Homeಕರ್ನಾಟಕಬಿ.ಆರ್. ಶೆಟ್ಟಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸೈಲ್ ಭೂದಾನ ಭಾನ್ಗಡಿ

ಬಿ.ಆರ್. ಶೆಟ್ಟಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸೈಲ್ ಭೂದಾನ ಭಾನ್ಗಡಿ

- Advertisement -
- Advertisement -

ವಾಹನದಟ್ಟಣೆಯ 3 ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಉತ್ತರಕನ್ನಡದಲ್ಲಿ ಅಪಘಾತವಾದರೆ ಅನಿವಾರ್ಯವಾದ ಒಂದು ಟ್ರಾಮಾ ಸೆಂಟರ್ ಇಲ್ಲ! ಮಾರಣಾಂತಿಕ ರೋಗ ಬಾಧಿಸಿದರೆ ಸಾಮಾನ್ಯ ದರ್ಜೆಯ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಗೂ ಗತಿಯಿಲ್ಲ!! ಗಾಯಾಳು/ರೋಗಿಯನ್ನು ಅಕ್ಕಪಕ್ಕದ ಜಿಲ್ಲೆಯ ಅಥವಾ ಗಡಿಯಲ್ಲಿರುವ ಗೋವಾದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಸಾಗಿಸಬೇಕು. ದೂರದ ಆಸ್ಪತ್ರೆಗೆ ಸೇರುವವರೆಗೆ ಉಸಿರು ಉಳಿದರೆ ಅದೇ ಅದೃಷ್ಟ!! ಜನರು ನರಳಿ ಸಾಯುತ್ತಿದ್ದರೂ ಉತ್ತರ ಕನ್ನಡವನ್ನಾಳಿದ ಯಾವ ಸಚಿವ ಸಂಸದ ಶಾಸಕರಿಗೆ “ಅಯ್ಯೋ” ಅನಿಸಿಲ್ಲ.

ಅವಶ್ಯ ವೈದ್ಯಕೀಯ ಸೌಲಭ್ಯವಿಲ್ಲದೆ ಅಮಾಯಕರು ಜೀವ ಬಿಡುವ ಸರಣಿ ದುರಂತದಿಂದ ವ್ಯಾಕುಲರಾಗಿ ಜಿಲ್ಲೆಯ ಒಂದಿಷ್ಟು ಯುವ ಹೃದಯವಂತರು ಕೆಲವು ತಿಂಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಅಭಿಯಾನ ಆರಂಭಿಸಿದ್ದರು. ಇದು ಸಾಂಕ್ರಾಮಿಕವಾಗಿ ಹಬ್ಬಿ ಹಕ್ಕೊತ್ತಾಯದ ಹೋರಾಟವನ್ನೇ ರೂಪಿಸಿತ್ತು. ಹುಂಬ ಎಂಪಿ ಅನಂತ್ಮಾಣಿ ಆಸ್ಪತ್ರೆ ಬೇಡಿಕೆ ಇಟ್ಟವರ ಮೇಲೆ ಮುರಕೊಂಡುಬಿದ್ದರೂ ಉಳಿದ ಎಮ್ಮಲ್ಲೆಗಳಿಗೆ ಜನರ ಸಾತ್ವಿಕ ಸಿಟ್ಟು ತಟ್ಟಿತ್ತು. ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟುವ ಬದ್ಧತೆಯ ಪ್ರಯತ್ನ ಹೆಚ್ಚು ನಡೆದದ್ದು ಕುಮಟಾದಲ್ಲಿ. ಪಕ್ಷಭೇದ ಮರೆತು ಎಲ್ಲರೂ ಒಂದಾದಂತೆ ತೋರಿಸಿಕೊಂಡರು. ಕುಮಟಾದ ಅಷ್ಟೂ ಹೋರಾಟಗಳ ಕಾಯಂ ಅಧ್ಯಕ್ಷನಂತಿದ್ದ ನಾಯ್ಕನ ಮುಂದಿಟ್ಟುಕೊಂಡು ಹೋರಾಟ ಸಮಿತಿಯು ರಚಿಸಲಾಯಿತು. ಸರ್ಕಾರವೇ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸಲಿ ಎಂಬುದು ಎಲ್ಲರ ಒತ್ತಾಸೆಯಾಗಿತ್ತು.

