Homeಮುಖಪುಟಈ ಬ್ರಹ್ಮಾಂಡದಾಗ ಇರೋ 200 ದೇಶಗಳಲ್ಲಿ 170 ದೇಶದೊಳಗ ಮೀಸಲಾತಿ ಐತಿ. ಇದರ ಬಗ್ಗೆ ನಿಮಗೆ...

ಈ ಬ್ರಹ್ಮಾಂಡದಾಗ ಇರೋ 200 ದೇಶಗಳಲ್ಲಿ 170 ದೇಶದೊಳಗ ಮೀಸಲಾತಿ ಐತಿ. ಇದರ ಬಗ್ಗೆ ನಿಮಗೆ ಗೊತ್ತೇನು?

ಎಲ್ಲೆಲ್ಲಿ ಪ್ರಜಾಪ್ರಭುತ್ವ ಅದನೋ ಅಲ್ಲೆಲ್ಲಾ ಮೀಸಲಾತಿ ಅದ. ಅದರ ಹೆಸರು ಬ್ಯಾರೆ ಬ್ಯಾರೆ ಇರಬಹುದು ಅಷ್ಟ. ಅಮೆರಿಕಾದ ಅದನ್ನು ಧನಾತ್ಮಕ ತಾರತಮ್ಯ ಅಂತಾರ. ಯುರೋಪಿನ್ಯಾಗ ಸಕಾರಾತ್ಮಕ ಕ್ರಿಯೆ ಅಂತಾರ, ಅನೇಕ ದೇಶದೊಳಗ ಕೋಟಾ ಅಂತಾರ. ಭಾರತದಾಗ ಸರಳವಾಗಿ ಮೀಸಲಾತಿ ಅಂತೇವಿ.

- Advertisement -
- Advertisement -

ಸುದ್ದಿಯೇನೇ ಮನೋಲ್ಲಾಸಿನಿ – ಐ.ವಿ ಗೌಲ್‌

ಸುಪ್ರೀಂಕೋರ್ಟು ಮೊನ್ನೆ ಮೊನ್ನೆ ಫ್ರೆಷ್ ಆಗಿ ಒಂದು ಟಪ್ಪಣಿ ಕೊಟ್ಟದ. ಅದು ಎಷ್ಟು ಬಿಸಿ ಬಿಸಿ ಸುದ್ದಿ ಅಂದರ ಅದನ್ನ ಬರೆದ ಕಾಗದ ಇನ್ನೂ ಸುಡು -ಸುಡು ಅನ್ನಲಿಕ್ಕೆ ಹತ್ತೇದ.

ಅದೇನಪಾ ಅಂದರ ಮೀಸಲಾತಿ ಅಂದರ ನಾಗರಿಕರ ಮೂಲಭೂತ ಹಕ್ಕೇನಲ್ಲ. ಅದು ಸರಕಾರದ ಜನ ಕಲ್ಯಾಣ ನೀತಿ. ಅದನ್ನು ಸರಕಾರಗಳು ಕೊಟ್ಟರ ಕೊಡಬಹುದು, ಇಲ್ಲಾಂದರ ಇಲ್ಲಾ. ಅವರ ಮ್ಯಾಲೆ ನೀವು ಈ ಸೌಲತ್ತು ಕೊಡಲೇಬೇಕು ಅಂತ ದಬಾಯಿಸಲಿಕ್ಕೆ ಬರಂಗಿಲ್ಲ ಅಂತ.

ಅದು ಅಂತಿಮ ತೀರ್ಪು ಅಲ್ಲ. ಅದಕ್ಕ ಸರಕಾರ ಇನ್ನೂ ಪ್ರತಿಕ್ರಿಯೆ ಕೊಟ್ಟಿಲ್ಲ. ಅದು ಏನಂತ ಪ್ರತಿಕ್ರಿಯೆ ಕೊಡತದ ಅನ್ನೋದರ ಮ್ಯಾಲೆ ನಾವು ಪ್ರತಿಕ್ರಿಯೆ ಕೊಡೋಣಂತ. ಆದರ ಅದರ ಹಿನ್ನೆಲೆ ತಿಳದು ಕೊಳ್ಳೋಣ.

