Homeಪುಸ್ತಕ ವಿಮರ್ಶೆಮೂಡ್ನಾಕೂಡು ಚಿನ್ನಸ್ವಾಮಿಯವರ ’ಬುದ್ಧಾನುಸಾಸನಂ’: ಬೌದ್ಧ ಧಮ್ಮದ ಅರಿವಿನ ದರ್ಶನ

ಮೂಡ್ನಾಕೂಡು ಚಿನ್ನಸ್ವಾಮಿಯವರ ’ಬುದ್ಧಾನುಸಾಸನಂ’: ಬೌದ್ಧ ಧಮ್ಮದ ಅರಿವಿನ ದರ್ಶನ

- Advertisement -
- Advertisement -

ಕ್ರಿ.ಪೂ. 6ನೆಯ ಶತಮಾನ ಭಾರತದ ಚರಿತ್ರೆಯಲ್ಲಿ ಅಚ್ಚಳಿಯದಂತೆ ಉಳಿದುಬಿಡುವ ಕಾಲಮಾನ. ತಥಾಗತ ಬುದ್ಧನ ದರ್ಶನವು ವಿಕಾಸಗೊಂಡ ಕಾಲ. ನಂತರ ಆ ದರ್ಶನವು ಸಾಮ್ರಾಟ್ ಅಶೋಕನ ಮನಪರಿವರ್ತನೆಯಿಂದಾಗಿ ದಕ್ಷಿಣ ಏಷಿಯಾವನ್ನೇ ಆವರಿಸಿತು. ಅಷ್ಟಕ್ಕೆ ನಿಲ್ಲದೆ ಆಯಾ ನೆಲದ ಸಂಸ್ಕೃತಿಗಳೊಂದಿಗೆ ಕೊಡುಕೊಳ್ಳುವಿಕೆ ಮಾಡಿಕೊಂಡು ಬೆಳೆಯಿತು. ಇಂದು ಬೌದ್ಧ ದರ್ಶನವು ಹೀನಾಯಾನ, ಮಹಾಯಾನ, ತೇರಾವಾದ, ವಜ್ರಯಾನ, ಜೆನ್, ನವಯಾನ ಮುಂತಾದ ಹಲವು ಧಾರೆಗಳಾಗಿ ಬೆಳೆದಿದೆ. ಪ್ರಪಂಚದಾದ್ಯಂತ ತನ್ನ ಬೆಳಕನ್ನು ಚೆಲ್ಲುತ್ತಿದೆ. ಆದರೆ ಬೌದ್ಧ ದರ್ಶನ ಜೀವ ತಾಳಿದ ಭಾರತದಲ್ಲಿ 20ನೇ ಶತಮಾನದವರೆಗೂ ಅದರ ಸ್ಥಿತಿ ಶೋಚನೀಯವಾಗಿತ್ತು. ಬೋಧಿಸತ್ವ ಬಾಬಾಸಾಹೇಬ್ ಅಂಬೇಡ್ಕರರ ’ಮಹಾ ಮರಳುವಿಕೆ’ಯಿಂದಾಗಿ ಭಾರತೀಯರಿಗೆ ಬೌದ್ಧ ದರ್ಶನದ ವಿಸ್ಮೃತಿಯು ಕಳಚಿಬಿದ್ದಿತು. ಇದರ ಮುಂದುವರೆದ ಭಾಗವಾಗಿ ಹಲವು ವಿದ್ವಾಂಸರು ಬೌದ್ಧ ದರ್ಶನವನ್ನು ’ಧಮ್ಮ’ವನ್ನಾಗಿ ಅಭ್ಯಾಸ ಮಾಡಿದರು. ಅಂತಹವರಲ್ಲಿ ಕನ್ನಡನಾಡಿನ ಖ್ಯಾತ ಸಾಹಿತಿಗಳಾದ ಡಾ. ಮೂಡ್ನಾಕೂಡು ಚಿನ್ನಸ್ವಾಮಿಯವರೂ ಒಬ್ಬರು.

ವೇದೋಪನಿಷತ್ತುಗಳು ಜನಸಾಮಾನ್ಯರ ಭಾಷೆಯಲ್ಲದ ಸಂಸ್ಕೃತವನ್ನು ಮುಖ್ಯಭಾಷೆಯಾಗಿ ಪರಿಗಣಿಸಿ ಕಟ್ಟಿಕೊಂಡ ತಾತ್ವಿಕತೆಯನ್ನು ಅನುಸರಿಸದೆ ಬುದ್ಧಗುರು ಜನಸಾಮಾನ್ಯರ ಭಾಷೆಯಾದ ’ಪಾಲಿ’ಯಲ್ಲಿ ದುಃಖನಿವಾರಣೆಗಾಗಿ ತನ್ನ ಸಂಶೋಧನಾ ಮತ್ತು ಅನುಭವ ತತ್ವಗಳನ್ನು ಬೋಧಿಸಿದನು. ಶಾತವಾಹನರ ನಂತರದ ಕಾಲಘಟ್ಟದಲ್ಲಿ ಯಜಮಾನ್ಯ ಸಂಸ್ಕೃತಿಯ ಭಾಗವಾಗಿ ಬೌದ್ಧ ವಿಹಾರದ ಭಿಕ್ಕುಗಳೂ ಸಹ ಜನಸಾಮಾನ್ಯರಿಂದ ದೂರ ಸರಿದು ಸಂಸ್ಕೃತವನ್ನೇ ಬಳಸಿಕೊಂಡರು. ಬೌದ್ಧ ದರ್ಶನವನ್ನೇ ಜನಸಾಮಾನ್ಯರಿಂದ ದೂರಗೊಳಿಸಿದರು. ಆದರೆ ‘ಬುದ್ಧಾನುಸಾಸನಂ’ ಜನಸಾಮಾನ್ಯರಿಗೆ ಬೌದ್ಧ ದರ್ಶನವನ್ನು ಸರಳವಾಗಿ ಅರ್ಥಮಾಡಿಸುವಲ್ಲಿ ಖಂಡಿತವಾಗಿಯೂ ಗೆಲ್ಲುತ್ತದೆ.

