ಕೊರೊನಾ ಲಾಕ್ಡೌನ್ನಲ್ಲಿ ಇಂದಿರಾ ಕ್ಯಾಂಟೀನ್ಗಳ ಮೂಲಕ ಉಚಿತ ಆಹಾರವನ್ನು ಪಡೆಯುವವರಿಂದ ಆಧಾರ್ ಮತ್ತು ಇತರ ವಿವರಗಳನ್ನು ಸಂಗ್ರಹಿಸಲಾಗುತ್ತಿತ್ತು. ಈ ಕ್ರಮದ ವಿರುದ್ಧವೇ ಆಕ್ರೋಶ ವ್ಯಕ್ತವಾಗಿತ್ತು. ಆದರೆ ಈಗ ಒಂದು ಹೆಜ್ಜೆ ಮುಂದೆ ಹೋಗಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP), ಊಟ ಮಾಡುವವರ ಡೇಟಾ ಪಡೆಯಲು ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದೆ.
ಕ್ಯಾಂಟೀನ್ ಸಿಬ್ಬಂದಿಗಳು ಮೊಬೈಲ್ಗಳಲ್ಲಿ ಊಟ ಪಡೆಯುವರ ಮೊಬೈಲ್ ಸಂಖ್ಯೆ, ಮತ್ತು ಆಹಾರದ ಪೊಟ್ಟಣ ಹಿಡಿದುಕೊಂಡಿರುವ ಛಾಯಾಚಿತ್ರಗಳನ್ನು ಸೆರೆ ಹಿಡಿದು ಅಪ್ಲೋಡ್ ಮಾಡುವಂತೆ ಹೇಳಲಾಗಿದೆ. ಜೊತೆಗೆ ಮೂರಕ್ಕಿಂತ ಹೆಚ್ಚು ಆಹಾರ ಪೊಟ್ಟಣಗಳನ್ನು ವಿತರಿಸಿದರೆ, ಆಹಾರ ಪ್ಯಾಕೆಟ್ಗಳನ್ನು ಹಸ್ತಾಂತರಿಸುವ ಮೊದಲು ಸಿಬ್ಬಂದಿ ಒನ್ ಟೈಮ್ ಪಾಸ್ವರ್ಡ್ (ಒಟಿಪಿ) ಮತ್ತು ಕುಟುಂಬದ ಪಡಿತರ ಚೀಟಿಯನ್ನು ಈ ಆ್ಯಪ್ ಒಳಗೆ ನಮೂದಿಸಬೇಕು.
“ಇಂದಿರಾ ಕ್ಯಾಂಟೀನ್ ಪಾರ್ಸೆಲ್ ವಿತರಣೆ” (Indira Canteen Parcel Distribution) ಅಪ್ಲಿಕೇಶನ್ ಅನ್ನು ಬುಧವಾರ ಬೆಳಿಗ್ಗೆ ಬಿಡುಗಡೆ ಮಾಡಲಾಗಿದೆ. ಆದರೆ, ಕ್ಯಾಂಟೀನ್ಗಳಲ್ಲಿ ಕೆಲಸ ಮಾಡುವ ಹಲವು ಸಿಬ್ಬಂದಿ ಬಳಿ ಆ್ಯಪ್ ಹಾಕಿಕೊಳ್ಳುವ ಮೊಬೈಲ್ ಇಲ್ಲ. ಇರುವ ಮೊಬೈಲ್ಗೆ ಆ್ಯಪ್ ಹೊಂದುವುದಿಲ್ಲ ಎನ್ನಲಾಗಿದೆ.