ಈಗ ಮೀಸಲಾತಿ ಅನ್ನೋದು ಏನು ಅಂತ ತಿಳಕೋಕಿಂತಾ ಮೊದಲ ಮೂಲಭೂತ ಹಕ್ಕು ಅಂದರೇನು ಅಂತ ತಿಳಿಯೋಣು. ಮೂಲಭೂತ ಹಕ್ಕು ಅಂದರ ಹುಟ್ಟಿನಿಂದ ಬಂದ ಹಕ್ಕು. ಅದರ ಸಲುವಾಗಿ ಏನೂ ವಿಶೇಷ ಮಸಲತ್ತು ಮಾಡಬೇಕಿಲ್ಲ. ಯಾ ಮನುಷಾ ನಾಗರಿಕ ಇರತಾನೋ ಅವನಿಗೆ ಸಹಜವಾಗಿ ಬಂದ ಬಿಡೋ ಹಕ್ಕುಗಳು ಮೂಲಭೂತ ಹಕ್ಕುಗಳು. ಕೆಲವು ಎಲ್ಲಾ ಮನುಷ್ಯರಿಗೂ ಬರತಾವು. ಅವಕ್ಕ ಮಾನವ ಹಕ್ಕುಗಳು ಅಂತ ಅನಸಿಗೋತಾವು.

ಇನ್ನು ಕೆಲವು ಬರೇ ನಾಗರಿಕರಿಗೆ ಮಾತ್ರ ಸಿಗೋವು. ಅವು ಕಾನೂನಿನಿಂದ ಮಾತ್ರ ಸಿಗೋವಂಥವು. ಅವನ್ನು ಆಯಾ ದೇಶದ ಸಂವಿಧಾನದ ಒಳಗ ಬರದು ಇಡಲಾಗುತ್ತದೆ. ಅದರಾಗ ಬರದಾರ ಅಂದ ಮಾತ್ರಕ್ಕ ಅವು ಸಿಗತಾವು ಅಂತ ಅಲ್ಲ. ಅವು ನಿಸರ್ಗದ ನಿಯಮಗಳು. ಮಾನವ ಅಂತ ಅನ್ನಿಸಿಕೊಂಡವನು ಹಿಂಗ ಇರಬೇಕು ಅಂತ ಮಾನವ ಇತಿಹಾಸದ ಜೀವನಚಕ್ರದ ಅಲ್ಲಲ್ಲಿ ನಿಂತು ತೋರಸತದ. ಅದನ್ನು ಸಂವಿಧಾನದಾಗ ದಾಖಲಿಸಲಾಗತದ. ಸಂವಿಧಾನಕ್ಕ ಅಷ್ಟು ಯಾಕ ಇಂಪಾರ್ಟನ್ಸ ಕೊಡತೀರಿ? ಅದು ಒಂದು ಬುಕ್ಕು ಅಷ್ಟ. ಅಂತ ಮಾತಾಡೋರನ್ನ ವಾದದಾಗ ಸೋಲಸಲಿಕ್ಕೆ ಆಗಂಗಿಲ್ಲ. ಆದರ ಅವರಿಗೆ ಒಂದು ಮಾತು ಹೇಳಬೇಕು. ಸಂವಿಧಾನ ಅನ್ನೋದು ಒಂದು ಬುಕ್ಕು ಅಷ್ಟ. ಆದರ ಅದು ಸಮಗ್ರ ಮಾನವ ಜೀವ ವಿಕಾಸದ ಬುದ್ಧಿಮತ್ತೆ ಹಾಗೂ ವಿವೇಕವನ್ನು ದಾಖಲಿಸಿರುವ ಬುಕ್ಕು. ಅದನ್ನು ಬದಲು ಮಾಡಿದರ, ಮುಚ್ಚಿ ಇಟ್ಟರ, ಬೀಸಿ ಒಗದರ ಸಹಿತ ಅದರಲ್ಲಿರುವ ವಿವೇಕ ಹಾಳಾಗುವುದಿಲ್ಲ ಅಂತ.