ಆದರೆ ಸಾರ್ವಜನಿಕ ಕೆಲಸ ಕಾಮಗಾರಿ ಯಾವುದೇ ಆಗಿರಲಿ, ಅದರಲ್ಲಿ ತನಗೆ ಬರಬೇಕಾದ ಪರ್ಸೆಂಟೇಕ್ ಲೆಕ್ಕಹಾಕುವ ಶಾಸಕ ದಿನಕರ ಶೆಟ್ಟಿಯ ಸ್ಕೆಚ್ ಬೇರೆಯಾಗಿತ್ತು. ದುಬೈನಲ್ಲಿರುವ ಜಗತ್ತಿನ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾದಲ್ಲಿ ಒಂದು ಅಂತಸ್ತನ್ನು ಖರೀದಿಸಿರುವ, ಪ್ರಪಂಚದ ವಿವಿಧ ಕಡೆಯಲ್ಲಿ ವೈದ್ಯಕೀಯ ದಂಧೆ ನಡೆಸುವ ಮಲ್ಟಿಮಿಲೇನಿಯರ್ ಅನಿವಾಸಿ ಭಾರತೀಯ ಉದ್ಯಮಿ ಡಾ| ಬಿ.ಆರ್.ಶೆಟ್ಟಿಯಿಂದ ಕುಮಟೆಯಲ್ಲಿ ಆಸ್ಪತ್ರೆ ಮಾಡಿಸಿದರೆ ಎಮ್ಮೆಲ್ಲೆಯಾಗಿರುವ ತನಗೆ “ಫಾಯ್ದೆ” ಎಂದು ದಿನಕರ್ ಶೆಟ್ಟಿ ಎಣಿಸಿದ್ದರು. ಹೋರಾಟ ಸಮಿತಿ ಮತ್ತು ಬಿ.ಆರ್. ಶೆಟ್ಟಿ ನಡುವೆ ಮಾತುಕತೆ ನಡೆಯಿತು. ಶೆಟ್ಟಿ ಕುಮಟಾದಲ್ಲಿ ಆರೋಗ್ಯ ಯೋಜನೆಗೆ ರೆಡಿ ಎನ್ನುತ್ತಿದ್ದಂತೆಯೇ ಒಂದು ಕಡೆಯಿಂದ ರಿಯಲ್ ಎಸ್ಟೇಟ್ ಮಾಫಿಯಾ, ಮತ್ತೊಂದು ಕಡೆಯಿಂದ ಶಾಸಕ ಶೆಟ್ಟಿ ಠೋಳಿ ಜಾಗ ಹುಡುಕಲು ಶುರು ಮಾಡಿತು.

ಪಕ್ಕಾ ವ್ಯವಹಾರಸ್ಥನಾದ ಬಿಆರ್‍ಎಸ್‍ಗೆ ದುಡ್ಡು ಕೊಟ್ಟು ಜಾಗ ಕೊಳ್ಳುವ ಇರಾದೆಯೇ ಇರಲಿಲ್ಲ. ಆತ ಬಯಸಿದ್ದು ಭೂದಾನ! ಉಡುಪಿ ಸರ್ಕಾರಿ ಆಸ್ಪತ್ರೆ ಕಟ್ಟಿಸುವಾಗಲೂ ಆತ ಮಾಡಿದ್ದು ಇಂಥದ್ದೇ ಕಣ್ಕಟ್ಟು ಸಮಾಜಸೇವೆಯೇ. ಆತ ಬಯಸುವುದು ಭೂದಾನ; ಅನುದಾನ ಮಾತ್ರ ತನ್ನದೆನ್ನುತ್ತಾನೆ. ಬಿಆರ್‍ಎಸ್ ಬಿಸಿನೆಸ್ ಪಾಲಿಸಿ ಅರ್ಥಮಾಡಿಕೊಂಡ ಕಾರವಾರದ ಮಾಜಿ ಶಾಸಕ ಸತೀಶ್ ಸೈಲ್ ರಾಜಕೀಯ ಮರುಹುಟ್ಟಿಗೆ ಸೂಪರ್ ದಾಳ ಉರುಳಿಸಿಯೇಬಿಟ್ಟ. ಕುಮಟೆಯ ಖೈರೆ ಎಂಬಲ್ಲಿ ಇರುವ ತನ್ನ ಬೇನಾಮಿ 11 ಎಕರೆ ಭೂಮಿ ದಾನವಾಗಿ ಕೊಡುತ್ತೇನೆಂದು ಬಿಆರ್‍ಎಸ್‍ಗೆ ರಹಸ್ಯ ಸಂದೇಶ ತಲುಪಿಸಿದರು.

