ಬಿಹಾರದ ಸೀತಾಮರ್ಹಿ ಜಿಲ್ಲೆಯಲ್ಲಿ ಶನಿವಾರ ನಡೆದ ವಿಜಯದಶಮಿ ಆಚರಣೆ ವೇಳೆ ಬಿಜೆಪಿ ಶಾಸಕ ಮಿಥಿಲೇಶ್ ಕುಮಾರ್ ಹೆಣ್ಣು ಮಕ್ಕಳಿಗೆ ಕತ್ತಿ ಹಂಚುವ ಮೂಲಕ ವಿವಾದಕ್ಕೆ ಕಾರಣರಾಗಿದ್ದಾರೆ.
“ಯಾವುದೇ ದುಷ್ಟರು ನಮ್ಮ ಸಹೋದರಿಯರನ್ನು ಸ್ಪರ್ಶಿಸಲು ಧೈರ್ಯಮಾಡಿದರೆ, ಅವರ ಕೈಯನ್ನು ಈ ಖಡ್ಗದಿಂದ ಕತ್ತರಿಸಲಾಗುತ್ತದೆ” ಎಂದು ಅವರು ಸೀತಾಮರ್ಹಿ ನಗರದ ಕಪ್ರೋಲ್ ರಸ್ತೆಯಲ್ಲಿರುವ ಪೂಜಾ ಕಾರ್ಯಕ್ರಮದಲ್ಲಿ ಸಭೆಯನ್ನು ಉದ್ದೇಶಿಸಿ ಹೇಳಿದರು.
“ನಾವು ನಮ್ಮ ಸಹೋದರಿಯರಿಗೆ ವಿರೋಧಿಗಳ ಕೈ ಕತ್ತರಿಸುವಷ್ಟು ಸಾಮರ್ಥ್ಯ ಕೊಡಬೇಕು. ಅಗತ್ಯವಿದ್ದರೆ, ನಾನು ಮತ್ತು ನೀವೆಲ್ಲರೂ ಇದನ್ನು ಮಾಡಬೇಕಾಗಿದೆ. ನಮ್ಮ ಸಹೋದರಿಯರ ವಿರುದ್ಧ ಕೆಟ್ಟ ಇಚ್ಛೆಯನ್ನು ಹೊಂದಿರುವ ಎಲ್ಲಾ ದುಷ್ಟರನ್ನು ನಾಶಪಡಿಸಬೇಕು” ಎಂದು ಕುಮಾರ್ ಹೇಳಿದ್ದಾರೆ.
ಮಿಥಿಲೇಶ್ ಕುಮಾರ್ ಅವರು ತಮ್ಮ ಉಪಕ್ರಮಕ್ಕೆ ಜನರು ಬೆಂಬಲ ನೀಡುವಂತೆ ಮನವಿ ಮಾಡಿದರು. ದುಷ್ಕರ್ಮಿಗಳ ವಿರುದ್ಧ ಕಾರ್ಯನಿರ್ವಹಿಸಲು ಜನರನ್ನು, ವಿಶೇಷವಾಗಿ ಮಹಿಳೆಯರನ್ನು ಪ್ರೋತ್ಸಾಹಿಸಿದರು. ಇದೇ ಕಾರ್ಯಕ್ರಮದಲ್ಲಿ ಶಾಲಾ-ಕಾಲೇಜಿಗೆ ಹೋಗುವ ಹೆಣ್ಣು ಮಕ್ಕಳಿಗೆ ಕತ್ತಿಗಳನ್ನು ವಿತರಿಸಲಾಯಿತು.
ಕುಮಾರ್ ಅವರು ಸ್ಥಳದಲ್ಲಿ ಹಲವಾರು ಬಂದೂಕುಗಳು, ಕತ್ತಿಗಳು ಮತ್ತು ಇತರ ಆಯುಧಗಳನ್ನು ಪ್ರದರ್ಶಿಸಿ, ಅವುಗಳನ್ನು ಪೂಜಿಸಿದರು.
ಮಿಥಿಲೇಶ್ ಕುಮಾರ್ ಸೀತಾಮರ್ಹಿ ಕ್ಷೇತ್ರದ ಬಿಜೆಪಿ ಶಾಸಕ. ನವರಾತ್ರಿಯ ಆರಂಭದಲ್ಲಿ ಹಲವಾರು ದುರ್ಗಾಪೂಜಾ ಪಂಗಡಗಳಿಗೆ ಭೇಟಿ ನೀಡಿ ಕತ್ತಿ ಹಂಚುವ ಮೂಲಕ ಸುದ್ದಿಯಾಗಿದ್ದರು.
ಇದನ್ನೂ ಓದಿ; ಬಿಜೆಪಿ ಭಯೋತ್ಪಾದಕ ಪಕ್ಷ; ದಲಿತರ ಮೇಲಿನ ದಾಳಿಗೆ ಬೆಂಬಲಿಸುತ್ತದೆ: ಮಲ್ಲಿಕಾರ್ಜುನ ಖರ್ಗೆ


