Homeಮುಖಪುಟಬಿಹಾರದಲ್ಲಿ ಇಂದಿನಿಂದ ಜಾತಿಗಣತಿ ಆರಂಭ: ಜಾತಿ ಗಣತಿ ಕುರಿತು ಚಿಂತಕರ ಅಭಿಪ್ರಾಯಗಳಿವು

ಬಿಹಾರದಲ್ಲಿ ಇಂದಿನಿಂದ ಜಾತಿಗಣತಿ ಆರಂಭ: ಜಾತಿ ಗಣತಿ ಕುರಿತು ಚಿಂತಕರ ಅಭಿಪ್ರಾಯಗಳಿವು

ಸಾವಿರಾರು ಜಾತಿಗಳಿಂದ ಕೂಡಿರುವ ಭಾರತದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ 1931ರ ಜನಗಣತಿಯೊಂದಿಗೆ ಜಾತಿಗಣತಿಯೂ ನಡೆದಿತ್ತು. ಅದಾಗಿ 90 ವರ್ಷ ಕಳೆದರೂ ದೇಶಾದ್ಯಂತ ಸಮಗ್ರ ಜಾತಿ ಗಣತಿ ನಡೆದೇ ಇಲ್ಲ.

- Advertisement -
- Advertisement -

1991ರ ನಂತರ ಪ್ರತಿ ಹತ್ತು ವರ್ಷಗಳಿಗೊಮ್ಮೆ ದೇಶಾದ್ಯಂತ ನಡೆಯುವ ಜನಗಣತಿ ಹತ್ತಿರ ಬರುತ್ತಿದ್ದಂತೆ ಅದರೊಟ್ಟಿಗೆ ಜಾತಿಗಣತಿ ಸಹ ನಡೆಸಬೇಕೆಂಬ ಹಕ್ಕೊತ್ತಾಯ ಕೇಳಿಬರುತ್ತದೆ. ಈ ಬಾರಿ ಅದು ಬಹು ದೊಡ್ಡ ದನಿಯಲ್ಲಿಯೇ ಕೇಳಿಬಂದಿದೆ. ಬಿಹಾರ, ಉತ್ತರಪ್ರದೇಶ ಮತ್ತು ಕರ್ನಾಟಕದಲ್ಲಿ ಈ ಚರ್ಚೆ ಬಿರುಸಿನಿಂದ ಸಾಗಿದೆ. ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್‌ರವರು ತಮ್ಮ ರಾಜ್ಯದ ಹತ್ತು ಪಕ್ಷಗಳ ಮುಖಂಡರ ನಿಯೋಗದೊಂದಿಗೆ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿ 2021ರ ಜನಗಣತಿಯೊಂದಿಗೆ ಜಾತಿಗಣತಿಯನ್ನು ಸಹ ನಡೆಸಬೇಕೆಂದು ಒತ್ತಾಯಿಸಿದ್ದರು. ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಕೂಡ ಇದಕ್ಕೆ ದನಿಗೂಡಿಸಿದ್ದಾರೆ. ಕರ್ನಾಟಕದಲ್ಲಿ ಈಗಾಗಲೇ ನಡೆದಿರುವ ಜಾತಿಗಣತಿಯ ವರದಿ ಬಿಡುಗಡೆ ಮಾಡಬೇಕೆಂಬ ಚರ್ಚೆ ಮುನ್ನಲೆಗೆ ಬಂದಿದೆ. ಇದೆಲ್ಲದರ ಹಿನ್ನೆಲೆಯಲ್ಲಿ ಇಂದಿನಿಂದ ಬಿಹಾರದಲ್ಲಿ ಜಾತಿಗಣತಿ ಆರಂಭವಾಗುತ್ತಿದೆ.

ಜಾತಿಗಣತಿಯಲ್ಲಿ ಯಾವುದೇ ದೋಷ ಕಂಡಬರಬಾರದೆಂದು ಗಣತಿ ಪ್ರಕ್ರಿಯೆಯನ್ನು ಕೈಗೊಳ್ಳುವ ಎಲ್ಲರಿಗೂ ಸೂಕ್ತ ತರಬೇತಿಯನ್ನು ನೀಡಲಾಗಿದೆ. ಜಾತಿ ಮತ್ತು ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ಮುಖ್ಯವಾಗಿ ಗಣನೆಗೆ ತೆಗೆದುಕೊಳ್ಳಲಾಗುತ್ತಿದೆ. ಯಾರಾದರೂ ಜಾತಿಯ ಸ್ಥಳದಲ್ಲಿ ಅವನ/ಅವಳ ಉಪಜಾತಿಯನ್ನು ನಮೂದಿಸಿದರೆ, ಅದನ್ನು ಪರಿಶೀಲಿಸಿ ಸರಿಪಡಿಸುವಂತೆ ತರಬೇತಿ ನೀಡಿದ್ದೇವೆ. ರಾಜ್ಯದ ಹೊರಗೆ ವಾಸಿಸುವ ಕುಟುಂಬದ ಸದಸ್ಯರ ಗಣತಿಯೂ ಇದರಲ್ಲಿ ಸೇರಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತಿಳಿಸಿದ್ದಾರೆ.