ಕೆಲವರಿಗೆ ಫೋಟೋಗಳನ್ನು ಅಪ್ಲೋಡ್ ಮಾಡುವಲ್ಲಿ ಆ್ಯಪ್ನಲ್ಲಿ ತೊಂದರೆ, ಆ್ಯಪ್ ಬಳಸಲು ತಾಂತ್ರಿಕ ಜ್ಞಾನದ ಕೊರತೆ ಸೇರಿದಂತೆ ಹಲವು ಕಾರಣದಿಂದಾಗಿ ಸಿಬ್ಬಂದಿಗೆ ತೊಂದರೆಯಾಗಿದ್ದು, ಕ್ಯಾಂಟೀನ್ನಲ್ಲಿ ಆಹಾರ ವಿತರಣೆ ಮಾಡುವಲ್ಲಿ ವಿಳಂಬವಾಗಿದೆ.
ಇದನ್ನೂ ಓದಿ: ‘56 ಇಂಚಿನ ಎದೆಯ ಧೈರ್ಯ ಎಂದರೆ ಇದೇನಾ?’- ಸಿದ್ದರಾಮಯ್ಯ ಆಕ್ರೋಶ
ಸರ್ಕಾರದ ಹೊಸ ನಿಯಮಗಳಿಗೆ ರಾಜ್ಯ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. “ಇಂದಿರಾ ಕ್ಯಾಂಟೀನ್ನಲ್ಲಿ ಆಹಾರ ಪಡೆಯಬೇಕೆಂದರೆ ದಾಖಲೆ ತೋರಿಸುವಂತಹ ಕೆಟ್ಟ ಸಂಪ್ರದಾಯ ಹಾಕಿದ ಬೆನ್ನಲ್ಲೇ ಈಗ ಮೊಬೈಲ್ ಅಪ್ಲಿಕೇಶನ್ ರಿಜಿಸ್ಟರ್ ಎಂಬ ಅಸಂಬದ್ಧಕ್ಕೆ ಮುಂದಾಗಿದೆ ಸರ್ಕಾರ. ಇಂತಹ ಅತಾರ್ಕಿಕ, ಅಪ್ರಬುದ್ದ ನಿರ್ಣಯ ಕೈಗೊಳ್ಳುವ ಬಿಬಿಎಂಪಿ ಅಧಿಕಾರಿಗಳಿಗೆ ಕೊಂಚವೂ ವಾಸ್ತವದ ಸವಾಲುಗಳ ಜ್ಞಾನ ಇಲ್ಲವೇ…?” ಎಂದು ಪ್ರಶ್ನಿಸಿದೆ.
ಇಂದಿರಾ ಕ್ಯಾಂಟೀನ್ನಲ್ಲಿ ಆಹಾರ ಪಡೆಯಬೇಕೆಂದರೆ ದಾಖಲೆ ತೋರಿಸುವಂತಹ ಕೆಟ್ಟ ಸಂಪ್ರದಾಯ ಹಾಕಿದ ಬೆನ್ನಲ್ಲೇ ಈಗ ಮೊಬೈಲ್ ಅಪ್ಲಿಕೇಶನ್ ರಿಜಿಸ್ಟರ್ ಎಂಬ ಅಸಂಬದ್ಧಕ್ಕೆ ಮುಂದಾಗಿದೆ ಸರ್ಕಾರ.
