Homeಅಂಕಣಗಳುಸುದ್ದಿಯೇನೇ ಮನೋಲ್ಲಾಸಿನಿ: ಭನವಾರಿ ದೇವಿ ಮತ್ತು ಅತ್ಯಾಚಾರದ ಕಾನೂನುಗಳು

ಸುದ್ದಿಯೇನೇ ಮನೋಲ್ಲಾಸಿನಿ: ಭನವಾರಿ ದೇವಿ ಮತ್ತು ಅತ್ಯಾಚಾರದ ಕಾನೂನುಗಳು

- Advertisement -
- Advertisement -

ರಮೇಶ್ ಜಾರಕಿಹೊಳಿ ಅವರ ಮನಿ ಒಳಗ ಸಿಡಿ ಪ್ಲೇಯರ್ ಇಲ್ಲ. ಅದು ಇರೋದು ಅವರ ಕಚೇರಿಯೊಳಗ. ಅವರು ಜಾಸ್ತಿ ಪಿಚ್ಚರು ನೋಡೋದಿಲ್ಲ. ಮೊನ್ನೆ ಮೊನ್ನೆಯಿಂದ ಟಿವಿ ನೋಡೋದು ಕಮ್ಮಿ ಅಗೆತಿ ಅಂತ ಅವರ ಪಿಎ ಸಾಹೇಬರು ಅಂದ್ರು ಮೊನ್ನೆ.

ಅದು ಯಾಕಾಪಾ ಅಂದ್ರ ಅವರು ತಮ್ಮ ವಿರುದ್ಧದ ಸುದ್ದಿ ಹಾಗೂ ಕೋವಿಡ್ ವೈರಸ್‌ಗಳಿಗೆ ಗುರಿಯಾಗಿ ತಮ್ಮ ಗೋಕಾಕ ಜಲಪಾತದ ಹತ್ತಿರದ ಮನಿ ಒಳಗ ಸುಧಾರಿಸಿಕೊಳ್ಳತಾ ಇದ್ದಾರ.

“ಗೋಕಾಕ ಸಾಹುಕಾರ್ ಅವರ ರಾಸಲೀಲೆ” ಅಂತ ಉದ್ದುದ್ದ ಸುದ್ದಿ ಬರೆದು ಊರೆಲ್ಲ ಗದ್ದಲ ಮಾಡಿದ ನಮ್ಮ ಮಾಧ್ಯಮಗಳು ಆ ಪ್ರಕರಣದ ಅಳಕ್ಕೆ ಇಳಿಯಲಿಲ್ಲ. ಹಂಗಂದ್ರ ಅದರ ಸರಿ ತಪ್ಪುಗಳ ಲೆಕ್ಕಾಚಾರ ಅಂತ ಅಲ್ಲ. ಆ ಘಟನೆಯ ಬೇರೆ ಬೇರೆ ಆಯಾಮಗಳ ವಿಚಾರ ಮಾಡಲಿಲ್ಲ ಅಂತ.

ಮೊದಲನೆದಾಗಿ ಮಾಧ್ಯಮಗಳ ಭಾಷೆ ಸೂಕ್ಷ್ಮವಾಗಿರಲಿಲ್ಲ. ಸಂತ್ರಸ್ತ ಯುವತಿಯನ್ನು ಸಿಡಿ ಲೇಡಿ ಅಂತ ಕರೆದ ನಮ್ಮ ಟಿವಿಯ ಹಿಡಿಗೂಟಗಳು (ಆಂಕರ್‌ಗಳು) ಆರೋಪಿ ರಾಜಕಾರಣಿಯನ್ನು ಬಣ್ಣಿಸುವಾಗ ಸಭ್ಯ ಭಾಷೆ ಬಳಸಿದವು. ಅವರ ಅಭಿಮಾನಿ ಯಾರೋ ವಕೀಲರ ನೋಟಿಸು ಕಳಿಸಿದರು ಅನ್ನುವ ಕಾರಣಕ್ಕೆ ಸಾಹುಕಾರ್ ಅನ್ನುವ ಪದ ಬಳಕೆ ಸಹಿತ ಬಿಟ್ಟವು.