ಜಿಲ್ಲಾ ಮತ್ತು ಪಂಚಾಯಿತಿ ಮಟ್ಟದಿಂದ ಏಕಕಾಲಕ್ಕೆ ಸಮೀಕ್ಷೆ ಆರಂಭವಾಗಲಿದೆ. ಪ್ರತಿ ಮನೆಗೆ ಎಣಿಕೆ ಸಂಖ್ಯೆಯನ್ನು ನೀಡಲಾಗುವುದು ಮತ್ತು ಅವರ ಜಾತಿಯ ವಿವರಗಳೊಂದಿಗೆ ಮನೆಯಲ್ಲಿ ವಾಸಿಸುವ ಜನರ ನಿಖರವಾದ ಸಂಖ್ಯೆ ಮತ್ತು ಅವರು ಜೀವನಕ್ಕಾಗಿ ಏನು ಮಾಡುತ್ತಾರೆ ಎಂಬ ಮಾಹಿತಿ ಪಡೆಯಲಾಗುವುದು. ಈ ಸಂದರ್ಭದಲ್ಲಿ ಯಾವುದೇ ದಾಖಲೆ ಒದಗಿಸಬೇಕಾದ ಅಗತ್ಯವಿಲ್ಲ. ಎರಡು ತಿಂಗಳಲ್ಲಿ ಸಮೀಕ್ಷೆ ಪೂರ್ಣಗೊಳ್ಳಲಿದೆ ಎನ್ನಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್, “ಬಿಹಾರದಲ್ಲಿ ಇಂದಿನಿಂದ ಜಾತಿವಾರು ಸಮೀಕ್ಷೆ ಆರಂಭವಾಗಲಿದೆ. ಇದು ನಮಗೆ ವೈಜ್ಞಾನಿಕ ಡೇಟಾವನ್ನು ನೀಡುತ್ತದೆ. ಅದಕ್ಕೆ ಅನುಗುಣವಾಗಿ ಬಜೆಟ್ ಮತ್ತು ಸಮಾಜ ಕಲ್ಯಾಣ ಯೋಜನೆಗಳನ್ನು ಜಾರಿ ಮಾಡಬಹುದು. ಬಿಜೆಪಿ ಬಡವರ ವಿರೋಧಿ. ಹಾಗಾಗಿ ಅವರಿಗೆ ಈ ಪ್ರಕ್ರಿಯೆ ಇಷ್ಟವಿಲ್ಲ” ಎಂದಿದ್ದಾರೆ.

ಜಾತಿಗಣತಿಯ ಹಿನ್ನೆಲೆ

ಸಾವಿರಾರು ಜಾತಿಗಳಿಂದ ಕೂಡಿರುವ ಭಾರತದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ 1931ರ ಜನಗಣತಿಯೊಂದಿಗೆ ಜಾತಿಗಣತಿಯೂ ನಡೆದಿತ್ತು. ಅದಾಗಿ 90 ವರ್ಷ ಕಳೆದರೂ ದೇಶಾದ್ಯಂತ ಜಾತಿ ಗಣತಿ ನಡೆದೇ ಇಲ್ಲ. 1991ರ ನಂತರ ಶಿಕ್ಷಣ ಮತ್ತು ಉದ್ಯೋಗದಲ್ಲಿ ಒಬಿಸಿ ಮೀಸಲಾತಿ ಜಾರಿಯಾದ ನಂತರ ಜಾತಿಗಣತಿ ನಡೆಯಬೇಕೆಂದು ದೊಡ್ಡ ಒತ್ತಾಯಗಳು ಕೇಳಿಬಂದಿದ್ದರಿಂದ 2003-04ರಲ್ಲಿ ಕೇಂದ್ರ ಸರ್ಕಾರ ಕರ್ನಾಟಕದಲ್ಲಿ ಜಾತಿಗಣತಿಯ ಪೈಲೆಟ್ ಪ್ರಾಜೆಕ್ಟ್ ನಡೆಸಲು 21.5 ಕೋಟಿ ರೂ ಬಿಡುಗಡೆ ಮಾಡಿತ್ತು. ಆಗ ಕರ್ನಾಟಕದಲ್ಲಿ ಸಿದ್ದರಾಮಯ್ಯನವರು ಉಪ ಮುಖ್ಯಮಂತ್ರಿ ಮತ್ತು ಹಣಕಾಸು ಸಚಿವರಾಗಿದ್ದರು. ಆಗ ಕರ್ನಾಟಕ ಸರ್ಕಾರ 1.5 ಕೋಟಿ ನೀಡಿತ್ತು. ಆದರೆ ಆಗಿನ ಸರ್ಕಾರಗಳ ನಿರ್ಲಕ್ಷ್ಯದಿಂದಾಗಿ ಅದು ನಡೆಯಲಿಲ್ಲ. ನಂತರ ಮನಮೋಹನ್ ಸಿಂಗ್ ನೇತೃತ್ವದಲ್ಲಿ 2011ರ ನಂತರ ಪ್ರತ್ಯೇಕವಾಗಿ ಜಾತಿಗಣತಿ ನಡೆಸಲು ಮುಂದಾದರೂ ಅದು ಕೂಡ ನಡೆಯದೇ ನೆನೆಗುದ್ದಿಗೆ ಬಿದಿತು.

