ಮಧ್ಯಪ್ರದೇಶದ ರೇವಾ ಜಿಲ್ಲೆಯ ದೊಲ್ಮೌ ಎಂಬ ಗ್ರಾಮದಲ್ಲಿ ಜಾತಿ ಕ್ರೌರ್ಯದ ಭೀಭತ್ಸ ಘಟನೆ ವರದಿಯಾಗಿದೆ. ತಾನು ಮಾಡಿದ ಕೆಲಸಕ್ಕೆ ಕೂಲಿ ಕೇಳಿದ 45 ವರ್ಷದ ದಲಿತ ವ್ಯಕ್ತಿಯ ಕೈ ಕತ್ತರಿಸಿರುವ ಅಮಾನವೀಯ ಘಟನೆ ಶನಿವಾರ ನಡೆದಿದೆ.
ಸಂತ್ರಸ್ತ ಅಶೋಕ್ ಸಾಕೇತ್ ಎಂಬ ದಲಿತ ಕಟ್ಟಡ ಕಾರ್ಮಿಕರೊಬ್ಬರು ತಾನು ಮಾಡಿದ ಕೂಲಿಗೆ ವೇತನ ನೀಡುವಂತೆ ಮಾಲೀಕ ಗಣೇಶ್ ಮಿಶ್ರಾ ಎಂಬಾತನನ್ನು ಕೇಳಿದ್ದಾರೆ. ಆದರೆ ಆತ ಕತ್ತಿಯಿಂದ ಕೈ ಕತ್ತರಿಸಿ ಜಾತಿಕ್ರೌರ್ಯ ಮೆರೆದಿದ್ದಾರೆ. ನಂತರ ಸಂತ್ರಸ್ತರನ್ನು ರೇವಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ. ಕತ್ತರಿಸಲ್ಪಟ್ಟ ಅಂಗವನ್ನು ದೇಹಕ್ಕೆ ಮರುಜೋಡಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗುವುದೇ ಇಲ್ಲವೇ ಎಂಬುದನ್ನು ಸದ್ಯಕ್ಕೆ ಹೇಳಲಾಗುವುದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಗಣೇಶ್ ಮಿಶ್ರಾನನ್ನು ಬಂಧಿಸಲಾಗಿದೆ. ಕೊಲೆ ಯತ್ನ ಮತ್ತು ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶನಿವಾರ ಬೆಳಿಗ್ಗೆ 11.30ರ ಸಮಯಕ್ಕೆ ಸಂತ್ರಸ್ತ ಅಶೋಕ್ ಸಾಕೇತ್ ತನ್ನ ಸಹೋದ್ಯೊಗಿ ಸತ್ಯೇಂದ್ರ ಜೊತೆಗೆ ಮಾಲೀಕರ ಮನೆಗೆ ಹೋಗಿ ತಮ್ಮ ಪಾಲಿನ ವೇತನ ಕೇಳಿದ್ದಾರೆ. ಅವರು ಪಿಲ್ಲರ್ ಮತ್ತು ಬೀಮ್ಸ್ ಗಳನ್ನು ನಿರ್ಮಿಸಿಕೊಟ್ಟಿದ್ದರು. ಅದಕ್ಕಾಗಿ 15,000 ಚಾರ್ಜ್ ಮಾಡಿದ್ದರು. ಆದರೆ ಆರೋಪಿ ಗಣೇಶ್ ಮಿಶ್ರಾ ಕೇವಲ 6,000 ಕೊಡಲು ಮುಂದಾಗಿದ್ದರು. ಆಗ ಮಾತಿಗೆ ಮಾತು ಬೆಳೆದಿದೆ. ಆಗ ಹಣ ಕೊಡುವುದಾಗಿ ಮನೆ ಒಳಗೆ ಹೋದ ಗಣೇಶ್ ಕತ್ತಿ ತಂದು ತಲೆಗೆ ಹಿಡಿದಿದ್ದಾರೆ. ತಪ್ಪಿಸಿಕೊಳ್ಳಲು ಹೋದಾಗ ಅಶೋಕ್ ಕೈ ಕತ್ತರಿಸಿದ್ದಾರೆ ಎಂದು ಅಶೋಕ್ ಸಹೋದರ್ ಶಿವಕುಮಾರ್ ಹೇಳಿಕೆ ಆಧರಿಸಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಕೂಡಲೇ ಅಶೋಕ್ರವರನ್ನು ಸತ್ಯೇಂದ್ರ ತನ್ನ ಬೈಕ್ನಲ್ಲಿ ಪೊಲೀಸ್ ಸ್ಟೇಷನ್ಗೆ ಕರೆದೊಯ್ದು, ನಂತರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ವೈದ್ಯರು ಸಂಜಯ್ ಗಾಂಧಿ ಮೆಮೋರಿಯಲ್ ಹಾಸ್ಪಿಟಲ್ಗೆ ಕರೆದೊಯ್ಯಲು ಶಿಫಾರಸ್ಸು ಮಾಡಿದ್ದರು.