ಆ ಹುಡುಗಿಗೆ ಅನ್ಯಾಯ ಅಗಿದೆಯೋ ಇಲ್ಲವೋ ಅನ್ನುವ ವಿಚಾರ ಮಾಡುವ ಬದಲಿಗೆ ‘ಅಕಿ ಯಾರು’, ‘ಯಾವ ಜಾತಿಯವಳು?’, ‘ಅಕಿ ಗೆಣೆಕಾರರು ಯಾರು’, ‘ಅವರ ಬೆನ್ನ ಹಿಂದಿನ ಮಹಾ ನಾಯಕರು ಯಾರು?’ ಇಂಥಾ ವಿಚಾರಗಳನ್ನು ಜನರ ತಲೆಯೊಳಗೆ ಒತ್ತಾಯದಿಂದ ತುಂಬಿದರು. ‘ಪಾಪ ಸಾಹುಕಾರರು ನೊಂದುಕೊಂಡರೇನೋ’ ಅಂತ ಬೇಜಾನ್ ಬೇಸರ ಮಾಡಿಕೊಂಡ ಟಿವಿ ಹಿಡಿಗೂಟಗಳು ‘ಆ ಬಡ ಹುಡುಗಿ ನೊಂದುಕೊಂಡಳೋ ಇಲ್ಲವೋ’ ಅಂತ ವಿಚಾರ ಸಹಿತ ಮಾಡಲಿಲ್ಲ.

ಇದೆಲ್ಲಾ ಆರಂಭವಾಗಿದ್ದು ಸಾಹುಕಾರರು ಗೃಹ ಸಚಿವರಿಗೆ ಬರೆದ ಒಂದು ಓಲೆಯಿಂದ. ರಾಜಕೀಯದಲ್ಲಿ ತಮ್ಮ ಬುಲೆಟ್ ಟ್ರೇನ್ ವೇಗದ ಬೆಳವಣಿಗೆಯನ್ನು ಸಹಿಸದ ಯಾರೋ ಕೆಲ ದುರುಳರು ತಮ್ಮ ವಿರುದ್ಧ ಷಡ್ಯಂತ್ರ ಮಾಡಿ ತಮ್ಮನ್ನು ಜೇನುಪಾಶದಲ್ಲಿ ಸಿಲುಕಿಸಿಬಿಟ್ಟಿದ್ದಾರೆ ಅಂತ ಅವರು ಗೋಳು ಹೇಳಿಕೊಂಡರು. ತನ್ನ ಸರ್ಕಾರದ ಹುಟ್ಟಿಗೆ ಕಾರಣವಾದ ಈ ಆಧುನಿಕ ಜಮೀನುದಾರನ ಗೋಳು ನೋಡಲಿಕ್ಕೆ ಆಗದ ಘನ ಸರಕಾರ ಮಂತ್ರಿಗಳಿಗೆ ಗಾಳ ಹಾಕಿದ ಕಂತ್ರಿಗಳು ಯಾರು ಅಂತ ತನಿಖೆ ಮಾಡಲು ಒಂದು ಸಿಟ್ (ಎಸ್‌ಐಟಿ) ನೇಮಿಸಿತು. ಆ ನಿಕಟಪೂರ್ವ ಮಂತ್ರಿಗಳಿಂದ ಸಂತ್ರಸ್ತ ಯುವತಿ ಅನ್ಯಾಯ ಮಾಡಿದರೋ ಇಲ್ಲವೋ ಅನ್ನೋದು ಆ ಸಿಟ್‌ನ ಲಿಸ್ಟ್‌ನಲ್ಲಿ ಇರಲಿಲ್ಲ.

ಶುರುವಾತಿಗೆ ಅದು ಹೆಸರಿಗೆ ತಕ್ಕ ಹಾಗೆ ಸಿಟ್ ಮಾಡಿತು. ಅಂದರೆ ಸುಮ್ಮನೆ ಕೂತುಬಿಟ್ಟಿತು.
ಆಮ್ಯಾಲೆ ಒಂದು ಪ್ರಥಮ ಮಾಹಿತಿ ವರದಿಯ ಪ್ರಹಸನ ನಡೀತು. ಒಬ್ಬ ಸಾಮಾಜಿಕ ಹಾರಾಟಗಾರರು ಒಂದು ದೂರು, ಅದಕ್ಕೆ ತಕ್ಕ ಸಾಕ್ಷಿ ಕೊಟ್ಟ ಮೇಲೆ ಅದರ ತಯಾರಿ ಆರಂಭವಾಯಿತು. ಉಚ್ಚ ನ್ಯಾಯಾಲಯ, ಸರ್ವೋಚ್ಚ ನ್ಯಾಯಾಲಯಗಳ ಹಲವಾರು ತೀರ್ಪುಗಳ ವಿರುದ್ಧ ರಾಜ್ಯದ ಪೊಲೀಸರು ನಡೆದುಕೊಂಡರು. ಇಷ್ಟು ಘೋರ ಅಪರಾಧದ ಆರೋಪ ಇದ್ದರೂ ದೂರು ದಾಖಲು ಆಗಲಿಲ್ಲ. ಎಫ್‌ಐಆರ್ ಮಾಡೋರು ಯಾರು ಅನ್ನೋದು ಗೊತ್ತಾಗೋ ಮೊದಲೇ ಅದರ ಜೀವ ಆರಿಹೋತು.

