ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಮತದಾನದ ಮುನ್ನಾದಿನ ಇಂದು (ನ.19) ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಬರೋಬ್ಬರಿ 5 ಕೋಟಿ ರೂಪಾಯಿ ಹಣದೊಂದಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಆರೋಪ ಕೇಳಿ ಬಂದಿದೆ.
ಫಾಲ್ಘರ್ ಜಿಲ್ಲೆಯ ವಿರಾರ್ ನಗರದ ಹೋಟೆಲೊಂದರಲ್ಲಿ ವಿನೋದ್ ತಾವ್ಡೆ ಹಣ ಹಂಚುತ್ತಿದ್ದಾಗ ಬಹುಜನ ವಿಕಾಸ್ ಅಘಾಡಿ (ಬಿವಿಎ) ಕಾರ್ಯಕರ್ತರು ಸೆರೆ ಹಿಡಿದಿದ್ದಾರೆ ಎಂದು ವರದಿಯಾಗಿದೆ. ಅದಕ್ಕೆ ಸಂಬಂಧಿಸಿದ್ದು ಎನ್ನಲಾದ ವಿಡಿಯೋವೊಂದು ವೈರಲ್ ಆಗಿದೆ.
ಬಿವಿಎ ಕಾರ್ಯಕರ್ತರು ತಾವ್ಡೆ ಮೇಲೆ ಮುಗಿ ಬೀಳುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಅವರಿಗೆ ರಕ್ಷಣ ಒದಗಿಸಿದ್ದಾರೆ. ವಿಡಿಯೋದಲ್ಲಿ ವಿನೋದ್ ತಾವ್ಡೆಯನ್ನು ಜನರ ಗುಂಪೊಂದು ಸುತ್ತುವರಿದಿರುವುದನ್ನು ನೋಡಬಹುದು.
BIGGEST SHAME 🚨🚨
Senior BJP leader Vinod Tawde caught red handed distributing money in Mumbai
He was caught with ₹5 crore hard cash, Huge rigging by BJP ⚡
Tomorrow is polling day, but will ECI dare to take any action? pic.twitter.com/XvY5W3P3vl
— Ankit Mayank (@mr_mayank) November 19, 2024
ವರದಿಗಳ ಪ್ರಕಾರ, ವಿನೋದ್ ತಾವ್ಡೆ ಅವರು ಮನ್ವೇಲ್ಪಾಡಾದ ವಿವಾಂತ್ ಹೋಟೆಲ್ನಲ್ಲಿ ಬಿಜೆಪಿ ಅಭ್ಯರ್ಥಿರಾಜನ್ ನಾಯ್ಕ್ ಮತ್ತು ಮುಖಂಡರ ಜೊತೆ ಸಭೆ ನಡೆಸುತ್ತಿರುವ ಬಗ್ಗೆ ಮಾಹಿತಿ ಪಡೆದ ಬಿವಿಎ ಕಾರ್ಯಕರ್ತರು ದಾಳಿ ನಡೆಸಿದ್ದಾರೆ.
“ತಾವ್ಡೆ ಸಭೆಯಲ್ಲಿ ಹಾಜರಿದ್ದವರಿಗೆ ಹಣ ಹಂಚುವುದನ್ನು ತಾವು ಕಣ್ಣಾರೆ ಕಂಡಿದ್ದೇವೆ” ಎಂದು ಬಿವಿಎ ಕಾರ್ಯಕರ್ತರೊಬ್ಬರು ಆರೋಪಿಸಿದ್ದಾರೆ. ಬಿವಿಎ ಅಭ್ಯರ್ಥಿ ಕ್ಷಿತಿಜ್ ಠಾಕೂರ್ ಅವರು ತಾವ್ಡೆ ಬಳಿ 5 ಕೋಟಿ ರೂಪಾಯಿ ಹಣ ಮತ್ತು ಎರಡು ಡೈರಿಗಳಲ್ಲಿ ಹೆಸರುಗಳಿತ್ತು ಎಂದು ಹೇಳಿದ್ದಾರೆ. ತಾವ್ಡೆ ಅವರು ಸಭೆ ನಡೆಸುತ್ತಿದ್ದಾಗ ಹೊಟೇಲ್ನ ಮುಖ್ಯ ದ್ವಾರವನ್ನು ಮುಚ್ಚಲಾಗಿತ್ತು ಎಂದು ಬಿವಿಎ ಆರೋಪಿಸಿದೆ.
