Homeಅಂಕಣಗಳುಸುದ್ದಿಯೇನೇ ಮನೋಲ್ಲಾಸಿನಿ: ಭನವಾರಿ ದೇವಿ ಮತ್ತು ಅತ್ಯಾಚಾರದ ಕಾನೂನುಗಳು

ಸುದ್ದಿಯೇನೇ ಮನೋಲ್ಲಾಸಿನಿ: ಭನವಾರಿ ದೇವಿ ಮತ್ತು ಅತ್ಯಾಚಾರದ ಕಾನೂನುಗಳು

- Advertisement -
- Advertisement -

ರಮೇಶ್ ಜಾರಕಿಹೊಳಿ ಅವರ ಮನಿ ಒಳಗ ಸಿಡಿ ಪ್ಲೇಯರ್ ಇಲ್ಲ. ಅದು ಇರೋದು ಅವರ ಕಚೇರಿಯೊಳಗ. ಅವರು ಜಾಸ್ತಿ ಪಿಚ್ಚರು ನೋಡೋದಿಲ್ಲ. ಮೊನ್ನೆ ಮೊನ್ನೆಯಿಂದ ಟಿವಿ ನೋಡೋದು ಕಮ್ಮಿ ಅಗೆತಿ ಅಂತ ಅವರ ಪಿಎ ಸಾಹೇಬರು ಅಂದ್ರು ಮೊನ್ನೆ.

ಅದು ಯಾಕಾಪಾ ಅಂದ್ರ ಅವರು ತಮ್ಮ ವಿರುದ್ಧದ ಸುದ್ದಿ ಹಾಗೂ ಕೋವಿಡ್ ವೈರಸ್‌ಗಳಿಗೆ ಗುರಿಯಾಗಿ ತಮ್ಮ ಗೋಕಾಕ ಜಲಪಾತದ ಹತ್ತಿರದ ಮನಿ ಒಳಗ ಸುಧಾರಿಸಿಕೊಳ್ಳತಾ ಇದ್ದಾರ.

“ಗೋಕಾಕ ಸಾಹುಕಾರ್ ಅವರ ರಾಸಲೀಲೆ” ಅಂತ ಉದ್ದುದ್ದ ಸುದ್ದಿ ಬರೆದು ಊರೆಲ್ಲ ಗದ್ದಲ ಮಾಡಿದ ನಮ್ಮ ಮಾಧ್ಯಮಗಳು ಆ ಪ್ರಕರಣದ ಅಳಕ್ಕೆ ಇಳಿಯಲಿಲ್ಲ. ಹಂಗಂದ್ರ ಅದರ ಸರಿ ತಪ್ಪುಗಳ ಲೆಕ್ಕಾಚಾರ ಅಂತ ಅಲ್ಲ. ಆ ಘಟನೆಯ ಬೇರೆ ಬೇರೆ ಆಯಾಮಗಳ ವಿಚಾರ ಮಾಡಲಿಲ್ಲ ಅಂತ.

ಮೊದಲನೆದಾಗಿ ಮಾಧ್ಯಮಗಳ ಭಾಷೆ ಸೂಕ್ಷ್ಮವಾಗಿರಲಿಲ್ಲ. ಸಂತ್ರಸ್ತ ಯುವತಿಯನ್ನು ಸಿಡಿ ಲೇಡಿ ಅಂತ ಕರೆದ ನಮ್ಮ ಟಿವಿಯ ಹಿಡಿಗೂಟಗಳು (ಆಂಕರ್‌ಗಳು) ಆರೋಪಿ ರಾಜಕಾರಣಿಯನ್ನು ಬಣ್ಣಿಸುವಾಗ ಸಭ್ಯ ಭಾಷೆ ಬಳಸಿದವು. ಅವರ ಅಭಿಮಾನಿ ಯಾರೋ ವಕೀಲರ ನೋಟಿಸು ಕಳಿಸಿದರು ಅನ್ನುವ ಕಾರಣಕ್ಕೆ ಸಾಹುಕಾರ್ ಅನ್ನುವ ಪದ ಬಳಕೆ ಸಹಿತ ಬಿಟ್ಟವು.