ಸಾಮ್ರಾಟ್ ಅಶೋಕ

’ಬುದ್ಧಾನುಸಾಸನಂ’ ಬೌದ್ಧ ಚಿಂತನೆಗಳ ಬಗೆಗಿನ ಲೇಖನಗಳನ್ನು ಒಳಗೊಂಡಿದೆ. ಆದರೆ ಒಂದು ಲೇಖನದಿಂದ ಮತ್ತೊಂದು ಲೇಖನಕ್ಕೆ ಸಂಬಂಧವಿರುವುದರಿಂದ ಇಡೀ ಕೃತಿಯನ್ನು ಬೌದ್ಧ ಚಿಂತನೆಗಳ ಬುಟ್ಟಿ ಎಂದು ಕರೆಯಬಹುದು. ಕೃತಿಯ ಉದ್ದಕ್ಕೂ ಲೇಖಕರ ಅಗಾಧವಾದ ಓದು ಮತ್ತು ಜೀವನಾನುಭವ ಎದ್ದು ಕಾಣುತ್ತದೆ. ಜನಸಾಮಾನ್ಯರಿಗೆ ಮಾತ್ರವಲ್ಲ ಬೌದ್ಧ ತತ್ವಕ್ಕೆ ಸ್ವಲ್ಪ ಪ್ರವೇಶವಿರುವವರಿಗೂ ಇರಬಹುದಾದ ಹಲವು ಅನುಮಾನಗಳಿಗೆ ಮುಖಾಮುಖಿಯಾಗುತ್ತದೆ.

ಬೌದ್ಧ ಧಮ್ಮ ಮಾಂಸಾಹಾರ ಸೇವಿಸಲು ಅನುಮತಿಸಿದೆಯೇ? ಬೌದ್ಧ ಧಮ್ಮದಲ್ಲಿ ಆತ್ಮಕ್ಕೆ ಸ್ಥಾನವಿಲ್ಲವೇ? ಪುನರ್ಜನ್ಮವನ್ನು ಹೇಗೆ ವ್ಯಾಖ್ಯಾನಿಸಲಾಗಿದೆ? ದೇವರ ಬಗ್ಗೆ ಬುದ್ಧಗುರುವಿನ ಮಾತುಗಳೇನು? ಸ್ವರ್ಗ, ನರಕ, ಪಾಪ, ಪುಣ್ಯಗಳ ಕುರಿತು ಬುದ್ಧಗುರುವಿನ ನಿಲುವೇನು? ಚಾತುರ್ವರ್ಣವನ್ನು ಏಕೆ ಬುದ್ಧಗುರು ಪುರಸ್ಕರಿಸಲಿಲ್ಲ? ಹಿಂಸೆ ಮತ್ತು ಅಹಿಂಸೆಗಳ ಬಗ್ಗೆ ವ್ಯಾಖ್ಯಾನವೇನು? ಹೀಗೆ ಬೌದ್ಧ ದರ್ಶನದ ಬಗ್ಗೆ ತೂರಿಬರುವ ಸಾಮಾನ್ಯ ಪ್ರಶ್ನೆಗಳಿಗೆ ಇದುವರೆಗೆ ಹಲವರು ಉತ್ತರಿಸುತ್ತಲೇ ಬಂದಿದ್ದಾರೆ. ಆದರೆ ಇವುಗಳ ಬಗ್ಗೆ ಬುದ್ಧಗುರು ಯಾವ ಸುತ್ತದಲ್ಲಿ ಹಾಗೂ ಸನ್ನಿವೇಶದಲ್ಲಿ ಮಾತನಾಡಿದ್ದಾರೆ ಎಂಬುದಕ್ಕೆ ಸಾಕ್ಷಿ ನೀಡುವ ಬೆರಳೆಣಿಕೆಯಷ್ಟು ಕೃತಿಗಳಿರಬಹುದಷ್ಟೆ. ಅದರಲ್ಲೂ ಮೂಲ ಪಠ್ಯಗಳನ್ನಾಧರಿಸಿದ ವ್ಯಾಖ್ಯಾನ ಸಿಗುವುದು ಬಲು ಕಷ್ಟ. ಹಾಗಾಗಿ ’ಬುದ್ಧಾನುಸಾಸನಂ’ ಈ ಕೊರತೆಯನ್ನು ನೀಗಿಸುತ್ತದೆ. ಸ್ವತಃ ಲೇಖಕರೇ ’ದೇವರಿಲ್ಲದೆ, ಪವಾಡವಿಲ್ಲದೆ, ಯುದ್ಧಗಳಿಲ್ಲದೆ, ಕೇಡುಗಳಿಲ್ಲದೆ ಸೃಷ್ಟಿಯಾಗಿರುವ ಗ್ರಂಥವೇನಾದರೂ ಇದ್ದರೆ ಅದು ಧಮ್ಮಪದ’ ಎಂದು ಹೇಳುವ ಮೂಲಕ ಅವರ ಪ್ರತಿಯೊಂದು ಮಾತಿಗೂ ಜವಾಬ್ದಾರಿಯುತವಾಗಿ ಸಾಕ್ಷಿ ನೀಡುತ್ತಾರೆ. ಸಮಕಾಲೀನ ಯುವಬರೆಹಗಾರರು ಈ ಬದ್ಧತೆಯನ್ನು ಮೂಡ್ನಾಕೂಡರಿಂದ ಕಲಿಯಲೇಬೇಕಿದೆ.

