Homeಮುಖಪುಟದೇವರಿಲ್ಲದೆ, ಪವಾಡಗಳಿಲ್ಲದೆ, ಯುದ್ಧಗಳಿಲ್ಲದೆ, ಕೇಡುಗಳಿಲ್ಲದೆ ಸೃಷ್ಟಿಯಾಗಿರುವ ಧರ್ಮಗ್ರಂಥ ಧಮ್ಮಪದ

ದೇವರಿಲ್ಲದೆ, ಪವಾಡಗಳಿಲ್ಲದೆ, ಯುದ್ಧಗಳಿಲ್ಲದೆ, ಕೇಡುಗಳಿಲ್ಲದೆ ಸೃಷ್ಟಿಯಾಗಿರುವ ಧರ್ಮಗ್ರಂಥ ಧಮ್ಮಪದ

- Advertisement -
- Advertisement -

’ಧಮ್ಮಪದ’ ಬೌದ್ಧರ ದರ್ಮಗ್ರಂಥ. ಇದನ್ನು ಬುದ್ಧನ ಆನುಭವಿಕ ಅಮೃತವಾಕ್ಕುಗಳ ಸಂಗ್ರಹ ಎಂದು ಕರೆಯಬಹುದು. ಜ್ಞಾನೋದಯದ ನಂತರ ಸುಮಾರು 45 ವರ್ಷಗಳ ಕಾಲ ಬುದ್ಧ ಕಾಲುನಡಿಗೆಯಲ್ಲಿ ಉತ್ತರ ಮತ್ತು ಈಶಾನ್ಯ ಭಾರತದಲ್ಲಿ ಪರ್ಯಟನ ಮಾಡುತ್ತಾ ಜನಗಳನ್ನು ಸಂಧಿಸುತ್ತಾ, ಸಾಮಾನ್ಯರ ಭಾಷೆಯಾದ ಪಾಳಿಯಲ್ಲಿ ಸಂಭಾಷಿಸುತ್ತಾ, ಅವರ ಕಷ್ಟಸುಖಗಳನ್ನು ಆಲಿಸುತ್ತಾ ಪರಿಹಾರಸೂತ್ರಗಳನ್ನು ನೀಡುತ್ತಾ ಅತ್ಯಂತ ಜನಪ್ರಿಯರಾಗಿ ರಾಜ, ಪ್ರಜೆ ಎಂಬ ಭೇದಭಾವವಿಲ್ಲದೆ ಧನಿಕ, ಶ್ರಮಿಕ ಎಲ್ಲರನ್ನೂ ಆಕರ್ಷಿಸುತ್ತಾ ದುಃಖರಹಿತವಾದ ಜೀವನಮಾರ್ಗ ಹೇಗಿರಬೇಕೆಂಬುದನ್ನು ಬೋಧಿಸುತ್ತಿದ್ದರು. ಅವೆಲ್ಲವೂ ನಲವತ್ತಕ್ಕೂ ಹೆಚ್ಚು ತ್ರಿಪಿಟಕಗಳ ಸಂಪುಟಗಳಲ್ಲಿ ಸಂಗ್ರಹಗೊಂಡಿವೆ. ಧರ್ಮ ಪರಿಪಾಲಕರಿಗೆ ಅವಶ್ಯಕತೆ ಬಿದ್ದಾಗಲೆಲ್ಲಾ ಅಷ್ಟೂ ಗ್ರಂಥಗಳನ್ನು ತೆಗೆದು ನೋಡಲು ಸಾಧ್ಯವಿಲ್ಲ. ಆ ಎಲ್ಲ ಸಂಗ್ರಹಗಳ ಸಾರರೂಪವಾದ ಮಾರ್ಗದರ್ಶಿ ಕೃತಿಯೊಂದರ ಅವಶ್ಯಕತೆ ಇದ್ದೇ ಇತ್ತು. ಆದಕಾರಣ ಎಲ್ಲ ಧರ್ಮಗಳು ತಮ್ಮ ತಮ್ಮ ಪ್ರವಾದಿಯ ಅಮೃತವಾಕ್ಕುಗಳನ್ನು ಇಡಿಯಾಗಿ ಸಂಗ್ರಹಿಸಿ ಧರ್ಮಗ್ರಂಥದ ರೂಪದಲ್ಲಿ ದೊರಕಿಸಿಕೊಟ್ಟಿರುವಂತೆ ಬೌದ್ಧರೂ ಧಮ್ಮಪದವನ್ನು ಸಂಗ್ರಹಿಸಿದ್ದಾರೆ. ಹಿಂದೂ ಧರ್ಮಕ್ಕೆ ಭಗವದ್ಗೀತೆ ಇರುವಂತೆ, ಕ್ರೈಸ್ತ ಮತ್ತು ಇಸ್ಲಾಮ್ ಧರ್ಮೀಯರಿಗೆ ಬೈಬಲ್ ಮತ್ತು ಕುರಾನ್‌ಗಳಿರುವಂತೆ ಬೌದ್ಧಧರ್ಮಕ್ಕೆ ಧಮ್ಮಪದ ಇದೆ.

