Homeಸಾಹಿತ್ಯ-ಸಂಸ್ಕೃತಿಪುಸ್ತಕ ವಿಮರ್ಶೆ"ಬರುತ್ತೀಯಾ?.. ಕೂರುತ್ತೀಯಾ?: ಭಾರತೀಯ ಸೂಳೆಲೋಕದ ಕಥೆಗಳು" ಪುಸ್ತಕದ ಮುನ್ನುಡಿ

“ಬರುತ್ತೀಯಾ?.. ಕೂರುತ್ತೀಯಾ?: ಭಾರತೀಯ ಸೂಳೆಲೋಕದ ಕಥೆಗಳು” ಪುಸ್ತಕದ ಮುನ್ನುಡಿ

'ಸೂಳೆ' ಯಿಂದ' ಲೈಂಗಿಕ ಕಾರ್ಯಕರ್ತೆ' ಎಂದು ಪದ ಬದಲಾಯಿಸಿದ ಮಾತ್ರಕ್ಕೆ ದೇಹದ ಮೇಲೆ ನಡೆಯುವ ಅತ್ಯಾಚಾರದ ಘೋರವೇನೂ ಕಡಿಮೆಯಾಗಲಾರದು. ಯಾವ ಕಾಯಿದೆಯೂ ಸಹ ದೇಹಪ್ರವೇಶದ ಹಿಂಸೆ ಮತ್ತು ಆಘಾತವನ್ನು ದೂರಮಾಡಲಾಗದು.

- Advertisement -
- Advertisement -

ಲೇಖಕಿ ಸುಕನ್ಯಾ ಕನಾರಳ್ಳಿ ಅನುವಾದಿಸಿರುವ “ಬರುತ್ತೀಯಾ?.. ಕೂರುತ್ತೀಯಾ?: ಭಾರತೀಯ ಸೂಳೆಲೋಕದ ಕಥೆಗಳು” ಪುಸ್ತಕಕ್ಕೆ ಮೂಲ ಲೇಖಕಿ ರುಚಿರಾ ಗುಪ್ತಾ ಬರೆದ ಪ್ರಸ್ತಾವನೆ.

ಈ River of Flesh and Other Stories ಕೃತಿ ನನ್ನ ತಲೆಯಲ್ಲಿ ಮೂಡಿದ್ದು ಐದು ವರುಷಗಳ ಹಿಂದೆ ನನ್ನ ಗೆಳತಿ ರಕ್ಷಂದ ಜಲೀಲ್ ಜೊತೆ ಸೂಳೆಗಾರಿಕೆ ಸಾಮಾಜಿಕವಾಗಿ ಹೆಣ್ಣಿಗಿರುವ ಅಸಮಾನ ಅಂತಸ್ತಿನ ಪರಿಣಾಮ ಮಾತ್ರವೇ ಅಲ್ಲ, ಅದು ಹೆಣ್ಣಿನ ಅಸಮಾನತೆಯನ್ನು ಮತ್ತು ಅಬಲೆತನವನ್ನು ಸ್ಥಿರೀಕರಿಸಲು ಬಳಸಲ್ಪಡುವ ಸಾಧನವೂ ಹೌದು ಎನ್ನುವುದನ್ನು ಜನರಿಗೆ ಮನದಟ್ಟು ಮಾಡುವ ಪ್ರಯತ್ನ ಮಾಡಿದಾಗೆಲ್ಲಾ ಎದುರಾಗುತ್ತಿದ್ದ ಅಡಚಣೆಗಳ ಬಗ್ಗೆ ಮಾತಾಡುತ್ತಿದ್ದಾಗ.
* * *
ನಾನು ಪ್ರಯಾಣ ಮಾಡಿದಾಗೆಲ್ಲಾ ಹಲವಾರು ಬಾರಿ `ಕರ್ತೃತ್ವ’ (agency) ಎಂಬ ಪದ ನನಗೆ ಎದುರಾಗಿದ್ದಿದೆ. ಕೆಲವು ಹೆಂಗಸರು ಮದುವೆಗೆ ಬದಲಾಗಿ ಸೂಳೆಗಾರಿಕೆಯನ್ನು ಸ್ವತಃ ಆಯ್ದುಕೊಳ್ಳುತ್ತಾರೆ; ಗಂಡಸಿನ ದಬ್ಬಾಳಿಕೆಯ ಫಲವಾಗಿ ಹುಟ್ಟಿಕೊಂಡ ರಚನೆಗಳಿಂದ ದೂರವಿರಲು ಅಥವಾ ಹೊರಬರಲು ಅದು ಸಹಾಯ ಮಾಡುತ್ತದೆ; ಕೊಳ್ಳುಬಾಕ ಸಂಸ್ಕೃತಿಯಲ್ಲಿ ಹುಟ್ಟಿ ಬೆಳೆದಿರುವ ಕಾಲೇಜು ಹುಡುಗಿಯರು ಚಪ್ಪಲಿ, ಲಿಪ್‍ಸ್ಟಿಕ್, ಬ್ಯಾಗು, ಬಟ್ಟೆ, ಪರ್ಫ್ಯೂಮು ಹೀಗೆ ತಮಗೆ ಬೇಕುಬೇಕಾದ್ದೆಲ್ಲವನ್ನು ಪಡೆಯಲು ಸೂಳೆಗಾರಿಕೆಯ ಮೊರೆ ಹೋಗುತ್ತಾರೆ; ಹೀಗೆ ಏನೇನೋ. ಅದು ಜೀವನೋಪಾಯದ ಆಯ್ಕೆಯೂ ಹೌದು ಎಂದು ಕೆಲವರು ವಾದಿಸಿರುವುದುಂಟು. ಕಡಿಮೆ ಸಂಬಳಕ್ಕೆ ಹೊರಗೆ ಮಾಡಬೇಕಾದ, ಬೆವರು ಬಸಿಯುವ ದುಡಿತದಿಂದ, ಮನೆಯೊಳಗಿನ ದಬ್ಬಾಳಿಕೆಯಿಂದ, ಮದುವೆಯೊಳಗಿನ ಹಿಂಸೆಯಿಂದ ತಪ್ಪಿಸಿಕೊಳ್ಳಲು ಸೂಳೆಗಾರಿಕೆ ಸಹಾಯ ಮಾಡುತ್ತದಂತೆ.