ಬೌದ್ಧ ತಾತ್ವಿಕತೆಗೆ ಸಂಬಂಧಿಸಿದಂತೆ ಬುದ್ಧಿಜೀವಿಗಳ ವಲಯದಲ್ಲಿಯೂ ಸಾಕಷ್ಟು ಚರ್ಚೆಗಳಿವೆ ಹಾಗೂ ಪ್ರಶ್ನೆಗಳಿವೆ. ನಾಮರೂಪ ತತ್ವ, ಮಧ್ಯಮ ಮಾರ್ಗ, ಬುದ್ಧಗುರು ಕೇವಲ ದುಃಖದ ಬಗ್ಗೆಯೇ ಮಾತನಾಡಿದ್ದಾನೆ ಎಂಬ ವಿಚಾರಗಳ ಮೇಲೂ ’ಬುದ್ಧಾನುಸಾಸನಂ’ ಸ್ಪಷ್ಟವಾದ ಬೆಳಕನ್ನು ಚೆಲ್ಲುತ್ತದೆ.

ಇದರೊಂದಿಗೆ ಬೌದ್ಧ ಚಿಂತಕರು ಹೆಚ್ಚು ಪ್ರಚುರಪಡಿಸದ ವಿಚಾರಗಳು ಕೃತಿಯುದ್ದಕ್ಕೂ ಹರಡಿಕೊಂಡಿರುವುದರಿಂದ ಅಂತಹ ಒಂದೆರಡು ನಿದರ್ಶನಗಳನ್ನು ನೀಡಬೇಕೆನಿಸುತ್ತಿದೆ.

ಬೌದ್ಧ ಭಿಕ್ಕುಗಳು ಯಾರಿಂದಲಾದರೂ, ಯಾವ ಆಹಾರವಾದರೂ ಸರಿ ಸ್ವೀಕರಿಸಿ ಉಣ್ಣಬೇಕು. ಇದು ವಿಚಾರವಲಯದಲ್ಲಿರುವ ಗಟ್ಟಿಯಾದ ನಂಬಿಕೆ. ಆದರೆ ಲೇಖಕರು ಬೌದ್ಧ ಸಾಹಿತ್ಯದ ’ಮಾತಂಗ ಜಾತಕ’ದಲ್ಲಿನ ಐತಿಹ್ಯವೊಂದನ್ನು ತಿಳಿಸಿದ್ದಾರೆ. ಅಲ್ಲಿ ಮಾದಿಗ ಮಾತಂಗ ಮುನಿಯೊಂದಿಗೆ ಬ್ರಾಹ್ಮಣ ಕನ್ಯೆ ದಿಟ್ಟಮಂಗಲಿಕೆಯ ವಿವಾಹವಾಗುತ್ತದೆ. ಅವರಿಗೆ ಮಂಡವ್ಯ ಎಂಬ ಮಗ ಹುಟ್ಟುತ್ತಾನೆ. ಬೋಧಿಸತ್ವನಾದ ಮಾತಂಗನಿಗೆ ಮಂಡವ್ಯ ದಾನ ಕೊಡಲು ನಿರಾಕರಿಸಿದಾಗ, ಜಾತಿ ಎಂಬುದು ಅರಿಷಡ್ವರ್ಗಗಳಂತೆ ಒಂದು ಅವಗುಣ. ಅದು ಇರುವವರಿಂದ ದಾನ ಪಡೆಯುವುದು ಯೋಗ್ಯವಲ್ಲ. ಅಂತಹವರು ದಾನ ನೀಡಲೂ ಸಹ ಯೋಗ್ಯರಲ್ಲ ಎಂದು ಹೇಳುವ ಮಾತಂಗ ಗಾಥೆಯದು. ಈ ಗಾಥೆಯು ಏಕಕಾಲಕ್ಕೆ ಅನುಲೋಮ ವಿವಾಹ ಪದ್ಧತಿಯನ್ನೂ ಜೊತೆಗೆ ಅದೇ ಕಾಲಘಟ್ಟದಲ್ಲಿ ಜಡಗೊಂಡ ಸಮಾಜವನ್ನೂ ಪರಿಚಯಿಸುತ್ತದೆ. ಇನ್ನೂ ಮುಂದೆ ಹೋಗಿ ಮಾದಿಗರು ಬೌದ್ಧ ದರ್ಶನಕ್ಕೆ ಕೊಡುಗೆ ನೀಡಿರುವ ಬಗ್ಗೆ ಸಾಕ್ಷಿ ನುಡಿಯುತ್ತಿದೆ.