ಪ್ರಾಯಶಃ ವೇದಗಳ ನಂತರ ಧಮ್ಮಪದ ಅತ್ಯಂತ ಹಳೆಯ ಧರ್ಮಗ್ರಂಥ ಎಂದು ಹೇಳಬಹುದು. ಕ್ರಿ.ಪೂ. 6ನೆಯ ಶತಮಾನದಲ್ಲಿ ಮನುಷ್ಯನ ಸಾಮಾಜಿಕ ಬದುಕಿಗೆ ಸನ್ಮಾರ್ಗವನ್ನು ಬೋಧಿಸುತ್ತಿದ್ದವನು ಬುದ್ಧ ಒಬ್ಬನೆ. ವೇದಗಳನ್ನು ಧರ್ಮಗ್ರಂಥಗಳ ಸಾಲಿಗೆ ಸೇರಿಸಿದರೂ ಅವು ಸನ್ಮಾರ್ಗವನ್ನು ಬೋಧಿಸುತ್ತಿವೆ ಎಂದು ಹೇಳಲಾಗುವುದಿಲ್ಲ. ಅವು ಯಜ್ಞಯಾಗಾದಿಗಳಿಂದ ಹಿಂಸೆ ಮತ್ತು ಕ್ರೌರ್ಯವನ್ನು ಪ್ರಚೋದಿಸುತ್ತವೆ. ವಿಷಯಾದಿವ್ಯಸನಗಳಿಂದ ತುಂಬಿ ತುಳುಕುತ್ತವೆ. ಮೇಲಾಗಿ ಋಗ್ವೇದವು ಮೇಲುಕೀಳಿನ ವರ್ಣಭೇದವನ್ನು ಹುಟ್ಟುಹಾಕಿ ಮಾನವೀಯತೆಯನ್ನೆ ಅಳಿಸಿಹಾಕಿದೆ. ಅವು ಹಲವು ಋಷಿಗಳು ರಚಿಸಿರುವ ಬಿಡಿ ಶ್ಲೋಕಗಳ ಅಸಂಗತತೆಯ ಕಟ್ಟು ಎಂದು ಡಾ. ಬಿ.ಆರ್ ಅಂಬೇಡ್ಕರ್ ಅಭಿಪ್ರಾಯಪಡುತ್ತಾರೆ. ಗೀತೆಯೂ ಇದಕ್ಕಿಂತ ಹೆಚ್ಚೇನೂ ಬೇರೆಯದಲ್ಲ. ವರ್ಣಾಶ್ರಮವನ್ನು ನಾನೆ ಸೃಷ್ಟಿಮಾಡಿದ್ದೇನೆ ಎಂದು ದೇವರಾದ ಕೃಷ್ಣ ಹೇಳುತ್ತಾನೆ. ಕ್ಷತ್ರಿಯರಾದವರಿಗೆ ಕೊಲ್ಲುವುದೇ ಧರ್ಮ ಎಂದಾದಮೇಲೆ ಪ್ರಶ್ನಿಸಲು ಉಳಿದಿರುವುದೇನು? ಅಲ್ಲಿ ಬರುವ ಸ್ಥಿತಪ್ರಜ್ಞತೆ (ಉಪೇಕ್ಖ) ಮತ್ತು ಮನಸ್ಸನ್ನು ಕುರಿತ ಶ್ಲೋಕಗಳನ್ನು ನೇರವಾಗಿ ಧಮ್ಮಪದದಿಂದ ಭಟ್ಟಿ ಇಳಿಸಲಾಗಿದೆ. ಬೈಬಲ್ ಬೌದ್ಧ ಬೋಧನೆಗಳಿಗೆ ಹತ್ತಿರವಾಗಿದ್ದರೂ ಪವಾಡಗಳಿಂದ, ಮೌಢ್ಯದಿಂದ ತುಂಬಿದೆ. ಅಲ್ಲಿ ದೇವರೇ ಅಂತಿಮವಾಗಿದ್ದಾನೆ. ಕುರಾನ್‌ನಲ್ಲಿ ಸನ್ಮಾರ್ಗಗಳ ಬೋಧನೆಯಿದ್ದರೂ ಯುದ್ಧಗಳಿವೆ, ರಕ್ತಪಾತವಿದೆ. ಅದು ಅತಿಯಾದ ದೈವನಿಷ್ಠೆಯಿಂದ ಮನುಷ್ಯನ ವೈಚಾರಿಕತೆಯನ್ನೆ ನುಂಗಿಹಾಕಿದೆ. ಇವೆರಡೂ ಪರಲೋಕಕೇಂದ್ರಿತವಾಗಿವೆ.

ದೇವರಿಲ್ಲದೆ, ಪವಾಡಗಳಿಲ್ಲದೆ, ಯುದ್ಧಗಳಿಲ್ಲದೆ, ಕೇಡುಗಳಿಲ್ಲದೆ ಸೃಷ್ಟಿಯಾಗಿರುವ
ಧರ್ಮಗ್ರಂಥವೇನಾದರೂ ಇದ್ದರೆ ಅದು ಧಮ್ಮಪದ. ಅದು ಇಹಕ್ಕೆ ಸಂಬಂಧಪಟ್ಟದ್ದು. ಮನುಷ್ಯ ಕೇಂದ್ರಿತವಾದದ್ದು. ಶೀಲವೇ (ನೈತಿಕತೆಯೇ) ಅದರ ಬುನಾದಿ. ಪ್ರಜ್ಞೆಯೇ (wisdom) ಅದರ ಮುಕುಟಮಣಿ. ಮನಸ್ಸು ಮತ್ತು ದೇಹಗಳನ್ನು ಬೆಸೆಯುವ ಕ್ರಿಯೆಯೇ ಸಮಾಧಿ. ಬುದ್ಧರ ಬೋಧನೆಗಳು ಶೀಲ, ಸಮಾಧಿ, ಪ್ರಜ್ಞೆಗಳ ಸುತ್ತಲೂ ಗಿರಕಿ ಹೊಡೆಯುತ್ತವೆ. ಈ ಮೂರೂ ಮನುಷ್ಯಕೇಂದ್ರಿತವಾದವು. ವ್ಯಕ್ತಿಯಾಗಲಿ, ಕುಟುಂಬವಾಗಲಿ, ಸಮಾಜವಾಗಲಿ ಅಥವಾ ಒಂದು ದೇಶವಾಗಲಿ ಅಲ್ಲಿ ಮನಸ್ಸು ವ್ಯಷ್ಟಿಯಾಗಿ ಅಥವಾ ಸಮಷ್ಟಿಯಾಗಿ ಕೆಲಸ ಮಾಡುತ್ತಿರುತ್ತದೆ. ಮನಸ್ಸನ್ನು ಆಳುವ (by default) ಮೂರು ಕೇಡುಗಳಿವೆ. ಅವು ಲೋಭ, ದ್ವೇಷ, ಮೋಹ ಅಥವಾ ಅವಿದ್ಯೆ. ಧಮ್ಮಪದದಲ್ಲಿ ಸಂಕಲಿಸಿರುವ ಗಾಥೆಗಳು ಇವುಗಳಿಗೆ ಸಂಬಂಧಿಸಿದುದಾಗಿವೆ.