ಕಳೆದ ಡಿಸೆಂಬರ್ 21ರಂದು ಕುಮಟಾ ಅಂಕೋಲಾ ಮತ್ತು ಕಾರವಾರದಲ್ಲಿ ಬಿಆರ್ ಶೆಟ್ಟಿ ಸನ್ನಿಧಿಯಲ್ಲಿ 53ನೇ ಹುಟ್ಟುಹಬ್ಬ ಆಚರಿಸಿಕೊಂಡು ದಾನಶೂರ ಕರ್ಣನ ಗೆಟಪ್‍ನಲ್ಲಿ ಠಳಾಯಿಸಿದ್ದ. ಬಿಆರ್‍ಎಸ್ ಶೋ ಭರ್ಜರಿಯಾಗಿ ನಡೆಯುತ್ತಿದ್ದಂತೆಯೇ ಆಸ್ಪತ್ರೆ ಪ್ರಚಾರ ಪಡೆಯಲು ಹವಣಿಸುತ್ತಿದ್ದ ಶಾಸಕ ದಿನಕರ ಶೆಟ್ಟಿ, ಆರ್.ಜಿ.ನಾಯ್ಕ್ ಮತ್ತಿತರರ ಛೋಟಾ-ಮೋಟಾ ಪುಢಾರಿಗಳೆಲ್ಲ ಒಂದೇ ಏಟಿಗೆ ಮೂಲೆಗುಂಪಾಗಿ ಹೋದರು!!

ಕಳೆದ ಅಸೆಂಬ್ಲಿ ಎಲೆಕ್ಷನ್‍ನಲ್ಲಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದ ಸೈಲ್‍ಗೆ ಕಾಂಗ್ರೆಸ್‍ನಿಂದ ಕಾರವಾರದಲ್ಲಿ ಗೆಲ್ಲುವ ಭರವಸೆ ಉಳಿದಿಲ್ಲ. ಮೋದಿ ಸಖ್ಯದ ಬಿಆರ್ ಶೆಟ್ಟಿ ದೋಸ್ತಿ ಮಾಡಿದರೆ ಬಿಜೆಪಿ ಸಲೀಸಾಗಿ ಸೇರಬಹುದೆಂದು ಸೈಲ್ ಭಾವಿಸಿದ್ದಾನೆ. ಅದಾಗದಿದ್ದರೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕುಮಟೆಗೆ ತಂದಿದ್ದೇನೆಂಬ ಇಮೇಜ್ ಬಳಸಿ ಅಲ್ಲಿಂದಲೇ ಕಾಂಗ್ರೆಸ್ ಕ್ಯಾಂಡಿಡೇಟ್ ಆಗೋದು ಸೈಲ್ ಹಿಡನ್ ಅಜೆಂಡಾ. ಆಸ್ಪತ್ರೆಯಲ್ಲೂ ಕಳ್ಳ ಅದಿರು ಕಾಸು ಹೂಡುವ ವ್ಯವಹಾರ ಹಿಕಮತ್ತು ಸೈನ್‍ನದು. ಈ ಸೈಲ್, ಬಿ.ಆರ್.ಎಸ್, ದಿನಕರ ಶೆಟ್ಟಿ ರಾಜಕೀಯ ವ್ಯಾವಹಾರಿಕ ಬೃಹನ್ನಾಟಕದ ನಡುವೆಯೇ ದಾನ ಭೂಮಿಗೆ ಸುತ್ತಿಕೊಂಡಿರುವ ವ್ಯಾಜ್ಯ ರೋಚಕ ಕುತೂಹಲ ಕೆರಳಿಸುತ್ತಿದೆ.