ರುಚಿರಾ ಗುಪ್ತಾ

ಒಬ್ಬ ಆ್ಯಕ್ಟಿವಿಸ್ಟ್ ಆಗಿ ನಾನು ಕಂಡಿರುವ ವಸ್ತುಸ್ಥಿತಿ ಸಂಪೂರ್ಣವಾಗಿ ಬೇರೆಯೇ. ಜಾತಿ ಮತ್ತು ಅಂತರ-ಪೀಳಿಗೆಯ ಸೂಳೆಗಾರಿಕೆಯ ಕೂಪಗಳಲ್ಲಿ ಸಿಕ್ಕಿಬಿದ್ದಿರುವ ಹುಡುಗಿಯರನ್ನು ಮತ್ತು ಹೆಂಗಸರನ್ನು ಸಂಘಟಿಸುವ ನನ್ನ ವೃತ್ತಿಯಲ್ಲಿ ಅವರು ಕನಿಷ್ಟ ಅಗತ್ಯಗಳನ್ನೂ ಪೂರೈಸಿಕೊಳ್ಳಲು ಒದ್ದಾಡುವುದನ್ನು ಕಂಡಿದ್ದೇನೆ. ಹೊಟ್ಟೆ, ಬಟ್ಟೆ, ಹಿಂಸೆಯಿಂದ ರಕ್ಷಣೆ ಇತ್ಯಾದಿಗಳೆಲ್ಲವೂ ಅವರಿಗೆ ಹರಸಾಹಸವೇ. ಸಾಲದ ಹಿಡಿತದಲ್ಲಿ ಒದ್ದಾಡುತ್ತಲೇ ಪ್ರಾಣ ಬಿಟ್ಟಿರುವುದನ್ನೂ ನೋಡಿದ್ದೇನೆ. ಸೂಳೆಮನೆಗಳನ್ನು ನಡೆಸುವವರು ಮತ್ತು `ಸರಕು’ ಒದಗಿಸುವ ದಲ್ಲಾಳಿಗಳು ಇಬ್ಬರೂ ಲಾಭದ ಹಣದಲ್ಲಿ ಉರುಳಾಡುತ್ತಿರುವುದನ್ನು ಗಮನಿಸಿದ್ದೇನೆ. ಅಂತಹ ಮನೆಗಳು ಬೇಕಾದಾಗ ಹುಡುಗಿಯರನ್ನು ಮತ್ತು ಹೆಂಗಸರನ್ನು ಅಗಿದು ನುಂಗಿದಷ್ಟೇ ಹಾಯಾಗಿ ಬೇಡವಾದಾಗ ಥುಪ್ಪನೆ ಉಗಿದಿರುವುದನ್ನೂ ಕಂಡಿದ್ದೇನೆ. `ಮುದುಕಿ’ಯಾಗಿದ್ದಕ್ಕೆ ಸೂಳೆಮನೆಗಳಿಂದ ಓಡಿಸಲ್ಪಟ್ಟ ಮೂವತ್ತರ ಹರೆಯದ ಹೆಂಗಸರನ್ನು ಭೇಟಿಯಾಗಿದ್ದೇನೆ. ಗಿರಾಕಿಗಳಿಗೆ ಸದಾಕಾಲ ಹೊಸದಾದ ಹಸನಾದ ಮಾಲೇ ಬೇಕಂತೆ.