ಇನ್ನೊಂದು ನಿದರ್ಶನ ’ಕುಮಾರ ಪನ್ಹ’. ಇದು ಬೌದ್ಧ ಅರಹಂತನಾದ ಅಸ್ಪೃಶ್ಯ ಜಾತಿಗೆ ಸೇರಿದ್ದ ’ಸೋಪಾಕ’ ಎಂಬ ಬಾಲಕ ಬೌದ್ಧ ತಾತ್ವಿಕತೆಯನ್ನು ಒಂದು, ಎರಡು, ಮೂರು.. ಎಂದು ವಿವರಿಸುವ ಬಹಳ ಮಹತ್ವವಾದ ಸುತ್ತ. ಸ್ವತಃ ಬುದ್ಧಗುರು ಯಾವುದು ಒಂದು? ಯಾವುದು ಎರಡು? ಹೀಗೆ ಹತ್ತರವರೆಗೂ ಪ್ರಶ್ನೆಗಳನ್ನು ಕೇಳಿದಾಗ ಕುಮಾರ ಸೋಪಕ ಉತ್ತರಿಸುವ ಈ ಭಾಗ ನಿಜಕ್ಕೂ ಅದ್ಭುತವಾಗಿದೆ. ಇಡೀ ಬೌದ್ಧ ತಾತ್ವಿಕತೆಯನ್ನು ಹತ್ತು ವಾಕ್ಯಗಳಲ್ಲಿ ಅಸ್ಪೃಶ್ಯನಾಗಿದ್ದ ಸೋಪಕ ಕಟ್ಟಿಕೊಡುವುದು ವಿಸ್ಮಯ ಮೂಡಿಸುತ್ತದೆ. ಬುದ್ಧಗುರುವಿನ ಕಾಲಕ್ಕೆ ಚರ್ಮಗಾರರು ಹಾಗೂ ಊರು ಸ್ವಚ್ಚಗೊಳಿಸುವವರು ಇನ್ನೂ ಶೂದ್ರರಲ್ಲಿನ ಅಂತ್ಯಜರಾಗಿದ್ದು ಬೌದ್ಧ ದರ್ಶನಕ್ಕೆ ಅವರು ನೀಡಿರಬಹುದಾದ ಕೊಡುಗೆಯನ್ನು ಇದು ತಿಳಿಸುತ್ತದೆ. ಮತ್ತೊಂದು, ಬೌದ್ಧ ಸಾಹಿತ್ಯದಲ್ಲಿ ಅರಸನನ್ನು ’ಭಾಗದುಗ’ ಅಂದರೆ ಉತ್ಪಾದನೆಯ ಭಾಗವನ್ನು ಕಸಿಯುವವನು ಎಂದಿರುವುದು. ಎಮ್ಮೆ ಕಾಯುವ ಯುವಕ ’ನಂದ’ ಬೌದ್ಧ ಸಂಘಕ್ಕೆ ಸೇರಿಸಿಕೊಳ್ಳಲು ಕೇಳಿಕೊಂಡಾಗ ಸ್ವತಃ ಬುದ್ಧ ’ಎಮ್ಮೆಗಳನ್ನು ಕೊಟ್ಟಿಗೆಗೆ ಹಿಂದಿರುಗಿಸಿ ಒಡೆಯನ ಅಪ್ಪಣೆಯನ್ನು ಪಡೆದು ಬಾ’ ಎನ್ನುತ್ತಾರೆ. ಇವೆರಡೂ ಅಂದಿನ ಶೂದ್ರ ಸಮಾಜವನ್ನು ಪರಿಚಯಿಸುವುದರ ಜೊತೆಗೆ ಸ್ವತಃ ಬುದ್ಧನಿಗೂ ಇದ್ದ ಒತ್ತಡವನ್ನು ತಿಳಿಸುತ್ತದೆ. ’ಒಡೆಯನ ಅಪ್ಪಣೆ’ ಎನ್ನುವುದು ಸಮಾಜದ ಕೆಲವು ಸ್ಥಾಪಿತ ಹಿತಾಸಕ್ತಿಗಳ ವಿರುದ್ಧ ಬುದ್ಧಗುರು ಗಟ್ಟಿಯಾಗಿ ಮಾತನಾಡಬೇಕಾದಷ್ಟು ಮಾತಾಡಲು ಆಗಲಿಲ್ಲವೇನೋ ಎಂಬುದನ್ನೂ ತಿಳಿಸುತ್ತದೆ.