ಸೈಲ್ ಪುಕ್ಕಟೆ ಕೊಡುತ್ತೇನೆ ಎನ್ನುತ್ತಿರುವ ಕುಮಟಾ ತಾಲೂಕಿನ ಮಿರ್ಜಾನ್ ಗ್ರಾಮದ ಸರ್ವೆ ನಂಬರ್ 441/1ರ 11 ಎಕರೆ ಪ್ರದೇಶ ಅಸಲಿಗೆ ಸೈಲ್ ಹೆಸರಲ್ಲೇ ಇಲ್ಲ. ಅದರ ಒಡತಿ ಒಂದು ತಿಂಗಳ ಹಿಂದಷ್ಟೇ ಸತ್ತುಹೋಗಿರುವ ಅಂಕೋಲೆಯ ಲಕ್ಷ್ಮಿ ಸುಬ್ರಾಯ ಕಾಮತ್. ಆಕೆ ಬೇರ್ಯಾರೂ ಅಲ್ಲ; ಸತೀಶ್ ಸೈಲ್‍ನ ಸಕಲ ಲಫಡಾ ವ್ಯವಹಾರದ ಪಾಲುದಾರನಾಗಿರುವ ಮಂಗಲದಾಸ ಕಾಮತ್‍ನ ತಾಯಿ. ಅಂದರೆ ಸದ್ರಿ ಜಾಗದ ಬೇನಾಮಿ ಹಕ್ಕುದಾರ ಸತೀಶ್ ಸೈಲ್.

ಈ ಸ್ಥಳದಲ್ಲಿ ಒಕ್ಕಲಿಗ ಸಮುದಾಯದ ಐದಾರು ಕುಟುಂಬಗಳು ಐದಾರು ದಶಕದಿಂದ ಬದುಕು ಕಟ್ಟಿಕೊಂಡಿವೆ. ಇವರ ಮನೆ, ಜಾನುವಾರು, ಕೊಟ್ಟಿಗೆ, ಹಿತ್ತಲು ಇರುವುದು ಅಬ್ಬಬ್ಬಾ ಎಂದರೆ ಎರಡೆಕರೆಯಲ್ಲಷ್ಟೆ. ಸದ್ರಿ ಜಾಗದ ಮೂಲ ಹಕ್ಕುದಾರ ಹಳ್ಕಾರ್‍ನ ಸೀತಾರಾಮ ಶಾನುಭೋಗ್. ಆತನ ಕಾಲದ ನಂತರ ಮಕ್ಕಳಾದ ರಮಾಕಾಂತ, ವಿಮಲ ಮತ್ತು ಮುಕ್ತ ಹೆಸರಿಗೆ ಜಮೀನು ಸೇರಿದೆ. ಅವಿವಾಹಿತರಾಗಿದ್ದ ಈ ಮೂವರು ಈಗ ಬದುಕಿ ಉಳಿದಿಲ್ಲ. ರಮಾಕಾಂತ ಮತ್ತು ಮುಕ್ತ ನಿಧನದ ನಂತರ ಕೆರೆಯ ಸುತ್ತಲಿನ ಸರ್ವೇ ನಂಬರ್ 147 ಸದ್ದಿತ 16 ಸರ್ವೆನಂಬರ್‍ಗಳ ಜಾಗಕ್ಕೆ ವಿಮಲಾ ವಾರಸುದಾರಳಾಗುತ್ತಾರೆ. ಈ ಒಟ್ಟು 17 ಸರ್ವೇ ನಂಬರ್‍ಗಳ ಜಾಗದ ಹಲವೆಡೆ ಗ್ರಾಮದ ಒಕ್ಕಲಿಗ ಕುಟುಂಬಗಳು ಗೇಣಿದಾರರಾಗಿದ್ದಾರೆ. ಒಡೆಯ-ಒಕ್ಕಲು ನಡುವೆ ಸಂಬಂಧ ಅನ್ಯೋನ್ಯವಾಗಿತ್ತು. ಮಕ್ಕಳಿಲ್ಲದ ತಮಗೆ ರೈತರೇ ಮಕ್ಕಳೆಂದು ವಿಮಲ ಮತ್ತಾಕೆಯ ಸೋದರ-ಸೋದರಿ ಭಾವಿಸಿದ್ದರು. ತಮ್ಮ ಕಾಲಾನಂತರ ಭೂಮಿ ಒಡೆತನ ರೈತರಿಗೆ ಬರುವಂತೆ ವಿಲ್‍ನಾಮೆಯೂ ವಿಮಲ ಬರೆದುಕೊಟ್ಟಿದ್ದಾರೆ.

ಪರಮೇಶ್ವರ ಸುಕ್ರು ಪಟಗಾರ ಎಂಬ ರೈತನ ಹೆಸರಿನಲ್ಲಿ ವಿಮಲ ಶಾನುಭೋಗ್ ವಿಲ್‍ನಾಮೆ ಕೊಟ್ಟಿದ್ದಾರೆ. ಇದೇ ಜಾಗದ ಮೇಲೆ ವಿಮಲಾ ಶಾನಭಾಗ್ ತನಗೂ ಬರೆದುಕೊಟ್ಟಿದ್ದಾರೆಂದು ಪಾಂಡುರಂಗ ಬಾಬುರಾವ್ ಹಳ್ಕಾರ ಎಂಬಾತ ಅಂದಿನ ತಹಶೀಲ್ದಾರ್ ನಾಯ್ಕನ ಖರೀದಿಸಿದ್ದಾನೆ. ಈ ಖೊಟ್ಟಿ ವಿಲ್‍ನಾಮೆ ಆಧಾರದಲ್ಲಿ ತಹಶೀಲ್ದಾರ್ ವಿಮಲಾಳ ಜಮೀನಿನ ಹಕ್ಕು ಪಾಂಡುರಂಗ ಹಳ್ಕಾರ್ ಹೆಸರಿಗೆ ವರ್ಗಾಯಿಸಿ ಮ್ಯುಟೇಷನ್ (ಒಖ ಓo.54/2006-07) ಜಡಿದಿದ್ದಾನೆ! ಇದು ಪಕ್ಕಾ ಫೋರ್ಜರಿ!! ಈ ಸುಳ್ಳು ದಾಖಲೆ ಇಟ್ಟು ಪಾಂಡುರಂಗ ಹಳ್ಕಾರ್ ಅಂಕೋಲೆಯ ಲಕ್ಷ್ಮಿ ಕಾಮತ್‍ಗೆ ಜಾಗ ಮಾರಿದ್ದಾನೆ. ಇದರಿಂದ ಕಂಗಾಲಾದ ಖೈರೆಯ ಗೇಣಿದಾರರು ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ವ್ಯಾಜ್ಯ ದಾಖಲಿಸುತ್ತಾರೆ. ಜಿಲ್ಲಾಧಿಕಾರಿ 54/2006-07ರ ಮ್ಯುಟೇಶನ್ ರದ್ದುಮಾಡಿ, ಎರಡೆರಡು ವಿಲ್‍ನಾಮೆ ಇರುವುದರಿಂದ ಸಿವಿಲ್ ನ್ಯಾಯಾಲಯದಲ್ಲಿ ಬಗೆಹರಿಸಿಕೊಂಡು ಬರುವಂತೆ ತೀರ್ಪು ಕೊಡುತ್ತಾರೆ. ಅಂದರೆ ಸೈಲ್‍ನ ಬೇನಾಮಿ ಖರೀದಿಯೇ ಅಕ್ರಮ. ಅದೇರೀತಿ ಮುಕ್ತ ಮರಣದ ನಂತರ ಪಾಂಡುರಂಗ ಹಳ್ಕಾರ್ ಹೆಸರಲ್ಲಿ ಆಗಿರುವ ಮ್ಯೂಟೇಶನ್ ಸಂಖ್ಯೆ 56/2018-19 ಕೂಡ ಅಸಿಸ್ಟಂಟ್ ಕಮಿಷನರ್ ಕೋರ್ಟು ತಡೆಯಾಜ್ಞೆ ನೀಡಿದೆ.