2013ರಲ್ಲಿ ಸಿದ್ದರಾಮಯ್ಯನವರು ಕರ್ನಾಟಕದ ಮುಖ್ಯಮಂತ್ರಿಯಾದಾಗ ಜಾತಿಗಣತಿಗಾಗಿ ಬಜೆಟ್‌ನಲ್ಲಿ 187 ಕೋಟಿ ರೂ ಬಿಡುಗಡೆ ಮಾಡಿದ್ದರು. ಹಿಂದುಳಿದ ವರ್ಗಗಳ ಆಯೋಗದ ನೇತೃತ್ವದಲ್ಲಿ 2015ರ ಏಪ್ರಿಲ್-ಮೇ ತಿಂಗಳಿನಲ್ಲಿ 162 ಕೋಟಿ ರೂ ಖರ್ಚಿನಲ್ಲಿ ಜಾತಿಗಣತಿ ನಡೆದಿದ್ದು, ಸಮೀಕ್ಷಾ ವರದಿ ಸಿದ್ಧವಾಗಿದೆ. ಆದರೆ ಆ ವರದಿಯನ್ನು ಹಿಂದುಳಿದ ವರ್ಗಗಳ ಆಯೋಗವು ಇದುವರೆಗೂ ಸರ್ಕಾರಕ್ಕೆ ಸಲ್ಲಿಸಿಲ್ಲ. ಸಿದ್ದರಾಮಯ್ಯ, ಕುಮಾರಸ್ವಾಮಿ, ಯಡಿಯೂರಪ್ಪ ಮತ್ತು ಬಸವರಾಜ್ ಬೊಮ್ಮಾಯಿ ಈ ನಾಲ್ವರು ಸಿಎಂಗಳು ಸಹ ವರದಿ ಸ್ವೀಕರಿಸದ ಕಾರಣ ಅದು ಆಯೋಗದ ಬಳಿಯೇ ಉಳಿದುಕೊಂಡಿದೆ. ಜಾತಿಗಣತಿ ನಡೆಸಬಾರದು, ಈಗ ನಡೆಸಿರುವುದು ಅಸಿಂಧು ಎಂದು ಕೆಲವರು ಈ ಹಿಂದೆ ಹೈಕೋರ್ಟ್‌ನಲ್ಲಿ ರಿಟ್ ಪಿಟಿಷನ್ ಹಾಕಿದ್ದರು. ಆದರೆ, ’ಜಾತಿಗಣತಿ ನಡೆಸುವುದು ಸಂವಿಧಾನದ ಆಶಯಗಳಿಗೆ ಪೂರಕವಾಗಿದೆ. ಹಾಗಾಗಿ ಕರ್ನಾಟಕದಲ್ಲಿ ನಡೆದಿರುವ ಜಾತಿಗಣತಿ ವರದಿಯನ್ನು ಆಯೋಗವು ಸರ್ಕಾರಕ್ಕೆ ಸಲ್ಲಿಸಲು ನಿರ್ದೇಶನ ನೀಡಬೇಕೆಂದು’ ಹಿರಿಯ ವಕೀಲರಾದ ಸಿ.ಎಸ್ ದ್ವಾರಕನಾಥ್‌ರವರ ಮೂಲಕ ’ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯು’ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಅದು ಸೆಪ್ಟಂಬರ್ 13ರಂದು ವಿಚಾರಣೆಗೆ ಬರಲಿದೆ. ’ವರದಿ ವಿಷಯ ಕೋರ್ಟ್ ಮುಂದಿರುವುದರಿಂದ ಅದನ್ನು ಸರ್ಕಾರಕ್ಕೆ ಸಲ್ಲಿಸಲು ಆಗುತ್ತಿಲ್ಲ. ಕೋರ್ಟ್ ಯಾವ ಆದೇಶ ನೀಡುತ್ತದೆ ಅದನ್ನು ನಾವು ಪಾಲಿಸುತ್ತೇವೆ’ ಎಂದು ಈಗಿನ ಆಯೋಗದ ಅಧ್ಯಕ್ಷರಾದ ಕೆ.ಜಯಪ್ರಕಾಶ್ ಹೆಗ್ಡೆಯವರು ಹೇಳುತ್ತಿದ್ದಾರೆ.

ಜಾತಿಗಣತಿ ಏಕೆ ಬೇಕು?

ಮೀಸಲಾತಿ ಹಂಚಿಕೆಯಾಚೆಗೂ ಜಾತಿಗಣತಿಗೆ ಮಹತ್ವವಿದೆ. ಏಕೆಂದರೆ ಭಾರತದಲ್ಲಿ ದನಿಯೇ ಇಲ್ಲದ ಸಾವಿರಾರು ಸಣ್ಣ ಸಣ್ಣ ಸಂಖ್ಯೆಯಲ್ಲಿರುವ ಜಾತಿಗಳಿವೆ. ಸರ್ಕಾರದ ಯೋಜನೆಗಳು ನಿಜವಾಗಿಯೂ ಇವರನ್ನು ತಲುಪುತ್ತಿವೆಯೇ ಎಂಬ ಬಗ್ಗೆ ಗೊಂದಲಗಳಿವೆ. ದೊಡ್ಡ ಸಂಖ್ಯೆಯಲ್ಲಿರುವ ಜನರ ಸಮಸ್ಯೆಗಳು ಅವರ ಜಾತಿ ಕಾರಣಕ್ಕಾದರೂ ಸಮಾಜದಲ್ಲಿ ಚರ್ಚೆಗೆ ಬರುತ್ತಿವೆ. ಆದರೆ ಸಣ್ಣ ಸಂಖ್ಯೆಯ ಜಾತಿಗಳ ಕಥೆಯೇನು? ಅಂಚಿಗೆ ತಳ್ಳಲ್ಪಟ್ಟ ಸಮುದಾಯಗಳನ್ನು, ಆದಿವಾಸಿಗಳನ್ನು ನಾವು ಗುರುತಿಸಿದ್ದೇವೆಯೇ ಎಂಬ ಪ್ರಶ್ನೆ ಕೂಡ ಇದೆ. ಪ್ರಜಾಪ್ರಭುತ್ವ ರಾಷ್ಟ್ರವೊಂದು ತನ್ನ ನೀತಿ ನಿರೂಪಣೆಯಲ್ಲಿ ಇವರಿಗೆ ಸರಿಯಾದ ಪ್ರಾತಿನಿಧ್ಯ ನೀಡಬೇಕಾದರೆ ಅವರ ಗಣತಿ ಅಗತ್ಯವಿದೆ.

ಇನ್ನು ಬಹಳಷ್ಟು ರಾಜ್ಯಗಳಲ್ಲಿ ಹಲವಾರು ಜಾತಿಗಳು ತಮಗೂ ಮೀಸಲಾತಿ ಕಲ್ಪಿಸಬೇಕೆಂದು, ಇರುವ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಬೇಕೆಂದು ತೀವ್ರ ರೀತಿಯ ಹೋರಾಟಕ್ಕಿಳಿದಿವೆ. ಆದರೆ ಸುಪ್ರೀಂ ಕೋರ್ಟ್ 1992ರ ಇಂದ್ರಸಹಾನಿ ಪ್ರಕರಣದ ತೀರ್ಪಿನಲ್ಲಿ ಶೇ.50ಕ್ಕಿಂತ ಹೆಚ್ಚು ಮೀಸಲಾತಿ ಇರಬಾರದು ಎಂಬ ಷರತ್ತನ್ನು ಹಾಕಿದೆ. ಜೊತೆಗೆ ವಿಶೇಷ ಸಂದರ್ಭದಲ್ಲಿ ಮಾತ್ರ ಈ ನಿಯಮವನ್ನು ಮೀರಬಹುದು ಎಂದು ಸುಪ್ರೀಂ ಹೇಳಿದೆ. ಈ ವಿಶೇಷ ಸಂದರ್ಭದ ಕಾರಣ ನೀಡಿ ಈಗಾಗಲೇ ದೇಶದ 9 ರಾಜ್ಯಗಳಲ್ಲಿ ಶೇ.50ಕ್ಕಿಂತ ಹೆಚ್ಚು ಮೀಸಲಾತಿ ನೀಡಿರುವ ಉದಾಹರಣೆಗಳಿವೆ. ಆದರೆ ಕಳೆದ 90 ವರ್ಷಗಳಿಂದ ಜಾತಿಗಣತಿ ನಡೆಯದ, ನಿಖರವಾದ ಜಾತಿವಾರು ಡೇಟಾ ಇಲ್ಲದ ಕಾರಣ, ವಿಶೇಷ ಸಂದರ್ಭವನ್ನು ನಿರೂಪಿಸಿ ಶೇ.50ಕ್ಕಿಂತ ಹೆಚ್ಚಿನ ಮೀಸಲಾತಿ ನೀಡಲು ಹಲವು ರಾಜ್ಯಗಳಿಗೆ ಇಂದಿಗೂ ಸಾಧ್ಯವಾಗಿಲ್ಲ. ಅಂದರೆ ’ನಮ್ಮ ರಾಜ್ಯಗಳಲ್ಲಿ ಹಲವು ಜಾತಿಗಳು ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿವೆ ಮತ್ತು ಸಮಾಜದಲ್ಲಿ ಇವರ ಪ್ರಾತಿನಿಧ್ಯ ಅತಿ ಕಡಿಮೆ ಇದೆ ಎಂದು ತೋರಿಸಲು’ ರಾಜ್ಯಗಳಿಗೆ ಜಾತಿಗಣತಿ ಡೇಟಾ ಅತ್ಯಗತ್ಯವಾಗಿದೆ. ಹಾಗಾಗಿ ಜಾತಿಗಣತಿ ನಡೆಯಬೇಕೆಂಬ ಬಹುದೊಡ್ಡ ಕೂಗು ಎದ್ದಿದೆ.

ಜಾತಿಗಣತಿ ನಡೆಸಲು ಹಿಂದೇಟು ಏಕೆ?

ಆರ್ಥಶಾಸ್ತ್ರಜ್ಞ ಥಾಮಸ್ ಪಿಕೆಟಿಯವರ ಶಿಷ್ಯರಾದ ನಿತಿನ್ ಕುಮಾರ್ ಭಾರತಿಯವರು “ಭಾರತದಲ್ಲಿ ಸಂಪತ್ತಿನ ಅಸಮಾನ ಹಂಚಿಕೆ- ವರ್ಗ ಮತ್ತು ಜಾತಿ” ಎಂಬ ಸಂಶೋಧನ ಪ್ರಬಂಧವೊಂದನ್ನು ರಚಿಸಿದ್ದಾರೆ. ಅದರಂತೆ ಇಂದಿಗೂ ದೇಶದಲ್ಲಿ ದಲಿತರು ಗ್ರಾಮೀಣ ಮತ್ತು ನಗರ ಪ್ರದೇಶಗಳೆರಡಲ್ಲಿಯೂ ಅತಿ ಕಡಿಮೆ ಸಂಪತ್ತಿನ ಮಾಲೀಕತ್ವ ಹೊಂದಿದ್ದಾರೆ. ಕಳೆದ ಒಂದು ದಶಕದಲ್ಲಿ ಪರಿಸ್ಥಿತಿ ಸ್ವಲ್ಪ ಸುಧಾರಿಸಿದರೂ ತೃಪ್ತಿದಾಯಕವಾಗಿಲ್ಲ. ಆದರೆ ಇಂದಿಗೂ ಮುಂದುವರಿದ ಜಾತಿಗಳು ಅತಿಯಾದ ಪ್ರಾತಿನಿಧ್ಯವನ್ನ ಹೊಂದಿವೆ. ಇಂತಹ ಸಂದರ್ಭದಲ್ಲಿ ಜಾತಿಗಣತಿ ನಡೆದಿದ್ದೆ ಆದಲ್ಲಿ ಎಲ್ಲಾ ಜಾತಿಗಳಲ್ಲಿ ಎಷ್ಟು ಜನರಿದ್ದಾರೆ? ಅವರ ಶೈಕ್ಷಣಿಕ ಸಾಧನೆಯೆಷ್ಟು? ಆರ್ಥಿಕವಾಗಿ ಯಾವ ಸ್ಥಿತಿಯಲ್ಲಿದ್ದಾರೆ? ಎಷ್ಟು ಜನ ಉದ್ಯೋಗದಲ್ಲಿದ್ದಾರೆ? ಎಂಬೆಲ್ಲಾ ವಿವರಗಳು ಬಹಿರಂಗಗೊಳ್ಳುತ್ತವೆ. ಅವು ಖಂಡಿತವಾಗಿ ಬಲಾಢ್ಯ ಜಾತಿಗಳು ಈಗ ಸಾರ್ವಜನಿಕವಾಗಿ ಬಿಂಬಿಸುತ್ತಿರುವ ಅಂಕಿಸಂಖ್ಯೆಗಳಿಗೆ ತದ್ವಿರುದ್ಧವಾಗಿರುತ್ತವೆ ಎಂಬ ಅಭಿಪ್ರಾಯವಿದೆ. ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಆರ್ಥಿಕವಾಗಿ ದುರ್ಬಲವಾದ ಮೇಲ್ಜಾತಿಗಳಿಗೆ 10%ವರೆಗೂ ಮೀಸಲಾತಿ ಜಾರಿಗೆ ತಂದಿದ್ದಾರೆ. ಜಾತಿಗಣತಿ ನಡೆದರೆ ಇದಕ್ಕೆ ದೊಡ್ಡ ಪ್ರತಿರೋಧ ಬರುತ್ತದೆ ಎಂಬ ಭಯವಿದೆ. ಈ ಪಟ್ಟಭದ್ರ ಹಿತಾಸಕ್ತಿಗಳೇ ಅಂದರೆ ಮುಖ್ಯವಾಗಿ ಮೇಲ್ಜಾತಿಗಳು ಈ ಜಾತಿಗಣತಿ ನಡೆಸಲು ಅವಕಾಶ ನೀಡುತ್ತಿಲ್ಲ.