ಇನ್ನು ಭಾರತದ ಸಂವಿಧಾನದಲ್ಲಿ ಇರುವ ಸುಮಾರು 20 ಮೂಲಭೂತ ಹಕ್ಕುಗಳಲ್ಲಿ ಪ್ರಮುಖವಾದ್ದು ಸಮಾನತೆಯ ಹಕ್ಕು. ಅಸಮಾನತೆ ತಳಹದಿಯ ಮೇಲೆ ನಿಂತಿರುವ ಸಮಾಜದಲ್ಲೆ ಸಮಾನತೆ ಸ್ಥಾಪಿಸೋದು ಹೆಂಗ ಹಂಗಾರ?

ಈ ದೇಶದ ರಾಜಕೀಯದ ಮೇಲೆ ಹಿಂದೆಂದೂ ಇಲ್ಲದ ಪ್ರಭಾವ ಬೀರಿ ಬದಲಾವಣೆ ತಂದದ್ದು ಮಂಡಲ ವರದಿ. ಅದರ ಶಿಫಾರಸು ಪುಸ್ತಕ ನೋಡಿದವರು ಕಮ್ಮಿ. ಅದರ ಹೆಸರಿನಲ್ಲಿ ಹೋರಾಟ ಮಾಡಿದವರು ಹೆಚ್ಚು. ಅದು ಆ ಕಡೆನೂ ಇರಬಹುದು, ಈ ಕಡೆನೂ ಇರಬಹುದು.

ಆ ವರದಿಯ ಮೊದಲ ಪುಟದ ಮೇಲೆ ಒಂದು ಮಾತು ಬರದದ. ಸಾವಿರ ವರ್ಷಕ್ಕೂ ಸಲ್ಲುವ ಮಾತು ಅದು. “ಅಸಮಾನನನ್ನು ಸಮಾನನ ಜೊತೆ ಸೇರಿಸಿ ನೋಡುವುದು, ಅಸಮಾನತೆಯನ್ನು ಮುಂದುವರೆಸಿದಂತೆ”. ಅಸಮಾನತೆಯನ್ನು ಮುರಿಯಲಿಕ್ಕೆ ಬೇರೆ ಬೇರೆ ಪ್ರಯತ್ನ ಮಾಡಿ ಅವು ಯಾವುವೂ ಯಶಸ್ಸು ಗಳಿಸದೇ ಹೋದಾಗ ಪ್ರಾರಂಭವಾಗಿದ್ದು, ತಕ್ಕಮಟ್ಟಿಗೆ ಯಶಸ್ಸು ಗಳಿಸಿದ್ದು ಮೀಸಲಾತಿ.

ಅದರ ಬಗ್ಗೆ ಕೆಲವು ಮೂಲಭೂತ ವಿಷಯಗಳನ್ನು ತಿಳಿದುಕೊಳ್ಳೋಣ. ಈ ಬ್ರಹ್ಮಾಂಡದಾಗ 200 ದೇಶ ಅವ. ಅದರಾಗ ಸುಮಾರು 170 ದೇಶದೊಳಗ ಪ್ರಜಾಪ್ರಭುತ್ವ ಅದ. ಎಲ್ಲೆಲ್ಲಿ ಪ್ರಜಾಪ್ರಭುತ್ವ ಅದನೋ ಅಲ್ಲೆಲ್ಲಾ ಮೀಸಲಾತಿ ಅದ. ಅದರ ಹೆಸರು ಬ್ಯಾರೆ ಬ್ಯಾರೆ ಇರಬಹುದು ಅಷ್ಟ. ಅಮೆರಿಕಾದ ಅದನ್ನು ಧನಾತ್ಮಕ ತಾರತಮ್ಯ ಅಂತಾರ. ಯುರೋಪಿನ್ಯಾಗ ಸಕಾರಾತ್ಮಕ ಕ್ರಿಯೆ ಅಂತಾರ, ಅನೇಕ ದೇಶದೊಳಗ ಕೋಟಾ ಅಂತಾರ. ಭಾರತದಾಗ ಸರಳವಾಗಿ ಮೀಸಲಾತಿ ಅಂತೇವಿ.

