ಕೇರಳ ವಿಧಾನಸಭೆಯು ಸೋಮವಾರ ಲಕ್ಷದ್ವೀಪ ದ ಜನರನ್ನು ಬೆಂಬಲಿಸಿ ಉಭಯಪಕ್ಷೀಯ ನಿರ್ಣಯವನ್ನು ಅಂಗೀಕರಿಸಿತು. ಸ್ಥಳೀಯ ಭಾವನೆಗಳನ್ನು ಘಾಸಿಗೊಳಿಸಿ ಕೆಲವು ವಿವಾದಾತ್ಮಕ ಪ್ರಸ್ತಾಪಗಳನ್ನು ಮುಂದಿಡುತ್ತಿರುವ ಆಡಳಿತಾಧಿಕಾರಿ ಪ್ರಫುಲ್ ಕೆ ಪಟೇಲ್ ಅವರನ್ನು ವಾಪಸ್ ಕರೆಸಿಕೊಳ್ಳುವಂತೆ ಒತ್ತಾಯಿಸಿದೆ.
ಕೆಲವು ತಿದ್ದುಪಡಿಗಳನ್ನು ಮಂಡಿಸಿದರೂ, ಆಡಳಿತ ಪಕ್ಷದ ಶಾಸಕರೊಂದಿಗೆ ವಿರೋಧ ಪಕ್ಷದ ಶಾಸಕರು ನಿರ್ಣಯದ ಪರವಾಗಿ ಮತ ಚಲಾಯಿಸಿದ್ದಾರೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಿರ್ಣಯಗಳನ್ನು ಮಂಡಿಸಿದ್ದು, ಲಕ್ಷದ್ವೀಪದ ಆಡಳಿತವು ತನ್ನ ಕೆಲವು ನಿರ್ಧಾರಗಳ ಮೂಲಕ ಸಂಘಪರಿವಾರದ ಕಾರ್ಯಸೂಚಿ ಮತ್ತು ಸಾಂಸ್ಥಿಕ ಹಿತಾಸಕ್ತಿಗಳನ್ನು ಹೇರುವ ಪ್ರಯತ್ನಗಳನ್ನು ನಿರ್ಣಯವು ಖಂಡಿಸಿದೆ.
ಇದನ್ನೂ ಓದಿ: #SaveLakshadweep-ಬಿಜೆಪಿಯ ದ್ವೇಷ ರಾಜಕೀಯಕ್ಕೆ ಹೊಸ ಬಲಿ; ಲಕ್ಷದ್ವೀಪದಲ್ಲಿ ಏನಾಗುತ್ತಿದೆ?
“ಇದು ತೆಂಗಿನ ಮರಗಳ ಮೇಲೆ ಕೇಸರಿ ಬಣ್ಣವನ್ನು ಹಚ್ಚುವುದರೊಂದಿಗೆ ಪ್ರಾರಂಭವಾಯಿತು. ಅದು ಈಗ ದ್ವೀಪವಾಸಿಗಳ ಆವಾಸಸ್ಥಾನ, ಜೀವನ ಮತ್ತು ನೈಸರ್ಗಿಕ ಸಂಬಂಧಗಳನ್ನು ನಾಶಪಡಿಸುವ ಮಟ್ಟಿಗೆ ಬೆಳೆದಿದೆ. ಪೌರತ್ವ ತಿದ್ದುಪಡಿ ಮಸೂದೆಯ ವಿರುದ್ಧ ದ್ವೀಪದಲ್ಲಿ ಹಾಕಿದ ಬ್ಯಾನರ್ಗಳನ್ನು ತೆಗೆದುಹಾಕಲಾಯಿತು ಮತ್ತು ಅದನ್ನು ಬರೆದವರನ್ನು ಲಕ್ಷದ್ವೀಪದಲ್ಲಿ ಬಂಧಿಸಲಾಗಿದೆ” ಎಂದು ಮುಖ್ಯಮಂತ್ರಿ ತಮ್ಮ ಭಾಷಣದಲ್ಲಿ ತಿಳಿಸಿದ್ದಾರೆ.
ಕಡಿಮೆ ಪ್ರಮಾಣದಲ್ಲಿ ಅಪರಾಧ ದಾಖಲಾಗುವ ಸ್ಥಳದಲ್ಲಿ ಗೂಂಡಾ ಕಾಯ್ದೆಯನ್ನು ತರುವ ನಿರ್ಧಾರವನ್ನು ಅವರು ಟೀಕಿಸಿದರು. “ದ್ವೀಪದ ಮೀನುಗಾರರು ತಮ್ಮ ದೋಣಿ ಮತ್ತು ಬಲೆಗಳನ್ನು ಸಂಗ್ರಹಿಸಲು ಬಳಸಿದ ಶೆಡ್ಗಳನ್ನು ನಾಶಪಡಿಸಲಾಯಿತು. ಗೋಹತ್ಯೆಯನ್ನು ನಿಷೇಧಿಸುವ ‘ಸಂಘ ಪರಿವಾರದ ಕಾರ್ಯಸೂಚಿಯನ್ನು’ ಜಾರಿಗೆ ತಂದರು. ಅಸ್ತಿತ್ವದಲ್ಲಿರುವ ಎಲ್ಲಾ ಪ್ರಜಾಪ್ರಭುತ್ವವನ್ನು ವ್ಯವಸ್ಥೆಯನ್ನಯನ್ನು ರದ್ದುಪಡಿಸಿದರು” ಎಂದು ಹೇಳಿದ್ದಾರೆ.