ಬಿಹಾರ-ಯುಪಿಯಲ್ಲಿ ದನಿ ಜೋರೇಕೆ?

ಬಿಹಾರದ ಮುಖ್ಯ ರಾಜಕೀಯವೇ ಒಬಿಸಿ ರಾಜಕೀಯವಾಗಿದೆ. ಅಲ್ಲಿನ ಸಿಎಂ ನಿತೀಶ್ ಕುಮಾರ್‌ರವರ ಜೆಡಿಯು ಮತ್ತು ವಿಪಕ್ಷ ತೇಜಸ್ವಿ ಯಾದವ್‌ರವರ ಆರ್‌ಜೆಡಿ ಎರಡೂ ಸಹ ಒಬಿಸಿ ಸಮುದಾಯಗಳನ್ನು ಪ್ರತಿನಿಧಿಸುವ ಪಕ್ಷಗಳಾಗಿವೆ. ಆಶ್ಚರ್ಯವೆಂದರೆ ಅವರ ಜಾತಿಗಣತಿಯ ಬೇಡಿಕೆಗೆ ಅಲ್ಲಿನ ಬಿಜೆಪಿ ಮತ್ತು ಕಾಂಗ್ರೆಸ್ ಸಹ ಕೈಜೋಡಿಸಿವೆ. ಆದರೆ ಉತ್ತರ ಪ್ರದೇಶದಲ್ಲಿ ಬಿಜೆಪಿ ಈ ಬಗ್ಗೆ ಮಾತನಾಡುತ್ತಿಲ್ಲ. ಉತ್ತರ ಪ್ರದೇಶದಲ್ಲಿನ ಸಮಾಜವಾದಿ ಪಕ್ಷ ಒಬಿಸಿ ಮತ್ತು ಮುಸ್ಲಿಮರನ್ನು ಪ್ರತಿನಿಧಿಸುತ್ತದೆ. ಹಾಗಾಗಿ ಅವರಿಗೆ ಜಾತಿಗಣತಿ ನಡೆಯುವುದು ಅಗತ್ಯವಾಗಿದೆ. ಮುಂದಿನ ವರ್ಷ ಉತ್ತರ ಪ್ರದೇಶದಲ್ಲಿ ನಡೆಯುವ ಚುನಾವಣೆ ಮತ್ತು 2024ರ ಲೋಕಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ಜಾತಿಗಣತಿ ನಡೆಸಬೇಕೆಂದು ಈ ಪಕ್ಷಗಳು ಹಲವು ಪ್ರಾದೇಶಿಕ ಪಕ್ಷಗಳ ಜೊತೆಸೇರಿ ಪ್ರಧಾನಿ ನರೇಂದ್ರ ಮೋದಿ ಮೇಲೆ ಒತ್ತಡ ತಂದಿವೆ.

’ಈ ದೇಶದಲ್ಲಿ ಮೀಸಲಾತಿ ಪರವಾಗಿರುವವರು, ಅದು ಇನ್ನು ಹೆಚ್ಚಾಗಬೇಕೆನ್ನುವರು ಮತ್ತು ಮೀಸಲಾತಿ ವಿರೋಧಿಸುವವರು ಎಲ್ಲರೂ ಜಾತಿಗಣತಿಯನ್ನು ಬೆಂಬಲಿಸಬೇಕಿದೆ. ಏಕೆಂದರೆ ಆಗ ಮಾತ್ರ ಸಾಕ್ಷ್ಯ ಹೊರಬರಲು ಸಾಧ್ಯ. ಆನಂತರ ಅಂಕಿಅಂಶಗಳ ಸಾಕ್ಷ್ಯದೊಂದಿಗೆ ತಮ್ಮ ವಾದ ಮುಂದಿಡಬಹುದು. ಭಾರತದಲ್ಲಿ ಇಂದಿಗೂ ಅತಿಹೆಚ್ಚು ಸವಲತ್ತು ಪಡೆದುಕೊಂಡ ವರ್ಗವೆಂದರೆ ಅದು ಹಿಂದೂ ಮೇಲ್ಜಾತಿಗಳು. ಶೇ.20 ರಷ್ಟಿರುವ ಅವರು ದೇಶದ ಶೇ.80 ರಷ್ಟು ಎಲ್ಲಾ ರೀತಿಯ ಸವಲತ್ತುಗಳನ್ನು ಪಡೆದಿದ್ದಾರೆ ಎಂದು ನಾನು ಜವಾಬ್ದಾರಿಯಿಂದ
ಹೇಳುತ್ತೇನೆ. ಹಾಗಾಗಿಯೇ ಅವರು ತಮ್ಮ ಈ ಅನುಕೂಲತೆ ಬಯಲಾಗುತ್ತದೆ ಎಂಬ ಭಯದಿಂದ ಜಾತಿಗಣತಿ ಮಾಡಲು ಬಿಡುತ್ತಿಲ್ಲ’ ಎಂದು ಯೋಗೇಂದ್ರ ಯಾದವ್ ಹೇಳುವುದರಲ್ಲಿ ಸತ್ಯವಿದೆ. ಹಾಗಾಗಿ ಜಾತಿಗಣತಿ ನಡೆಯಲೇಬೇಕಿದೆ.

