ಭಿನ್ನ ಕೋಮಿನ ಯುವಕ-ಯುವತಿ ಮಾತನಾಡುತ್ತಿದ್ದರೆಂಬ ಕ್ಷುಲ್ಲಕ ಕಾರಣಕ್ಕೆ ಹಿಂದುತ್ವವಾದಿ ಗುಂಪು ಯುವಕನನ್ನು ಅರೆಬೆತ್ತಲೆಗೊಳಿಸಿ ಅಮಾನುಷವಾಗಿ ಥಳಿಸಿರುವ ಮತೀಯ ಗೂಂಡಾಗಿರಿ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಜರುಗಿದೆ.
ಮುಸ್ಲಿಂ ಸಮುದಾಯದ ಹಫೀದ್ ಎಂಬ ಯುವಕ ಮತ್ತು ಹಿಂದೂ ಸಮುದಾಯದ ಯುವತಿಯು ಇನ್ಸ್ಟಗ್ರಾಂನಲ್ಲಿ ಪರಿಚಯವಾಗಿ ಎರಡು ಬಾರಿ ಭೇಟಿಯಾಗಿ ಮಾತನಾಡಿದ್ದರು. ಅದೇ ರೀತಿ ಗುರುವಾರ ಸುಬ್ರಮಣ್ಯದ ಬಸ್ ನಿಲ್ದಾಣದಲ್ಲಿ ಮಾತನಾಡುತ್ತಿದ್ದಾಗ ಅಲ್ಲಿಗೆ ನುಗ್ಗಿದ ಹಿಂದುತ್ವವಾದಿ ಪುಂಡರು ಹಫೀದ್ನನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಹಲ್ಲೆ ನಡೆಸಿದ್ದಾರೆ.
ಹಫೀದ್ನನ್ನು ಅರೆಬೆತ್ತಲೆಗೊಳಿಸಿ ಥಳಿಸಲಾಗಿದೆ. ನೆಲಕ್ಕೆ ಹಾಕಿ ತುಳಿಯಲಾಗಿದೆ. ಚಾಕು ತೋರಿಸಿ ಕೊಲೆ ಬೆದರಿಕೆ ಹಾಕಲಾಗಿದೆ ಎಂದು ಹಫೀದ್ ಸುಬ್ರಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಸದ್ಯ ತೀವ್ರ ಹಲ್ಲೆಯಿಂದ ಗಾಯಗೊಂಡಿರುವ ಹಫೀದ್ನನ್ನು ಸುಳ್ಯ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ತೀವ್ರ ಹಲ್ಲೆಯಂದ ಆತನ ರಕ್ತ ಹೆಪ್ಪುಗಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ. ಹಫೀದ್ ನೀಡಿದ ದೂರಿನ ಅನ್ವಯ ಪೊಲೀಸರು 12ರ ಜನರ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ.
ಮತ್ತೊಂದೆಡೆ ಹುಡುಗಿಯ ತಂದೆ ಹಫೀದ್ ವಿರುದ್ಧ ಪ್ರತಿ ದೂರು ನೀಡಿದ್ದಾರೆ. ‘ನನ್ನ ಮಗಳು ಕಾಲೇಜು ಮುಗಿಸಿ ಬಸ್ ನಿಲ್ದಾಣದಲ್ಲಿ ಬಸ್ಗಾಗಿ ಕಾಯುತ್ತಿದ್ದಾಗ ಅಲ್ಲಿಗೆ ಬಂದ ಹಫೀದ್ ಪ್ರೀತಿಸುವಂತೆ ಒತ್ತಾಯಿಸಿದ್ದಾನೆ. ಒಪ್ಪದಿದ್ದಾಗ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಪ್ರಕರಣವು ಬಸವರಾಜ ಬೊಮ್ಮಾಯಿಯವರು ರಾಜ್ಯದ ಮುಖ್ಯಮಂತ್ರಿ ಆದ ನಂತರ ಎಗ್ಗಿಲ್ಲದೆ ನಡೆಯುತ್ತಿರುವ ಮತೀಯ ಗೂಂಡಾಗಿರಿ ಪ್ರಕರಣಗಳಿಗೆ ಹೊಸ ಸೇರ್ಪಡೆಯಾಗಿದೆ. ಕ್ರಿಯೆಗೆ ಪ್ರತಿಕ್ರಿಯೆ ಇದ್ದೆ ಇರುತ್ತದೆ ಎಂದು ಬೊಮ್ಮಾಯಿಯವರು ಮತೀಯ ಗೂಂಡಾಗಿರಿಯನ್ನು ಸಮರ್ಥಿಸಿಕೊಂಡ ನಂತರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ವರ್ಷದಲ್ಲಿ 20ಕ್ಕೂ ಹೆಚ್ಚು ಮತೀಯ ಗೂಂಡಾಗಿರಿ ಪ್ರಕರಣಗಳು ವರದಿಯಾಗಿವೆ.
ಇದನ್ನೂ ಓದಿ; ದೇವಾಲಯ ಪ್ರವೇಶಿಸಿದ ದಲಿತ ಮಹಿಳೆಗೆ ಥಳಿತ, ತಲೆಗೂದಲು ಹಿಡಿದು ಹೊರಗೆಳೆದುಹಾಕಿದ ಧರ್ಮದರ್ಶಿ – ವಿಡಿಯೋ ವೈರಲ್