ಬೆಳ್ತಂಗಡಿ: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ ಎಂದು ವ್ಯಕ್ತಿಯೊಬ್ಬ ನೀಡಿದ ದೂರಿನ ಬೆನ್ನಲ್ಲೇ ಈ ಪ್ರಕರಣ ಇದೀಗ ಮತ್ತೊಂದು ಮಹತ್ವದ ತಿರುವು ಪಡೆದುಕೊಂಡಿದೆ. ಪ್ರಕರಣದ ತನಿಖೆಗಾಗಿ ರಚಿಸಲಾಗಿರುವ ವಿಶೇಷ ತನಿಖಾ ತಂಡ (ಎಸ್ಐಟಿ) ಮುಂದೆ ಮತ್ತೊಬ್ಬ ದೂರುದಾರರಾದ ಜಯಂತ ಶೆಟ್ಟಿ ಹಾಜರಾಗಿದ್ದು, ಕೆಲವು ಪ್ರಮುಖ ಸಾಕ್ಷ್ಯಗಳನ್ನು ನೀಡಲು ಸಿದ್ಧರಾಗಿದ್ದಾರೆ.
ಸುಮಾರು ಇಪ್ಪತ್ತು ವರ್ಷಗಳ ಹಿಂದೆ ನಡೆದಿದೆ ಎನ್ನಲಾದ ಘಟನೆಗಳಿಗೆ ಸಂಬಂಧಿಸಿದಂತೆ, ಜಯಂತ ಶೆಟ್ಟಿ ಅವರು ಬೆಳ್ತಂಗಡಿಯಲ್ಲಿರುವ ಎಸ್ಐಟಿ ಕಚೇರಿಗೆ ತಡರಾತ್ರಿ ಆಗಮಿಸಿದ್ದರು. ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಜಯಂತ ಶೆಟ್ಟಿ, ಹಲವು ವರ್ಷಗಳ ಹಿಂದೆಯೇ ಧರ್ಮಸ್ಥಳದಲ್ಲಿ ಹಲವು ಕೊಲೆಗಳಾಗಿವೆ ಎಂದು ಸಾರ್ವಜನಿಕವಾಗಿ ಹೇಳಿದ್ದೆ ಎಂದರು. ಅಲ್ಲದೇ, ಈ ವಿಚಾರಗಳ ಬಗ್ಗೆ ಅನೇಕ ವೇದಿಕೆಗಳಲ್ಲಿ ಮಾತನಾಡಿದ್ದಾಗಿ ತಿಳಿಸಿದರು.
ಈ ವಿಷಯದ ತನಿಖೆಗಾಗಿ ರಾಜ್ಯ ಸರ್ಕಾರ ಎಸ್ಐಟಿಯನ್ನು ರಚಿಸಿದ್ದು ಉತ್ತಮ ಬೆಳವಣಿಗೆ ಎಂದು ಜಯಂತ ಶೆಟ್ಟಿ ಶ್ಲಾಘಿಸಿದರು. ತನಿಖಾ ತಂಡದ ಅಧಿಕಾರಿಗಳು ಭಾನುವಾರ ರಜೆ ಇರುವ ಕಾರಣ, ಸೋಮವಾರ ಬರುವಂತೆ ಸೂಚಿಸಿದ್ದು, ಆ ದಿನ ಎಲ್ಲ ಮಾಹಿತಿಯನ್ನು ಅವರಿಗೆ ನೀಡುತ್ತೇನೆ ಎಂದು ಶೆಟ್ಟಿ ಹೇಳಿದರು.