ಜಾತಿ ಗಣತಿ ಬೇಕೆ-ಬೇಡವೆ? ಚಿಂತಕರ ಅಭಿಪ್ರಾಯಗಳಿವು

ದೇಶಾದ್ಯಂತ ಜಾತಿಗಣತಿ ನಡೆಯಬೇಕೆಂಬ ಕೂಗೆದ್ದಿರುವುದು ಬಹಳ ಒಳ್ಳೆಯದು ಮತ್ತು ನಾನು ಇದನ್ನು ಸ್ವಾಗತಿಸುತ್ತೇನೆ. ರಾಜ್ಯಗಳು ಮೀಸಲಾತಿ ಪ್ರಮಾಣ ಹೆಚ್ಚಿಸಬೇಕೆಂದು ವಾದಿಸಿದ ಕೂಡಲೇ ಎಲ್ಲಾ ಕೋರ್ಟ್‌ಗಳು ಅದನ್ನು ಪುಷ್ಠೀಕರಿಸಲು ನಿಮ್ಮ ಬಳಿ ಯಾವ ಡೇಟಾ ಇದೆ ಎಂದು ಕೇಳುತ್ತಿವೆ. ಇದಕ್ಕೆ ನಾವು ಉತ್ತರ ಕೊಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ದೇಶಾದ್ಯಂತ ಜಾತಿಗಣತಿ ನಡೆಯಬೇಕು. ಮತ್ತು ಜಾತಿಗಣತಿ ಕರ್ನಾಟಕದಲ್ಲಿ ಈಗಾಗಲೇ ನಡೆದಿರುವುದರಿಂದ ಅದರ ವರದಿ ಸಲ್ಲಿಸುವಂತೆ ಒತ್ತಾಯಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದೇವೆ. ಇದರಲ್ಲಿ ಯಶಸ್ವಿಯಾಗುವ ವಿಶ್ವಾಸ ನನಗಿದೆ.

– ಸಿ.ಎಸ್ ದ್ವಾರಕನಾಥ್, ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷರು ಮತ್ತು ಕಾಂಗ್ರೆಸ್ ಮುಖಂಡರು

ಜಾತಿಗಣತಿ ಆಗಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ಏಕೆಂದರೆ 1931ರಲ್ಲಿ ಕೊನೆಯದಾಗಿ ನಡೆದ ಜಾತಿಗಣತಿಯ ಅಂಕಿಅಂಶಗಳನ್ನೇ ಇಟ್ಟುಕೊಂಡು ತಳಸಮುದಾಯಗಳಿಗೆ, ದಲಿತ ಸಮುದಾಯಗಳಿಗೆ ಮೀಸಲಾತಿ ಜಾರಿಯಾಗುತ್ತಿದೆ ಮಾತ್ರವಲ್ಲ ಅದೇ ಆಧಾರದಲ್ಲಿ ಕೆಲ ರಾಜ್ಯಗಳಲ್ಲಿ SCSP-TSP ಯೋಜನೆಗಳಿಗೆ ಅನುದಾನ ನೀಡಲಾಗುತ್ತದೆ. ಆದರೆ ಈ 90 ವರ್ಷಗಳಲ್ಲಿ ಎಸ್‌ಸಿ, ಎಸ್‌ಟಿ ಜನಾಂಗದ ಜನಸಂಖ್ಯೆ ಬಹಳ ಹೆಚ್ಚಾಗಿದೆ ಮತ್ತು ಮೇಲ್ಜಾತಿಗಳ ಜನಸಂಖ್ಯೆ ಕಡಿಮೆಯಾಗಿದೆ ಎಂಬುದನ್ನು fertility rate ಸ್ಪಷ್ಟಪಡಿಸಿದೆ. (2018ರ ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ ಅದು ST 2.5%, SC 2.3%, OBC 2.2% ಇದ್ದರೆ ಮೇಲ್ಜಾತಿಗಳದ್ದು 1.9% ಇದೆ) ಆದರೆ ಎಸ್‌ಸಿ, ಎಸ್‌ಟಿಗಳಿಗೆ ಮೀಸಲಾತಿ ಮಾತ್ರ ಅಷ್ಟೇ ಇದೆ.

ಇನ್ನು ಎಸ್‌ಸಿ ಮತ್ತು ಎಸ್‌ಟಿ ಜಾತಿಗಣತಿ ಮಾತ್ರ ಮಾಡುತ್ತೇವೆ, ಉಳಿದ ಜಾತಿಗಳನ್ನು ಮಾಡುವುದಿಲ್ಲ ಎಂದು ಗೃಹ ಇಲಾಖೆಯ ರಾಜ್ಯ ಸಚಿವ ನಿತ್ಯಾನಂದ ರೈ ಹೇಳಿದ್ದಾರೆ. ಈಗಾಗಲೇ ಸಾಮಾಜಿಕವಾಗಿ ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿ ಬಡವರಿಗೆ 10% ಮೀಸಲಾತಿ ಜಾರಿಯಾಗಿದೆ. ಜಾತಿಗಣತಿ ನಡೆದರೆ ಮೇಲ್ಜಾತಿಯಲ್ಲಿನ ಬಡವರ ಸಂಖ್ಯೆ ಸಿಕ್ಕಿಬಿಡುತ್ತದೆ. ಆಗ ಈ ಮೀಸಲಾತಿ ಕಡಿಮೆ ಮಾಡಬೇಕಾಗುತ್ತದೆ ಎಂಬ ಅಳಕು ಬಿಜೆಪಿಯವರದ್ದು. ಹಾಗಾಗಿ ಅವರು ಇದನ್ನು ಮಾಡುತ್ತಿಲ್ಲ.