ಆ ಹುಡುಗಿಗೆ ಅನ್ಯಾಯ ಅಗಿದೆಯೋ ಇಲ್ಲವೋ ಅನ್ನುವ ವಿಚಾರ ಮಾಡುವ ಬದಲಿಗೆ ‘ಅಕಿ ಯಾರು’, ‘ಯಾವ ಜಾತಿಯವಳು?’, ‘ಅಕಿ ಗೆಣೆಕಾರರು ಯಾರು’, ‘ಅವರ ಬೆನ್ನ ಹಿಂದಿನ ಮಹಾ ನಾಯಕರು ಯಾರು?’ ಇಂಥಾ ವಿಚಾರಗಳನ್ನು ಜನರ ತಲೆಯೊಳಗೆ ಒತ್ತಾಯದಿಂದ ತುಂಬಿದರು. ‘ಪಾಪ ಸಾಹುಕಾರರು ನೊಂದುಕೊಂಡರೇನೋ’ ಅಂತ ಬೇಜಾನ್ ಬೇಸರ ಮಾಡಿಕೊಂಡ ಟಿವಿ ಹಿಡಿಗೂಟಗಳು ‘ಆ ಬಡ ಹುಡುಗಿ ನೊಂದುಕೊಂಡಳೋ ಇಲ್ಲವೋ’ ಅಂತ ವಿಚಾರ ಸಹಿತ ಮಾಡಲಿಲ್ಲ.

ಇದೆಲ್ಲಾ ಆರಂಭವಾಗಿದ್ದು ಸಾಹುಕಾರರು ಗೃಹ ಸಚಿವರಿಗೆ ಬರೆದ ಒಂದು ಓಲೆಯಿಂದ. ರಾಜಕೀಯದಲ್ಲಿ ತಮ್ಮ ಬುಲೆಟ್ ಟ್ರೇನ್ ವೇಗದ ಬೆಳವಣಿಗೆಯನ್ನು ಸಹಿಸದ ಯಾರೋ ಕೆಲ ದುರುಳರು ತಮ್ಮ ವಿರುದ್ಧ ಷಡ್ಯಂತ್ರ ಮಾಡಿ ತಮ್ಮನ್ನು ಜೇನುಪಾಶದಲ್ಲಿ ಸಿಲುಕಿಸಿಬಿಟ್ಟಿದ್ದಾರೆ ಅಂತ ಅವರು ಗೋಳು ಹೇಳಿಕೊಂಡರು. ತನ್ನ ಸರ್ಕಾರದ ಹುಟ್ಟಿಗೆ ಕಾರಣವಾದ ಈ ಆಧುನಿಕ ಜಮೀನುದಾರನ ಗೋಳು ನೋಡಲಿಕ್ಕೆ ಆಗದ ಘನ ಸರಕಾರ ಮಂತ್ರಿಗಳಿಗೆ ಗಾಳ ಹಾಕಿದ ಕಂತ್ರಿಗಳು ಯಾರು ಅಂತ ತನಿಖೆ ಮಾಡಲು ಒಂದು ಸಿಟ್ (ಎಸ್‌ಐಟಿ) ನೇಮಿಸಿತು. ಆ ನಿಕಟಪೂರ್ವ ಮಂತ್ರಿಗಳಿಂದ ಸಂತ್ರಸ್ತ ಯುವತಿ ಅನ್ಯಾಯ ಮಾಡಿದರೋ ಇಲ್ಲವೋ ಅನ್ನೋದು ಆ ಸಿಟ್‌ನ ಲಿಸ್ಟ್‌ನಲ್ಲಿ ಇರಲಿಲ್ಲ.

ಶುರುವಾತಿಗೆ ಅದು ಹೆಸರಿಗೆ ತಕ್ಕ ಹಾಗೆ ಸಿಟ್ ಮಾಡಿತು. ಅಂದರೆ ಸುಮ್ಮನೆ ಕೂತುಬಿಟ್ಟಿತು.
ಆಮ್ಯಾಲೆ ಒಂದು ಪ್ರಥಮ ಮಾಹಿತಿ ವರದಿಯ ಪ್ರಹಸನ ನಡೀತು. ಒಬ್ಬ ಸಾಮಾಜಿಕ ಹಾರಾಟಗಾರರು ಒಂದು ದೂರು, ಅದಕ್ಕೆ ತಕ್ಕ ಸಾಕ್ಷಿ ಕೊಟ್ಟ ಮೇಲೆ ಅದರ ತಯಾರಿ ಆರಂಭವಾಯಿತು. ಉಚ್ಚ ನ್ಯಾಯಾಲಯ, ಸರ್ವೋಚ್ಚ ನ್ಯಾಯಾಲಯಗಳ ಹಲವಾರು ತೀರ್ಪುಗಳ ವಿರುದ್ಧ ರಾಜ್ಯದ ಪೊಲೀಸರು ನಡೆದುಕೊಂಡರು. ಇಷ್ಟು ಘೋರ ಅಪರಾಧದ ಆರೋಪ ಇದ್ದರೂ ದೂರು ದಾಖಲು ಆಗಲಿಲ್ಲ. ಎಫ್‌ಐಆರ್ ಮಾಡೋರು ಯಾರು ಅನ್ನೋದು ಗೊತ್ತಾಗೋ ಮೊದಲೇ ಅದರ ಜೀವ ಆರಿಹೋತು.

ಆನಂತರ, ಸಾರ್ವಜನಿಕರ ಒತ್ತಡ ಹೆಚ್ಚಿ, ನ್ಯಾಯಾಲಯದ ಮಧ್ಯಪ್ರವೇಶ ಆದನಂತರ ಇನ್ನೊಂದು ಎಫ್‌ಐಆರ್ ಆಯಿತು. ಇಷ್ಟು ಎಲ್ಲಾ ಆಗೋವಾಗ ಮೊದಲಿಗೆ ದೂರು ನೀಡಿದ ಸಾಮಾಜಿಕ ಹಾರಾಟಗಾರರು ಪ್ರಕರಣದಿಂದ ದೂರವಾದರು.

ಅಲ್ಲಿಗೆ ಈ ಪ್ರಕರಣದ ಅಪರಾಧದ ಆಯಾಮದ ಬಿಸಿ ಕಮ್ಮಿ ಆಗಿ ಅದರ ರಾಜಕಿಯ ಆಯಾಮದ ಉಗಿ ಎದ್ದಿತ್ತು. ಅದರ ಝಳ ಬೆಂಗಳೂರಿನಿಂದ ಶುರು ಆಗಿ ಗೋಕಾಕಗೆ ತಟ್ಟಿತ್ತು.

ಈಗ ಗೋಕಾಕ ಎಂಬ ಸರ್ವಾಧಿಪತ್ಯದ ರಾಜ್ಯದಲ್ಲಿ ಎಲ್ಲರೂ ಸಿಡಿ ಲೇಡಿ ಅನ್ನುವ ಪದ ಬಳಸತಾರ. ಅದರ ಅದು ಆ ಹುಡುಗಿಗೆ ಅಲ್ಲ. ರಾಜೀನಾಮೆ ನೀಡಿ ಸರಕಾರದೊಂದಿಗೆ ರಾಜಿ ಮಾಡಿಕೊಂಡ ಮಾಜಿ ಮಂತ್ರಿಯ ಬಗ್ಗೆ ಮಾತಾಡುವಾಗ. ಆದರೆ ಅದು ಕುಶಾಲಿಗೆ. ಆ ನಂತರ ಅವರ ಮಾತು ಗಂಭೀರ ಆಗತಾವ.

“ನಂ ಸಾಹುಕಾರ್ ಏನು ತಪ್ಪು ಮಾಡಿದ್ದಾನ ಹೇಳ್ರಿ?” ಅಂತ ನಿಮ್ಮನ್ನ ಪ್ರಶ್ನೆ ಮಾಡತಾರ. “ಎಲ್ಲ ಗಂಡಸರು ಮಾಡೋದನ್ನ ಮಾಡಿದ್ದಾನ. ಅವತ್ತ ಟಿವಿ ಒಳಗ ಹೇಳಲಿಲ್ಲೇನು ‘ನಾನು ಗಂಡಸು ಅವನು ಅಲ್ಲ ಅಂತ’. ಅದರಾಗ ತಪ್ಪು ಏನು ಐತಿ?, ಆ ಹುಡುಗಿನ ಪ್ರಚೋದನೆ ಮಾಡಿದರ ಇವರ ತಪ್ಪು ಏನು? ಅಕಿ ಇವರ ಕಡೆ ಮೊದಲು ಬಂದು ಎಲ್ಲ ಉಪಯೋಗ ತೊಗೊಂಡಳು. ಆಮ್ಯಾಲೆ ಸಾಹುಕಾರರಿಗೆ ತಿರುಗಿ ಬಿದ್ದಳು. ಬ್ಲಾಕ್‌ಮೇಲು ಮಾಡಿದಳು. ರೊಕ್ಕ ಕೇಳಿರ್‌ಬೇಕು, ಸಾಹುಕಾರರು ಕೊಡೋ ಅಷ್ಟು ಕೊಟ್ಟಿರಬೇಕು, ಆಮ್ಯಾಲೆ ಒಲ್ಲೆ ಅಂದಿರಬೇಕು. ಆವಾಗ ತನ್ನ ಬಾಯ್‌ಫ್ರೆಂಡ್ ಮತ್ತು ಅವನ ಫ್ರೆಂಡ್ಸ್ ಜೊತಿಗೆ ಸೇರಿಕೊಂಡು ಈ ಹಲ್ಕಾ ಕೆಲಸ ಮಾಡಿರಬೇಕು. ಈ ಟಿವಿ ಪತ್ರಕರ್ತರಿಗೆ ಹೆಂಗು ಕೆಲಸ ಇಲ್ಲ. ಲಾಕ್‌ಡೌನ್‌ದಾಗ ಅವರ ನೌಕರಿ ಹೋಗಿದ್ದಾವು. ಬಿಟ್ಟಿ ರೊಕ್ಕ ಸಿಗತದ ಅಂತ ಅದನ್ನ ವಿಡಿಯೋ ಮಾಡಿ ಬಿಟ್ಟರಬೇಕು” ಅಂತ ವಾದ ಮಾಡತಾರ.
ಭಾರತದಂತಹ ಗಂಡಾಳಿಕೆ ಸಮಾಜದೊಳಗ ಇದು ಏನು ಹೊಸದಲ್ಲ. ಆಶ್ಚರ್ಯಚಕಿತ ಮಾಡೋ ಅಂತ ವಿಷಯನೂ ಅಲ್ಲ.

ನಮ್ಮ ಜನ, ಮಾಧ್ಯಮ, ಪೊಲೀಸರು, ನ್ಯಾಯಾಲಯ ಎಲ್ಲರೂ ಹಿಂಗ ವಿಚಾರ ಮಾಡತಾರ ಅನ್ನಲಿಕ್ಕೆ ನಮ್ಮ ಇತಿಹಾಸ ಸಾಕ್ಷಿ ಅದ. ಈ ರೀತಿ ಮಾಡಲಿಲ್ಲ ಅಂದ್ರ ಆವಾಗ ಆಶ್ಚರ್ಯ ಆಗತದ.

ಇಂದಿಗೆ ಮೂವತ್ತು ವರ್ಷದ ಹಿಂದ ರಾಜಸ್ತಾನದ ಹಳ್ಳಿಯೊಳಗ ಭನವಾರಿ ದೇವಿ ಮೋಹನ ಲಾಲ್ ಅನ್ನುವ ಶೂದ್ರ ಜನಾಂಗಕ್ಕ ಸೇರಿದ ಹೆಣ್ಣು ಮಗಳ ಮೇಲೆ ಅತ್ಯಾಚಾರ ಆಗಿತ್ತು. ಇಂದಿನ ಅಂಗನವಾಡಿ- ಆಶಾ ಕಾರ್ಯಕರ್ತರ ರೀತಿಯಲ್ಲಿ ಅಂದು ಸಾಥಿನ ಆಗಿ ಕೆಲಸ ಮಾಡುತ್ತಿದ್ದ ಭನವಾರಿ ದೇವಿ ಮೇಲು ಜಾತಿ ಅನ್ನಿಸಿಕೊಳ್ಳುವ ಗೌಳಿ ಗುಜ್ಜರ ಜಾತಿಯ ಮನೆತನದ ಬಾಲ್ಯ ವಿವಾಹ ನಿಲ್ಲಿಸಲಿಕ್ಕೆ ಹೋದಳು. ಆ ಸಿಟ್ಟಿಗೆ ಆ ಐದು ಜನ ದನ ಕಾಯೋರು ಭನವಾರಿ ದೇವಿಯ ಗಂಡನನ್ನು ಥಳಿಸಿ ಅವಳನ್ನು ಗುಂಪು ಅತ್ಯಾಚಾರ ಮಾಡಿದರು. ಇದನ್ನು ಪ್ರತಿಭಟಿಸಿ ಮಹಿಳಾ ಸಂಘಟನೆಗಳು ದೆಹಲಿಯೊಳಗೆ ಹೋರಾಟ ಮಾಡಿದರು.