ಆನಂತರ, ಸಾರ್ವಜನಿಕರ ಒತ್ತಡ ಹೆಚ್ಚಿ, ನ್ಯಾಯಾಲಯದ ಮಧ್ಯಪ್ರವೇಶ ಆದನಂತರ ಇನ್ನೊಂದು ಎಫ್‌ಐಆರ್ ಆಯಿತು. ಇಷ್ಟು ಎಲ್ಲಾ ಆಗೋವಾಗ ಮೊದಲಿಗೆ ದೂರು ನೀಡಿದ ಸಾಮಾಜಿಕ ಹಾರಾಟಗಾರರು ಪ್ರಕರಣದಿಂದ ದೂರವಾದರು.

ಅಲ್ಲಿಗೆ ಈ ಪ್ರಕರಣದ ಅಪರಾಧದ ಆಯಾಮದ ಬಿಸಿ ಕಮ್ಮಿ ಆಗಿ ಅದರ ರಾಜಕಿಯ ಆಯಾಮದ ಉಗಿ ಎದ್ದಿತ್ತು. ಅದರ ಝಳ ಬೆಂಗಳೂರಿನಿಂದ ಶುರು ಆಗಿ ಗೋಕಾಕಗೆ ತಟ್ಟಿತ್ತು.

ಈಗ ಗೋಕಾಕ ಎಂಬ ಸರ್ವಾಧಿಪತ್ಯದ ರಾಜ್ಯದಲ್ಲಿ ಎಲ್ಲರೂ ಸಿಡಿ ಲೇಡಿ ಅನ್ನುವ ಪದ ಬಳಸತಾರ. ಅದರ ಅದು ಆ ಹುಡುಗಿಗೆ ಅಲ್ಲ. ರಾಜೀನಾಮೆ ನೀಡಿ ಸರಕಾರದೊಂದಿಗೆ ರಾಜಿ ಮಾಡಿಕೊಂಡ ಮಾಜಿ ಮಂತ್ರಿಯ ಬಗ್ಗೆ ಮಾತಾಡುವಾಗ. ಆದರೆ ಅದು ಕುಶಾಲಿಗೆ. ಆ ನಂತರ ಅವರ ಮಾತು ಗಂಭೀರ ಆಗತಾವ.

“ನಂ ಸಾಹುಕಾರ್ ಏನು ತಪ್ಪು ಮಾಡಿದ್ದಾನ ಹೇಳ್ರಿ?” ಅಂತ ನಿಮ್ಮನ್ನ ಪ್ರಶ್ನೆ ಮಾಡತಾರ. “ಎಲ್ಲ ಗಂಡಸರು ಮಾಡೋದನ್ನ ಮಾಡಿದ್ದಾನ. ಅವತ್ತ ಟಿವಿ ಒಳಗ ಹೇಳಲಿಲ್ಲೇನು ‘ನಾನು ಗಂಡಸು ಅವನು ಅಲ್ಲ ಅಂತ’. ಅದರಾಗ ತಪ್ಪು ಏನು ಐತಿ?, ಆ ಹುಡುಗಿನ ಪ್ರಚೋದನೆ ಮಾಡಿದರ ಇವರ ತಪ್ಪು ಏನು? ಅಕಿ ಇವರ ಕಡೆ ಮೊದಲು ಬಂದು ಎಲ್ಲ ಉಪಯೋಗ ತೊಗೊಂಡಳು. ಆಮ್ಯಾಲೆ ಸಾಹುಕಾರರಿಗೆ ತಿರುಗಿ ಬಿದ್ದಳು. ಬ್ಲಾಕ್‌ಮೇಲು ಮಾಡಿದಳು. ರೊಕ್ಕ ಕೇಳಿರ್‌ಬೇಕು, ಸಾಹುಕಾರರು ಕೊಡೋ ಅಷ್ಟು ಕೊಟ್ಟಿರಬೇಕು, ಆಮ್ಯಾಲೆ ಒಲ್ಲೆ ಅಂದಿರಬೇಕು. ಆವಾಗ ತನ್ನ ಬಾಯ್‌ಫ್ರೆಂಡ್ ಮತ್ತು ಅವನ ಫ್ರೆಂಡ್ಸ್ ಜೊತಿಗೆ ಸೇರಿಕೊಂಡು ಈ ಹಲ್ಕಾ ಕೆಲಸ ಮಾಡಿರಬೇಕು. ಈ ಟಿವಿ ಪತ್ರಕರ್ತರಿಗೆ ಹೆಂಗು ಕೆಲಸ ಇಲ್ಲ. ಲಾಕ್‌ಡೌನ್‌ದಾಗ ಅವರ ನೌಕರಿ ಹೋಗಿದ್ದಾವು. ಬಿಟ್ಟಿ ರೊಕ್ಕ ಸಿಗತದ ಅಂತ ಅದನ್ನ ವಿಡಿಯೋ ಮಾಡಿ ಬಿಟ್ಟರಬೇಕು” ಅಂತ ವಾದ ಮಾಡತಾರ.
ಭಾರತದಂತಹ ಗಂಡಾಳಿಕೆ ಸಮಾಜದೊಳಗ ಇದು ಏನು ಹೊಸದಲ್ಲ. ಆಶ್ಚರ್ಯಚಕಿತ ಮಾಡೋ ಅಂತ ವಿಷಯನೂ ಅಲ್ಲ.

