ ಹಬ್ಬಗಳ ಆಚರಣೆಯ ಸಂದರ್ಭದಲ್ಲಿ ರಾಷ್ಟ್ರ ರಾಜಧಾನಿಯ ಉತ್ತಮ್ ನಗರ ಪ್ರದೇಶದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಕಾಪಾಡಿದ್ದಕ್ಕಾಗಿ ನಾಗರಿಕ ಹಕ್ಕುಗಳ ರಕ್ಷಣಾ...

ದಲಿತ ಸಮುದಾಯಕ್ಕೆ ಕ್ಷಮೆಯಾಚಿಸಿದ ನೇಪಾಳದ ಹೊಸ ಸರ್ಕಾರ

ಪ್ರಧಾನಿ ಬಾಲೇಂದ್ರ ಶಾ ಅವರ ನೇಪಾಳದ ಹೊಸ ಸರ್ಕಾರದ 100 ಅಂಶಗಳ ಸುಧಾರಣಾ ಕಾರ್ಯಸೂಚಿಯಡಿಯಲ್ಲಿ, ಮುಂದಿನ 15 ದಿನಗಳ ಒಳಗೆ ದಲಿತರು ಮತ್ತು ಐತಿಹಾಸಿಕವಾಗಿ ಹೊರಗಿಡಲ್ಪಟ್ಟ ಇತರೆ ಸಮುದಾಯಗಳಿಗೆ 'ಔಪಚಾರಿಕ ಕ್ಷಮೆಯಾಚನೆ' ಕೇಳುವುದಾಗಿ...

‘ಯಾರು ಹೆದರುತ್ತಾನೋ ಅವನು ಸತ್ತಂತೆ’: ರಾಘವ್ ಛಡ್ಡಾಗೆ ತೀವ್ರವಾಗಿ ಪ್ರತಿಕ್ರಿಯೆ ನೀಡಿದ ಎಎಪಿ ನಾಯಕ ಸೌರಭ್ ಭಾರದ್ವಾಜ್ 

ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಮತ್ತು ದೆಹಲಿ ಘಟಕದ ಮುಖ್ಯಸ್ಥ ಸೌರಭ್ ಭಾರದ್ವಾಜ್ ಅವರು ವೀಡಿಯೊ ಸಂದೇಶದಲ್ಲಿ ಆಪ್ ಸಂಸದ ರಾಘವ್ ಛಡ್ಡಾ ಅವರು ಸಂಸತ್ತಿನಲ್ಲಿ "ಸಾಫ್ಟ್ ಪಿಆರ್" ನಲ್ಲಿ ತೊಡಗಿದ್ದಾರೆ...

ಚಂಡೀಗಢ ಬಿಜೆಪಿ ಕಚೇರಿ ಸ್ಫೋಟ: ಪಂಜಾಬ್ ಕೌಂಟರ್ ಇಂಟೆಲಿಜೆನ್ಸ್ ಪಡೆಯಿಂದ ಇಬ್ಬರು ಶಂಕಿತರ ಮನೆಗಳ ಮೇಲೆ ದಾಳಿ

ಚಂಡೀಗಢದಲ್ಲಿರುವ ಪಂಜಾಬ್ ಬಿಜೆಪಿ ಕಚೇರಿಯ ಹೊರಗೆ ಸ್ಫೋಟ ನಡೆಸಿದ ಆರೋಪದ ಮೇಲೆ ಇಬ್ಬರು ಶಂಕಿತರ ಮನೆಗಳ ಮೇಲೆ  ಪಂಜಾಬ್ ಪೊಲೀಸರ ಗುಪ್ತಚರ ನಿಗ್ರಹ ದಳವು ಇಂದು ಮುಂಜಾನೆ ದಾಳಿ ನಡೆಸಿದೆ.  ರೋಪರ್ ಜಿಲ್ಲೆಯ ಮೊರಿಂಡಾ ಪ್ರದೇಶದ...

‘ನನ್ನ ಮೌನವನ್ನು ಸೋಲು ಎಂದು ತಿಳಿಯಬೇಡಿ’’: ರಾಜ್ಯಸಭೆಯಲ್ಲಿ ಪದಚ್ಯುತಿಯ ನಂತರ ಎಎಪಿಗೆ ತಿರಗೇಟು ನೀಡಿದ ಸಂಸದ ರಾಘವ್ ಛಡ್ಡಾ

ರಾಜ್ಯಸಭೆಯಲ್ಲಿ ಪಕ್ಷದ ಉಪ ನಾಯಕನ ಸ್ಥಾನದಿಂದ ತೆಗೆದುಹಾಕಲ್ಪಟ್ಟ ಒಂದು ದಿನದ ನಂತರ ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಛಡ್ಡಾ ಅವರು ಶುಕ್ರವಾರ "ನನ್ನ ಬಾಯಿ ಮುಚ್ಚಿಸಬಹುದು, ಸೋಲಿಸಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ. ಪಕ್ಷದ...

ಮಾಲ್ಡಾ ನ್ಯಾಯಾಂಗ ಅಧಿಕಾರಿಗಳ ಘೇರಾವ್ ಪ್ರಕರಣದಲ್ಲಿ 17 ಜನರ ಬಂಧನ: ತನಿಖೆಯನ್ನು ಎನ್‌ಐಎಗೆ ಹಸ್ತಾಂತರಿಸಿದ ಇಸಿ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಏಳು ನ್ಯಾಯಾಂಗ ಅಧಿಕಾರಿಗಳ ಘೇರಾವ್‌ನಲ್ಲಿ ಭಾಗಿಯಾಗಿದ್ದಕ್ಕಾಗಿ ಚುನಾವಣಾ ಅಭ್ಯರ್ಥಿ ಸೇರಿದಂತೆ ಕನಿಷ್ಠ 17 ಜನರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ ಎಂದು...

ದೆಹಲಿ ಗಲಭೆ ಪ್ರಕರಣದಿಂದ ಒಂಬತ್ತು ಜನರನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಒಂಬತ್ತು ಜನರನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ. ಸಾಕ್ಷ್ಯಗಳು ನಿರ್ದಿಷ್ಟತೆಯ ಕೊರತೆ ಮತ್ತು ಸಾಮಾನ್ಯ ಸ್ವರೂಪದ್ದಾಗಿರುವುದರಿಂದ ಪ್ರಕರಣದಲ್ಲಿ ಅವುಗಳನ್ನು ನಂಬಲಾಗುವುದಿಲ್ಲ ಎಂ ನ್ಯಾಯಾಲಯ ಹೇಳಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ...