Homeಕರ್ನಾಟಕಬಸವ ಜಯಂತಿ; ಇವ ನಮ್ಮವ ಇವ ನಮ್ಮವನೆಂದೆನ್ನುತ್ತಿಲ್ಲ ಯಾಕೆ?

ಬಸವ ಜಯಂತಿ; ಇವ ನಮ್ಮವ ಇವ ನಮ್ಮವನೆಂದೆನ್ನುತ್ತಿಲ್ಲ ಯಾಕೆ?

- Advertisement -
- Advertisement -

ಬಸವಣ್ಣನವರ “ಇವನಾರವ ಇವನಾರವ ಇವನಾರವನೆಂದೆನಿಸದಿರಯ್ಯಾ. ಇವ ನಮ್ಮವ ಇವ ನಮ್ಮವ ಇವನಮ್ಮವನೆಂದಿನಿಸಯ್ಯಾ. ಕೂಡಲ ಸಂಗಮದೇವಾ, ನಿಮ್ಮ ಮನೆಯ ಮಗನೆಂದೆನಿಸಯ್ಯಾ” ಎನ್ನುವ ವಚನವನ್ನು ಸಾಮೂಹಿಕ ಬದುಕಿನ ಮಹತ್ವವನ್ನು ಒತ್ತಿ ಹೇಳುವ ಯಾವುದೇ ಪ್ರತಿಷ್ಠಿತ ಸಮಾರಂಭಗಳಲ್ಲಿ, ಅದರಲ್ಲೂ ಶರಣ ಸಂಸ್ಕೃತಿ ಮತ್ತು ವಚನ ಸಾಹಿತ್ಯ ಕುರಿತ ಕಾರ್ಯಕ್ರಮಗಳಲ್ಲಿ ಉದಾಹರಿಸುವುದು ಸರ್ವೇಸಾಮಾನ್ಯವಾಗಿಬಿಟ್ಟಿದೆ. ರಾಜಕೀಯಪೋಷಿತ ಅಸಹಿಷ್ಣುತೆ ಮತ್ತು ಕೋಮು ಸಂಘರ್ಷಗಳ ಇವತ್ತಿನ ಸಂದರ್ಭದಲ್ಲಿ ಈ ವಚನದ ಸಾಲುಗಳು ಗಂಭೀರತೆಯನ್ನು ಯಾರಾದರೂ ಪರಿಗಣಿಸುತ್ತಿದ್ದಾರೆಯೇ ಎಂಬ ಅನುಮಾನ ಮೂಡುತ್ತದೆ. ಈ ವಚನಗಳನ್ನು ಉದಾಹರಿಸುವ ಜನರಾದರೂ “ಇವ ನಮ್ಮವ ಇವ ನಮ್ಮವ ಎಂದೆನಿಸಿದೆಯಯ್ಯಾ, ಅದಕ್ಕಾಗಿ ಬಸವಣ್ಣಾ ನಾವು ನಿನಗೆ ಕೃತಜ್ಞ” ಎಂದು ಹೇಳುವ ಸ್ಥಿತಿಯನ್ನು ಇವತ್ತಿಗೂ ತಂದುಕೊಂಡಿಲ್ಲ. ಇದು ಕೇವಲ ಸಾಮಾನ್ಯ ಭಾಷಣಕಾರರ ಮನಃಸ್ಥಿತಿಯಷ್ಟೇ ಅಲ್ಲ, ಬಸವಣ್ಣ ಮತ್ತು ಶರಣ ಸಂಸ್ಕೃತಿಗಳ ವಾರಸುದಾರರೆನ್ನುವ ಬಹುತೇಕ ಜನರ ಮತ್ತು ಸಂಘ-ಸಂಸ್ಥೆಗಳ ಕತೆಯೂ ಆಗಿದೆ.

“ಎನಿಸು ಕಾಲ ಕಲ್ಲು ನೀರೊಳಗಿದ್ದರೇನು, ನೆನೆದು ಮೃದುವಾಗಬಲ್ಲದೆ?” ಎನ್ನುವಂತೆ, ಹೇಳುವ ಕೇಳುವ ಮತ್ತು ಬರೆಯುವ ಬಹುತೇಕ ಜನರ ಮನಸ್ಸುಗಳೂ ಸಹ ನೀರೊಳಗಿನ ಕಲ್ಲಾಗಿವೆಯೇ ಹೊರತು, ಎಲ್ಲರೂ ನಮ್ಮವರೆನ್ನುವ ಭಾವನೆ ಸಾಕಾರಗೊಳ್ಳುತ್ತಿಲ್ಲ. ಅವರು ಅವರೇ, ಇವರು ಇವರೇ, ನಮ್ಮವರು ನಮ್ಮವರೇ ಎನ್ನುವುದು ಅದೆಷ್ಟು ಗಟ್ಟಿಯಾಗುತ್ತಿದೆ ಎನ್ನುವುದಕ್ಕೆ ಇವತ್ತಿನ ಜಾತಿ ಮತ್ತು ಧರ್ಮಗಳ ಧ್ರುವೀಕರಣ ಸಾಕ್ಷಿಯಾಗುತ್ತಿದೆ. ಶ್ರೇಷ್ಠತೆ, ಅಸ್ಮಿತೆ ಮುಂತಾದ ಕಾರಣಗಳನ್ನು ಮುಂದಿಟ್ಟುಕೊಂಡು ಜಾತಿ-ಧರ್ಮಗಳನ್ನು ಸಂಘಟಿಸುವ, ವಿಘಟಿಸುವ ಮತ್ತು ಅದನ್ನೇ ಮತಬ್ಯಾಂಕುಗಳನ್ನುಗಿಸಿಕೊಂಡು ಅಧಿಕಾರ ರಾಜಕಾರಣ ಮಾಡುವ ಕೆಲಸ ಎಡಬಿಡದೆ ನಡೆಯುತ್ತಿದೆ.

“ಕಾಗೆಯೊಂದಗುಳ ಕಂಡರೆ ಕರೆಯದೇ ತನ್ನ ಬಳಗವನ್ನು? ಕೋಳಿಯೊಂದು ಕುಟುಕ ಕಂಡರೆ ಕೂಗಿ ಕರೆಯದೆ ತನ್ನ ಕುಲವೆಲ್ಲವನ್ನು” ಎನ್ನುವ ನಿಸರ್ಗ ಪ್ರ್ರಾಮಾಣಿತ ಸತ್ಯದ ನೆಲೆಯಿಂದ ನಿಸರ್ಗದ ಭಾಗವಾದ ಮನುಷ್ಯನೇ ಏಕೆ ಮೈಮನಸ್ಸುಗಳಲ್ಲಿ ದೂರವಾಗತೊಡಗಿದ? ಕುಟುಂಬ, ಸಂಸ್ಥೆ, ಸಮುದಾಯಗಳಲ್ಲಿ ಆಸ್ತಿ, ಅಧಿಕಾರ, ಅಂತಸ್ತುಗಳನ್ನು ಹಂಚಿ ಅನುಭೋಗಿಸುವ ಬದಲು, ಕೆಲವೇ ಕೆಲವು ಜನರು ಮಾತ್ರ ಅದಕ್ಕೆ ಭಾಗಿದಾರರಾಗಿ ಇನ್ನುಳಿದವರಿಗೆ ನಿರಾಕರಣೆಯೇ ಅವಕಾಶವಾಗುವ ಸ್ಥಿತಿ ಸಂದರ್ಭಗಳೇಕೆ ನಿರ್ಮಾಣವಾದವು? ಗೌತಮ ಬುದ್ಧ, ಬಸವಾದಿ ಶರಣರು ತೋರಿದ ಸ್ವಾತಂತ್ರ್ಯ, ಸಮಾನತೆ, ನ್ಯಾಯ ಮತ್ತು ಬಂಧುತ್ವಗಳೇ ಪ್ರಜಾಪ್ರಭುತ್ವ ವ್ಯವಸ್ಥೆಯ ಸಂವಿಧಾನ ಮೌಲ್ಯಗಳಾಗಿದ್ದರೂ ಮತ್ತು ಅದಕ್ಕೆ ತಕ್ಕ ಹಾಗೆ ಕಾನೂನುಗಳು ರಚನೆಯಾಗಿ ಜಾರಿಯಾಗುತ್ತಿದ್ದರೂ ಸಹ ವರ್ತಮಾನದ ಬದುಕೇಕೆ ಈ ಆಶಯಗಳ ವಿರುದ್ಧ ದಿಕ್ಕಿನಲ್ಲಿ ಹೋಗುತ್ತಿದೆ? ಎಲ್ಲರಿಗೂ ಸಮಾನವಾಗಿ ಹಂಚಿಕೆಯಾಗಬೇಕಾದ ಸಂಪತ್ತು ಸಂಪನ್ಮೂಲಗಳು ಕೆಲವೇ ಕೆಲವರಲ್ಲಿ ಕ್ರೋಢೀಕೃತವಾಗುವುದನ್ನೇ ಇಡೀ ದೇಶದ ಅಭಿವೃದ್ಧಿ ಶ್ರೇಷ್ಠತೆ ಎಂದೇಕೆ ಬಿಂಬಿಸಲಾಗುತ್ತಿದೆ? ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ಎಂದ ಬಸವಣ್ಣನನ್ನೇ ಸ್ಥಾವರ ಶ್ರೇಷ್ಠನನ್ನಾಗಿಸುವಲ್ಲಿ ಪೈಪೋಟಿಯೇಕೆ ಅವನ ಸಾಂಸ್ಕೃತಿಕ ವಾರಸುದಾರರೆನ್ನುವವರಲ್ಲೇ ಹೆಚ್ಚುತ್ತಿದೆ?

“ಹೊನ್ನಿನೊಳಗೊಂದೊರೆಯ, ಸೀರೆಯೊಳಗೊಂದೆಳೆಯ ಇಂದಿಂಗೆ ನಾಳಿಂಗೆ ಬೇಕೆಂದೆನಾದರೆ, ನಿಮ್ಮಾಣೆ! ನಿಮ್ಮ ಪುರಾತನರಾಣೆ! ನಿಮ್ಮ ಶರಣರಿಗಲ್ಲದೆ ಮತ್ತೊಂದನರಿಯೆ ಕೂಡಲಸಂಗಮದೇವಾ” ಎಂದು ಬಸವಣ್ಣನವರ ವಚನವನ್ನು ಲಯಬದ್ಧವಾಗಿ ಹೇಳುವ ಜನರೇ ಅವೇ ಲಾಲಸೆಯ ಕೆಲಸಗಳಲ್ಲಿ ನಿರತರಾಗಿದ್ದಾರೇಕೆ? ಈ ಇರಿಯುವ, ಎಳೆಯುವ, ಕೀಳುವ, ಕೆಡಹುವ ಕೆಲಸಗಳ ಪೈಪೋಟಿಯಲ್ಲಿ ಕೆಲವರು ಯಶಸ್ವಿಯಾಗುತ್ತಿದ್ದರೆ, ಮತ್ತೆ ಕೆಲವರು ಸಿಗಬಹುದಾದ ಅವಕಾಶಕ್ಕಾಗಿ ಕಾದು ಕುಳಿತಿದ್ದಾರೆ. ಇರುವುದರಲ್ಲಿಯೇ ಆದಷ್ಟು ಸುಖಪಟ್ಟುಕೊಂಡು ಇನ್ನೊಬ್ಬರ ತಟ್ಟೆಗೆ ಬಟ್ಟೆಗೆ ಕೈಹಾಕಬಾರದೆನ್ನುವವರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ. ಜೀವನ ನಶ್ವರ, ಸಾವು ಯಾರಿಗಾದರೂ ಯಾವಾಗ ಬೇಕಾದರೂ ಬರಬಹುದೆನ್ನುವುದು ಎಲ್ಲರಿಗೂ ತಿಳಿದಿದ್ದರೂ, ತಾನು ಅಮರ ಎನ್ನುವ ರೀತಿಯಲ್ಲಿ ಆಸ್ತಿ ಅಧಿಕಾರಗಳನ್ನು ಕೇಂದ್ರೀಕರಿಸಿಕೊಳ್ಳಲು ಮಾಡುವ ಪ್ರಯತ್ನಗಳು ನಿಲ್ಲುತ್ತಿಲ್ಲ. ಯಾವ ಅಗ್ರಹಾರ ಸಂಸ್ಕೃತಿಯ ವಿರುದ್ಧ ಬಸವಾದಿ ಶರಣರು ಶರಣ ಸಂಸ್ಕೃತಿ ಎನ್ನುವ ಪರ್ಯಾಯವನ್ನು ಅನ್ವೇಷಿಸಿ ಅನುಷ್ಠಾನಗೊಳಸಿ ಮಾದರಿಯಾದರೋ, ಆ ಪರಂಪರೆಯ ಆರಾಧಕರುಗಳೇ ಇವತ್ತು ಪೌರೋಹಿತ್ಯ, ಜಾತಿಭೇದ, ಲಿಂಗಭೇದ ಮತ್ತು ಸರ್ವತಮ ಅಸಮಾನತೆಗಳಿಗೆ ಬಾಗಿಲು ತೆರೆದಿದ್ದಾರೆ.

ಕಾಯಕವೇ ಕೈಲಾಸ ಎನ್ನುವ ಶರಣರ ಮಾತನ್ನು ನಿರಂತರ ಪಠಿಸುತ್ತಲೇ ಸಲ್ಲದ ಕೆಲಸಗಳನ್ನು ಮಾಡುತ್ತಾ ಅದನ್ನೇ ಕೈಲಾಸವೆಂದು ನಂಬಿದವರಿದ್ದಾರೆ. “ಪಾಪಿಯ ಧನ ಪ್ರಾಯಶ್ಚಿತ್ತಕ್ಕಲ್ಲದೆ ಸತ್ಪಾತ್ರಕ್ಕೆ ಸಲದಯ್ಯಾ ಎನ್ನುವ ವಚನವನ್ನು ಹೇಳುವವರೇ, ಎಂಥ ಪಾಪಕರ್ಮದಿಂದ ಬಂದ ಹಣವಾದರೂ ಸರಿ, ಮೊದಲು ಕೊಡು ಎಂದು ಪಡೆದು ಸನ್ಮಾನಿಸಿ ಕಳುಹಿಸುವುದೇ ಹೆಚ್ಚಾಗಿದೆ. ಹಿಂದೊಮ್ಮೆ ಭ್ರಷ್ಟಾಚಾರದ ಕಳಂಕ ಹೊತ್ತ ಭಕ್ತರ ಮನೆಗಳ ಕಾರ್ಯಕ್ರಮಗಳಿಗೆ ಹೋಗುವುದಿಲ್ಲವೆಂದು ಸಾರ್ವಜನಿಕವಾಗಿ ಹೇಳಿದ ಸ್ವಾಮಿಗಳೊಬ್ಬರು ಅದೇ ಭಕ್ತರಿಂದಷ್ಟೇ ಅಲ್ಲ, ಅವರ ಪರಂಪರೆಯ ಹಿರಿಯರಿಂದಲೂ ವಿರೋಧಕ್ಕೆ ಒಳಗಾಗಬೇಕಾಯಿತು. ಬಂಡವಾಳಶಾಹಿಗಳು ಮತ್ತು ಅಧಿಕಾರಸ್ಥ ರಾಜಕಾರರಿಣಿಗಳು ಕೊಡುವ ಹಣ ಆಸ್ತಿಗಳಿಗೆ ಜೋಲುವ ಜನ, ಓಲೈಸುವ ಜನ ಆ ಹಣದ ಮೂಲಗಳನ್ನು ಪ್ರಜ್ಞಾಪೂರಕವಾಗಿ ನಿರ್ಲಕ್ಷಿಸುತ್ತಾರೆ. ಹಣ, ಸಂಪತ್ತು ಮತ್ತು ಅಧಿಕಾರಗಳ ಅನೈತಿಕ ಮೂಲವನ್ನು ಪ್ರಶ್ನಿಸುವುದೆಂದರೆ ನದಿ ಮೂಲ, ಋಷಿಮೂಲಗಳನ್ನು ಹುಡುಕಿದಂತೆ ಎಂದು ಯಾರೋ ಯಾವಾಗಲೋ ಯಾಕೋ ಹೇಳಿದ ಮಾತಿನ ನೆರಳಿನಲ್ಲಿ ಆಶ್ರಯ ಹುಡುಕುತ್ತಾರೆ. ರಾಜಕಾರಣವೇ ಆಗಲೀ ಸಾಂಸ್ಥಿಕ ವ್ಯವಸ್ಥೆಯೇ ಆಗಲಿ, ಅಧಿಕಾರವನ್ನು ಹಿಡಿಯುವ ಮೂಲಗಳು, ಮಾರ್ಗಗಳು ಭ್ರಷ್ಟವಾದಂತೆಲ್ಲಾ ಅಲ್ಲಿನ ಆಡಳಿತ ಕ್ರಮ ಮತ್ತು ನ್ಯಾಯದಾನ ವಿಧಾನ ಕೂಡ ಭ್ರಷ್ಟವಾಗುತ್ತದೆ ಎನ್ನುವ ಸತ್ಯ ಗೊತ್ತಿದ್ದರೂ, ಅದನ್ನೇ ರಾಜಮಾರ್ಗವಾಗಿ ಅನುಸರಿಸಲಾಗುತ್ತಿದೆ. ಜೊತೆಗೆ, ಅದೇ ಜನ ಸಾರ್ವಜನಿಕ ವೇದಿಕೆಗಳಲ್ಲಿ ದಾರ್ಶನಿಕರ, ಶರಣರ, ದಾಸರ ಮಾತುಗಳನ್ನು ಉದಾಹರಿಸುವುದನ್ನು ಬಿಟ್ಟಿಲ್ಲ. ಅಂತರಂಗ ಬಹಿರಂಗ ಶುದ್ಧಿಗಳಲ್ಲಿ ಸಾಮ್ಯವಿರಬೇಕೆಂದು ಹೇಳಿ, ಹಾಗೆಯೇ ನಡೆದುಕೊಂಡ ಬಸವಣ್ಣ ಮತ್ತು ಆತನ ಜೊತೆಗಿದ್ದ ಶರಣರ ಆರಾಧಕರು, ಅನುಯಾಯಿಗಳೆನ್ನುವವರೂ ಸಹ ಅವರ ಅಂತರಂಗ ಮತ್ತು ಬಹಿರಂಗ ವರ್ತನೆಗಳ ನಡುವೆ ದೊಡ್ಡ ಕಂದಕಗಳನ್ನ ನಿರ್ಮಿಸಿಕೊಳ್ಳುತ್ತಿದ್ದಾರೆ.

ಇಂತಹ ವಿಪರ್ಯಾಸಗಳಿಗೆ, ಎಡಬಿಡಂಗಿತನಗಳಿಗೆ, ಆಷಾಢಭೂತಿ ವರ್ತನೆಗೆ ಕಾರಣ ಹುಡುಕಲು ಯಾವ ಸಂಶೋಧನೆಯನ್ನು ಕೈಗೊಳ್ಳುವ ಅಗತ್ಯವಿಲ್ಲ. ಎಲ್ಲರಿಗೂ ತಿಳಿದ ಮತ್ತು ಎಲ್ಲರೂ ಒಪ್ಪುವ ವಿಷಯ ಮತ್ತು ಕಾರಣಗಳೇ ಇವಾಗಿವೆ. ಇದಕ್ಕೆ ಪರಿಹಾರಗಳು ಗೊತ್ತಿದ್ದರೂ ಯಾಕೆ ಅವುಗಳನ್ನು ಅನುಸರಿಸಲು ಸಂಬಂಧಪಟ್ಟವರು ಮುಂದಾಗುತ್ತಿಲ್ಲ ಎನ್ನುವುದನ್ನ ಎಷ್ಟು ಬಾರಿ ಹೇಳಿದರೂ, ಅವು ಅದೇ ಮಾತುಗಳಾಗುತ್ತಿವೆಯೇ ಹೊರತು ಸತ್ಯ ಆಚರಣೆಯಾಗುತ್ತಿಲ್ಲ.

ಶರಣರ ಮತ್ತು ಯಾವುದೇ ದಾರ್ಶನಿಕರನ್ನು ಸ್ಮರಿಸದಿದ್ದರೂ ಸರಿ ಅವರ ಹೆಸರಿಗೆ ಕೆಸರೆರಚುವ ವರ್ತನೆಗಳನ್ನು ವಿರೋಧಿಸದೆ ಸಹಿಸುವ ಮನಃಸ್ಥಿತಿ ಇಂದಿಗೆ ಬೇಡವಾಗಿದೆ. ದೊಡ್ಡವರ ಎಂತಹ ಸಣ್ಣತನಗಳನ್ನಾಗಲೀ, ಕರಾಳ ಕೃತ್ಯಗಳನ್ನಾಗಲೀ ಜನ ಸಹಿಸುತ್ತಾರೆನ್ನುವ ಅಥವಾ ಸಹಿಸುವ ದುಃಸ್ಥಿತಿಯಲ್ಲಿದ್ದಾರೆನ್ನುವ ಸತ್ಯವನ್ನರಿತವರು ಮಾತ್ರ ಅವರ ನಡೆನುಡಿಗಳ ವೈರುಧ್ಯದ ಬಗ್ಗೆ ಜಾಣ ಕುರುಡರಾಗಿರುತ್ತಾರೆ. ಸಹಿಸುವವರ ಅಸಹಾಯಕತೆ ಮತ್ತು ಅನೈಕ್ಯತೆಗಳೇ ದೊಡ್ಡವರ ದುಂಡಾವರ್ತನೆಗೆ ಮತ್ತು ವಿರೋಧಾಭಾಸಗಳಿಗೆ ಕಾರಣವಾಗಿರುವುದರಿಂದ ಕೆಡುಕುತನಗಳ ವಿರುದ್ಧದ ಅಸಹನೆಯನ್ನು ವ್ಯಕ್ತಿ ಅಥವಾ ಸಮೂಹದ ಯಾವ ನೆಲೆಯಿಂದಲಾದರೂ ಸರಿ, ಚುರುಕುಗೊಳಿಸಬೇಕಿದೆ.

ಅಸಹಾಯಕತೆ ಎನ್ನುವ ರೋಗದಿಂದ ಎದ್ದುಬರಬೇಕಲ್ಲದೆ ಅದನ್ನೇ ದೂರುತ್ತಾ ಕುಳಿತುಕೊಳ್ಳಬಾರದು. ಈ ನಿಟ್ಟಿನಲ್ಲಿ ಸ್ವಪ್ರೇರಣೆಯಿಂದ ಜನ ಎಚ್ಚೆತ್ತು ಮುಂದಾಗಬೇಕೆಂದು ಬಯಸುವುದು ಎಷ್ಟು ಸರಿಯೋ, ಹಾಗೆಯೇ ಪ್ರಭುತ್ವಗಳೂ ಕೂಡ ತಮ್ಮ ನೆಲೆಯಲ್ಲಿ ಸಾಮುದಾಯಿಕ ಹೊಣೆಗಾರಿಕೆಯನ್ನು ನೀಭಾಯಿಸಬೇಕಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಭುತ್ವಗಳು ಮೈಮರೆತಾಗ ಅವುಗಳನ್ನು ಸರಿದಾರಿಗೆ ತರುವ ಅಧಿಕಾರ ಜನಸಾಮಾನ್ಯರಿಗಿರುವುದರಿಂದ ಉತ್ತಮ ಆಡಳಿತವನ್ನು ಪ್ರೋತ್ಸಾಹಿಸುವ ಮತ್ತು ಕೆಟ್ಟ ಆಡಳಿತದ ವಿರುದ್ಧ ತಿರುಗಿ ಬೀಳುವ ಕೆಲಸವನ್ನು ಮತದಾರರು ವ್ಯಕ್ತಿಗತವಾಗಿಯೇ ಮಾಡಬೇಕಿದೆ. ಸಾಮೂಹಿಕ ಭ್ರಷ್ಟಾಚಾರದ ವಿರುದ್ಧದ ಕ್ರಮಗಳು ಮತದಾರರ ವೈಯಕ್ತಿಕ ನೆಲೆಯಿಂದ ಸಾಧ್ಯವಾಗಿಸುವ ಸುಂದರ ಅವಕಾಶವನ್ನು ಪ್ರಜಾಪ್ರಭುತ್ವ ವ್ಯವಸ್ಥೆ ಕಲ್ಪಿಸಿಕೊಟ್ಟಿದೆ.

ಬಸವಣ್ಣನವರ ಮಾತಿನಲ್ಲೇ ಹೇಳುವುದಾದರೆ “ಊಡದ ಆವಿಂಗೆ ಉಣ್ಣದಾ ಕರುವ ಬಿಟ್ಟಂತೆ” ಎನ್ನುವಂತಾಗಿದೆ ಇವತ್ತಿನ ಸ್ಥಿತಿ. ಹಾಲನ್ನು ಕುಡಿಯುವ ಹಸಿವು ಕರುವಿಗಿಲ್ಲವಾದರೆ; ಹಾಲನ್ನು ಕುಡಿಸುವ ಒಲವು ಅಥವಾ ಕೆಚ್ಚಲು ಬಿಗಿಯುವ ತುರ್ತು ಆಕಳಿಗಿಲ್ಲವಾದರೆ ವ್ಯಕ್ತಿ ಮತ್ತು ಸಮುದಾಯಗಳ ನಡುವೆ ಕರು ಆಕಳು ನಡುವಿನ ಸಂಬಂಧವೇ ಕಾಣೆಯಾಗುವುದು ನಿಜ. ಆಗ ಹಾಲಿಲ್ಲದೆ ಮೊದಲು ಬಳಲುವುದು ಕರುವೇ ಆಗಿರುವುದರಿಂದ ದುರ್ಜನರ ವಿರುದ್ಧದ ಧ್ವನಿ ವ್ಯಕ್ತಿಯ ಎದೆಯಿಂದಲೇ ಮೂಡಿ ಸಾಮೂಹಿಕ ಸ್ವರೂಪ ಪಡೆದುಕೊಳ್ಳಬೇಕಾಗಿದೆ. ವ್ಯಕ್ತಿಯ ಒಳಗಡೆ ಆಗುವ ಸಂಚಲನಗಳು ಹೊರಗಿನ ಚಳವಳಿಯಾಗಿ ರೂಪುಗೊಳ್ಳಲು ಬಹುಕಾಲ ಬೇಕಿಲ್ಲ. ಇದನ್ನು ಅರಿತೇ ಶರಣರು ಅವರವರ ನೆಲೆಯಲ್ಲಿ ಬದಲಾಗುತ್ತಲೇ ಒಬ್ಬರಿಗೊಬ್ಬರು ಆದರ್ಶವಾದರು, ಸಾಮೂಹಿಕ ಗೌರವಕ್ಕೆ ಪಾತ್ರರಾದರು. ಹೊರಗಿನ ಹಳವಂಡಗಳ ಬಗ್ಗೆ ಒಳಗೆ ಅಸಹನೆಯ ಕಿಡಿ ಹೊತ್ತಿದರೆ ಹೊರಗೆ ಧಗ್ಗೆಂದು ಉರಿಯಲು ಸಣ್ಣದೊಂದು ಕ್ರಿಯಾಶೀಲತೆ ಬಿಟ್ಟು ಬೇರೇನೂ ಬೇಕಿಲ್ಲ. ಕಿಡಿಗೇಡಿಗಳ ಕೆಡುಕುತನಕ್ಕೆ ಕಿಚ್ಚು ಇಡುವುದು ಭಾರೀ ಕಷ್ಟದ ಸಂಗತಿಯಲ್ಲ ಎನ್ನುವುದನ್ನು ಇತಿಹಾಸ ತೋರಿಸಿಕೊಟ್ಟಿದೆ. ಇದನ್ನು ಅರಿತು ಅನುಭಾವಿಸಿಯೇ ಬಸವಣ್ಣ “ಲೋಕದ ಡೊಂಕ ನೀವೇಕೆ ತಿದ್ದುವಿರಿ? ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ; ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ. ನೆರೇಮನೆಯ ದುಃಖಕ್ಕೆ ಅಳುವವರ ಮೆಚ್ಚ ನಮ್ಮ ಕೂಡಲಸಂಗಮದೇವ” ಎಂದದ್ದು.

ನಮ್ಮಂತರಂಗವೇ ಕಿಚ್ಚೆದ್ದು ಸುಡುವಾಗ ನೆರೆಮನೆಯ ಬೆಂಕಿಗೆ ನೀರು ಹೊಯ್ದು ನಂದಿಸುವುದು ಸಾಧ್ಯವಿಲ್ಲ. ದಾರ್ಶನಿಕರ ಜನ್ಮ ದಿನಾಚರಣೆಯ ನೆಪದಲ್ಲಾದರೂ ನಮ್ಮ ನಮ್ಮ ನೆಲೆಯಲ್ಲಿ ಅಂತರಾವಲೋಕನ ಮಾಡಿಕೊಳ್ಳಬೇಕಿದೆ. ಅವರ ತಾತ್ವಿಕ ನೆಲೆಗಟ್ಟಿನ ಬೆಳಕಿನಲ್ಲಿ ಸಂಕಲ್ಪದ ಮೂಲಕ ಸಾಮೂಹಿಕ ಬದಲಾವಣೆಗೆ ಕಾರಣವಾಗುವ ಸುಕ್ಷಣ ಇದಾಗಬೇಕಿದೆ. ಇಲ್ಲವಾದಲ್ಲಿ ಇನ್ನೆಷ್ಟು ಶತಮಾನಗಳೇ ಕಳೆದರೂ ಕೂಡ “ಇವನಾರವ ಇವನಾರವ ಇವನಾರವನೆಂದೆನಿಸದಿರಯ್ಯಾ” ಎನ್ನುವ ತೋರಿಕೆಯ ಕೋರಿಕೆ ವೇದಿಕೆ ಬಿಟ್ಟು ಇಳಿಯುವುದಿಲ್ಲ.

ಡಾ. ಜಿ.ಎನ್. ಮಲ್ಲಿಕಾರ್ಜುನಪ್ಪ

ಡಾ. ಜಿ. ಎನ್. ಮಲ್ಲಿಕಾರ್ಜುನಪ್ಪ
ವಿಶ್ರಾಂತ ಪ್ರ್ರಾಂಶುಪಾಲರು, ಖಾಸಗಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯೊಂದರ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕರು. ಆರ್ಥಿಕ ಮತ್ತು ಶೈಕ್ಷಣಿಕ ಚಿಂತಕರು. ಚಿತ್ರದುರ್ಗ ಮೂಲದವರು.


ಇದನ್ನೂ ಓದಿ: ’ಅವ ನಮ್ಮವ, ಅವ ನಮ್ಮವ’ ಎಂದ ಕ್ರಾಂತಿಕಾರಿ ಬಸವಣ್ಣನ ಚಿಂತನೆಗಳು ಇಂದಿನ ವಿಷಮತೆಗೆ ಲಸಿಕೆ..: ಜಿ.ಬಿ ಪಾಟೀಲ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...