ಲೇಖಕರು ಸಾಮ್ರಾಟ್ ಅಶೋಕ ತನ್ನಿಬ್ಬರು ಮಕ್ಕಳ ಸಮೇತ ಹನ್ನೆರಡು ಭಿಕ್ಕುಗಳನ್ನು ಒಂಬತ್ತು ಪ್ರದೇಶಗಳಿಗೆ ಧಮ್ಮ ಪ್ರಸಾರಕ್ಕಾಗಿ ಕಳುಹಿಸಿದ ಮಹತ್ವದ ಮಾಹಿತಿಯನ್ನು ಲೇಖಕರು ಹಂಚಿಕೊಂಡಿದ್ದಾರೆ. ಅವುಗಳು 1. ಕಾಶ್ಮೀರ – ಗಾಂಧಾರ 2. ಮಹಿಷಮಂಡಲ (ಮೈಸೂರು) 3. ಬನವಾಸಿ 4. ಅಪರಾಂತಕ (ಗುಜರಾತ್, ಕಚ್ ಮತ್ತು ಸಿಂದ್ ಪ್ರಾಂತ್ಯಗಳು) 5. ಮಹಾರಾಷ್ಟ್ರ 6. ಯೋನ (ಗ್ರೀಸ್) 7. ಹಿಮಾಲಯ (ಟಿಬೆಟ್) 8. ಸುವರ್ಣಭೂಮಿ (ಮ್ಯಾನ್ಮಾರ್ ಮತ್ತು ಥೈಲ್ಯಾಂಡ್) 9. ಶ್ರೀಲಂಕಾ. ಕ್ರಿ.ಪೂ 3ನೇ ಶತಮಾನದಲ್ಲಿಯೇ ಕರ್ನಾಟಕದ ಎರಡು ಪ್ರಸಿದ್ಧ ಸ್ಥಳಗಳಿಗೆ ಅಶೋಕನು ಬೌದ್ಧ ಧಮ್ಮವನ್ನು ಪರಿಚಯಿಸಿದ್ದಾನೆ ಎನ್ನುವ ಮಾಹಿತಿ ಸರ್ವವಿಧಿತವಾಗಿದೆ. ಇದರ ಬಗ್ಗೆ ಡಾ. ತಾಳ್ತಜೆ ವಸಂತಕುಮಾರ ಅವರೂ ಸಹ ತಮ್ಮ ’ಬೌದ್ಧಾಯನ’ ಕೃತಿಯಲ್ಲಿ ತಮ್ಮ ಸಾಕಷ್ಟು ಸಂಶೋಧನೆಗಳ ಮೂಲಕ ತಿಳಿಸಿದ್ದಾರೆ. 1986ರಲ್ಲಿಯೇ ಗುಲ್ಬರ್ಗಾದ ಸನ್ನತಿಯಲ್ಲಿ ಅಶೋಕನ ಮೂರ್ತಿಯನ್ನು ಹೊಂದಿದ್ದ ವಿಹಾರ ಪತ್ತೆಯಾಗಿದೆ. ಮಸ್ಕಿ, ಬ್ರಹ್ಮಗಿರಿ, ಜಟಿಂಗ ರಾಮೇಶ್ವರ, ನಿಟ್ಟೂರು, ಉಡೆಗೊಳ, ಪಾಲ್ಕಿ ಗುಂಡು, ಗವಿಸಿದ್ಧೇಶ್ವರ ಮಠ ಮುಂತಾದ ಕಡೆಗಳಲ್ಲಿ ಅಶೋಕನ ಶಾಸನಗಳು ದೊರೆತಿವೆ. ಆದಾಗ್ಯೂ ಕರ್ನಾಟಕದಲ್ಲಿ ಬೌದ್ಧ ಇತಿಹಾಸದ ಕಡೆ ಬೆಳಕು ಚೆಲ್ಲುವ ಗಂಭೀರ ಪ್ರಯತ್ನವನ್ನು ಯಾವುದೇ ಸರ್ಕಾರ ಮಾಡಿಲ್ಲದಿರುವುದು ಬೇಸರದ ಸಂಗತಿಯಾಗಿದೆ. ಇದರ ಬಗ್ಗೆ ಮೂಡ್ನಾಕೂಡುರವರು ಕೃತಿಗಳು ಮತ್ತಷ್ಟು ಬೆಳಕು ಚೆಲ್ಲಬಹುದಾಗಿದೆ.

ಬೌದ್ಧರಲ್ಲಿ ಬುದ್ಧ ಪೂರ್ಣಿಮೆಯನ್ನು ಬಿಟ್ಟರೆ ಬೇರೆ ಆಚರಣೆಗಳೇ ಇಲ್ಲವೆಂದು ನಂಬಲಾಗಿದೆ. ಆದರೆ ’ಬುದ್ಧಾನುಸಾಸನಂ’ ಬೌದ್ಧರ ಎರಡು ಮಹತ್ವವಾದ ಆಚರಣೆಗಳನ್ನು ವಿವರಿಸುತ್ತದೆ. ವರ್ಷದ ಕೊನೆಯ ಹುಣ್ಣಿಮೆಯಲ್ಲಿ ರಾತ್ರಿಯಿಡೀ ಜನಸಾಮಾನ್ಯರು ಒಂದೆಡೆ ಹಬ್ಬದಂತೆ ಸೇರಿ ಸ್ವತಃ ಕೈಯಾರೆ ತಯಾರಿಸಿದ ಚೀವರಗಳನ್ನು ಬೌದ್ಧ ಭಿಕ್ಕುಗಳಿಗೆ ದಾನ ನೀಡುವ ’ಕಠಿಣ ಚೀವರ ದಾನ’. ಮತ್ತೊಂದು ಯಾಜಮಾನ್ಯ ಸಂಸ್ಕೃತಿ ತನ್ನದೆಂದು ಬಿಂಬಿಸಿಕೊಂಡಿರುವ ’ಗುರುಪೂರ್ಣಿಮೆ’. ಆಷಾಢ ಹುಣ್ಣಿಮೆಯ ದಿನದಂದು ಬೌದ್ಧ ಪರಂಪರೆಯಲ್ಲಿ ಬುದ್ಧಗುರು ಮೊದಲ ’ಧಮ್ಮಚಕ್ಕಪವತ್ತನ’ ನೀಡಿದ ದಿನವನ್ನು ಗುರುಪೂರ್ಣಿಮೆಯಾಗಿ ಆಚರಿಸಲಾಗುತ್ತಿತ್ತು. ಈಗ ಈ ಆಚರಣೆ ಇದೆಯಾದರೂ ಬೌದ್ಧ ಪರಂಪರೆಯ ಕೊಡುಗೆಯನ್ನೇ ಮರೆಸುವಷ್ಟು ಪ್ರತ್ಯೇಕಗೊಂಡಿದೆ. ಅದೇನೇ ಇದ್ದರೂ ಬೌದ್ಧರೂ ಸೇರಿದಂತೆ ಮನುಜಪರರೆಲ್ಲರೂ ’ಗುರುವಿನ ಗೆಳೆಯರಾಗುವ ತನಕ ದೊರೆಯದಣ್ಣ ಮುಕ್ತಿ’ ಎನ್ನುತ್ತಾ ಗುರುವಿನ ಗುಲಾಮರಾಗದೇ ಈ ಎರಡು ಆಚರಣೆಗಳನ್ನು ಮುಂದುವರೆಸುವುದು ನಿಜಕ್ಕೂ ಬುದ್ಧಗುರುವಿಗೆ ಸಲ್ಲಿಸಬಹುದಾದ ಗೌರವವಾಗಿದೆ. ಜೊತೆಗೆ ಪ್ರಜ್ಞೆ, ಕರುಣಾ ಮತ್ತು ಮೈತ್ರಿಯನ್ನು ಆಚರಣೆಗೆ ತಂದಂತಾಗುತ್ತದೆ.