ಸೂಳೆಗಾರಿಕೆಗೆ ಎಳೆದು ತರಲ್ಪಡುವ ಹುಡುಗಿಯ ಸರಾಸರಿ ವಯಸ್ಸು ಒಂಬತ್ತರಿಂದ ಹದಿಮೂರು ವರ್ಷ. ಇನ್ನೂ ಮುಟ್ಟಾಗಿಲ್ಲದ ಎಳೆಯ ಹುಡುಗಿಯರನ್ನು ದೈಹಿಕವಾಗಿ ಪಳಗಿಸಿ ಉಪಯೋಗಕ್ಕೆ ಬರುವಂತೆ ಮಾಡಲು ಐಸ್ ಬಳಸಲಾಗುತ್ತದೆ. ಈ `ಪಳಗಿಸುವ’ ಪ್ರಕ್ರಿಯೆಯಲ್ಲಿ ಅವರನ್ನು ಹೊಡೆದು ಬಡಿದು, ಉಪವಾಸ ಕೆಡವಿ, ಮಾದಕ ದ್ರವ್ಯಗಳನ್ನು ಕೊಟ್ಟು ಮತ್ತು ಬರಿಸಿ, ಜ್ಞಾನ ತಪ್ಪಿಸಿ ಹೀಗೇ ಏನೇನೋ. ಪೂರ್ತಿಯಾಗಿ ಪಳಗುವ ಹೊತ್ತಿಗೆ ಆ ಎಳೆಯ ಹುಡುಗಿ ತನ್ನ ತಲೆ ಹಿಡಿದುಕೊಟ್ಟವನನ್ನು `ಪಾಪಾ’ ಎಂದೂ, ಸೂಳೆಮನೆಯ ಮ್ಯಾನೇಜರಿಣಿಯನ್ನು `ಮಾ’ ಅಥವಾ `ಮಾಸಿ’ ಅಂತಲೋ ಕರೆಯುವುದಕ್ಕೆ ಒಗ್ಗಿಕೊಂಡಿರುತ್ತಾಳೆ. ಜೊತೆಗೆ ತನ್ನ ಅಪ್ಪನಾದವನು ತೆಗೆದುಕೊಂಡಿರುವ ಐದೋ ಹತ್ತೋ ಸಾವಿರದ ಸಾಲವನ್ನು ತಾನು ಇಷ್ಟಿಷ್ಟೇ ತೀರಿಸುತ್ತಿದ್ದೇನೆ ಎಂದು ಸಹ ನಂಬಿರುತ್ತಾಳೆ.

ಸುಕನ್ಯಾ ಕನಾರಳ್ಳಿ

ಈ ಎಳೆಯ ದೇಹಗಳ ಮೇಲೆ ಪ್ರತಿ ರಾತ್ರಿ ಸುಮಾರು ಎಂಟರಿಂದ ಹತ್ತು ಗಿರಾಕಿಗಳು ಅತ್ಯಾಚಾರ ನಡೆಸುತ್ತಾರೆ. ಹಗಲೋ ರಾತ್ರಿಯೋ, ಇಷ್ಟವಿದೆಯೋ ಇಲ್ಲವೋ, ಬಂದ ಗಿರಾಕಿಗಳನ್ನು ಹಿಂದೆ ಕಳುಹಿಸುವಂತಿಲ್ಲ. ಅಷ್ಟೇ ಅಲ್ಲ, ತಮಗೂ ಮತ್ತು ಸ್ವಲ್ಪ ವಯಸ್ಸಾದ ಸೂಳೆಯರಿಗೂ ಸೇರಿಸಿದಂತೆ ಗಿರಾಕಿಗಳಿಗೆ ಗಾಳ ಹಾಕಲು ಬೀದಿಯಲ್ಲಿ ಗಂಟೆಗಟ್ಟಲೆ ನಿಲ್ಲಬೇಕು. ಸಹಜವಾಗಿಯೇ ಈ ಹುಡುಗಿಯರು ನಿದ್ದೆಯ ಕೊರತೆಯಿಂದ, ನಿದ್ದೆಗೇಡಿತನದಿಂದ, ಜುಮ್ಮನೆ ನೋಯುವ ಕಾಲುಗಳಿಂದ ನರಳುತ್ತಿರುತ್ತಾರೆ.

ಈ ನನ್ನ ಹಾದಿಯಲ್ಲಿ ಏನೆಲ್ಲಾ ಕಂಡಾಗಿದೆ! ತುಂಡಾದ ದೇಹಗಳು, ಯೋನಿಯೊಳಗೆ ತುರುಕಲ್ಪಟ್ಟ ಬಾಟಲಿಗಳು, ಎದೆಯ ಮೇಲೆ ಸಿಗರೇಟಿನಿಂದ ಸುಟ್ಟ ಗುರುತುಗಳು, ಮತ್ತೆ ಮತ್ತೆ ಮುರಿದ ಮೂಳೆಗಳು, ಆತ್ಮಹತ್ಯೆಗಳು, ಕೊಲೆಗಳು? ಈ ಹುಡುಗಿಯರು ಅಳುತ್ತಿದ್ದರು ಅಂತಲೋ ಅಥವಾ ಉಳಿದ ಹುಡುಗಿಯರೊಂದಿಗೆ ಮಾತಾಡುತ್ತಿದ್ದರು ಅಂತಲೋ, ಅಲ್ಲಿಯ ತಲೆಹಿಡುಕರು ಮತ್ತು ಮ್ಯಾನೇಜರಿಣಿಯರು ಅವರುಗಳನ್ನು ಸಿಕ್ಕಾಪಟ್ಟೆ ಥಳಿಸಿದ್ದನ್ನು ನೋಡಿದ್ದೇನೆ. ತನ್ನ ವೈರಿಯೊಂದಿಗೇ ಸಹಾನುಭೂತಿಯನ್ನು ಬೆಳೆಸಿಕೊಳ್ಳುವುದನ್ನು ಸ್ಟಾಕ್ಹೋಮ್ ಸಿಂಡ್ರೋಮ್ (Stockholm Syndrome) ಎಂದು ಕರೆಯುತ್ತಾರೆ. ಹಲವು ಹುಡುಗಿಯರು ಅದಕ್ಕೆ ಪಕ್ಕಾಗಿ ತಮ್ಮ ತಲೆಹಿಡುಕರು ತೋರಿಸುವ ಅಲ್ಪಸ್ವಲ್ಪ ಕರುಣೆಗೂ ಸಹ ಕೃತಜ್ಞರಾಗಿರುವುದನ್ನು ಕಂಡಿದ್ದೇನೆ.

ಹಿಂಸೆ ಅದೆಷ್ಟರಮಟ್ಟಿಗೆ ಸಹಜವಾಗಿಬಿಟ್ಟಿದೆಯೆಂದರೆ ಹಲವರು ತಾವು ಅನುಭವಿಸಿದ್ದು ಹಿಂಸೆ ಎನ್ನುವುದನ್ನೂ ಅಲ್ಲಗಳೆಯುತ್ತಾರೆ. ಗಿರಾಕಿಗಳು ಕೊಡುವ ಹಿಂಸೆ ಹಿಂಸೆಯಲ್ಲವಂತೆ, ಯಾಕೆಂದರೆ ಅದಕ್ಕೆ ದುಡ್ಡು ಕೊಟ್ಟಿರುತ್ತಾರಂತೆ! ಇತ್ತೀಚಿನ ಸಂಶೋಧನೆಯ ಪ್ರಕಾರ ಈ ಹೆಂಗಸರು ತಮ್ಮ ದೇಹಗಳ ಮೇಲೆ ಮತ್ತೆ ಮತ್ತೆ ನಡೆಯುವ ದಾಳಿಯಿಂದ ಅನುಭವಿಸುವ ಸಾಮಾಜಿಕ-ಮಾನಸಿಕ ಹಾನಿ ಯುದ್ಧಹಿಂಸೆಗೆ ಪದೇಪದೇ ತುತ್ತಾಗುವವರ ಆಘಾತಕ್ಕಿಂತ ದೊಡ್ಡದು.

ಕರ್ತೃತ್ವ ಅಥವಾ ಸ್ವಶಕ್ತಿ (agency) ಎನ್ನುವುದು ತನ್ನ ಬದುಕಿಗೆ ತಾನೇ ಜವಾಬ್ದಾರರಾಗಿರುವ ಅಥವಾ ತನಗೆ ಬೇಕಾದಂತೆ ಕೆಲಮಟ್ಟಿಗಾದರೂ ಬದುಕುವ ಶಕ್ತಿ ಎಂದಾದಲ್ಲಿ ನಾನಂತೂ ಅವರ ಬದುಕುಗಳಲ್ಲಿ ಅದನ್ನು ಕಂಡಿದ್ದೇ ಕಮ್ಮಿ!
ಆದರೂ ಸಹ ಕೆಲವು ಜಾಣರು (ಮತ್ತು ಜಾಣೆಯರೂ ಸಹ) ಸೂಳೆಗಾರಿಕೆಯಲ್ಲಿ ತಪ್ಪೇನಿದೆ, ಅದೂ ಸಹ ಒಂದು ವೃತ್ತಿಯಲ್ಲವೆ ಎಂದು ವಾದಿಸುವುದನ್ನು ಕೇಳಿದ್ದೇನೆ. ಅವರ ಪ್ರಕಾರ ಅದು ಹೆಂಗಸರನ್ನು ಸಶಕ್ತರಾಗಿಸುತ್ತದೆ. ಅದರಲ್ಲಿ ಹೇಯವಾದದ್ದೇನೂ ಇಲ್ಲ. ಬದುಕಿನ ಆಯ್ಕೆಗಳಲ್ಲಿ ಸಮಾನತೆ ಎಲ್ಲಿದೆ? ಇದೂ ಹಾಗೆಯೇ ಒಂದು. ಕೆಲವರು ಇದನ್ನೂ ಒಂದು ವೃತ್ತಿ ಎಂದೇ ಪರಿಗಣಿಸಿ ಸೂಳೆಯರನ್ನು `ಲೈಂಗಿಕ ಕಾರ್ಯಕರ್ತರು’ ಎಂದು ಕರೆಯಬೇಕು ಎಂದು ಆಗ್ರಹಿಸುತ್ತಾರೆ.

ಜಾತಿ ಮತ್ತು ಅಂತರ-ಪೀಳಿಗೆಯ ಸೂಳೆಗಾರಿಕೆಯ ಕೂಪಗಳಲ್ಲಿ ಸಿಕ್ಕಿಬಿದ್ದಿರುವ ಹುಡುಗಿಯರನ್ನು ಮತ್ತು ಹೆಂಗಸರನ್ನು ಸಂಘಟಿಸುವ ನನ್ನ ವೃತ್ತಿಯಲ್ಲಿ ಅವರು ಕನಿಷ್ಟ ಅಗತ್ಯಗಳನ್ನೂ ಪೂರೈಸಿಕೊಳ್ಳಲು ಒದ್ದಾಡುವುದನ್ನು ಕಂಡಿದ್ದೇನೆ. ಹೊಟ್ಟೆ, ಬಟ್ಟೆ, ಹಿಂಸೆಯಿಂದ ರಕ್ಷಣೆ ಇತ್ಯಾದಿಗಳೆಲ್ಲವೂ ಅವರಿಗೆ ಹರಸಾಹಸವೇ. ಸಾಲದ ಹಿಡಿತದಲ್ಲಿ ಒದ್ದಾಡುತ್ತಲೇ ಪ್ರಾಣ ಬಿಟ್ಟಿರುವುದನ್ನೂ ನೋಡಿದ್ದೇನೆ.

