ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ಮಂಗಳವಾರ ನಡೆದ ಭಯೋತ್ಪಾದಕ ದಾಳಿಯ ವೇಳೆ ಮೂವರು ಸ್ಥಳೀಯ ಮುಸ್ಲಿಮರು ‘ಬಿಸ್ಮಿಲ್ಲಾ…ಬಿಸ್ಮಿಲ್ಲಾ’ ಎಂದು ಪಠಿಸುತ್ತಾ ದಾಳಿಯ ಸ್ಥಳದಿಂದ ನಮಗೆ ಕೆಳಗೆ ಬರಲು ಸಹಾಯ ಮಾಡಿದರು ಎಂದು ಘಟನೆಯಲ್ಲಿ ಹತ್ಯೆಯಾದ ಕರ್ನಾಟಕದ ನಿವಾಸಿ ಮಂಜುನಾಥ ರಾವ್ ಅವರ ಪತ್ನಿ ಪಲ್ಲವಿ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ನಡೆದ ದಾಳಿಯಲ್ಲಿ ರಾಜ್ಯದ ಇಬ್ಬರು ಸೇರಿದಂತೆ 28 ಜನರು ಮೃತಪಟ್ಟಿದ್ದಾರೆ. ಶಿವಮೊಗ್ಗದ ನಿವಾಸಿ ಆಗಿರುವ ಮಂಜುನಾಥ್ ರಾವ್ ಮತ್ತು ಬೆಂಗಳೂರಿನ ಮತ್ತಿಕೆರೆ ನಿವಾಸಿ ಭರತ್ ಭೂಷಣ್ ಅವರು ದಾಳಿಯಲ್ಲಿ ಮೃತಪಟ್ಟಿದ್ದಾರೆ. ಘಟನೆಯಿಂದ ಇಬ್ಬರ ಕುಟುಂಬಗಳು ಸುರಕ್ಷಿತವಾಗಿವೆ ಎಂದು ವರದಿಗಳು ಉಲ್ಲೇಖಿಸಿವೆ.
ಸಾಫ್ಟ್ವೇರ್ ಉದ್ಯೋಗಿಯಾಗಿದ್ದ 41 ವರ್ಷದ ಭರತ್ ಭೂಷಣ್, 47 ವರ್ಷದ ರಿಯಲ್ ಎಸ್ಟೇಟ್ ಏಜೆಂಟ್ ಮಂಜುನಾಥ ರಾವ್ ಗುಂಡೇಟಿನಿಂದ ಸಾವನ್ನಪ್ಪಿದ್ದಾರೆ. ಈ ವೇಳೆ ಅವರೊಂದಿಗೆ ಇದ್ದ ಅವರ ಕುಟುಂಬ ದಾಳಿಯಿಂದ ಬಚಾವಾಗಿದ್ದಾರೆ ಎಂದು ವರದಿಯಾಗಿದೆ.
ಘಟನೆ ನಂತರ ಮಾಧ್ಯಮಗಳ ಜೊತೆಗೆ ಪಹಲ್ಗಾಮ್ನಿಂದ ಮಾತನಾಡಿದ್ದ ಮಂಜುನಾಥ್ ಅವರ ಪತ್ನಿ ಪಲ್ಲವಿ, ಭಯೋತ್ಪಾದಕರು ತನ್ನ ಪತಿಯ ಮೇಲೆ ಗುಂಡು ಹಾರಿಸಿದಾಗ, ತಾನು ಮತ್ತು ತನ್ನ ಮಗ ಅಲ್ಲೇ ಇದ್ದೆವು. ನಾವು ಕುದುರೆ ಸವಾರಿಯ ಮೂಲಕ ಸ್ಥಳಕ್ಕೆ ತಲುಪಿದ್ದೆವು. ನನ್ನ ಪತಿ ನನ್ನ ಮಗನಿಗೆ ತಿಂಡಿ ಖರೀದಿಸಲು ತೆರಳಿದ್ದರು ಈ ವೇಳೆ ದಾಳಿ ನಡೆಸಿದೆ ಎಂದು ಅವರು ಹೇಳಿದ್ದಾರೆ.
“ಕೆಲವೇ ನಿಮಿಷಗಳಲ್ಲಿ, ನನ್ನ ಪತಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡು ಬಂತು. ಅವರು ನನ್ನ ಕಣ್ಣ ಮುಂದೆಯೇ ನಿಧನರಾದರು, ಮತ್ತು ನಾನು ಅಸಹಾಯಕಳಾಗಿದ್ದೆ. ತನ್ನನ್ನೂ ಕೊಲ್ಲುವಂತೆ ಉಗ್ರಗಾಮಿಗಳಿಗೆ ಕೇಳಿಕೊಂಡೆ. ನನ್ನ ಮಗ ಮತ್ತು ನಾನು ಇಬ್ಬರೂ ಉಗ್ರಗಾಮಿಗಳನ್ನು ನಮ್ಮನ್ನೂ ಕೊಲ್ಲುವಂತೆ ಕೇಳಿಕೊಂಡೆವು” ಎಂದು ಅವರು ಹೇಳಿದ್ದಾರೆ.
ಅದಾಗ್ಯೂ, ಭಯೋತ್ಪಾದಕ ನಮ್ಮನ್ನು ಕೊಲ್ಲುವುದಿಲ್ಲ, ಇದನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ತಿಳಿಸಬೇಕೆಂದು ಹೇಳಿದ ಎಂದು ಅವರು ಹೇಳಿದ್ದಾರೆ. ದಾಳಿಯ ಸಮಯದಲ್ಲಿ ಯಾವುದೇ ಸೇನಾ ಸಿಬ್ಬಂದಿ ಇರಲಿಲ್ಲ ಎಂದು ಅವರು ಹೇಳಿದ್ದಾರೆ.
“ದಾಳಿಯಿಂದ ನಮ್ಮನ್ನು ರಕ್ಷಿಸುವಲ್ಲಿ ನಮ್ಮ ಚಾಲಕ ಹಾಗೂ ಸ್ಥಳೀಯ ಮೂವರು ಮುಸ್ಲಿಮರು ಸಹಾಯ ಮಾಡಿದ್ದಾರೆ. ಘಟನೆ ನಡೆದಾಗಿನಿಂದ ಚಾಲಕ ನಮ್ಮೊಂದಿಗಿದ್ದಾರೆ. ಮೂವರು ಸ್ಥಳೀಯ ಮುಸ್ಲಿಮರು ‘ಬಿಸ್ಮಿಲ್ಲಾ… ಬಿಸ್ಮಿಲ್ಲಾ…’ ಎಂದು ಹೇಳುತ್ತಾ ದಾಳಿ ನಡೆದ ಸ್ಥಳದಿಂದ ಸುರಕ್ಷಿತವಗಿ ಕೆಳಗೆ ಬರಲು ನಮಗೆ ಸಹಾಯ ಮಾಡಿದರು” ಎಂದು ಅವರು ಹೇಳಿದ್ದಾರೆ.
ಅವರು ನನ್ನ ಸಹೋದರರಂತೆ ಇದ್ದರು. ಅವರಲ್ಲಿ ಒಬ್ಬರು ನನ್ನ ಮಗನನ್ನು ಎತ್ತಿಕೊಂಡು ಬಂದರು. ಇನ್ನಿಬ್ಬರು ಕಠಿಣ ಭೂಪ್ರದೇಶವನ್ನು ದಾಟಲು ನನಗೆ ಸಹಾಯ ಮಾಡಿದರು ಎಂದು ಪಲ್ಲವಿ ಹೇಳಿದ್ದಾರೆ.