ಮಜಾ ಎಂದರೆ ಹಿಂದೆ ಸೈಲ್ ಈ ಜಾಗ ಖರೀದಿಸಿದಾಗ ಗೇಣಿದಾರರ ಪರ ಅವಾಜ್ ಹಾಕಿದ ಶಾಸಕ ದಿನಕರ ಶೆಟ್ಟಿ ಇವತ್ತು ಅದರ ವಿರುದ್ಧ ಕಿತಾಪತಿ ನಡೆಸಿದ್ದಾನೆ. ರೈತರು ಅಸ್ತಿತ್ವಕ್ಕಾಗಿ ಬಡಿದಾಡುತ್ತಿದ್ದಾರೆ. ಅವರೇನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ವಿರೋಧಿಸುತ್ತಿಲ್ಲ. ತಮ್ಮ ಬದುಕಿಗೆ ಆಧಾರವಾದ ಎರಡು ಎಕರೆ ಬಿಟ್ಟು ಉಳಿದದ್ದು ಆಸ್ಪತ್ರೆಗೆ ಬಳಸಿ ಅನ್ನುತ್ತಿದ್ದಾರೆ. ಇದೆಲ್ಲಾ ಬಿಆರ್ ಶೆಟ್ಟಿಗೆ ಗೊತ್ತಾಗದಂತೆ ಸೈಲ್, ದಿನಕರ ಶೆಟ್ಟಿ ಟ್ರಿಕ್ಕು ಮಾಡಿದ್ದಾರೆ. ರೈತರ ಮನೆಗಳಿರುವ ಜಾಗ ಬಿಟ್ಟು ಸರ್ಕಾರಿ ಅರಣ್ಯಪ್ರದೇಶ ಬಿಆರ್ ಶೆಟ್ಟಿಗೆ ತೋರಿಸಿ ಕಳಿಸಿದ್ದಾರೆ. ಬಿಆರ್ ಶೆಟ್ಟಿ ಎದುರು ಅಳಲು ತೋಡಿಕೊಳ್ಳಲು ನಿರಾಶ್ರಿತರಾಗುವ ರೈತರು ಒಟ್ಟಾಗಿದ್ದರು. ಆದರೆ ಸೈಲ್ “ಅಪ್ಪಯ್ಯ-ಅಮ್ಮಯ್ಯ ನನ್ನ ನಂಬಿ… ಶೆಟ್ಟರ ಮುಂದೆ ನನ್ನ ಮಾನ ತೆಗಿಬೇಡಿ, ನಿಮಗೆ ಅನ್ಯಾಯ ಮಾಡುವುದಿಲ್ಲ…” ಎಂದು ಗೋಗರೆದಿದ್ದಾನೆ; ಬಿ.ಆರ್.ಎಸ್‍ನ ಕತ್ತಲಲ್ಲಿಟ್ಟಿದ್ದಾನೆ.

ಹಾಗಾಗಿ ಬಿಆರ್ ಶೆಟ್ಟಿಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾರ್ಯಕ್ರಮ ಸಾಂಗವಾಗಿ ನಡೆದಿದೆ. ತಾಯಿ ಮತ್ತು ಶಾಸಕ ಶೆಟ್ಟಿ ಬಡರೈತರ ಕಣ್ಣಲ್ಲಿ ನೀರು ಬರದಂತೆ ಆಸ್ಪತ್ರೆ ಕಟ್ಟಿದರಷ್ಟೇ ಶ್ರೇಯಸ್ಸು!!!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಲಂಚ ಪಡೆಯುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕ; ಲೋಕಾಯುಕ್ತ ಪೊಲೀಸರಿಂದ ಚಂದ್ರು ಲಮಾಣಿ ಬಂಧನ

ಲಂಚ ಪಡೆಯುವಾಗಲೇ ಲೋಕಾಯುಕ್ತ ಪೊಲೀಸರು ಬಿಜೆಪಿ ಶಾಸಕ ಚಂದ್ರು ಲಮಾಣಿ ಅವರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಗುತ್ತಿಗೆದಾರ ವಿಜಯ್ ಪೂಜಾರ್ ಅವರ ದೂರಿನ ಮೇರೆಗೆ ಗದಗ ಲೋಕಾಯುಕ್ತ ಪೊಲೀಸರು ನಡೆಸಿದ...

ಎಐ ಶೃಂಗಸಭೆಯಲ್ಲಿ ಪ್ರತಿಭಟನೆ : ನಾಲ್ವರು ಯುವ ಕಾಂಗ್ರೆಸ್‌ ಕಾರ್ಯಕರ್ತರು 5 ದಿನ ಪೊಲೀಸ್ ಕಸ್ಟಡಿಗೆ

ನವದೆಹಲಿಯ ಭಾರತ ಮಂಟಪದಲ್ಲಿ ಆಯೋಜಿಸಿದ್ದ ಎಐ ಶೃಂಗಸಭೆಯಲ್ಲಿ ಶರ್ಟ್ ಬಿಚ್ಚಿ ಪ್ರತಿಭಟಿಸಿದ್ದ ನಾಲ್ವರು ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ದೆಹಲಿ ನ್ಯಾಯಾಲಯ ಶನಿವಾರ (ಫೆ.21) 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ದೆಹಲಿ ಪೊಲೀಸರು...