ನಮ್ಮ ಜನ, ಮಾಧ್ಯಮ, ಪೊಲೀಸರು, ನ್ಯಾಯಾಲಯ ಎಲ್ಲರೂ ಹಿಂಗ ವಿಚಾರ ಮಾಡತಾರ ಅನ್ನಲಿಕ್ಕೆ ನಮ್ಮ ಇತಿಹಾಸ ಸಾಕ್ಷಿ ಅದ. ಈ ರೀತಿ ಮಾಡಲಿಲ್ಲ ಅಂದ್ರ ಆವಾಗ ಆಶ್ಚರ್ಯ ಆಗತದ.

ಇಂದಿಗೆ ಮೂವತ್ತು ವರ್ಷದ ಹಿಂದ ರಾಜಸ್ತಾನದ ಹಳ್ಳಿಯೊಳಗ ಭನವಾರಿ ದೇವಿ ಮೋಹನ ಲಾಲ್ ಅನ್ನುವ ಶೂದ್ರ ಜನಾಂಗಕ್ಕ ಸೇರಿದ ಹೆಣ್ಣು ಮಗಳ ಮೇಲೆ ಅತ್ಯಾಚಾರ ಆಗಿತ್ತು. ಇಂದಿನ ಅಂಗನವಾಡಿ- ಆಶಾ ಕಾರ್ಯಕರ್ತರ ರೀತಿಯಲ್ಲಿ ಅಂದು ಸಾಥಿನ ಆಗಿ ಕೆಲಸ ಮಾಡುತ್ತಿದ್ದ ಭನವಾರಿ ದೇವಿ ಮೇಲು ಜಾತಿ ಅನ್ನಿಸಿಕೊಳ್ಳುವ ಗೌಳಿ ಗುಜ್ಜರ ಜಾತಿಯ ಮನೆತನದ ಬಾಲ್ಯ ವಿವಾಹ ನಿಲ್ಲಿಸಲಿಕ್ಕೆ ಹೋದಳು. ಆ ಸಿಟ್ಟಿಗೆ ಆ ಐದು ಜನ ದನ ಕಾಯೋರು ಭನವಾರಿ ದೇವಿಯ ಗಂಡನನ್ನು ಥಳಿಸಿ ಅವಳನ್ನು ಗುಂಪು ಅತ್ಯಾಚಾರ ಮಾಡಿದರು. ಇದನ್ನು ಪ್ರತಿಭಟಿಸಿ ಮಹಿಳಾ ಸಂಘಟನೆಗಳು ದೆಹಲಿಯೊಳಗೆ ಹೋರಾಟ ಮಾಡಿದರು.

ಆದರ ನ್ಯಾಯಾಲಯ ಅದನ್ನ ಒಪ್ಪಲಿಲ್ಲ. ಅಲ್ಲಿನ ನ್ಯಾಯಾಧೀಶರು ಸಾಕ್ಷಿ ಸಾಲದು ಅಂತ ಆ ಐದು ಕಿರಾತಕರನ್ನ ಬಿಡುಗಡೆ ಮಾಡಿದರು. ಅವರು ಕೊಟ್ಟ ಕಾರಣಗಳು ಇವು:

1. ಗ್ರಾಮದ ಮುಖ್ಯಸ್ಥ ಅತ್ಯಾಚಾರದಂತಹ ಹೀನ ಕೆಲಸ ಮಾಡಲಾರ.