ಈ ಜಾಣಜಾಣೆಯರು ಹೀಗೆಲ್ಲಾ ಹೇಳುವ ಮೂಲಕ ಯಥಾಸ್ಥಿತಿ ಮುಂದುವರೆಯಲಿ ಎಂದು ಬಯಸುತ್ತಾರೋ ಅಥವಾ ಯಾವುದೇ ರೀತಿಯ ಸಾಮಾಜಿಕ ಬದಲಾವಣೆಯಲ್ಲಿ ನಂಬಿಕೆಯನ್ನೇ ಕಳೆದುಕೊಂಡಿದ್ದಾರೋ ನನಗೆ ಅರ್ಥವಾಗುವುದಿಲ್ಲ. ಸೂಳೆಗಾರಿಕೆ ಅನಿವಾರ್ಯ ಎನ್ನುವುದಾದರೆ ಹೆಣ್ಣಿನ ಕೀಳು ಸ್ಥಾನಮಾನಗಳೂ ಸಹ ಅನಿವಾರ್ಯ ಎಂದು ಹೇಳುತ್ತಿದ್ದಾರೆಯೆ? ಸೂಳೆಗಾರಿಕೆಗೆ ಹೆಂಗಸರೇ ಕಾರಣ ಎಂದು ವಾದಿಸುವಾಗ ಹೆಂಗಸರು ತಮ್ಮೊಂದಿಗೆ ತಾವು ಸೂಳೆಗಾರಿಕೆಯಲ್ಲಿ ತೊಡಗಿಕೊಂಡಿರುತ್ತಾರೆ ಎಂದರ್ಥವೆ? ಅದರಲ್ಲಿ ಗಂಡಸರ ಪಾತ್ರವೇಕೆ ಅವರ ಕಣ್ಣಿಗೆ ಬೀಳುವುದಿಲ್ಲ? ಯಾಕೆಂದರೆ ಗಂಡಸರಿಗೆ ವ್ಯವಸ್ಥೆಯಿಂದ ದತ್ತವಾಗಿ ಬಂದಿರುವ ಶಕ್ತಿ ಮತ್ತು ಸೌಲಭ್ಯಗಳನ್ನು ಪ್ರಶ್ನಿಸುವ ಗೋಜೂ ಅವರಿಗೆ ಬೇಡ. ಅಂದರೆ ಗಂಡಸರಿಗೆ ವ್ಯವಸ್ಥೆಯ ಮೂಲಕವೇ ಶಕ್ತಿ ಮತ್ತು ಸವಲತ್ತುಗಳು ಇರುವ ತನಕ ಹೆಂಗಸರು ತಮ್ಮನ್ನು ಆ ವ್ಯವಸ್ಥೆ ಎಷ್ಟೇ ಶೋಷಿಸಿದರೂ ಸಹ ಅದರಲ್ಲೇ ಲಭ್ಯವಿರುವ ಆಯ್ಕೆಗಳಲ್ಲಿ ಹೇಗೋ agency ಯನ್ನು ಪಡೆದುಕೊಳ್ಳಬೇಕು!
* * *
ಈ ಸಂದರ್ಭದಲ್ಲಿಯೇ ರಕ್ಷಂದ ನನಗೆ ಈ ಪುಸ್ತಕದ ಹೊಳಹನ್ನು ಒದಗಿಸಿದ್ದು. ಸೂಳೆಗಾರಿಕೆ ಮತ್ತು ಹೆಣ್ಣಿನ ಕೀಳು ಸ್ಥಾನಮಾನ ಹೇಗೆ ಪರಸ್ಪರ ತಳುಕು ಹಾಕಿಕೊಂಡಿವೆ ಎನ್ನುವುದರ ಬಗ್ಗೆ ಒಳನೋಟಗಳನ್ನು ನೀಡುವ ಕಥಾಸಂಕಲನ ತಂದರೆ ಹೇಗೆ? ಹೋಳಾಗುವ ಮುಂಚೆಯ ಭಾರತದ ಹಲವಾರು ಪ್ರಗತಿಪರ ಬರಹಗಾರರು ಅಂತಹ ಕಥೆಗಳನ್ನು ಬರೆದದ್ದಿದೆಯಲ್ಲ? ಅವಳೇ ಸ್ವತಃ ಕೆಲವು ಕಥೆಗಳನ್ನು ಒಟ್ಟುಹಾಕಿ ಅನುವಾದ ಮಾಡಿಸುವ ಹೊಣೆಯನ್ನೂ ಹೊತ್ತಾಗ ಈ ಪುಸ್ತಕಕ್ಕೆ ಒಂದು ಸ್ವತಂತ್ರ ಅಸ್ತಿತ್ವವೇ ಬಂದಂತಿತ್ತು. ಅದು ಭಾರತದ ನೆಲೆಯಲ್ಲಿ ಹುಟ್ಟಿಕೊಂಡ ಕಥೆಗಳಿಗೆ ಪ್ರಾಮುಖ್ಯತೆಯನ್ನು ಬೇಡಿತು. ನಾವು ಪ್ರಾರಂಭಕ್ಕೆ ಬೆಂಗಾಲಿ ಮತ್ತು ಹಿಂದೂಸ್ತಾನಿ ಕಥೆಗಳನ್ನು ಹುಡುಕಿದೆವು. ನಡೆದಂತೆ ಹಾದಿ ತಾನಾಗಿಯೇ ಬಿಚ್ಚಿ ಬೆಳೆಯಿತು. ಯಾರೋ ಒಬ್ಬರು ಹಿಂದಿಯಲ್ಲಿ ಒಂದು ಅದ್ಭುತ ಕಥೆ ಇದೆ ನೋಡಿ ಎಂದರು. ಇನ್ಯಾರೋ ಇಂಗ್ಲಿಷಿನಲ್ಲಿರುವ ಆ ಸೂಕ್ಷ್ಮವಾದ ಕಥೆಯನ್ನು ಗಮನಿಸಬಹುದಲ್ಲ ಎಂದರು. ಹತಾಶೆಯ ಅಂಚಿಗೆ ಒಯ್ಯುವ ಆ ಮರಾಠಿ ಕಥೆ? ಮನಸ್ಸಿಗೆ ಬರೆ ಹಾಕಿದಂತೆ ಬೆಚ್ಚಿಬೀಳಿಸುವ ಈ ಮಲೆಯಾಳಂ ಕಥೆ? ಎದೆ ಒಡೆಸುವ ಆ ತಮಿಳು ಕಥೆ? ಕರಗಿ ಕಣ್ಣೀರು ಬರಿಸುವ ಈ ಕನ್ನಡ ಕಥೆ? ನವಿರಾದ ಆ ಕೊಂಕಣಿ ಕಥೆ? ಮನಸ್ಸನ್ನು ತಟ್ಟುವ ಈ ಅಸ್ಸಾಮಿ ಕಥೆ? ವಾಸ್ತವವನ್ನು ದಿಟ್ಟವಾಗಿ ತೆರೆದಿಡುವ ಆ ಪಂಜಾಬಿ ಕಥೆ? ಸವಾಲೆಸೆಯುವ ಈ ಒರಿಯಾ ಕಥೆ? ? ಹೀಗೆ ಈ ಸಂಕಲನದಲ್ಲಿ ಈಗ ಹನ್ನೆರಡು ಭಾಷೆಗಳಿಂದ ಆಯ್ದ ಕಥೆಗಳಿವೆ.