ಆದರ ನ್ಯಾಯಾಲಯ ಅದನ್ನ ಒಪ್ಪಲಿಲ್ಲ. ಅಲ್ಲಿನ ನ್ಯಾಯಾಧೀಶರು ಸಾಕ್ಷಿ ಸಾಲದು ಅಂತ ಆ ಐದು ಕಿರಾತಕರನ್ನ ಬಿಡುಗಡೆ ಮಾಡಿದರು. ಅವರು ಕೊಟ್ಟ ಕಾರಣಗಳು ಇವು:

1. ಗ್ರಾಮದ ಮುಖ್ಯಸ್ಥ ಅತ್ಯಾಚಾರದಂತಹ ಹೀನ ಕೆಲಸ ಮಾಡಲಾರ.

2. ವಿಭಿನ್ನ ಜಾತಿಯ ಜನ ಸೇರಿ ಗುಂಪು ಅತ್ಯಾಚಾರ ಮಾಡಲಾರರು.

3. ಚಿಕ್ಕಪ್ಪ ಹಾಗೂ ಅವರ ಅಣ್ಣನ ಮಗ ಸೇರಿ ಒಬ್ಬ ಮಹಿಳೆಯನ್ನು ಅತ್ಯಾಚಾರ ಮಾಡಲಿಕ್ಕೆ ಸಾಧ್ಯ ಇಲ್ಲ. ಅವರಿಗೆ ನಾಚಿಕೆ ಆದೀತು.

4. 50-60-70 ವರ್ಷದ ಹಿರಿಯ ನಾಗರಿಕರು ಈ ಕೆಲಸ ಮಾಡಲಾರರು.

5. ಮೇಲುಜಾತಿಯವರು ಕೆಳಜಾತಿಯ ಹೆಣ್ಣುಮಕ್ಕಳನ್ನು ಅತ್ಯಾಚಾರ ಮಾಡಲಾರರು. ಅದು ಅಪವಿತ್ರ ಅಂತ ಅವರಿಗೆ ಗೊತ್ತು.

6. ಹೆಂಡತಿಯನ್ನು ಅತ್ಯಾಚಾರ ಮಾಡುವಾಗ ಗಂಡನೇಕೆ ಸುಮ್ಮನೆ ಇದ್ದ? ಅದು ಅಸಾಧ್ಯ.

ಇತ್ಯಾದಿ.

ಈಗಲೂ ಇಂತಹ ಪ್ರಶ್ನೆಗಳನ್ನ ಕೇಳೋ ಜನ ಇದ್ದಾರ.