2. ವಿಭಿನ್ನ ಜಾತಿಯ ಜನ ಸೇರಿ ಗುಂಪು ಅತ್ಯಾಚಾರ ಮಾಡಲಾರರು.

3. ಚಿಕ್ಕಪ್ಪ ಹಾಗೂ ಅವರ ಅಣ್ಣನ ಮಗ ಸೇರಿ ಒಬ್ಬ ಮಹಿಳೆಯನ್ನು ಅತ್ಯಾಚಾರ ಮಾಡಲಿಕ್ಕೆ ಸಾಧ್ಯ ಇಲ್ಲ. ಅವರಿಗೆ ನಾಚಿಕೆ ಆದೀತು.

4. 50-60-70 ವರ್ಷದ ಹಿರಿಯ ನಾಗರಿಕರು ಈ ಕೆಲಸ ಮಾಡಲಾರರು.

5. ಮೇಲುಜಾತಿಯವರು ಕೆಳಜಾತಿಯ ಹೆಣ್ಣುಮಕ್ಕಳನ್ನು ಅತ್ಯಾಚಾರ ಮಾಡಲಾರರು. ಅದು ಅಪವಿತ್ರ ಅಂತ ಅವರಿಗೆ ಗೊತ್ತು.

6. ಹೆಂಡತಿಯನ್ನು ಅತ್ಯಾಚಾರ ಮಾಡುವಾಗ ಗಂಡನೇಕೆ ಸುಮ್ಮನೆ ಇದ್ದ? ಅದು ಅಸಾಧ್ಯ.

ಇತ್ಯಾದಿ.

ಈಗಲೂ ಇಂತಹ ಪ್ರಶ್ನೆಗಳನ್ನ ಕೇಳೋ ಜನ ಇದ್ದಾರ.

ಅನೇಕ ವರ್ಷದ ಹಿಂದ, ಹಿಂದಿ ಚಿತ್ರರಂಗದ ವಯಸ್ಸೇ ಆಗದ ಸುಂದರಿ ರೇಖಾ ನಟಿಸಿದ ಚಿತ್ರವೊಂದು ಭಾರಿ ಸುದ್ದಿ ಮಾಡಿತ್ತು. ಅದರೊಳಗ ರೇಖಾ ಭನವಾರಿ ದೇವಿ ಪಾತ್ರ ವಹಿಸಿದ್ದರು. ‘ರೇಖಾ ಅವರ ಮಾಸದ ಸೌಂದರ್ಯದ ಕಾರಣ ಅವರನ್ನ ನಾಯಕಿಯಾಗಿ ಆಯ್ಕೆ ಮಾಡಿರಬಹುದು’ ಅಂತ ನಮ್ಮ ಪಡ್ಡೆ ಬುದ್ಧಿಗೆ ಅನ್ನಿಸಬಹುದು. ಆದರೆ ಅದರ ನಿಜವಾದ ಕಾರಣ ಏನು ಅಂದ್ರ ಆ ಕಾಲದಾಗ ನಮ್ಮ ಜನರ ಮನಸ್ಸಿನೊಳಗ ಯಾವ ಪ್ರಶ್ನೆ – ಸಂದೇಹ ಇದ್ದವಲ್ಲ, ಅವೇ ಪ್ರಶ್ನೆ, ಸಂದೇಹ, ಇವತ್ತಿಗೂ ಅದಾವು. ಅದಕ್ಕೆ ಚಿರ ಜವ್ವನೆ ರೇಖಾ ಅವರನ್ನು ಭನವಾರಿ ದೇವಿ ಪಾತ್ರ ಮಾಡಲು ಆರಿಸಲಾಯಿತು.