ಈ ಎಲ್ಲ ಕಥೆಗಳು ಉಪಖಂಡದ ಉದ್ದಗಲಕ್ಕೂ ಹೆಣ್ಣಿಗಿರುವ ಕೀಳು ಸ್ಥಾನಮಾನದ ಸಾಮಾನ್ಯ ಅಂಶಗಳನ್ನು ಎತ್ತಿ ತೋರಿಸುತ್ತವೆ. ತುಳಿಯ ಲ್ಪಟ್ಟವರನ್ನು ಸದಾ ಕಾಡುವ ಕೀಳು ಆತ್ಮಗೌರವ, ಅಪೂರ್ಣತೆ, ಖಾಲಿತನ, ತನ್ನ ಬಗ್ಗೆಯೇ ಸಂದೇಹ ಮತ್ತು ದ್ವೇಷ ಎಲ್ಲದರ ಮೇಲೆ ಬೆಳಕು ಚೆಲ್ಲುತ್ತವೆ. ಹೆಣ್ಣಿಗೆ ಸಂಬಂಧಪಟ್ಟಂತೆ agencyಎಂಬ ಪರಿಕಲ್ಪನೆಯಲ್ಲೇ ಇರುವ ಮಿತಿಗಳನ್ನು ಅನ್ವೇಷಿಸುತ್ತವೆ. ಅವಳಿಗಿರುವ agency ವ್ಯಕ್ತವಾಗುವುದು ತನ್ನನ್ನು ಮತ್ತು ತನ್ನಂತಿರುವವರನ್ನು ಧ್ವಂಸ ಮಾಡುವ ಶಕ್ತಿಯ ಮೂಲಕವೇ. ಪ್ರೇಮಚಂದರ ನಾಯಕಿ ಗಂಡನನ್ನು ಅವಹೇಳನಕ್ಕೆ ಗುರಿಮಾಡಿ ಸೇಡುತೀರಿಸಿಕೊಳ್ಳಲೆಂದೇ ಸೂಳೆಗಾರಿಕೆ ಮಾಡುತ್ತಾಳೆ. ಮಾಂಟೋನ ನಾಯಕಿ ತಾನು ಸಿಕ್ಕಿಬಿದ್ದು ಶಿಕ್ಷೆಗೊಳಗಾಗುತ್ತೇನೆಂದು ಗೊತ್ತಿದ್ದರೂ ಸಹ ತನ್ನ ತಲೆಹಿಡುಕನನ್ನು ಸಾಯಿಸುತ್ತಾಳೆ. ಇಂದಿರಾ ಗೋಸ್ವಾಮಿಯ ನಾಯಕಿ ತನ್ನ ಪ್ರೇಮಿಯ ಶವಪೆಟ್ಟಿಗೆಯಿಂದ ಬೆತ್ತಲೆಯಾಗಿ ಎದ್ದು ಹೊರನಡೆಯುತ್ತಾಳೆ. ಅಮೃತಾ ಪ್ರೀತಮರ ಕಥೆಯಲ್ಲಿ ಬರುವ `ಇಟ್ಟುಕೊಂಡವಳು’ ತನ್ನ ಪ್ರೇಮಿಯ ಮಗನ ಮದುವೆಯಲ್ಲಿ ಅವನ ಹೆಂಡತಿ ಮಕ್ಕಳೆಲ್ಲರ ಎದುರು ಹಾಡುತ್ತಾಳೆ.