ಆಶ್ಚರ್ಯವೆಂದರೆ ಅತ್ಯಂತ ಹಳೆಯ ಧರ್ಮಗ್ರಂಥವಾದ ಧಮ್ಮಪದ ಹೆಚ್ಚು ವೈಚಾರಿಕವೂ,
ವೈಜ್ಞಾನಿಕವೂ ಆಗಿದೆ. ಇತ್ತೀಚಿನವು ಬರೀ ಅಲೌಕಿಕವನ್ನೆ ತುಂಬಿಕೊಂಡಿವೆ. ಬೈಬಲ್ ಈ ಭೂಮಿ ಹೇಗೆ ಸೃಷ್ಟಿಯಾಯಿತು, ಸೂರ್ಯ, ಚಂದ್ರರು ಹೇಗೆ ಉದ್ಭವವಾದರು. ಮನುಷ್ಯನ ಸೃಷ್ಟಿ ಮತ್ತು ಅವನ ಪಕ್ಕೆಲುಬಿನಿಂದ ಹೆಣ್ಣು ಹುಟ್ಟಿತು ಇತ್ಯಾದಿಯನ್ನು ಹೇಳುತ್ತದೆ. ಧಮ್ಮಪದದ ಮೊದಲನೆಯ ಗಾಥೆ ಮನಸ್ಸೇ ಎಲ್ಲದಕ್ಕೂ ಮೂಲ ಮತ್ತು ಎಲ್ಲದಕ್ಕೂ ಕಾರಣ ಎಂದು ಶುರುವಾಗುತ್ತದೆ. ಇತರೆ ಧರ್ಮಗಳು ಆತ್ಮವನ್ನು ಒಪ್ಪಿಕೊಳ್ಳುವುದರಿಂದ ಸುಳ್ಳಿನ ಸರಮಾಲೆಯನ್ನೇ ಸೃಷ್ಟಿಸಿವೆ. ಆತ್ಮ ಎನ್ನುವುದು ಒಂದು ದೊಡ್ಡ ಸುಳ್ಳು. ಹಾಗಾಗಿ ಜನರು ಸುಳ್ಳನ್ನೆ ಹೇಳಿ ಬದುಕುತ್ತಿದ್ದಾರೆ. ಸುಳ್ಳನ್ನೆ ಪೋಷಿಸುತ್ತಿದ್ದಾರೆ. ಸ್ವರ್ಗ ನರಕಗಳೆಂಬುದು ಮಹಾ ವಂಚನೆ. ಆದ್ದರಿಂದ ಅವರು ಪರಲೋಕಕ್ಕಾಗಿ ಬದುಕುತ್ತಾರೆ. ಅನಾತ್ಮವಾದವನ್ನು ಒಪ್ಪುವ ಬೌದ್ಧರು ಇಹದಲ್ಲಿ ಬದುಕುತ್ತಾರೆ. ಅನುಭವಕ್ಕೆ ನಿಲುಕದ ಯಾವುದನ್ನೂ ಬುದ್ಧ ಒಪ್ಪಿಕೊಳ್ಳುವುದಿಲ್ಲ. ಸ್ವರ್ಗ ನರಕಗಳೆಂಬುದು ಮನಸ್ಸಿನ ಸೃಷ್ಟಿ. ಅವು ಇಲ್ಲಿಯೇ, ಈಗಲೇ ಅನುಭವಕ್ಕೆ ದೊರಕುವಂಥವು. ಅವು ನಮ್ಮ ಕರ್ಮಗಳನ್ನು ಅವಲಂಬಿಸಿವೆ ಎನ್ನುತ್ತಾರೆ ಬುದ್ಧ.