ಇನ್ನೊಂದು ಸಾಮ್ಯ ಏನು ಅಂದ್ರ ಅಂದು ತಾಲೂಕು ನ್ಯಾಯಾಲಯದಿಂದ ಹಿಡಿದು ದೆಹಲಿಯ ಸರ್ವೋಚ್ಚ ನ್ಯಾಯಾಲಯದವರೆಗೆ ಹೆಂಗ ಭನವಾರಿ ದೇವಿ ಹೋರಾಟ ಮಾಡಿದಳಲ್ಲ, ಹಂಗ ಸಾಹುಕಾರರ ಸಂತ್ರಸ್ತ ಮಹಿಳೆ ಸಹಿತ ಗಟ್ಟಿತನದಿಂದ ಹೋರಾಟ ಶುರು ಮಾಡಿದ್ದಾಳ. ನಮ್ಮ ಸಮಾಜ ಅಕಿಗೆ ಹೆಂಗ ಸಾಥ್ ಕೊಡತದ ಅನ್ನೋದು ನೋಡಬೇಕು.

ಒಂದ ವ್ಯತ್ಯಾಸ ಎನಪಾ ಅಂದ್ರ ಆವಾಗ ಮಾಧ್ಯಮಗಳು ಭನವಾರಿ ದೇವಿ ಪರವಾಗಿ ಇದ್ದವು. ಸಾಹುಕಾರರ ಪರವಾಗಿ ಇರಲಿಲ್ಲ. ರಾಜಸ್ತಾನದ ಸ್ಥಳೀಯ ಪತ್ರಿಕೆಗಳು ಸಹಿತ ಜಮೀನುದಾರರನ್ನು ಎದುರು ಹಾಕಿಕೊಂಡು ಸುದ್ದಿ ಬರೆದವು. ಈಗ ಮಾತ್ರ ಮಾಧ್ಯಮಗಳು ಸಾಹುಕಾರರ ಪರವಾಗಿ ಇದ್ದಾವು. ಬಡವಿಯ ಚಿತ್ರ – ವಿಡಿಯೋಗಳನ್ನ ಟಿಆರ್‌ಪಿ ಸಲುವಾಗಿ ಮಾತ್ರ ಬಳಸಿಕೊಳ್ಳುತ್ತಾ ಅದಾವು.

ಅಲ್ಲವೇ ಮನೋಲ್ಲಾಸಿನಿ ?


ಇದನ್ನೂ ಓದಿ: ಭಿಕ್ಷೆ ಬೇಡಿ, ಸಾಲ ತನ್ನಿ ಇಲ್ಲವೇ ಕದ್ದುಕೊಂಡು ಬನ್ನಿ: ಆಮ್ಲಜನಕ ವಿಷಯವಾಗಿ ಕೇಂದ್ರದ ವಿರುದ್ಧ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಎಪ್‌ಸ್ಟೀನ್‌ ಫೈಲ್ಸ್ ಜನಾಕ್ರೋಶ : ಎಐ ಶೃಂಗಸಭೆಯಿಂದ ದೂರ ಉಳಿದ ಬಿಲ್‌ ಗೇಟ್ಸ್‌

ಎಪ್‌ಸ್ಟೀನ್‌ ಫೈಲ್ಸ್‌ ಮುಂದಿಟ್ಟುಕೊಂಡು ಜನರು ತೀವ್ರ ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ, 'ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ'ಯಿಂದ ಮೈಕ್ರೋಸಾಫ್ಟ್‌ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ದೂರ ಉಳಿದಿದ್ದಾರೆ. ಈ ಕುರಿತು ಗೇಟ್ಸ್ ಫೌಂಡೇಶನ್ ಇಂಡಿಯಾ ಗುರುವಾರ...

ಬೆಂಗಳೂರಿನಲ್ಲಿ ರಂಜಾನ್ ಆಹಾರ ಮೇಳ ನಡೆಸದಂತೆ ಹೋಟೆಲ್‌ಗಳಿಗೆ ಎಚ್ಚರಿಕೆ

ಬೆಂಗಳೂರು: ಫ್ರೇಸರ್ ಟೌನ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಎಂಎಂ ರಸ್ತೆಯಲ್ಲಿ ರಂಜಾನ್ ಆಹಾರ ಮೇಳ ನಡೆಸದಂತೆ ಹೋಟೆಲ್ ಮಾಲೀಕರಿಗೆ ಸ್ಥಳೀಯ ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ. ರಂಜಾನ್ ಆಹಾರ ಮೇಳದಿಂದ ಸಂಚಾರ ದಟ್ಟಣೆ. ಅವ್ಯವಸ್ಥೆಯ ಜೊತೆಗೆ...