ಮೈಮೇಲೆ ದೇವರು ಬಂದಂತೆ ನಟಿಸಿ ದಲಿತ ನವದಂಪತಿ ದೇವಸ್ಥಾನ ಪ್ರವೇಶ ನಿರಾಕರಣೆ: ವ್ಯಕ್ತಿ ಬಂಧನ

ಮೈಮೇಲೆ ದೇವರು ಬಂದಂತೆ ನಾಟಕವಾಡಿದ ವ್ಯಕ್ತಿಯೊಬ್ಬ, ದೇವಸ್ಥಾನಕ್ಕೆ ಬಂದಿದ್ದ ದಲಿತ ನವದಂಪತಿಯನ್ನು ಹೊರಗೆ ಕಳುಹಿಸುವ ಮೂಲಕ ಅಸ್ಪೃಶ್ಯತೆ ಆಚರಣೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಗೋಣಿ ತುಮಕೂರಿನಲ್ಲಿ (ಫೆ.20) ನಡೆದಿದೆ. ಗೃಹ...

ಜಾತಿವಾದಿ ಹೇಳಿಕೆ: ಜೆಎನ್‌ಯು ಉಪಕುಲಪತಿ ರಾಜೀನಾಮೆಗೆ ವಿದ್ಯಾರ್ಥಿ ಸಂಘ ಆಗ್ರಹ

ದೆಹಲಿಯ ಜವಾಹರಲಾಲ್ ನೆಹರು ವಿಶ್ವ ವಿದ್ಯಾಲಯದ (ಜೆಎನ್‌ಯು) ಉಪಕುಲಪತಿ ಶಾಂತಿಶ್ರೀ ಧೂಳಿಪುಡಿ ಪಂಡಿತ್ ಅವರು 'ದ ಸಂಡೇ ಗಾರ್ಡಿಯನ್' ಯೂಟ್ಯೂಬ್‌ ಚಾನೆಲ್‌ನ ಪಾಡ್‌ಕಾಸ್ಟ್‌ನಲ್ಲಿ 'ಜಾತಿ ಮತ್ತು ವಿಕ್ಟಿಮ್ ಕಾರ್ಡ್' ಕುರಿತು ನೀಡಿದ ಹೇಳಿಕೆ...

10 ವರ್ಷಗಳಲ್ಲಿ 33 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ : ದಂಪತಿಗೆ ಮರಣದಂಡನೆ

ಸುಮಾರು 10 ವರ್ಷಗಳಲ್ಲಿ 33 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ದಂಪತಿಗೆ ಮರಣದಂಡನೆ ವಿಧಿಸಿ ಉತ್ತರ ಪ್ರದೇಶದ ಬಂಡಾ ವಿಶೇಷ ಪೋಕ್ಸೋ ನ್ಯಾಯಾಲಯ ಶುಕ್ರವಾರ (ಫೆ.20) ಆದೇಶಿಸಿದೆ. ಉತ್ತರ ಪ್ರದೇಶದ...

ರಾಜ್ಯಸಭೆ ಚುನಾವಣೆ : ಬಿಹಾರದಲ್ಲಿ ಕಿಂಗ್ ಮೇಕರ್ ಆದ ಓವೈಸಿ ಪಕ್ಷ

ಮಾರ್ಚ್ 16ರಂದು ನಡೆಯಲಿರುವ ಬಿಹಾರದ ಐದು ರಾಜ್ಯಸಭಾ ಸ್ಥಾನಗಳ ಚುನಾವಣೆಯಲ್ಲಿ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ಪಕ್ಷವು 'ಕಿಂಗ್ ಮೇಕರ್' ಆಗಿ ಹೊರಹೊಮ್ಮಿದೆ. ಬಿಹಾರದಲ್ಲಿ ಒಂದು ರಾಜ್ಯಸಭಾ ಸ್ಥಾನ ಗೆಲ್ಲಲು ಕನಿಷ್ಠ...

