Homeಅಂಕಣಗಳುಪುಸ್ತಕ ವಿಮರ್ಶೆ; ಗುಣಸಾಗರಿ: ಜಾನಪದ ತಂತುವಿನ ಮೇಲೆ ನುಡಿಯುವ ಗಾಂಧಿತನದ ಕಥೆಗಳು

ಪುಸ್ತಕ ವಿಮರ್ಶೆ; ಗುಣಸಾಗರಿ: ಜಾನಪದ ತಂತುವಿನ ಮೇಲೆ ನುಡಿಯುವ ಗಾಂಧಿತನದ ಕಥೆಗಳು

- Advertisement -
- Advertisement -

ಪ್ರಬಂಧಕಾರ, ವಿಮರ್ಶಕ, ಛಾಯಾಗ್ರಾಹಕ ಹೀಗೆ ಸೃಜನಶೀಲತೆಯ ವಿವಿಧ ಪ್ರಕಾರಗಳೇ ಆಗಿರುವ ಜಿ.ವಿ ಆನಂದಮೂರ್ತಿಯವರ ಹೊಸ ಕಥಾಸಂಕಲನ ‘ಗುಣಸಾಗರಿ’. ಸಂಕಲನವಾಗಿ ಕೈಸೇರುತ್ತಿರುವುದು ಹೊಸದಾಗೇ ಆದರೂ, ಇದರೊಳಗಿನ ಕಥೆಗಳಲ್ಲಿ ಕೆಲವನ್ನು ಇಪ್ಪತ್ತು ವರ್ಷಕ್ಕೂ ಹಿಂದೆಯೇ ಬರೆದದ್ದು. ತುಂಬಾ ಹಿಂದಿನಿಂದಲೂ ಬರೆಸಿಕೊಂಡಿರುವ ಕಥೆಗಳೇ ಆದರೂ ಅವುಗಳ ತಾಜಾತನ ಇಂದಿಗೂ ಉಳಿದಿರುವುದು ಅವುಗಳ ಸಲ್ಲುವ ಗುಣದಿಂದಾಗಿ. ಇದೊಂದು ಜಾನಪದದ ಫ್ಲೇವರ್ ಇರಬಹುದಾದ ಸಂಕಲನವೇ ಎಂಬುದರ ಸುಳಿವನ್ನ ಶೀರ್ಷಿಕೆಯೇ ಬಿಟ್ಟುಕೊಡುವುದರಿಂದ ಆ ಸ್ವಾದಕ್ಕೆ ಧಕ್ಕೆ ಇಲ್ಲದಂತೆ ಎಲ್ಲಾ ಹಂತದಲ್ಲೂ ಸವಿಯಬಹುದಾಗಿದೆ.

ಕಥೆಗಾರರ ಬಹಳ ಮುಖ್ಯ ಆಸಕ್ತಿಯಾದ ಜಾನಪದದ ಮಿಡಿತವನ್ನ ಇಲ್ಲಿನ ಬಹುತೇಕ ಕಥೆಗಳಲ್ಲಿ ಕಾಣಬಹುದು. ಅದು ಕೆಲವು ಕಥೆಗಳಲ್ಲಿ ನೇರವಾಗಿ ಬಿಡುಬೀಸಾಗಿ ಕಾಣಿಸಿಕೊಂಡರೆ ಇನ್ನುಳಿದ ಕೆಲ ಕಥೆಗಳಲ್ಲಿ ದನಿಪೂರ್ಣವಾಗಿ ಅಂತರ್ಗತವಾಗಿರುವುದನ್ನ ಕಾಣಬಹುದು. ಈ ಸಂಕಲನ ವಿವಿಧ ರೀತಿಯ ಕಥನ ಮಾದರಿಗೂ ಸಾಕ್ಷಿಯಾಗಿದೆ. ಪುಂಖಾನುಪುಂಖವಾಗಿ ಕಥಿಸುವ ಕಥೆಗಾರರಲ್ಲಿ ಏಕತಾನತೆಯ ಮಾದರಿಯೊಂದು ಏರ್ಪಟ್ಟು ಅವುಗಳಿಂದ ಬಿಡಿಸಿಕೊಳ್ಳುವುದೊಂದು ಸವಾಲೆ ಆಗಿರುತ್ತದೆ. ಆದರೆ ಜಿ.ವಿ ಆನಂದ ಮೂರ್ತಿಯವರ ಕಥನ ಮಾದರಿಗಳು ಕಥೆಯಿಂದ ಕಥೆಗೆ ಭಿನ್ನವಾಗಿರುವುದನ್ನ ಕಾಣಬಹುದಾಗಿದೆ. ಬಹುಶಃ ಇಲ್ಲಿನ ಕಥೆಗಳು ವಿವಿಧ ಕಾಲದಲ್ಲಿ ರಚನೆಯಾಗಿರುವುದೂ ಇದಕ್ಕೆ ಕಾರಣವಿರಬಹುದು. ಹಾಗಾಗಿ ಇದೊಂದು ಕಥನ ಮಾದರಿಗಳ ಕಲಿಕೆಗಿರುವ ಪ್ರಾತಿನಿಧಿಕ ಸಂಕಲನವೂ ಆದೀತು.