ಸಿದ್ಧಾರ್ಥ ಬುದ್ಧನಾಗುವ ಪ್ರಕ್ರಿಯೆಯನ್ನು ಓದುಗರ ಭಾವಭಿತ್ತಿಯು ಕಲಕುವಂತೆ ರೋಚಕವಾಗಿ ಚಿತ್ರಿಸಲಾಗಿದೆ. ಮಾನವ ಬದುಕಿನ ಪ್ರಕೃತಿದತ್ತ ಅವಸ್ಥಾಂತರಗಳನ್ನು (ಹುಟ್ಟು, ರೋಗ, ಮುಪ್ಪು, ಸಾವು) ನೋಡಿ ಅವು ದುಃಖಮಯವೆಂದು ತಿಳಿದು ಅವುಗಳಿಗೆ ಪರಿಹಾರವನ್ನು ಹುಡುಕಲು ಹೊರಟ ಎಂಬ ಕಥೆ ಜನಜನಿತವಾಗಿದೆ. ಬಾಬಾಸಾಹೇಬ್ ಅಂಬೇಡ್ಕರ್ ಅದಕ್ಕೆ ರಾಜಕೀಯ ಆಯಾಮವೊಂದನ್ನು ಒದಗಿಸಿದ್ದಾರೆ. ಶಾಕ್ಯರು ಮತ್ತು ಕೋಲಿಯರ ನಡುವೆ ನಡೆಯಿತೆನ್ನಲಾದ ರೋಹಿಣಿ ನದಿ ನೀರಿನ ವ್ಯಾಜ್ಯ ಅವನ ಗಡೀಪಾರಿಗೆ ಕಾರಣವಾಯಿತು. ಇದೂ ಸಹ ನಂಬಲರ್ಹವಾಗಿದೆ. ಇವೆಲ್ಲಕ್ಕಿಂತಲೂ ಹೆಚ್ಚಾಗಿ ಸಿದ್ಧಾರ್ಥ ತನ್ನ ಕಾಲದ ಸಾಮಾಜಿಕ, ರಾಜಕೀಯ ಮತ್ತು ಧಾರ್ಮಿಕ ಕ್ಷೇತ್ರಗಳು ಜಡ್ಡುಗಟ್ಟಿ ನಾರುತ್ತಿರುವುದನ್ನು ಕಂಡು ಜಿಗುಪ್ಸೆಗೊಂಡಿದ್ದರಲ್ಲಿ ಆಶ್ಚರ್ಯವಿಲ್ಲ. ಅಲ್ಲಿ ನಡೆಯುತ್ತಿದ್ದ ಅನ್ಯಾಯ, ಅಧರ್ಮ, ಅರಾಜಕತೆ, ಜಾತಿವ್ಯವಸ್ಥೆ, ಶೋಷಣೆ, ಹಿಂಸೆ, ಕ್ರೌರ್ಯ, ಮತಾಂಧತೆ ಇಂಥವುಗಳ ಬಗ್ಗೆ ವಿಚಲಿತನಾಗಿರಲಿಕ್ಕೂ ಸಾಕು. ಹುಟ್ಟಿನಿಂದ ಒಂದೇ ಆಗಿರುವ ಮನುಷ್ಯ ಸಂಘಟಿತ ಬದುಕಿನಲ್ಲಿ ಛಿದ್ರಗೊಳ್ಳುತ್ತಾನೆ ಯಾಕೆ ಎಂಬ ಜಟಿಲ ದ್ವಂದ್ವಕ್ಕೆ ಪರಿಹಾರ ಹುಡುಕಲು ಬುದ್ಧ ತೆರಳುತ್ತಾನೆ ಎಂದು ನನಗನಿಸುತ್ತದೆ.

ಬೌದ್ಧಧರ್ಮವನ್ನು ಬಾಬಾಸಾಹೇಬರು ಒಂದು ಮಹಾಕ್ರಾಂತಿಯೆಂದು ಬಣ್ಣಿಸಿದ್ದಾರೆ. ಯಾಕೆಂದರೆ ಬುದ್ಧಪೂರ್ವ ಸಮಾಜವು ಒಂದು ಅನೈತಿಕತೆಯ, ಅಸಮಾನತೆಯಿಂದ ಕೂಡಿದ ಭ್ರಷ್ಟ ಸಮಾಜವಾಗಿತ್ತು.
ಸಾಮಾಜಿಕವಾಗಿ ಮತ್ತು ಧಾರ್ಮಿಕವಾಗಿ ಅವನತಿಯ ಹಾದಿ ಹಿಡಿದಿತ್ತು. ಅಂದರೆ ಆರ್ಯ ಸಮುದಾಯವು ವಿಷಯಲಂಪಟತೆಯಲ್ಲಿ ಮುಳುಗಿತ್ತು. ಮದ್ಯಪಾನವು ರಾಜ ಮತ್ತು ಪ್ರಜೆಗಳಲ್ಲಿ ಚಟವಾಗಿ ಹಬ್ಬಿತ್ತು. ಸ್ತ್ರೀಯರೂ ವ್ಯಸನಿಗಳಾಗಿದ್ದರು. ದ್ಯೂತವು (ಜೂಜು) ಮತ್ತೊಂದು ಚಟವಾಗಿ ಸಮಾಜವನ್ನು ಹಾಳುಗೆಡವಿತ್ತು. ಆರ್ಯ ಸಮಾಜದ ಲೈಂಗಿಕ ಅನೈತಿಕತೆಯು ಆಘಾತ ಮೂಡಿಸುವಂತಿದೆ. ವೈವಾಹಿಕ ಸಂಬಂಧಗಳಲ್ಲಿ ಪಾವಿತ್ರ್ಯವೆಂಬುದೇನು ಇರಲಿಲ್ಲ. ಬಾಬಾಸಾಹೇಬರು ಇದಕ್ಕೆ ಅನೇಕ ಉದಾಹರಣೆಗಳನ್ನು ಕೊಡುತ್ತಾರೆ. ಬ್ರಹ್ಮನಿಗೆ ಮೂವರು ಗಂಡು ಮಕ್ಕಳು, ಒಬ್ಬ ಮಗಳು ಇದ್ದರು. ಮೊದಲನೆಯ ಮಗ ದಕ್ಷ ಸೋದರಿಯನ್ನೆ
ಮದುವೆಯಾದ. ಮುಂದೆ ಹುಟ್ಟುವ ಸೋದರ ಸೋದರಿಯರ ಮಕ್ಕಳು ಅವರೊಳಗೆ ಮದುವೆಯಾಗುತ್ತಾರೆ! ಆರ್ಯರಿಗೆ ಎಲ್ಲೆಂದರಲ್ಲಿ ಎಲ್ಲರೆದುರು ಸಮಾಗಮಿಸುವುದರಲ್ಲಿ ಸಂಕೋಚವಿರಲಿಲ್ಲ.