ಬಿಲ್ ಕ್ಲಿಂಟನ್ನಿನ ಕಚೇರಿಯೊಳಗ ಕರಿಯರು, ಮೆಕ್ಸಿಕೋದವರು, ಏಷಿಯಾದವರು, ಮಹಿಳೆಯರು ಕಮ್ಮಿ ಇದ್ದಾರೆ ಅಂತ ಅಲ್ಲಿನ ಧನಾತ್ಮಕ ತಾರತಮ್ಯ ಆಯೋಗ ಅಲ್ಲಿನ ಅಧ್ಯಕ್ಷನಿಗೆ ನೋಟಿಸು ಕೊಟ್ಟಿತ್ತು.

ಯುರೋಪಿನಲ್ಲಿ ಪ್ರತಿ ಸರಕಾರಿ ಹಾಗೂ ಸಾರ್ವಜನಿಕ ಕಚೇರಿಗಳಲ್ಲಿ, ಎಲ್ಲಾ ರೀತಿಯ ಜಾತಿ- ಜನಾಂಗ- ಲಿಂಗದವರಿಗೆ ಅವಕಾಶ ನೀಡಲೇಬೇಕು ಅಂತ ಒಂದು ಕಾನೂನು ಇದೆ. ಅದನ್ನು ತಪ್ಪಿದರೆ ವಾಗ್ದಂಡನೆ ಹಾಗೂ ಇತರ ಶಿಕ್ಷೆ ಅದ. ಇದು ನಮ್ಮ ಭಾಳ ಜಾನ ಎನ್‍ಆರ್‍ಐಗಳಿಗೆ ಅನಿವಾಸಿ ಭಾರತೀಯರಿಗೆ ಗೊತ್ತಿರೋದಿಲ್ಲ. ಭಾರತ ಹಾಳಾಗಿರುವುದು ಮೀಸಲಾತಿಯಿಂದ ಅಂತ ಅವರು ಘಂಟಾಘೋಷವಾಗಿ ಹೇಳತಾರ. ತಮ್ಮ ಅಜ್ಞಾನದ ಬಲದಿಂದ ತಿಳಿದವರನ್ನ ಗೋಳು ಹೊಯ್ಕೊತಾರ.

ಯಾಕಂದರ ಅವರು ತಮಗೆ ರೊಟ್ಟಿ – ಬ್ಯಾಳಿ ನೀಡಿದ ದೇಶದ ಸರಕಾರ ಹಾಗೂ ಸಂವಿಧಾನದ ಬಗ್ಗೆ ಆಳವಾದ ಜ್ಞಾನ ಬೆಳೆಸಿಕೊಳ್ಳಲಿಕ್ಕೆ ಹೋಗಿರೋದಿಲ್ಲ.

ಅವರು ಅಲ್ಲಿ ಇರೋತನಕಾ ಪ್ರವಾಸಿಗಳ ಥರಾ ಇದ್ದು, ತಮಗೆ ಕೆಲಸ ನೀಡಿದ ದೇಶದ ಬಗ್ಗೆ ಅಭಿಮಾನ ಹಾಗೂ ತಮಗೆ ಜನ್ಮ ನೀಡಿದ ದೇಶದ ಬಗ್ಗೆ ತಾತ್ಸಾರ ಬೆಳೆಸಿಕೊಂಡಿರತಾರ.