ದೆಹಲಿ : ಪ್ರಧಾನಿ ಮನೆ ಬಳಿಯ ಕೊಳಗೇರಿಗಳ 717 ಕುಟುಂಬಗಳಿಗೆ ಮನೆ ಖಾಲಿ ಮಾಡುವಂತೆ ನೋಟಿಸ್

ನವದೆಹಲಿಯ ಪ್ರಧಾನಿ ನಿವಾಸದ ಬಳಿಯ ಮೂರು ಕೊಳಗೇರಿಗಳಲ್ಲಿ ವಾಸಿಸುತ್ತಿರುವ ಏಳುನೂರ ಹದಿನೇಳು ಕುಟುಂಬಗಳು ಮಾರ್ಚ್ 6ರೊಳಗೆ ತಮ್ಮ ಮನೆಗಳನ್ನು ಖಾಲಿ ಮಾಡುವಂತೆ ಸೂಚಿಸಲಾಗಿದೆ. ಇಲ್ಲದಿದ್ದರೆ ಕಾನೂನು ಕ್ರಮ ಎದುರಿಸಲು ಸಿದ್ದರಾಗುವಂತೆ ಎಚ್ಚರಿಕೆ ನೀಡಲಾಗಿದೆ...

ಹೊಸ ಅಸ್ತ್ರ ಪ್ರಯೋಗಿಸಿದ ಟ್ರಂಪ್ : ಎಲ್ಲಾ ರಾಷ್ಟ್ರಗಳ ಆಮದು ಮೇಲೆ ಶೇ.10ರಷ್ಟು ಜಾಗತಿಕ ಸುಂಕ ಘೋಷಣೆ

ಎಲ್ಲಾ ದೇಶಗಳ ಆಮದುಗಳ ಮೇಲೆ ಹೊಸದಾಗಿ ಶೇಕಡ 10 ಸುಂಕ ವಿಧಿಸುವ ಕಾರ್ಯನಿರ್ವಾಹಕ ಆದೇಶಕ್ಕೆ ಸಹಿ ಹಾಕಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ (ಫೆ.20) ಘೋಷಿಸಿದ್ದಾರೆ. ಇದಕ್ಕೂ ಕೆಲ ಗಂಟೆಗಳ ಮೊದಲು,...

ಭಾರತದೊಂದಿಗಿನ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆ ಇಲ್ಲ: ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಟ್ರಂಪ್ ಹೇಳಿಕೆ

ಅಮೆರಿಕ ಸುಪ್ರೀಂ ಕೋರ್ಟ್ ಪ್ರತಿ ಸುಂಕ (Reciprocal tariffs) ನೀತಿಯನ್ನು ರದ್ದುಗೊಳಿಸಿದರೂ, ಭಾರತ-ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ (ಫೆ.20) ತಿಳಿಸಿದ್ದಾರೆ. ಶ್ವೇತಭವನದಲ್ಲಿ...

ಗುಜರಾತ್: ‘ಲವ್ ಜಿಹಾದ್’ ತಡೆಗೆ ವಿವಾಹ ನೋಂದಣಿ ಪ್ರಕ್ರಿಯೆಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡುತ್ತೇವೆ; ಡಿಸಿಎಂ ಹರ್ಷ ಸಾಂಘವಿ ಘೋಷಣೆ

ಅಹಮದಾಬಾದ್: ಗುಜರಾತ್‌ನ ಉಪಮುಖ್ಯಮಂತ್ರಿ ಹರ್ಷ ಸಾಂಘವಿ ಶುಕ್ರವಾರ, ರಾಜ್ಯ ಸರ್ಕಾರವು ವಿವಾಹ ನೋಂದಣಿ ಕಾರ್ಯವಿಧಾನದಲ್ಲಿ ಬದಲಾವಣೆಗಳನ್ನು ತರಲಿದೆ ಎಂದು ಘೋಷಿಸಿದ್ದು, "ಸಮಾಜ ವಿರೋಧಿ ಶಕ್ತಿಗಳು", ವಿಶೇಷವಾಗಿ ಗುಜರಾತ್‌ನ ಹೆಣ್ಣುಮಕ್ಕಳನ್ನು "ಲವ್ ಜಿಹಾದ್" ಗಾಗಿ...