ವಾಮದೇವ್ಯ ಎಂಬ ಧಾರ್ಮಿಕ ಕ್ರಿಯಾವಿಧಿಯ ಪ್ರಕಾರ ಯಜ್ಞಭೂಮಿಯಲ್ಲಿ ಯಾವುದೇ ಸ್ತ್ರೀಯು ಸಂಭೋಗವನ್ನು ಬಯಸಿದರೆ ಋಷಿಯು ಅಲ್ಲಿ ಎಲ್ಲರೆದುರು ಸಮಾಗಮಿಸುತ್ತಿದ್ದನು. ಅಂಥ ಪದ್ಧತಿಯು ಸರ್ವೇಸಾಧಾರಣವಾಗಿತ್ತು ಎಂಬುದನ್ನು ಅಯೋನಿಜ ಪದವು ಸೂಚಿಸುತ್ತದೆ. ಅಯೋನಿ ಎಂದರೆ ಅಕ್ಷತಯೋನಿ ಅಲ್ಲ. ಯೋನಿ ಎಂದರೆ ಮನೆ ಎಂಬ ಅರ್ಥವೂ ಇದೆ. ಮನೆಯ ಹೊರಗೆ, ಬಯಲಲ್ಲಿ ಹುಟ್ಟಿದವರಿಗೆ ಅಯೋನಿಜರು ಎನ್ನಲಾಗುತ್ತದೆ. ಸೀತೆ ಮತ್ತು ದ್ರೌಪತಿ ಇಬ್ಬರೂ ಅಯೋನಿಜೆಯರು. ಯಜ್ಞಗಳಲ್ಲಿ ಪ್ರಾಣಿಬಲಿಯನ್ನು ನಿಲ್ಲಿಸಿದ ಕೀರ್ತಿ ಬುದ್ಧನಿಗೆ ಸಲ್ಲುತ್ತದೆ. ಬುದ್ಧ ತನ್ನ ನೂರಾರು ಶಿಷ್ಯರೊಡನೆ ಯಜ್ಞಶಾಲೆಗಳ ಮುಂದೆ ಹೋಗಿ ಪ್ರಾಣಿಬಲಿ ನಿಷೇಧಕ್ಕಾಗಿ ಧರಣಿ ಕುಳಿತುಕೊಳ್ಳುತ್ತಿದ್ದನು ಎಂದು ಡಿ. ಡಿ. ಕೋಸಾಂಬಿ ಬರೆಯುತ್ತಾರೆ. ಈ ಹಿನ್ನೆಲೆಯಿಂದ ನೋಡಿದರೆ ಬುದ್ಧನಿಗೆ ಕೌಟುಂಬಿಕ ಬದ್ಧತೆಯಿರುವ, ನೈತಿಕ ಸ್ವಾಸ್ಥ್ಯವಿರುವ ಒಂದು ಸಮಾಜವನ್ನು ನಿರ್ಮಾಣಮಾಡುವ ಗುರಿಯಿತ್ತು ಎಂಬುದು ಸ್ಪಷ್ಟವ್ಟಾಗುತ್ತದೆ.

ಬುದ್ಧನನ್ನು ವಿಷ್ಣುವಿನ ಒಂಭತ್ತನೆಯ ಅವತಾರವೆಂದು ದಶಾವತಾರದ ಒಳಗೆ ಸೇರ್ಪಡೆ ಮಾಡಿ ಧಮ್ಮಪದವು ವೇದಾಂತಮೂಲವೆಂದು ಅಪಪ್ರಚಾರವೂ ನಡೆಯಿತು. ಬುದ್ಧ ತಮ್ಮ ಪ್ರವಚನಗಳಲ್ಲಿ ವೇದಗಳನ್ನು ಉದ್ಧರಿಸುತ್ತಾರೆಯೇ ಹೊರತು ಉಪನಿಷತ್ತು ಇತ್ಯಾದಿಗಳ ಪ್ರಸ್ತಾಪ ಇರುವುದಿಲ್ಲ. ಇದು ಬುದ್ಧಪೂರ್ವ ವೈದಿಕ ಸಾಹಿತ್ಯ ಎಷ್ಟು ಬಡವಾಗಿತ್ತು ಎಂಬುದನ್ನು ಹೇಳುತ್ತದೆ. ಮೇಲಾಗಿ ಬೌದ್ಧ ಸಾಹಿತ್ಯವು ಎಷ್ಟು ವ್ಯವಸ್ಥಿತವಾಗಿ ರೂಪುಗೊಂಡಿದೆಯೆಂದರೆ ಪ್ರತಿಯೊಂದು ಮೂಲ ಬೌದ್ಧ ಗ್ರಂಥಕ್ಕೂ ಅಟ್ಠಕಥಾ ಎಂಬ ಟೀಕಾ ಗ್ರಂಥವೂ
ಇದೆ.

