ಭಾರತ್ ನೆಟ್ ಯೋಜನೆಯಡಿ 2.86 ಲಕ್ಷ ಕಿಮೀ ಆಪ್ಟಿಕಲ್ ಫೈಬರ್ ಹಾಗೂ 14,917 ಮೊಬೈಲ್ ಟವರ್ಗಳನ್ನು ಖಾಸಗೀಕರಣಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಸರ್ಕಾರಿ ಟೆಲಿಕಾಂ ಸಂಸ್ಥೆ ಬಿಎಸ್ಎನ್ಎಲ್ ನೌಕರರ ಸಂಘ ವಿರೋಧ ವ್ಯಕ್ತಪಡಿಸಿದೆ.
ಕಾರ್ಪೊರೇಟರ್ಗಳಿಗೆ ಮೊಬೈಲ್ ಟವರ್ಗಳ ಮಾರಾಟದ ಆರಂಭವು BSNL ಮತ್ತು MTNL ನ ಖಾಸಗೀಕರಣದ ಆರಂಭ ಎಂದು BSNL ನೌಕರರ ಸಂಘ ಆರೋಪಿಸಿದೆ.
ಈ ಸ್ವತ್ತುಗಳ ನಗದೀಕರಣವನ್ನು ಅನುಮತಿಸಿದರೆ, ಸರ್ಕಾರದ ಮುಂದಿನ ಗುರಿ 7 ಲಕ್ಷ ಮಾರ್ಗ ಕಿಲೋಮೀಟರ್ ಉದ್ದದ ಆಪ್ಟಿಕ್ ಫೈಬರ್ ಅನ್ನೂ ನಗದೀಕರಣ ಮಾಡುವುದೆ ಆಗಿದೆ ಎಂದು ನೌಕರರ ಸಂಘ ಆತಂಕ ವ್ಯಕ್ತಪಡಿಸಿದೆ.
ಇದನ್ನೂ ಓದಿ: ಮತ್ತೆ ದೇಶದ 6 ಲಕ್ಷ ಕೋಟಿ ಮೌಲ್ಯದ ಆಸ್ತಿ ಮಾರಲು ಹೊರಟ ಒಕ್ಕೂಟ ಸರ್ಕಾರ: ಈಗಾಗಲೇ ಮಾರಾಟಗೊಂಡ ಸಂಸ್ಥೆಗಳ ಪಟ್ಟಿ ಇಲ್ಲಿದೆ
“ರಾಷ್ಟ್ರೀಯ ನಗದೀಕರಣ ಪೈಪ್ಲೈನ್ (NMP) ಹೆಸರಿನಲ್ಲಿ, ಸರ್ಕಾರವು ರಾಷ್ಟ್ರೀಯ ಸ್ವತ್ತುಗಳನ್ನು ಕಾರ್ಪೊರೇಟ್ಗಳಿಗೆ ಹಸ್ತಾಂತರಿಸಲು ನಿರ್ಧರಿಸಿದೆ. ಈ ಆಸ್ತಿಗಳ ಮಾಲೀಕತ್ವವು ಸರ್ಕಾರದ ಬಳಿಯೇ ಮುಂದುವರಿಯುತ್ತದೆ ಎಂಬ ಸರ್ಕಾರದ ವಾದವು ಸಕ್ಕರೆ ಲೇಪಿಸಿರುವ ವಿಷದಂತೆ ಅಷ್ಟೇ” ಎಂದು ಬಿಎಸ್ಎನ್ಎಲ್ ನೌಕರರ ಸಂಘ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
“ಕಾರ್ಪೊರೇಟ್ಗಳಿಗೆ ಮೊಬೈಲ್ ಟವರ್ಗಳನ್ನು ಹಸ್ತಾಂತರಿಸುವುದರಿಂದ ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ಗೆ ದೊಡ್ಡ ಹೊಡೆತ ನೀಡಿದಂತಾಗುತ್ತದೆ, ಮೋದಿ ಸರ್ಕಾರವು ಕಳೆದ ಒಂದು ವರ್ಷ ಎಂಟು ತಿಂಗಳುಗಳಿಂದ ಏಕೆ BSNL ನಿಂದ 4G ಸೇವೆ ಲಾಂಚ್ ಮಾಡುವುದರಲ್ಲಿ ತಡೆಗಳನ್ನು ತರುತ್ತಿದೆ ಎಂಬುದು ಈಗ ಸ್ಪಷ್ಟವಾಗಿದೆ” ಎಂದು ನೌಕರರ ಸಂಘ ತಿಳಿಸಿದೆ.
ಎಲ್ಲಾ ಬಿಎಸ್ಎನ್ಎಲ್ ಉದ್ಯೋಗಿಗಳಿಗೆ ಶುಕ್ರವಾರ ದೇಶಾದ್ಯಂತ ಊಟದ ಸಮಯದಲ್ಲಿ ಪ್ರತಿಭಟನೆ ನಡೆಸುವಂತೆ ಕರೆ ನೀಡಲಾಗಿದೆ.
ಭಾರತ ನೆಟ್ ಫೈಬರ್ ಸ್ವತ್ತುಗಳು ಮತ್ತು ಸರ್ಕಾರಿ ಟೆಲಿಕಾಂ ಸಂಸ್ಥೆಗಳಾದ BSNL ಮತ್ತು MTNL ಒಡೆತನದಲ್ಲಿನ 14,917 ಮೊಬೈಲ್ ಟವರ್ಗಳನ್ನು ಭಾಗಶಃ ನಗದೀಕರಣ ಮಾಡುವ ಮೂಲಕ 35,100 ಕೋಟಿ ರೂಪಾಯಿಗಳನ್ನು ಗಳಿಸುವ ಯೋಜನೆಯನ್ನು ಒಕ್ಕೂಟ ಸರ್ಕಾರ ಘೋಷಿಸಿದೆ.
ಇದನ್ನೂ ಓದಿ: ಭಾರತ ಮಾರಾಟಕ್ಕಿದೆ: ಸಾರ್ವಜನಿಕ ಸಂಸ್ಥೆಗಳ ಖಾಸಗೀಕರದ ಕುರಿತು ಗಮನ ಸೆಳೆದ ಕಾರ್ಟೂನ್ಗಳು