ಈ ಸಂಕಲನದ ಕಥೆಗಳಲ್ಲಿ ಕಥೆಗಾರರ ಆಸಕ್ತಿಯ ಜಾನಪದ ಮೌಲ್ಯಗಳೊಂದಿಗೆ ಗಾಂಧೀ ತತ್ವಗಳೂ ಬೆರೆತಿದ್ದು, ಈ ಆಧುನಿಕ ಕಾಲದಲ್ಲಿ ಇವೆರಡರ ಸಮ್ಮಿಶ್ರವನ್ನ ಕಾಣುವ, ಕಂಡು ಆಶಿಸುವ ಸೋಜುಗ ಓದುಗನದ್ದಾಗುತ್ತದೆ. ಆದ್ದರಿಂದಲೇ ಇದರೊಳಗೆ ಸಿರಿಧಾನ್ಯ, ಸಾವಯವ, ಕೃಷಿ ಬಿಕ್ಕಟ್ಟು, ಜಾತಿ ಸಾಮರಸ್ಯದಿಂದ ಕೂಡಿದ ಗ್ರಾಮ್ಯ ಬದುಕಿನ ಜೊತೆಜೊತೆಗೆ ಕೋಮು ದ್ವೇಷ, ದಳ್ಳುರಿ ಅದರ ಪರಿಣಾಮಗಳಿಂದಾಗುವ ಅನಾಹುತಗಳ ದರ್ಶನವೂ ಆಗುತ್ತದೆ. ಈ ಮೂಲಕ ಕಥೆಗಾರರನ್ನು ಕಾಡಿದ ಆತಂಕಗಳಾದ ವಿನಾಶದತ್ತ ಸಾಗುತ್ತಿರುವ ಗ್ರಾಮ್ಯ ಬದುಕಿನ ಮೌಲ್ಯಗಳು, ಭವಿಷ್ಯದ ಕಾರ್ಮೋಡಗಳು ಇಲ್ಲಿ ಕಥೆಗಳಾಗಿವೆ.

‘ಗುಣಸಾಗರಿ’ ಹಾಗು ‘ದಯಾ ಎಂಬ ನದಿಯಕಥೆ’ ಈ ಎರಡೂ ಕಥೆಗಳಲ್ಲಿ ಕ್ರಮವಾಗಿ ಕೆರೆ ಮತ್ತು ನದಿಗಳು ಮಾತಾಡುತ್ತವೆ. ನದಿಗಳೋ ಅಥವ ಕೆರೆಗಳೋ ಮಾತಾಡುವುದು ಹೊಸ ತಂತ್ರವಲ್ಲದಿದ್ದರೂ, ‘ಗುಣಸಾಗರಿ’ಯಲ್ಲಿನ ಕೆರೆಗಳ ಮಾತಿನಲ್ಲಿರುವ ಜಾನಪದೀಯ ಅಂಶ ಬೇರೆಲ್ಲೂ ಸಿಗದಂತದ್ದು. ಪರಿಸರ ವಿನಾಶಕ್ಕೆ ತುತ್ತಾಗುವ ಕೆರೆಗಳು ತಮಗೆ ಬಂದ ಸ್ಥಿತಿಯನ್ನು ಪರಂಪರೆಯಲ್ಲಿದ್ದ ತಮ್ಮ ಸಮೃದ್ಧಿಯ ಹಿನ್ನೆಲೆಯಲ್ಲಿ ಸ್ವಗತದಂತೆ ಚರ್ಚಿಸಿದರೆ, ‘ದಯಾ ಎಂಬ ನದಿ’ ಕಥೆಯಲ್ಲಿ ಯುದ್ಧಕ್ಕೆ ತುತ್ತಾಗುವ (ಸಾಕ್ಷಿಯಾಗುವ) ನದಿಯ ಸ್ವಗತವಿದೆ. ಕೆರೆ, ನದಿಗಳು ಮಾತಾಡುವುದರಿಂದ ಇದೊಂದು ನಾಟಕೀಯ ಗುಣವನ್ನು ಪಡೆದುಕೊಂಡ ಕಥೆಯಾಗಿದೆ. ಕೆರೆಗಳೇ ಮಾತಾಡುವಾಗ ಇದ್ದಕ್ಕಿದ್ದಂತೆ ಬಂದ ಮನುಷ್ಯ ಪಾತ್ರವೊಂದು (ಪೂರ್ವದ ಗುಣಸಾಗರಿ) ಚರ್ಚೆಯಲ್ಲಿ ಪಾಲ್ಗೊಳ್ಳುವುದು ತೊಡರೆನಿಸುತ್ತದೆ.