ಸಣ್ಣ ಸಣ್ಣ ಸಂಖ್ಯೆಯ ನೂರಾರು ಆದಿವಾಸಿ ಸಮುದಾಯಗಳಿವೆ. 1931ರ ಜನಗಣತಿಯಲ್ಲಿಯೂ ಇವರನ್ನು ಸಮರ್ಪಕವಾಗಿ ಪರಿಗಣಿಸಿಲ್ಲ. ಆ ಜನರ ಜನಗಣತಿ ನಡೆದು ಅವರಿಗೆ ಹಕ್ಕುಗಳು ದಕ್ಕಬೇಕಿವೆ. ಅವರ ಬಗ್ಗೆ ದೇಶದ ಹಲವರಿಗೆ ಗೊತ್ತೇ ಇಲ್ಲ. ಹಾಗಾಗಿ ಮೇಲ್ಜಾತಿಯೂ ಸೇರಿದಂತೆ ಈಗ ಅಂದಾಜಿಸುತ್ತಿರುವ 138 ಕೋಟಿ ಜನರ ಜಾತಿಗಣತಿ ನಡೆಯಲೇಬೇಕು ಮತ್ತು ಆ ಆಧಾರದಲ್ಲಿ ಈಗ ನೀಡುತ್ತಿರುವ 10% ಮೀಸಲಾತಿಯೂ
ಸೇರಿದಂತೆ ಎಲ್ಲಾ ಮೀಸಲಾತಿಯ ಮರುವರ್ಗೀಕರಣ ಆಗಬೇಕು.

– ವಿಕಾಸ್ ಆರ್ ಮೌರ್ಯ, ಲೇಖಕರು

ಜಾತಿಗಳು ಇದ್ದೆ ಇರುವುದು ನಮಗೆ ಗೊತ್ತು. ಇಂದು ನಮ್ಮ ಎಲ್ಲಾ ಸಾಮಾಜಿಕ, ಆರ್ಥಿಕ, ರಾಜಕೀಯ ಚಟುವಟಿಕೆಗಳಲ್ಲಿ ಜಾತಿ ಬೆರೆತುಹೋಗಿದೆ. ಇಂತಹ ಮುಖ್ಯ ಅಂಶವನ್ನು ಗಣತಿ ಮಾಡುವಾಗ ಪರಿಣಿಸದಿದ್ದರೆ ಹೇಗೆ? ಕೆಲವರು ನಮಗೆ ಜಾತಿ ಬೇಡ, ನಾವು ಜಾತಿಬಾಹಿರ ಎಂಬ ಕಾರಣದಿಂದ ಜಾತಿಗಣತಿಯನ್ನು ವಿರೋಧಿಸುತ್ತಿದ್ದಾರೆ. ಇದರ ಹಿಂದೆ ಸಾರ್ವಜನಿಕ ಸೌಲಭ್ಯಗಳು ತಮಗೆ ಮಾತ್ರ ಸಿಗುವಂತೆ ನೋಡಿಕೊಳ್ಳುವ ಹುನ್ನಾರವಿದೆ. ಕರ್ನಾಟಕದಲ್ಲಿ 2015ರಲ್ಲಿ ನಡೆದಿರುವ ಜಾತಿಗಣತಿಯ ವರದಿ ಸೋರಿಕೆಯಾಗಿದೆ. ಅದರ ಪ್ರಕಾರ ಕರ್ನಾಟಕದಲ್ಲಿ ಲಿಂಗಾಯತ ಸಮುದಾಯದವರು ಹೆಚ್ಚಿದ್ದಾರೆ ಎಂಬ ನಂಬಿಕೆಯನ್ನು ಸುಳ್ಳು ಮಾಡಿ ಪರಿಶಿಷ್ಟ ಜಾತಿಯ ಸಮುದಾಯದವರು ಹೆಚ್ಚಿದ್ದಾರೆ ಎಂಬ ಅಂಶ ಹೊರಹಾಕಿದೆ. ಹಾಗಾಗಿ ಈಗ ಜನಗಣತಿಯೊಂದಿಗೆ ಜಾತಿಗಣತಿ ಮಾಡಿದರೆ ಸಮಗ್ರ ಚಿತ್ರಣ ಸಿಗಲು ಸಾಧ್ಯ. ಆದರೆ ಯಾರಾದರೂ ಜಾತಿಗಣತಿ ಬೇಡ ಎನ್ನುತ್ತಿದ್ದಾರೆ ಎಂದರೆ ಅವರದು ಸ್ವಹಿತಾಸಕ್ತಿ ಇದೆ ಎಂದು ನಾವು ಅರ್ಥ ಮಾಡಿಕೊಳ್ಳಬೇಕು.

