ಮಣಿಪುರದ ಗಡಿ ಪಟ್ಟಣ ಮೊರೆಹ್ನಲ್ಲಿನ ಹಿಂಸಾಚಾರ ‘ಭಾರತ ಜೋಡೋ ನ್ಯಾಯ ಯಾತ್ರೆ’ಯ ಮೇಲೆ ಕರಿನೆರಳು ಬೀರಿದೆ. ಜ.14ರಂದು ಕಾಂಗ್ರೆಸ್ ಪಕ್ಷವು ಹಿಂಸಾಚಾರ ಪೀಡಿತ ಮಣಿಪುರದಿಂದ ‘ಭಾರತ ಜೋಡೋ ನ್ಯಾಯ ಯಾತ್ರೆ’ ಆರಂಭಿಸುವ ಗುರಿಯನ್ನು ಹೊಂದಿತ್ತು. ಆದರೆ ಇದಕ್ಕೆ ಮಣಿಪುರ ರಾಜ್ಯ ಸರಕಾರ ಇನ್ನೂ ಅನುಮತಿ ನೀಡಿಲ್ಲ.
ಇಂಡೋ-ಮ್ಯಾನ್ಮಾರ್ ಗಡಿಯ ಮೊರೆಹ್ನಲ್ಲಿ ಮಣಿಪುರ ಪೊಲೀಸರು ಮತ್ತು ಸಶಸ್ತ್ರದಾರಿಗಳ ನಡುವೆ ಇತ್ತೀಚೆಗೆ ನಡೆದ ಗುಂಡಿನ ಚಕಮಕಿಯಿಂದ ಪರಿಸ್ಥಿತಿ ತಿಳಿಯಾಗಿಲ್ಲ. ಸೋಮವಾರ ಬೆಳಗ್ಗೆ ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡು ಮೊರೆಹ್ನಲ್ಲಿ ಗುಂಡಿನ ಚಕಮಕಿ ನಡೆದಿದೆ. ಭಾನುವಾರ ವಾರ್ಡ್ 7 ಮತ್ತು ಮೊರೆಹ್ ಬಜಾರ್ನಲ್ಲಿ ಗುಂಡಿನ ದಾಳಿ ಮತ್ತು ಬಾಂಬ್ ದಾಳಿಗಳು ನಡೆದಿದೆ.
ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರು ಮಾತನಾಡುತ್ತಾ, ಭದ್ರತಾ ಪಡೆಗಳ ಮೇಲಿನ ದಾಳಿಗೆ ಕಾರಣವಾದ ಶಸ್ತ್ರಸಜ್ಜಿತ ಸಿಬ್ಬಂದಿಯನ್ನು ಬಂಧಿಸಲು ಅಸ್ಸಾಂ ರೈಫಲ್ಸ್, ಬಿಎಸ್ಎಫ್ ಮತ್ತು ರಾಜ್ಯ ಪೊಲೀಸರ ಜಂಟಿ ಪ್ರಯತ್ನದ ಭಾಗವಾಗಿ ಕಾರ್ಯಾಚರಣೆ ನಡೆಯುತ್ತಿದೆ. ‘ಭಾರತ ಜೋಡೋ ನ್ಯಾಯ ಯಾತ್ರೆ’ಯ ಕುರಿತು ಮಾತನಾಡಿದ ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್, ರಾಹುಲ್ ಗಾಂಧಿಯವರ ರ್ಯಾಲಿಗೆ ಅನುಮತಿ ನೀಡುವ ಬಗ್ಗೆ ಪರಿಗಣನೆಯಲ್ಲಿದೆ. ನಾವು ವಿವಿಧ ಭದ್ರತಾ ಏಜೆನ್ಸಿಗಳಿಂದ ವರದಿಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಅವರಿಂದ ವರದಿಗಳನ್ನು ಸ್ವೀಕರಿಸಿದ ನಂತರ ನಾವು ಈ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷವು ಜನವರಿ 14ರಂದು ಇಂಫಾಲ್ ಪೂರ್ವ ಜಿಲ್ಲೆಯ ಹಟ್ಟಾ ಕಾಂಗ್ಜೆಬುಂಗ್ನಿಂದ ‘ಭಾರತ ಜೋಡೋ ನ್ಯಾಯ ಯಾತ್ರೆ’ಯನ್ನು ಪ್ರಾರಂಭಿಸುವ ಗುರಿಯನ್ನು ಹೊಂದಿದೆ. ಗುವಾಹಟಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರು ಮಾತನಾಡಿ, ಯಾತ್ರೆಗೆ ಮಣಿಪುರ ಸರ್ಕಾರದಿಂದ ಅನುಮತಿಗಾಗಿ ಪಕ್ಷವು ಕಾಯುತ್ತಿದೆ ಎಂದು ಹೇಳಿದ್ದಾರೆ.