ಇನ್ನೊಂದು ಕಡೆ ಪೊಲೀಸರು ನಾಲ್ಕು ತಂಡಗಳನ್ನು ರಚಿಸಿ ಆರೋಪಿ ಮತ್ತು ಕತ್ತರಿಸಿದ ಕೈ ಅನ್ನು ಪತ್ತೆ ಹಚ್ಚಲು ಶುರು ಮಾಡಿದ್ದರು. ಆರೋಪಿ ಗಣೇಶ್ ಮಿಶ್ರಾ ಬ್ಯಾಗ್ ಪ್ಯಾಕ್ ಮಾಡಿಕೊಂಡು ಸ್ವಲ್ಪ ಹಣ ತೆಗೆದುಕೊಂಡು ತನ್ನ ಬೈಕ್ನಲ್ಲಿ ಪರಾರಿಯಾಗಿದ್ದನು. ಅವನ ಸಹೋದರರಾದ ರತ್ನೇಶ್ ಮಿಶ್ರಾ ಮತ್ತು ಕೃಷ್ಣ ಕುಮಾರ್ ಎಂಬುವವರು ರಕ್ತವನ್ನು ತೊಳೆದು ಅವನು ಪರಾರಿಯಾಗಿಲು ಸಹಕರಿಸಿದ್ದರು. ಅಲ್ಲದೇ ತುಂಡಾದ ಕೈಯನ್ನು ತಿಪ್ಪೆಗೆ ಎಸೆದಿದ್ದರು.
ನಂತರ ಪೊಲೀಸರು ಬಹಳಷ್ಟು ಹುಡುಕಾಡಿದ ನಂತರ ತುಂಡಾದ ಕೈ ಸಿಕ್ಕಿದೆ. ಕೂಡಲೇ ಆಂಬುಲೆನ್ಸ್ನಲ್ಲಿ ಸಂಜಯ್ ಗಾಂಧಿ ಆಸ್ಪತ್ರೆಗೆ ಕಳಿಸಿಕೊಟ್ಟಿದ್ದಾರೆ. ವೈದ್ಯರು ಎರಡು ಗಂಟೆಗಳ ಶಸ್ತ್ರಚಿಕಿತ್ಸೆಯ ನಂತರ ಮರು ಜೋಡಣೆ ಮಾಡಿದ್ದಾರೆ. ಆದರೆ ಈಗಲೇ ಏನನ್ನು ಹೇಳಲಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಆರೋಪಿ ಗಣೇಶ್ ಮಿಶ್ರಾನ ತಂದೆ ರಾಘವೇಂದ್ರ ಮಿಶ್ರಾ ನೀಡಿದ ಮಾಹಿತಿಯ ಮೇರೆಗೆ ಪೊಲೀಸರು ಮೂವರ ಆರೋಪಿಗಳನ್ನು ಬಂಧಿಸಿದ್ದಾರೆ. ರಾಘವೇಂದ್ರ ಮಿಶ್ರಾ ಮುಂಬರುವ ಸ್ಥಳೀಯ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಭಾಗವಹಿಸಲು ಸಿದ್ದತೆ ನಡೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳ ಮೇಲೆ ಐಪಿಸಿ ಸೆಕ್ಷನ್ 307 ಮತ್ತು 201ರ ಅಡಿಯಲ್ಲಿ, ಶಶಸ್ತ್ರ ಕಾಯ್ದೆ ಅಡಿಯಲ್ಲಿಯೂ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯನ್ನು ದಲಿತ ಸಂಘಟನೆಗಳು, ಅಂಬೇಡ್ಕರ್ವಾದಿಗಳು ಕಟು ಶಬ್ದಗಳಲ್ಲಿ ಖಂಡಿಸಿದ್ದಾರೆ. “ಸಮಾಜದಲ್ಲಿ ಜಾತಿ ಇಲ್ಲ ಎಂದು ವಾದ ಮಾಡುವವರು ಕಣ್ತೆರೆದು ನೋಡಬೇಕು” ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ತ್ರಿಪುರದಲ್ಲಿ ನಟಿ, ಟಿಎಂಸಿ ನಾಯಕಿ ಸಯೋನಿ ಘೋಷ್ ಮೇಲೆ ಹಲ್ಲೆ, ಬಂಧನ – ಪ್ರತಿಭಟನೆಗೆ ಸಜ್ಜು