– ಪ್ರೊ. ವಲೇರಿಯನ್ ರೋಡ್ರಿಗಸ್, ರಾಜಕೀಯ ತಜ್ಞರು

ಸಾಮಾಜಿಕ ಅಸಮಾನತೆ ಜೊತೆಗೆ ಆರ್ಥಿಕ ಅಸಮಾನತೆ ಹೋಗಲಾಡಿಸಲು ಜಾತಿಗಣತಿ ಬೇಕೇಬೇಕು. ಏಕೆಂದರೆ ಈ ದೇಶದಲ್ಲಿ ಸ್ವಾತಂತ್ರ್ಯ ಬಂದ ನಂತರ ಎಲ್ಲಾ ನೀತಿಗಳು ಕೇವಲ ಮುಂದುವರಿದ ಜಾತಿಗಳಾದ ಬ್ರಾಹ್ಮಣರು, ಬನಿಯಾಗಳ ಪರವಾಗಿದ್ದವು. ಆನಂತರ ಒಂದಷ್ಟು ಒಬಿಸಿ ಜಾತಿಗಳಾದ ಲಿಂಗಾಯತರು, ರೆಡ್ಡಿಗಳು, ಕಮ್ಮಾಗಳು, ಠಾಕೂರ್‌ಗಳಿಗಷ್ಟೆ ಸೌಲಭ್ಯಗಳು ದೊರಕುವಂತೆ ನಮ್ಮ ಆರ್ಥಿಕ ವ್ಯವಸ್ಥೆಯನ್ನು ರೂಪಿಸಲಾಗಿದೆ. ದೇಶದ ಸಂಪತ್ತಿನ ಸೃಷ್ಟಿಯಲ್ಲಿ ಎಲ್ಲಾ ಸಮುದಾಯಗಳ ಪಾಲಿದ್ದರೂ ಸಂಪತ್ತು ಎಲ್ಲರಿಗೂ ಸಮಾನವಾಗಿ ಹಂಚಿಕೆಯಾಗಿಲ್ಲ. ಇದನ್ನು ಸಾಧ್ಯವಾಗಿಸಲು ಜಾತಿಗಣತಿ ಅಗತ್ಯವಾಗಿ ಬೇಕು.

– ನಾಗೇಗೌಡ ಕೀಲಾರ ಶಿವಲಿಂಗಯ್ಯ, ಚಿಂತಕರು, ಪ್ರಾಧ್ಯಪಕರು

ಜಾತಿಗಣತಿ ಮಾಡುವ ಧೈರ್ಯ ಯಾರಿಗೂ ಇದ್ದಂತಿಲ್ಲ. ಏಕೆಂದರೆ ಅದನ್ನು ಜಾರಿಗೊಳಿಸಿದರೆ ಉಂಟಾಗುವ
ಸಾಧಕ-ಬಾಧಕಗಳನ್ನು ಊಹಿಸಲಿಕ್ಕೆ ಸಾಧ್ಯವಾಗದಷ್ಟು ಸಂಕೀರ್ಣವಾಗಿದೆ ಪರಿಸ್ಥಿತಿ. ಕರ್ನಾಟಕದಲ್ಲಿ ಮಾಡಿರುವ ಜಾತಿಗಣತಿ ವರದಿ ಒಂದು ವೇಳೆ ಬಿಡುಗಡೆಯಾದರೂ ಅದು ವಿಶ್ವಾಸಾರ್ಹವಲ್ಲ, ಅದನ್ನು ನಾವು ನಂಬುವುದಿಲ್ಲ ಎಂಬ ದೊಡ್ಡ ಕೂಗು ಕೇಳಿಬರುವುದರಲ್ಲಿ ಯಾವುದೇ ಅನುಮಾನವಿಲ್ಲ. ಯಾರಿಗೆ ಅದರಿಂದ ರಾಜಕೀಯವಾಗಿ ತೊಂದರೆಯಾಗಲಿದೆಯೋ ಅವರು ಖಂಡಿತ ಅದನ್ನು ವಿರೋಧಿಸುತ್ತಾರೆ. ಇನ್ನೊಂದು ಕಡೆ ಮೋದಿ ಸರ್ಕಾರವು ತನ್ನ ಸುಳ್ಳುಗಳ ಮೂಲಕ ಡೇಟಾಗಳು, ಅಂಕಿ-ಸಂಖ್ಯೆಗಳ ಬಗೆಗೆ ಜನರಿಗೆ ನಂಬಿಕೆ ಹೋಗುವಂತೆ ಮಾಡಿಬಿಟ್ಟಿದೆ. ಜಿಡಿಪಿಯಿಂದ ಶುರುಮಾಡಿ ಎಲ್ಲಾ ಡೇಟಾಗಳನ್ನು ಅದು ತಿರುಚಿದೆ. ಇಂತಹ ಸಂದರ್ಭದಲ್ಲಿ ಜನಗಣತಿ ಜೇನುಗೂಡಿಗೆ ಕೈ ಹಾಕುವ ಸಾಹಸ. ಹಾಗಾಗಿ ಬಹಳ ಎಚ್ಚರಿಕೆಯೊಂದಿಗೆ ಮತ್ತು ಸೂಕ್ತ ಪೂರ್ವತಯಾರಿಯೊಂದಿಗೆ ಸ್ವಾತಂತ್ರ್ಯ ನಂತರದ ಮೊದಲ ಮತ್ತು ಕೊನೆಯ ಜಾತಿಗಣತಿಯೊಂದು ನಡೆದುಬಿಡಲಿ. ಆ ಮೂಲಕ ಎಲ್ಲಾ ಜಾತಿಗಳು ಸಮಾನ ಹಂತದಲ್ಲಿ ಬೆಳೆಯಲು ಅನುಕೂಲವಾಗಲಿ.

  • ಎ.ನಾರಾಯಣ, ಅಂಕಣಕಾರರು, ಪ್ರಾಧ್ಯಾಪಕರು, ಅಜೀಂ ಪ್ರೇಮ್‌ಜಿ ವಿವಿ, ಬೆಂಗಳೂರು.

ಇದನ್ನೂ ಓದಿ: ಮೀಸಲಾತಿ ಹೆಚ್ಚಳ ಮತ್ತು ಬಿಜೆಪಿಯ ಎರಡು ನಾಲಗೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...