ಭಾರತ ಜೋಡೋ ನ್ಯಾಯ ಯಾತ್ರೆ ಮಣಿಪುರದಿಂದ ಆರಂಭವಾಗುವ ನಿರೀಕ್ಷೆಯಿದ್ದು, ಈ ಯಾತ್ರೆಯು 14 ರಾಜ್ಯಗಳ ಒಟ್ಟು 85 ಜಿಲ್ಲೆಗಳಲ್ಲಿ 6,700 ಕಿ.ಮೀ. ಕ್ರಮಿಸಲಿದೆ. ಮಹಾರಾಷ್ಟ್ರ ತಲುಪುವ ಮುನ್ನ ನಾಗಾಲ್ಯಾಂಡ್, ಅಸ್ಸಾಂ, ಮೇಘಾಲಯ, ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್, ಒಡಿಶಾ, ಛತ್ತೀಸಗಢ, ಉತ್ತರಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್ನಲ್ಲಿ ಸಾಗಲಿದೆ. ಯಾತ್ರೆಯ ಬಹುಭಾಗ ಬಸ್ನಲ್ಲಿ ಸಾಗಲಿದ್ದು, ಆಯ್ದ ಸ್ಥಳಗಳಲ್ಲಿ ಪಾದಯಾತ್ರೆ ನಡೆಯಲಿದೆ.
ಕಾಂಗ್ರೆಸ್ ಆರಂಭದಲ್ಲಿ ಅರುಣಾಚಲದ ಪಾಸಿಘಾಟ್ನಿಂದ ಮಹಾತ್ಮ ಗಾಂಧಿಯವರ ಜನ್ಮಸ್ಥಳವಾದ ಗುಜರಾತ್ನ ಪೋರಬಂದರ್ವರೆಗೆ ಯಾತ್ರೆ ನಡೆಸಲು ಚಿಂತಿಸಿತ್ತು. ಆದರೆ ಮೇ 3ರಿಂದ ಮಣಿಪುರದಲ್ಲಿ ನಡೆದ ಜನಾಂಗೀಯ ಹಿಂಸಾಚಾರವು ಕಾಂಗ್ರೆಸ್ ಯಾತ್ರೆಯ ದಿಕ್ಕನ್ನು ಬದಲಾಯಿಸುವಂತೆ ಮಾಡಿತ್ತು. ಆದರೆ ಇದೀಗ ಮಣಿಪುರದಲ್ಲಿ ಮತ್ತೆ ಹಿಂಸಾಚಾರ ನಡೆಯುತ್ತಿರುವ ಹಿನ್ನೆಲೆ ಮಣಿಪುರ ಸರಕಾರದಿಂದ ಯಾತ್ರೆಗೆ ಅನುಮತಿ ಈವರೆಗೆ ಸಿಕ್ಕಿಲ್ಲ ಎಂದು ಹೇಳಲಾಗಿದೆ.
ಇದನ್ನು ಓದಿ: ಬಿಲ್ಕಿಸ್ ಬಾನುಗೆ ನ್ಯಾಯಕ್ಕಾಗಿ ಹೋರಾಡಿದ ಮಹಿಳೆಯರು