ನಲಸೋಪಾರ ಕ್ಷೇತ್ರದ ಎಲ್ಲಾ 507 ಮತಗಟ್ಟೆಗಳಲ್ಲಿ ವೆಬ್ಕಾಸ್ಟಿಂಗ್ ಬಗ್ಗೆ ಬಿವಿಎ ಕಳವಳ ವ್ಯಕ್ತಪಡಿಸಿದೆ. ಈ ಪ್ರದೇಶವು ಪಾಲ್ಘರ್ ಜಿಲ್ಲೆಯ ಎರಡು ನಿರ್ಣಾಯಕ ಮತಗಟ್ಟೆಗಳಲ್ಲಿ ಒಂದನ್ನು ಒಳಗೊಂಡಿದೆ. ಜಿಲ್ಲೆಯ ಮತ್ತೊಂದು ಕ್ಷೇತ್ರ ವಸಾಯಿಯಲ್ಲಿ ಠಾಕೂರ್ ಅವರು ಬಿಜೆಪಿ ಅಭ್ಯರ್ಥಿ ಸ್ನೇಹಾ ದುಬೆ ಅವರನ್ನು ಎದುರಿಸಲಿದ್ದಾರೆ. ವಸಾಯಿಯಲ್ಲಿ ಶೇ.93 ಬೂತ್ಗಳನ್ನು ವೆಬ್ಕಾಸ್ಟ್ ಮಾಡಲಾಗಿದೆ.
ವಿರಾರ್ನಲ್ಲಿ ತಾನು ವಾಸ್ತವ್ಯ ಹೂಡಿದ್ದಕ್ಕೆ ಕ್ಷಮೆಯಾಚಿಸಲು ತಾವ್ಡೆ ನನಗೆ ಫೋನ್ ಮಾಡಿದ್ದರು ಎಂದು ಠಾಕೂರ್ ಹೇಳಿದ್ದಾರೆ. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದೆ, ಪೊಲೀಸರು ಮತ್ತು ಚುನಾವಣಾಧಿಕಾರಿಗಳು ಗಮನಹರಿಸುವಂತೆ ಒತ್ತಾಯಿಸಿದ್ದಾರೆ.
ವಿನೋದ್ ತಾವ್ಡೆ ಹಣದ ಜೊತೆ ಸಿಕ್ಕಿಬಿದ್ದ ವಿರಾರ್ ಪ್ರದೇಶ ನಲಸೋಪಾರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ. ಬಿವಿಎ ಪಕ್ಷದ ಕ್ಷಿತಿಜ್ ಠಾಕೂರ್ ಇಲ್ಲಿನ ಹಾಲಿ ಶಾಸಕರಾಗಿದ್ದರು. ಪ್ರಸ್ತುತ ನಡೆಯುತ್ತಿರುವ ಚುನಾವಣೆಗೆ ಕ್ಷಿತಿಜ್ ಠಾಕೂರ್ ಮತ್ತೊಮ್ಮೆ ಸ್ಪರ್ದಿಸಿದ್ದು, ಇವರ ವಿರುದ್ದ ಬಿಜೆಪಿಯಿಂದ ರಾಜನ್ ನಾಯ್ಕ್, ಕಾಂಗ್ರೆಸ್ನಿಂದ ಸಂದೀಪ್ ಪಾಂಡೆ ಕಣಕ್ಕಿಳಿದಿದ್ದಾರೆ.
2019ರಲ್ಲಿ ಮೂವರು ಶಾಸಕರ ಮೂಲಕ ಬಿವಿಎ ಬಿಜೆಪಿ ನೇತೃತ್ವದ ಮಹಾಯುತಿಯನ್ನು ಬೆಂಬಲಿಸಿತ್ತು. ಈ ಬಾರಿ ಪ್ರಚಾರದ ಅವಧಿ ಕೊನೆಗೊಂಡು ನಾಳೆ ಮತದಾನ ನಡೆಯಲಿದ್ದರೂ, ಹೊರಗಿನ ರಾಜಕಾರಣಿಗಳು ಕ್ಷೇತ್ರದಲ್ಲಿರುವುದನ್ನು ಬಿವಿಎ ಅಧ್ಯಕ್ಷ ಹಿತೇಂದ್ರ ಠಾಕೂರ್ ಪ್ರಶ್ನಿಸಿದ್ದಾರೆ.
ಮಹಾರಾಷ್ಟ ಬಿಜೆಪಿ ಆರೋಪವನ್ನು ತಳ್ಳಿ ಹಾಕಿದ್ದು, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ವಿನೋದ್ ತಾವ್ಡೆ ವಾರ್ಡ್ ಮಟ್ಟದಲ್ಲಿ ಹಣ ಹಂಚುತ್ತಾರೆಯೇ? ಎಂದು ಪ್ರಶ್ನಿಸಿದೆ.
ಇದನ್ನೂ ಓದಿ : ಗಾಯಕ ಟಿಎಂ ಕೃಷ್ಣಗೆ ‘ಎಂಎಸ್ ಸುಬ್ಬುಲಕ್ಷ್ಮಿ’ ಹೆಸರಿನಲ್ಲಿ ಪ್ರಶಸ್ತಿ ನೀಡದಂತೆ ಮದ್ರಾಸ್ ಹೈಕೋರ್ಟ್ ನಿರ್ಬಂಧ