ಇಂತಹ ಅತಾರ್ಕಿಕ, ಅಪ್ರಬುದ್ದ ನಿರ್ಣಯ ಕೈಗೊಳ್ಳುವ ಬಿಬಿಎಂಪಿ ಅಧಿಕಾರಿಗಳಿಗೆ ಕೊಂಚವೂ ವಾಸ್ತವದ ಸವಾಲುಗಳ ಜ್ಞಾನ ಇಲ್ಲವೇ?https://t.co/bGVvVcvCQo
— Karnataka Congress (@INCKarnataka) May 20, 2021
ಗುರುವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್ “ಅಪ್ಲಿಕೇಶನ್ ಮೂಲಕ ಯಾವ ಸಾಧನೆ ಮಾಡಲು ಹೊರಟಿದೆ ಸರ್ಕಾರ..? ಯಾವ ಉದ್ದೇಶಕ್ಕಾಗಿ ಈ ಡಾಟಾ ಸಂಗ್ರಹಿಸಲಾಗುತ್ತಿದೆ..? ಇಂದಿರಾ ಕ್ಯಾಂಟೀನ್ ಸಿಬ್ಬಂದಿಗಳಲ್ಲಿ ಸ್ಮಾರ್ಟ್ ಫೋನ್ ಇರುವುದೇ ವಿರಳ, ಅವರಿಗೆ ತಂತ್ರಜ್ಞಾನದ ಅರಿವೂ ಇಲ್ಲ. ಜನರ ಡಾಟಾ ಬಗ್ಗೆ ಸರ್ಕಾರಕ್ಕೆ ಏಕಿಷ್ಟು ಕುತೂಹಲ..? ಇಂತಹ ಅಸಂಬದ್ಧ ನಿಲ್ಲಿಸಿ, ಹಸಿದ ಎಲ್ಲಾ ಬಡವರಿಗೂ ಆಹಾರ ನೀಡಿ” ಎಂದಿದೆ.
’ಆಹಾರ ಪಡೆಯಲು ಬರುವ ಬಡಜನರಲ್ಲಿ ಮೊಬೈಲ್ ಫೋನ್ ಎಲ್ಲರ ಬಳಿ ಇರುತ್ತದೆಯೇ..? ಪಡಿತರ ಚೀಟಿ ಹೊಂದಿರದೇ ಇರುವ ಎಷ್ಟೋ ಮಂದಿ ಇದ್ದಾರೆ, ನಿರ್ಗತಿಕರಿದ್ದಾರೆ, ಭಿಕ್ಷುಕರಿದ್ದಾರೆ, ಇವರೆಲ್ಲರು ಆಹಾರ ವಂಚಿತರಗಬೇಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ? ನಿಮ್ಮ ಸರ್ಕಾರ ಯಾಕಿಷ್ಟು ಅಸಂಬದ್ಧ ಅವೈಜ್ಞಾನಿಕ ನಿರ್ಧಾರ ತೆಗೆದುಕೊಳ್ಳುತ್ತದೆ..?’ ಎಂದು ಪ್ರಶ್ನಿಸಿದ್ದಾರೆ.
ಇತ್ತ, ಕ್ಯಾಂಟೀನ್ಗಳಲ್ಲಿ ದುಷ್ಕೃತ್ಯದ ಅನುಮಾನ ಇರುವುದರಿಂದ, ದತ್ತಾಂಶಗಳ ಗೊಂದಲ ಹೋಗಲಾಡಿಸಲು ಮತ್ತು ಗುತ್ತಿಗೆದಾರರ ಮೇಲೆ ಕಣ್ಣಿಡಲು ಬಿಬಿಎಂಪಿಗೆ ಆ್ಯಪ್ ಪರಿಚಯಿಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂದು ಇಂದಿರಾ ಕ್ಯಾಂಟೀನ್ಗಳ ಮೂಲಕ ಉಚಿತವಾಗಿ ಆಹಾರ ವಿತರಣೆಯ ಉಸ್ತುವಾರಿ ವಹಿಸಿರುವ ವಿಶೇಷ ಆಯುಕ್ತರಾದ (ಹಣಕಾಸು) ತುಳಸಿ ಮದ್ದಿನೇನಿ ಹೇಳಿದ್ದಾರೆ.
ಇದನ್ನೂ ಓದಿ: ಯುಪಿ: ಸೋಂಕಿತ ರೋಗಿಯ ನಿರ್ಲಕ್ಷ್ಯದ ಬಗ್ಗೆ ಪತ್ರಕರ್ತರಿಗೆ ಮಾಹಿತಿ; ಗ್ರಾಮಸ್ಥನ ಮೇಲೆ ಪ್ರಕರಣ ದಾಖಲು!