ಪ್ರತಿಯೊಂದು ಕಥೆಯೂ ಸೂಳೆಯಾಗಲ್ಪಟ್ಟ ಅಥವಾ ಹೊರಗುಳಿಯಲ್ಪಟ್ಟ ಹೆಂಗಸು ಮದುವೆಯ ಒಳಗೆ ಮತ್ತು ಹೊರಗೆ ಆಯ್ಕೆಗಳಿಲ್ಲದ ಹಾದಿಯಲ್ಲಿಯೇ ಸಾಗಬೇಕಾದ ಅನಿವಾರ್ಯವನ್ನು ಬಿಚ್ಚಿಡುತ್ತವೆ. ಸೂಳೆಗಾರಿಕೆಯ ಘೋರ ಮತ್ತು ಕ್ರೌರ್ಯಗಳ ಅನಾವರಣ ಮಾಡುತ್ತಲೇ ಮದುವೆಯೆಂಬ ಸಾಂಸ್ಕೃತಿಕ ಜಾತಿವ್ಯವಸ್ಥೆ ಹೇಗೆ ಹೆಣ್ಣನ್ನು ಅಧೀನಳಾಗಿಯೇ ಉಳಿಸುವ ಹುನ್ನಾರ ಮಾಡುತ್ತದೆ ಎಂದೂ ತೋರಿಸುತ್ತದೆ.
ಈ ಕಥೆಗಳು ಜಾತಿ ಅಸಮಾನತೆಯನ್ನೂ ಸಹ ಸೂಕ್ಷ್ಮವಾದ ರೀತಿಯಲ್ಲಿ ತೆರೆದು ತೋರಿಸುವುದು ಸಹಜವೇ. ದಲಿತ ಲೇಖಕ ಬಾಬೂರಾವ್ ಬಾಗೂಲರು ತಮ್ಮ ಕಥೆಯಲ್ಲಿ ಕೆಳಜಾತಿಯ ಹೆಂಗಸೊಬ್ಬಳು ತನ್ನ ಕಾಯಿಲೆ ಬಿದ್ದಿರುವ ಮಗನನ್ನು ನೋಡಲೆಂದು ಹಣ ಹೊಂದಿಸುವ ಪ್ರಯತ್ನದಲ್ಲಿ ಅಂಗಡಿದಾರನೊಬ್ಬನ ಶೋಷಣೆಗೆ ಬಲಿಯಾಗುವ ಅಮಾನವೀಯ ರೀತಿಯನ್ನು ಚಿತ್ರಿಸಿದರೆ, ಗೋಸ್ವಾಮಿಯ ನಾಯಕಿ ತನ್ನ ಮೇಲ್ಜಾತಿ ಪ್ರೇಮಿಯೊಬ್ಬ ನೀಡಿರುವ ಮದುವೆಯ ಭರವಸೆಯನ್ನು ನೆಚ್ಚಿಕೊಂಡು ಹೇಯ ಬಡತನದಲ್ಲಿ ಬದುಕುತ್ತಿರುತ್ತಾಳೆ. ಅಮೃತಾ ಪ್ರೀತಮರ ನಾಯಕಿ ಅಧಿಕೃತವಾಗಿ Denotified Criminal Tribe ಆದ ಕಂಜರ್ ಬುಡಕಟ್ಟಿನಿಂದ ಬಂದವಳು. ವಿಭೂತಿಭೂಷಣ್ ಬಂದ್ಯೋಪಾಧ್ಯಾಯರ ಕಥೆ ಸೂಳೆಯಾಗಿಸಲ್ಪಟ್ಟ ಒಬ್ಬ ಕೆಳಜಾತಿಯ ಹೆಂಗಸು ಮತ್ತು ಎಳೆಯ ಬ್ರಾಹ್ಮಣ ಹುಡುಗನೊಬ್ಬನ ನಡುವಿನ ಬಾಂಧವ್ಯವನ್ನು ಬಿಚ್ಚಿಡುತ್ತದೆ. ಕಮಲೇಶ್ವರರ ಕಥಾನಾಯಕಿ ಕೆಳಜಾತಿಗೆ ಸೇರಿದವಳು, ಕಾಯಿಲೆಯಿಂದ ದೇಹ ನಾರುತ್ತಿದ್ದರೂ ಸಹ ಶೋಷಿಸಲ್ಪಡುತ್ತಿರುವವಳು.