ನೀವು ಹಳ್ಳಿಯೊಳಗ ಜಂಗೀ ನಿಕಾಲಿ ಕುಸ್ತಿ ನೋಡಿರಬಹುದು. ಹಂಗಂದರ ಯುದ್ಧದಲ್ಲಿ ಕೊನೆಯಾಗುವ ಕುಸ್ತಿ ಅಂತ ಅರ್ಥ. ಅದರಾಗ ಎದುರಾಳಿಗಳನ್ನ ಹೆಂಗ ಹುಡುಕತಾರ, ಹೆಂಗ ಅವರ ನಡುವೆ ಸ್ಪರ್ಧೆ ಹಚ್ಚತಾರ ಅಂತ ನೋಡಬೇಕು .ಅದು ಅವರ ವಯಸ್ಸು ಅಥವಾ ಅನುಭವದ ಮ್ಯಾಲೆ ಇರಂಗಿಲ್ಲ. ಅವರ ದೇಹದ ತೂಕದ ಮ್ಯಾಲೆ ಇರತದ. ಯಾಕಂದರ ಸ್ಪರ್ಧೆ ಅನ್ನೋದು ಸಮಾನರ ನಡುವೆ ಇರಬೇಕು ಅಂತ. ಒಲಂಪಿಕ್ಸನ್ಯಾಗ ನಮ್ಮ ಹೆಮ್ಮೆಯ ಹುಡುಗಿ ಮೇರಿ ಕೋಮ ಅಂತಿಮ ಸುತ್ತಿನ್ಯಾಗ ಯಾಕ ಸೋತು ಹೋದಳು ಅಂದರ ಅಕಿನ್ನ ತನಗಿಂತ ಹೆಚ್ಚು ತೂಕದ ಹುಡುಗಿಯೊಂದಿಗೆ ಹೊಡದಾಡಲಿಕ್ಕೆ ಹಚ್ಚಿದರು.

ನಮ್ಮ ಸಮಾಜದಾಗ ಅಸಮಾನತೆ ಸಾವಿರಾರು ವರ್ಷಗಳಿಂದ ಅದ. ಅದನ್ನ ಪ್ರಜಾಪ್ರಭುತ್ವದ ನಂತರ ಅಳಿಸಬೇಕು ಅಂದರ ಸರಳ ಇಲ್ಲ. ಆದರೂ ಪ್ರಯತ್ನ ಕೈಬಿಡಬಾರದು. ಅದರಾಗುನೂ ಆ ಅಸಮಾನತೆ ಮಾನವ ನಿರ್ಮಿತವಾದ್ದರಿಂದ ಅದನ್ನು ಮಾನವರೇ ಅಳಿಸಬೇಕು. ಸಮಾನತೆ ಮೂಲಭೂತ ಹಕ್ಕು ಅಂದರ ಅದನ್ನು ನಿವಾರಿಸಲು ಬೇಕಾಗುವ ಪರಿಕರಗಳು ಮೂಲಭೂತ ಹಕ್ಕು ಯಾಕ ಆಗಂಗಿಲ್ಲ? ಆ ಪರಿಕರಗಳನ್ನ ಕಸಗೊಂಡರ ಯಾವ ರೀತಿ ಸಮಾನತೆ ಸಾಧಿಸಲಿಕ್ಕೆ ಸಾಧ್ಯ ಅದ?