‘ಮೊಗ್ಗು’ ಕಥೆ ಕೋಮುದ್ವೇಷಕ್ಕೆ ತುತ್ತಾಗುವ ಹಳ್ಳಿಯೊಂದು ಹೇಗೆ ತನ್ನ ಮುಗ್ಧತೆಯನ್ನು ಬಲಿ ಕೊಡುತ್ತದೆ ಎಂಬುದನ್ನ ಚರ್ಚಿಸುತ್ತದೆ. ಇಲ್ಲಿನ ರತ್ನಮ್ಮ ತುಂಬು ಬಸುರಿಯಾಗಿರುವುದು ಒಂದು ರೂಪಕದಂತೆಯೇ ಇದ್ದು ದುರಿತದ ತೀವ್ರತೆಯನ್ನು ಧ್ವನಿಸಲು ಸಾಕಾರವಾಗಿದೆ. ಕಥೆಯ ಪ್ರಾರಂಭದಲ್ಲೇ ಬರುವ ರತ್ನಮ್ಮ ಬಾಳೆಗಿಡ ಕತ್ತರಿಸಲು ಮುಂದಾದಾಗ ಅದು ‘ಎಲ್ಲಾರ ಉಂಟೇನಮ್ಮ ಬಸುರೆಂಗ್ಸು, ಫಲ ಕೊಡೊ ಗಿಡ ಕತ್ತರಿಸೋದುಂಟ’ ಎಂದು ಹೇಳುತ್ತದೆ. ಇಂಥ ಜಾನಪದೀಯ ಗುಣಗಳನ್ನು ಉಸಿರಿಸುತ್ತಲೇ ಕೋಮುದ್ವೇಷಕ್ಕೆ ಅದೇ ಹೆಂಗಸು ಪ್ರಾಣತೆತ್ತುವ ವಿಷಾದದಿಂದ ಕೊನೆಗಂಡು ತೀವ್ರ ಗದ್ಗತೆಯನ್ನು ಉಂಟುಮಾಡುತ್ತದೆ. ಈ ಕಥೆಯ ಪ್ರತಿಯೊಂದು ಸನ್ನಿವೇಶವೂ ಅಳೆದು ತೂಗಿ ಅಚ್ಚುಕಟ್ಟಾಗಿ ಕಡೆದು ನಿಲ್ಲಿಸಿದಂತಿದೆ.

PC : Prajavani (ಜಿ.ವಿ ಆನಂದಮೂರ್ತಿ)