ಡಾ. ಮೂಡ್ನಾಕೂಡು ಚಿನ್ನಸ್ವಾಮಿ

ಹೀಗೆ ’ಬುದ್ಧಾನುಸಾಸನಂ’ ಹಳೆಯ ಬೇರಿನೊಂದಿಗೆ ಹೊಸ ಚಿಗುರನ್ನೂ ಪರಿಚಯಿಸುತ್ತ ಓದುಗರನ್ನು ವಿಸ್ಮಯಗೊಳಿಸುತ್ತದೆ. ಇಂತಹ ಮಹತ್ವದ ಕೃತಿಯನ್ನು ಕನ್ನಡಕ್ಕೆ ಕೊಟ್ಟಿದ್ದಕ್ಕೆ ಡಾ. ಮೂಡ್ನಾಕೂಡು ಚಿನ್ನಸ್ವಾಮಿಯವರಿಗೆ ಧನ್ಯವಾದಗಳು.

ಕಡೆಯದಾಗಿ, ಧರ್ಮವೆಂಬುದು ಇನ್ನಿತರ ಧರ್ಮಗಳನ್ನು ವಿರೋಧಿಸಿ ಬೆಳೆಯುತ್ತದೆ ಎಂಬ ಕ್ರೌರ್ಯವನ್ನು ಬಿತ್ತುತ್ತಿರುವ ಈ ಕಾಲಘಟ್ಟದಲ್ಲಿ ಲೇಖಕರೇ ತಿಳಿಸುವ ಜೆನ್ ಕತೆಯೊಂದಿಗೆ ಈ ಬರೆಹವನ್ನು ಮುಗಿಸುತ್ತೇನೆ.

ಪ್ರಾಚೀನ ಜಪಾನ್ ದೇಶದಲ್ಲಿ ಬಿದಿರು ಮತ್ತು ಕಾಗದದಿಂದ ಮಾಡಿದ ಲಾಟೀನುಗಳನ್ನು ಉಪಯೋಗಿಸುತ್ತಿದ್ದರು. ಒಳಗೆ ಉರಿಯುವ ದೀಪವಿದ್ದಿತು. ಕುರುಡನೊಬ್ಬ ಒಂದು ರಾತ್ರಿ ತನ್ನ ಸ್ನೇಹಿತನನ್ನು ನೋಡಲು ಹೊರಡಲನುವಾದಾಗ ಅವನಿಗೆ ಒಂದು ಲಾಟೀನು ತೆಗೆದುಕೊಂಡು ಹೋಗುವಂತೆ ಜೊತೆಯಲಿದ್ದ ಸ್ನೇಹಿತ ಹೇಳಿದ.

’ನನಗೆ ಲಾಟೀನಿನ ಅಗತ್ಯವಿಲ್ಲ; ಬೆಳಕು ಮತ್ತು ಕತ್ತಲೆ ಎರಡೂ ನನಗೆ ಒಂದೆ’ ಎಂದ ಕುರುಡ.

’ನಿನ್ನ ದಾರಿಯನ್ನು ಕ್ರಮಿಸಲು ಲಾಟೀನಿನ ಅವಶ್ಯಕತೆ ಇಲ್ಲ ಎಂದು ನನಗೆ ಗೊತ್ತು. ಅದಿಲ್ಲದಿದ್ದರೆ ಯಾರಾದರೂ ಎದುರಿನಿಂದ ಬಂದು ನಿನ್ನ ಮೇಲೆ ಬೀಳಬಹುದು. ಅದಕ್ಕಾಗಿ ನೀನು ಲಾಟೀನು ಹಿಡಿದುಕೊಂಡು ಹೋಗುವುದು ಒಳಿತು’ ಎಂದ ಗೆಳೆಯ.

ಕುರುಡ ಲಾಟೀನು ಹಿಡಿದು ಹೊರಟ, ಅನತಿ ದೂರದಲ್ಲಿಯೇ ಅಪರಿಚಿತನೊಬ್ಬ ಇವನ ಮೇಲೆ ಬಂದು ಎಡವಿದ. ನೋಡಿಕೊಂಡು ಹೋಗಬಾರದೆ, ಲಾಟೀನು ಕಾಣಿಸುವುದಿಲ್ಲವೆ ನಿನಗೆ ಎಂದು ಅಪರಿಚಿತನಿಗೆ ಗದರಿದ.

’ನಿನ್ನ ಲಾಟೀನಿನ ದೀಪ ಆರಿಹೋಗಿದೆ ಸೋದರ!’ ಅಪರಿಚಿತನೆಂದ.

