Homeಅಂಕಣಗಳುಜಾತಿ ಪದ್ಧತಿಯೇ ಜಾಣ ಮೀಸಲಾತಿಯಲ್ಲವೆ?

ಜಾತಿ ಪದ್ಧತಿಯೇ ಜಾಣ ಮೀಸಲಾತಿಯಲ್ಲವೆ?

- Advertisement -
- Advertisement -

ನಾಡಿನ ಹಿರಿಯ ಸಾಹಿತಿಗಳಾದ ಲಕ್ಷ್ಮಿಪತಿ ಕೋಲಾರ ಇವರು ಈ ಹಿಂದೆ ಮಂಡಲ್ ವರದಿ ಜಾರಿಯಾದಾಗ ಅದರ ವಿರುದ್ಧ ಬೀದಿಗಿಳಿದು ಹೋರಾಟ ಮಾಡಿದ ಮೇಲ್ಜಾತಿಗಳು ಮತ್ತು ಮೇಲ್ಜಾತಿಗಳಿಗೆ ಬೆಂಬಲ ಸೂಚಿಸಿದ ಹಿಂದುಳಿದ ಜಾತಿಗಳ ಮೇಲ್ಮಧ್ಯಮ ವರ್ಗಗಳನ್ನುದ್ದೇಶಿಸಿ ಬರೆದ ಲೇಖನವಿದು. ಅಂದು ಪ್ರತಿಭೆ ಎಂಬ ಪದವನ್ನು ಹಿಡಿದು ಮಂಡಲ್ ಮೀಸಲಾತಿ ವಿರುದ್ಧ ಮಾತಾಡಿದವರಿಗೆ ಲಕ್ಷ್ಮಿಪತಿಯವರು ಪ್ರಶ್ನೆಗಳ ಮೂಲಕವೇ ಉತ್ತರವಿತ್ತಿದ್ದರು. ಈ ಲೇಖನವನ್ನು ಅಹಿಂದ ಪ್ರಕಾಶನದಿಂದಲೂ ಪ್ರಕಟಿಸಲಾಗಿತ್ತು. ಇಂದಿಗೂ ಈ ಲೇಖನ ಪ್ರಸ್ತುತವಾಗಿರುವ ಕಾರಣ ಇಲ್ಲಿ ಪ್ರಕಟಿಸಲಾಗಿದೆ.

ಮೀಸಲಾತಿ ಪರ ವಾದಗಳಿಗೆ ಇಳಿಯತೊಡಗಿದೊಡನೆ ಅವರು ಪ್ರಯೋಗಿಸುವ ಅತ್ಯಂತ ಸವಕಲು ಅಸ್ತ್ರ ‘ಪ್ರತಿಭೆ’ ಎಂಬ ಪದ. ಇಲ್ಲಿಂದಲೇ ಶುರುವಾಗಲಿ ನಮ್ಮ ವಾದವೂ. ಪ್ರತಿಭೆ ಎಂಬುದು ಯಾವುದೋ ಒಂದು ಜಾತಿಯ ಗುತ್ತಿಗೆಯಾಗಿದೆಯೇನು? ಪ್ರತಿಭೆ, ಆಲೋಚನೆಗಳೆಂಬುದು ಕೂಡ ಯಾರಪ್ಪನ ಮನೆಯ ಸ್ವತ್ತಲ್ಲವಲ್ಲ? ಆದರೂ ಮೀಸಲಾತಿಯ ವಿರುದ್ಧ ಮೈಪರಚಿಕೊಳ್ಳುತ್ತಿರುವ ಮೇಲ್ಜಾತಿ ಮನಸುಗಳ ವಾದ ಗಮನಿಸಿದರೆ ‘ಈ ದೇಶದ ಬಹುಸಂಖ್ಯಾತ ದಲಿತ ಮತ್ತು ಹಿಂದುಳಿದ ಜಾತಿಗಳ ಜನರಿಗೆ ಪ್ರತಿಭಟನೆಯೇ ಇಲ್ಲ; ಅವರು ವೈದ್ಯಕೀಯದಂತಹ ವೃತ್ತಿಗಳಿಗೆ ಅನರ್ಹರು’ ಎಂದು ಪರೋಕ್ಷವಾಗಿ ಈ ದೇಶದ ಮುಕ್ಕಾಲು ಭಾಗದ ಜನಸಮುದಾಯವನ್ನು ಜಾತಿನೆಲೆಯ ಕಾರಣಕ್ಕಾಗಿ ಅವಮಾನಿಸುತ್ತಿದ್ದಾರೆ ಎನಿಸುವುದಿಲ್ಲವೆ? ದೇಶದ ಜನರನ್ನು ಅವಮಾನಿಸುವುದೆಂದರೆ ದೇಶವನ್ನೇ ಅಪಮಾನಿಸಿದಂತಲ್ಲವೆ? ಮೀಸಲಾತಿಯೆಂಬ ಸಾಮಾಜಿಕ ನ್ಯಾಯ ರಕ್ಷಣೆಯಲ್ಲಿ ಅನರ್ಹರಿಗೂ, ಪ್ರತಿಭಾಹೀನರಿಗೂ ಅವಕಾಶ ನೀಡಿಬಿಡುತ್ತಿದ್ದಾರೆಂದು ಭಾವಿಸುವುದರ ಆಳದಲ್ಲಿ ತಾವಷ್ಟೆ ಪ್ರತಿಭಾವಂತರೆಂಬ ಮೇಲ್ಜಾತಿಯ ಇಂಗಿತಗಳು, ಅಹಮ್ಮಿಕೆಯೂ ಅಡಗಿಲ್ಲವೆ?

ವಸಂತಕುಮಾರ್ ಮೊಕದ್ದಮೆಯ ವಿಚಾರಣೆಯಲ್ಲಿ ಸುಪ್ರೀಂಕೋರ್ಟಿನ ನ್ಯಾಯಮೂರ್ತಿಗಳು ‘ಅಸಮಾನ ಅವಕಾಶಗಳನ್ನು ಪಡೆಯುತ್ತಿರುವ ವ್ಯವಸ್ಥೆಯಲ್ಲಿ ಪ್ರತಿಭೆಗೆ ಅನ್ಯಾಯವೆಂಬ ಮಾತು ಆಡುವುದೇ ಅನ್ಯಾಯ’ ಎಂದಿರುವರಲ್ಲದೆ ‘ಯಾವುದೇ ಸೌಲಭ್ಯಗಳಿಲ್ಲದ ಗ್ರಾಮೀಣ ಪರಿಸರದಲ್ಲಿ ಬೆಳೆಯುವ ಮಕ್ಕಳು ಕಾನ್ವೆಂಟ್ ಶಿಕ್ಷಣ ಪಡೆದ, ಶ್ರೀಮಂತರ ಹಾಗೂ ಸಾಮಾಜಿಕವಾಗಿ ಉನ್ನತ ಶ್ರೇಣಿಗೆ ಸೇರಿದ ಮಕ್ಕಳ ಜೊತೆ ಸ್ಪರ್ಧಿಸುವುದು ನಿಜಕ್ಕೂ ಅಸಾಧ್ಯ. ಇಂತಹ ಎರಡು ವಿರೋಧಾಬಾಸದ ಪರಿಸರದ ಮಕ್ಕಳು ಸಮಾನವಾಗಿ ಅಂಕಗಳನ್ನು ಗಳಿಸಬೇಕೆಂದು ನಿರೀಕ್ಷಿಸುವುದು ಅಸಂಬದ್ಧ’ ಎಂಬ ಉನ್ನತ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಸುಪ್ರೀಂಕೋರ್ಟಿನ ಮತ್ತೊಬ್ಬ ನಿವೃತ್ತ ನ್ಯಾಯಮೂರ್ತಿಗಳು, ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ಶಿಫಾರಸ್ಸು ಮಾಡಿ ವರದಿ ನೀಡಿರುವವರು ಆದ ನ್ಯಾಯಮೂರ್ತಿ ಓ. ಚಿನ್ನಪ್ಪರೆಡ್ಡಿಯವರು ‘ಪ್ರತಿಭೆಗೆ ಅನ್ಯಾಯ’ ಎಂಬ ಬೀದಿ ಬೊಬ್ಬೆಗಳಿಗೆ ಸರಿಯಾದ ಉತ್ತರವನ್ನು ಹೀಗೆ ನೀಡಿದ್ದಾರೆ ‘ಭಾರತದ ಕೆಲವೇ ಸಮುದಾಯಗಳು ಇಂದು “ಪ್ರತಿಭೆಗೆ ಮನ್ನಣೆ ದೊರಕಬೇಕು” ಎಂದು ಕೂಗು ಹಾಕಲು ಅಸಾಧ್ಯವಾಗಿದ್ದೇ ಇಲ್ಲಿನ ದುರ್ಬಲ ವರ್ಗಗಳಿಂದಾಗಿ. ಯಾಕೆಂದರೆ ಈ ಕೆಲವೇ ಸಮುದಾಯಗಳಲ್ಲಿ ಕಾಣುವ ಪ್ರತಿಭೆ ಈ ದುರ್ಬಲ ವರ್ಗಗಳ ಶ್ರಮದ ಮೊತ್ತ. ಹೀಗಿರುವಾಗ ಭಾರತದ ದುರ್ಬಲ ವರ್ಗಗಳಲ್ಲಿ ಬೌದ್ಧಿಕ ದಾರಿದ್ರ್ಯ ತುಂಬಿದೆ ಎಂದು ಅವಹೇಳನ ಮಾಡುವುದು ಪ್ರತಿಷ್ಠಿತ ಸಮುದಾಯಗಳ ಅಹಂಕಾರ ಹಾಗೂ ಪೊಳ್ಳು ಪ್ರತಿಷ್ಠೆಗೆ ಸಂಕೇತವಾಗುತ್ತದೆ’.

ಮಂಡಲ್ ವರದಿಯಲ್ಲಿನ ಅಂಕಿಅಂಶಗಳ ಪ್ರಕಾರ ಈ ದೇಶದ ಅತ್ಯುನ್ನತ ಹುದ್ದೆಗಳಾದ ಮುಖ್ಯಮಂತ್ರಿಗಳು, ರಾಜ್ಯಪಾಲರು, ಮುಖ್ಯ ಕಾರ್ಯದರ್ಶಿಗಳು, ಯೋಜನಾಧಿಕಾರಿಗಳು, ವಿಭಾಗ ಮುಖ್ಯಸ್ಥರು, ಐಎಎಸ್, ಐಪಿಎಸ್, ಐಆರ್‍ಎಸ್, ಐಎಫ್‍ಎಸ್‍ನಂತಹ ಅಧಿಕಾರಿಗಳ ಶೇಕಡ 74ರಷ್ಟು ಸ್ಥಾನಗಳಲ್ಲಿ ಶೇ.4ರಷ್ಟಿರುವ ಬ್ರಾಹ್ಮಣರು ತುಂಬಿಕೊಂಡಿದ್ದಾರೆ, ಇನ್ನುಳಿದ ಶೇ.26ರಷ್ಟು ಹುದ್ದೆಗಳನ್ನು ಶೇ.96ರಷ್ಟು ಜನಸಮುದಾಯಗಳು ಹಂಚಿಕೊಂಡಿವೆ. ಇದು ಆಕಾಶ ಪಾತಾಳದಂತಹ ಅಸಮಾನತೆ. ಹೀಗಿದ್ದು, ತಮ್ಮನ್ನು ಪ್ರತಿಭಾವಂತರೆಂದು ಸ್ವಯಂಘೋಷಿಸಿಕೊಂಡಿರುವವರೆ ಹೀಗೆ ಈ ದೇಶವನ್ನು 50 ವರ್ಷಗಳಿಗೂ ಹೆಚ್ಚು ಕಾಲದಿಂದ ಆಳುತ್ತಿದ್ದರು. ಭಾರತಕ್ಕೆ ದಾರಿದ್ರ್ಯ, ಅಸಮಾನತೆ, ಹಸಿವು, ನಿರುದ್ಯೋಗ, ಅಶಾಂತಿಯ ಭಯಾನಕ ಸ್ಥಿತಿ ಬಂದದ್ದಾದರೂ ಹೇಗೆ? ಮತ್ತು ಯಾಕೆ? ಅಂತಹ ಪ್ರತಿಭಾವಂತರೇ ಆಳಿದರೂ ಈ ದೇಶ ಯಾಕಿಷ್ಟು ಅಧೋಗತಿಗಿಳಿಯಿತು. ಇದು ನಿಚ್ಚಳವಾಗಿ ಬ್ರಾಹ್ಮಣ ಪ್ರತಿಭೆಯ ಅಸಮರ್ಥತೆಯ ಫಲ ಮತ್ತು ಸೋಲುಗಳೇ ಅಲ್ಲವೆ? ಭಾರತದಂತಹ ಬೃಹತ್ ಸಮಾಜವೊಂದರ ಜನರ ಬದುಕನ್ನು ಕನಿಷ್ಠ ಸಹನೀಯವಾಗಿಸಲು ಕೂಡ ವಿಫಲವಾದ ಈ ಮೇಲ್ಜಾತಿಗಳ ಬುದ್ಧಿವಂತಿಕೆ ಎಂಬುದು ನಿಸ್ಸಂಶಯವಾಗಿಯೂ ವ್ಯರ್ಥ ಬುದ್ಧಿವಂತಿಕೆ ಮತ್ತು ಅಂತಹ ಪ್ರತಿಭೆ ಗೊಡ್ಡು ಪ್ರತಿಭೆ ಮಾತ್ರ ಆಗಿರಬಲ್ಲದು. ನಿಜವಾದ ಪ್ರತಿಭೆಯೆಂದು ಚಿಗುರದಂತೆಯೂ, ತನ್ನ ಸ್ಥಾನ-ಅಧಿಕಾರಗಳು ಕೈತಪ್ಪದಂತೆಯೂ ಕೇವಲ ಕ್ಷುಲ್ಲಕ ಸಂಚುಗಳಿಗೆ ಬಹುತೇಕ ವಿನಿಯೋಗಗೊಂಡ ಈ ವ್ಯವಸ್ಥಿತ ವಿನಾಶಕಾರಿ ಆಲೋಚನೆಗಳು ಹಿಟ್ಲರನ ಆರ್ಯ ಜನಾಂಗವಾದಿ ನಾಝಿ ಇಸಂಗಿಂತಲೂ ಹೆಚ್ಚು ಅಪಾಯಕಾರಿ ಎನಿಸುತ್ತದೆ.

ಗೆಳೆಯ ಮತ್ತು ದಲಿತ ಕವಿಯಾದ ಗೊಲ್ಲಹಳ್ಳಿ ಶಿವಪ್ರಸಾದ್ ದೆಹಲಿ ಮತ್ತು ಬೆಂಗಳೂರಿನ ವೈದ್ಯಕೀಯ ವಿದ್ಯಾರ್ಥಿಗಳ ಹಾಗೆ ಮೇಧಾವಿ ಅಲ್ಲವಾದರೂ ಆತನ ಮುಗ್ಧತೆ, ಘನತೆ ಮತ್ತು ಸರಳ ವಿವೇಕ ಮೇಲ್ಜಾತಿಗಳ ಕೂಗಾದ ಪ್ರತಿಭೆಗೇ ಅನ್ಯಾಯವೆಂಬುದರ ಕುರಿತು ಹಾಡಿನ ಮೂಲಕ ಹೀಗೆ ಪ್ರಶ್ನಿಸುತ್ತೆ: ತುಟಿ ಬಿಚ್ಚಿದರೆ ಪ್ರತಿಭೆಯೆನ್ನುವರು! ಪ್ರತಿಭೆಗೇ ಪ್ರಾಧಾನ್ಯವೆನ್ನುವರು! ಪ್ರತಿಭೆ ತೋರಿದ ಏಕಲವ್ಯನ ಬೆರಳು ಕೊಯ್ದವರು ಯಾರಣ್ಣ?’ ಬೆಂಗಳೂರಿನ ಪ್ರತಿಭಾವಂತ ವೈದ್ಯಕೀಯ ವಿದ್ಯಾರ್ಥಿಗಳ ಬಳಿಯೇನಾದರೂ ಈ ಪ್ರಶ್ನೆಗೆ ಉತ್ತರದ ಮದ್ದಿದೆಯೇ? ಬೆಸ್ತನಾದ ವ್ಯಾಸ, ಬೇಡನಾದ ವಾಲ್ಮೀಕಿ, ಕುರುಬನಾದ ಕಾಳಿದಾಸನಿಂದ ಹಿಡಿದು ಅಂಬೇಡ್ಕರ್‍ವರೆಗೂ ಬಂದ ಅನೇಕ ಪ್ರತಿಭೆಗಳು ಮೇಲ್ಜಾತಿಯ ಇಕ್ಕಟ್ಟು ಮನಸುಗಳ ನಡುವೆಯೂ ಅರಳಿದ ಕೆಳಜಾತಿಯ ವ್ಯಕ್ತಿತ್ವಗಳೇ ಆಗಿಲ್ಲವೇನು? ಈ ಕೆಳಜಾತಿಗಳ ಪ್ರತಿಭೆ, ವಿದ್ವತ್ತು, ಪಾಂಡಿತ್ಯಗಳನ್ನು ಯಾರಿಗೆ ಅಲ್ಲಗಳೆಯಲು ಸಾಧ್ಯ? ಕಲ್ಲುಲೋಹದ ಶಿಲ್ಪಗಳನ್ನು ಕೆತ್ತಿದವರು, ಕುಶಲಕಲೆಯ ಗುಡಿಗೋಪುರಗಳು, ಅರಮನೆಗಳನ್ನು ನಿರ್ಮಿಸಿದವರು, ಸಂಗೀತ ನೃತ್ಯ ಕಲೆಗಳನ್ನು ಸಾವಿರಾರು ಪೋಷಿಸಿಕೊಂಡು ಬಂದವರು, ಆಭರಣಗಳಿಂದ ಆಯುಧಗಳವರೆಗೂ ಚಿನ್ನ-ಬೆಳ್ಳಿ-ಹಿತ್ತಾಳೆ-ಕಬ್ಬಿಣದ ಸಾಧನಗಳನ್ನು ತಯಾರಿಸಿದವರು, ಮಡಿವಾಳ, ಕ್ಷೌರಿಕ, ಮೇದಾರರ ವೃತ್ತಿಗಳು, ಇಂದಿಗೂ ರಸ್ತೆಗಳನ್ನು ನಿರ್ಮಿಸುವವರು, ಹತ್ತಿ ರೇಷ್ಮೆಗಳಿಂದ ವಸ್ತ್ರಗಳನ್ನು ನೇಯುವವರು, ಕೆಳಜಾತಿಯ ಕೃಷಿಕಾರ್ಮಿಕರು, ಬಾವಿಕೆರೆಗಳನ್ನು ತೋಡುವವರು, ಜನಪದ ಕಲೆ ಸಾಹಿತ್ಯಗಳನ್ನು ಸೃಷ್ಟಿಸಿದವರು ಪ್ರತಿಭಾವಂತರಲ್ಲವೆ?

ಇವೆಲ್ಲಾ ಪ್ರತಿಭೆಗಳಲ್ಲವೆಂದರೆ ಮತ್ಯಾವುದನ್ನು ಪ್ರತಿಭೆ ಎನ್ನಲಾದೀತು? ಪ್ರತಿಭೆಯ ಮಾನದಂಡಗಳಾದರೂ ಯಾವುವು? ಬಹುಸಂಖ್ಯಾತ ಸಮುದಾಯಗಳನ್ನು ಎಂದಾದರೂ ಹೊಟ್ಟೆ, ಬಟ್ಟೆ, ಸೂರಿನ ಮೂಲಕ ಮುನ್ನಡೆಸಿದಂತಹ ಮೇಲ್ಜಾತಿಗಳ ಪ್ರತಿಭೆಗೆ ಈ ದೇಶದಲ್ಲಿ ಚರಿತ್ರೆಯಾದರೂ ಎಲ್ಲಿದೆ?