ಅನೇಕ ವರ್ಷದ ಹಿಂದ, ಹಿಂದಿ ಚಿತ್ರರಂಗದ ವಯಸ್ಸೇ ಆಗದ ಸುಂದರಿ ರೇಖಾ ನಟಿಸಿದ ಚಿತ್ರವೊಂದು ಭಾರಿ ಸುದ್ದಿ ಮಾಡಿತ್ತು. ಅದರೊಳಗ ರೇಖಾ ಭನವಾರಿ ದೇವಿ ಪಾತ್ರ ವಹಿಸಿದ್ದರು. ‘ರೇಖಾ ಅವರ ಮಾಸದ ಸೌಂದರ್ಯದ ಕಾರಣ ಅವರನ್ನ ನಾಯಕಿಯಾಗಿ ಆಯ್ಕೆ ಮಾಡಿರಬಹುದು’ ಅಂತ ನಮ್ಮ ಪಡ್ಡೆ ಬುದ್ಧಿಗೆ ಅನ್ನಿಸಬಹುದು. ಆದರೆ ಅದರ ನಿಜವಾದ ಕಾರಣ ಏನು ಅಂದ್ರ ಆ ಕಾಲದಾಗ ನಮ್ಮ ಜನರ ಮನಸ್ಸಿನೊಳಗ ಯಾವ ಪ್ರಶ್ನೆ – ಸಂದೇಹ ಇದ್ದವಲ್ಲ, ಅವೇ ಪ್ರಶ್ನೆ, ಸಂದೇಹ, ಇವತ್ತಿಗೂ ಅದಾವು. ಅದಕ್ಕೆ ಚಿರ ಜವ್ವನೆ ರೇಖಾ ಅವರನ್ನು ಭನವಾರಿ ದೇವಿ ಪಾತ್ರ ಮಾಡಲು ಆರಿಸಲಾಯಿತು.

ಇನ್ನೊಂದು ಸಾಮ್ಯ ಏನು ಅಂದ್ರ ಅಂದು ತಾಲೂಕು ನ್ಯಾಯಾಲಯದಿಂದ ಹಿಡಿದು ದೆಹಲಿಯ ಸರ್ವೋಚ್ಚ ನ್ಯಾಯಾಲಯದವರೆಗೆ ಹೆಂಗ ಭನವಾರಿ ದೇವಿ ಹೋರಾಟ ಮಾಡಿದಳಲ್ಲ, ಹಂಗ ಸಾಹುಕಾರರ ಸಂತ್ರಸ್ತ ಮಹಿಳೆ ಸಹಿತ ಗಟ್ಟಿತನದಿಂದ ಹೋರಾಟ ಶುರು ಮಾಡಿದ್ದಾಳ. ನಮ್ಮ ಸಮಾಜ ಅಕಿಗೆ ಹೆಂಗ ಸಾಥ್ ಕೊಡತದ ಅನ್ನೋದು ನೋಡಬೇಕು.

ಒಂದ ವ್ಯತ್ಯಾಸ ಎನಪಾ ಅಂದ್ರ ಆವಾಗ ಮಾಧ್ಯಮಗಳು ಭನವಾರಿ ದೇವಿ ಪರವಾಗಿ ಇದ್ದವು. ಸಾಹುಕಾರರ ಪರವಾಗಿ ಇರಲಿಲ್ಲ. ರಾಜಸ್ತಾನದ ಸ್ಥಳೀಯ ಪತ್ರಿಕೆಗಳು ಸಹಿತ ಜಮೀನುದಾರರನ್ನು ಎದುರು ಹಾಕಿಕೊಂಡು ಸುದ್ದಿ ಬರೆದವು. ಈಗ ಮಾತ್ರ ಮಾಧ್ಯಮಗಳು ಸಾಹುಕಾರರ ಪರವಾಗಿ ಇದ್ದಾವು. ಬಡವಿಯ ಚಿತ್ರ – ವಿಡಿಯೋಗಳನ್ನ ಟಿಆರ್‌ಪಿ ಸಲುವಾಗಿ ಮಾತ್ರ ಬಳಸಿಕೊಳ್ಳುತ್ತಾ ಅದಾವು.

ಅಲ್ಲವೇ ಮನೋಲ್ಲಾಸಿನಿ ?


ಇದನ್ನೂ ಓದಿ: ಭಿಕ್ಷೆ ಬೇಡಿ, ಸಾಲ ತನ್ನಿ ಇಲ್ಲವೇ ಕದ್ದುಕೊಂಡು ಬನ್ನಿ: ಆಮ್ಲಜನಕ ವಿಷಯವಾಗಿ ಕೇಂದ್ರದ ವಿರುದ್ಧ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...