ವಿಕಾಸ್ ಆರ್ ಮೌರ್‍ಯ
ಕನ್ನಡದಲ್ಲಿ ದಲಿತ ಸೈದ್ಧಾಂತಿಕ ಪ್ರಜ್ಞೆಯನ್ನು ತನ್ನ ಬರಹ ಮತ್ತು ಹೋರಾಟದ ಮೂಲಕ ವಿಸ್ತರಿಸುತ್ತಿರುವ ಹೊಸ ತಲೆಮಾರಿನ ಬರಹಗಾರ ಮತ್ತು ಹೋರಾಟಗಾರ ವಿಕಾಸ್ ಆರ್ ಮೌರ್ಯ. ಗಣಿತ ಸ್ನಾತಕೋತ್ತರ ಪದವಿ ಮುಗಿಸಿರುವ ವಿಕಾಸ್ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ಚಮ್ಮಟಿಕೆ’ ಪ್ರಕಟಿತ ಕೃತಿ


ಇದನ್ನೂ ಓದಿ: ಪುಸ್ತಕ ಪರಿಚಯ; ಭೌತಶಾಸ್ತ್ರದ ಪ್ರೊಫೆಸರ್‌ರ ಹೋರಾಟದ ಹಾದಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಸಿಲ ನಾಡು ಕಲಬುರಗಿಯಲ್ಲಿ ಮೊಳಗಿದ SIR ವಿರೋಧಿ ಘೋಷಣೆ.

ಕೇಂದ್ರ ಚುನಾವಣಾ ಆಯೋಗ ಜಾರಿಗೆ ತಂದಿರುವ ವಿಶೇಷ ತೀವ್ರ ಮತ ಪರಿಷ್ಕರಣೆ SIR ಅನ್ನು ಕರ್ನಾಟಕದಲ್ಲಿ ಜಾರಿ ಮಾಡಬಾರದು ಎಂದು ಆಗ್ರಹಿಸಿ ಕರ್ನಾಟಕದಾದ್ಯಂತ ಎದ್ದೇಳು ಕರ್ನಾಟಕ ಹಾಗಾ SIR ವಿರೋಧಿ ಕರ್ನಾಟಕ ವೇದಿಕೆಯು...

ವಿಜಯಪುರ : ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾಗೆ ಚಾಲನೆ

ರಾಜ್ಯದ ಆರು ಜಿಲ್ಲೆಗಳಲ್ಲಿ ನಡೆಯಲಿರುವ ಎಸ್‌ಐಆರ್‌ ವಿರೋಧಿ ಜನಜಾಗೃತಿ ಜಾಥಾಗೆ ವಿಜಯಪುರದ ಅಂಬೇಡ್ಕರ್ ವೃತ್ತದಲ್ಲಿ ಶನಿವಾರ (ಜೂ.13) ಸಂಜೆ ಚಾಲನೆ ದೊರೆಯಿತು. ಜಾಥಾವನ್ನು ಉದ್ಘಾಟಿಸಿ ಮಾತನಾಡಿದ ಅಹಿಂದ ಮುಖಂಡ ಎಸ್ ಎಂ ಪಾಟೀಲ...

ಬಸವಣ್ಣನ ಕಲ್ಯಾಣದಲ್ಲಿ SIR ವಿರೋಧಿ ಜಾಥಾ.

ಬಸವಕಲ್ಯಾಣSIR ವಿರೋಧಿಸಿ ಕರ್ನಾಟಕದಾದ್ಯಂತ ನಡೆಯುತ್ತಿರುವ ಜಾಗೃತಿ ಜಾತಾವು ಬಸವಕಲ್ಯಾಣಕ್ಕೆ ತಲುಪಿತು. ಬಸವಕಲ್ಯಾಣದ ಅಂಬೇಡ್ಕರ್ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ ಜನರು ಜನವಿರೋಧಿ SIR ನ್ನೂ ವಿರೋಧಿಸಿ ನಿರ್ಣಯ ಕೈಗೊಂಡರು. ಸಭೆಯಲ್ಲಿ ಮಾತನಾಡಿದ ಜಾಥಾದ ಮುಖ್ಯಸ್ಥ...

ಸಂಸದ ಬಿ.ವೈ ರಾಘವೇಂದ್ರ ನಡೆಸುತ್ತಿದ್ದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ SIR ವಿರೋಧಿ ಜನಜಾಗೃತಿ ಜಾಥಾ ಕರಪತ್ರ ಹಂಚಿದ ಕಾರ್ಯಕರ್ತರು

ಶಿವಮೊಗ್ಗ : ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ ಅವರು ಜಿಲ್ಲೆಯ ಸಾಗರ ತಾಲ್ಲೂಕಿನ ರೈಲು ನಿಲ್ದಾಣದಲ್ಲಿ ಕುಂದುಕೊರತೆಗಳ ಸಭೆ ನಡೆಸುತ್ತಿದ್ದ ವೇಳೆ ಎಸ್‌ಐಆರ್ ವಿರುದ್ಧ ’ಎದ್ದೇಳು ಕರ್ನಾಟಕ’ ಮತ್ತು ’ಎಸ್‌ಐಆರ್ ವಿರೋಧಿ ಒಕ್ಕೂಟ’ದ ಮುಖಂಡರು...

ಬೀದರ್‌ ನಿಂದ ಶುರವಾದ SIR ವಿರೋಧಿ ಜನಜಾಗೃತಿ ಜಾಥಾ

SIR ವಿರೋಧಿ ಕರ್ನಾಟಕ ಹಾಗೂ ಎದ್ದೇಳು ಕರ್ನಾಟಕವು ಕರ್ನಾಟಕದಲ್ಲಿ SIR ಜಾರಿಯನ್ನು ವಿರೋಧಿಸಿ ರಾಜ್ಯದ 5 ಸ್ಥಳಗಳಿಂದ ಜನಜಾಗೃತಿ ಜಾಥಾ ಆಯೋಜಿಸಿದೆ. ಇಂದು ಬೀದರ್‌ ನ ಅಂಬೇಡ್ಕರ್‌ ಸರ್ಕಲ್‌ ನಿಂದ ಆರಂಭವಾದ ಜಾಥಾವು...