“ಆಡಳಿತವು ಚುನಾವಣೆಗೆ ಸಂಬಂಧಿಸಿದ ವಿಲಕ್ಷಣ ಆದೇಶವನ್ನೂ ಹೊರತಂದಿದ್ದಾರೆ. ಎರಡು ಮಕ್ಕಳಿಗಿಂತ ಹೆಚ್ಚು ಮಕ್ಕಳಿರುವವರು ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂಬ ನಿಯಮ ನಮ್ಮ ದೇಶದಲ್ಲಿ ಎಲ್ಲೂ ಇಲ್ಲ. ದ್ವೀಪದಲ್ಲಿ ಅದನ್ನೂ ಕಾರ್ಯಗತಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಇದರ ಪರಿಣಾಮವಾಗಿ, ಬಹುಪಾಲು ದ್ವೀಪವಾಸಿಗಳು ತಮ್ಮ ಪ್ರಜಾಪ್ರಭುತ್ವ ಹಕ್ಕುಗಳನ್ನು ಕಳೆದುಕೊಳ್ಳುತ್ತಾರೆ” ಎಂದು ಸಿಎಂ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಲಕ್ಷದ್ವೀಪ: ಸಂಪೂರ್ಣ ಗೋಹತ್ಯೆ ತಡೆಗೆ ಕೇಂದ್ರ ಸರ್ಕಾರದ ಪ್ರಸ್ತಾಪ
ಕೇರಳ ಮತ್ತು ಲಕ್ಷದ್ವೀಪ ದ್ವೀಪಗಳ ನಡುವಿನ ಐತಿಹಾಸಿಕ ಸುದೀರ್ಘ ಸಂಬಂಧವನ್ನು ಮುರಿಯಲು ಆಡಳಿತಾಧಿಕಾರಿ ಮಾಡುತ್ತಿರುವ ಪ್ರಯತ್ನಗಳನ್ನು ಅವರು ಬಲವಾಗಿ ಖಂಡಿಸಿದರು.
“ಇಂದು ಲಕ್ಷದ್ವೀಪದಲ್ಲಿ ನಡೆಯುತ್ತಿರುವ ಚಟುವಟಿಕೆಗಳನ್ನು ಸಂಘ ಪರಿವಾರದ ಕಾರ್ಯಸೂಚಿಯ ಪ್ರಾಯೋಗಿಕ ಪ್ರಯೋಗಾಲಯನ್ನಾಗಿ ಮಾಡುತ್ತಿರುವುದನ್ನು ಗಮನಿಸಬೇಕು. ಅವರು ಜನರ ಸಂಸ್ಕೃತಿ, ಭಾಷೆ, ಜೀವನ ವಿಧಾನ ಮತ್ತು ಆಹಾರವನ್ನು ತಮಗೆ ತಕ್ಕಂತೆ ಬದಲಾಯಿಸಲು ಪ್ರಯತ್ನಿಸುತ್ತಿದ್ದಾರೆ” ಎಂದು ಪಿಣರಾಯಿ ಹೇಳಿದ್ದಾರೆ.
ಪ್ರತಿಪಕ್ಷದ ನಾಯಕ ವಿ.ಡಿ.ಸತೀಸನ್ ಮಾತನಾಡಿ, “ನಾವು ಯಾವ ಆಹಾರವನ್ನು ಸೇವಿಸಬಹುದು ಎಂಬುದನ್ನು ಅವರು ನಿರ್ಧರಿಸುವುದು ಸೊಕ್ಕಿನ ನಿಲುವಾಗಿದೆ. ದ್ವೀಪಗಳು ಮತ್ತು ಬೇಪೋರ್ ನಡುವಿನ ಸರಕು ಸಾಗಣೆಯನ್ನು ಮಂಗಳೂರಿಗೆ ವರ್ಗಾಯಿಸಲು ಅವರು ಏಕಪಕ್ಷೀಯವಾಗಿ ನಿರ್ಧರಿಸಿದ್ದಾರೆ. ಇದುವರೆಗೂ ಮದ್ಯ ನಿಶೇಧ ಇದ್ದ ಸ್ಥಳದಲ್ಲಿ ಮದ್ಯಕ್ಕೆ ಅನುಮತಿಲಾಗಿದೆ. ಈ ನಿರ್ಧಾರಗಳು ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ತತ್ವಗಳನ್ನು ಬದಿಗಿಟ್ಟು ಏನು ಬೇಕಾದರೂ ಮಾಡಬಹುದು ಎಂದು ಭಾವಿಸುವ ಆಡಳಿತದ ದುರಹಂಕಾರವನ್ನು ಸೂಚಿಸುತ್ತದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಕೆಲವು ವಾರಗಳಲ್ಲಿ ಲಕ್ಷದ್ವೀಪದಲ್ಲಿ ಪ್ರತಿಭಟನೆಗಳು ಎದ್ದಿದ್ದು, ಸಾಮಾಜಿಕ ಜಾಲತಾಣದಲ್ಲೂ ಇದು ಪ್ರತಿಧ್ವನಿಸಿದೆ. ಆಡಳಿತಾಧಿಕಾರಿಯ ನಿರ್ಧಾರಗಳ ಬಗ್ಗೆ ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಗಳೆದ್ದಿದ್ದು #SaveLakshadweep ಅಭಿಯಾನವು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ಆಗಿದೆ.
ಇದನ್ನೂ ಓದಿ: ಲಕ್ಷದ್ವೀಪದಲ್ಲಿ ಮೊದಲ ಕೊರೊನಾ ಸೋಂಕು ಪ್ರಕರಣ



ಬಂಗಾಳದಲ್ಲಿ ಮುಂದೆಂದೂ ಸ್ವತಂತ್ರದ ಕಿಚ್ಚು ಏಳಲಾರದು ಎಂದು ಖಂದಿರವಾಗಿ ಹೇಳುವೆ.