‘ದಿ ಕೇರಳ ಸ್ಟೋರಿ-2’ ಚಲನಚಿತ್ರ ಜಾತ್ಯತೀತತೆಗೆ ಬೆದರಿಕೆ: ಮುಖ್ಯಮಂತ್ರಿ ಪಿಣರಾಯಿ ವಿಜಯನ್

'ದಿ ಕೇರಳ ಸ್ಟೋರಿ' ಚಿತ್ರದ ಎರಡನೇ ಭಾಗ ಬಿಡುಗಡೆಯಾಗುತ್ತಿರುವ ಬಗ್ಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಳವಳ ವ್ಯಕ್ತಪಡಿಸಿದ್ದು, ಇದರ ಮೊದಲ ಭಾಗವು "ರಾಜ್ಯದ ವಿರುದ್ಧ ದ್ವೇಷವನ್ನು ಹರಡುವ ಮತ್ತು ನಮ್ಮ ಜಾತ್ಯತೀತ...

ಬಿಜೆಪಿ ಸೇರಲು ಸಿದ್ದರಾದ ಭೂಪೇನ್ ಬೋರಾ : ಪ್ರಿಯಾಂಕಾ, ಡಿಕೆಶಿ ಸೇರಿದಂತೆ ‘ಕೈ ಟ್ರಬಲ್ ಶೂಟರ್‌ಗಳು’ ಅಸ್ಸಾಂಗೆ ದೌಡು

ರಾಜ್ಯ ಕಾಂಗ್ರೆಸ್‌ ಘಟಕದ ಮಾಜಿ ಅಧ್ಯಕ್ಷ ಭೂಪೇನ್ ಬೋರಾ ಬಿಜೆಪಿಗೆ ಹಾರಲು ಸಿದ್ದರಾಗಿರುವ ನಡುವೆ ಪ್ರಿಯಾಂಕಾ ಗಾಂಧಿ, ಡಿ.ಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್‌ನ ಟ್ರಬಲ್ ಶೂಟರ್‌ಗಳ ತಂಡ ಅಸ್ಸಾಂಗೆ ದೌಡಾಯಿಸಿದೆ. ಅಸ್ಸಾಂ ಕಾಂಗ್ರೆಸ್ ಅಭ್ಯರ್ಥಿಗಳ...

ಸರ್ಕಾರದ ಭರವಸೆಗೆ ಮಣಿಯದ ಸಾರಿಗೆ ಸಿಬ್ಬಂದಿ : ಮುಷ್ಕರ ಮುಂದುವರಿಸಲು ನಿರ್ಧಾರ

ಹಿಂಬಾಕಿ ಪಾವತಿ, ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರಾಜ್ಯದ ನಾಲ್ಕು ಸಾರಿಗೆ ನಿಗಮಗಳಾದ ಕೆಎಸ್‌ಆರ್‌ಟಿಸಿ, ಕೆಕೆಆರ್‌ಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ ಹಾಗೂ ಬಿಎಂಟಿಸಿಯ ನೌಕರರು ಇಂದು (ಫೆ.19) ಮುಷ್ಕರಕ್ಕೆ ಕರೆ ಕೊಟ್ಟಿದ್ದಾರೆ. ನೌಕರರ ಪ್ರತಿಭಟನೆ...

ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ಪತ್ನಿಯ ಕತ್ತು ಹಿಸುಕಿ ಕೊಂದ ನಿವೃತ್ತ ಇಸ್ರೋ ಉದ್ಯೋಗಿ ಬಂಧನ

ಬೆಂಗಳೂರು: ಆಘಾತಕಾರಿ ಘಟನೆಯೊಂದರಲ್ಲಿ, 72 ವರ್ಷದ ನಿವೃತ್ತ ಇಸ್ರೋ ಉದ್ಯೋಗಿಯೊಬ್ಬರು ವೈಟ್‌ಫೀಲ್ಡ್ ವಿಭಾಗದ ಆವಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಬುಧವಾರ ಪತ್ನಿಯನ್ನು ಕತ್ತು ಹಿಸುಕಿ ಕೊಂದಿರುವುದಾಗಿ ವರದಿಯಾಗಿದೆ.  ಬೊಮ್ಮನಹಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ಬೆಳಿಗ್ಗೆ...