ಜಾತಿಪದ್ಧತಿ ಎಂಬುದೇ ಈ ದೇಶದಲ್ಲಿ ಜಾಣ ಮೀಸಲಾತಿ! ಇಂದಿಗೆ 170 ವರ್ಷಗಳ ಹಿಂದೆ ಮೆಕಾಲೆ ಎಲ್ಲರಿಗೂ ಶಿಕ್ಷಣ ಪದ್ಧತಿಯನ್ನು ಮುಕ್ತವಾಗಿಸುವವರೆಗೂ ಶಿಕ್ಷಣದಲ್ಲಿ 100 ಕ್ಕೆ 100 ರಷ್ಟು ಮೀಸಲಾತಿಯನ್ನು ಉಚ್ಚ ಕುಲಗಳವರೇ ಅನುಭವಿಸುತ್ತಿರಲಿಲ್ಲವೇ? 100 ಕ್ಕೆ 100 ರಷ್ಟು ರಾಜಕೀಯ ಅಧಿಕಾರವನ್ನು ಕ್ಷತ್ರಿಯರು, ಆರ್ಥಿಕ ವಹಿವಾಟನ್ನು ವೈಶ್ಯರು ಅನುಭವಿಸುತ್ತಾ ಉಳಿದ ಶೂದ್ರ ಕುಲಗಳ ಶ್ರಮದ ಕೆಲಸಗಳನ್ನು ತಲೆಬಗ್ಗಿಸಿ ಮಾಡುತ್ತಿರಲಿಲ್ಲವೇ? ಇದು 3000 ವರ್ಷಗಳಿಂದ ಮುಂದುವರೆದುಕೊಂಡೇ ಬಂದ ಜಾಣ ಜಾತಿ ಮೀಸಲಾತಿಯಲ್ಲವೇ? ಈ ಚಾರಿತ್ರಿಕ ಹುಳುಕಿಗೆ ಈಗಲಾದರೂ ಪರಿಹಾರ ಬೇಡವೆಂದರೆ ಹೇಗೆ? ಅದರೊಂದಿಗೆ ಮೀಸಲಾತಿಯನ್ನು ಈಗ ವಿರೋಧಿಸುತ್ತಿರುವ ಎಲ್ಲಾ ಮೇಲ್ಜಾತಿಗಳು ಹಿಂದೊಮ್ಮೆ ಅದರ ಎಲ್ಲಾ ಅನುಕೂಲತೆಗಳನ್ನು ಪಡೆದಿರುವವರೆ. ಬ್ರಿಟಿಷರ ವಿರುದ್ಧ ಇಂಗ್ಲಿಷ್ ಶಿಕ್ಷಣ ಪಡೆದಿದ್ದ ಭಾರತದ ಬ್ರಾಹ್ಮಣರು, ಮಿಲ್ಲರ್ ಆಯೋಗದ ಸಂದರ್ಭದಲ್ಲಿ ಬ್ರಾಹ್ಮಣರ ವಿರುದ್ಧ ಲಿಂಗಾಯತ, ಒಕ್ಕಲಿಗರು, ಹಾವನೂರು ಆಯೋಗದ ಸಂದರ್ಭದಲ್ಲಿ ಒಕ್ಕಲಿಗ, ಹಿಂದುಳಿದರ ವಿರುದ್ಧ ಎಲ್ಲಾ ಮೇಲ್ಜಾತಿಗಳು ಹಾಗೂ ಚಿನ್ನಪ್ಪರೆಡ್ಡಿ ವರದಿ ಮತ್ತು ಮಂಡಲ್ ವರದಿಗಳ ವಿರುದ್ಧ ಲಿಂಗಾಯತ-ಒಕ್ಕಲಿಗರನ್ನು ಸೇರಿಕೊಂಡಂತೆ ಎಲ್ಲಾ ಮೇಲ್ಜಾತಿಗಳು ಹೋರಾಡಿದ ಮೀಸಲಾತಿ ಸಂಘರ್ಷದ ಇತಿಹಾಸವೇ ಈ ದೇಶದಲ್ಲಿದೆ. ಹಿಂದೆಲ್ಲ ಸಾಮಾಜಿಕ ನ್ಯಾಯವೆನಿಸಿದ್ದ ಮೀಸಲಾತಿ ಕೆಳಜಾತಿಗಳಿಗೆ ವಿಸ್ತರಿಸಿದೊಡನೆ ಅನ್ಯಾಯ ಹೇಗಾಗಿ ಬಿಟ್ಟಿತು?

ಈ ಚಾರಿತ್ರಿಕ ಸತ್ಯಗಳ ಹಿನ್ನೆಲೆಯಲ್ಲಿ ಜಾತಿನಾಶಕ್ಕೆ ಜಾತಿ ಆಧಾರಿತ ಮೀಸಲಾತಿಯೊಂದೇ ಮದ್ದು. ಇದರಾಚೆಗಿನದೆಲ್ಲ ಕಲಿತವರ ಕಂದಾಚಾರ. ಹಿಂದುಳಿದ, ದಲಿತ ವರ್ಗಗಳ ಬದುಕಲ್ಲಿ ಮೇಲ್ಜಾತಿಗಳವರು ಕಹಿ ಬಿತ್ತಿದರೆ ಅದು ಅವರಿಗೇ ಮುಂದೆ ವಾಪಾಸಾಗಲಿದೆ. ಬಿತ್ತಿದ್ದಂತೆ ಬೆಳೆಯಲ್ಲವೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...