ಅಲ್ಲಿ ಬುದ್ಧರ ಪ್ರತಿಯೊಂದು ವಚನ ಎಲ್ಲಿ, ಯಾವ ಸಂದರ್ಭದಲ್ಲಿ ಹೇಳಲ್ಪಟ್ಟಿತು ಎಂಬುದನ್ನು ವಿವರಿಸಲಾಗಿದೆ. ಅವುಗಳ ಕಾಲಮಾನವೂ ನಿರ್ಧರಿತವಾಗಿದೆ. ಮೂಲ ವಾಲ್ಮೀಕಿ ರಾಮಾಯಣದಲ್ಲಿಯೇ ಬುದ್ಧನ ಅವಹೇಳನ, ನಿಂದನೆ ಇರುವುದನ್ನು ನೋಡಿದರೆ ಅದರ ಕಾಲವನ್ನು, ಪ್ರಕ್ಷಿಪ್ತಗಳನ್ನು ಸುಲಭವಾಗಿ ಊಹಿಸಬಹುದಾಗಿರುತ್ತದೆ. ಮಹಾಭಾರತವೂ ಸೇರಿದಂತೆ ಇತರೆ ಬ್ರಾಹ್ಮಣ ಸಾಹಿತ್ಯವು ಕಾಲಕ್ರಮೇಣ ವಿಕಸನಗೊಂಡವು ಎಂಬುದು ಸಹ ಈಗಾಗಲೇ ಸಾಬೀತಾಗಿದೆ. ಅದನ್ನು ಪ್ರತಿಕ್ರಾಂತಿಯ ಭಾಗ ಎಂಬುದಾಗಿ ಅಂಬೇಡ್ಕರ್ ವ್ಯಾಖ್ಯಾನಿಸುತ್ತಾರೆ. ಶಂಕರಾಚಾರ್ಯರು ವೈದಿಕ ಧರ್ಮದ ಪುನರುತ್ಥಾನದ ಭಾಗವಾಗಿ ಬೌದ್ಧಧರ್ಮದ ಮೇಲೆ ಮೇಲುಗೈ ಸಾಧಿಸಲು ತಮ್ಮ ಕೃತಿಗಳಲ್ಲಿ ಬುದ್ಧನ ತತ್ವಗಳನ್ನೇ ಎಗ್ಗಿಲ್ಲದೆ ಬಳಸಿಕೊಳ್ಳುತ್ತಾರೆ ಮತ್ತು ಪ್ರಚ್ಛನ್ನಬೌದ್ಧ ಎನಿಸಿಕೊಳ್ಳುತ್ತಾರೆ. ಆದರೆ ಅನಾತ್ಮವಾದವನ್ನು ಹೇಳುವ ಬೌದ್ಧತತ್ವಕ್ಕೂ ಸರ್ವಾತ್ಮವಾದವನ್ನು ಹೇಳುವ ಅದ್ವೈತಕ್ಕೂ ಎತ್ತಣಿಂದೆತ್ತ ಸಂಬಂಧ. ತಾರತಮ್ಯದ ಬೀಜವನ್ನು ಬಿತ್ತಿ ಸಮಾನತೆಯ ಫಸಲು ಬೆಳೆಯಲು ಸಾಧ್ಯವೆ? ಬಸವಣ್ಣನ ಈ ವಚನ ಶಂಕರಾಚಾರ್ಯರ ಸಾಹಿತ್ಯಕ್ಕೆ ಹೇಳಿ ಬರೆಸಿದಂತಿದೆ.

ಬೇವಿನ ಬೀಜವ ಬಿತ್ತಿ, ಬೆಲ್ಲದ ಕಟ್ಟೆಯ ಕಟ್ಟಿ,
ಆಕಳ ಹಾಲನೆರೆದು, ಜೇನುತುಪ್ಪವ ಹೊಯ್ದಡೆ,
ಸಿಹಿಯಾಗಬಲ್ಲುದೆ, ಕಹಿಯಹುದಲ್ಲದೆ?
ಶಿವಭಕ್ತರಲ್ಲದವರ ಕೂಡ ನುಡಿಯಲಾಗದು,
ಕೂಡಲಸಂಗಮದೇವಾ.
-2-

ಬುದ್ಧ ದೈವಾಂಶಸಂಭೂತನೂ ಅಲ್ಲ, ದೇವರ ಅವತಾರವೂ ಅಲ್ಲ ಅಥವಾ ಪ್ರವಾದಿಯೂ ಅಲ್ಲ. ಆತ ಒಬ್ಬ ಸಾಮಾನ್ಯ ಮನುಷ್ಯ. ತನ್ನ ಬುದ್ಧಿಮತ್ತೆಯಿಂದ, ಪರಿಶ್ರಮದಿಂದ ದಿವ್ಯಜ್ಞಾನವನ್ನು ಪಡೆದವನು. ಅದು ತನಗೆ ಮಾತ್ರ ಸೀಮಿತವಲ್ಲ, ಯಾರು ಬೇಕಾದರೂ ಈ ಸ್ಥಿತಿಯನ್ನು ತಲುಪಬಹುದು ಎಂದು ಹೇಳಿದವನು. ಆದ್ದರಿಂದ ಬುದ್ಧನನ್ನು ಪೂರ್ಣ ವಿವೇಕದ, ಪೂರ್ಣ ಅರಿವುಳ್ಳ, ಪರಿಪೂರ್ಣ ಶುದ್ಧ ಮನಸ್ಸಿನ ವ್ಯಕ್ತಿ ಎಂದು ಕರೆಯಬಹುದು. ಆತನನ್ನು ಗುರು ಅಥವಾ ಲೋಕಗುರು ಎನ್ನುವುದೇ ಸೂಕ್ತ. ಆತನ ಉಪದೇಶಗಳೇ ’ಧಮ್ಮ’ ಎನಿಸಿಕೊಂಡಿವೆ. ಅಲ್ಲಿ ಅಂಧಶ್ರದ್ಧೆಗಳಿಲ್ಲ. ವಿಧಿನಿಷೇಧಗಳಿಲ್ಲ, ವ್ರತಾಚರಣೆ ಸಮಾರಾಧನೆಗಳ ಹಂಗಿಲ್ಲ. ಎಲ್ಲವೂ ಕಣ್ಣಿಗೆ ಕಾಣುವ ಸತ್ಯಗಳು, ವಾಸ್ತವಕ್ಕೆ ಹತ್ತಿರವಾದ ಸಂಗತಿಗಳು. ಎಲ್ಲರೂ ಎಲ್ಲಿಯಾದರೂ ಪರೀಕ್ಷಿಸಬಲ್ಲಂತಹವು.