ವಸ್ತು, ಶೈಲಿ, ನಿರೂಪಣೆಯ ದೃಷ್ಟಿಯಿಂದ ‘ಚಿತ್ತಯ್ಯ’ ಕಥೆ ವಿಶಿಷ್ಟವಾದುದು. ಮೊದಲಿಗೆ ಇದು ಯಾವ ರೀತಿಯ ಕಥಾ ಮಾದರಿ ಎಂಬ ಪ್ರಶ್ನೆಯನ್ನು ಹುಟ್ಟಿಸುತ್ತಲೇ ಓದಿಸಿಕೊಂಡು ಹೋಗುತ್ತದೆ. ಆಧುನಿಕರ ಮತದಾನ ಬಹಿಷ್ಕಾರದಂತ ಇವತ್ತಿನ ವಸ್ತುವೊಂದನ್ನು ಇಟ್ಟುಕೊಂಡು ಗೊಲ್ಲರಹಟ್ಟಿ ಪ್ರವೇಶಿಸುವ ನಿರೂಪಕನಿಗೆ, ಆಚೆ ಬರುವಾಗ ತಾನು ಮೊದಲು ಎತ್ತಿಕೊಂಡು ಬಂದಿದ್ದ ಪ್ರಶ್ನೆಯೇ ಹಿಂದಕ್ಕೆ ಸರಿದಿರುತ್ತದೆ. ಹಟ್ಟಿಯಲ್ಲಿ ಬರುವ ಅಹಿಂಸಾವಾದಿ ಚಿತ್ತಯ್ಯನ ವ್ಯಕ್ತಿತ್ವದಿಂದಾಗಿ ಬೇರೊಂದು ಮೌಲ್ಯ ಆವರಿಸಿಕೊಂಡುಬಿಡುತ್ತದೆ. ಈ ಕತೆ ‘ಕಾಡನೋಡ ಹೋದೆ, ಕವಿತೆಯೊಡನೆ ಬಂದೆ’ ಎಂಬ ಹಾಡಿನ ಸಾಲಿನಂತೆ ಓದುಗ ಪ್ರವೇಶ ಪಡೆದದ್ದೆ ಏನೋ ಒಂದಾದರೆ ಅಂದುಕೊಂಡು ಹೊರಬಂದದ್ದೆ ಬೇರೆಯದ್ದಾಗಿ. ಹೀಗಾಗಿ ಮೊದಲು ಎತ್ತಿಕೊಂಡ ಮತದಾನ ಬಹಿಷ್ಕಾರದಂತ ಪ್ರಸಂಗ ಕೇವಲ ತೋರಿಕೆಯೆಂಬಂತೆ ಕಾಣುತ್ತದೆ.

ಇಲ್ಲಿನ ಕಥೆಗಳಲ್ಲಿ ಇವತ್ತಿನ ಗ್ರಾಮೀಣ ಜನರ ಸಂಕಟಗಳಿವೆ. ಕೃಷಿ ಭೂಮಿಯನ್ನು ನಾನಾ ಕಾರಣಗಳಿಂದಾಗಿ ಕಳೆದುಕೊಳ್ಳುತ್ತಿರುವುದರಿಂದ ಹಿಡಿದು ಕೋಮುದಳ್ಳುರಿಗೆ ತುತ್ತಾಗುತ್ತಿರುವ ಆತಂಕಗಳು ಮನೆಮಾಡಿವೆ. ಕಥೆಗಾರರು ಕೋಮುದ್ವೇಷವನ್ನು, ಅದರ ಕಾರಣ ಪರಿಣಾಮಗಳನ್ನು ಚರ್ಚಿಸಿದಷ್ಟು ಮುಕ್ತವಾಗಿ ಹಳ್ಳಿಗಳಲ್ಲಿ ಬೀಡುಬಿಟ್ಟಿರುವ ಜಾತಿದ್ವೇಷವನ್ನು ಕಾಣಿಸುವುದಿಲ್ಲ. ಗಾಂಧಿಗು ಅಷ್ಟೇ ಅಲ್ಲವೆ! ಅವರಿಗೆ ಕೋಮು ಸಾಮರಸ್ಯದ ಪ್ರಾಧಾನ್ಯತೆಯ ಮುಂದೆ ಜಾತಿಯು ಕ್ಷೀಣವಾಗಿ ಒಳಗಿನ ಸಮಸ್ಯೆಯಾಗಷ್ಟೆ ಕಂಡಿದ್ದಿತು. ಅದಕ್ಕಾಗೆ ಅವರು ಜಾತಿಯನ್ನು ಹೊರಗಿಟ್ಟು ನೋಡಿರಲಿಲ್ಲ.

‘ಕನ್ನೇರಮ್ಮ’ ಕಥೆ ಅದು ಪ್ರಾರಂಭವಾಗುವ ರೀತಿಯಿಂದ ಆಸೆ ಹುಟ್ಟಿಸಿತಾದರೂ, ಅದು ಜಾನಪದ ಮೌಲ್ಯದ ಕಡೆಗು ಸಾಗದೆ, ಯುದ್ಧಕಾಲದ, ಯುದ್ಧಭೂಮಿಯ ವಿವರಣೆಯಂತಿದ್ದು ಕೋಮುದ್ವೇಷಕ್ಕೆ ಬಲಿಯಾಗುವ ಸ್ಲಂನ ಮುಗ್ಧ ಜನತೆಯನ್ನು ಚಿತ್ರಿಸುತ್ತದೆ. ಬದುಕು ಸುಟ್ಟ ಬೂದಿಯಲ್ಲಿ ರಂಗೋಲಿ ಬಿಡಿಸುವ ಮಕ್ಕಳ ಚಿತ್ರಣದಂತಹ ಆರ್ದ್ರತೆಯ ಹೊರತಾಗಿಯೂ, ಕಥೆ ತೀವ್ರವಾಗಿ ಕಾಡಿದಂತೆ ಅನಿಸುವುದಿಲ್ಲ.