ಒಬ್ಬರೇ ಒಬ್ಬ ಅರ್ಹ ಮತದಾರರ ಹೊರಗಿಡುವುದನ್ನು ಒಪ್ಪುವುದಿಲ್ಲ : ಯೂಸುಫ್ ಕನ್ನಿ

ಮತದಾರರ ಪಟ್ಟಿಯ ಪರಿಷ್ಕರಣೆ ಮಾಡಲಿ, ಆದರೆ, ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಬೇಡವೇ ಬೇಡ. ಎಸ್‌ಐಆರ್‌ ಮೂಲಕ ಒಬ್ಬರೇ ಒಬ್ಬರು ಅರ್ಹ ಮತದಾರರನ್ನೂ ಪಟ್ಟಿಯಿಂದ ಹೊರಗಿಡುವುದನ್ನು ನಾವು ಒಪ್ಪುವುದಿಲ್ಲ ಎಂದು ಜಮಾಅತೆ ಇಸ್ಲಾಮಿ...

ಪ್ರಜಾಪ್ರಭುತ್ವದ ರಕ್ಷಣೆಗೆ ಎಸ್‌ಐಆರ್ (SIR) ವಿರುದ್ಧ ಜನಜಾಗೃತಿ ಜಾಥಾಕ್ಕೆ ಶಿವಮೊಗ್ಗದಲ್ಲಿ ಚಾಲನೆ

ಕೇಂದ್ರ ಸರ್ಕಾರದ ಎಸ್‌ಐಆರ್ (SIR) ನೀತಿಯ ವಿರುದ್ಧ ರಾಜ್ಯಾದ್ಯಂತ ಜನವಿರೋಧಿ ಅಲೆ ಎದ್ದಿದೆ. "ಸಂತ-ಶರಣರ ಈ ನಾಡಿನಲ್ಲಿ ಯಾವುದೇ ರೀತಿಯ ದುಷ್ಟ ಆಟ, ಮೋಸ, ವಂಚನೆಗೆ ಅವಕಾಶವಿಲ್ಲ" ಎಂಬ ದೃಢ ಸಂಕಲ್ಪದೊಂದಿಗೆ 'ಎಸ್‌ಐಆರ್...

ಜೂನ್ 13 ರಿಂದ ಕರ್ನಾಟಕದಲ್ಲಿ ‘SIR ವಿರೋಧಿ’ ಜನಜಾಗೃತಿ ಜಾಥ

ರಾಜ್ಯ ಚುನಾವಣಾ ಆಯೋಗವು ಎಸ್‌ಐಆರ್ (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ನಾಗರಿಕರ ಆಕ್ಷೇಪಣೆಗಳಿಗೆ ಸ್ಪಂದಿಸದಿರುವ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ‘ಎಸ್‌ಐಆರ್ ವಿರೋಧಿ ಒಕ್ಕೂಟ’ ಹಾಗೂ ‘ಎದ್ದೇಳು ಕರ್ನಾಟಕ’ ಸಂಘಟನೆಯ ವತಿಯಿಂದ ಜೂನ್ 13 ರಿಂದ...

‘ಕಾನೂನು ಪ್ರಕ್ರಿಯೆಯದುರುಪಯೋಗ’: ನ್ಯೂಸ್‌ಕ್ಲಿಕ್ ವಿರುದ್ಧದ ದೆಹಲಿ ಪೊಲೀಸ್, ಇಡಿ ಪ್ರಕರಣಗಳನ್ನು ರದ್ದುಗೊಳಿಸಿದ ಹೈಕೋರ್ಟ್

ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ನಿಯಮಗಳ ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದಂತೆ ನ್ಯೂಸ್‌ಕ್ಲಿಕ್ ಸುದ್ದಿ ಸಂಸ್ಥೆ ಮತ್ತು ಅದರ ಮುಖ್ಯ ಸಂಪಾದಕ ಪ್ರಬೀರ್ ಪುರಕಾಯಸ್ಥ ವಿರುದ್ಧ ದೆಹಲಿ ಪೊಲೀಸರು ಹಾಗೂ ಜಾರಿ ನಿರ್ದೇಶನಾಲಯ (ಇಡಿ) ದಾಖಲಿಸಿದ್ದ ಪ್ರಕರಣಗಳನ್ನು ದೆಹಲಿ...

ಕಾಂಗ್ರೆಸ್ ಜೊತೆ ವಿಲೀನ? ಅದೆಲ್ಲ ಬರೀ ಸುಳ್ಳು ಎಂದ ಟಿಎಂಸಿ

ಕಾಂಗ್ರೆಸ್ ಪಕ್ಷದೊಂದಿಗೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ವಿಲೀನವಾಗಬಹುದು ಎಂಬ ವರದಿಗಳನ್ನು ಟಿಎಂಸಿ ಉನ್ನತ ಮೂಲಗಳು ಬುಧವಾರ (ಇಂದು) ಸಂಪೂರ್ಣವಾಗಿ ತಳ್ಳಿಹಾಕಿವೆ. "ನಮ್ಮ ಪಕ್ಷಕ್ಕೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಮತ್ತು ವಿಲೀನಕ್ಕೆ...