‘ಕೊಲೆಗಳ ಬಗ್ಗೆ ಎಲ್ಲರಿಗೂ ತಿಳಿದಿತ್ತು’
ಜಯಂತ ಶೆಟ್ಟಿ ಅವರ ಪ್ರಕಾರ, ಆ ಸಂದರ್ಭದಲ್ಲಿ ಧರ್ಮಸ್ಥಳದಲ್ಲಿ ನಡೆದಿದ್ದ ಕೊಲೆಗಳ ಬಗ್ಗೆ ಸ್ಥಳೀಯರಿಗೆಲ್ಲ ತಿಳಿದಿತ್ತು. ಆದರೆ, ‘ಭಯದಿಂದ ಯಾರೂ ಬಾಯಿ ಬಿಡುತ್ತಿರಲಿಲ್ಲ’ ಎಂದಿದ್ದಾರೆ. ಈಗ ರಾಜ್ಯ ಸರ್ಕಾರ ಎಸ್ಐಟಿ ರಚಿಸಿರುವುದರಿಂದ ಆ ಭಯ ದೂರವಾಗಿದೆ. ಹೀಗಾಗಿ, ತಾನು ದೂರು ನೀಡಲು ಮುಂದೆ ಬಂದಿರುವುದಾಗಿ ಅವರು ತಿಳಿಸಿದ್ದಾರೆ.
ತಮ್ಮ ಜೊತೆ ಇನ್ನೂ ಐದಾರು ಜನ ಸಾಕ್ಷಿಗಳು ಮುಂದೆ ಬರುವುದಾಗಿ ಹೇಳಿದ್ದಾರೆ ಎಂದು ಶೆಟ್ಟಿ ಬಹಿರಂಗಪಡಿಸಿದ್ದಾರೆ. ಮೃತದೇಹಗಳನ್ನು ಕಂಡಿದ್ದ ಸಾಕ್ಷ್ಯವನ್ನೂ ಅವರು ಹೇಳಿಕೊಂಡಿದ್ದಾರೆ. ‘ಮರಣೋತ್ತರ ಪರೀಕ್ಷೆ ಮಾಡಿಸದೇ, ಎಫ್ಐಆರ್ ದಾಖಲಿಸದೇ ಮೃತದೇಹಗಳನ್ನು ಹೂತಿದ್ದಾರೆ’ ಎಂದು ಶೆಟ್ಟಿ ಗಂಭೀರ ಆರೋಪ ಮಾಡಿದ್ದಾರೆ.
ಬಾಲಕಿಯೊಬ್ಬಳ ಮೃತದೇಹ ವಾರಗಟ್ಟಲೆ ಹಾಗೆಯೇ ಬಿದ್ದಿದ್ದರೂ, ಪೊಲೀಸರಿಗೆ ಮಾಹಿತಿ ನೀಡದೆ ಹೂತುಹಾಕಿದ್ದನ್ನು ತಾನು ಕಣ್ಣಾರೆ ನೋಡಿದ್ದಾಗಿ ಅವರು ಹೇಳಿಕೊಂಡಿದ್ದಾರೆ. ಈ ಬಗ್ಗೆ ಆ ಸಮಯದಲ್ಲಿ ಯಾಕೆ ಧ್ವನಿ ಎತ್ತಲಿಲ್ಲ ಎಂದು ಮಾಧ್ಯಮಗಳು ಪ್ರಶ್ನಿಸಿದಾಗ, ‘ಅಂದು ಬಾಯಿಬಿಡುವ ಪರಿಸ್ಥಿತಿ ಇರಲಿಲ್ಲ’ ಎಂದು ಜಯಂತ ಶೆಟ್ಟಿ ತಿಳಿಸಿದ್ದಾರೆ. ಜೊತೆಗೆ, ‘ನನ್ನ ಕುಟುಂಬದ ಹೆಣ್ಣುಮಗಳಾದ ಪದ್ಮಲತಾ ಪ್ರಕರಣಕ್ಕೂ ಏನಾಯಿತು ಎಂಬುದನ್ನು ಎಸ್ಐಟಿಗೆ ತಿಳಿಸುವವರೂ ಇದ್ದಾರೆ’ ಎಂದು ಹೇಳಿದರು.
ಈ ಕುರಿತು ಎಸ್ಐಟಿ ತಂಡ ಯಾವ ರೀತಿ ತನಿಖೆ ನಡೆಸಿ, ಯಾವ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕು.
ಧರ್ಮಸ್ಥಳ ಪ್ರಕರಣದ ದೂರುದಾರನಿಗೆ ಬೆದರಿಕೆ, ಕೇಸ್ ವಾಪಸ್ ಪಡೆಯಲು ಒತ್ತಡ: ಎಸ್ಐಟಿ ಅಧಿಕಾರಿ ವಿರುದ್ಧ ಗಂಭೀರ ಆರೋಪ