‘ಮೀನು ಶಿಕಾರಿ’ ಮತ್ತೆ ಮತ್ತೆ ಕಾಳ ಶೆಟ್ಟಿಯ ಬದುಕಿನ ವಿಧಾನವನ್ನು ಆಸೆಪಡುವಂತೆ ಮಾಡುವ ಕಥೆ. ಮಲೆಗಳಲ್ಲಿ ಮದುಮಗಳುವಿನ ಪ್ರಾರಂಭದ ಭಾಗದಲ್ಲಿರುವ ಲವಲವಿಕೆಯ ಓದಿನ ಅನುಭವ ಇಲ್ಲೂ ಆಗುತ್ತದೆ. ಈ ಕಥೆ ಬಿಚ್ಚಿಕೊಳ್ಳುವ ಬಗೆ ಆತ ಕೃಷಿಯ ಬಗೆಗಿನ ತನ್ನ ಮುನಿಸನ್ನ ಊರೂರ ಮೇಲೆ ಒಪ್ಪಿಸಿಕೊಂಡು ಹೋಗುವ ಹಿನ್ನೆಲೆಯಲ್ಲಿದೆ. ಕಥೆ ಮುಗಿದಾದ ಬಡಪಾಯಿ ಕಾಳ ಶೆಟ್ಟಿ-ಚಂದ್ರಿಯ ಕುಟುಂಬವನ್ನು ಶಿಕಾರಿ ಮಾಡುವ ಬಸಪ್ಪನಂತಹ ಬಲಿಷ್ಠನಿಂದಾಗಿ ಮೀನು ಶಿಕಾರಿ ಶೀರ್ಷಿಕೆ ಅರ್ಥ ಪಡೆದುಕೊಳ್ಳುತ್ತದೆ. ಕೊನೆಗೆ ತಂಬೂರಿ ಹಿಡಿದು ಪುರಂದರದಾಸನಂತೆ ‘ಕಾಳ ಶೆಟ್ಟಿ’ ಹೋಗೇಬಿಡುತ್ತಾನೆಂಬ ಭಾವ ಓದುಗನದ್ದಾಗುತ್ತದೆ. ಆದರೆ ಕಾಳ ಶೆಟ್ಟಿಯ ಹೆಂಡತಿ ಚಂದ್ರಿ, ಜಮೀನು ಲಪಟಾಯಿಸಲು ಪಿತೂರಿ ಹೂಡಿರುವ ಗೌಡನ ವಿರುದ್ಧ ಅಂಗಳಕ್ಕೆ ಬಂದು ಕ್ರೋಧಗೊಂಡು ಬೈದುಕೊಳ್ಳುತ್ತಾಳೆ. ಅವಳ ಮುಖ ಕೆಂಪಗೆ ಉರಿಯುವುದರೊಂದಿಗೆ ಕಥೆ ಅಂತ್ಯಗೊಳ್ಳುತ್ತದೆ. ಇದರಿಂದ ಕಥೆಗೆ ಇನ್ನೊಂದು ಬಂಡಾಯದ ಅರ್ಥ ಸಿಕ್ಕಂತಾಗಿದೆ. ಹೆಣ್ಣು ಮತ್ತು ಗಂಡಿನ ನಡುವಿರುವ ಬದುಕಿನ ಬಗೆಗಿನ ಭಿನ್ನ ಧೋರಣೆಗಳೂ ಇಲ್ಲಿ ಕಾಣಿಸಿಕೊಳ್ಳುತ್ತದೆ. ಹೆಣ್ಣು ಬದುಕು ನೋಡುವ ಕ್ರಮವೇ ಇಲ್ಲಿ ಮುಖ್ಯವಾಗುತ್ತದೆ. ಒಂದೇ ಗ್ರಾಮ್ಯ ಲಯದಲ್ಲಿ ಓದಿಸಿಕೊಳ್ಳುತ್ತಿದ್ದ ಕಥೆಯಲ್ಲಿ ಒಮ್ಮೆಲೆ ಎದುರಾಗುವ ‘ನಿರುಪಯೋಗಿ’ ಪದದಿಂದ ಸಣ್ಣ ಕಲ್ಲು ಸಿಕ್ಕಂತೆ ಭಾಸವಾಗುತ್ತದೆ.