ಮಧ್ಯಪ್ರದೇಶದಲ್ಲಿ ಶಾಸಕ ರಾಜಾ ಸಿಂಗ್‌ನಿಂದ ದ್ವೇಷ ಭಾಷಣ; ಪ್ರಚೋದನಕಾರಿ ‘ಶಿರಚ್ಛೇದನ’ ಹೇಳಿಕೆಗೆ ವಿರೋಧ

ತಮ್ಮ ಪ್ರಚೋದನಕಾರಿ ಹೇಳಿಕೆಗಳಿಂದಲೇ ಕುಖ್ಯಾತರಾಗಿರುವ ಹೈದರಾಬಾದ್‌ನ ಗೋಶಮಹಲ್ ಶಾಸಕ ಟಿ ರಾಜಾ ಸಿಂಗ್ ಸಾರ್ವಜನಿಕ ರ‍್ಯಾಲಿಯಲ್ಲಿ ಮತ್ತೊಮ್ಮೆ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಮಧ್ಯಪ್ರದೇಶದಲ್ಲಿ ಅವರು ಆಡಿದ ಮಾತುಗಳು ವಿವಾದಕ್ಕೆ ಕಾರಣವಾಗಿದೆ. "ಪ್ರತಿಯೊಬ್ಬ ಬಜರಂಗಿಗಳು...

ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಜಾತಿ ಆಧಾರಿತ ತಾರತಮ್ಯ ಆರೋಪ; ‘ಬಡ್ತಿ ವಿಳಂಬವಾಗಿದೆ..’; ಎಂದ ದಲಿತ ಪ್ರಾಧ್ಯಾಪಕ

ಪಂಜಾಬ್ ವಿಶ್ವವಿದ್ಯಾಲಯದ ದಲಿತ ಸಹಾಯಕ ಪ್ರಾಧ್ಯಾಪಕ ಹರ್‌ಪ್ರೀತ್ ಸಿಂಗ್ ಅವರು ವಿಶ್ವವಿದ್ಯಾಲಯದಲ್ಲಿ ಜಾತಿ ಆಧಾರಿತ ತಾರತಮ್ಯ ಇದೆ ಎಂದು ಸಾರ್ವಜನಿಕವಾಗಿ ಆರೋಪಿಸಿದ್ದಾರೆ. ತನ್ನ ಜಾತಿಯ ಕಾರಣದಿಂದಾಗಿ ಉದ್ದೇಶಪೂರ್ವಕವಾಗಿ ಬಡ್ತಿ ವಿಳಂಬ ಮಾಡಲಾಗಿದೆ...

ಮಹಾರಾಷ್ಟ್ರ: ತಾಯಿ, ಸಹೋದರನ ಕಣ್ಣಿಗೆ ಮೆಣಸಿನ ಪುಡಿ ಎರೆಚಿ ಮದುವೆ ಸಿದ್ಧತೆಯಲ್ಲಿದ್ದ 21 ವರ್ಷದ ಯುವತಿಯ ಅಪಹರಣ

ಮುಂಬೈ: ಆಘಾತಕಾರಿ ಘಟನೆಯೊಂದರಲ್ಲಿ, ಮಹಾರಾಷ್ಟ್ರದ ಪುಣೆ ಜಿಲ್ಲೆಯ ಇಂದಾಪುರ ತಹಸಿಲ್‌ನ ಭಿಗ್ವಾನ್‌ನಲ್ಲಿ 21 ವರ್ಷದ ಯುವತಿಯನ್ನು ಆಕೆಯ ತಾಯಿ ಮತ್ತು ಸಹೋದರನ ಮುಂದೆಯೇ ಇಬ್ಬರು ವ್ಯಕ್ತಿಗಳು ಅಪಹರಿಸಿದ್ದಾರೆ ಎಂದು ಆರೋಪಿಸಲಾಗಿದೆ.ಮದುವೆ ಸಿದ್ಧತೆಯಲ್ಲಿದ್ದ ಯುವತಿ...

KERALA SIR | ಬಿಜೆಪಿ ಮುಖಂಡನ ದೂರು: ಪೌರತ್ವ ಸಾಬೀತುಪಡಿಸುವಂತೆ ಮುಸ್ಲಿಂ ವ್ಯಕ್ತಿಗೆ ನೋಟಿಸ್!

ಬಿಜೆಪಿ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಲೋಕೇಶ್ ನೋಂಡಾ ಎಂಬಾತನ ದೂರಿನ ಮೇರೆಗೆ ಹಿರಿಯ ವಯಸ್ಸಿನ ಮುಸ್ಲಿಂ ವ್ಯಕ್ತಿಯೊಬ್ಬರಿಗೆ ಭಾರತೀಯ ಪೌರತ್ವ ಸಾಬೀತುಪಡಿಸುವಂತೆ ಚುನಾವಣಾ ನೋಂದಣಿ ಅಧಿಕಾರಿ (ಇಆರ್‌ಒ) ನೋಟಿಸ್ ಜಾರಿ ಮಾಡಿದ್ದು, ಆ...