ಬುದ್ಧರ ಬೋಧನೆಗಳನ್ನು ಮೂರು ಗುಂಪುಗಳಾಗಿ ವಿಂಗಡಿಸಲಾಗಿದೆ. ವಿನಯ ಪಿಟಕ, ಸುತ್ತ ಪಿಟಕ ಮತ್ತು ಅಭಿಧಮ್ಮ ಪಿಟಕ. ತ್ರಿಪಿಟಕ ಎಂದರೆ ಈ ಮೂರೂ ಸಂಗ್ರಹಗಳಿರುವ ಒಂದು ಬುಟ್ಟಿ. ಸುತ್ತಪಿಟಕದಲ್ಲಿ ಬುದ್ಧರ ಸಾರ್ವಜನಿಕ ಉಪದೇಶಗಳು ಸಂಗ್ರಹಿಸಲ್ಪಟ್ಟಿವೆ. ಅವು ದೀಘ ನಿಕಾಯ, ಮಜ್ಜಿಮ ನಿಕಾಯ, ಸಂಯುಕ್ತ ನಿಕಾಯ, ಅಂಗುತ್ತರ ನಿಕಾಯ ಮತ್ತು ಖುದ್ದಕ ನಿಕಾಯ ಎಂಬ ಐದು ನಿಕಾಯಗಳಲ್ಲಿ ಅಡಕಗೊಂಡಿವೆ. ’ಧಮ್ಮಪದ’ ಖುದ್ದಕ ನಿಕಾಯದ ಹದಿನೈದು ಕೃತಿಗಳಲ್ಲಿ ಎರಡನೆಯದು. ಅದರಲ್ಲಿ 423 ಗಾಥೆಗಳಿವೆ. ಅವುಗಳು 26 ವರ್ಗಗಳಲ್ಲಿ ಹಂಚಿಕೊಂಡಿವೆ.

ಬುದ್ಧರ ಪರ್ಯಟನೆಯಲ್ಲಿ ಅವರನ್ನು ಸಂಧಿಸಬಯಸದ ವ್ಯಕ್ತಿಗಳೇ ಇರಲಿಲ್ಲವೆನ್ನಬೇಕು. ರಾಜಾಧಿರಾಜರಿಂದ ಹಿಡಿದು ಸೇನಾಧಿಪತಿಗಳು, ವರ್ತಕರು, ಬಹುಶ್ರುತ ಪಂಡಿತರು, ಕೃಷಿಕರು, ಅಗಸರು, ನಾಪಿತರು; ಅಂತಃಪುರದ ಮಹಾರಾಣಿಯರಿಂದ ಹಿಡಿದು ಗೃಹಿಣಿಯರು, ಧರ್ಮ ಜಿಜ್ಞಾಸುಗಳು, ನರ್ತಕಿಯರು ಮತ್ತು ಗಣಿಕೆಯರು ಎಲ್ಲರೂ ಭಗವಾನರಲ್ಲಿ ತಮ್ಮ ಸಮಸ್ಯೆಗಳನ್ನು ನಿವೇದಿಸಿಕೊಂಡು ಸಾಂತ್ವನ ಪಡೆಯಲು ಬರುತ್ತಿದ್ದರು. ಮಾನವ ಸ್ವಭಾವವನ್ನು, ಸಂಬಂಧಗಳನ್ನು ಚೆನ್ನಾಗಿ ಅರಿತಿದ್ದ ಬುದ್ಧ ಅವರಿಗೆ ಸೂಕ್ತ ರೀತಿಯಲ್ಲಿ ಅರ್ಥವಾಗುವ ಭಾಷೆಯಲ್ಲಿ ಪ್ರತಿಮೆಗಳ ಮುಖಾಂತರ, ಅಲ್ಲಲ್ಲಿ ಉಪಮೆಗಳನ್ನು ಬಳಸಿ, ಕಥೆಗಳನ್ನು ಕಟ್ಟಿ ಹೇಳುತ್ತಿದ್ದರು. ಭರತಖಂಡದ ವೈವಿಧ್ಯತೆಯನ್ನು ಬಲ್ಲವರಾಗಿದ್ದ ಅವರು ಬಂದವರ ಇತಿಮಿತಿಗಳನ್ನು ಅರಿತು ಮೃದು ವಚನದಲ್ಲಿ ಹೃದಯಕ್ಕೆ ನಾಟುವಂತೆ ಹೇಳುವುದರಲ್ಲಿ ನಿಸ್ಸೀಮರಾಗಿದ್ದರು. ಅವುಗಳು ಗಂಭೀರ ಪ್ರವಚನಗಳಾಗಿರಲಿ ಅಥವಾ ಸರಳ ಮಾತುಗಳಾಗಿರಲಿ ಉತ್ತಮ ಬದುಕನ್ನು ಕಲಿಸುವ ಸತ್ಯವಚನಗಳಾಗಿದ್ದವು. ಅಂಥವುಗಳಿಂದ ಹೆಕ್ಕಿ ತೆಗೆದ ಚಿದ್ಬೆಳಗಿನ ಆಣಿಮುತ್ತುಗಳೇ ಧಮ್ಮಪದದಲ್ಲಿ ಸಂಗ್ರಹವಾಗಿರುವ ಬಿಡಿ ಸೂತ್ರಗಳು.

ಸುಮಾರು 40 ಗ್ರಂಥಗಳಲ್ಲಿ ವ್ಯಾಪಿಸಿಕೊಂಡಿರುವ ಬೌದ್ಧಧರ್ಮದ ಸಾರರೂಪವನ್ನು 423 ಗಾಥೆಗಳಿರುವ
ಒಂದು ಪುಟ್ಟ ಗ್ರಂಥದಲ್ಲಿ ಸಂಗ್ರಹಿಸಲಾಗಿದೆ ಎಂದು ಹೇಳಿದೆ. ಧಮ್ಮವನ್ನು ಇನ್ನೂ ಸಂಕ್ಷಿಪ್ತಗೊಳಿಸಿ ಹೇಳುವ ಬೀಜರೂಪೀ ಗಾಥೆ ಈ ಕೆಳಗಿನದು.