‘ಸಂಕಲವ್ವ’ ಸಿಟ್ಟು ಹತಾಶೆ ಎಲ್ಲವನ್ನೂ ಆತ್ಯಂತಿಕವಾಗಿ ಕೆದಕಿ ಕೆರಳಿಸುವ ಕಥೆ. ಮಡುಗಟ್ಟುವ ಆಕ್ರೋಶವನ್ನ ಅಷ್ಟೇ ತಣ್ಣಗೆ ಏನೂ ಇಲ್ಲವೆನ್ನಿಸುವ ಕಥನ ತಂತ್ರ ಕಥೆಗಾರರದ್ದು. ಈ ಮೂಲಕ ಕಥೆ ಬಯಸುವ ಕೆಂಡದಂತ ಆಕ್ರೋಶವನ್ನು ಬಲವಂತವಾಗಿ ಮೊಟಕುಗೊಳಿಸುವ ಕಥೆಗಾರರು ತಾವು ನಂಬಿದ ಗಾಂಧಿತ್ವವನ್ನು ಮುನ್ನೆಲೆಗೆ ತಂದು ಮೆರೆಸಿದ್ದಾರೆ. ಇಷ್ಟೊಂದು ಆಕ್ರೋಶ ತರಿಸಿದಾಗಲೂ ಗಾಂಧಿತನ ಬೇಕೇ ಎಂಬ ಜಿಜ್ಞಾಸೆಯನ್ನ ಕಥೆ ಹಾಗೆಯೇ ಉಳಿಸುತ್ತದೆ. ಮೀನು ಶಿಕಾರಿಯಲ್ಲಿನ ಚಂದ್ರಿ ತನ್ನ ಗಂಡನಿಗೆ ಅನ್ಯಾಯವಾದಾಗ ಪ್ರತಿಭಟಿಸಿ ಬೀದಿಗಿಳಿಯುತ್ತಾಳೆ. ಆದರೆ ಸಂಕಲವ್ವ ತನ್ನ ಗಂಡನನ್ನು ಜೀವಂತ ಸುಟ್ಟಿದ್ದನ್ನು ನೋಡಿಯೂ ನ್ಯಾಯಾಲಯದಲ್ಲಿ ಸಾಕ್ಷಿ ಹೇಳದ ಅಸಹಾಯಕಳಾಗುತ್ತಾಳೆ. ಇವೆರಡೂ ವೈರುಧ್ಯಗಳನ್ನ ಕಥೆಗಾರ ಹಾಗೆಯೇ ಉಳಿಸಿದ್ದಾರೆ.

ಈ ಕಥೆಗಳಲ್ಲಿನ ಜಾನಪದದ ಸ್ವಾದದಿಂದಾಗಿ ಓದು ಎಲ್ಲೂ ಒಣ ಎನಿಸುವುದಿಲ್ಲ. ಬದಲಿಗೆ ನಶಿಸುತ್ತಿರುವ ಆ ಗ್ರಾಮ್ಯ ಬದುಕನ್ನ ಮತ್ತೆ ಆಶಿಸುವಂತೆ ಮಾಡುತ್ತದೆ ಮತ್ತು ಸಾಮರಸ್ಯ ಎಂಬುದು ಅಪರೂಪವೇ ಆಗುತ್ತಿರುವ ಈ ಕಾಲದಲ್ಲಿ ಗಾಂಧಿತನದ ಮಹತ್ವವನ್ನ ಅರಿಯುವಂತೆ ಮಾಡುತ್ತದೆ.