ಈ ಘೋರ ಶೋಷಣೆಯ ಕಥನದಲ್ಲಿ ಗಂಡಸರೂ ಇರಲೇಬೇಕಲ್ಲ? ಅವರು ಹೆಚ್ಚಿನಂಶ ಕೊಳ್ಳೆಕೋರರು, ಧೀ ಎಂದು ನುಗ್ಗಿ ತಮಗೆ ಬೇಕಾದ್ದನ್ನು ಪಡೆದುಕೊಳ್ಳುವ ಹಕ್ಕುಳ್ಳವರು, ಸರಿತಪ್ಪುಗಳ ತೀರ್ಪುಗಾರರು, ಹಾಗೂ ಮರ್ಯಾದೆ-ಅವಮರ್ಯಾದೆಗಳ ಗೀಳಿನಲ್ಲಿ ಬಿದ್ದವರು. ಕೆಲವು ಕಥೆಗಳಲ್ಲಿ ಬರುವಂತೆ ಹೆಣ್ಣಿನ ಸೂಳೆಗಾರಿಕೆಯ ಹಣದಲ್ಲಿ ತಮ್ಮ ಹೊಟ್ಟೆಯನ್ನು ಹೊರೆದುಕೊಂಡರೆ ಇನ್ನೂ ಕೆಲವಲ್ಲಿ ಬದುಕುಳಿಯಲು ಅವಳ ಸೂಳೆಗಾರಿಕೆಯನ್ನೇ ಅವಲಂಬಿಸಿದವರು.

ಈ ಸಂಕಲನದಲ್ಲಿ ಬರುವ ಇಪ್ಪತ್ತೊಂದು ಕಥೆಗಳು ಅವಳನ್ನು ಶೋಷಿಸುವ ವ್ಯವಸ್ಥೆಯ ಹಲವು ಪದರಗಳನ್ನು ಸೂಕ್ಷ್ಮವಾಗಿ ಬಿಚ್ಚಿಡುತ್ತವೆ. ಅಲ್ಲಿ ಗಿರಾಕಿಗಳು, ತಲೆಹಿಡುಕರು, ಸೂಳೆಮನೆಗಳನ್ನು ನಡೆಸುವವರು, ಪ್ರೇಮಿಗಳು, ಗಂಡಂದಿರು, ಸೂಳೆಯನ್ನು ನೇಮಿಸುವವರು ಇತ್ಯಾದಿ ಹಲವಾರು ಶಕ್ತಿಗಳಿವೆ.

‘ಸೂಳೆ’ ಯಿಂದ’ ಲೈಂಗಿಕ ಕಾರ್ಯಕರ್ತೆ’ ಎಂದು ಪದ ಬದಲಾಯಿಸಿದ ಮಾತ್ರಕ್ಕೆ ದೇಹದ ಮೇಲೆ ನಡೆಯುವ ಅತ್ಯಾಚಾರದ ಘೋರವೇನೂ ಕಡಿಮೆಯಾಗಲಾರದು. ಯಾವ ಕಾಯಿದೆಯೂ ಸಹ ದೇಹಪ್ರವೇಶದ ಹಿಂಸೆ ಮತ್ತು ಆಘಾತವನ್ನು ದೂರಮಾಡಲಾಗದು. ಸೂಳೆಗಾರಿಕೆ ಎನ್ನುವುದು ಮೂಲದಲ್ಲಿಯೇ ಶೋಷಣೆಯ ಪ್ರವೃತ್ತಿಯನ್ನು ಹೊಂದಿರುವಂತದ್ದೇ ವಿನಾ ಅದೊಂದು ವೃತ್ತಿ ಅಲ್ಲ ಎನ್ನುವ ಸತ್ಯವನ್ನು ಅಲ್ಲಗಳೆಯಲಾಗುವುದಿಲ್ಲ. ಒಬ್ಬ ಸ್ತ್ರೀವಾದಿಯಾಗಿ ಮತ್ತು ಸಾಮಾಜಿಕ ನ್ಯಾಯಕ್ಕೆ ಹೋರಾಡುತ್ತಿರುವ ಕಾರ್ಯಕರ್ತೆಯಾಗಿ ಇಲ್ಲಿಯ ಕಥೆಗಳು ಮತ್ತು ನಾನು ಭೇಟಿಯಾಗಿರುವ ಹೆಂಗಸರ ಬದುಕಿನ ಅನುಭವಗಳು ಹೆಣ್ಣು ತಾನಾಗಿಯೇ ಸೂಳೆಯಾಗುವುದಿಲ್ಲ, ಬದಲಾಗಿ ಸೂಳೆಯಾಗಿಸಲ್ಪಡುತ್ತಾಳೆ ಎಂಬ ನನ್ನ ನಂಬಿಕೆಯನ್ನು ಬಲಪಡಿಸಿವೆ. ಈ ಸಂಕಲನ ಹೆಣ್ಣಿನ ಶೋಷಣೆಯನ್ನು ಸಮರ್ಥಿಸಿಕೊಳ್ಳುವ ಹುನ್ನಾರಗಳನ್ನು ಪ್ರಶ್ನಿಸುವತ್ತ ನಾವು ನಡೆಸಿದ ಒಂದು ಪ್ರಯತ್ನ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...