ಸಬ್ಬ ಪಾಪಸ್ಸ ಅಕರಣಂ,
ಕುಸಲಸ್ಸ ಉಪಸಂಪದಾ
ಸಚಿತ್ತ ಪರಿಯೋದಪನಂ,
ಏತಂ ಬುದ್ಧಾನು ಸಾಸನಂ

ಯಾವ ಪಾಪವನ್ನೂ ಮಾಡದಿರುವುದು,
ಒಳ್ಳೆಯದನ್ನೇ ಮಾಡುವುದು
ಮನಸ್ಸನ್ನು ಶುದ್ಧೀಕರಿಸುವುದು,
ಇದೇ ಬುದ್ಧರ ಅನುಶಾಸನ
-ಧ.ಪ. 183

ಡಾ. ಮೂಡ್ನಾಕೂಡು ಚಿನ್ನಸ್ವಾಮಿ

ಡಾ. ಮೂಡ್ನಾಕೂಡು ಚಿನ್ನಸ್ವಾಮಿ
ಕನ್ನಡದ ಖ್ಯಾತ ಕವಿ. ದಲಿತ, ಬಂಡಾಯ ಮತ್ತು ಬೌದ್ಧ ಚಿಂತನೆಗಳನ್ನು ಸಾಹಿತ್ಯದ ಮೂಲಕ ಪ್ರಚುರಪಡಿಸಿದ ಪ್ರಮುಖರಲ್ಲಿ ಒಬ್ಬರು. ‘ಕೊಂಡಿಗಳು ಮತ್ತು ಮುಳ್ಳುಬೇಲಿಗಳು’, ‘ಚಪ್ಪಲಿ ಮತ್ತು ನಾನು’ ಮೂಡ್ನಾಕೂಡು ಅವರ ಕೆಲವು ಕವನಸಂಕಲನಗಳು. ‘ನೆನಪಿನ ಹಕ್ಕಿಯ ಹಾರಲು ಬಿಟ್ಟು’ ಅವರ ಆತ್ಮಕತೆ.


ಇದನ್ನೂ ಓದಿ: ರಸ್ತೆಯಲ್ಲಿ ಸಾವು-ಬದುಕಿನ ನಡುವೆ ನರಳುತ್ತಿದ್ದ ಆರೋಗ್ಯಾಧಿಕಾರಿಗೆ ಸಹಾಯ ಮಾಡದ ಆರೋಪ- ನಿದ್ರಿಸುತ್ತಿದ್ದೆ ಗೊತ್ತಾಗಲಿಲ್ಲ ಎಂದ ಬಿಜೆಪಿ ಶಾಸಕ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಲೇಖಕರು ಬುದ್ದ ಧರ್ಮವನ್ನು ವೈಭವೀಕರಿಸುವ ಸಲುವಾಗಿ ಇಸ್ಲಾಮ್ ಮತ್ತು ಕ್ರೈಸ್ತ ಧರ್ಮವನ್ನು ನೀಚವಾಗಿ ಚಿತ್ರಿಸಲು ಪ್ರಯತ್ನಿಸಿದ್ದಾರೆ..
    ಲೇಖಕರು ಕುರ್ ಆನ್ ಓದದೇ ತನ್ನ ಅಭಿಪ್ರಾಯವನ್ನು ಬರೆದಿರುವಂತಿದೆ…
    “ಒಬ್ಬ ಮಾನವನನ್ನು ವಿನಾ ಕಾರಣ ಕೊಂದರೆ ಇಡೀ ಮಾನವಕುಲವನ್ನು ಕೊಂದಂತೆ, ಒಬ್ಬ ಮಾನವನಿಗೆ ಜೀವದಾನ ಮಾಡಿದರೆ ಇಡೀ ಮಾನವಕುಲಕ್ಕೆ ಜೀವದಾನ ಮಾಡಿದಂತೆ” ಎಂದು ಕುರ್ ಆನ್ ನಲ್ಲಿ ವಿವರಿಸಿದ್ದನ್ನು ಅವರು ಓದಿಲ್ಲ ಅಥವಾ ಇತಿಹಾಸದ ಸರಿಯಾದ ಅಧ್ಯಯನ ಅವರು ಮಾಡಿಲ್ಲ. ಯಾವುದೋ ಓರಿಯಂಟಲಿಸ್ಟರು ಬರೆದುದನ್ನೇ ನಂಬಿದವರಾಗಿರಬಹುದು..

LEAVE A REPLY

Please enter your comment!
Please enter your name here

- Advertisment -

Must Read

ಅಮೆರಿಕದ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಬಗ್ಗೆ ಸ್ಯಾಮ್ ಪಿತ್ರೋಡಾ ಕೊಟ್ಟಿದ್ದ ವಿವರಣೆಯನ್ನು ‘ರಾಜಕೀಯ ಅಸ್ತ್ರ’...

0
ಲೋಕಸಭೆ ಚುನಾವಣೆ ಹಿನ್ನೆಲೆ ಪ್ರಧಾನಿ ಮೋದಿ ಹಾದಿಯಾಗಿ ಬಿಜೆಪಿ ನಾಯಕರು ವಿವಾದಾತ್ಮಕ ಹೇಳಿಕೆ ಮೂಲಕ ಕಾಂಗ್ರೆಸ್‌ ಪಕ್ಷವನ್ನು ಮತ್ತು ಕಾಂಗ್ರೆಸ್‌ನ ಪ್ರಣಾಳಿಕೆ ವಿರುದ್ಧ ವಾಗ್ಧಾಳಿ ನಡೆಸುತ್ತಾ ಬಂದಿದ್ದಾರೆ. ಈ ಮಧ್ಯೆ ಭಾರತೀಯ ಸಾಗರೋತ್ತರ...