ಗುರುಪ್ರಸಾದ್ ಕಂಟಲಗೆರೆ

ಗುರುಪ್ರಸಾದ್ ಕಂಟಲಗೆರೆ
ಕಥೆಗಾರ ಗುರುಪ್ರಸಾದ್ ಅವರ ಎರಡು ಕಥಾಸಂಕಲನಗಳು ಪ್ರಕಟವಾಗಿದೆ. ’ಗೋವಿನ ಜಾಡು’ ಮೊದಲ ಕಥಾಸಂಕಲನ. ’ಕೆಂಡದ ಬೆಳದಿಂಗಳು’ ಕಥಾ ಸಂಕಲನ ಇತ್ತೀಚಿಗೆ ಪ್ರಕಟವಾಗಿದೆ. ತಮ್ಮ ಕಥೆಗಳಿಗೆ ಹಲವು ಬಹುಮಾನಗಳನ್ನು ಪಡೆದಿರುವ ಲೇಖಕರು, ಪತ್ರಿಕೆಗಳಿಗೆ ನಿಯತವಾಗಿ ಬರೆಯುತ್ತಾರೆ.


ಇದನ್ನೂ ಓದಿ: ವಿಶ್ವ ಪುಸ್ತಕ ದಿನ; ಸಂಶೋಧನೆಯ ಕೆಲಸದಲ್ಲಿ ನನ್ನ ಅನುಭವವನ್ನು ವಿಸ್ತರಿಸಿದ ಪುಸ್ತಕದ ಅಂಗಡಿಗಳು ಮತ್ತು…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....

ವಿಜಯ್ ಹೇಳಿದ ಭ್ರಷ್ಟಾಚಾರ ನಿರ್ಮೂಲನೆ ಮತ್ತು ಟಿವಿಕೆ ಶಾಸಕರ ಕ್ರಿಮಿನಲ್ ಹಿನ್ನೆಲೆ

ಎರಡು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಟಿವಿಕೆ ಎಂಬ ಪಕ್ಷ, 75 ವರ್ಷಗಳ ಅನುಭವಿ ಪಕ್ಷವಾದ ಡಿಎಂಕೆಯನ್ನು ಸೋಲಿಸಿರುವುದು, ಕಳೆದ ಅರವತ್ತು ವರ್ಷಗಳಲ್ಲಿ ಮೊಟ್ಟ ಮೊದಲ ಬಾರಿಗೆ ದ್ರಾವಿಡ ಚಳುವಳಿ ಹಿನ್ನೆಲೆಯ ಪಕ್ಷವನ್ನು...

ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಬಿಜೆಪಿ ಗೆಲುವು: ಫಲಿತಾಂಶದ ಬಳಿಕ ಭುಗಿಲೆದ್ದ ಹಿಂಸಾಚಾರ, ಕನಿಷ್ಠ ಐದು ಮಂದಿ ಸಾವು

ಕೊಲ್ಕತ್ತಾ, ಮೇ 8: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಮೊದಲ ಬಾರಿಗೆ ಬೃಹತ್ ಗೆಲುವು ಸಾಧಿಸಿದ್ದು, ರಾಜ್ಯದ 294 ಸ್ಥಾನಗಳ ಪೈಕಿ 206 ಸ್ಥಾನಗಳನ್ನು ಗೆದ್ದು ಮುಂದಿನ...

ಪಂಚರಾಜ್ಯ ಚುನಾವಣೆಯ ಗೋಜಲುಗಳು

ವಿವಾದಾತ್ಮಕ ಮತ್ತು ಸಂವಿಧಾನ ವಿರೋಧಿ ವಿಶೇಷ ತೀವ್ರ ಪರಿಷ್ಕರಣೆ (ಎಸ್ ಐಆರ್) ಅಡಿಯಲ್ಲಿ ನಡೆದ 2026ರ ಐದು ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಏಕರೂಪದ ಅಭಿಮತವನ್ನು ವ್ಯಕ್ತಪಡಿಸಲಿಲ್ಲ. ಮತ್ತು ಸಂಕೀರ್ಣವಾದ ಫಲಿತಾಂಶ ಕೊಟ್ಟಿದ್ದಾರೆ. ಪಶ್ಚಿಮ...

ಪ್ರಜಾಸತ್ತೆಯ ಉಳಿವಿಗೆ ಇದು ನಿರ್ಣಾಯಕ ಕ್ಷಣ : ಮಹತ್ವದ ಕಣ್ಣೋಟ

ಚುನಾವಣೆಗಳು ಮತ್ತು ನ್ಯಾಯಾಲಯಗಳು ಇನ್ನು ಪರಿಹಾರವಲ್ಲ ಎಂಬ ಅಭಿಪ್ರಾಯಕ್ಕೆ ಜನರು ಬರಲು ಈ ಬಾರಿಯ ವಿಧಾನಸಭಾ ಚುನಾವಣೆಗಳೇ ಕಾರಣವಾಗಿವೆ. ಇಂದು 'ಭಾರತದ ಪರಿಕಲ್ಪನೆ'ಗೆ (Idea of India) ಸಂಚಕಾರ ಬಂದಿದೆ. ಪ್ರಜಾಪ್ರಭುತ್ವವು ಕೇವಲ...