ಘನ ಸರಕಾರಗಳು ನ್ಯಾಯಾಧೀಶರ ಮುಂದ ಇಡುವ ವಾದಗಳಲ್ಲಿ ಈ ಮಾತುಗಳು ಬರಬಹುದು ಅಂತ ಆಶೆ ಮಾಡೋಣ. ಪ್ರಾರ್ಥನೆಗಿಂತ ದೊಡ್ಡದು ಯಾವುದೂ ಇಲ್ಲ ಅನ್ನೋ ಮಾತನ್ನು ಬಂಗಾಳದ ಭಕ್ತಿ ಸಂತ ಕೃಷ್ಣ ಚೈತನ್ಯ ಹೇಳಿದರು. ಸದ್ಯಕ್ಕಂತೂ ನಮಗ ಪ್ರಾರ್ಥನೆ ಮಾಡೋದು ಬಿಟ್ಟು ಬ್ಯಾರೆ ದಾರಿನ ಇಲ್ಲ. ಅದು ದೇವರಿಗೆ ಇರಬಹುದು, ಸರಕಾರದಲ್ಲಿ ಇರೋ ನಮ್ಮ ದಾತಾರರಿಗೆ ಇರಬಹುದು. ಅಲ್ಲವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಆರು ಮಕ್ಕಳಿದ್ದರೆ ನೀವು ಮತದಾನದ ಹಕ್ಕನ್ನು ಕಳೆದುಕೊಳ್ಳಬಹುದು: ಮತದಾರರ ಪಟ್ಟಿ ‘ಕ್ಲೀನ್’ ಮಾಡಲು ECI ಹೊಸ ಪ್ಲಾನ್!

ಭಾರತದಲ್ಲಿ 'ಆರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ' ಎಂಬ ಕಾರಣಕ್ಕೆ ಯಾರಾದರೂ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಸಾಧ್ಯವೇ? ಮೇಲ್ನೋಟಕ್ಕೆ ಹೌದು ಎನ್ನುವಂತಿದೆ ಉತ್ತರ ಪ್ರದೇಶದ ವಾರಾಣಸಿಯ ಕ್ಯಾಂಟೋನ್ಮೆಂಟ್ ಕ್ಷೇತ್ರದ ಮತದಾರ ಸೋನು...

ಕದನ ವಿರಾಮವೆಂಬ ಕಳ್ಳಾಟ : ಗಾಝಾದಿಂದ ಸಿರಿಯಾವರೆಗೆ ಮುಂದುವರಿದ ಇಸ್ರೇಲ್ ನರಮೇಧ

ಬರೋಬ್ಬರಿ ಎಪ್ಪತ್ತು ಸಾವಿರದಷ್ಟು (ವರದಿಗಳ ಪ್ರಕಾರ 67, 900) ಜನರನ್ನು ಹತ್ಯೆಗೈದು, ಶೇಕಡ 90ರಷ್ಟು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ ಬಳಿಕ, ಅಕ್ಟೋಬರ್ 10, 2025ರಂದು ಗಾಝಾ ಮೇಲಿನ ಆಕ್ರಮಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಕದನ...

ಚುನಾವಣಾ ಆಯೋಗಕ್ಕೆ ಪೌರತ್ವ ನಿರ್ಧಾರ ಮಾಡುವ ಹಕ್ಕಿದೆಯೇ? SIR ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮೇ 27 ರಂದು 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಭಾರತೀಯ ಚುನಾವಣಾ ಆಯೋಗ (ECI)' ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚುನಾವಣಾ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ'...

ಮಹಾರಾಷ್ಟ್ರ: 80 ಲಕ್ಷ ಮಹಿಳೆಯರು ‘ಲಡ್ಕಿ ಬಹಿನ್’ ಯೋಜನೆಗೆ ಅನರ್ಹ: ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿ ಎಂದು ವಿಪಕ್ಷಗಳ ಆರೋಪ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್' ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ನೀಡಿದ್ದ ಗಡುವು ಮುಗಿದಿದ್ದು, ಸುಮಾರು 80 ಲಕ್ಷ ಮಹಿಳೆಯರು ಯೋಜನೆಯಿಂದ ಅನರ್ಹರಾಗಿದ್ದಾರೆ. ರಾಜ್ಯ ಸರ್ಕಾರವು...

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...