ಮುಂಬೈ: ಬಜೆಟ್ ಅಧಿವೇಶನದ ನಡುವೆ ವಿಧಾನ ಭವನದ ಬಳಿ ವ್ಯಕ್ತಿಯೊಬ್ಬನಿಂದ ಆತ್ಮಹತ್ಯೆಗೆ ಯತ್ನ: ವಶಕ್ಕೆ ಪಡೆದ ಪೊಲೀಸರು

ಮುಂಬೈ: ಮಾರ್ಚ್ 11, ಬುಧವಾರ ಮಹಾರಾಷ್ಟ್ರ ವಿಧಾನ ಭವನದ ಹೊರಗೆ ವ್ಯಕ್ತಿಯೊಬ್ಬರು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿರುವುದಾಗಿ ವರದಿಯಾಗಿದೆ. ತಕ್ಷಣವೇ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.  2026 ರ ಮಹಾರಾಷ್ಟ್ರ ಬಜೆಟ್ ಅಧಿವೇಶನ ವಿಧಾನ ಭವನದಲ್ಲಿ...

ಕೋವಿಡ್ ಲಸಿಕೆ ಕೆಲ ಸಾವುಗಳಿಗೆ ಕಾರಣವಾಗಿದೆ ಎಂದು ಅಧಿಕೃತ ದತ್ತಾಂಶ ತೋರಿಸಿದೆ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಸರ್ಕಾರದ ಅಧೀನದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಬಳಿಕ ಕೆಲ ಸಾವುಗಳು ಸಂಭವಿಸಿರುವುದನ್ನು ಅಧಿಕೃತ ದತ್ತಾಂಶಗಳೇ ದೃಢಪಡಿಸಿವೆ. ಹೀಗಿರುವಾಗ, ಲಸಿಕೆ ಹಾಕಿಸಿಕೊಂಡ ನಂತರ ಸಾವು...

ತಮಿಳುನಾಡು| ಪೊಲೀಸ್ ದೌರ್ಜನ್ಯದಿಂದ ಎರಡು ತಿಂಗಳಲ್ಲಿ ನಾಲ್ವರು ದಲಿತರು ಸಾವು

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಪ್ರತಿಬಿಂಬಿಸುವ ಆತಂಕಕಾರಿ ವಿಚಾರವೊಂದು ಮುನ್ನಲೆಗೆ ಬಂದಿದ್ದು, ಪೊಲೀಸ್ ಹಿಂಸಾಚಾರದಿಂದಾಗಿ ಎರಡು ತಿಂಗಳ ಅವಧಿಯಲ್ಲಿ ನಾಲ್ವರು ದಲಿತರು ಸಾವನ್ನಪ್ಪಿದ್ದಾರೆ. ಈ ಸಾವುಗಳಲ್ಲಿ, ಎರಡು ಪ್ರಕರಣಗಳನ್ನು...

ಪಶ್ಚಿಮ ಏಷ್ಯಾ ಸಂಘರ್ಷ| ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿದ್ದಾಗಿ ವಿಡಿಯೋ ಹಂಚಿಕೊಂಡ ಅಮೆರಿಕ ಸೇನೆ

ಪಶ್ಚಿಮ ಏಷ್ಯಾದಿಂದ ತೈಲ ರಫ್ತನ್ನು ತಡೆಯಲು ಇರಾನ್ ಪ್ರಯತ್ನಿಸುತ್ತಿರುವುದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಇರಾನ್ ಜಲಸಂಧಿಯಲ್ಲಿ ಗಣಿಗಳನ್ನು...

13 ವರ್ಷಗಳಿಂದ ಕೋಮಾದಲ್ಲಿರುವ ಯುವಕನ ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ

ಕಳೆದ 13 ವರ್ಷಗಳಿಂದ ಕೋಮಾದಲ್ಲಿರುವ 32 ವರ್ಷದ ಹರೀಶ್ ರಾಣಾ ಎಂಬ ಯುವಕನ ಪರೋಕ್ಷ (ನಿಷ್ಕ್ರಿಯ) ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಬುಧವಾರ (ಮಾ.11) ಅನುಮತಿ ನೀಡಿದೆ ಎಂದು livelaw.in ವರದಿ ಮಾಡಿದೆ. ದೆಹಲಿ ಮೂಲದ ಹರೀಶ್...