ಭಾಗ-2: ಎಸ್‌ಐಆರ್ ಜಾರಿಯಿಂದ ಕಾಂಗ್ರೆಸ್‌ ಕಳೆದುಕೊಳ್ಳುವ ಕ್ಷೇತ್ರಗಳೆಷ್ಟು?

30 ಸಾವಿರದಿಂದ ಒಂದು ಸಾವಿರದ ಒಳಗಿನ ಮತಗಳ ಅಂತರದಿಂದ ಗೆದ್ದಿರುವ ಕರ್ನಾಟಕದ 97 ಕ್ಷೇತ್ರಗಳನ್ನು ನಾವು ಪಟ್ಟಿ ಮಾಡಿದ್ದೇವೆ. ಪಶ್ಚಿಮ ಬಂಗಾಳದಲ್ಲಿ ಆದಂತೆಯೇ ರಾಜ್ಯದಲ್ಲಿ ಚುನಾವಣೆ ಸಮೀಪಿಸಿದಾಗ ಎಸ್‌ಐಆರ್ ಜಾರಿಯಾದರೆ ಬಿಜೆಪಿಗೆ ಅನುಕೂಲವಾಗುವ...

ತಮಿಳುನಾಡಿನಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿ ಗೆದ್ದ 60 ನೂತನ ಶಾಸಕರು

ತಮಿಳುನಾಡು ರಾಜಕಾರಣ ಎಂದರೆ ಅದು ಐದು ದಶಕಗಳಿಂದ ಕೇವಲ ಡಿಎಂಕೆ ಮತ್ತು ಎಐಎಡಿಎಂಕೆ ನಡುವಿನ ಜಿದ್ದಾಜಿದ್ದಿ. ಆದರೆ 2026ರ ಫಲಿತಾಂಶವು ಈ "ದ್ವಿಪಕ್ಷೀಯ" ಸಂಪ್ರದಾಯವನ್ನು ಮುರಿದುಹಾಕಿದೆ. ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ...

‘ಪ್ರಜಾತಂತ್ರಕ್ಕೆ ಬೆದರಿಕೆ ಒಡ್ಡುತ್ತಿರುವ ಎಸ್ಐಆರ್’: ಬಿಜೆಪಿಯ (ಕು)ತಂತ್ರ ಫಲಿಸಿದರೇ ಭಾರತವೇ ಇರುವುದಿಲ್ಲ..!

ಪಂಚರಾಜ್ಯ ಚುನಾವಣಾ ಫಲಿತಾಂಶಗಳು 2026 ಮೇ 4ರಂದು ಹೊರಬಿದ್ದಿದ್ದು, ಭಾರತೀಯ ಜನತಾ ಪಾರ್ಟಿ ಪಶ್ಚಿಮ ಬಂಗಾಳವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಆದರೆ ಈ ಗೆಲುವು ಕೇವಲ ಜನರ ಆದರ್ಶವಲ್ಲ, ಬದಲಿಗೆ ಚುನಾವಣಾ ವ್ಯವಸ್ಥೆಯೇ...

ಬಿಹಾರ-ಬಂಗಾಳದ ಬಳಿಕ ಕರ್ನಾಟಕದ ಸರತಿ; ಎಸ್‌ಐಆರ್ ಜಾರಿಯಿಂದ ಕಾಂಗ್ರೆಸ್‌ ಕಳೆದುಕೊಳ್ಳುವ ಕ್ಷೇತ್ರಗಳೆಷ್ಟು?

ಭಾಗ-1 ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತರಾತುರಿಯಲ್ಲಿ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (ಎಸ್‌ಐಆರ್) ಜಾರಿ ಮಾಡಿದ ಹಿಂದಿನ ದುರುದ್ದೇಶ ಬಿಹಾರದ ಬಳಿಕ ಈಗ ಪಶ್ಚಿಮ ಬಂಗಾಳದಲ್ಲಿ ಸಾಬೀತಾಗಿದೆ. ಹಿಂದಿನ ಚುನಾವಣೆಗಳಲ್ಲಿ ಕಡಿಮೆ...